Sunday, 8 January 2017

ಜಗವನ್ನೇ ಶತ್ರುವಾಗಿಸಿ ನಡೆದಳು..

drinking is injurious to health
      ಏ ಹುಡುಗಿ..ಈ ನೋವಲ್ಲಿ ಸುಟ್ಟ ಮನದ ಸಂಕಟ ನಿನಗೇನು ಗೊತ್ತು, ಸುಮ್ಮನೇ ಸದ್ದಿಲ್ಲದೇ ಸಾಗುತ್ತಿದ್ದ ನನ್ನ ಬದುಕಲ್ಲಿ ನೀನ್ಯಾಕೆ ಬಂದೆ, ಏನೋ ತಣ್ಣೀರು ಕುಡಿದರೂ ಅಮೃತ ಕುಡಿದಂತೆ ನೆಮ್ಮದಿಯಲ್ಲಿ ನಗುತಿದ್ದೆ ಅಂದು ನಾನು, ಬಿಸಿಗಾಲದ ಶೆಕೆಯಲ್ಲಿ ಬೆವರಿಳಿದು ಬೇಯುವವಧಿಯಲ್ಲಿ ಇರುಳು ಬಿಸಿಯ ಹವೆಯೆಬ್ಬಿಸಿ ಕುಣಿದರೂ ಸಾವದಾನದಲ್ಲಿ ಕಣ್ಣುಗಳನ್ನು ನೆಮ್ಮದಿಯಿಂದ ಮುಚ್ಚಿ ಯಾವುದೇ ಆತಂಕವಿಲ್ಲದೇ  ನಿರಾಳವಾಗಿ ನಿದ್ರಿಸುತಿದ್ದೆ, ಹೃದಯದ ರೋಧನೆ, ನೋವಿಲ್ಲದೇ ನಿರಮ್ಮಳವಾಗಿದ್ದೆ. ರಾತ್ರಿ ಅನ್ನ ಉಣ್ಣದಿದ್ದರೂ ಸಂತೋಷದಲ್ಲಿರುತ್ತಿದ್ದೆ, ಬೆಳಿಗ್ಗೆ ರವಿ ಉದಯಿಸಿ ಬಿಸಿಲು ಮುಖಕ್ಕೆ ಬಡಿಯುವವರೆಗೂ ನಿರಾಳವಾಗಿ ನಿದ್ರಿಸುತ್ತಿದ್ದೆ, ಒಂಟಿ ಬದುಕಾದರೂ ಹೃದಯವು ನೆಮ್ಮದಿಯ ಸೆಲೆಯಲ್ಲಿ ಆಶ್ರಮ ಪಡೆದಿತ್ತು. ಎಲ್ಲವೂ ದೇವರ ಕೊಟ್ಟ ಬದುಕು ಬಡತನವಾದರೇನು ಮೂರು ಹೊತ್ತಲ್ಲದಿದ್ದರೂ ಎರಡು ಹೊತ್ತು ಊಟ, ನೆಮ್ಮದಿಯ ನಿದ್ರೆ ಮಾಡಿ ಹಾಯಾಗಿದ್ದವನ ಬದುಕಲ್ಲಿ ನೀ ಬಂದು ಪ್ರೀತಿಯ ಜಗದಲ್ಲಿ ನನ್ನ ಕೈಹಿಡಿದು ನೀನು ಇನ್ನೊಂದು ಜಗವಿದೆ ಎಂದು ಕರೆದೆ, ಪ್ರೀತಿಗೆ ಸೋಲದ ಮನವೆಲ್ಲಿದೆ, ಜಗದ ಮೂಲೆ, ಮೂಲೆಯೂ ಪ್ರೀತಿಯ ಬಂಧದಲ್ಲಿದೆಯೆಂದು ನನ್ನನ್ನು ನೀ ನಂಬಿಸಿದೆ, ನಾನು ನಂಬಿದೆ, ಜಗದೆಲ್ಲವೂ ಪ್ರೀತಿಯ ಸೆಲೆಯ ಬಲದ ಕೃಪೆಯೇ.. 
     
   ಪ್ರೀತಿಯ ಹಂದರಲ್ಲಿಯೇ ಜಗದ ಜೀವ ಉಳಿದಿದೆ, ಪ್ರೀತಿಯಿಲ್ಲದೇ ಜಗದಲ್ಲಿ ಯಾವುದಿದೆ, ಅರಳುವ ಹೂವು ತಂಗಾಳಿಯ ಪ್ರೀತಿಯಲ್ಲಿ ನಗುತಿದೆ ನೋಡು ಎಂದು ನನ್ನ ಮನಸ್ಸನ್ನು ನೀ ಗೆದ್ದೆ, ಸರೋವರದ ತಾವರೆಯ ತೋರಿ ನೀನಂದು ಸರೋವರ ಮತ್ತು ತಾವರೆ ನಡುವೆ ಪ್ರೀತಿಬಂಧವೆಂದೆ. ಸರೋವರವಿಲ್ಲದೇ ತಾವರೆ ಉಳಿವುದೇ, ತಾವರೆಯಿಲ್ಲದೇ ಸರೋವರ ಪಳಿಸುವುದೇ..? ನೀ ಯೋಚಿಸು ಎಂದು ಮನಕ್ಕೆ ನೀ ಲಗ್ಗೆಯಿಟ್ಟೆ, ಜಗದೆಲ್ಲವನ್ನು ಅಷ್ಟೊಂದು ಹತ್ತಿರದಿಂದ ಮನಕ್ಕೆ ಪರಿಚಯಿಸಿ ಪ್ರತಿ ವಸ್ತುವಿನಲ್ಲೂ ಪ್ರೀತಿಯ ಬಂಧವನ್ನು, ಒಲವಿನ ಸಾರವನ್ನು ಅರ್ಥೈಸಿದೆ, ಅರ್ಜುನನಿಗೆ ಸಾರಥಿಯಾದ ಕೃಷ್ಣನ ಉಪದೇಶದಂತೆ ಬದುಕಿನ ಪ್ರತಿದಿನವೂ, ಪ್ರತಿಘಟ್ಟದಲ್ಲೂ, ನನಗೆ ಪ್ರಿತಿಯ ಬಂಧದ ಪರಿಚಯವನ್ನೇ ಮಾಡಿಸುವುದನ್ನು ನೀ ಕಾಯಕವಾಗಿಸಿಕೊಂಡೆ, ನಿನ್ನ ಒಲವ ಉಪದೇಶಗಳಿಗೆ ನಾನು ಕೇಳುವ ಪ್ರಶ್ನೆಗಳಿಗೆ ನಿನ್ನ ಮುದ್ದಾದ ಉತ್ತರಕ್ಕೆ ನಾ ಶರಣಾಗಿ ಹೋದೆ. ನಿನ್ನ ತುಂಟ ನಗುವಿಗೆ ನಾ ಸೋತು ಹೋಗಿದ್ದೆ. ಪ್ರೀತಿಯ ಉಪದೇಶವನ್ನು ಮುಂಜಾನೆಯ ರವಿಯಿಂದ ಆರಂಭಿಸಿ ಮುಸ್ಸಂಜೆಯ ರವಿ ಮರೆಯಾಗುವವರೆಗೂ ನೀಡಿ, ರಾತ್ರಿ ಚಂದಿರನ್ನೂ ತೋರಿಸಿ ಬಿಡುವಿರದೇ, ಅಮವಾಸ್ಯೆಯಂದು ಹೊಳೆವ ತಾರೆಗಳ ಬೆಳಕಲ್ಲೂ ತುಸು ಬಿಡುವೂ ನೀಡದೇ ಎಲ್ಲೆಲ್ಲೂ ಪ್ರೀತಿಯೇ ಎಂದು ಒಲವೋಪದೇಶ ಮಾಡಿದೆ, ಹೊಳೆವತಾರೆಗಳಿಗೆ ಭುವಿಯ ಕುಸುಮಗಳ ಒಲವೆಂದೆ, ನಗುವ ಚಂದಿರನಿಗೆ ನಗುವ ನೈದಿಲೆ ಬೇಕೆಂದೆ ಅದಕಾಗ್ಗೆ ಅವನ ಕಾತರವೆಂದೆ, ಎಲ್ಲವನ್ನೂ ನಾ ಮರುಪ್ರಶ್ನೆ ಹಾಕದೇ ನಿನ್ನ ಮಾತುಗಳನ್ನು ನಂಬಿದೆ ಜೊತೆಗೆ ಸದ್ದಿಲ್ಲದೇ ನಿನ್ನಲಿ ವಶವಾದೆ. 

     ಪ್ರೀತಿಯ ಜಗದಲ್ಲಿ ನನ್ನ ಮನಸ್ಸಿಗೆ ಒಲವ ರಂಗು ಸಾಕಷ್ಟು ಲೇಪಿಸಿದೆ, ಎಷ್ಟೆಂದರೇ ನಾನಿಂದು ಎಷ್ಟೇ ಪ್ರಯತ್ನಿಸಿ ಯಾವ ಶರಧಿಯಲ್ಲಿ ಮುಳುಗೆದ್ದರೂ ನಿನ್ನೊಲ ರಂಗು ಕರಗುತ್ತಿಲ್ಲ ಕಣೇ, ಅಂದು ನಾನು ನೀನು ಕಡಲತಡಿಯ ಬಂಡೆಗಳ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡಿದ್ದೆವು, ಇಂದು ನಾನಲ್ಲಿ ನಡೆದು ಹೋದರೇ ಆ ಬಂಡೆಗಳೇ ಬಂದು ನನ್ನ ಎದೆಗೊರಗಿದಂತೆ ನೋವಾಗುತ್ತಿದೆ, ಜಗದೆಲ್ಲಾ ವಸ್ತುಗಳಲ್ಲಿ ಪ್ರೀತಿಯನ್ನೇ ತೋರಿಸಿ ನೀ ಏನೋ ನಡೆದೆ, ಸದ್ದಿಲ್ಲದೇ ಸಾಗಿಹೋದೆ. ನೀನಿಲ್ಲದೇ ಒಂಟಿಯಾಗಿ ನೋಡುವ ನನ್ನ ಕಣ್ಣಿಗೂ ಸರಿಯಾಗಿ ಕೆಲಸವಿಲ್ಲ, ಮಬ್ಬು ತುಂಬಿದೆ ಸಾಕಷ್ಟು, ಚಿಂತೆಗಳ ಸುರಿಮಳೆಯ ಕೊರೆತದಲ್ಲಿ ಕೊರಗುತಾ, ಮಬ್ಬು ತುಂಬಿದ ಕಣ್ಣಿನಿಂದ ಸರಿಯಾಗಿ ನಾ ಏನೂ ನೋಡಲಿ, ಕಂಡಲ್ಲೆಲ್ಲಾ ನೀ ಮುದ್ದಾಗಿ ತೋರಿಸಿದ ವಸ್ತುಗಳೇ ಕಾಡುತಿರುವಾಗ, ನಾ ನೋಡುವುದೇಗೆ, ದೇವರೇ ನನ್ನನ್ನು ಶಾಶ್ವತವಾಗಿ ಕುರುಡನನ್ನಾಗಿಸು ಎಂಬುದೊಂದೇ ದೇವರಲ್ಲಿ ಪ್ರಾರ್ಥನೆಯಾಗಿದೆ, ಒಂದಂತೂ ಸತ್ಯ ಅವಳಿಲ್ಲದೇ ನಾನೀಗ ಅಕ್ಷರಶಃ ಕುರುಡ, ಮಬ್ಬು ಆವರಿಸಿರಲು ನನ್ನ ತನುವು ನಿಯಂತ್ರಣ ತಪ್ಪಿ ಬಂಡೆಗೊರಗಿ ಬೀಳುತಿದ್ದೆ, ಒಡೆದ ಹಣೆಯಲ್ಲಿ  ಸುರಿವ ರಕ್ತದಲ್ಲಿ ಕೊರೆವ ಛಳಿಗಾಳಿಯಲ್ಲೇ ಇಂದು ನಾನು ಸಾಗುತ್ತಿರುವೆ. ಎಷ್ಟೇ ಬೇಡವೆಂದು ಒದ್ದರೂ ಹೋಗದ ನಿನ್ನ ನೆನಪುಗಳ ಹಾವಳಿ ಎದೆಯನ್ನು ಅವಿರತ ಸುಡುತಿದೆ, ಕೈಲಿದ್ದ ಸರಾಯಿ ಬಾಟಲಿ ನೋಡಿ ಎರಡು ಎಣಿಸುವುದರೊಳಗಾಗಿ ಹೊಟ್ಟೆ ಸೇರುತಿದ್ದೆ, ನೋಡು ನೋಡುತಿದ್ದಂತೆಯೇ ಕರಗುತಿದ್ದೆ, ಕರಗುತ್ತಾ ಯಾವುದೋ ಮಂಪರು ಜಗದಲ್ಲಿ ನಿನ್ನ ಮರೆಯುತ್ತಾ ವಾಲಾಡುತ್ತಿದ್ದೆ. ಇನ್ನು ಅನ್ನದ ಚಿಂತೆಯೆಲ್ಲಿ..? ತಣ್ಣೀರು ಕುಡಿದರೂ ಅಮೃತವೆಂದಿದ್ದ ನನ್ನ ಮನವಿಂದು ಎದುರು ಅಮೃತ ತಂದಿಟ್ಟರೂ ಕುಡಿಯಲು ಒಪ್ಪಿಗೆ ನೀಡುತ್ತಿಲ್ಲ. ಎಲ್ಲವೂ ನಿಶೆಯಲ್ಲೇ, ನಿನ್ನೊಲವ ಅಮಲಿನ ಅಪ್ಪುಗೆಯಲ್ಲಿ ಸರಾಯಿ ಸಹವಾಸದಲ್ಲೇ ವಾಸವಾಗಿದೆ, ಮನ ಸದ್ದಿಲ್ಲದೇ ತನಗೆ ಅರಿವಿಲ್ಲದ ಎಲ್ಲಾ ದುಶ್ಚಟಗಳ ತಾಣವಾಗಿದೆ. ನೋವಿನ ಹಂಗು ನಿನಗೇನು ಗೊತ್ತು, ಅನುಭವಿಸುವ ಮನದ ರೋಧನೆ ನಿನಗೇನು ಕೇಳಿಯಾತು, ಸುರಿವ ಹನಿಗಳಲಿ ನೀನು ಬಿಂಬವಾಗಿ ಕುಣಿಯುತಿರುವೆ ನಿತ್ಯ, ಹಗಲು ಇರುಳು ರೋಧಿಸಿ ನಾ ಹರಿಸಿದ ಕಣ್ಣೀರ ಹೊನಲಿನಲ್ಲಿ ನಿನದೇ ರೂಪ ಬಿಂಬವಾಗಿ ಕಾಡುತಿದೆ, ಇರಬಹುದು ಅದು ನೀನು ನನ್ನ ಕೊನೆಯನ್ನೇ ಬಯಸಿದಂತಿದೆ. ಅಂದು ನೀ ಪ್ರೀತಿಯಿಂದ ನನ್ನ ಮುದ್ದಾಗಿ ಕರೆದೊಯ್ಯತಿದ್ದ ಸಾಗರ ತೀರದ ದಾರಿಯಲ್ಲಿ ಇಂದು ನಾನೊಬ್ಬನೇ ರೋಧಿಸುವ ಮನದೊಂದಿಗೆ ಸಾಗುತಿದ್ದೇನೆ, ಕಣ್ಣೀರು ನನ್ನ ಅನುಮತಿ ಕೇಳದೇ ಸದ್ದಿಲ್ಲದೇ ನೆಲಮುಟ್ಟುತ್ತಿವೆ, ಏನೇ ಆಗಲಿ ಅದು ನೀ ಕೊಟ್ಟ ಕೊಡುಗೆ, ಅದು ಕ್ಷಯವಾಗುವುದುಂಟೇ. 
      
     ಇಂದು ಬಾನಲ್ಲಿ ನಗುವ ಚಂದಿರನನ್ನ ನಾ ನೋಡಿದರೇ ಕಣ್ಣಿಗೆ ಸೂಜಿ ಚುಚ್ಚಿದಂತೆ, ನಗುವ ನೈದಿಲೆಯ ನೋಡಿದರೆ ಕಣ್ಣಿಗೆ ಸುಣ್ಣಬಿದ್ದಂತೆ, ತಂಗಾಳಿ ಮೈಸೋಕಿದರೆ ಬಿಸಿನೀರನ್ನು ಮೈಮೇಲೆ ಚೆಲ್ಲಿದಂತೆ ಭಾಸ. ನೋವಿನ ಸಾಮ್ಯಾಜ್ಯಕ್ಕೆ ನನ್ನನ್ನು ಅಧಿಪತಿಯಾಗಿಸಿ ನೀ ನಡೆದೆ. ಅಂದು ಇದೇ ಸಾಗರದ ತೀರದಲ್ಲಿ ಉರಿವ ಜ್ವಾಲೆಯ ಹೊತ್ತಿಸಿ ಮೈಕಾಯಿಸಿಕೊಂಡಿದ್ದೆವು. ಇಂದು ಯಾರೋ ಹೊತ್ತಿಸಿ ಹೋದ ಬೆಂಕಿಯಲ್ಲಿ ನಾನೊಮ್ಮೆ ನೋಡಿದರೂ ಅಲ್ಲಿಯೂ ನಿನದೇ ನೆನಪು, ನಿನದೇ ಬಿಂಬದ ಕುಣಿತ. ನಿನ್ನ ಹೊರತಂದು ನಾ ಪ್ರಶ್ನಿಸಬೇಕೆಂದು ನಾನು ಹಠವಿಡಿದು ಉರಿವ ಜ್ವಾಲೆಯಲ್ಲಿ ಕೈಸುಟ್ಟುಕೊಂಡು ನೋಯುತ್ತಿದ್ದೇನೆ.. ಕೈಲಿರುವ ಸರಾಯಿ ಬಾಟಲಿ ಕಾಲಿಯಾಗುತಿದೆ, ನಾನು ಕುಡಿದಲ್ಲ ನೋಡಿದರೂ ಸಾಕು, ತಂಪು ಹವೆಯಲ್ಲೂ ನನ್ನ ತನುವು ಬೆವರು ಹನಿಗಳ ಕಣಜವಾಗಿದೆ. ಅಂದು ನಿನ್ನೊಲವ ಸೆರೆಯಲ್ಲಿ ನಿನ್ನ ತಬ್ಬಿ ಹಿಡಿದಾಗ ನಡುಗುತ್ತಾ ಬೆವರಿದ್ದೇ. ಇಂದು ಅದೇ ನೆನಪು ಸಾಕು ನಾನು ಕೊನೆಯಾಗುವವರೆಗೂ ಬೆವರಿಳಿಸಿಕೊಳ್ಳಲು.. 
     
       ಯಾರೋ ನನ್ನ ಬಗ್ಗೆ ಹೇಳಿದ ತಪ್ಪು ಮಾತಿಗೆ ನೀ ಬೆಲೆಕೊಟ್ಟು, ಅವರ ಮಾತು ನಂಬಿ, ನಿರ್ಮಲ ನನ್ನ ಪ್ರೀತಿಯನ್ನು ನೀ ತ್ಯಾಗ ಮಾಡಿದ್ದೂ ಸರಿಯೇ.. ಪ್ರತ್ಯಕ್ಷವಾಗಿ ಕಂಡರೂ ಇನ್ನೊಮ್ಮೆ ಪರಿಶೀಲಿಸಿ ನೋಡೆಂಬ ಮಾತನ್ನು ನೀ ಮರೆತೆಯೇಕೇ..? ನಮ್ಮ ಪ್ರಿತಿಯನ್ನು ಬಯಸದ ವಿಕೃತಿಗಳು ನಮ್ಮೊಲವನು ಬೂಧಿ ಮಾಡಿ, ಒಲವ ಕಣ ಕಣವನ್ನು  ಕರುಣೆಯಿಲ್ಲದೇ ಕೊಂದರು, ಅವರ ಮಾತುಗಳಿಗೆ ನೀ ತುಸು ಎಣಿಸದೇ, ಯೋಚಿಸದೇ ನಡೆದದ್ದು ವಿಧಿಯೇ.  ಅವರಸರದ ಆಟವನ್ನು ನೀನು ಆಡಿಬಿಟ್ಟೆ, ನನ್ನ ಬದುಕು ಈಗ ಕೇಲವ ನೀನಿಲ್ಲದೇ ನಿನ್ನ ಬೇಡವೆಂದರೂ ಕಾಡುವ ನೆನಪುಗಳ ಜೊತೆಗೆ, ಕೈಲಿ ಸರಾಯಿ ಬಾಟಲಿಯ ಹಿಡಿದೂ ಅದೇ ದಾರಿಯಲ್ಲಿ, ನೀನಂದು ಪ್ರೀತಿಯಿಂದ ಕೈಹಿಡಿದು ನಡೆಸುತ್ತಿದ್ದ ದಾರಿಯಲ್ಲಿ ಒಂಟಿಯಾಗಿ ತೂರಾಡುತ್ತಾ, ಸುರಿವ ಕಣ್ಣೀರು ಹನಿಗಳ ಸಂತೈಸುವಿಕೆಗೂ ಒಪ್ಪದೇ  ಸಾಗುತಿದ್ದೇನೆ..ಒಂದಂತೂ ಸತ್ಯ, ನನಗೀಗ ಇಡೀ ಜಗವೇ ಶತ್ರುವಾಗಿ ಕಾಣುತಿದೆ, ಏನನ್ನು ನಾ ಕಂಡರೂ ಹಿತವೆನಿಸುತಿಲ್ಲ..ಯಾವುದೂ ಬೇಡವಾಗಿದೆ, ನೀನೇ ನನ್ನನ್ನು ತಿರಸ್ಕರಿಸಿದ ಮೇಲೆ..ಜಗವೇ ಶತ್ರುವಾಗಿದೆ..

          ರಾಮಚಂದ್ರ ಸಾಗರ್