Showing posts with label ರಾಮಚಂದ್ರ ಸಾಗರ್. Show all posts
Showing posts with label ರಾಮಚಂದ್ರ ಸಾಗರ್. Show all posts

Sunday, 15 June 2025

ಪ್ರೀತಿಯ ಮಳೆ

 

ಗೆಳೆಯಾ..

ಪ್ರೀತಿಯ ಮಳೆಯಾಗುತಿದೆ ನನ್ನೆದೆಯ ಗೂಡಲಿ

ಕಿವಿಯಿಟ್ಟು ಕೇಳು ಬಾ  ಒಲವಿನ ಆಲಾಪದಲಿ

ರಂಗು ತುಂಬಿದ ಸವಿ ಅನುರಾಗದ ಪದಗಳಲಿ

ಪ್ರೇಮದ ಪದಗಳೇ ದನಿಸುತಿವೆ ನಿನ್ನದೇ ನೆನಪಲಿ


ಆನಂದದ ಆನನಕೆ ನೀನೆ ಕಾರಣವಾಗಿರುವೆ

ಸಡಗರದ ಬಾಳಿಗೆ ನೀನೆ ಭೂಷಣವಾಗಿರುವೆ

ಸಂಭ್ರಮದ ಹಾದಿಗೆ ನೀನೆ ಸರದಾರನಾಗಿರುವೆ

ಸರಿಹಗಲು ಕನಸಲು ನೀನೆ ಸರಕಾಗಿರುವೆ


ಅನುರಾಗದ ಅಲೆಯಲಿ ನೀ ಕಡಲಾಗಿರಲು 

ಅನುತಾಪದ ಪ್ರೇಮದಲಿ ನೀ ಬೆಳಕಾಗಿರಲು

ಅನುಪಮ ಪ್ರೀತಿಯಲಿ ನಾ ಬೇಡುತಿರಲು

ಅನುಮಾನಿಸಿ ನನ್ನೊಲವು ನೀ ದೂರಾಗದಿರು 


ನಿನ್ನೊಲವು ಸಂಕೋಲೆಯಾಗಿದೆ ಹೃದಯಕೆ

ನಿನ್ನದೇ ಸವಿನಯ ಸಾನಿಧ್ಯ ಬೇಕಿದೆ ಬಾಳಿಗೆ

ಸಹನೆಯ ಸಹವಾಸವು ಸಾಕಾಗಿದೆ ಮನಕೆ

ನೀನೆನ್ನುವ ಸಹೃದಯ ವರವಾಗಲಿ ಹಾದಿಗೆ


ಮೋಹದ ಮಳೆಯಲಿ ಒಂದಾಗಿ ರಮಿಸೋಣ

ಆಹ್ಲಾದದ ಮನೆಯಲಿ ಜೊತೆಯಾಗಿ ನಲಿಯೋಣ

ಕಾತರಿಸುವ ಕನಸುಗಳಿಗೆ ಉತ್ತರವಾಗು ಬಾ

ಒಲವಿನ ಆಸ್ಥಾನಕೆ ಸದಾ ದೊರೆಯಾಗು ಬಾ


ರಚನೆ: ರಾಮಚಂದ್ರ ಸಾಗರ್

Thursday, 31 October 2024

ದೀಪಾವಳಿ...

 

ಎಲ್ಲಾ ಸಹೋದರ ಬಂಧುಗಳಿಗೂ ದೀಪಾವಳಿಯ ಶುಭಾಶಯಗಳು.

"ಬೆಳಕಿನ ಹಬ್ಬ ಎಲ್ಲರ ಬದುಕನ್ನು ಬೆಳಗಲಿ, ಅಂಧಕಾರ ಕರಗಿ ಹರುಷದ ದೀಪದ ಬೆಳಕಲ್ಲಿ ಸಂತಸ ಮೂಡಲಿ,  ಎಲ್ಲರ ಬದುಕಲ್ಲಿ ಕನುಸಗಳು ನನಸಾಗಿ ಒಲುಮೆಯ ಜಗವಾಗಲಿ" ಎನ್ನುವ ಆಶಯದೊಂದಿಗೆ ನಾ ಬರೆದ "ದೀಪಾವಳಿ" ಕವಿತೆಯನ್ನು ಪೋಸ್ಟ್‌ ಮಾಡುತ್ತಿದ್ದೇನೆ. ಎಲ್ಲರಿಗೂ ಮತ್ತೊಮ್ಮೆ ಬೆಳಕಿನ ಹಬ್ಬದ ಶುಭಾಶಯಗಳು.

ದೀಪಾವಳಿ...

ದಿಗಂತದ ತುದಿಯಲಿ

ಚಿಮ್ಮಿದಾ ಬೆಳಕಲಿ

ನವ್ಯತೆಯ ಭಾವದಲಿ

ಭವ್ಯತೆಯ ದೀಪಾವಳಿ....

ಎಲ್ಲರೆದೆಯ ಬೆಸುಗೆಯಲ್ಲಿ

ಸಹೋದರತ್ವ ಬಂಧದಲ್ಲಿ

ದೀನತೆಯ ಅಂತ್ಯದಲ್ಲಿ

ಹರುಷದಾ ದೀಪಾವಳಿ...

ಶ್ರಮದಾನದ ಕಾಯದಲ್ಲಿ

ಶ್ರಮದ ಹನಿಗಳ ನಗುವಿನಲ್ಲಿ

ನೊಂದ ದನಿಯ ಗೆಲುವಿನಲ್ಲಿ

ಚೈತನ್ಯದ ದೀಪಾವಳಿ..

ಬಡತನದ ಅಳಿವಿನಲ್ಲಿ

ಅಸಹಾಯಕರ ನಗುವಿನಲ್ಲಿ

ನಿಸ್ವರ‍್ಥ ಮನಗಳ ಅಕ್ಷಯದಲಿ

ಅಕ್ಷಯ ದೀಪಾವಳಿ...

ಜ್ಞಾನ ದೀವಟಿಗೆ ಬೆಳಗಿನಲ್ಲಿ

ಅಜ್ಞಾನ ಅಂಧಕಾರಗಳ ದಹನದಲ್ಲಿ

ಹೊಸ ಗುರಿಗಳ ಕನಸಿನಲ್ಲಿ

ಜ್ಞಾನದ ದೀಪಾವಳಿ...

ರಾಮಚಂದ್ರ ಸಾಗರ್

Sunday, 21 January 2024

ಶ್ರೀ ರಾಮ...

 

ಅಯೋಧ್ಯೆಯ ರಂಗದಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ಮುಹೂರ್ತದ ಶುಭದ ಘಳಿಗೆಗೆ ಧನ್ಯತೆಯಲ್ಲಿ ಕೈ ಮುಗಿದು ಪ್ರಾರ್ಥಿಸುತ್ತಾ ಈ ಅವಿಸ್ಮರಣೀಯ ಪಾವನ ಕಾರ್ಯವು ನಾಡಿಗೆ ಸಕಲ ಹೆಮ್ಮೆಯ ಸಂಗತಿಯಾಗಿದೆ.  ಸತ್ಯದ ಪಥದಲಿ ಮಿಥ್ಯದ ಜಗವ ಸೋಲಿಸಿದ ನನ್ನ ಮನದ ದೇವ ಶ್ರೀ ರಾಮನ ನೆನೆಯುತ್ತಾ ಈ ಕ್ಷಣದಲ್ಲಿ “ಶ್ರೀ ರಾಮ” ಕವಿತೆ ಬರೆದಿದ್ದೇನೆ. ಎಲ್ಲರೂ ಒಂದಾಗಿ ಶ್ರೀ ರಾಮನ ಪ್ರಾರ್ಥಿಸೋಣ ಬನ್ನಿ. ನಿಜ ರಾಮ ರಾಜ್ಯ ನಮ್ಮೆಲ್ಲರ ಗುರಿಯಾಗಲಿ. ಪ್ರೀತಿ, ಶಾಂತಿ, ಸ್ನೇಹ, ಸೌಹಾರ್ದತೆ, ಸಹಿಷ್ಣುತೆಗಳು ಎಲ್ಲರೆದೆಯ ಉಸಿರಾಗಲಿ. ಎಂದೆAದಿಗೂ ಸತ್ಯದ ಗುಡಿಯಲಿ ಆರಾಧನೆಗೆ ಅರ್ಹನು ನಮ್ಮೆಲ್ಲರ ಶ್ರೀ ರಾಮನೇ..


ಶ್ರೀ ರಾಮ...


ಸತ್ಯದ ಪಥದಲಿ ಜಗವ ಜಯಿಸಿದ ವೀರನೇ

ಸಭ್ಯತೆಯ ನಡೆಯಲಿ ಉದಯಿಸಿದ ಶೂರನೇ 

ಸಚ್ಚರಿತ ಮನದಲಿ ಸಂಭ್ರಮಿಸಿದ ಧೀರನೇ

ಸಜ್ಜನಿಕೆಯ ಸಿರಿತನದಲಿ ದೊರೆಯಾದ ದೇವನೇ 

ಶ್ರೀ ರಾಮ..


ಸದ್ಗತಿಯ ಮನಗಳಲಿ ಮಂದಿರವಾದವನೇ

ಸತ್ಕಾರದ ಭಾವನೆಗಳಲಿ ದೇವರಾದವನೇ

ಸಂಕಲ್ಪ ಕಾಯಕದಿ ಜಗಕೆ ಬೆಳಕಾದವನೇ

ಸಂಯಮದ ಸತ್ರದಲಿ ಸುಯೋಗವಾದವನೇ

ಶ್ರೀ ರಾಮ..


ಸದ್ಗುಣಗಳ ಗಗನದಲಿ ಶುಭದ ಮಳೆಯಾದವನೇ

ಸಂಪನ್ನ ಸತ್ವಗಳಲಿ ಧರಿತ್ರಿಯಲಿ ಹೆಸರಾದವನೇ

ಸಂಭಾವಿತರ ಸಖ್ಯದಲಿ ಸನ್ಮಾರ್ಗ ತೋರಿದವನೇ

ಸವಿನಯ ಪರಿವಾರದಲಿ ಸೌಜನ್ಯ ಮೆರೆದವನೇ

ಶ್ರೀ ರಾಮ..


ಸಹನೆಯಲಿ ಸಫಲತೆಯ ಸಂಕೀರ್ತನೆಯಾದವನೇ

ಸಹಿಷ್ಣುತೆಯ ಗುಣದಲಿ ಜಗಕೆ ಮುನ್ನುಡಿಯಾದವನೇ

ಶಾಂತಿ ದೇಗುಲದ ಶಾಂತೆಯ ಸಹೋದರನೇ

ಶಾಂತ ಸೌಧದ ಜಗಕೆ ಉಸಿರಾದವನೇ

ಶ್ರೀ ರಾಮ...

ರಚನೆ: ರಾಮಚಂದ್ರ ಸಾಗರ್


Monday, 15 January 2024

ಸಂಕ್ರಮಣವಾಗಲಿ..

 

ನನ್ನೆಲ್ಲಾ ಮುಖಪುಟದ ಸಹೋದರ ಬಂಧುಗಳಿಗೂ ಸಂಕ್ರಾಂತಿಯ ಶುಭಾಶಯಗಳು..ಈ ರ‍್ಷದ ಮೊದಲ ಹಬ್ಬ ಸಂಕ್ರಾಂತಿಯು ನಿಮ್ಮೆಲ್ಲರ ಬಾಳಲಿ ಪ್ರಗತಿಯನ್ನು ಸಿಂಚಿಸಿ, ಹೊಸತನವನ್ನು ಮೂಡಿಸಲೆಂದು ದೇವರಲ್ಲಿ ಪ್ರರ‍್ಥಿಸುತ್ತಾ...."ಸಂಕ್ರಮಣವಾಗಲಿ "ಕವಿತೆ ಪೋಸ್ಟ್ ಮಾಡುತ್ತಿರುವೆ..ಎಲ್ಲರಿಗೂ ಮತ್ತೊಮ್ಮೆ ಸಂಕ್ರಾಂತಿಯ ಶುಭಾಶಯಗಳು..

ಸಂಕ್ರಮಣವಾಗಲಿ..

ಎಳ್ಳು ಎಂಬ ಸ್ನೇಹವು
ಬೆಲ್ಲ ಎಂಬ ಪ್ರೀತಿಯು
ಮನ ಮನಗಳ ಬೆಸೆಯಲಿ
ಸಹೋದರತೆಯ ಬಂಧದಲಿ
ಈ ಸಮಯದೀ
ಸೌಹರ‍್ದ ಸಂಕ್ರಮಣವು ಸಂಭ್ರಮಿಸಲಿ..

ವಿರಸದ ಮನಸು ಮರೆಯಾಗಲಿ
ಕಹಿ ಘಳಿಗೆಯು ಕಾಡದಿರಲಿ
ವಿಮೋಹ ದುರಾಸೆ ದೂರಾಗಲಿ
ಈ ಸಮಯದೀ
ಸಂಪನ್ನ ಮನಗಳ ಸಂಕ್ರಮಣವಾಗಲಿ..

ದ್ವೇಷ ಅಸೂಯೆಗಳು ದೂರಾಗಲಿ
ಸ್ನೇಹ ಎಲ್ಲರೆದೆಯ ಗೂಡಾಗಲಿ
ಸಖ್ಯ ಸಮಾಗಮ ಚಿರಾಯುವಾಗಲಿ
ಈ ಸುಸಮಯದೀ
ಗೆಳೆತನದ ಸಂಕ್ರಮಣವಾಗಲಿ..

ವಿಘ್ನ ಬದುಕಲಿ ಬಾರದಿರಲಿ
ಸವೆ ಬಾಳಲಿ ಕಾಡದಿರಲಿ
ಬವಣೆ ಯಾರನು ಮುಟ್ಟದಿರಲಿ
ರೋಧನೆ ಯಾರಿಗೂ ತಟ್ಟದಿರಲಿ
ಈ ಸಮಯದೀ
ಸಂತಸದ ಸಂಕ್ರಮಣವಾಗಲಿ..

ಬಾಂಧವ್ಯಗಳು ಚಿಗುರೊಡೆಯಲಿ
ಬಂಧುರ ಜಗದ ವಿಕ್ರಮವಾಗಲಿ
ಇನನ ಹೊಳಪಿನಲಿ
ವಸುಂಧರೆಯ ಮಡಿಲು
ಈ ಸುಸಮಯದೀ
ಪ್ರೀತಿಯ ಸಂಕ್ರಮಣವಾಗಲಿ..

ರಚನೆ: ರಾಮಚಂದ್ರ ಸಾಗರ್

Friday, 14 April 2023

ಮಹಾನಾಯಕ

 


ದಿವಸ ಜಗತ್ತು ಕಂಡ ಮಹಾನ್ ಮಾನವತಾವಾದಿ, ಸುಜ್ಞಾನದ ಸಾಗರ, ಸಮಾಜಮುಖಿ ಚಿಂತನೆಯ ಹರಿಕಾರ, ಜ್ಷಾನದ ಬೆಳಕಿನ ಸೂರ್ಯ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತೋತ್ಸವ. ಸುದಿನ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗಾಗಿ ಧಾರೆಯೆರೆದ ಜ್ಞಾನದ ಬೆಳಕನ್ನು ಸಮಾಜದ ಸರ್ವತೋಮುಖ ಶ್ರೇಯಕ್ಕಾಗಿ ನಿತ್ಯವೂ ಸಶಕ್ತವಾಗಿ ಬಳಸಿಕೊಳ್ಳಲು ಪಣತೊಡುತ್ತೇವೆ ಎನ್ನುವ ಆಶಯದೊಂದಿಗೆ ಎಲ್ಲರಿಗೂ ಶ್ರೀಯುತರ 132ನೇ ಜಯಂತೋತ್ಸವದ ಶುಭಾಶಯಗಳನ್ನು ಕೋರುತ್ತಾ ನಾ ಬರೆದ "ಮಹಾನಾಯಕ" ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ..

ವಂದನೆಗಳೊಂದಿಗೆ...

 

ಮಹಾನಾಯಕ

 

ಜಾತಿ ಧರ್ಮಗಳ ಸಂಕೋಲೆಯನು

ವಿಮುಕ್ತಿಗೊಳಿಸಿದ ಮಹಾನಾಯಕನು

ವರ್ಣ ದ್ವೇಷಗಳ ಜ್ವಾಲೆಯನು

ಆರಿಸಿದ ದಿವ್ಯ ಯೋಗಿಯು..

 

ಸಂವಿಧಾನ ರಚಿಸಿದ ಶಿಲ್ಪಿಯು

ಭವ್ಯ ದೇಶ ಬೆಳಗಿದ ಕಿಡಿಯು

ದೀನ ದಲಿತರ ದೀವಟಿಗೆಯು

ಶ್ರಮಿಕ ಕಾಯಕೆ ಸ್ಪೂರ್ತಿಯು..

 

ಶಿಕ್ಷಣ ಜ್ಞಾನವು ಬೆಳಕೆಂದರು

ಬವಣೆಗಳ ಪರಿಹರಿಸಿಕೊಳ್ಳಲು

ಸಂಘಟನೆಯೆ ಪರಿಹಾರವೆಂದರು

ಒಂದಾಗಿ ನಡೆವುದೆ ಬಾಳೆಂದರು..

 

ಮಾನವೀಯತೆ ಸಹಬಾಳ್ವೆ

ಪ್ರೀತಿ ವಿಶ್ವಾಸಗಳನು ಆರಾಧಿಸೆಂದರು

ಬೇದವೆಣಿಸದ ಕುಲಕೇಳದ ನಾಡು

ಎಲ್ಲರೆದೆಯ ಗುರಿಯಾಗಲೆಂದರು...

 

ದಾರಿದ್ರ್ಯ ಬಡತನ ಕೊನೆಯಾಗಿಸಲು

ಜೀವಮಾನವನು ಸವೆಸಿದರು

ಜೀವದುಸಿರಿನ ಕೊನೆವರೆಗು

ಬುದ್ಧ ನುಡಿಯನು ನುಡಿದವರು..

 

ಜಗದ ಇತಿಹಾಸ ಪುಟದಲಿ

ಪದಗಳಿಗೆ ಸೀಮಿತಗೊಳ್ಳದ ಮಹಾನಾಯಕನು

ನಮ್ಮೆಲ್ಲರ ಹೃದಯದಲ್ಲಿ

ನಿತ್ಯ ಬೆಳಗುವ ದೇವನು...


ರಚನೆ: ರಾಮಚಂದ್ರ ಸಾಗರ್


Wednesday, 22 March 2023

ಯುಗಾದಿ..

 

ಎಲ್ಲಾ ಸಹೋದರ ಬಂಧುಗಳಿಗೂ ಯುಗಾದಿಯ  ಶುಭಾಶಯಗಳು. ಚಂದ್ರಮಾನ ಯುಗಾದಿಯು ಎಲ್ಲರ ಬಾಳಲ್ಲೂ ಆರೋಗ್ಯ, ನಗು, ಸಂಪತ್ತು, ಪ್ರೀತಿ, ಸ್ನೇಹ, ಸಹಬಾಳ್ವೆಯನ್ನು ಕರುಣಿಸಲಿ..

ಸಮಾಜ  ಎನ್ನುವುದು ಒಂದು ಸುಂದರ ಹೂಗಿಡ. ಆ ಗಿಡಕ್ಕೆ ಹಾನಿಮಾಡುವ ಎಲ್ಲಾ ಬಗೆಯ ಕೀಟಗಳು, ರೋಗಗಳು, ದುಷ್ಟ, ವಿಕೃತ ಮನಸ್ಸಗಳು ಇನ್ನು ಮುಂಬರುವ ದಿನಗಳಲ್ಲಿ ಮರೆಯಾಗಲಿ ಆ ಹೂಗಿಡವು ಚೆಲುವನ್ನು ಕಂಗೊಳಿಸುತ್ತಾ ಸುಂದರವಾದ ಚೆಲುವನ್ನು ಬೀರುತ್ತಾ ಸಮೃದ್ಧ ಹಾಗೂ ಸಂಪ್ರೀತಿಯ ಸಮಾಜವು ನಮ್ಮೆಲ್ಲರದಾಗಲಿ ಮುಂಬರುವ ವರ್ಷದುದ್ದಕ್ಕೂ ಎಲ್ಲರ ಕಣ್ಣಲ್ಲೂ ಸ್ನೇಹ, ಸಹಬಾಳ್ವೆ, ಪ್ರೀತಿ, ವಿಶ್ವಾಸಗಳು ಸದಾ ಅರಳುತ್ತಾ ಅಲೆಯಾಗಿ  ನೆಲೆಯಾಗಲಿ ಆದಷ್ಟು ಬೇಗನೇ ಈಗ ಕೂಡಿ ಬಂದಿರುವ ಸಕಾಲದಲ್ಲಿ ವಿಕೃತ ಮನಸ್ಸುಗಳು ದಹನವಾಗಲಿ ಎಂದು ಆಶಿಸಿ ಯುಗಾದಿ ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ...ಎಲ್ಲರಿಗು ಯುಗಾದಿಯ ಹೊಸ ಹರುಷದ ಸ್ವಾಗತವನ್ನು ಕೋರುತ್ತಾ ಮತ್ತೊಮ್ಮೆ ಎಲ್ಲಾ ಸಚ್ಚರಿತ ಮನಸ್ಸುಗಳಿಗೆ ಶುಭಾಶಯಗಳು..

ಯುಗಾದಿ..

ಕಹಿಯ ಬವಣೆ ಕರಗಲು
ಸಿಹಿಯ ಬದಕು ಅರಳಲು
ಮನ ಮನಗಳಲಿ ಯುಗಾದಿ
ಹಚ್ಚಬೇಕಿದೆ ಹೊಸ ದೀವಟಿ..

ಚೈತ್ರಮಾಸದ ಹೊಸದಿನ
ಕರೆತರಲಿ ಹೊಸತನ
ಎಲ್ಲರೆದೆಯ ಬೆಳಗಲು
ಉದಯಿಸಲಿ ಬಂಧುತ್ವ...

ರವಿ ಚಂದ್ರರ ಗತಿಯಲ್ಲಿ
ಬಾನು ಭುವಿಯ ಪರಿಧಿಯಲ್ಲಿ
ಬದಲಾಗುವ ಘಳಿಗೆಯಲ್ಲಿ
ಮರೆಯಾಗಲಿ ಮತ್ಸರ
ಯುಗಾದಿ ತರಲಿ ಸಂತಸ ...

ಅರೆ ನಿಮಿಷವಾದರು
ಅನ್ಯರ ಮನ ನೋಯಿಸದಿರು
ಕಹಿಯ ಮನಸು ದಹಿಸಿ
ಸಿಹಿಯ ಮನಸು ಅರಳಿಸಿ
ಹರುಷದ ಗೂಡಾಗು..

 

ಹರಕುಬಾಯಿ ಮೂಕವಾಗಲಿ

ವಿಕೃತ ಮನಸ್ಸು ದಹನವಾಗಲಿ

ಸಜ್ಜನನು ನಾಯಕನಾಗಲಿ

ಸಹಿಷ್ಣುತೆ ಮೆರೆದಾಡಲಿ..

 

ವರುಷದ ಆಯುಷ್ಯ
ಕರಗದಿರಲಿ ವ್ಯರ್ಥ
ಅಂತ್ಯವಾಗುವ ಮುನ್ನ
ಬೆಳಗುವ ದೀಪವಾಗು
ಸಿಹಿಯಾದಿಯಾಗಲಿ ತನು ಮನ...

ರಚನೆ: ರಾಮಚಂದ್ರ ಸಾಗರ್


Sunday, 12 June 2022

ಜೇನಿನ ಹೂಮಳೆ


ಗೆಳೆಯಾ ..

ನನ್ನೆದೆಯಲಿ ಬಿಡುವಿರದೆ ಸುರಿದಿದೆ

ನಿನ್ನೊಲವಿನ ಸವಿಜೇನಿನ ಹೂಮಳೆ

ಅನುರಾಗದ ಜಗದಲಿ ಬೀಸುತಿದೆ

ನೀನೆನ್ನುವ ಪ್ರೀತಿಯ ಅತಿಶಯವೆ


ಸೌರಭದ ತಂಗಾಳಿಯಲಿ ಕಾಡಿದೆ

ಜೊತೆಯಾಗಿ ಸಾಗುವ ಬಯಕೆ

ಶಮನವಾಗದ ಕನಸಲಿ ಬೇಡಿದೆ

ನೀನೆನ್ನುವ ಚುಂಬಕ ದೊರೆಯ


ಪ್ರೇಮಕಾಸಾರದ ನಾವೆಯೊಳು

ಬಾಹುಬಂಧನಕೆ ಆಸರೆಯಾಗು

ಅಧರಗಳ ನಿವೇದನೆಗೆ ಉತ್ತರಿಸು

ಕಾರ್ಗಾಲದ ಚಳಿ ಮರೆಯಾಗಿಸು


ಹೃದಯ ತರಂಗದ ಒಲವಿನ ಸ್ವರದಲಿ

ಕಾತರಿಸುವ ಬಾಳಿಗೆ ನೀ ವರವಾಗು

ಮನ ನಲಿಸು ಸೌಜನ್ಯದ ನಗುವಿನಲಿ 

ಸೋಲಿಲ್ಲದ ಹಾದಿಗೆ ನೀ ಸ್ವಾಗತಿಸು


ಹೂಮಳೆಯ ಚಿತ್ತಾರದ ಜಗದಲಿ

ಮುಗುದೆಯ ಪಾವನ ಹೃದಯಕೆ 

ಅನುದಿನವು ನೀ ಜೊತೆಯಾಗಿರು

ಪ್ರೇಮವೇ ಬಾಳಾಗಿಸಿ ಉಸಿರಾಗಿಸು


ರಚನೆ: ರಾಮಚಂದ್ರ ಸಾಗರ್


ರಂಗೇರಿಸು ಬಾ


ಗೆಳೆಯಾ..

ಮುಸ್ಸಂಜೆಯ ಕೆಂಪು ಕಡಲ ರಮಿಸುವ ಕಿನಾರೆಯಲಿ

ಕೆನ್ನೆಗೆ ಕೆಂಪು ರಂಗೇರಿಸು ಬಾ ಮುತ್ತುಗಳ ಕಾಣಿಕೆಯಲಿ..


ರಂಗು ತುಂಬಿದ ಮೋಡಿಯ ಸೋಜಿಗದ ಜಗದಲಿ

ಬಿಸಿಯುಸಿರು ತಾಕಿಸಿ ಹೃದಯಕೆ ಸಂತೈಸು ಕ್ಷಣದಲಿ..


ಹೂಮನದ ಸಿಂಗಾರದ ಪ್ರೇಮೋಲ್ಲಾಸದ ಘಮಲಿನಲಿ

ಭಾವಬಂಧನಕೆ ಹರುಷವೇ ಉಡುಗೊರೆಯಾಗಲಿ..


ನನ್ನೆದೆಯಲಿ ನರ್ತಿಸುವ ಹೊಂಗನಸುಗಳ ಸಾಕಾರದಲಿ

ನಿನ್ನ ಅನುಪಮ ಪ್ರೇಮವು ಸದಾ ಭೋರ್ಗಯರೆಯಲಿ..


ಒಲವು ತುಂಬಿದ ನಿನ್ನ ಕಂಗಳು ಸದಾ ಕೆಣಕುತಿರಲಿ

ಬಾಳು ಸಿಹಿಯಾಗಿಸುವ ಹಂಬಲದ ಅತಿಶಯದಲಿ..


ನಮ್ಮೊಲವ ಸಮ್ಮೋಹದ ಪ್ರೇಮಾಮೃತದ ಸವಿಪಾನದಲಿ

ಸಾವಿಲ್ಲದ ಪ್ರೀತಿಯ ಕಡಲು ಉಲ್ಲಾಸದಿ ಉದಿತವಾಗಲಿ..


ಅಧರಾಮೃತದ ಸವಿಲೇಪದ ಪಾರುಪತ್ಯದ ಸಡಗರದಲಿ

ಸಂಭ್ರಮದ ಸಿಂಗಾರದ ಸವಿಜೇನಿನ ಬಾಳು ನಮ್ಮದಾಗಲಿ..


ರಚನೆ: ರಾಮಚಂದ್ರ ಸಾಗರ್


Wednesday, 26 January 2022

ಭಾರತೀಯನೆಂದು ಹೆಮ್ಮೆಯಿಂದ ಬೀಗು


 ಎಲ್ಲ ದೇಶಾಭಿಮಾನಿಗಳಿಗೆ  ಗಣರಾಜ್ಯೋತ್ಸವದ ಶುಭಾಶಯಗಳು. ಈ ಸುಸಮಯದಲ್ಲಿ ಎಲ್ಲ ಮನಸ್ಸುಗಳ ಐಕ್ಯತೆ ಮತ್ತಷ್ಟು ಗಟ್ಟಿಯಾಗಲಿ, ಎಲ್ಲರಲ್ಲು ದೇಶವನ್ನು ಪ್ರಗತಿಯತ್ತ ಮುನ್ನಡೆಸುವ ಛಲ ವೃದ್ಧಿಯಾಗಲಿ, ದೇಶವು ಬರುವ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ದೇಶದ ಸಾಲಿನಲ್ಲಿ ಬೇಗನೇ ಸೇರಲಿ, ಭಾರತದ ಹೆಸರು ವಿಶ್ವದೆಲ್ಲೆಡೆ ಪ್ರೀತಿಯ ಕುರುಹು ಆಗಲಿ, ಜಗದೆಲ್ಲ ಭಾರತವೇ ಕಂಗೊಳಿಸಲಿ, ಭಾರತದ ವೈವಿದ್ಯತೆಯ ಸತ್ವವು ಜಗಕೆ ಸಂದೇಶಸಾರವಾಗಲಿ ಎನ್ನುತ್ತಾ ಈ ಸಮಯದಲ್ಲಿ ನಾ ಬರೆದ ಕವಿತೆಯನ್ನು ನಿಮ್ಮೊಂದಿಗೆ ನೆನಪುಮಾಡಿಕೊಳ್ಳುತ್ತಿರುವೆ..ಎಲ್ಲಾ ದೇಶಾಭಿಮಾನಿಗಳಿಗೂ ಮತ್ತೊಮ್ಮೆ  ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು;

ಭಾರತೀಯನೆಂದು ಹೆಮ್ಮೆಯಿಂದ ಬೀಗು


ಕೋಟ್ಯಾಂತರ ಜೀವಿಗಳ ಉಸಿರು

ಸೌಹಾರ್ದ ಸಮ್ಮೇಳನದ ಬೀಡು

ವೈವಿಧ್ಯತೆಮಯ ಸಂಸ್ಕೃತಿಯ ತೇರು

ಭರತ ಭೂತಾಯ ಮಡಿಲು ...


ಜ್ಞಾನಸೆಲೆಯ ಅಮೃತ ಸಿಂಚನವು

ಸಹಿಷ್ಣುತೆ ಸಂದೇಶ ಸಾಗರವು

ಶಾಂತಿಯ ಸತ್ವದ ದೀವಟಿಗೆಯು

ಭರತ ಭೂತಾಯ ನೆಲೆಯು..


ಜಗಕೆ ಶಾಂತಿ ಬೋಧಿಸಿದ ನಾಡು

ಜಗಕೆ ಜ್ಞಾನದ ಕೊಡುಗೆಯ ಬಟ್ಟಲು

ಜಗದ ಸಿರಿವಂತ ಸಂಸ್ಕೃತಿಯ ಕಣಜ

ಜನಿಸಿದ ಎಲ್ಲರ ಪುಣ್ಯಧಾಮ..


ಭರತ ತಾಯ ಮಡಿಲಲಿ ಜನನವೆ

ಪ್ರತಿ ಭಾರತೀಯನ ಹೆಮ್ಮೆ

ಉಸಿರಿನ ಪ್ರತಿ ಘಳಿಗೆ ಮುಡಿಪಾಗಿಡು

ದೇಶ ಗಟ್ಟಿಗೊಳಿಸಲು, ಪ್ರಕಾಶಿಸಲು..


ಭರತ ತಾಯಿ ನೆಲದಲಿ ಜನ್ಮವು

ಸಾವಿರ ಜನ್ಮಕು ತೀರದ ಋಣವು

ದಿವ್ಯ ನಾಡಿನ ದಾರ್ಶನಿಕರ ವಚನದಲಿ

ಪುಣ್ಯ ಪುರುಷರ ಜ್ಞಾನ ಸೆಲೆಯಲಿ

ಜಳಪಿಸುವ ಶಕ್ತಿಯಲಿ ನೀ ಬೆಳಗು..


ಭಾರತೀಯತೆಯ ಉಸಿರು ಜೀವಸೆಲೆಯಾಗಿರಲು

ಭಾರತೀಯನೆಂದು ಹೆಮ್ಮೆಯಿಂದ ಬೀಗು

ನಿನ್ನೆದೆಯ ಪ್ರತಿ ಬಡಿತದಲ್ಲು

ಭಾರತೀಯನೆಂಬ ಸದ್ದಿನ ದನಿ ಕೇಳು

ಪುಣ್ಯನಾಡನು ಆರಾಧಿಸು..ಪ್ರೀತಿಸು..


ರಾಮಚಂದ್ರ ಸಾಗರ್


Wednesday, 20 October 2021

ಅವಳ ಡೈರಿ


 ಎಲ್ಲರಿಗೂ ನಮಸ್ತೇ,

ನನ್ನ ಹೊಸ ಕಾದಂಬರಿ ಹಾಗೂ ಈ ವರ್ಷದ ಮೊದಲ ಕೃತಿ "ಅವಳ ಡೈರಿ" ಯು ಸದ್ಯದಲ್ಲೇ ಹೊರಬರಲಿದೆ. ಈ ಕಾದಂಬರಿಯ ಕಥೆಯು ನೈಜ ಘಟನೆ ಎನ್ನುವುದು ದಿಟ.  ಸತ್ಯ ಘಟನೆಗಳು ಈ ಕಾದಂಬರಿಯ ಕತೆಯಲ್ಲಿ ಒಳಕಥೆಗಳಾಗಿ ತೆರೆದಿಟ್ಟಿದ್ದೇನೆ. ಇದು ಪರೋಕ್ಷವಾಗಿಯಾದರೂ ಹಲವರ ಬಾಳಿನ ಕಥೆಯೆನ್ನುವುದಂತೂ ಸತ್ಯ. ಮನಕ್ಕೆ ಅನ್ನಿಸಿದ್ದನ್ನು, ಹೇಳಬೇಕೆನ್ನುವುದನ್ನು,ಯಾವುದನ್ನು ಮುಲಾಜಿಲ್ಲದೇ ಬರೆದಿದ್ದೇನೆ. ಸತ್ಯವನ್ನು ಹೇಳುವಾಗ ಹೆದರಿಕೆಯೇಕೆ? ಸತ್ಯಕ್ಕೆ ಒಂದೇ ದಾರಿ. ಸುಳ್ಳಿಗೆ ಸಾವಿರ ದಾರಿ. ಆದ್ದರಿಂದ ಸತ್ಯಕ್ಕೆ ತಲೆಭಾಗಿ ಇದ್ದುದ್ದನ್ನು ಜೀವನದಲ್ಲಿ ಕಂಡಿದ್ದನ್ನು ಧೈರ್ಯವಾಗಿ ನುಡಿದಿದ್ದೇನೆ.. ಹಲವರ ಬಾಳಿನ ಸುಖದಲ್ಲೂ ನೋವಿರುತ್ತದೆ ಹಾಗೂ ಜೊತೆಗೆ ಅನುಭವಿಸುವ ನೋವಿನಲ್ಲೂ ಹಲವೊಮ್ಮೆ ತ್ಯಾಗದ ಭಾವವೇ ಮೂಡಿರುತ್ತದೆ. ಯಾರದೋ ಕೃತ್ಯಕ್ಕೆ ಯಾರದೋ ಜೀವನ ಬಲಿಯಾಗುತ್ತದೆ. "ಅತಿಯಾದ ಪ್ರೀತಿ, ನಂಬಿಕೆಗಳು ಸಹಾ ಮೋಸದ ಇನ್ನೊಂದು ಭಾಗವೇ ಆಗಿಹೋಗುತ್ತವೆ.." ಎಲ್ಲವೂ, ಎಲ್ಲವನ್ನೂ ಕಾಲವೇ ನಿಶ್ಚಯಿಸಬೇಕಲ್ಲವೇ? ಇನ್ನೂ ಈ ಕಥೆಯಲ್ಲಿ ನನ್ನದೂ ಒಂದು ಪಾತ್ರವಿದೆ ಎನ್ನುವುದು ಸಂತಸವೋ, ಬೇಸರವೋ? ಗೊತ್ತಿಲ್ಲ..! ಅದು ಕಥೆಯನ್ನು ಓದಿ ನೀವೇ ಹೇಳಬೇಕು..

ಇನ್ನೂ ಈ ಕೃತಿಯನ್ನು "ಮಂದಾರ ಪುಸ್ತಕ ಭಂಡಾರ, ಬೆಂಗಳೂರು" ಇವರು ಪ್ರಕಾಶಿಸಿದ್ದಾರೆ. ತುಂಬು ಅಕ್ಕರೆ ಮತ್ತು ಅಭಿಮಾನದಿಂದ ಈ ಕೃತಿಯನ್ನು ಸಮಾಜಕ್ಕೆ ತೆರೆದಿಡಲು ಪ್ರಕಾಶನದ ಶ್ರೀಯುತ ಭದ್ರಾವತಿ ರಾಮಚಾರಿ ಅವರ ಪರಿಶ್ರಮಕ್ಕೆ ನಾನು ತುಂಬು ಹೃದಯದ ಧನ್ಯವಾದಗಳನ್ನು ಹೇಳುವೆ..

ಈ ಕಾದಂಬರಿಗೆ ನಾಡಿನ ಹೆಸರಾಂತ ಸಾಹಿತಿಗಳಾದ ಶ್ರೀಯುತ ಡಾ. ನಾ.ಡಿಸೋಜ ಅವರು ಬಹಳ ಆತ್ಮೀಯತೆಯಿಂದ ತಮ್ಮ ಪದಗಳಲ್ಲಿ ನನಗೆ ಆಶೀರ್ವದಿಸಿದ್ದಾರೆ..ಅವರಿಗೂ ನನ್ನ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ..

ಎಲ್ಲಾ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಕೃತಿಯನ್ನು ದೊರೆಯುವ ವ್ಯವಸ್ಥೆಯನ್ನು ಖಂಡಿತವಾಗಿಯೂ ಪ್ರಕಾಶಕರು ಮಾಡುತ್ತಾರೆ. ದಯವಿಟ್ಟು ಎಲ್ಲರೂ ಈ ಕೃತಿಯನ್ನು ಕೊಂಡು ಓದಿ ಹಾರೈಸಬೇಕೆಂದು ತಮ್ಮಲ್ಲಿ ಸೌಜನ್ಯಯುತವಾಗಿ ಬೇಡಿಕೊಳ್ಳುತ್ತೇನೆ..

ಪ್ರಕಾಶಕರ ದೂರವಾಣಿ ಸಂಖ್ಯೆ: ೮೦೭೩೧೪೭೯೬೧

ಧನ್ಯವಾದಗಳೊಂದಿಗೆ..

ರಾಮಚಂದ್ರ ಸಾಗರ್



Monday, 5 October 2020

ನಗುವಿನ ಸಂಭ್ರಮವು


ನಿನ್ನ ಕುಡಿ ನೋಟದ ಸವಿ ನಗುವೇ

ವೈಭವದ ಈ ಬಾಳಿನ ಸಿರಿ ಸಂಭ್ರಮವು

ನಿನ್ನ ಸನ್ನಿಧಿಯ ಸಿಹಿ ಸಾಂಗತ್ಯವೇ

ಮಂಗಳವು ಈ ಬಾಳಲಿ ಅನುಕ್ಷಣವು 


ನಿನ್ನ ಕೋಮಲ ವದನ ಸೌಂದರ್ಯವೇ

ಹೊಂಗನಸುಗಳ ಚೆಲುವಿನ ಮೇಳವು

ನಿನ್ನ ಮುಂಗುರುಳ ಮೇರು ನರ್ತನವೇ

ಪ್ರೀತಿಯ ಮನದ ಹರುಷದ ಉಲ್ಲಾಸವು


ನಿನ್ನ ಸೌಮ್ಯದ ಮೆಲು ಮಾತುಗಳೆ

ಸಜ್ಜನಿಕೆಯ ಈ ಪ್ರೀತಿಗೆ ತೋರಣವು

ನಿನ್ನ ವಾತ್ಸಲ್ಯದ ಮಹದಾಸರೆಯೆ

ಅಕ್ಕರೆಯ ಅರಮನೆಯ ಬಂಧನವು


ನಿನ್ನ ಅಭಯದ ಆಹ್ಲಾದದ ವಚನವೇ

ಈ ಬಾಳಿಗೆ ಆನಂದದ ನೌಕೆಯು

ನಿನ್ನ ಅನುಪಮ ಪ್ರೇಮದ ಆಹ್ವಾನವೇ

ನಾ ಸಾಗುವ ಹಾದಿಯಲಿ ಗೆಲುವಿನ ಸೌಗಂಧವು


ನಿನ್ನ ಆದರದ ಪಾವನ ಹೃದಯವೇ

ಅಕ್ಷಯದ ಒಲವಿನ ಕಾಣಿಕೆಯು ಶ್ರೀರಕ್ಷೆಯು

ನಿನ್ನ ಸರಳತೆಯ ಸಂಸ್ಕಾರವೇ

ಸಂಪನ್ನತೆಯ ಶ್ರೀರಕ್ಷೆಯ ನದಿಯೆಂದಿಗು..


ನಿನ್ನ ಮೆಲು ನೋಟದ ಸೋಜಿಗವೇ

ಮನದಲಿ ಸಿಹಿ ಚೆಲ್ಲುವ ಸಡಗರವು

ನಿನ್ನ ಮೋಹಕ ಮೋಡಿಯ ನಗುವೇ

ಮೋಹಿಸುವ ಈ ಹೃದಯಕೆ ಸಂಭ್ರಮವು 


ರಚನೆ: ರಾಮಚಂದ್ರ ಸಾಗರ್

ಚಿತ್ರ: ಸಂಭ್ರಮ ಶ್ರೀ


Sunday, 23 August 2020

ನೀನಿರದ ಕ್ಷಣದಲ್ಲಿ…

ನಿನ್ನ ಪ್ರೀತಿಯ ಸುಳಿಯಿಂದ

ನಾ ಹೇಗೆ ಹೊರ ಬರಲಿ ಗೆಳತಿ

ನಿನ್ನ ಮೋಹದ ಬಂಧನದಿಂದ

ನಾ ಹೇಗೆ ಹೊರಗುಳಿಯಲಿ 


ನಿನ್ನ ಪ್ರೇಮದ ಘಮಲಿನ ಅಲೆಯಿಂದ

ನಾ ಎಲ್ಲಿ ಬಚ್ಚಿಟ್ಟುಕೊಳ್ಳಲಿ

ನಿನ್ನ ಕಣ್ಣೋಟದ ಕಾಂತಿಯಿಂದ

ನಾ ಬೆರಗುಗೊಳ್ಳದೆ ಹೇಗಿರಲಿ


ನೀ ಬಾರದೆ ನನ್ನೆಡೆಗೆ ಒಲವೆ

ಪರಿತಪಿಸುವ ಮನದ ಪಾಡೇನು

ನೀ ಅಪ್ಪದೆ ನನ್ನೆದೆಗೆ ಉಸಿರೆ

ಎದೆಯ ದನಿಗೆ ಉಳಿವೇನು


ನೀ ಹೂಮನದಿ ಆಹ್ವಾನಿಸದೆ 

ಮನಕೆ ಕತ್ತಿಯಾಗಿ ಚುಚ್ಚುವೆಯೇನು

ನೀ ಬಯಕೆಯಲಿ ಬಳಿಯಾಗದೆ

ಕ್ಷಣ ಕ್ಷಣವು ನೋವಿನ ಮಳೆಯಾಗದಿರು..


ಬಾಳೆಲ್ಲ ನೀನಾಗಿರಲು ಉಳಿವೆಲ್ಲಿ

ಸಾಗಲಾರೆನು ವಿರಹದ ಹೊಳೆಯಲ್ಲಿ

ನೀನಿರದ ಹಾದಿಗೆ ಗೆಲುವೆಲ್ಲಿ

ಜೊತೆಯಾಗದೆ ಬಾಳಿಗೆ ನೆಲೆಯೆಲ್ಲಿ


ನಿನ್ನ ಪ್ರೇಮದ ಬಲೆಯೊಳಗೆ

ನಾ ಬಂಧಿಯಾಗಿರಲು

ನೀ ಒಲಿಯದೆ ಜಗದೊಳಗೆ

ನನ್ನುಸಿರು ದನಿಸುವುದೇನು...?


ರಚನೆ: ರಾಮಚಂದ್ರ ಸಾಗರ್


Friday, 21 August 2020

ಸರ್ವರಿಗು ಗೌರಿ, ಗಣೇಶ ಹಬ್ಬದ ಶುಭಾಶಯಗಳು.

ಈ ವರ್ಷವಿಡೀ ಜಗಕೆ ಒಂದಲ್ಲಾ ಒಂದು ವಿಘ್ನಗಳು ನಿತ್ಯ ಕಾಡುತ್ತಿವೆ. ಇಡೀ ಜಗವೆ ಈಗ ಕೊರೊನಾ ಹೆಸರಿನ ಗಂಡಾಂತರ ಎದುರು ಅತೀ ಸಣ್ಣದಾಗಿ ಕಾಣುತ್ತಿದೆ. ಹಲವು ಜನರ ನೈಜ ಮುಖವಾಡ ಕಳಚಿಬಿದ್ದಿದೆ. ಬರಿ ನೋವೇ ಬಂದು ಎಲ್ಲರಿಗೂ ಅಪ್ಪಿದಂತ ಭಾಸವು ಈ 2020ರಲ್ಲಿ ಎಂದರೆ ತಪ್ಪಾಗಲಾರದು ಎನ್ನುವುದು ನನ್ನ ನಂಬಿಕೆ..

ಈ ಸಂದರ್ಭದಲ್ಲಿ ಈಗ ನಮ್ಮ ದೈವ ಪಾವಿತ್ರದ ಸಂಕೇತವಾದ ಗೌರಿ, ಗಣೇಶ ಹಬ್ಬ ಬಂದಿದೆ. ಈ ಸಮಯದಲ್ಲಿ ನಾವು ಕೂಡ ಸರಳತೆಯನ್ನು ಮೆರೆದು ಪರಿಸರ ಸ್ನೇಹಿ ಗೌರಿ ಮತ್ತು ಗಣೇಶ ಮೂರ್ತಿಗಳನ್ನು ಸ್ಥಾಪಿಸಿ ಹಬ್ಬವನ್ನು ಆಚರಿಸೋಣ. ಜೊತೆಗೆ ದೇವರಲ್ಲಿ ಜಗಕ್ಕೆರಗಿದ ಎಲ್ಲಾ ವಿಘ್ನಗಳು ನಿವಾರಣೆಯಾಗಲಿಯೆಂದು ಬೇಡೋಣ..

ನಮ್ಮ ಹಿಂದೂ ಧರ್ಮದ ಸಚ್ಚರಿತ ಸಂಪ್ರದಾಯದಂತೆ ದೇವಾರಾಧನೆಯನ್ನು ಸರ್ವವೂ ಪರಿಸರ ಸ್ನೇಹಿಯಾಗಿ ಆಚರಿಸೋಣ. ಆ ಮೂಲಕ "ಪ್ರಾಕೃತಿಕ ದೇವರ" ಕೃಪೆಗೂ ಪಾತ್ರರಾಗೋಣ.. ಇದೇ ಆಶಯದಲ್ಲಿ ಒಂದು ಕವಿತೆ ಬರೆದಿರುವೆ..ಎಲ್ಲರಿಗೂ ಒಳಿತಾಗಲಿ ಎನ್ನುವ ಆಶಯದೊಂದಿಗೆ. ಮತ್ತೆ ಜಗವು ನಲಿದೇಳುತ್ತದೆ ಎನ್ನುವ ಆಸೆಯಿಂದ..


ಪರಿಸರ ಸ್ನೇಹಿ ಗೌರಿ ಗಣಪ


ಸಡಗರಿಸೋಣ ಬಾಂಧವರೆ ಒಟ್ಟಾಗಿ ಬನ್ನಿ

ಪರಿಸರ ಸ್ನೇಹಿ ಗೌರಿ ಗಣಪರ ಭಕ್ತಿಯಲಿ ಕರೆತನ್ನಿ

ಸಜ್ಜನರಾಗೋಣ ರಾಸಾಯನಿಕದ ಮೂರ್ತಿಗಳ ತ್ಯಜಿಸಿ

ಸಂಭ್ರಮಿಸೋಣ ಹಬ್ಬದುದ್ದಗಲ ಧರಿತ್ರಿಯ ಪ್ರೀತಿಸಿ


ಸತ್ರದಲಿ ರಂಗೋಲಿ, ಸಿಂಗಾರ, ಕುಂಕುಮವು

ಸಕಲ ಪೂಜಾ ಪರಿಕರವು ಸಸ್ಯೋಜನ್ಯವಾಗಲಿ

ಸಜ್ಜನಿಕೆಯ ಮಣ್ಣಿನ ದೀಪಗಳೆ ಬೆಳಗಲಿ

ಸನಾತನ ಸಂಸ್ಕೃತಿಯು ಸೋಜಿಗದಿ ಮೇಳೈಸಲಿ


ಸಚ್ಚರಿತ ಸಂಗೀತದ ಸ್ವರಮೇಳವೆ ಹೊಮ್ಮಲಿ

ಸಭ್ಯವಲ್ಲದ ಅಶ್ಲೀಲದ ಗೀತೆಗಳು ತೊಲಗಲಿ

ಸದ್ಗತಿಗೆ ಗೌರಿ ಗಣಪರಲಿ ಆರಾಧಿಸೋಣ

ಸತ್ಕಾರದ ಭಾವನೆಗಳಲಿ ನಾಡಿಗಾಗಿ ಪ್ರಾರ್ಥಿಸೋಣ


ಸಂಪನ್ನವಾಗುವುದು ನಮ್ಮೆಲ್ಲರ ಪ್ರಾರ್ಥನೆಯು 

ಸಂಭ್ರಮದ ಸುಂದರ ವಸುಂಧರೆಯ ಮಹಲಿನೊಳು

ಸಕಲವು ಮಂಗಳವಾಗುವುದು ಗೌರಿಯ ಸ್ತುತಿಯಲಿ

ಸಫಲತೆಯು ಒಲಿವುದು ಗಣೇಶನ ಒಲುಮೆಯಲಿ


ಶಬ್ದಮಾಲಿನ್ಯದ ಪಟಾಕಿಯೆನ್ನುವ ಪಿಶಾಚಿಯೇತಕೆ?

ಸಮಂಜಸದ ದೇಸೀ ದೀವಿಗೆಗಳು ಜಗಮಗಿಸಲಿ

ಸಖ್ಯದ ಬಟ್ಟೆ ಚೀಲವು ಹಣ್ಣು ಕಾಯಿಗಿರಲಿ

ಸಖ್ಯವಲ್ಲದ ಪ್ಲಾಸ್ಟಿಕ್ ಚೀಲವು ಮರೆಯಾಗಲಿ


ಸಡಗರದ ಮೆರವಣಿಗೆಯಲಿ ದೇವನೊಲುಮೆ ಬಯಸೋಣ

ಸೌಜನ್ಯದ ದೈವದಾ ಗೀತೆಗೆ ಹೆಜ್ಜೆಯನು ಹಾಕೋಣ

ಸಡಗರಿಸುವುದು ಭಾವೈಕ್ಯದ ಸಮಾಜದ ಕನಸಾಗಲಿ

ಸಭ್ಯತೆಯ ಹಬ್ಬವು ಮತ್ತೆ ಮತ್ತೆ ಬರಲಿ..

 

ರಾಮಚಂದ್ರ ಸಾಗರ್


Sunday, 16 August 2020

ಹುಣ್ಣಿಮೆ ಬೆಳಕಂತೆ...



ನಿನ್ನ ಜೊತೆಯೆ ಸಂತೋಷದ ಕಡಲಂತೆ
ನಿನ್ನ ನೋಟವೆ ಸಂಭ್ರಮದ ಮಳೆಯಂತೆ
ನಮ್ಮ ಬದುಕೆ ವಿನೋದದ ನದಿಯಂತೆ
ನಮ್ಮ ನಡೆಯೆ ಹೂವಿನ ಹಾದಿಯಂತೆ

ನಿನ್ನ ನಗುವೆ ಉಲ್ಲಾಸದ ಕಿರಣದಂತೆ
ನಿನ್ನ ನಯನವೆ ಪ್ರೀತಿಯ ಸ್ವಾಗತದಂತೆ
ನಮ್ಮ ಒಲವೆ ಹರುಷದ ನೌಕೆಯಂತೆ
ನಮ್ಮ ಛಲವೆ ಬಾಳಿನ ಹೊಳಪಂತೆ

ನಿನ್ನ ಕೈಸೆರೆಯು ಸೌಜನ್ಯದ ವರದಂತೆ
ನಿನ್ನ ಸ್ನೇಹವು ಸೌಹಾರ್ದದ ಬಾನಂತೆ
ನಮ್ಮ ಪ್ರೇಮವು ಹುಣ್ಣಿಮೆಯ ಬೆಳಕಂತೆ
ನಮ್ಮ ಪ್ರೇರಣೆಯೆ ತ್ಯಾಗದ ನೆರಳಂತೆ

ನಿನ್ನ ಮಾತು ಬೆಲ್ಲದ ಸವಿಯಂತೆ
ನಿನ್ನ ಮನವೆ ಮಮತೆಯ ಮಂದಿರದಂತೆ
ನಮ್ಮ ಜಗವು ಸುಖದ ಅಂಗಳದಂತೆ
ನಮ್ಮ ಕಲ್ಯಾಣವು ಶ್ರೇಯದ ಕಲಶದಂತೆ

ನಿನ್ನ ಸ್ಪರ್ಶವೆ ಸರೋವರದ ಅಲೆಯಂತೆ
ನಿನ್ನ ಬಂಧವೆ ಸಮ್ಮೋಹದ ಸುಳಿಯಂತೆ
ನಮ್ಮ ಯುಗವೆ ಸಿಂಗಾರದ ಸುಗ್ಗಿಯಂತೆ
ನಮ್ಮ ಹೃದಯವೆ ಆನಂದದ ಆಧಾರದಂತೆ

ರಾಮಚಂದ್ರ ಸಾಗರ್

Sunday, 2 August 2020

ನೀನಲ್ಲವೆ ಗೆಳತಿ..


ಗೆಳತಿ..

ಮಲ್ಲಿಗೆಯ ಮಧುರ ಕಂಪಿನ ಘಮಲಿನ ಅಲೆಯಲಿ
ಪ್ರೀತಿಯ ಆಹ್ವಾನ ನೀಡಿದ ಕೋಮಲೆಯು ನೀನಲ್ಲವೆ
ಸೌರಭದ ಸವಿ ಜೇನಿನ ಮಂಟಪದಲಿ
ಮನಕೆ ಒಲವಿನ ಗಂಧಿಕೆ ಸವರಿದವಳು ನೀನಲ್ಲವೆ

ಪ್ರೇಮಾಮೃತದ ಹೂವಿನ ಮಳೆಯಲಿ
ಸೌಮ್ಯದ ನದಿಯಾಗಿ ಹರಿದವಳು ನೀನಲ್ಲವೆ
ಮೋಹದ ಅನುಪಮ ನಗುವಿನಲೆಯಲಿ
ಮನದ ದುಗುಡ ಕರಗಿಸಿದ ಕಾವ್ಯವು ನೀನಲ್ಲವೆ

ಸುಖದ ಕುಂಭವನು ಹೊತ್ತು
ದಾರಿಗೆ ಜೊತೆಯಾದವಳು ನೀನಲ್ಲವೆ
ಸುವರ್ಣದ ಸಂಭ್ರಮದ ಬದುಕನು
ಕೃಪೆಯಾಗಿಸಿದ ಕಾದಲೆಯು ನೀನಲ್ಲವೆ

ಅನುರಾಗದ ಆರಾಧ್ಯದಾ ಸ್ವರವನು
ಬಾಳಗೀತೆಯಾಗಿಸಿದ ಕೋಗಿಲೆಯು ನೀನಲ್ಲವೆ
ಕಾವಳದ ದುಗುಡದ ಕಂದರವನು
ಬೆಳಕಾಗಿಸಿದ ಕಿರಣವು ನೀನಲ್ಲವೆ

ಕಾಸಾರದ ತಿಳಿ ನೀರಿನಲಿ
ನಗುವ ಶಶಿಗೆ ಸೊಗಸಿನ ಸಿರಿಯು ನೀನಲ್ಲವೆ
ಸರೋವರದ ತಂಪಲೆಯ ಸುಖದಲಿ
ಅಕ್ಕರೆಯ ಸ್ವಾದವನು ಲೇಪಿಸಿದವಳು ನೀನಲ್ಲವೆ

ರಾಮಚಂದ್ರ ಸಾಗರ್ 

ಎಲ್ಲಿ, ಯಾರಿಂದ ತಪ್ಪಾಗಿದೆ?


(ಕಾಲ್ಪನಿಕ ಬರಹ)

ನಾನು ಅನೇಕ ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿರುವೆ. ಕೆಲವು ವರ್ಷಗಳಿಗೊಮ್ಮೆ ಆಗಾಗ್ಗೆ ಭಾರತಕ್ಕೆ ಬರುತ್ತಿದ್ದೆ. ಬರುವಾಗಲೆಲ್ಲಾ ಬಂಧು ಬಳಗದವರಿಗೆ, ಅಕ್ಕರೆಯ ಸ್ನೇಹಿತರಿಗೆ ಸಾಕಷ್ಟು ಉಡುಗೊರೆಗಳನ್ನು ತರುತ್ತಿದ್ದೆ. ಮುಖ್ಯವಾಗಿ ನಾನು ಅಮೇರಿಕಾದಲ್ಲಿ ಕೆಲಸಕ್ಕೆ ಸೇರಿದ ಮೇಲೆಯೇ ಊರಿನಲ್ಲಿದ್ದ ನನ್ನ ಕುಟುಂಬದವರು, ಬಳಗದವರು ಸಾಕಷ್ಟು ಚೇತರಿಕೆಯನ್ನು ಕಂಡರು. 
ಸಾಕಷ್ಟು ಭೂಮಿ ಇದ್ದರೂ ಅಭಿವೃದ್ಧಿ ಪಡಿಸಲು ಹಣಕಾಸಿನ ಕೊರತೆಯಿತ್ತು. ಅದೂ ಸಹಾ ನಾನು ನೀಡಿದ ಆರ್ಥಿಕ ಸಹಾಯದಿಂದಲೇ ನೆರವೇರಿತು. ಬೇಸಿಗೆಯಲ್ಲೂ ನೀರಿನ ವ್ಯವಸ್ಥೆಯಾಗಿ ಇಡೀ ಗದ್ದೆ ಮತ್ತು ತೋಟ ಹಸಿರಿನಿಂದ ನಳನಳಿಸುವಂತಾಯಿತು. ಇದ್ದ ಹಳೇ ಮನೆಯ ದುರಸ್ತಿಯನ್ನು ನಾನು ಕಳುಹಿಸುತ್ತಿದ್ದ ಹಣದಿಂದಲೇ ಮಾಡಿಸಿದರು. ಇದರ ನಡುವೆ ಅನೇಕ ಜನ ಸ್ನೇಹಿತರಿಗೆ ಹಣಕಾಸಿನ ನೆರವನ್ನು ಮಾಡಿದ್ದೆ. ಅದರಿಂದ ಅವರು ಸಹಾ ಉದ್ಯೋಗವನ್ನು ನಡೆಸಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸ್ವಾವಲಂಬಿಗಳಾಗಿದ್ದರು. 
ಏನಿಲ್ಲವೆಂದರೂ ವಾರದಲ್ಲಿ ಎರಡು ಮೂರು ಬಾರಿ ಊರಿನಿಂದ ನನಗೆ ಕರೆ ಬರುತ್ತಿತ್ತು. ಬಹಳ ಅಕ್ಕರೆಯಿಂದ ಮಾತನಾಡುತ್ತಿದ್ದರು. ಏನು ಕೇಳುವುದನ್ನು ಮರೆತರೂ ಮತ್ತೆ ಯಾವಾಗ ಊರಿಗೆ ಬರುತ್ತೀಯಾ? ಹೇಗಿದ್ದೀಯಾ? ಒಬ್ಬನೇ ಎಷ್ಟು ವರ್ಷವಂತ ಭ್ರಹ್ಮಚಾರಿಯಾಗಿ ಇರುತ್ತೀಯ? ಬೇಗನೇ ಮದುವೆಯಾಗು. ಈ ಬಾರಿ ನೀನು ಊರಿಗೆ ಬಂದಾಗ ಖಂಡಿತವಾಗಿ ನಿನ್ನ ಮದುವೆಯನ್ನು ಮಾಡಿಯೇ ತೀರುತ್ತೇವೆ. ನಿನ್ನ ಮನದ ಇಂಗಿತವನ್ನು ಈಡೇರಿಸುವ ಸೌಖ್ಯವತಿಯು ನಿನಗೆ ಒಲಿದು ಬರುತ್ತಾಳೆ. ಎಷ್ಟೇ ಆದರು ಹೂವಂತ ಮನದವನು ನೀನು. ನಿನಗೇ ಆ ದೇವರು ಖಂಡಿತವಾಗಿಯೂ ಉತ್ತಮ ಕನ್ಯೆಯನ್ನೇ ಕರುಣಿಸುತ್ತಾನೆ. ಈ ಬಾರಿ ನೀನು ಊರಿಗೆ ಬಂದರೆ ಒಂಟಿಯಾಗಿ ಅಮೇರಿಕಾಗೆ ಹಿಂತಿರುವುದಿಲ್ಲ. ಜೊತೆಯಾಗಿಯೇ ಹಿಂತಿರುಗುವೆ. ಇದು ಸತ್ಯ. ಎಲ್ಲದಕ್ಕೂ ಕಾಲ ಕೂಡಬೇಕು. ನೀನು ಊರಿಗೆ ಆದಷ್ಟು ಬೇಗ ಬಾ ಎಂದು ಎಲ್ಲರೂ ಅಕ್ಕರೆಯಿಂದ ಹಂಬಲಿಸುತ್ತಿದ್ದರು. 
ನನಗೂ ಇವರೆಲ್ಲರ ಮಾತನ್ನು ಕೇಳಿ ಆದಷ್ಟು ಬೇಗ ಊರಿಗೆ ಹೋಗಬೇಕೆನ್ನುವ ಆಸೆ ಅರಳಿತು.