ಬಿಸಿಲುದಾರಿಯಲ್ಲಿ ನೆರಳನು ತಂದವನು, ನಾ ನಡೆವ ಹಾದಿಯಲ್ಲಿ ಕೈ ಹಿಡಿದು ನಗುತ ನಡೆದವನು, ದಣಿವೆನ್ನಿಸುವ ಸಮಯದಲ್ಲಿ ನಗುತ ಜಗದೆಲ್ಲ ಬವಣೆಗಳ ಹಂಗೇಕೆ ಎನ್ನುತ್ತಾ ನನ್ನೊಂದಿಗೆ ಸಾಗಿದ ಗೆಳೆಯಾ, ಪ್ರೀತಿಯ ಸಂದೇಶಗಳನ್ನು ಸದಾ ನಗುಮೊಗದಿಂದ ನೀಡುತ್ತಿದ್ದ ನೀನು ಇಂದು ನನಗೆ ನೆನಪಾದರೂ ನೀನು ನಿತ್ಯ ಅರಳಿ ನನ್ನೆದೆಯಲ್ಲಿ ಬಾಡದೇ ಉಳಿವ ಕುಸುಮ ನೀನು. ಪ್ರೀತಿಯ ಹಂದರದಲ್ಲಿ ಜಗವೆಲ್ಲ ಮರೆತು ನಮ್ಮ ಮನಗಳು ನಗುತಾ ಸಾಗುವ ಸವಿ ಘಳಿಗೆಯಲ್ಲಿ ನೀ ದೂರವಾದೆ, ನೀ ಪ್ರೀತಿಯ ಕನಸುಗಳನು ಉಳಿಸಿಯೇ ಹೋದೆ. ನೀ ಬರುವ ಘಳಿಗೆಗೆ ನಾ ಕಾಯುವುದು ಸಾದುವಲ್ಲ, ನೀ ಬಾರದಷ್ಟು ದೂರ ಕ್ರಮಿಸಿಯಾಗಿದೆ, ಆದರೆ ನಿನ್ನ ನೆನಪುಗಳ ಸವಿ ಭಾರವನ್ನು ನಾ ಇಳಿಸಲಾರಳಾದೆ, ಮನದಿಂದ ಹೊರ ನೂಕಲಾರಳಾದೆ, ಎಲ್ಲವೂ ನಿರ್ಮಲ ಪ್ರೀತಿಯ ಹಂದರದಲ್ಲಿ ಅರಳಿದ ಒಲವಿಗೆ ಸಾವಿಲ್ಲ, ನಿರ್ಮಲ ಪ್ರೇಮವು ಸದಾ ಉಕ್ಕುವ ಜಲದ ಸೆಲೆಯಂತೆ, ಅದು ನೀರಡಿಕೆ ಕರಿಗಿಸುವ ದಿವ್ಯಾ ಮೂಲವನ್ನು ಮನದ ದುಗುಡವನ್ನು ಮಾಯವಾಗಿಸುವ ಎಂದೂ ಮುಸುಕಾಗದ ನಿತ್ಯ ನಿರಂತ ಒಲವ ಸೆಲೆ ಗೆಳೆಯಾ. ಹಿಮಗಿರಿಯಲ್ಲಿ ಜಾರುವ ಹಿಮದ ರಾಶಿಯಂತೆ ಮೆತ್ತನೆ ಅರಳುವ ಅನುರಾದಲೆಗಳ ಜೊಂಪಲ್ಲಿ ನಗುತ ವಿರಮಿಸುವ ಆ ಘಳಿಗೆ ಮತ್ತೆ ಮತ್ತೆ ಕಾಡುತ್ತದೆ, ಬಿಸಿಲು ಧಗೆಯಲ್ಲು ಆ ಘಳಿಗೆಯನು ನೆನೆದರೆ ಮನಕ್ಕಂತೂ ತಣಿವು ನೀ ಇಲ್ಲದಿದ್ದರೂ ಜೊತೆಯಲ್ಲಿ, ಬೀಸುವ ಮರದೆಲೆಗಳ ಗಾನದಲ್ಲೂ ನೀ ನುಡಿವ ಗೀತೆಗಳ ಗುಣಗಾನದ ಮೊರೆತವನ್ನೇ ಆಲಿಸಿದಂತೆ ಕರ್ಣಗಳಿಗೇನೋ ತೃಪ್ತಿ, ಇರಲಿ ಸದಾ ಕಾಡುವ ನಿನ್ನ ನೆನಪು ನನ್ನ ಬಳಿ, ಇರಲೇಬೇಕೆಂಬ ಹಠವು ನನ್ನದು. ನಿನ್ನ ಧ್ಯಾನದಲ್ಲಿ ದಿನ ಕಳಿಯುವ ಮುನ್ನ ಮುಸ್ಸಂಜೆಯ ರಂಗಲ್ಲಿ ನೀ ಗುನುಗಿದ ಗೀತೆಯಂತೂ ನನಗೆ ಕಾಡುವುದು ನಿತ್ಯವಿಂದು ಸತ್ಯ ಗೆಳೆಯಾ. ಏನೇ ಆಗಲಿ ನೀನೊಂದು ಕಮರಿದ ಕನಸನ್ನು ಬಣ್ಣ ತುಂಬಿ ನಲಿಸುವ ಕಲೆಗಾರನಾಗಿದ್ದೆ, ರಂಗು ತುಂಬಿದ ಜಗದಲಿ ಒಲವ ಚಿತ್ತಾರ ಬಿಡಿಸುತ್ತಾ ಮನದ ಮನೆಯೆದುರು ಒಲವ ರಂಗೋಲಿ ನನ್ನ ಕೈಯಲ್ಲಿ ನಾ ಬಿಡಿಸುತ್ತಿದ್ದೆ, ನಾ ನಿನ್ನಲಿ ವಶವಾಗಿ, ಎಲ್ಲವೂ ನಿನದೇ ಮಾಯೇ. ಒಲವ ಸೆಲೆಯ ಕೃಪೆ. ನದಿ ದಂಡೆಯಲ್ಲಿ ಅರಳಿ ನಗುವ ಹೂಗಳಿಗೂ ನದಿ ಬತ್ತಿದಾಗ ನಗುವು ಉಳಿವುದೇ..? ಸರೋವರ ಸಾವರಿಸಿ ಬೀಸುವ ಗಾಳಿಯು, ಸರೋವರದಲ್ಲಿ ಬಿಸಿ ಧಗೆ ಉಕ್ಕಿದರೆ ತಣಿವುದೇನು..? ತಂಗಾಳಿಯು ಉಳಿವುದೇನು..? ಹಾಗೇಯೇ ನೀ ಇಲ್ಲದೇ ನಾನು ಉಳಿವೆಯೇನು..?
ಏನೇ ಆಗಲಿ ನಿನಗೆ ನಾ ಕೊಟ್ಟ ಮಾತನ್ನು ಉಳಿಸಲೇಬೇಕಿದೆ, ಜಗದೆಲ್ಲ ಬವಣೆಗಳಿಗೆ ನಾನು ಬೆದರದೇ ನಗುತ ಸಾಗುವುದೇ ಅದು ನಿನಗೆ ನಾನು ಕೊಡುವ ಗೌರವ, ನಿನ್ನೊಲವ ಆರಾಧನೆಯ ಸಾರ್ಥಕತೆಯು ಗೆಳೆಯಾ. ಒಂದು ಹನಿ ಕಣ್ಣೀರು ಜಾರಿದರೆ ಅದುವೇ ಒಲವಿಗೆ ಅಳಿವು ಎಂದು ನೀ ನುಡಿದ ನುಡಿಗೆ ನಾ ಎಂದಿಗೂ ಬದ್ಧ, ಒಲವ ಪಾರಿವಾಳ ಮೌನವಾದರೂ ನಿನ್ನ ಪ್ರೀತಿ ತುಂಬಿದ ಮಾತುಗಳಲ್ಲಿ ಲೀನವಾದ ಈ ಮನಸು ಎಂದಿಗೂ ಧೈರ್ಯದಿಂದ ಜಗದ ನೋವುಗಳಿಗೆ ಬೆದರದೇ, ಜೀವನವನ್ನು ಗೆಲ್ಲುತ್ತಾ ನಾ ಸಾಗುತ್ತೇನೆ, ನಿನಗೆ ಕೊಟ್ಟ ವಚನವನ್ನು ಉಳಿಸಿಕೊಳ್ಳುವೆ ಗೆಳೆಯಾ..ನಿನ್ನ ಸಾವು ನಮ್ಮಿಬ್ಬರನ್ನು ದೂರಾಗಿಸಿದೆ, ವಿಧಿ ಮಾಡಿದ ಮೋಸವೇ ಇದು, ಏನೇ ಆಗಲಿ ನೀ ಕೊಟ್ಟ ಪ್ರೀತಿಯ ಸಂದೇಶ ಸದಾ ಜೊತೆಯಿದೆ, ಸುರಿವ ಬಿರುಮಳೆಗೂ ಕೊಚ್ಚಿ ಹೋಗದಷ್ಟು, ಗುಡುಗು ಮಿಂಚಿಗೂ ಬೆದರದಷ್ಟು ಗಟ್ಟಿಯದು, ಕಪ್ಪಿರುಳು ಸದ್ದಿನ ಭಯಕೂ ಅಂಜದೇ ದಾರಿತೋರಿಸುವ ದೀಪವದು, ಹಾಗಿರುವಾಗ ನಾನೇಕೆ ಒಂಟಿಯೆನ್ನಲಿ.. ಕಂಡಿತಾ ನಾ ಇನ್ನೆಂದಿಗೂ ರೋಧಿಸುವುದಿಲ್ಲ, ಒಂದು ಹನಿ ಕಣ್ಣೀರನ್ನು ಸುರಿಸುವುದಿಲ್ಲ ಗೆಳೆಯಾ..
“ನನ್ನ ಜೊತೆಯಲಿ ನೀನಿರದ ಜಗದಲ್ಲಿ ಒಂಟಿಯಲ್ಲ ನಾನು.. ನಿನ್ನ ನೆನಪುಗಳ ಜೊತೆಯಲ್ಲಿ ರಮಿಸುವ ನಿನ್ನ ಗೆಳತಿ ನಾನು..”
ರಾಮಚಂದ್ರ ಸಾಗರ್