Thursday, 8 December 2016

ಆಗಮಿಸು ಗೆಳೆಯ..

ಪ್ರೀತಿಯ ಹುಡುಗ...
ಕಡಲತಡಿಯಲ್ಲಿ ಉಸುಕು ಗೋಪುರ ಕಟ್ಟುತ್ತಿದ್ದೇನೆ ಇಂದು ನಾನೊಬ್ಬಳೆ. ಅದೂ ಅಸಹಾಯಕಳಾಗಿ..!  ಅಂದು ಜೊತೆಯಲ್ಲಿ ನೀ ಕಟ್ಟಿದ ಗೋಪುರ ಅಲೆಗಳ ಉಬ್ಬರದಲ್ಲಿ ಕಳಚಿಹೋಗಿದೆ. ಗೋಪುರದ ಕುರುಹು ಕಾಣೆಯಾಗಿದೆ, ಜೊತೆಗೆ ನೀನು ಮರೆಯಾಗಿರುವೆ. ಆದರೆ ಇಂದು ಕಡಲತಡಿಯಲ್ಲೇನೋ ನಿನ್ನ  ಮಧುರ ನೆನಪುಗಳ ಅತಿಶಯ ನನ್ನ ಮನಕೆ ವಿಷವಾಗಿ ಕಾಡುತ್ತಿದೆ. ತಂಪಲೆಗಳ ಹಿತವಂತಿಕೆಯು ನನ್ನ ತ್ವಚೆಗೆ ಹಿತ ನೀಡುತ್ತಿಲ್ಲ. ನೀ ಕಾಣದ ಘಳಿಗೆ ಅವಿಶ್ರಾಂತ ಮನದಲ್ಲಿ ಒಂಟಿ ಎಂಬ ಕೊರಗಲ್ಲಿ ಸಂತೈಸುವ ನಿನ್ನ ಹಿತವಂತಿಕೆಯ ನಗುವಿಲ್ಲದೆ ನಾನು ನೀರಿಂದ ಹೊರಬಿದ್ದ ಮೀನಂತೆ ನನ್ನ ಜೀವವಾಗಿದೆ. ಈ ಮೃದು ಮಸಸ್ಸು ನೀನಿಲ್ಲದೆ ನೋವಲ್ಲಿ ಅವಿರತ ದುಃಖದ ಅಲೆಗೆ ತತ್ತರಿಸಿದೆ. ಆದರೂ ಉಸುಕಿನಲ್ಲಿ ಗೋಪುರ ಕಟ್ಟಿ ಅದರಲ್ಲಿ ನಿನ್ನ ನಗು ಕಾಣುವ ಹಂಬಲ ಅತಿಶಯವಾಗುತ್ತಿದೆ. ಮೌನಿ ನನ್ನ ಮಾತಾಡಿಸಲು ನಿನ್ನ ದನಿ ಇಂದೇಕೋ? ಆಸರೆಯಾಗಿಲ್ಲ. ಇರಲಿ, ನೀ ಬರಬಹುದು ಜೊತೆಗೆ ನಮ್ಮೊಲವ ಗೋಪುರಕ್ಕೂ ನೀ ಒಂದಾಗುವೆ ಎಂಬ ನಂಬಿಕೆ ಪ್ರತಿ ಉಸಿರೆಳೆತದಲ್ಲೂ ನುಡಿಯುತ್ತಿದೆ. ಆದೇನೇ ಆದರು ನಿನ್ನಾಗಮನವಿಲ್ಲದ ಈ ಸಂಜೆ ಸಾಗರದಲ್ಲಿ ಮುಳುಗಲು ರವಿಗೂ ಕೊರಗು! ಈ ಒಂಟಿ ಹುಡುಗಿಯ ನೋವು ರವಿಗೂ ಅಯ್ಯೋ ಎನಿಸುತಿದ್ದೆ. ಕಡಲಲೆಗಳ ಸದ್ದಿನ ಗಾನದಲ್ಲೂ ಹಿತವಿಲ್ಲ. ಅಲ್ಲೂ ಶೋಕಗೀತೆಯಂತೆ ಮೌನಾಚರಣೆ.  ಒಂಟಿ ಹುಡುಗಿಯ ನೋವಿಗೆ ಅದಕೂ ಬೇಸರ. ಆದರೂ ನೀ ದೂರ ಉಳಿದಿರಲೇನು ಕಾರಣ? ದೂರದಲ್ಲಿ ನೀ ಕೈಸನ್ನೆ ಮಾಡಿ ಬಂದಂತೆ ಕಾಡುವ ಬಿಂಬ ಒತ್ತಾಸೆಯಾಗಿ ನಿಲ್ಲುವ ನಿನ್ನ ನಗು ಇಂದೇಕೋ ಅವಿರತ ಕಾಡಿಸುತ್ತಿದೆ. ಜೊತೆಗೆ ನನ್ನ ಮೊಗದಲ್ಲೂ ನಗು ಕದ್ದಿರುವೆ ಗೆಳೆಯಾ..ಇದೆಲ್ಲಾ ಹೃದಯ ಕದ್ದ ನಿನ್ನದೇ ಕೃತ್ಯವು, ನಿನ್ನದೇ ಪಾರುಪತ್ಯವು. ಅಂದು ಕಡಲತಡಿಯಲ್ಲಿ ನನ್ನ ಹಾಡಿ ಹೊಗಳುತಿದ್ದ ನಿನ್ನ ದನಿ ಎಲ್ಲಿ..? ‘ಕಡಲತಡಿಯಲ್ಲಿ ನವಿರು ನಡಿಗೆಯಲ್ಲಿ ನಡೆವ ಚೆಲುವ ಬೊಂಬೆ’ ಎಂದು ನನ್ನ  ಕೊಂಡಾಡುತ್ತಿದ್ದ ಪೋರ ನೀ ಎಲ್ಲಿ ಮರೆಯಾದೆ..? ಸಂಪತ್ತಿನ ಅಂತಸ್ತಿಗೆ ಬೆಲೆ ನೀಡದ ಹುಡುಗಿ ನಾನು. ಮರು ಮಾತಿಲ್ಲದೇ ಬಂದು ಬಿಡು. ಬಂದವನೇ ನನ್ನ ಒಪ್ಪಿ ಅಪ್ಪಿ ಬಿಡು. ಅಂಜಿಕೆಯ ಬಿಟ್ಟು ಬೇಗನೇ ಆಗಮಿಸು.
ಆಸೆಗಳ ರಾಶಿಯಲ್ಲಿ ನನ್ನ ಮನಸು ಭಾರವಾಗಿದೆ. ಭಾರ ಇಳಿಸುವ ನಿನ್ನ ಸಾಂಗತ್ಯ, ನಿನ್ನ ತುಸು ನಗು, ಬಾಹು ಬಂಧನವಿಲ್ಲದೆ ನಾನು ಉರಿ ಬಿಸಿಲಲ್ಲಿ ಧಗೆಗೆ ಸೊರಗುವ ಹೂವಂತೆ  ಬಾಡುತ್ತಿದ್ದೇನೆ. ಬಾಡುವ ಮುಗ್ದ ಹುಡುಗಿಗೆ ನೀ ಬಂದು ಎಂದು ಸಂತೈಸುವೆ ಗೆಳೆಯ?..ನಾ ಕಣ್ಣಗಲಿಸಿ ನೋಡಿದಲ್ಲೆಲ್ಲಾ ನೀ ಕೈಸನ್ನೆ ಮಾಡಿ ನನ್ನ ಕರೆದಂತೆ! ನಿನ್ನ ಪ್ರೀತಿಯ ಮಾಯೆ ನನ್ನ ಬಾಳನ್ನೇ ಆವರಿಸಿ ಎಲ್ಲವೂ ಪ್ರೇಮದ ಕಡಲಿಗೆ ಮನ ಹಂಬಲಿಸಿದಂತೆ. ಕ್ಷಣ ಕ್ಷಣವೂ ನಿನ್ನದೇ ನಾಯ ನನ್ನೆದೆಯ ಗಾನವಾಗಿದೆ ಗೆಳೆಯ. ಅಂಜಿಕೆಯ ಬಿಟ್ಟು ಬೇಗನೇ ಆಗಮಿಸು...ನಿನ್ನೊಲವಿಗೆ ಪರಿತಪಿಸಿದ ಕೋಮಲೆಯ ಮನ ತಣಿಸು...