ಈ ವರ್ಷವಿಡೀ ಜಗಕೆ ಒಂದಲ್ಲಾ ಒಂದು ವಿಘ್ನಗಳು ನಿತ್ಯ ಕಾಡುತ್ತಿವೆ. ಇಡೀ ಜಗವೆ ಈಗ ಕೊರೊನಾ ಹೆಸರಿನ ಗಂಡಾಂತರ ಎದುರು ಅತೀ ಸಣ್ಣದಾಗಿ ಕಾಣುತ್ತಿದೆ. ಹಲವು ಜನರ ನೈಜ ಮುಖವಾಡ ಕಳಚಿಬಿದ್ದಿದೆ. ಬರಿ ನೋವೇ ಬಂದು ಎಲ್ಲರಿಗೂ ಅಪ್ಪಿದಂತ ಭಾಸವು ಈ 2020ರಲ್ಲಿ ಎಂದರೆ ತಪ್ಪಾಗಲಾರದು ಎನ್ನುವುದು ನನ್ನ ನಂಬಿಕೆ..ಈ ಸಂದರ್ಭದಲ್ಲಿ ಈಗ ನಮ್ಮ ದೈವ ಪಾವಿತ್ರದ ಸಂಕೇತವಾದ ಗೌರಿ, ಗಣೇಶ ಹಬ್ಬ ಬಂದಿದೆ. ಈ ಸಮಯದಲ್ಲಿ ನಾವು ಕೂಡ ಸರಳತೆಯನ್ನು ಮೆರೆದು ಪರಿಸರ ಸ್ನೇಹಿ ಗೌರಿ ಮತ್ತು ಗಣೇಶ ಮೂರ್ತಿಗಳನ್ನು ಸ್ಥಾಪಿಸಿ ಹಬ್ಬವನ್ನು ಆಚರಿಸೋಣ. ಜೊತೆಗೆ ದೇವರಲ್ಲಿ ಜಗಕ್ಕೆರಗಿದ ಎಲ್ಲಾ ವಿಘ್ನಗಳು ನಿವಾರಣೆಯಾಗಲಿಯೆಂದು ಬೇಡೋಣ..
ನಮ್ಮ ಹಿಂದೂ ಧರ್ಮದ ಸಚ್ಚರಿತ ಸಂಪ್ರದಾಯದಂತೆ ದೇವಾರಾಧನೆಯನ್ನು ಸರ್ವವೂ ಪರಿಸರ ಸ್ನೇಹಿಯಾಗಿ ಆಚರಿಸೋಣ. ಆ ಮೂಲಕ "ಪ್ರಾಕೃತಿಕ ದೇವರ" ಕೃಪೆಗೂ ಪಾತ್ರರಾಗೋಣ.. ಇದೇ ಆಶಯದಲ್ಲಿ ಒಂದು ಕವಿತೆ ಬರೆದಿರುವೆ..ಎಲ್ಲರಿಗೂ ಒಳಿತಾಗಲಿ ಎನ್ನುವ ಆಶಯದೊಂದಿಗೆ. ಮತ್ತೆ ಜಗವು ನಲಿದೇಳುತ್ತದೆ ಎನ್ನುವ ಆಸೆಯಿಂದ..
ಪರಿಸರ ಸ್ನೇಹಿ ಗೌರಿ ಗಣಪ
ಸಡಗರಿಸೋಣ ಬಾಂಧವರೆ ಒಟ್ಟಾಗಿ ಬನ್ನಿ
ಪರಿಸರ ಸ್ನೇಹಿ ಗೌರಿ ಗಣಪರ ಭಕ್ತಿಯಲಿ ಕರೆತನ್ನಿ
ಸಜ್ಜನರಾಗೋಣ ರಾಸಾಯನಿಕದ ಮೂರ್ತಿಗಳ ತ್ಯಜಿಸಿ
ಸಂಭ್ರಮಿಸೋಣ ಹಬ್ಬದುದ್ದಗಲ ಧರಿತ್ರಿಯ ಪ್ರೀತಿಸಿ
ಸತ್ರದಲಿ ರಂಗೋಲಿ, ಸಿಂಗಾರ, ಕುಂಕುಮವು
ಸಕಲ ಪೂಜಾ ಪರಿಕರವು ಸಸ್ಯೋಜನ್ಯವಾಗಲಿ
ಸಜ್ಜನಿಕೆಯ ಮಣ್ಣಿನ ದೀಪಗಳೆ ಬೆಳಗಲಿ
ಸನಾತನ ಸಂಸ್ಕೃತಿಯು ಸೋಜಿಗದಿ ಮೇಳೈಸಲಿ
ಸಚ್ಚರಿತ ಸಂಗೀತದ ಸ್ವರಮೇಳವೆ ಹೊಮ್ಮಲಿ
ಸಭ್ಯವಲ್ಲದ ಅಶ್ಲೀಲದ ಗೀತೆಗಳು ತೊಲಗಲಿ
ಸದ್ಗತಿಗೆ ಗೌರಿ ಗಣಪರಲಿ ಆರಾಧಿಸೋಣ
ಸತ್ಕಾರದ ಭಾವನೆಗಳಲಿ ನಾಡಿಗಾಗಿ ಪ್ರಾರ್ಥಿಸೋಣ
ಸಂಪನ್ನವಾಗುವುದು ನಮ್ಮೆಲ್ಲರ ಪ್ರಾರ್ಥನೆಯು
ಸಂಭ್ರಮದ ಸುಂದರ ವಸುಂಧರೆಯ ಮಹಲಿನೊಳು
ಸಕಲವು ಮಂಗಳವಾಗುವುದು ಗೌರಿಯ ಸ್ತುತಿಯಲಿ
ಸಫಲತೆಯು ಒಲಿವುದು ಗಣೇಶನ ಒಲುಮೆಯಲಿ
ಶಬ್ದಮಾಲಿನ್ಯದ ಪಟಾಕಿಯೆನ್ನುವ ಪಿಶಾಚಿಯೇತಕೆ?
ಸಮಂಜಸದ ದೇಸೀ ದೀವಿಗೆಗಳು ಜಗಮಗಿಸಲಿ
ಸಖ್ಯದ ಬಟ್ಟೆ ಚೀಲವು ಹಣ್ಣು ಕಾಯಿಗಿರಲಿ
ಸಖ್ಯವಲ್ಲದ ಪ್ಲಾಸ್ಟಿಕ್ ಚೀಲವು ಮರೆಯಾಗಲಿ
ಸಡಗರದ ಮೆರವಣಿಗೆಯಲಿ ದೇವನೊಲುಮೆ ಬಯಸೋಣ
ಸೌಜನ್ಯದ ದೈವದಾ ಗೀತೆಗೆ ಹೆಜ್ಜೆಯನು ಹಾಕೋಣ
ಸಡಗರಿಸುವುದು ಭಾವೈಕ್ಯದ ಸಮಾಜದ ಕನಸಾಗಲಿ
ಸಭ್ಯತೆಯ ಹಬ್ಬವು ಮತ್ತೆ ಮತ್ತೆ ಬರಲಿ..
ರಾಮಚಂದ್ರ ಸಾಗರ್