ಪ್ರೇಮಿ ಕಡಲ ತಡಿಯಲ್ಲಿ ಕೂತಿದ್ದಾನೆ, ತನ್ನ ಗೆಳತಿಗಾಗಿ ಹಂಬಲಿಸುತ್ತಿದ್ದಾನೆ, ಅವಳಿನ್ನೂ ಬಂದಿಲ್ಲ, ರವಿ ನಿಧಾನವಾಗ ಮುಳುಗುತ್ತಿದ್ದಾನೆ, ಬೆಳಕು ಕಡಿಮೆಯಾಗಿ ಕತ್ತಲೆಯ ಛಾಯೆ ಆವರಿಸುತ್ತಿದೆ, ಜೊತೆಗೆ ಅವನ ಮೊಗದಲ್ಲೂ ಆತಂಕದ ಛಾಯೇ, ಗೆಳತಿ ಬೇಗನೇ ಆಗಮಿಸು, ಮನದ ರೋಧನೆ ದೂರಾಗಿಸೆಂದು ಆತನ ಹೃದಯ ನಿವೇದಿಸುತ್ತಿದೆ, ಮೆತ್ತನೇ ಯಾವುದೋ ಧ್ಯಾನದಲ್ಲಿ ಕೈಬೆರಳುಗಳನ್ನು ಮರಳು ರಾಶಿಯಲ್ಲಿ ಆಡಿಸುತ್ತಾ ಏನೋ ಬರೆಯುತ್ತಾನೆ, ಬರೆಯಲು ಹಾತೊರೆಯುತ್ತಾನೆ, ನಿಧಾನವಾಗಿ ಏನು ಬರೆದೆ ಎಂದು ನೋಡುತ್ತಾನೆ, ಅದು ಅವಳದೇ ಹೆಸರು, ಅವನಿಗೆ ಅರಿವಿಲ್ಲದೆಯೂ ಬರೆವ ಪದವು ಅವಳದೇ ಹೆಸರಾಗಿದೆ, ಕಾರಣ ಮನದ ಮನೆಯಲ್ಲಿ ಅಚ್ಚಾದವಳ ಹೆಸರೇ ಅವನು ಕನಸಲ್ಲೂ ಬರೆವ ಪದವಾಗಿರುತ್ತದೆ, ಮತ್ತೆ ಮತ್ತೆ ಅವಳಾಗಮಿಸುವ ದಿಕ್ಕನ್ನು ನೋಡುತ್ತಾನೆ, ಕದಲೇ ಕತ್ತು ಆ ದಿಕ್ಕಿನ್ನೇ ವೀಕ್ಷಿಸುತಿದೆ, ಇದೆಲ್ಲಾ ಅವಳ ಪ್ರೀತಿಯ ಮಾಯೆಯಲ್ಲಿ ಬಂಧಿಯಾದವನ ಕಾತರ. ಕಾತರಿಸುವ ಮನದ ತಳಮಳ. ಈ ಸಮಯದಲ್ಲಿ ಮೆತ್ತನೆ ಸಾಗರದಲ್ಲಿ ಮುಳುಗುತ್ತಿರುವ ರವಿಗೂ ಕೊಂಚ ಮುಜುಗರ, ಕಡಲತಡಿಯಲ್ಲಿ ಮುಳುಗುವ ರವಿಯ ಮೊಗದಲ್ಲೂ ದುಗುಡ, ಅದಕೇ ಆತ ಕೆಂಪಾಗಿ ಕೋಪದಲ್ಲಿ ಮುಳುಗುತ್ತಿದ್ದಾನೆ, ಈ ಒಂಟಿತನ ಸಾದುವೇ, ಈ ಒಳ್ಳೆಯ ಹುಡುಗನಿಗೇಗೆ ಈ ಶಿಕ್ಷೆ..? ಪಾಪ ಆತನ ಪ್ರೇಯಸಿಗೇನು ತೊಂದರೆಯಾಯಿತೋ..? ಎಂದು ವಿಧಿಯನ್ನು ರವಿ ಶಪಿಸುತ್ತಿದ್ದಾನೆ, ನಂತರ ರವಿ ಮರೆಯಾಗಿ ನಿದಾನವಾಗಿ ನೀಲಿ ಬಾನಲ್ಲಿ ಶಶಿಯಾಗನವಾಗುತ್ತದೆ. ಚಂದಿರ ನೋಡುತ್ತಾನೆ, ಹುಡುಗ ತನ್ನ ಪ್ರೇಯಸಿಯನ್ನು ಬೇಡುತ್ತಾ ಹಪಿಹಪಿಸುವ ಅವನ ನೋವನ್ನು ಕಂಡು ಆತನಿಗೂ ಮುಜುಗರ. ತಂಗಾಳಿ ಬೀಸುತ್ತಿದೆ, ಆದರೂ ಹುಡುಗನ ಮನಕೆ ಹಿತವಿಲ್ಲ, ಬಿಸಿಗಾಳಿ ಬಂದು ಕೊರೆದಂತೆ ಒದ್ದಾಡುತ್ತಾನೆ, ದೇವರಲ್ಲಿ ಕೇಳುತ್ತಾನೆ, ಈ ನೋವು ಸಾದುವೇ..? ಅವಳೇಕೆ ಇನ್ನೂ ಆಗಮಿಸಿಲ್ಲ, ಅವಳಿಗೇನಾಯಿತೋ, ಏನೋ, ಏನೇ ಆಗಲಿ ಅವಳು ಚೆನ್ನಾಗಿರಲಿ ಎಂದು ಒದ್ದಾಡುತ್ತಾನೆ. ಕಡಲಲೆಯ ಸಾವರಿಸಿ ಬರುವ ತಂಗಾಳಿಯಲ್ಲೂ ಆತನಿಗೆ ಹಿತವೆನಿಸುವುದಿಲ್ಲ, ಕಡಲಲೆಗಳ ಸದ್ದು ಆತನಿಗೆ ಕೊರೆತವೆನ್ನಿಸುತ್ತದೆ, ಮೋಡಗಳ ನಡುವೆ ಓಡೋಡಿ ಬರುವ ಚಂದಿರನನ್ನು ನೋಡುತ್ತಾ ಹಾಗೇ ಕಡಲ ತೀರಲದಲಿ ಮಲಗಿದ್ದಾನೆ. ಮತ್ತೆ ಮರಳು ರಾಶಿಯಲ್ಲಿ ಏನೋ ಗೀಚುತ್ತಾನೆ, ಅವಳನ್ನೇ ನೆನೆಯುತ್ತಾ ಬರೆಯುತ್ತಾನೆ, ಅವಳ ಪ್ರೀತಿಯ ಅಯಸ್ಕಾಂತತ ಗುಣದಲ್ಲಿ ಈತ ಲೀನವಾಗಿದ್ದಾನೆ, ಅವಳ ಪ್ರೀತಿಯ ಹೊನಲಿನಲ್ಲಿ ಹುಡುಗ ಒದ್ದೆಯಾಗಿದ್ದಾನೆ. ಒಲವ ಜಲಧಿಯು ಆತನೆದೆಯಲ್ಲಿ ಎದ್ದೆದ್ದು ಕುಣಿದಂತೆ ಅನುಭೂತಿ.
ಅಷ್ಟರಲ್ಲಿ ಆತ ಅಲ್ಲಲ್ಲಿ ಮೂಡುತ್ತಿರುವ ಚುಕ್ಕಿಗಳನ್ನು ಎಣಿಸುತ್ತಾ ಹಾಗೆಯೇ ಕಡಲತಡಿಯಲ್ಲಿ ವಿರಮಿಸುತ್ತಿದ್ದಾನೆ. ತಾರೆಗಳ ನಡುವಲ್ಲಿ ಚಂದಿರ ಮೊಗದಲ್ಲಿ ತನ್ನ ಗೆಳತಿ ಕಂಡಂತೆ ಆತನಿಗೆ ಭಾಸವಾಗುತ್ತದೆ, ಚಂದಿರನ ಮೊಗದಲ್ಲೂ ತನ್ನ ಗೆಳತಿ ಮೂಡಿದಂತೆ, ಆಕೆ ನಗುತಾ ನಾಚಿದಂತೆ, ಈತ ಕೈಯನ್ನು ಮುಗಿಲೆಡೆ ತನ್ನ ಅರಿವಿಲ್ಲದೇ ಚಾಚುತ್ತಾನೆ, ನೋಡುತ್ತಾನೆ, ತನ್ನ ಕೈ ಎಟುಕದು, ಚಂದಿರ ಓಡುತ್ತಿದ್ದಾನೆ ಹಾಗೆಯೇ..ಮತ್ತೆ ಹುಡುಗ ಕಾತರಿಸುತ ಅವಳಾಗನದ ಜಾಡು ಹಿಡಿದು ಕೂರುತ್ತಾನೆ, ಬೀಸುವ ತಂಗಾಳಿ ಬೇಡುತ್ತಾ ಕೇಳುತ್ತಾನೆ ನೀ ಬರುವಾಗ ಕಂಡಿರಾ ಅವಳನು ಎಂದೂ..? ಬಾನಲ್ಲಿ ಚಂದಿರ ನಗುತ್ತಾನೆ, ಹುಡುಗ ಹಾಗೆಯೇ ಸಮಯ ದೂಡಲಾಗದೇ ತಾರೆಗಳ ಎಣಿಕೆಗೆ ಹಠವಿಡಿದು ಎಣಿಸುತ್ತಿದ್ದಾನೆ..ಅಷ್ಟರಲ್ಲಿ ಭಜದ ಮೇಲೆ ಏನೋ ನವಿರು ಸ್ಪರ್ಷ...ನೋಡುತ್ತಾನೆ ಗೆಳತಿ ಬಂದಿದ್ದಾಳೆ, ಆತನ ಚಡಪಡಿಕೆಗೆ ಅವಳು ಬಂದಿದ್ದು ಗೊತ್ತಾಗಲಿಲ್ಲ, ಅಷ್ಟೊತ್ತು ಅವಳಾಗಮನದ ದಿಕ್ಕನ್ನು ಗುರಿಯಿಟ್ಟು ಕಾದರೂ ಕಾಣದವಳು ಈಗ ಇವನಿಗೆ ಒಲವ ದೇವತೆಯಾಗಿ ಕಾಣುತ್ತಿದ್ದಾಳೆ. ತಾರೆಗಳ ಎಣಿಕೆಯಲ್ಲಿ ನಿರತನಿಗೆ ನೈಜತಾರೆ ಧರೆಗಿಳಿದು ನಗುತ್ತಿದ್ದಾಳೆ, ಒಲವ ದೇವತೆಯು ಹಾರೈಸಿದ್ದಾಳೆ, ಒಲವ ದೊರೆ ಚಂದಿರ ನಗುತಾ ಬೆಳುದಿಂಗಳು ಚೆಲ್ಲುತ್ತಿದ್ದಾನೆ, ಈ ನೈಜ ಪ್ರೇಮಿಗಳು ನೂರು ವರುಷ ಸಂತಸದಿಂದಿರಲಿ, ನೂರು ವರುಷಕೂ ಸವೆಯದ ಪ್ರೀತಿ ಇವರದಾಗಲಿ ಎಂದು ಬಯಸುತ್ತಾನೆ. ಬೀಸುವ ತಂಗಾಳಿಯಲ್ಲಿ ಒಲವಾರಾಧನೆ ಘಮಲು ಈಗ ಗಟ್ಟಿಯಾಗುತ್ತಿದೆ, ಕಡಲಲೆಗಳ ಗಾನದಲ್ಲಿ ಒಲವಗಾಥೆಯು ಗುನುಗುತಿದೆ, ಸಾಗರದ ತೀರದಲ್ಲಿ ಒಲವ ಜಲಧಿ ಉಕ್ಕಿದ ಸಂಭ್ರಮ, ಪ್ರೇಮಿಯ ಮನದಲ್ಲಿ ಪ್ರೀತಿಯ ಮೇನೆಯಲ್ಲಿ ನಲಿದ ಸಡಗರ, ಎಲ್ಲವೂ ಅವಳಾಗನದ ನಲಿವು, ಅವಳಾಗನದ ಬಲವು. ಈಗ ಆತ ಮರಳರಾಶಿಯಲ್ಲಿ ಬರೆದ ಪದಗಳನ್ನು ನೋಡುತ್ತಾನೆ ಅದೆಲ್ಲ ಅವಳದೇ ಹೆಸರು, ಅವಳದೇ ನೆನಪು.. ಪ್ರತಿಸಾಲುಗಳು ಅವಳಿಗಾಗಿ ಬರೆದ ಪ್ರಾರ್ಥನೆ. ಈಗ ಹುಡುಗಿ ನೋಡುತ್ತಾಳೆ, ಅವನ ಕಣ್ಣಲ್ಲಿ ಕಣ್ಣಿಟ್ಟು.. ಮೆತ್ತನೇ ಅವನ ಕಿವಿಯಲ್ಲಿ ಪಿಸುಗುಡುತ್ತಾಳೆ..ನಿನ್ನನ್ನು ಕಾಯಿಸಿದ್ದಕ್ಕೆ ಕ್ಷಮಿಸು ಎಂದು ಕೆಂಗುಲಾಬಿಯನ್ನು ನೀಡುತ್ತಾಳೆ. ಹುಡುಗಾ ಕಾತರದಲ್ಲಿ ಅಷ್ಟೊತ್ತು ನೊಂದರೂ ಯಾವುದನ್ನೂ ಲೆಕ್ಕಿಸದೇ ಅವಳ ಒಲವಸೆರೆಯಲ್ಲಿ ಆತನ ಮನ ರಮಿಸುತ್ತದೆ, ಪ್ರೇಮಿ ಮನದಲ್ಲಿ ಒಲವಕಾವ್ಯ ಪಳಿಸುತ್ತದೆ. ಅಷ್ಟರಲ್ಲಿ ಆಕೆ ಕಡಲತೀರ ತುಂಬಾ ಬರೆದ ತನ್ನ ಹೆಸರಿನ ಜೊತೆ ಇವನ ಹೆಸರನ್ನು ಬರೆಯುತ್ತಾಳೆ, ಮೇಲೆ ಬಾನಲ್ಲಿ ಚಂದಿರ ನಗುತ್ತಾ, ಬೆಳುದಿಂಗಳು ಚೆಲ್ಲುತ್ತಾ ಹಾರೈಸುತ್ತಾನೆ, ಅವಳು ಈ ತನ್ನ ಹುಡುಗ ಬರೆದ ತನ್ನ ಪ್ರತಿ ಹೆಸರಿನ ಜೊತೆಯಲ್ಲಿ ಇವಳ ಹೆಸರನ್ನು ಜೋಡಿಸಿದ ಸಂಭ್ರಮದಲ್ಲಿ ನಲಿಯುತ್ತಾಳೆ, ಇತ್ತ ಹುಡುಗ ಇವಳ ಒಲವಸೆಲೆಯಲ್ಲಿ ಮರಳುರಾಶಿಯಲ್ಲಿ ಬರೆಯುತ್ತಾನೆ..
“ನಗುತ ಚಂದಿರ
ಬೆಳದಿಂಗಳು ಚೆಲ್ಲಿದ
ಕವಿತೆ ಬರೆಯಲು
ಲೇಖನಿಗೆ ಶಾಹಿಯಾದನು
ಒಲವ ಕವಿತೆ ಬರೆಯಲು.”
ರಾಮಚಂದ್ರ ಸಾಗರ್