ಗೆಳತೀ..ಕಾರ್ಮೋಡ ಬಾನಲ್ಲಿ ಒತ್ತರಿಸಿ ಬರುತಿದೆ, ಗುಡುಗು ಮಿಂಚುಗಳ ಆರ್ಭಟವೇರುತ್ತಿದೆ, ಮನದಲ್ಲಿ ನಿನ್ನ ನೆನಪುಗಳ ಆರ್ಭಟವೂ ಏರುತ್ತಿದೆ, ನೀ ಬರುವ ಸವಿ ಘಳಿಗಾಗಿ ಎದುರು ನೋಡುತ್ತಾ ಮನಸ್ಸು ಸಿಹಿಯಾಗುತ್ತಿದೆ ಗೆಳತಿ, ನೀ ಬರುವ ಹಾದಿಯನ್ನು ಕಣ್ಣು ಮಿಟುಕಿಸದೇ ನೋಡುತ್ತಿದೆ, ಬೇಗನೇ ಬಾ ಗೆಳತಿ, ಸುರಿವ ತುಂತುರು ಮಳೆಯಲ್ಲಿ ಕೈ ಗಟ್ಟಿಯಾಗಿ ಹಿಡಿದು ಎರಡು ಹೆಜ್ಜೆ ಕುಣಿದು ಬಿಡೋಣ, ಜಗದೆಲ್ಲ ಬವಣೆಗಳನ್ನು ದೂರಾಗಿಸಿಕೊಳ್ಳೋಣ, ನಾಳೆಯ ಚಿಂತೆಗಳನ್ನು ನಮ್ಮ ಹರ್ಷದಿಂದಲೇ ಬೆದರಿಸೋಣ, ಅಂತೆ ಕಂತೆಗಳ ಸಂತೆಯಲ್ಲಿ ನಾನೂ ನೀನು ಕಳೆದು ಹೋಗುವುದು ಬೇಡ, ಪ್ರೀತಿಯಲ್ಲಿ ನಗುತಾ ನಿನ್ನ ಕಣ್ಣಾಲಿಯಲ್ಲಿ ನನ್ನ ಕಣ್ಣಾಲಿಯನು ನಾ ನೋಡುತಾ, ನನ್ನ ಕಣ್ಣಾಲಿಯಲ್ಲಿ ನಿನ್ನ ಕಣ್ಣಾಲಿಯನು ನೀ ನೋಡುತಾ ಸಂಭ್ರಮಿಸೋಣ, ಈ ಸಂಭ್ರಮದಲ್ಲೇ ಒಲವ ತೇರು ಎಳೆಯೋಣ, ಪ್ರೀತಿಯ ಓರಣದಲ್ಲಿ ನಗುತ್ತಾ ಕುಣಿಯೋಣ, ನೀ ಆಗಮಿಸಬೇಕು, ಆದಷ್ಟು ಬೇಗನೇ ನಿನ್ನ ದರ್ಶನವಾಗಬೇಕು, ಸುರಿವ ಹನಿಗಳು ತೊಟ್ಟಿಕ್ಕುತಿವೆ ಆಗಲೇ. ಮಳೆ ನಿಂತ ಮೇಲೆ ಬಂದರೇನು ನವಿರುತನ ಉಳಿದೀತು ಗೆಳತಿ, ಸುರಿವ ಮಳೆಯಲ್ಲಿ ನಾಲ್ಕು ಹೆಜ್ಜೆ ಕುಣಿದು ಬಿಡೋಣ ಬಾ. ನೊಂದ ಮನಸ್ಸುಗಳು ಸುರಿವ ವರ್ಷಧಾರೆಯಲ್ಲಿ ರಮಿಸಿ ಆನಂದದ ಉಯ್ಯಾಲೆಯಲ್ಲಿ ತೇಲಬೇಕಿದೆ, ಕಂಡಿತಾ ತೇಲುತ್ತವೆ, ಎಲ್ಲದಕ್ಕೂ ನಿನ್ನಾಗಮನವಾಗಬೇಕು, ನಿನ್ನ ನಗುಮೊಗದ ಸಿರಿಯ ದರ್ಶನವಾಗಬೇಕು. ಸಾಂಗತ್ಯದ ಬಲದಲ್ಲಿ ಜಗಗೆಲ್ಲುವ ಛಲದಲ್ಲಿ ಒಂದಾಗಿ ನಾವು ಸಾಗಬೇಕು. ಗುಡುಗುವ ಸದ್ಧಿಗೆ ನೀ ಬೆದರಬೇಕು, ಬೆದರಿ ನನ್ನನ್ನು ಆದಷ್ಟೂ ಬಿಗಿಯಾಗಿ ಹಿಡಿದು ಅಪ್ಪಿಕೊಳ್ಳಬೇಕು, ನಾನು ನಿನಗೆ ಸಂತೈಸಬೇಕು, ಗುಡುಗು ಗರ್ಜನೆಗೆ ಬೆದರುವ ನಿನ್ನ ಮೊಗದ ಆತಂಕವನ್ನು ನಾ ದೂರಾಗಿಸಿ ಸಂಭ್ರಮಿಸಬೇಕು, ಜೊತೆಯಲ್ಲಿ ನಾನಿರುವೆ ಹೆದರಿಕೆಯೇಕೆ ಎಂದು ನಾನು ಜಂಬ ಕೊಚ್ಚಕೊಳ್ಳಬೇಕು, ಗರ್ಜಿಸುವ ಗುಡುಗು ಮರೆಯಾಗುವುದರೊಳಗೆ ಬೇಗನೇ ಆಗಮಿಸು ಗೆಳತಿ, ಮಿಂಚಿನ ಬೆಳಕಿನಲ್ಲಿ ಗುಡುಗು ಸದ್ಧಿಗೆ ಬೆದರಿದ ನಿನ್ನ ಮೊಗದವನ್ನು ನಾನು ನೋಡಬೇಕು, ಹೊಳೆವ ನಿನ್ನ ಕಣ್ಣುಗಳಲ್ಲಿ ಧೈರ್ಯವರಳುವ ಘಳಿಗೆಯನ್ನು ನಾ ನೋಡಬೇಕು,
ನನ್ನಾಸರೆಯಲ್ಲಿ ನೀನು ನಗುತಿರಬೇಕು, ಪಿಸುಮಾತಗಳನ್ನು ನೀನು ಆದಷ್ಟು ಗಟ್ಟಿಯಾಗಿ ಮಳೆಹನಿಗಳ ಸದ್ದಿಗೆ ಸೋಲಿಸುವಂತೆ ನೀ ನುಡಿಯುತಿರಬೇಕು, ಮಳೆಹನಿಗಳ ಸದ್ದು ನಮ್ಮ ಸವಿ ಸಲ್ಲಾಫದ ಸಂಭಾಷಣೆಗೆ ಕೊಂಚ ಅಡ್ಡಿಪಡಿಸಿದರೂ ನಾವು ಪ್ರೀತಿಯ ನುಡಿಗಳನ್ನು ಗಟ್ಟಿಯಾಗಿ ಪಿಸುಗುಟ್ಟೋಣ, ಪ್ರಿತಿಯ ಸುಖವನ್ನು ಆನಂದಿಸೋಣ, ಮಳೆ ಹನಿಗಳು ಆಗಲೇ ಒಂದೊಂದು ತೊಟ್ಟಿಕ್ಕುತಿವೆ, ಮಳೆ ಮುಗಿದು ಹೋಗುವುದರೊಳಗಾಗಿ ನೀ ಬಾ ಗೆಳತಿ..ನಿನ್ನ ನಗುಮೊಗದ ಸಿರಿಯ ದರ್ಶನ ನೀಡು..ಹರಿವ ಮಳೆ ನೀರಲ್ಲಿ ನಾನು ನೀನು ಕಾಲನ್ನು ಬೀಸುತ್ತಾ ಕೈ ಹಿಡಿದು ಜೊತೆಯಾಗಿ ಮೈಲುದ್ದ ಅಂದಿನಂತೆ ಸಾಗೋಣ, ಹರಿವ ನೀರನ್ನು ಇಬ್ಬರೂ ಒಬ್ಬರಿಗೊಬ್ಬರು ಎರಚುತ್ತಾ ಒಂದು ಘಳಿಗೆ ಆಟವಾಡಬೇಕು, ಜಗದೆಲ್ಲ ನೋವು ಮರೆಯಬೇಕು, ನೀರೆರೆಚಾಟದಲ್ಲಿ ನಾ ಮುಂದು ನೀ ಮುಂದು ಎನ್ನುತ್ತಾ ನಾವಿಬ್ಬರೂ ಕಾದಾಡಬೇಕು, ಆ ಕಾದಾಟದಲ್ಲಿ ನಾ ಗೆಲ್ಲುವವನಿದ್ದರೂ ಸೋಲುವೆ.. ನಿನ್ನ ಗೆಲುವು ನೋಡಿ ಸಂಭ್ರಮಿಸುವೆ ನೀ ಬೇಗನೇ ಆಮಿಸು ಒಲವೇ.. ನಿನ್ನ ನಗುಮೊಗದ ಸಿರಿಯ ಹೊತ್ತು ತಾ ಗೆಳತಿ, ಮಳೆಹನಿಗಳು ಮುಗಿದು ಹೋಗುವುದರೊಳಗಾಗಿ ಹರಿವ ನೀರು ಮುಗಿದುಹೋಗುವುದರೊಳಗಾಗಿ ನೀ ಬರುವುದನು ಮರೆಯದಿರು, ಕಾಗದದ ದೋಣಿಯನ್ನು ನಿನಗಾಗಿ ಆಗಲೇ ಸಿದ್ದಪಡಿಸಿ ತಂದಿದ್ದೇನೆ, ನೀನು ನಗುತ್ತಾ ಕಾಗದದ ದೋಣಿಯನ್ನು ಹರಿವ ನೀರಿನಲ್ಲಿ ತೇಲಿ ಬಿಟ್ಟು, ಜೊತೆಯಾಗಿ ಸಾಗಲಿ ಎಂದು ನೀನು ಪ್ರಾರ್ಥಿಸುವ ಸವಿ ಘಳಿಗೆಯನ್ನು ನಾನು ಕಣ್ತುಂಬಿಕೊಳ್ಳಬೇಕು, ಮೈಯೆಲ್ಲಾ ಒದ್ದೆಯಾದರೂ ಬೀಸುವ ತಣ್ಣನೆ ಗಾಳಿಯಲ್ಲಿ ತನುವೊಡ್ಡಿ ಮೈಯೊಣಗಿಕೊಳ್ಳುತ್ತಾ ತಾಸುಗಟ್ಟಲೇ ಹರಟೆ ಹೊಡೆಯತ್ತಾ ಸಾಗಬೇಕು, ಸಾಗುವಾಗ ನೀನು ನಾನು ಒಲವಗಾಥೆಯನು ದಾರಿಯುದ್ದಕ್ಕೂ ಗುನುಗಬೇಕು, ವರ್ಷಕಾಲದ ಸವಿಯ ಸಂಭ್ರಮಿಸಬೇಕು, ನಿನ್ನೊಂದಿಗೆ ನನ್ನ ಮನ ರಮಿಸಬೇಕು..ನೀ ಬರುವುದನು ಮರೆದಿರು ಗೆಳತಿ..ನೀ ಬಂದಾಗ ನೀಡಲು ತಂದಿರುವೆ ನಿನಗೆಂದು ಒಂದು ಚೆಲುವಾದ ಕೆಂಗುಲಾಬಿ.
“ಮಳೆ ಹನಿಗಳು ಮುಗಿದು ಹೋಗುವುದರೊಳಗಾಗಿ ನೀ ಆಗಮಿಸು
ಸುರಿವ ಹನಿಗಳಲಿ ನನ್ನೊಂದಿಗೆ ಜೊತೆಯಾಗಿ ಮನ ರಮಿಸು...”
ರಾಮಚಂದ್ರ ಸಾಗರ್