Thursday, 5 January 2017

ಲಾಲಿಸುತಿದೆ ಮನ ಅವನನೂ...

     ಅಂದು ನಾ ನಡೆವ ಹಾದಿಯಲ್ಲಿ ಮಳೆಹನಿಗಳು ಒಂದೊಂದೇ ಉದುರುತ್ತಿದ್ದವು, ಗಾಳಿಯು ಜೋರಾಗಿ ಬೀಸಲು ಆರಂಭಿಸಿತು, ಬೇಗನೇ ಮನೆಯೆಡೆ ನನ್ನ ಕಾಲುಗಳು ಹೆಜ್ಜೆ ಹಾಕತೊಡಗಿದವು, ಬಾನೆಡೆ ನಾ ಇಣುಕಿ ನೋಡಿದೆ, ಎಲ್ಲೆಲ್ಲೂ ಕರಿಮೋಡಗಳು, ಕಾರ್ಗಾಲದ ವೇಳೆಯಲ್ಲಿ ರವಿಗೇಗೆ ಅವರಸರವೋ ಎಷ್ಟು ಬೇಗನೇ ಮರೆಯಾದನೋ ಎಂದು ದುಗುಡದ ಮನದಲ್ಲಿ ನಾ ತುಸು ಜೋರಾಗಿಯೇ ಸಾಗುತ್ತಿದ್ದೆ, ಸಾಧ್ಯವಾದಾಗ ಎರಡು ಹೆಜ್ಜೆ ಓಡುತ್ತಿದ್ದೆ, ಈ ದಾವಂತದಲ್ಲಿ ಹಾರಿದ ನನ್ನ ದುಪಟ್ಟಾ ತೂರಿ ಹೋಯಿತು, ಗಾಳಿಯಲ್ಲಿ ಬಹು ದೂರ ತೂರಿ ಹೋಯಿತು, ಮನದ ದುಗುಡ ಇನ್ನಷ್ಟು ಏರಿತು, ಆತಂಕದ ಎಲ್ಲೆಯು ಮೀರಿತು, ಓಡುವ ದುಪಟ್ಟಾ ಹಿಡಿಯಲು ನಾ ಓಡುತ್ತಿದ್ದೆ, ಗಿಡದ ಮೇಲೆ ಕೂತು ನಗುವ ದುಪಟ್ಟಾ ಹಿಡಿಯಲು ಇನ್ನೇನು ನನ್ನ ಕೈ ಮುಂದಾದಾಗ ಮಾಯಾಜಿಂಕೆಯಂತೆ ಅದು ಅಲ್ಲಿಂದ ಕ್ಷಣಮಾತ್ರದಲ್ಲಿ ನಾನು ಕಣ್ಣು ಮಿಟುಕಿಸಿ ಬಿಡುವುದರಲ್ಲಿ ಅದು ಅಲ್ಲಿಂದಲೇ ಮಾಯಾ..ಎಲ್ಲೆಲ್ಲಿ ಎಂದು ಮತ್ತು ನನ್ನ ಭಯದ ಮನ ಕಾತರಿಸುತಾ, ದುಪಟ್ಟಾ ಅರಸುತ್ತಾ ಸಾಗುತಿತ್ತು, ಓ ದೇವಾ ಈ ಸಂಜೆ ಹೊತ್ತಲ್ಲಿ ಇದೆಂತಾ ಅವಘಡವಾ ತಂದಿಟ್ಟೆ ಎಂದು ಪರಿತಪಿಸುವುದಾಗಿತ್ತು, ಆ ಕ್ಷಣವನ್ನು ಶಪಿಸುತ್ತಾ, ಆಗಾಗ ಅಬ್ಬರಿಸುತ್ತಿದ್ದ ಗುಡುಗು ಜೊತೆಗೆ ಕಾಣುವ ಮಿಂಚು ಮನದಲ್ಲಿ ಇನ್ನಷ್ಟು ಭಯ ತುಂಬಿತ್ತು, ಬೇಗನೇ ಮನೆಯೆಡೆ ಸಾಗಲಾರದೇ, ದುಪಟ್ಟ ಕೈಸೇರಲೂ ಇರದೇ, ನಾ ಕಾತರಿಸುವ ಸಮಯದಲ್ಲಿ ಯಾರೋ ದೂರದಲ್ಲಿ ನನ್ನ ಕಡು ನೀಲಿ ದುಪಟ್ಟಾ ಹಿಡಿದು ಓಡಿ ನನ್ನೆಡೆಯೇ ಬಂದಂತೆ ಎನಿಸಿತು, ಮಿಂಚಿನ ಬೆಳಕಲ್ಲಿ ಇನ್ನಷ್ಟು ಸ್ಪಷ್ಟವಾಗಿ ಮೂಡಿತು, ಬಂದು ನನ್ನ ಕೈಲಿಟ್ಟಂತೆ ಎನಿಸಿತು, ನೋಡಿದೆ ಹೌದು ಅದೂ ನನ್ನದೇ ದುಪಟ್ಟಾ, ನಾನು ಪರಿತಪಿಸುತ್ತಿದ್ದ ದುಪಟ್ಟಾ, ಅಯ್ಯೋ ಈ ಗಾಳಿ, ಮಳೆಯಲ್ಲಿ ದೇವರು ಕರುಣಿಸಿದವರೆಂದು ಬೇಗನೇ ಕ್ಷಣ ಕರಗುವುದರೊಳಗಾಗಿ ಮೈಮೇಲೆ ಹೊದ್ದು ನಿಂತೆ, ದುಪಟ್ಟ ಕೊಟ್ಟು ಮೆತ್ತನೇ ನನ್ನೆಡೆಯಿಂದ ಏನನ್ನು ನುಡಿಯದೇ ಹೋಗುವ ಅವನಾರೆಂದು ನೋಡಿದೆ, ಆತನಾರು, ಎಲ್ಲಿಂದ ಬಂದನೆಂದು ತಡವರಿಸಿದರೂ ದೇವರೇ ನಿನಗೂ ನಾ ಋಣಿ ಎನ್ನುತ್ತಾ, ಏನೇ ಆದರೂ ನಾ ಕಷ್ಟ ಪಡುವಾಗ ನನ್ನ ದುಪಟ್ಟಾ ಹಿಡಿದು ಕೊಟ್ಟವನಿಗೆ ಒಮ್ಮೆ ಧನ್ಯವಾದ ಹೇಳಬೇಕೆಂದು ಮನ ಹೇಳುತ್ತಿದ್ದಾರೂ ಕೊಂಚ ಹೆದರಿಕೆ ಕಾಡಿತು, ಈ ಸಮಯದಲ್ಲಿ ಬೇಗನೇ ಮನೆ ಸೇರೋಣವೆಂದು ಮತ್ತೆ ಬೇಗನೇ ಸಾಗತೊಡಗಿದೆ, ಆತನು ನಾ ನಡೆವ ದಾರಿಯಲ್ಲಿ ತುಸು ದೂರದಲ್ಲಿ ಮಬ್ಬಾಗಿ ಕಾಣುತ್ತಿದ್ದ. ನಾನೂ ಅವಸರವಾಗೇ ನಡೆಯುತಿದ್ದೆ, ಸಂಜೆಯೂ ನಿಧಾನವಾಗಿ ಕತ್ತಲೆಯೆಡೆ ಸಾಗುತ್ತಿತ್ತು, ರವಿಗೂ ಕಾರ್ಗಾಲದಲ್ಲಿ ಮರೆಯಾಗಲು ಅದೇನು ದಾವಂತವೋ ಎನೋ, ಒಮ್ಮೊಮ್ಮೆ ಮೋಡಗಳು ಕಡಿಮೆಯಾದಾಗ ಇಣುಕುವ ಚಂದಿರನ ಸೊಬಗೇನೋ ಹಿತ, ಕೊಂಚ ತಿಳಿ ನೀಲಿ ಬೆಳಕಾದರೂ ದಾರಿಯಾಗುವುದೇ ಎನ್ನುತ್ತಾ ತಡಬಡಿಸುತ್ತಿದ್ದೆ. 

     ಮಳೆಗಾಳಿಯು ಒಮ್ಮೆಲೇ ಜೋರಾಯಿತು, ಮುಂದೆ ಸಾಗುವುದು ಕಠಿಣವಾಯಿತು, ಎಷ್ಟು ದೂರ ಮಳೆಯಲ್ಲಿ ಸಾಗುವುದೆಂದು ಅರಿವಾಗದೇ ಮೊದಲೇ ಭಯದಲ್ಲಿ ನಡುಗುತ್ತಾ ಸಾಗುತ್ತಾ ನಡೆವಾಗ ಮೈಯೆಲ್ಲಾ ಒದ್ದೆಯಾಗಿ ಮತ್ತೆ ತಡವರಿಸುವಾಗ, ಮಳೆಹನಿಗಳು ಮತ್ತೆ ಮತ್ತೆ ಜೋರಾಗತೊಡಗಿದವು, ಹನಿಗಳ ಹೊಡೆತಕ್ಕೆ ನಾನು ಕಣ್ಣು ಬಿಡುವುದು ಕಠಿಣವೆನಿಸಿತು, ಅದರಲ್ಲಿ ತನುವು ಚಳಿ ಗಾಳಿಯ ಕೊರೆತಕೆ ನಡುಗಲಾರಂಭಿಸಿತು, ನಡುಗುವ ತನುವಲ್ಲಿ ಮತ್ತೆ ಹೆದರುತ್ತಾ ಸಾಗುವುದು, ಮತ್ತೆ ಮತ್ತೆ ಮನದಲ್ಲಿ ದಾರಿಬೇಗನೇ ಕ್ರಮಿಸಲೆಂದು ಬೇಡುವುದು ಆ ಘಳಿಗೆಯಲ್ಲಿ ಅನಿವಾರ್ಯವಾಗಿತ್ತು. ತುಸು ದೂರನಡೆಯುತಿದ್ದಂತೆ ಮಳೆ ನೀರಿನಲ್ಲಿ ನಾನು ಒಮ್ಮೆಲೇ ಜಾರಿದೇ, ಜೊತೆಗೆ ಜೋರಾಗಿ ಕಿರುಚಿದೆ, ಯಾರೋ ಪಕ್ಕದಲ್ಲಿ ಮಿಂಚಂತೆ ಬಂದು ನಾನು ನೆಲಮುಟ್ಟುವುದರೊಳಗಾಗಿ ಬಂದು ನನ್ನ ಮೇಲೆತ್ತಿದ್ದರು, ಹಾಗೆಯೇ ತುಸುವೂ ವಿರಮಿಸದೇ ಬಡಿಯುತಿದ್ದ ಹೃದಯ ಬಡಿತ ನಾಲ್ಕು ಪಟ್ಟು ಜೋರಾಯಿತು, ನಡುಗುವ ತನುವು ಒಮ್ಮೆ ಬಿಗಿಯಾಯಿತು, ಆರ್ಭಟದ ಗುಡುಗಿನ ಜೊತೆಯಲ್ಲಿ ಜಿಗದ ಮಿಂಚು ಬೆಳಕಲ್ಲಿ ನಾ ನೋಡಿದೆ, ನನ್ನನ್ನು ಗಟ್ಟಿಯಾಗಿ ಹಿಡಿದೆತ್ತಿದವನ ಮೊಗವ, ಅದೂ ಅವನೇ ನನ್ನ ದುಪಟ್ಟಾ ಎತ್ತಿ ಕೊಟ್ಟವನೂ, ನಾನೂ ಕೇಳಿದೆ..ತುಸು ಸಾವರಿಕೊಳ್ಳುತ್ತಾ..ನನ್ನ ದುಪಟ್ಟಾ ತಂದು ಕೊಟ್ಟವರಲ್ಲವೇ ಎಂದೆ.. ಹೌದು ಎಂದ, ತುಸು ದೂರ ಜೊತೆಯಲ್ಲಿ ನಡೆದು ಹೋದೆ, ಏನೇನೋ ಎನ್ನುತ್ತಲೇ ಮನ ಸಾಗಿತು, ಜೊತೆಗೆ ನಡುಗುವ ತನುವಿನೊಂದಿಗೆ, ಊರು ಸನಿಹವಾಗಿ ಮನೆಯ ಹಾದಿಯು ಹತ್ತಿರವಾದಾಗ ಪಕ್ಕದಲ್ಲೇ ಸಾಗಿ ಬರುತ್ತಿದ್ದ ಆತನಿಗೆ ಮತ್ತೊಮ್ಮೆ ಧನ್ಯವಾದವೆಂದೆ.. ಆತನೂ ನನ್ನನ್ನೇ ಮೀರಿಸುವಂತ ನಾಚಿಕೆ ನಂಟಿನವನೇನೋ..ಏನು ಹೆಚ್ಚು ನುಡಿಯದೇ ಬರುವೆಯೆಂದು ನುಡಿದ.. ಮತ್ತೆ ಕಣ್ಣೆತ್ತಿ ಬಾನೆಡೆ ನೋಡಿದೆ, ಅಲ್ಲಿ ಮೋಡಗಳು ಕಡಿಮೆಯಾಗಿವೆ, ಮೆತ್ತನೇ ಚಂದಿರ ನಗುತ್ತಿದ್ದಾನೆ, ನೀಲಿ ಬೆಳಕನ್ನು ನನ್ನೆಡೆ ತೂರುತ್ತಿದ್ದಾನೆ, ಈ ಕಡೆ ನೋಡಿದೆ, ದುಪಟ್ಟಾ ಕೊಟ್ಟವನು  ಮಳೆ ನೀರಲ್ಲಿ ಜಾರಿದಾಗ ಮೇಲಿತ್ತಿದ್ದವನೂ ಮೆತ್ತನೇ ಸಾಗುತ್ತಿದ್ದ. ಒಮ್ಮೆ ಗಟ್ಟಿಯಾಗಿ ಥ್ಯಾಂಕ್ ಕಣ್ರೀ ಎಂದು ಕೂಗಿದೆ. ಮತ್ತೆ ಗಟ್ಟಿಯಾಗಿ ಕೂಗಿದೆ, ಆತ ತಿರುಗಿ ನೋಡಿ ತುಸು ನಕ್ಕು ನಡೆದ..ಮನೆಗೆ ಬಂದು ತುಸು ಕಿಟಕಿಯಲ್ಲಿ ಬಾನೆಡೆ ನೋಡಿದೆ, ಓಡುವ ಮೋಡಗಳು ಕಡಿಮೆಯಾಗಿ ಚಂದಿರ ನಗುತ್ತಿದ್ದಾನೆ, ಮನದಲ್ಲಿ ಮೆತ್ತನೆ ಅವನ ನೆನಪು ಲಾಲಿಸುತಿದೇ..ಏಕೋ ಅರಿವಾಗುತ್ತಿಲ್ಲ..ಏನೆಂದು ತಿಳಿಯುತ್ತಿಲ್ಲ..

      ರಾಮಚಂದ್ರ ಸಾಗರ್