Showing posts with label ಲೇಖನಗಳು. Show all posts
Showing posts with label ಲೇಖನಗಳು. Show all posts

Saturday, 23 September 2023

ಸರ್ವ ಪೌರಕಾರ್ಮಿಕರಿಗೂ ಪೌರಕಾರ್ಮಿಕ ದಿನಾಚರಣೆಯ ಶುಭಾಶಯಗುಳು;

 

ಈ ಸುದಿನ ಸೆಪ್ಟಂಬರ್ ಮಾಹೆಯ ೨೩ನೇ ದಿನ ಪೌರಕಾರ್ಮಿಕರ ದಿನಾಚರಣೆ. ನಮ್ಮ ನಗರವನ್ನು ಶುಚಿತ್ವವಾಗಿಟ್ಟು ನಮ್ಮ ಆರೋಗ್ಯದ ರಕ್ಷೆಯಲ್ಲಿ ಸದಾ ನಿರತರಾಗಿ ನಗರ ಆರೋಗ್ಯದ ರಕ್ಷೆಗಾಗಿ ಸದಾ ಹೋರಾಡುವ ಯೋಧರಾಗಿ ಶ್ರಮಿಸುವ ಎಲ್ಲಾ ಪೌರಕಾರ್ಮಿಕರಿಗೆ ನನ್ನ ನಮನಗಳು.

ಇಡೀ ಊರಿನ ಜನರೆಲ್ಲ ಸವಿ ನಿದ್ರೆಯಲ್ಲಿ ಜಾರಿರುವ ಮುಂಜಾನೆಯ ಸಮಯದಲ್ಲಿ ಬೇಗನೇ ಎದ್ದು ಕರ್ತವ್ಯದ ಶ್ರದ್ಧೆಯೊಂದಿಗೆ ಎಲ್ಲರೂ ಕೈಜೋಡಿಸಿ ಊರಿನ ನೈರ್ಮಲೀಕರಣ, ನೀರು ಸರಬರಾಜು ಕಾರ್ಯಗಳಲ್ಲಿ ಮಗ್ನರಾಗಿ ನಮ್ಮೆಲ್ಲರ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಆ ಎಲ್ಲಾ ಕಾಯಕ ಚೇತನಗಳಿಗೆ ಈ ದಿನ ಗೌರವಿಸುವ ಸುಸಮಯ. ಬನ್ನಿ ಎಲ್ಲರೂ ಸೇರಿ ಅವರನ್ನು ತುಂಬು ಹೃದಯದಿಂದ ಗೌರವಿಸೋಣ. ಈ ದಿನವನ್ನು ನಮ್ಮ ಬಾಳಲ್ಲಿ ಅರ್ಥಪೂರ್ಣವಾಗಿಸೋಣ.

ಊರಿನ ಯಾವುದೇ ಸಮಸ್ಯೆಯಿರಲಿ ಮೊದಲು ನೆನಪಾಗುವುದು ನಮ್ಮೂರಿನ ಪೌರಸಭೆ. ಮನುಷ್ಯನ ಜನನದಿಂದ ಹಿಡಿದು ಆತನ ಮರಣದವರೆಗೂ ಇಲ್ಲಿನ ಸೇವೆಗಳು ಅಗತ್ಯ. ಜನನ ಪ್ರಮಾಣ, ಮರಣ ಪ್ರಮಾಣ ಪತ್ರಗಳೇ ಈಗ ಮನುಷ್ಯನ ಜನನ, ಅವಸಾನದ ದಾಖಲೆಗಳಾಗಿವೆ. ಊರಿನ ಯಾವುದೇ ಭಾಗದಲ್ಲಿ ಯಾವುದೇ ನೈರ್ಮಲೀಕರಣ ಸಮಸ್ಯೆ, ನೀರಿನ ಸಮಸ್ಯೆ, ರಸ್ತೆ, ಚರಂಡಿ, ಬೀದಿ ದೀಪ, ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಪೌರಸಭೆಗಳ ಪಾತ್ರ ಪ್ರಮುಖ. 

ಇತ್ತೀಚೆಗೆ ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಪೌರಸಭಾ ಸಿಬ್ಬಂದಿಗಳ ಸೇವೆ ಅನನ್ಯ. ಕೋವಿಡ್ ಸಮಯದಲ್ಲಿ ಎಷ್ಟೋ ಜನ ಅಸುನೀಗಿದಾಗ ಅವರ ವಾರಸುದಾರರು ಶವ ಸಂಸ್ಕಾರ ಮಾಡದೇ ಕೆಲವೊಮ್ಮೆ ಕೆಲವರು ಪಲಾಯನ ಮಾಡಿದ್ದುಂಟು.  ಆಸ್ತಿಗಾಗಿ ಬಡಿದಾಡುವವರು ಕೋವಿಡ್ ಹೆಮ್ಮಾರಿಗೆ ಬೆದರಿ ಉಸಿರಿನ ಸಂಬAಧಕ್ಕೆ ತಿಲಾಂಜಲಿ ಹೇಳಿದ್ದರು. ಅಂತಹ ಸಮಯದಲ್ಲಿ ಪೌರಸಭೆಗಳ ಕಾರ್ಮಿಕರು ಕೋವಿಡ್ ನಿಂದ ಮೃತಪಟ್ಟವರ ಶವÀ ಸಂಸ್ಕಾರ ಮಾಡಿ ಅಸುನೀಗಿದವರ ಆತ್ಮಕ್ಕೆ ಗೌರವಿಸಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ನಮ್ಮ ಅನೇಕ ಜನ ಕಾರ್ಮಿಕರು ತಮ್ಮ ನಿಸ್ವಾರ್ಥ ಸೇವೆಯಲ್ಲಿ ಬಲಿದಾನವಾಗಿದ್ದಾರೆ. ಅಂತವರೆಲ್ಲರ ಸೇವೆಯನ್ನು ಯಾವುದೇ ಪರಿಹಾರದ ಮೌಲ್ಯದಿಂದ ಅಳತೆಗೋಲಾಗಿಸಲು ಸಾಧ್ಯವೇ..? ಒಂದು ಕ್ಷಣ ಪೌರಕಾರ್ಮಿಕರಿಲ್ಲದ ನಿಮ್ಮ ಬದುಕು, ನಗರವನ್ನು ಕಲ್ಪಿಸಿಕೊಳ್ಳಿ. ಮನಸಾರೆ ಎಲ್ಲವನ್ನು ಅವಲೋಖಿಸಿದಾಗ ಮಾತ್ರವೇ ನೈಜತೆಯ ಮೌಲ್ಯ ಅರ್ಥವಾಗುತ್ತದೆ. ಇನ್ನೊಬ್ಬರ ಶ್ರಮಹ ಹನಿಗಳ ಮೌಲ್ಯ ಅರಿವಾಗುತ್ತದೆ.

ಸುಂದರ ನಗರಕ್ಕೆ ಅರ್ಪಿತವಾಗುವ ಪ್ರಶಸ್ತಿ, ಪ್ರಶಂಸೆಗಳು ಕಾರ್ಮಿಕರ ಕೈಗೆ ಪ್ರಧಾನವಾದರೆ ಉತ್ತಮ. ಕಾರ್ಮಿಕರು ಶ್ರಮದಾನ ಮಾಡಿ ದುಡಿದ ಕಾರ್ಯವನ್ನು ತಮ್ಮ ಕಾರ್ಯವೆಂದು ಹೆಮ್ಮೆಪಡುವವರು, ಹಾರಹಾಕಿಸಿಕೊಳ್ಳುವವರು ಕಡಿಮೆಯಾಗಬೇಕು. ಎಲ್ಲವೂ ಸಾಧ್ಯವಾಗಿದ್ದು ಪೌರಕಾರ್ಮಿಕ ನಿಷ್ಠೆಯಿಂದ ಎನ್ನುವುದನ್ನು ಅವರನ್ನು ದುಡಿಸಿಕೊಳ್ಳುವವರು ಅರ್ಥೈಸಿಕೊಳ್ಳಬೇಕು. ಅವರಿಗೆ ಸರಿಯಾದ ಕಾಲದಲ್ಲಿ ಉತ್ತಮ ಆರೋಗ್ಯ ತಪಾಸಣೆ, ಭವಿಷ್ಯನಿಧಿ, ವಿಮೆಯ ಸೌಲಭ್ಯಗಳು ದೊರೆಯುವಂತೆ ನೋಡುವುದು ಅವರಿಂದ ಕೆಲಸ ತೆಗೆದುಕೊಳ್ಳುವವರ ಮತ್ತು ಅವರಿಗೆ ಕೆಲಸ ಹೇಳುವವರ ಜವಬ್ದಾರಿ ಎನ್ನುವದನ್ನು ಸಹಾ ಅಧಿಕಾರ ನಡೆಸುವವರಿಗೆ ಅರ್ಥವಾಗಬೇಕು. ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಕಾಯ್ದೆ, ನಿಯಮಗಳ ನಿಬಂಧನೆಗಳಿವೆ. ಅವೆಲ್ಲವೂ ಕೂಡ ಪಾರದರ್ಶಕವಾಗಿ ಜಾರಿಮಾಡುವುದು ಕಾರ್ಮಿಕರನ್ನು ದುಡಿಸಿಕೊಳ್ಳುವವರು ಕೆಲಸ. ಜೊತೆಗೆ ಪೌರಕಾರ್ಮಿಕರ ಸೇವೆ ಪಡೆಯುವ ಪ್ರತೀ ನಾಗರೀಕನ ಜವಬ್ದಾರಿಯೂ ಹೌದು ಎನ್ನುತ್ತಾ..ಈ ದಿನ ಪೌರಕಾರ್ಮಿಕರ ದಿನಾಚರಣೆ. ಅವರನ್ನು ಗೌರವಿಸುವ ಸುದಿನ. ಊರಿನ ಎಲ್ಲರೂ ಸಹಾ ಶ್ರಮದ ಜೀವಿಗಳಾದ ಪೌರಕಾರ್ಮಿಕರಿಗೆೆ ಒಂದಾಗಿ ಗೌರವಿಸಿ ಅಭಿನಂದಿಸೋಣ ಅಕ್ಕೆಯಿಂದ ಬನ್ನಿ..

ರಾಮಚಂದ್ರ ಸಾಗರ್


Sunday, 3 September 2023

ಕಣ್ಣೀರ ಕಡಲಲಿ ಮರೆಯಾದ ಪ್ರೇಮದ ನದಿ- “ಸಪ್ತ ಸಾಗರದಾಚೆ ಎಲ್ಲೋ”

ಪ್ರೀತಿ, ಪ್ರೇಮದ ವೈಭವದ ಯಾತ್ರೆಯು ಎಲ್ಲರ ಬಾಳಲ್ಲೂ ಸಿದ್ಧಿಸುವುದಿಲ್ಲ. ಪಾವನ ಪ್ರೀತಿಗಾಗಿ ತವಕಿಸುವುದೇ ನಿಸ್ವಾರ್ಥ ಪ್ರೇಮಿಯ ಪಣವಾಗಿರುತ್ತದೆ. ಸಾವಿರ ವರುಷವಾದರು ಬಯಸಿದ ಜೀವಕ್ಕಾಗಿ ಹಾತೊರೆಯುತ್ತಾ, ಬಾಳಿನುದ್ದಕ್ಕೂ ಪಣತೊಟ್ಟು ಶರಣಾಗುವುದೇ ಪಾವನ ಪ್ರೀತಿ. ನಿಸ್ವಾರ್ಥ ಪ್ರೀತಿಯಲ್ಲಿ ಬಯಸಿದ ಜೀವದ ಕ್ಷೇಮವನ್ನೇ ಅನುಕ್ಷಣವೂ ಬೇಡುತ್ತಾ ಪ್ರಾರ್ಥಿಸುವುದೇ ನಿಜ ಪ್ರೇಮಿಯ ಬದಕಾಗಿರುತ್ತದೆ.. ಬದುಕು, ಜಗವೂ ಎಲ್ಲವೂ ಬಯಸಿದ ಜೀವದ ಹಿತವನ್ನೇ ಬಯಸುತ್ತಿರುತ್ತದೆ. ಎಂತಹ ತ್ಯಾಗಕ್ಕೂ ಮನಸ್ಸು ಗಟ್ಟಿಯಾಗಿ ಸಿದ್ಧವಾಗಿರುತ್ತದೆ. ಬಯಸಿದಾ ಜೀವದಾ ಹಿತವೇ ಬಾಳಿನ ಉಸಿರಾಗಿರುತ್ತದೆ. ಹೃದಯದ ಬಡಿತಕ್ಕೇ ಅದುವೇ ಇಂಧನವಾಗಿರುತ್ತದೆ.

ಇದೇ ಪ್ರೇಮ ತ್ಯಾಗದ ಕಥಾ ಹಂದರವೇ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಾಯಕಮನುವಿನ ಕಥೆ. ನಾಯಕನಾಗಿ ರಕ್ಷಿತ್ ಶೆಟ್ಟಿ ಅಮೋಘವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿಪುಟ್ಟಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಒಳ್ಳೆಯ ನಟಿಯಾಗಿ ನೆಲೆಯೂರುವ ಸಾಕ್ಷ್ಯವನ್ನು ನಿರೂಪಿಸಿದ್ದಾರೆ ಎಂದರೆ ಅತಿಶಯವಲ್ಲ. ಮಧ್ಯಮ ವರ್ಗದ ಕುಟುಂಬದ ಇಬ್ಬರು ಪ್ರೇಮಿಗಳ ಬಣ್ಣದ ಚಿತ್ತಾರದ ಕನಸುಗಳು ಮೆರವಣಿಗೆಯು ಚಿತ್ರದಲ್ಲಿ ಮೊದಲು ನವಿರಾಗಿ ಮೂಡಿ ಬಂದು ನಿಜ ಪ್ರೀತಿಯೇ ವಿಜೃಂಭಿಸಿದೆ.

 ತಾನು ಬಯಸಿದ ಜೀವದ ಹಿತವನ್ನೇ ಬಯಸಿ ಭವಿಷ್ಯದ ಹಿತಕ್ಕಾಗಿ ಎಲ್ಲವನ್ನೂ ಪಣಕ್ಕಿಟ್ಟು ಪವಿತ್ರ ಪ್ರೀತಿಗಾಗಿ ಕಥೆಯ ನಾಯಕ ಅನುಕ್ಷಣವೂ ಹಾತೊರೆಯುತ್ತಾನೆ. ಎಲ್ಲ ರೀತಿಯ ಕಷ್ಟವನ್ನು ಎದುರಿಸಲು ಸದಾ ಸನ್ನದ್ದವಾಗಿರುತ್ತಾರೆ. ಪ್ರೇಮದ ಯಶಸ್ಸಿಗಾಗಿ ನಿಜ ಪ್ರೇಮಿಯು ಯಾವುದೇ ತ್ಯಾಗಕ್ಕೂ ಸಿದ್ಧ ಎನ್ನುವುದನ್ನು ನಿರೂಪಿಸಲು ಯಾವುದೇ ರೀತಿಯ ಆಪತ್ತಿಗೂ ಬೆಲೆ ತೆರಲು ಮನು ಸಿದ್ಧವಾಗಿರುತ್ತಾನೆ.

ಬಯಸಿದ್ದೆಲ್ಲಾ ಬಾಳಲ್ಲಿ ಲಭಿಸಲು ಹಣ ಎನ್ನುವ ಇಂಧನವು ಅಗತ್ಯವಿರುತ್ತದೆ. ಮನು ಸಾಮಾನ್ಯ ಡ್ರೆöÊವರ್ ಆಗಿರುತ್ತಾನೆ. ಆತನಿಗೆ ತಿಂಗಳಿಗೆ ಕೇವಲ ಹನ್ನೆರಡು ಸಾವಿರ ಸಂಬಳ. ಆದರೆ ಆತ ಮತ್ತು ಪುಟ್ಟಿಯ ಪ್ರೇಮದ ಯಾತ್ರೆಯಲ್ಲಿ ಜೊತೆಯಾದವು ಸಾವಿರಾರು ಬಣ್ಣದ ಕನಸುಗಳು. ನಿತ್ಯವೂ ಕಾಣುವ ಕನಸುಗಳು ಎಂದು ನೆರವೇರುತ್ತವೆಂದು ದಾಪುಗಾಲಿಟ್ಟು ಕಾಡುವ ಪ್ರಶ್ನೆಗಳ ಸರಮಾಲೆಗಳು. ಇವುಗಳನ್ನೇ ಬೆಂಬತ್ತಿ ಮನುವಿನ ಮನಸ್ಸು ಓಡುತ್ತಿರುತ್ತದೆ.

 ‘ಪುಟ್ಟಿಗೆ ಕಡಲ ಕಿನಾರೆಯಲ್ಲಿ ಮನೆಯನ್ನು ಕಟ್ಟಿ ಅಲ್ಲೇ ಜೀವನದ ಕೊನೆವರೆಗು ನೆಲೆಯಾಗಬೇಕೆನ್ನುವ ಆಸೆ. ಅವಳ ಆಸೆಯನ್ನು ನೆರವೇರಿಸುವ ನಿಜ ಪ್ರೇಮಿಯಾಗಿ ಮನು ಸಿದ್ಧವಾಗುತ್ತಾನೆ. ಅವಳ ಆಸೆಯನ್ನು ಈಡೇರಿಸುವುದೇ ತನ್ನ ಬಾಳಿನ ಗುರಿಯೆಂದು ಪಣತೊಡುತ್ತಾನೆ. ಅನುಮಪ ಕಡಲ ಕಿನಾರೆಯ ಬಳಿ ಮನೆಕಟ್ಟಿ, ಬೀಸುವ ಅಲೆಗಳನ್ನು ಎಣಿಸುತ್ತಾ, ಮುಸ್ಸಂಜೆಯ ರಂಗಲ್ಲಿ ಮೆಲುಗಾಳಿಗೆ ತನುವೊಡ್ಡಿ, ಅಲೆಗಳ ನಿನಾದಲ್ಲಿ ಪ್ರೇಮದ ಸ್ವರಮೇಳದಲ್ಲಿ ಅನುರಾಗದ ಗೀತೆಯನ್ನು ಕೇಳುತ್ತಾ ಪ್ರೇಮದ ಸುಧೆಯನ್ನು ಸವಿಯುತ್ತಾ ಬಾಳಿಗೆ ಜೊತೆಯಾದವಳ ನಗುವಿನಲ್ಲಿ ಬಾಳು ಸಾಗಲಿ ಎನ್ನುವ ಮಹೋನ್ನತ ಆಸೆಯಿಂದಮನು ನಿತ್ಯವೂ ತವಕಿಸುತ್ತಿರುತ್ತಾನೆ.

ಆಸೆ ಕೈಗೂಡಲು ಕಾಡುವ ಹಣದ ಕೊರತೆಗೆ ಅವಕಾಶವೊಂದು ಅಪರಾದದ ರೂಪದಲ್ಲಿ ಎದುರಾಗುತ್ತದೆ..! ಮಾಡದ ತಪ್ಪನ್ನು ಒಪ್ಪಿಕೊಂಡು ಯಾರನ್ನೋ ರಕ್ಷಿಸಿ ಇನ್ನೇನೋ ಅಪೇಕ್ಷಿಸಿ ತನ್ನ ಬದುಕು, ಜೀವ ಒತ್ತೆಯಿಡುತ್ತಾನೆ. ಎಲ್ಲಕ್ಕೂ ಸಿದ್ಧನಾದ ನಿಸ್ವಾರ್ಥ ಪ್ರೇಮಿ ಭವಿಷ್ಯದಲ್ಲಿ ತನ್ನ ಗೆಳತಿಯ ಸುಖಕ್ಕಾಗಿ ಅವಳ ಕನಸುಗಳ ಸಕಾರಕ್ಕಾಗಿ ಬೇಡುತ್ತಾ ಶರಣಾಗುತ್ತಾನೆ. ಎಲ್ಲವೂ ಹೃದಯವೊಪ್ಪಿದ ಅವಳಿಗಾಗಿ, ಅವಳೊಲುಮೆಯ ನಗುವಾಗಿಯೇ ಆಗಿರುತ್ತದೆ ಎನ್ನುವುದು ದಿಟ..!

ಆದರೆ ಮುಂದೇನಾಯ್ತು..? ಕಥೆಯಲ್ಲಿ ನಾಯಕ ಮನುವಿನ ಆಸೆ ಕೈಗೂಡಿ ಪುಟ್ಟಿಯೊಂದಿಗೆ ಕಡಲ ಕಿನಾರೆಯಲ್ಲಿ ಸಂಭ್ರಮಿಸಿದನೇ..? ಇಲ್ಲವೇ ಆಮಿಷಕ್ಕೆ ಬಲಿಯಾಗಿ ಮಾಡದ ತಪ್ಪಿಗೆ ಬಲಿಯಾದನೇ..? ಅವನು ಬಣ್ಣದ ಕನಸುಗಳು ಕಮರಿ ಬದುಕು ಜೀವಂತ ಸ್ಮಶಾಣವಾಯಿತೇ..? ಎಲ್ಲವೂ ವಿಧಿಯಾಟವೇ ಅಂಕಿತವಾಯಿತೆ..? ಎಲ್ಲಕ್ಕೂ ಉತ್ತರವನ್ನು ಚಿತ್ರ ನೋಡಿಯೇ ಹೇಳಿ.

ಒಟ್ಟಾರೆ ಪ್ರೇಮದ ನದಿಯು ತನ್ನಲ್ಲಿ ಕನುಸಗಳನ್ನು ದಹಿಸಿಕೊಳ್ಳುತ್ತಾ ಕಂಬನಿಗಳನ್ನು ತನ್ನೊಂದಿಗೆ ಹೆಚ್ಚಿಸಿಕೊಳ್ಳುತ್ತಾ ಕಣ್ಣೀರ ಕಡಲಲಿ ಮರೆಯಾಗುತ್ತದೆ. ಪರಿಯನ್ನು ತೆರೆಯ ಮೇಲೆ ತೆರೆದಿಡುವ ಬಗೆಯನ್ನು ನಿರ್ದೇಶಕ ಹೇಮಂತ್ ಎಂ. ರಾವ್ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ನೋಡುಗರ ಮನಕ್ಕೆ ಸೈ ಎನ್ನಿಸುವ ಚಿತ್ರ ಮಾಡಿದ್ದಾರೆ. ಅವರ ರಚನೆ ಮತ್ತು ನಿರ್ದೇಶನ ಮೋಡಿ ಮಾಡಿದೆ.

 ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸಾಕಷ್ಟು ಗಟ್ಟಿಯಾಗಿ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರದ ಛಾಯಾತ್ರಹಣ, ಸಂಗೀತ, ಚಿತ್ರ ಕಥೆ, ಪಾತ್ರಗಳ ಅಭಿನಯದಲ್ಲಿ ಎಲ್ಲರೂ ಸೈ ಎನ್ನಿಸಿಕೊಂಡಿದ್ದಾರೆ. ಹಲವು ದಿನಗಳ ನಂತರ ಕನ್ನಡಲ್ಲಿ ಮೂಡಿದ ಒಂದೊಳ್ಳೆ ಸಿನಿಮಾ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಚಿತ್ರ ತಂಡಕ್ಕೆ ಶುಭವಾಗಲಿ.

ರಾಮಚಂದ್ರ ಸಾಗರ್



Wednesday, 20 October 2021

ಅವಳ ಡೈರಿ


 ಎಲ್ಲರಿಗೂ ನಮಸ್ತೇ,

ನನ್ನ ಹೊಸ ಕಾದಂಬರಿ ಹಾಗೂ ಈ ವರ್ಷದ ಮೊದಲ ಕೃತಿ "ಅವಳ ಡೈರಿ" ಯು ಸದ್ಯದಲ್ಲೇ ಹೊರಬರಲಿದೆ. ಈ ಕಾದಂಬರಿಯ ಕಥೆಯು ನೈಜ ಘಟನೆ ಎನ್ನುವುದು ದಿಟ.  ಸತ್ಯ ಘಟನೆಗಳು ಈ ಕಾದಂಬರಿಯ ಕತೆಯಲ್ಲಿ ಒಳಕಥೆಗಳಾಗಿ ತೆರೆದಿಟ್ಟಿದ್ದೇನೆ. ಇದು ಪರೋಕ್ಷವಾಗಿಯಾದರೂ ಹಲವರ ಬಾಳಿನ ಕಥೆಯೆನ್ನುವುದಂತೂ ಸತ್ಯ. ಮನಕ್ಕೆ ಅನ್ನಿಸಿದ್ದನ್ನು, ಹೇಳಬೇಕೆನ್ನುವುದನ್ನು,ಯಾವುದನ್ನು ಮುಲಾಜಿಲ್ಲದೇ ಬರೆದಿದ್ದೇನೆ. ಸತ್ಯವನ್ನು ಹೇಳುವಾಗ ಹೆದರಿಕೆಯೇಕೆ? ಸತ್ಯಕ್ಕೆ ಒಂದೇ ದಾರಿ. ಸುಳ್ಳಿಗೆ ಸಾವಿರ ದಾರಿ. ಆದ್ದರಿಂದ ಸತ್ಯಕ್ಕೆ ತಲೆಭಾಗಿ ಇದ್ದುದ್ದನ್ನು ಜೀವನದಲ್ಲಿ ಕಂಡಿದ್ದನ್ನು ಧೈರ್ಯವಾಗಿ ನುಡಿದಿದ್ದೇನೆ.. ಹಲವರ ಬಾಳಿನ ಸುಖದಲ್ಲೂ ನೋವಿರುತ್ತದೆ ಹಾಗೂ ಜೊತೆಗೆ ಅನುಭವಿಸುವ ನೋವಿನಲ್ಲೂ ಹಲವೊಮ್ಮೆ ತ್ಯಾಗದ ಭಾವವೇ ಮೂಡಿರುತ್ತದೆ. ಯಾರದೋ ಕೃತ್ಯಕ್ಕೆ ಯಾರದೋ ಜೀವನ ಬಲಿಯಾಗುತ್ತದೆ. "ಅತಿಯಾದ ಪ್ರೀತಿ, ನಂಬಿಕೆಗಳು ಸಹಾ ಮೋಸದ ಇನ್ನೊಂದು ಭಾಗವೇ ಆಗಿಹೋಗುತ್ತವೆ.." ಎಲ್ಲವೂ, ಎಲ್ಲವನ್ನೂ ಕಾಲವೇ ನಿಶ್ಚಯಿಸಬೇಕಲ್ಲವೇ? ಇನ್ನೂ ಈ ಕಥೆಯಲ್ಲಿ ನನ್ನದೂ ಒಂದು ಪಾತ್ರವಿದೆ ಎನ್ನುವುದು ಸಂತಸವೋ, ಬೇಸರವೋ? ಗೊತ್ತಿಲ್ಲ..! ಅದು ಕಥೆಯನ್ನು ಓದಿ ನೀವೇ ಹೇಳಬೇಕು..

ಇನ್ನೂ ಈ ಕೃತಿಯನ್ನು "ಮಂದಾರ ಪುಸ್ತಕ ಭಂಡಾರ, ಬೆಂಗಳೂರು" ಇವರು ಪ್ರಕಾಶಿಸಿದ್ದಾರೆ. ತುಂಬು ಅಕ್ಕರೆ ಮತ್ತು ಅಭಿಮಾನದಿಂದ ಈ ಕೃತಿಯನ್ನು ಸಮಾಜಕ್ಕೆ ತೆರೆದಿಡಲು ಪ್ರಕಾಶನದ ಶ್ರೀಯುತ ಭದ್ರಾವತಿ ರಾಮಚಾರಿ ಅವರ ಪರಿಶ್ರಮಕ್ಕೆ ನಾನು ತುಂಬು ಹೃದಯದ ಧನ್ಯವಾದಗಳನ್ನು ಹೇಳುವೆ..

ಈ ಕಾದಂಬರಿಗೆ ನಾಡಿನ ಹೆಸರಾಂತ ಸಾಹಿತಿಗಳಾದ ಶ್ರೀಯುತ ಡಾ. ನಾ.ಡಿಸೋಜ ಅವರು ಬಹಳ ಆತ್ಮೀಯತೆಯಿಂದ ತಮ್ಮ ಪದಗಳಲ್ಲಿ ನನಗೆ ಆಶೀರ್ವದಿಸಿದ್ದಾರೆ..ಅವರಿಗೂ ನನ್ನ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ..

ಎಲ್ಲಾ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಕೃತಿಯನ್ನು ದೊರೆಯುವ ವ್ಯವಸ್ಥೆಯನ್ನು ಖಂಡಿತವಾಗಿಯೂ ಪ್ರಕಾಶಕರು ಮಾಡುತ್ತಾರೆ. ದಯವಿಟ್ಟು ಎಲ್ಲರೂ ಈ ಕೃತಿಯನ್ನು ಕೊಂಡು ಓದಿ ಹಾರೈಸಬೇಕೆಂದು ತಮ್ಮಲ್ಲಿ ಸೌಜನ್ಯಯುತವಾಗಿ ಬೇಡಿಕೊಳ್ಳುತ್ತೇನೆ..

ಪ್ರಕಾಶಕರ ದೂರವಾಣಿ ಸಂಖ್ಯೆ: ೮೦೭೩೧೪೭೯೬೧

ಧನ್ಯವಾದಗಳೊಂದಿಗೆ..

ರಾಮಚಂದ್ರ ಸಾಗರ್



Sunday, 9 May 2021

ನೋವಿನ ನದಿಯ ಹೃದಯ ಕಂಬನಿಯಿದು-ಮೌನಸೆರೆ

 

ಶ್ರೀಯುತ ಗಣಪತಿ ಹೆಗಡೆ ದಾಂಡೇಲಿಯವರ ಕಾದಂಬರಿ "ಮೌನಸೆರೆ" ಕೃತಿಯನ್ನು ಓದಲು ಕೈಗೆತ್ತುಕೊಂಡು ಕುಳಿತೆ. ಹೊರಗಡೆ ತುಸು ಕಿಟಕಿಯಿಂದ ಆಚೆ ನೋಡಿದೆ. ದವನದ ಹುಣ್ಣಿಮೆಯ ಚಂದಿರ ನಗುತ್ತಿದ್ದ. ಇತ್ತ ಕಥಾ ಹಂದರವು ಬಹಳ ಕುತೂಹಲದಿಂದ ಓದಿಸಿಕೊಂಡು ಹೋಗುತ್ತಿತ್ತು. ಅಷ್ಟೇ ಉತ್ತಮವಾದ ಪದಗಳ ಲಾಲಿತ್ಯವೂ ಕಾಡುತ್ತಿತ್ತು. ಭಾವನೆಗಳಿಗೆ ಬೆಲೆಕೊಡುವ ಮನಕೆ ಆತ್ಮೀಯವಾಗುವ ಸಾಲುಗಳು ಪ್ರತಿ ಪುಟದಲ್ಲೂ ಪುಟಿಪುಟಿದು ಮನದ ಆಲೋಚನೆಗಳಿಗೆ ಕೆಲಸ ಕೊಟ್ಟಿದ್ದಂತೂ ಸತ್ಯ.

ಬದುಕು ಎನ್ನುವುದು ಸುಂದರವಾಗಿರಬೇಕೆನ್ನುವುದು ಎಲ್ಲರ ಆಸೆ. ಮಾನವನಾಗಿ ಹುಟ್ಟಿದ ಪ್ರತಿಯೊಬ್ಬನ ಸಾಮಾನ್ಯ ಆಸೆಯಿದು. ಆತ ಬಡವನಾಗಲಿ, ಉಳ್ಳವನಾಗಲಿ ಆತನ ಬದುಕು ಉತ್ತಮವಾಗಲಿ ಎಂದು ಪ್ರತಿ ನಿಮಿಷವೂ ಹವಣಿಸುತ್ತಾ ದೇವರಲ್ಲಿ ಬೇಡುತ್ತಾನೆ. ಬದುಕಿನ ಸಣ್ಣ ಏರುಪೇರಿಗೆ ಮಾನವ ಪರಿತಪಿಸುತ್ತಾನೆ. ಆದರೆ ಆತ ಎಣಿಸಿದ್ದೆಲ್ಲಾ ಬದುಕಿನಲ್ಲಿ ನಡೆಯುವುದೆ? ಬದುಕು ನಾವು ಎಣಿಸಿದಂತೆ ನಡೆದಿದ್ದೇ ಆದರೆ ವಿಧಿಯಾಟಕ್ಕೆ ಕೆಲಸವೆಲ್ಲಿ? ಅಪಘಾತ, ನೋವು, ಬೇಸರ, ದುಃಖ, ಕಂಬನಿಗಳಿಗೆ ಜಾಗವೆಲ್ಲಿ? 

ಬರೀ ಸಂತೋಷವನ್ನೇ ಹುಡುಕಿಕೊಳ್ಳುವ ದಾರಿಯಾವುದಾರೂ ಇದ್ದರೆ ಮಾನವ ಅದನ್ನೇ ಬಯಸುತ್ತಿದ್ದ. ಆದರೆ ಕೇವಲ ಸಂತೋಷ ಎನ್ನುವುದು ಯಾವ ದಾರಿಯಲ್ಲು ಸಿಗಲಾರದು ಎನ್ನುವುದು ಬಾಳಿನಲ್ಲಿ ನಿಶ್ಚಿತ..! ದುಃಖವು ನಾವು ಸಾಗುವ ಹಾದಿಯಲ್ಲಿ ಕೈಹಿಡಿದು ಜೊತೆಯಾಗೇ ಬಿಡುತ್ತದೆ. ಆದರೆ ದುಂಃಖವೇ ದಾರಿಯಾದರೆ ಜೀವದ ಗತಿಯೇನು?

ಕಳೆದೆರಡು ದಿನಗಳಿಂದ ಊರಿನಲ್ಲಿ ಸಾಕಷ್ಟು ಮಳೆಯು ಸುರಿದಿದ್ದರಿಂದ ಹೊರಗಡೆ ತಂಗಾಳಿಯದೇ ನರ್ತನ. ಉತ್ತಮ ಕಥೆಯಲ್ಲಿ ತೋಯುತ್ತಿದ್ದ ಮನಕ್ಕೆ ಪ್ರಕೃತಿಯು ಉಲ್ಲಾಸವನ್ನು ನೀಡುತ್ತಿತ್ತು. ಹಾಗಾಗಿ ಒಂದೇ ಸಮನೆ ಕಥೆಯನ್ನು ಓದುತ್ತಾ ಹೋದೆ. 

ಈಗ ಕಥೆಯಲ್ಲಿ ವೈಶಾಲಿ ತನ್ನ ಹೋರಾಟದ ಬದುಕಿನಲ್ಲಿ ಸಾಗುತ್ತಾ ಬಹಳ ದೂರ ಸಾಗಿ ತನ್ನ ತವರು ಮನೆಯೆದುರು ಬಂದು ನಿಂತಿದ್ದಾಳೆ. ಬದುಕಿನ ಕುಲುಮೆಯಲ್ಲಿ ಬಯಕೆಗಳ ಅರಳಿಸಿಕೊಳ್ಳುವ ಪ್ರಯತ್ನಗಳ ಅವಳ ಛಲದ ನಡಿಗೆಯನ್ನು ಕ್ರಮಿಸಿ ಅದೇ ತವರಿನ ಮನೆಯ ಬಾಗಿಲು ಬೀಗವನ್ನು ತೆಗೆದು ಒಳಬರುತ್ತಾಳೆ. ಅದೇ ಧೂಳು ಕವಿದ ಮನೆ, ಜೇಡರ ಬಲೆಯ ಎಳೆಗಳು ಮುಖಕ್ಕೆ ರಪ್ಪೆಂದು ಬಡಿದ ಭಾಸವಾಗುತ್ತದೆ. ಮುರಿದ ಹೆಂಚುಗಳು, ಮಾಸಿಹೋದ ಅಂಗಳದಲ್ಲಿ ಬಾಡಿದ ತುಳಸಿ ಗಿಡವಿದೆ. ಎಲ್ಲವನ್ನು ನೋಡುತ್ತಾ ಧೂಳಿನ ಆಲಯದೊಳಗೆ ಜೋತು ಬಿದ್ದಿದ್ದ ಅಪ್ಪ ಹಾಗೂ ತಂಗಿಯ ಫೋಟೋ, ಇತ್ತ ಅಮ್ಮ ಮಲಗುತ್ತಿದ್ದ ಕೋಣೆಯಿಂದ ಬಾ ವೈಶಾಲಿ ಎಂದು ನುಡಿಯೊಂದು ವೈಶಾಲಿಯ ಕರ್ಣಗಳಿಗೆ ಅಪ್ಪಳಿಸಿದ ಭಾಸ..

ಈಗ ಪುಸ್ತಕ ಓದುತ್ತಿದ್ದ ನಾನು ಭಾರವಾದ ಮನದಲ್ಲಿ ಎದ್ದು ಮನೆಯಿಂದ ಹೊರಬಂದು ಒಂದೆರಡು ಹೆಜ್ಜೆಹಾಕಿದೆ. ಮುಗಿಲನ್ನು ನೋಡಿದೆ. ಆಗಸದಲ್ಲಿ ಚಂದಿರ ಚೆಲುವು ತುಂಬಿಕೊಂಡು ಬಹಳ ಸೌಮ್ಯವಾಗಿ ನಗುತ್ತಿದ್ದಾನೆ. ಮನೆಯೆದುರಿನ ತಂಗಾಳಿಯ ಹಾದಿಯು ನಡೆಯಲು ಬಹಳ ಹಿತವಾಗಿದೆ. ಆದರೆ ಮನದಲ್ಲಿನ ಚಿಂತನೆಗಳು ಭುವಿಯಿಂದ ಆಗಸದ ಚಂದಿರವರೆಗೂ ಸಾಲುದ್ದ ನಿಂತಿವೆ..ಕಾರಣ ವೈಶಾಲಿ ಸಾಧನೆಯ ಹಾದಿಯಲ್ಲಿ ಇಲ್ಲಿಯವರೆಗೆ ಬಂದು ನಿಂತ ಬಗೆಯೇ ಹಾಗಿದೆ..ಈ ಜಗದಲ್ಲಿ ಚೆಲುವು ಎನ್ನುವುದು ಈಗ ಸಂಪೂರ್ಣ ಕಳಾಹೀನವಾಗಿ ಕಾಣುತ್ತಿದೆ..! ಆಸೆ ಕಾಣುವುದು ತಪ್ಪೇ ಎನ್ನುತ್ತಿದೆ..!

ಈಗ ಮನದಲ್ಲಿ ಪ್ರಶ್ನೆಗಳ ಮಳೆಯೇ ಸುರಿಯುತ್ತಿದೆ. ಕಂಡ ಕನಸುಗಳೆಲ್ಲವೂ ಯಾರ ಜೀವನದಲ್ಲಿಯೂ ಸಂಪೂರ್ಣವಾಗಿ ನನಸಾಗುವುದಿಲ್ಲ. ಆದರೆ ಕೆಲವಾದರೂ ನನಸಾಗುತ್ತವೆ. ಕೊನೆ ಪಕ್ಷ ಒಂದಾದರೂ ನೆರವೇಗಬೇಕು. ಆದರೆ ಇಲ್ಲಿ ವೈಶಾಲಿಯ ಜೀವನದಲ್ಲಿ ನಡಯುವುದೇ ವ್ಯತಿರಿಕ್ತ. "ಕಷ್ಟಪಟ್ಟರೆ ಸುಖ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಇಲ್ಲಿ ಕಷ್ಟವಾಗುತ್ತದೆ. ಕಷ್ಟಕ್ಕೆ ಕಷ್ಟವೇ ಬಳುವಳಿಯಾಗಿದೆ." ಈ ರೀತಿಯ ವ್ಯತಿರಿಕ್ತ ಫಲಕ್ಕೆ ಕಾರಣವನ್ನು ಹುಡುಕುವುದೇ ಈ ಕ್ಷಣದಲ್ಲಿ ಮನಸ್ಸಿಗೆ ಬಹಳ ನೋವು ನೀಡಿದ್ದಂತೂ ದಿಟ..

ಬದುಕು ಬಡತನದಲ್ಲಿ ಬಂಧಿಯಾದರೇನು? ಕಾಣುವ ಕನಸುಗಳಿಗೆ ಎಲ್ಲೆ ಎಲ್ಲಿ? ಸುಂದರ ಬದುಕನ್ನು ಕಟ್ಟಿಕೊಳ್ಳಲೇಬೇಕೆನ್ನುವ ಇರಾದೆ ಮತ್ತು ಛಲಕ್ಕಂತೂ ಸೋಲಿಲ್ಲ ಎನ್ನುವುದು ನನ್ನ ನಂಬಿಕೆ. ಆದರೆ ಆ ನಂಬಿಕೆಯೇ ಹುಸಿಯಾದರೆ ಏನು ಮಾಡುವುದು! ಕಥೆಯ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಸುಂದರ ಬದುಕಿಗಾಗಿ ಸಕಾರಾತ್ಮಕ ಗುರಿಯೊಂದಿಗೆ ಹೋರಾಡುವ ಗುಣವೇ ತುಂಬಿದೆ. ಹಲವು ಪಾತ್ರಗಳು ಇಲ್ಲಿ ದುರಾಸೆಯಲ್ಲಿ ನರ್ತಿಸಿದರೆ ಇನ್ನುಳಿದ ಪಾತ್ರಗಳು ಹೇಳಬೇಕಾದುದನ್ನು ಹೇಳದೇ ನರಳಿವೆ. 

ನಿಸ್ವಾರ್ಥದಲ್ಲಿ ಮಾಡಿದ ಸೇವೆಗೆ ಖಂಡಿತವಾಗಿಯೂ ಒಳಿತೇ ಆಗುತ್ತದೆ ಎನ್ನುವುದು ವೈಶಾಲಿಯ ಬಾಳಿಗಂತೂ ಕೇವಲ ಕನಸೆ? ಏನೇ ಆಗಲಿ ಸದ್ಯಕ್ಕೆ ಆಕೆಯ ಬದುಕೀಗ ನೋವಿನ ನದಿ.. ಆ ನೋವಿನ ನದಿಯ ಹೃದಯದ ಕಂಬನಿಯ ಮಾತುಗಳು ಏನು ಹೇಳುತ್ತವೆ? ಮುಂದೆ ಆಕೆಯ ಬದುಕು ಎಲ್ಲಿಗೆ ಸಾಗುತ್ತದೆ? ಕಂಬನಿಯ ಗೂಡಿನಿಂದ ಆಕೆ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾಳೆ..ಒಂಟಿ ಹಾದಿಯಲ್ಲಿ ರೋಧನೆಯ ಮಳೆಯಾಗುತ್ತಿರುವಾಗ ಆಕೆಗೆ ಆಸೆ ಎನ್ನುವುದೇ ಕಮರಿಹೋದಾಗ ಆಕೆಗೆ ಉಳಿದಿದ್ದಾರೂ ಏನು? ಆಕೆಗೆ ಆಸರೆಯಾದರೂ ಏನು?

"ಆಸೆ" ಎನ್ನುವುದೇ "ನೋವೆ" ಎಂದು ಅಪ್ಪಿ ಉಸಿರಾಡುತ್ತಾ ವೈಶಾಲಿ ಈಗ ಹೊರಟಿದ್ದಾರೂ ಎಲ್ಲಿಗೆ? ನೋವಿನ ನದಿಯಾದ ಅವಳೀಗ ಕಂಬನಿಗಳ ಸುರಿಸುತ್ತಾ ಯಾವ ಕಡಲನ್ನು ಅಪ್ಪುತ್ತಾಳೆ? ನೆಮ್ಮದಿಯ ನೆರಳು ಅವಳಿಗೆ ಜೊತೆಯಾಗುವುದೆ?  

ಮನದಲ್ಲಿ ಎದ್ದ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿಲ್ಲ! ಎಲ್ಲವನ್ನು ನಾನೇ ಹೇಳಿದರೆ ಉತ್ತಮವಲ್ಲ. ಕಥೆಯ ಮುಂದಿನ ಭಾಗವನ್ನು ನಿಮಗೆ ಬಿಡುತ್ತೇನೆ. ದಯವಿಟ್ಟು ಒಂದು ಉತ್ತಮ ಕಥೆಯ ಹಂದರವನ್ನು ಹೊಂದಿದ "ಮೌನಸೆರೆ"ಯನ್ನು ಓದಿ ಎಲ್ಲರೂ ಶ್ರೀಯುತ ಗಣಪತಿ ಹೆಗಡೆಯವನ್ನು ಹಾರೈಸಿ..

ಇಲ್ಲಿ ಗಣಪತಿ ಹೆಗಡೆಯವರು ಮನಸ್ಸು ಮಾಡಿದ್ದರೆ ಈ ಕೃತಿಗೆ ಉತ್ತಮ ಶೀರ್ಷಿಕೆಯನ್ನು ಇಡಬಹುದಿತ್ತು. ಆದರೆ ಎಡವಿದ್ದಾರೂ ಏಕೆ? ನನಗೂ ಗೊತ್ತಿಲ್ಲ..ಏನೇ ಆಗಲಿ ಅದು ಕೃತಿಕಾರನ ಹಕ್ಕು.. ನಾನು ಮೌನಿಯಾಗಿರಬೇಕು ಅಷ್ಟೇ.

ಒಟ್ಟಾರೆ "ನೋವಿನ ನದಿಯ ಹೃದಯದ ಕಂಬನಿಗಳ ದನಿಗೆ ನನ್ನ ಮನವೀಗ ಸಾವಿರ ಪ್ರಶ್ನೆಗಳ ಸುಳಿಯೊಳಗೆ ಸಿಲುಕಿದೆ ಎನ್ನುವುದಂತೂ ದಿಟ.."

ರಾಮಚಂದ್ರ ಸಾಗರ್


Saturday, 13 March 2021

ಸದಸ್ಯರಿಗೂ ಅಧಿಕಾರ ನೀಡಿ

 


ಎಲ್ಲರಿಗೂ ನಮಸ್ಕಾರ...

ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಘೋಷಣೆಯಾಗಿದೆ. ಮೊದಲು ಮೂರು ವರ್ಷಗಳಿಗೊಮ್ಮೆ ಇದ್ದ ಚುನಾವಣೆ ಈಗ 5ವರ್ಷಗಳಿಗೆ ಬದಲಾಗಿದೆ. ಈಗ ಪ್ರಸ್ತುತ ಅಧ್ಯಕ್ಷರಾಗಿರುವ ಮನು ಬಳಿಗಾರ್ ಅವರ ಅವಧಿಯಲ್ಲೇ ಬೈಲಾ ತಿದ್ದುಪಡಿಯಾಗಿ 5ವರ್ಷಗಳ ಅವಧಿಯ ಅಧಿಕಾರವು ಸೃಜನೆಯಾಯಿತು. ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರವನ್ನು ಹಿಡಿಯುವವರು ಐದು ವರ್ಷಗಳ ಆಡಳಿತ ನಡೆಸುತ್ತಾರೆ.

ಇದು ಒಂದೆಡೆ ಆದರೆ ಪರಿಷತ್ತಿನ ಸದಸ್ಯರು ಯೋಚಿಸಬೇಕಾದವು ಹಲವು ವಿಚಾರಗಳಿವೆ. ಬೈಲಾಗೆ ಇನ್ನೂ ಹಲವು ತಿದ್ದುಪಡಿಗಳಾಗಿದ್ದರೆ ಸೊಗಸಾಗಿತ್ತು. ಕೇವಲ ಅಧಿಕಾರದ ವಿಚಾರವೊಂದೇ ಬದಲಾದರೆ ಸಾಕೆ? ಈಗ ಚುನಾವಣೆಯ ಸಮಯವಾದ್ದರಿಂದ ಹಲವು ಜನ ಅಕಾಂಕ್ಷಿಗಳು ಸದಸ್ಯರ ಮನೆಕಡೆಗೆ ಗಮನ ಹರಿಸಿದ್ದಾರೆ. ಹಲವರಿಂದ ದೂರವಾಣಿ ಕರೆಗಳು/ಪತ್ರಗಳು ಬರುತ್ತಿವೆ. ಇವೆಲ್ಲಾ ಮುಗಿದು ಮುಂದೊಂದು ದಿನ ಯಾರೋ ಅಧಿಕಾರಕ್ಕೆ ಬರುತ್ತಾರೆ ಬಿಡಿ. ಆದರೆ ಪರಿಷತ್ತಿನೊಳಗಿನ ಸಮಸ್ಯೆಗೆ ಪರಿಹಾರ ನಿಜವಾಗಿಯೂ ದೊರೆಯುತ್ತದೆಯೇ? ಈ ಸಮಯದಲ್ಲಿ ಕೊಟ್ಟ ಆಶ್ವಾಸನೆಗಳು ಈಡೇರುತ್ತವೆಯೇ?

ಪರಿಷತ್ತಿನ ಕಾರ್ಯಕ್ರಮಗಳನ್ನು ಕಾರ್ಯಕಾರಿ ಮಂಡಳಿಯವರೇ ನಿರ್ಧರಿಸುತ್ತಾರೆ. ಅವರೇ ಸರ್ವ ತೀರ್ಮಾನವನ್ನು ಕೈಗೊಳ್ಳುತ್ತಾರೆ. ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯೂ ಅವರಿಂದಲೇ ಆಗುತ್ತದೆ. ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಹೆಚ್ಚೆಂದರೆ ಸದಸ್ಯರು ಭಾಗವಹಿಸಬಹುದು ಅಷ್ಟೇ. ಇಷ್ಟಕ್ಕೇ ಸದಸ್ಯ ಸೀಮಿತವಾಗಬೇಕೆ? ಆತನಿಗೂ ಏನಾದರೂ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ನೀಡುವುದು ಬೇಡವೇ?

ನಾಡಿನಲ್ಲಿ ಸುಮಾರು ಮೂರುವರೆ ಲಕ್ಷ ಜನ ಪರಿಷತ್ತಿನ ಸದಸ್ಯರಿದ್ದಾರೆ. ಇವರೆಲ್ಲರ ಪ್ರತಿನಿಧಿಯಾಗಿ ಆಯ್ಕೆಯಾದವರೇ ಎಲ್ಲ ಅಧಿಕಾರವನ್ನು ಚಲಾಯಿಸುತ್ತಾರೆ. ಇದೆಲ್ಲದರ ಹೊರತಾಗಿ ಕೊನೆಪಕ್ಷ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯ ವಿಚಾರದಲ್ಲಿಯಾದರೂ ಪರಿಷತ್ತಿನ ಸದಸ್ಯರನ್ನು ಪರಿಗಣಿಸಬೇಕು. ಇನ್ನು ಮುಂದೆ ಆಯ್ಕೆಯಾದವರು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿ ಆಯೋಜಿಸುತ್ತಾರೆ. ಇವರಾದರೂ ಸರ್ವಾಧ್ಯಕ್ಷರನ್ನು ಸದಸ್ಯರ ಅಭಿಮತವನ್ನು ಪಡೆದು ಆಯ್ಕೆಮಾಡಿದರೆ ಸಂತಸ. ಅಂದರೆ ಈಗ ಹೇಗೆ ಎಲ್ಲರ ಮನೆ ಮನೆಗೂ ಭೇಟಿ ನೀಡಿ ಮತ ಕೇಳುತ್ತಿದ್ದಾರೋ ಹಾಗೇಯೆ ಮುಂದಿನ ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆಮಾಡಲು ಅಭಿಪ್ರಾಯ ಕೇಳಲು ಅವರಿಗೆ ಕಷ್ಟವಂತೂ ಅಲ್ಲ ಬಿಡಿ. ಎಲ್ಲದಕ್ಕೂ ಹಂಬಲ ಮತ್ತು ಉದ್ದೇಶ ಮುಖ್ಯ. ಈ ನಿಟ್ಟಿನಲ್ಲಿ ಈಗಲೇ ಸದಸ್ಯರೆಲ್ಲ ಒಗ್ಗಟ್ಟಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕು.

 ಆಗಲಾದರೂ ಕನ್ನಡ ಹಿರಿಯ ಕಾದಂಬರಿಗಾರರಾದ ಎಸ್. ಎಲ್.ಭೈರಪ್ಪ, ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಹಾಗೂ ಜನಪರ ಸಾಹಿತಿ ಹಾಗೂ ಸಮಾಜಮುಖಿ ಚಿಂತನೆಯ ಚಿಲುಮೆ ದೇವನೂರು ಮಹಾದೇವರಂತಹ ಸಜ್ಜನರು ಹಾಗೂ ಸರಸ್ವತಿ ಪುತ್ರರನ್ನು ಸವಾಧ್ಯಕ್ಷರಾಗಿ ವೇದಿಕೆಯ ಮೇಲೆ ಕಾಣುವ ಅವಕಾಶ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಜೊತೆಗೆ ಕನ್ನಡ ನಾಡಿನ ಜನತೆಗೆ ಸಿಗಬಹುದೇನೊ.

ನಾನಂತೂ ಮನೆಗೆ ಮತ ಕೇಳಲು ಬಂದವರಿಗೆ ಹಾಗೂ ದೂರವಾಣಿ ಮೂಲಕ ಮತ ಕೇಳಿದವರಿಗೆ ಇದೇ ಪ್ರಶ್ನೆ ಕೇಳುತ್ತಿದ್ದೇನೆ. ಇನ್ನು ನೀವು?

ವಂದನೆಗಳೊಂದಿಗೆ..

ರಾಮಚಂದ್ರ ಸಾಗರ್


Sunday, 2 August 2020

ಎಲ್ಲಿ, ಯಾರಿಂದ ತಪ್ಪಾಗಿದೆ?


(ಕಾಲ್ಪನಿಕ ಬರಹ)

ನಾನು ಅನೇಕ ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿರುವೆ. ಕೆಲವು ವರ್ಷಗಳಿಗೊಮ್ಮೆ ಆಗಾಗ್ಗೆ ಭಾರತಕ್ಕೆ ಬರುತ್ತಿದ್ದೆ. ಬರುವಾಗಲೆಲ್ಲಾ ಬಂಧು ಬಳಗದವರಿಗೆ, ಅಕ್ಕರೆಯ ಸ್ನೇಹಿತರಿಗೆ ಸಾಕಷ್ಟು ಉಡುಗೊರೆಗಳನ್ನು ತರುತ್ತಿದ್ದೆ. ಮುಖ್ಯವಾಗಿ ನಾನು ಅಮೇರಿಕಾದಲ್ಲಿ ಕೆಲಸಕ್ಕೆ ಸೇರಿದ ಮೇಲೆಯೇ ಊರಿನಲ್ಲಿದ್ದ ನನ್ನ ಕುಟುಂಬದವರು, ಬಳಗದವರು ಸಾಕಷ್ಟು ಚೇತರಿಕೆಯನ್ನು ಕಂಡರು. 
ಸಾಕಷ್ಟು ಭೂಮಿ ಇದ್ದರೂ ಅಭಿವೃದ್ಧಿ ಪಡಿಸಲು ಹಣಕಾಸಿನ ಕೊರತೆಯಿತ್ತು. ಅದೂ ಸಹಾ ನಾನು ನೀಡಿದ ಆರ್ಥಿಕ ಸಹಾಯದಿಂದಲೇ ನೆರವೇರಿತು. ಬೇಸಿಗೆಯಲ್ಲೂ ನೀರಿನ ವ್ಯವಸ್ಥೆಯಾಗಿ ಇಡೀ ಗದ್ದೆ ಮತ್ತು ತೋಟ ಹಸಿರಿನಿಂದ ನಳನಳಿಸುವಂತಾಯಿತು. ಇದ್ದ ಹಳೇ ಮನೆಯ ದುರಸ್ತಿಯನ್ನು ನಾನು ಕಳುಹಿಸುತ್ತಿದ್ದ ಹಣದಿಂದಲೇ ಮಾಡಿಸಿದರು. ಇದರ ನಡುವೆ ಅನೇಕ ಜನ ಸ್ನೇಹಿತರಿಗೆ ಹಣಕಾಸಿನ ನೆರವನ್ನು ಮಾಡಿದ್ದೆ. ಅದರಿಂದ ಅವರು ಸಹಾ ಉದ್ಯೋಗವನ್ನು ನಡೆಸಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸ್ವಾವಲಂಬಿಗಳಾಗಿದ್ದರು. 
ಏನಿಲ್ಲವೆಂದರೂ ವಾರದಲ್ಲಿ ಎರಡು ಮೂರು ಬಾರಿ ಊರಿನಿಂದ ನನಗೆ ಕರೆ ಬರುತ್ತಿತ್ತು. ಬಹಳ ಅಕ್ಕರೆಯಿಂದ ಮಾತನಾಡುತ್ತಿದ್ದರು. ಏನು ಕೇಳುವುದನ್ನು ಮರೆತರೂ ಮತ್ತೆ ಯಾವಾಗ ಊರಿಗೆ ಬರುತ್ತೀಯಾ? ಹೇಗಿದ್ದೀಯಾ? ಒಬ್ಬನೇ ಎಷ್ಟು ವರ್ಷವಂತ ಭ್ರಹ್ಮಚಾರಿಯಾಗಿ ಇರುತ್ತೀಯ? ಬೇಗನೇ ಮದುವೆಯಾಗು. ಈ ಬಾರಿ ನೀನು ಊರಿಗೆ ಬಂದಾಗ ಖಂಡಿತವಾಗಿ ನಿನ್ನ ಮದುವೆಯನ್ನು ಮಾಡಿಯೇ ತೀರುತ್ತೇವೆ. ನಿನ್ನ ಮನದ ಇಂಗಿತವನ್ನು ಈಡೇರಿಸುವ ಸೌಖ್ಯವತಿಯು ನಿನಗೆ ಒಲಿದು ಬರುತ್ತಾಳೆ. ಎಷ್ಟೇ ಆದರು ಹೂವಂತ ಮನದವನು ನೀನು. ನಿನಗೇ ಆ ದೇವರು ಖಂಡಿತವಾಗಿಯೂ ಉತ್ತಮ ಕನ್ಯೆಯನ್ನೇ ಕರುಣಿಸುತ್ತಾನೆ. ಈ ಬಾರಿ ನೀನು ಊರಿಗೆ ಬಂದರೆ ಒಂಟಿಯಾಗಿ ಅಮೇರಿಕಾಗೆ ಹಿಂತಿರುವುದಿಲ್ಲ. ಜೊತೆಯಾಗಿಯೇ ಹಿಂತಿರುಗುವೆ. ಇದು ಸತ್ಯ. ಎಲ್ಲದಕ್ಕೂ ಕಾಲ ಕೂಡಬೇಕು. ನೀನು ಊರಿಗೆ ಆದಷ್ಟು ಬೇಗ ಬಾ ಎಂದು ಎಲ್ಲರೂ ಅಕ್ಕರೆಯಿಂದ ಹಂಬಲಿಸುತ್ತಿದ್ದರು. 
ನನಗೂ ಇವರೆಲ್ಲರ ಮಾತನ್ನು ಕೇಳಿ ಆದಷ್ಟು ಬೇಗ ಊರಿಗೆ ಹೋಗಬೇಕೆನ್ನುವ ಆಸೆ ಅರಳಿತು. 

Thursday, 16 January 2020

ಪ್ರತಿಲಿಪಿಯ ಉಡುಗೊರೆಯೊಂದಿಗೆ ಮೇಳೈಸಿದ ಸಂಕ್ರಾಂತಿ

ಈ ವರ್ಷದ ಮೊದಲ ಬಹುಮಾನ ಪ್ರತಿಲಿಪಿ ಕನ್ನಡದಿಂದ ಒಲಿದು ಬಂದಿದೆ. ಅದು ಕೂಡ ಸಂಕ್ರಾಂತಿಯ ಸಂಭ್ರಮದ ಜೊತೆಗೆ ಒಗ್ಗೂಡಿದ್ದು ನನಗೆ ಇನ್ನಷ್ಟು ಖುಷಿಗೆ ಕಾರಣವಾಗಿದೆ. ಇವೆಲ್ಲವೂ ಅಕ್ಕರೆಯ ಓದುಗರ ಹಾರೈಕೆಯೆನ್ನುವುದು ನನ್ನ ಮನದ ಇಂಗಿತ. ನನ್ನ ಬರಹಗಳನ್ನು ಪ್ರೀತಿಯಿಂದ ಓದಿ ಹಾರೈಸುವವರ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನನಗೆ ಬಹುಮಾನಗಳಿಗೆ ಕೊರತೆಯಿಲ್ಲ ಎನ್ನುವುದು ನನ್ನ ನಂಬಿಕೆ. ಈ ಸುಸಮಯಕ್ಕೆ ಕಾರಣವಾದ "ಪ್ರತಿಲಿಪಿ ಕನ್ನಡ" ಹಾಗೂ ಪ್ರತಿಲಿಪಿ ಸಿಬ್ಬಂದಿಗಳಿಗೂ ಧನ್ಯವಾದಗಳನ್ನು ಅರ್ಪಿಸುವೆ..

ರಾಮಚಂದ್ರ ಸಾಗರ್


Wednesday, 23 January 2019

ಹರೆಯ ನೀ ಕರೆವ ಸಮಯದಲ್ಲಿ...

ಆಗ ನೋಡಿದ್ದೆಲ್ಲ ಸೊಬಗು ಮೂಡಿ ನಲಿಸುವ ಸಮಯ, ಮೈಮನದಲ್ಲಿ ಹೊಸತರ ಸಂಚಾರವೇಳುವ ಸಮಯ, ಹದನೆಂಟರ ನಂಟಿನ ಸುಸಮಯವದು. ಪಿ.ಯು.ಸಿ ಮುಗಿದು ಕಾಲೇಜಿಗೆ ಹೋಗುವ ದಿನಗಳು. ಯೌವ್ವನದ ಪಾಶದಲಿ ಬಿದ್ದು ಒದ್ದಾಡುವ ಸಂಭವವದು, ಸಮಯವದು. ಆದರೆ ಇತ್ತ ಮನಚಿತ್ತವಾಗಿ ಓದಿ ಸಾಧನೆಗೈಯ್ಯುವ ಹಠಹೊತ್ತ ಮನಕೆ ಜವಾಬು ಇದೆ. ತಲ್ಲಣಿಸುವ ಮನಕೆ ಒಂದೆಡೆ ಸಾಧನೆ ಇನ್ನೊಂದೆ ಆಕರ್ಷಣೆಯ ತುಡಿತ ಕಡಲಾಗಿ ಕಾಡುವ ಸಮಯ. ನನ್ನ ಪುಟ್ಟ ಹೆಜ್ಜೆಯಲಿ ತುಡಿತದ ಕಡಲನು ದಾಟಲು ಸಾಧ್ಯವೇ ಎನ್ನುವ ಅನುಮಾನ ಕಾಡುವ ದಿನಗಳು ಆರಂಭವಾಗಿದ್ದ ಕಾಲವದು. ಒಂದೆಡೆ ಬಡತನ ಬೇಗೆಯಲ್ಲಿ ನರಳುತ್ತಿರುವ ನನ್ನ ಕುಟುಂಬದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಮೊದಲ ಜೀವ ನಾನೇ. ಮೊದಲು ಕಾಲೇಜು ಹತ್ತಿದ ಕುಟುಂಬದ ಮೊದಲ ಜೀವಕೆ ಒಳ್ಳೆಯದಾಗಲೆಂದು ತಮ್ಮ ಬದುಕನ್ನೇ ಸಮರ್ಪಿಸಿ ಬೆಳಗ್ಗಿನಿಂದ ರಾತ್ರಿವರೆಗೂ ದುಡಿದು ಬಂದ ಹಣವನ್ನೆಲ್ಲ ಮಗನ ಓದಿಗಿರಲೆಂದು ನಿದ್ರೆ ಬಾರದ ರಾತ್ರಿಯಲ್ಲು ಮಗನ ಏಳ್ಗೆಗಾಗಿ ಪ್ರಾರ್ಥಿಸುವ ತಂದೆ ತಾಯಿ ಇನ್ನೊಂದೆಡೆ.
ಹೀಗೆ ಅಪ್ಪ, ಅಮ್ಮನ ಒಟ್ಟಾಸೆ ಅದನ್ನು ಸ್ಥಿರೀಕರಿಸಿ ಕೈಗೂಡಿಸಿ ಬಾಳು ಸಕಾರಗೊಳಿಸಬೇಕೆಂಬ ಛಲದಲ್ಲಿ ಓದುವ ಹಠಯೋಗಿಯಾಗಿ ನಾನು ಓದುತ್ತಿದ್ದೆ. ಓದಿ ಜ್ಞಾನ ಸಂಪಾದನೆಯೊಂದಿಗೆ ಕುಟುಂಬದ ಏಳ್ಗೆ ಮಾಡಬೇಕೆನ್ನು ಛಲವಂತೂ ಧಮನಿ ಧಮನಿಯಲ್ಲೂ ತುಂಬಿತ್ತು. ಚೆನ್ನಾಗಿ ಓದಿ ಸಾಧಿಸಬೇಕೆನ್ನುವ ಛಲವೇ ಉಸಿರಾಗಿತ್ತು. ಮನದ ಏಕಾಗ್ರತೆಯೆಲ್ಲವನ್ನೂ ಕಾಪಿಟ್ಟು ಪ್ರೀತಿಯಿಂದ ವಿದ್ಯಾರ್ಜನೆಗೈಯ್ಯುವುದು ನನ್ನ ನಿತ್ಯ ಕರ್ಮವಾಗಿತ್ತು. ಒಂದೆಡೆ ಪುಸ್ತಕದಲ್ಲಿ ಅಕ್ಷರಗಳ ಓದುತ್ತಾ ಸಾಗಿದರೆ ಮೆತ್ತನೆ ನಿಟ್ಟುಸಿರು ಬಿಟ್ಟು ಮನ ಸಾವರಸಿಕೊಳ್ಳುವಾಗ ಮನೆ ಅಪ್ಪ, ಅಮ್ಮ ನೆನಪಾಗುತ್ತಿದ್ದರು, ಜೊತೆಗೆ ಮುದ್ದು ತಂಗಿ. 
ಹೀಗೆಯೇ ಸಾಗುವ ನನ್ನ ಜೀವದಲ್ಲಿ ಹೊಸತಾಗಿ ನೋಡುವ ನೋಟದಲ್ಲಿ ಒಂಥರಾ ಸೊಗಸೆನ್ನುವ, ಮನಸ್ಸಿಗೆ ಸೋಲುವ ಕಾಲದ ಅಪ್ಪುಗೆಯಾಗುವ ಸನ್ನಿವೇಶಗಳು ಉದಯಿಸತೊಡಗಿದವು. ಮೇ ಫ್ಲವರ್ ಮರದ ಹೂಗಳು ಸಾಗುವಾಗ ಮೈಮೇಲೆ ಬಿದ್ದಾಗ, ಎದುರು ಬರುವ ಪೋರಿಯರು ತುಸುನಗುತಾ ನಡೆವಾಗ, ಅವರ ನಗುವಿಲೆಗೆ ಮನಸ್ಸು ಕರಗಿಹೋದ ಅನುಭೂತಿ, ಅವರ ಸಂಗವೇ ಬೇಕೆನ್ನುವ ಅಭಯದಾ ಹಠವೂ. ಇದೇನು ಸಂಕಟವೋ ಎಂದು ನನ್ನಲ್ಲೇ ಗೋಗರೆವ ಸಮಯವು ನನ್ನದಾಯಿತು. ನೋಡುವ ನೋಟದದಲ್ಲಿ ಚೆಲುವೆಯ ಸೊಬಗೇ ಕಣ್ಣಿಗೆ ಕಾಡುವಂತೆ ಬಿಂಬವಾಗುವ ಕ್ಷಣವಾಯ್ತು. ಏನೆಂದು ಮರೆತರೂ ನಡೆದಾಡುವಾಗ ಮೈಮರೆತು ಎದುರಾಗುವ ಹುಡಿಗಿಯರ ನೋಡುವ ಚಪಲ, ಏನೋ ಮನಕ್ಕೆ ಇಷ್ಟವೆನಿಸುವ ಕಾರ್ಯ. ಸರಿಯೋ ತಪ್ಪೋ ಅರಿಯದಾ ಬೆಂಬಿಡದ ನಿತ್ಯ ಕರ್ಮ. ಅದೇ ಸುಖದಲ್ಲಿ ಮನ ನಲಿವ ಸಡಗರ.
ಯಾರೋ ಹುಡುಗಿ ಎದುರಾದರೂ ಸಾಕು ತುಡಿವ ಮನಸ್ಸಿಗೆ, ಕನಸುಗಳಿಗೆ, ರೆಕ್ಕೆ ಪುಕ್ಕ ಮೈಗೂಡಿ ನಲಿದು ಸಂಭ್ರಮಕೆ ಚೆಲುವ ಹಂದರ ಏರ್ಪಡುವ ಸುಸಮಯದ ಕನಸು. ಒಬ್ಬನೇ ಏಕೆ? ಜೊತೆಗೆ ಇನ್ನೊಬ್ಬಳು ಬೇಕೆನ್ನುವ ಹಠದ ಮನಸ್ಸು, ಗಟ್ಟಿಯಾಗಿ ಇನ್ನೊಬ್ಬಳು ನಿನ್ನೊಂದಿಗೆ ಬೇಕೆನ್ನುವ ಆಸೆಯನ್ನು ಒತ್ತಿ ಹೇಳುತ್ತಿದೆ. ಏನೋ ಎಂತೋ ಇವಳೋ ಅವಳೋ ಹೀಗೆ ನೋಡಿದವರಲ್ಲೆಲ್ಲಾ ಏನೋ ಕನಸುಗಳು ಏಳುತ್ತಿವೆ. ಕಾರಣವೂ ಕಾಣದೇ, ಸತ್ಯ ಸತ್ವದ ಅರಿವೂ ಮೂಡದೇ! ಏಕತಾನತೆಗೆ ಕೊನೆ ಹೇಳು ಎನ್ನುವ ಮನದ ಮಾತಿಗೆ ಒಕ್ಕೊರಲ ದನಿಯಾಗುವ ವಸಂತಕಾಲದ ನವಿರು ಸ್ಪರ್ಷ. ಕಾಲೇಜು ಉದ್ಯಾನವದಲ್ಲಿ ಅರಳಿದ ಹೂಗಳು ಬೀಸುವ ತಣಿರುಗಾಳಿಯಲ್ಲಿ ಸೌಗಂಧ ಬೆರೆಸಿ ಕಂಪು ಒತ್ತರಿಸಿ ನೂಕುವಾಗ, ಕಾಲೇಜು ಕೋಣೆಯಲ್ಲಿ ಕುಳಿತ ನನ್ನ ಮೊಗವ ನೇವರಿಸಿದಾಗ ತಣಿರುಗಾಳಿ ಮೈಸೋಕಿ ಕಿಟಕಿಯತ್ತ ನೋಡಿದಾಗ ಪಕ್ಕದಲ್ಲೆ ಕುಳಿತ ಹುಡುಗಿಯರತ್ತ ಹರಿದ ಕಣ್ಣೋಟದಲಿ ಏನೋ ಹುಡುಕುವ ಕಾತರ, ಏನೋ ಸೌಂದರ್ಯ ಜಗದ ದರ್ಶನ, ಜೊತೆಗೆ ಮನದಲ್ಲಿ ಯಾರಿಲ್ಲವೆನ್ನುವ, ಮನಸ್ಸಿಗೆ ಒಬ್ಬರು ಜೊತೆಯಾಗಲಿ ಎನ್ನುವ ತವಕ, ಹಠ.
ಹೀಗೆ ಸಾಗುತಾ ಇತ್ತೀಚೆಗೆ ಯಾರಾದರೂ ಹುಡುಗಿಯರೊಂದಿಗೆ ಮಾತನಾಡುವಾಗ ಮನದಲ್ಲಿ ಮೊದಲಿನ ಅನುಭೂತಿಯಿಲ್ಲ, ಏನೋ ನೋಡುವ ನೋಟದಲ್ಲಿ ಕೊಂಚ ಬದಲಾವಣೆ ಕಾಡಿದೆ, ಯೌವ್ವನ ಅಮಲೇರಿ ಹೆಣ್ಣೊಂದು ಜೊತೆಯಾಗಲಿ ಎನ್ನುವ ರಚ್ಚೆ ಕಾಡಿದೆ. ಎದುರಾದ ಗೆಳತಿ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮೊದಲಿನಷ್ಟು ಸಲೀಸಿಲ್ಲ, ಈಗ ನೋಡಿದರೆ ನಾನೇ ಕಳೆದುಹೋಗುವ ದಾವಂತ, ಕಂಡಿತಾ ಕಳೆದೇಹೋಗುವ ಸಂಭವ. ಮೊದಲು ಮೊದಲು ಜೊತೆಯಾಗಿ ಗಂಟೆಗಟ್ಟಲೆ ತರಲೆಮಾಡಿ ಕಾಲಕಳೆದರೂ ಏನೆನ್ನದ ಮನವಿಂದು ಅವಳಲ್ಲಿ ಅದೇನೋ ಹೊಸತನ್ನು ಬೇಡುತ್ತಿದೆ, ಬೇಡವೆಂದರೂ ಅವಳೇ ನಿನ್ನವಳು, ನಿನ್ನ ಮನಕೆ ಬೆಂಗಾವಲು, ಅವಳೊಲುಮೆಯೇ ಬೇಕೆನ್ನುವ ಚಪಲವು ಮನಸ್ಸಿಗೆ.
ಹೀಗೆ ಸಾಗುವ ಗೊಂದಲ ಗೂಡಾದ ಮನಸ್ಸಿಗೆ ಜವಾಬು ಏನು? ರಾತ್ರಿ ಹಾಸ್ಟೆಲ್ ರೂಂನಲ್ಲಿ ಓದಿನಲ್ಲಿ ಕುಳಿತರೆ ತುಸು ಕಾಡುವ ಹಗಲಿನ ನೆನಪು, ಅಂದ್ರೆ ಕಾಲೇಜಿನಲ್ಲಿ ನಗುತ ನಲಿವ ಗೆಳತಿಯ ಸವಿನೆನಪು, ನಿದ್ರೆ ಬಾರದೇ ಏನೋ ಬೇಸರದ ಮನದಲ್ಲಿ ಹೊರಬಂದರೆ ಓಡುವ ಮೋಡದ ಮರೆಯಲ್ಲಿ ಇಣುಕಿ ನೋಡುವ ಚಂದಿರ ನೋಡಿದಾಗ ಅವನ ಮೊಗದಲ್ಲೂ ಆ ಗೆಳತಿ ನೋಡಿ ನಕ್ಕ ಅನುಭೂತಿ. ಚಂದಿರ ಪಳಿಸುವ ಮಂದಹಾಸದ ಬೆಳಕಲ್ಲಿ ಹಾಸ್ಟೆಲ್ ಮುಂದಿನ ಶ್ವೇತ ಸೇವಂತಿಗೆ ತಂಗಾಳಿಗೆ ತಲೆತೂಗುತಾ ತೂಗುವಾಗ, ಮನದ ಕೊಳದಲ್ಲಿ ಸಾವಿರ ಕನಸುಗಳು ಅರಳಿ ಚಿತ್ತ ಕನಲಿಸುವ ಘಳಿಯಾಗಿದೆ. ಸುಂದರ ಪ್ರಕೃತಿಯ ಎಲ್ಲಾ ಇರುವಿಕೆಗಳು ಒಟ್ಟಾಗಿ ಮನದಲ್ಲಿ ಉಲ್ಲಾಸದ ಮಳೆ ಸುರಿಸುತ್ತಿವೆ, ಆದರೆ ದುರ್ಬಲ ಮನದ ಮೇಲೆ ಬೀಳುವ ಬಿರುಮಳೆಗೆ ಮನಸ್ಸು ತಾಳೀತೆ? ತಡೆದು ತಾಳಿದರು ಅದೆಷ್ಟು ಸಮಯ ಭದ್ರ?
ಯೌವ್ವನದ ಹೊಳೆಗೆ ತೂರಿಹೋಗುವ ಮನದ ಗೊಂದಲಕೆ ಪರಿಹಾರವೆಲ್ಲಿ, ಏಕಾಂತವೇ ಬೇಸರವೆಂದು ಜೊತೆಯೇ ಬೇಡುತಾ ಕಾತರಿಸತೊಡಗಿದೆ, ಮೊದಲು ಗೆಳೆಯರೊಂದಿಗೆ ಹರಟೆಹೊಡೆದು, ಆಟವಾಡಿ, ಒಟ್ಟಾಗಿ ಕಾಲಕಳೆದು, ಹಾಸ್ಟೆಲ್ ನಲ್ಲಿ ರಾತ್ರಿ ಓದಿ ಎಲ್ಲರೊಂದಿಗೆ ಹಾಸ್ಯದಲ್ಲಿ ತೊಡಗಿ ನಿದ್ರೆಗೆ ಜಾರುತ್ತಿದ್ದೆ. ರವಿ ಮೂಡುವ ಮೊದಲೇ ಅವರಿಗಿಂತ ನಾನೇ ಮೊದಲೆಂದು ಎದ್ದು ಓದಿನಲ್ಲಿ ತಲ್ಲೀನವಾಗುತ್ತಿದ್ದೆ. ಆದರೆ ಇತ್ತೀಚೆಗೆ ಅದೆಲ್ಲದರ ಜೊತೆಯಲ್ಲಿ ಒಂದಿಷ್ಟು ಸಮಯದಲ್ಲಿ ಗೆಳತಿಯ ಧ್ಯಾನಕ್ಕೆ ಮೀಸಲಾಗಿದೆ. ಎಷ್ಟೊತ್ತಿಗೆ ಕಾಲೇಜಿಗೆ ಹೋಗುತ್ತೇನೋ ಎನ್ನುವ ಗೊಂದಲ, ಹೋದರೂ ಬೇಗ ಮುಗಿಯದಿರಲಿ ಎನ್ನುವ ಮನದ ಪ್ರಾರ್ಥನೆ.
ಹೀಗೆ ಸಾಗುವಾಗ ಒಂದುದಿನ ಮನೆಯಿಂದ ಪತ್ರ ಬಂತು, ಅಪ್ಪ ಅಮ್ಮನಿಗೆ ಬರೆಯಲು ಬರಲ್ಲ, ಅರ್ಧಕ್ಕೆ ಓದು ನಿಲ್ಲಿಸಿದ ತಂಗಿಯ ಕೈಯಲ್ಲಿ ಬರೆಸುತ್ತಾರೆ. ಪತ್ರ ಹೀಗಿತ್ತು, ಮಗನೇ ಓದು ಹೇಗಿದೆ? ಇಲ್ಲಿ ಇರುವ ನಮ್ಮಗಳ ಬಗ್ಗೆ ಯೋಚನೆ ನೀನು ಮಾಡದಿರು, ಈ ವರ್ಷ ಉತ್ತಮ ಬೆಳೆಯಂತೂ ಬರುತ್ತದೆ, ಕಳೆದ ವರ್ಷ ಅತೀವೃಷ್ಟಿಗೆ ಬೆಳೆನಾಶವಾಗಿತ್ತು, ಈ ಬಾರಿ ಅದು ಆಗುವುದಿಲ್ಲ, ನೀನು ಅಂಜದಿರು, ನಿನ್ನ ಓದಿಗಾಗಿ ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತೇವೆ, ನೀನು ಚೆನ್ನಾಗಿ ಓದಿ ನಮ್ಮ ಮನೆಗೆ ನಮಗೆ ಆಶ್ರಯದಾತನಾಗಬೇಕು, ನೀನೇ ಆಧಾರವಾಗಬೇಕು, ನಿನಗಾಗಿ ನಾವು ಯಾವುದಕ್ಕೂ ಸಿದ್ಧ, ದುಡ್ಡಿಗಾಗಿ ಏನು ಮಾಡುತ್ತಾರೋ ಎಂದು ಕೊರಗಬೇಡ, ನಿನ್ನ ಪುಸ್ತಕ, ಪೆನ್ನು ಯಾವುದಕ್ಕೂ ಕೊರತೆ ಬೇಡ. ಏನೇ ಆದರೂ ನೀನು ತಕ್ಷಣ ಪತ್ರ ಬರೆ, ನಾವು ಹಣವನ್ನು ಕಳುಹಿಸುತ್ತೇವೆ, ಈ ದಿನ ನಿನಗಾಗಿ ಹಣವನ್ನು ಮನಿ ಆರ್ಡರ್ ಮೂಲಕ ಕಳುಹಿಸಿದ್ದೇವೆ, ನೀನು ಪೋಸ್ಟ್‍ಮೆನ್ ಬಳಿ ವಿಚಾರಿಸು, ಹಣ ಮುಟ್ಟಿದೊಡನೆ ನಮಗೆ ಪತ್ರ ಬರೆಯುವುದನ್ನು ಮರೀಬೇಡ, ನಿನ್ನ ಓದು ಹೇಗಿದೆ ತಿಳಿಸು...ಹೀಗೆ ಅಪ್ಪ, ಅಮ್ಮ ಬರೆದ ಪತ್ರ ಇಂದು ಕೈಸೇರಿದೆ, ಮೈ ಮೆತ್ತನೆ ಬೆವರುತ್ತಿದೆ,  ಈಗ ಮನದಲ್ಲಿ ಒಂದೇ ಆಲೋಚನೆ.
ಸುಳಿದಾಡುವ ಮೆಲುಗಾಳಿಯಲ್ಲಿ ಸಾಗುತ್ತಾ ಕಾಲೇಜು ಕಡೆ ಹೆಜ್ಜೆ ಹಾಕುತ್ತಿದ್ದೇನೆ, ಆದರೆ ಈಗ ಅಪ್ಪ ಅಮ್ಮ ಬರೆದ ಪತ್ರದ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತಿವೆ, ಮೊದಲಿನಂತೆ ಯಾವುದೇ ಕನಸು ಕಾಡುತ್ತಿಲ್ಲ, ನಾನೇನಿದ್ದರೂ ಓದಿ ಅಪ್ಪ, ಅಮ್ಮ, ತಂಗಿಯ ಋಣ ತೀರಿಸಿಬೇಕು, ಇದೇ ಬದುಕಿನ ಹಠ..
ರಾಮಚಂದ್ರ ಸಾಗರ್