Showing posts with label ಕವಿತೆಗಳು. Show all posts
Showing posts with label ಕವಿತೆಗಳು. Show all posts

Sunday, 15 June 2025

ಪ್ರೀತಿಯ ಮಳೆ

 

ಗೆಳೆಯಾ..

ಪ್ರೀತಿಯ ಮಳೆಯಾಗುತಿದೆ ನನ್ನೆದೆಯ ಗೂಡಲಿ

ಕಿವಿಯಿಟ್ಟು ಕೇಳು ಬಾ  ಒಲವಿನ ಆಲಾಪದಲಿ

ರಂಗು ತುಂಬಿದ ಸವಿ ಅನುರಾಗದ ಪದಗಳಲಿ

ಪ್ರೇಮದ ಪದಗಳೇ ದನಿಸುತಿವೆ ನಿನ್ನದೇ ನೆನಪಲಿ


ಆನಂದದ ಆನನಕೆ ನೀನೆ ಕಾರಣವಾಗಿರುವೆ

ಸಡಗರದ ಬಾಳಿಗೆ ನೀನೆ ಭೂಷಣವಾಗಿರುವೆ

ಸಂಭ್ರಮದ ಹಾದಿಗೆ ನೀನೆ ಸರದಾರನಾಗಿರುವೆ

ಸರಿಹಗಲು ಕನಸಲು ನೀನೆ ಸರಕಾಗಿರುವೆ


ಅನುರಾಗದ ಅಲೆಯಲಿ ನೀ ಕಡಲಾಗಿರಲು 

ಅನುತಾಪದ ಪ್ರೇಮದಲಿ ನೀ ಬೆಳಕಾಗಿರಲು

ಅನುಪಮ ಪ್ರೀತಿಯಲಿ ನಾ ಬೇಡುತಿರಲು

ಅನುಮಾನಿಸಿ ನನ್ನೊಲವು ನೀ ದೂರಾಗದಿರು 


ನಿನ್ನೊಲವು ಸಂಕೋಲೆಯಾಗಿದೆ ಹೃದಯಕೆ

ನಿನ್ನದೇ ಸವಿನಯ ಸಾನಿಧ್ಯ ಬೇಕಿದೆ ಬಾಳಿಗೆ

ಸಹನೆಯ ಸಹವಾಸವು ಸಾಕಾಗಿದೆ ಮನಕೆ

ನೀನೆನ್ನುವ ಸಹೃದಯ ವರವಾಗಲಿ ಹಾದಿಗೆ


ಮೋಹದ ಮಳೆಯಲಿ ಒಂದಾಗಿ ರಮಿಸೋಣ

ಆಹ್ಲಾದದ ಮನೆಯಲಿ ಜೊತೆಯಾಗಿ ನಲಿಯೋಣ

ಕಾತರಿಸುವ ಕನಸುಗಳಿಗೆ ಉತ್ತರವಾಗು ಬಾ

ಒಲವಿನ ಆಸ್ಥಾನಕೆ ಸದಾ ದೊರೆಯಾಗು ಬಾ


ರಚನೆ: ರಾಮಚಂದ್ರ ಸಾಗರ್

Tuesday, 7 January 2025

ಮರೆಯಾದ ಸಮಾಜಮುಖಿ ಚಿಂತನೆಯ ಮಹಾಯೋಗಿ

 

ಶ್ರೀಯುತ ಡಾ. ನಾ ಡಿಸೋಜ ಅವರು ಕನ್ನಡ ನಾಡು ಕಂಡಂತ ಅಪರೂಪದ ಪ್ರತಿಭೆ. ವಿಶೇಷವಾಗಿ ಮಲೆನಾಡು ಭಾಗದ ಸಮಸ್ಯೆಗಳ ಬಗ್ಗೆ ಸದಾ ಧ್ವನಿಯಾದವರು. ನಾಡು ನುಡಿ ವಿಚಾರದಲ್ಲಿ ಯಾರನ್ನೂ ಬಿಡದೆ ಚಾಟಿ ಬೀಸಿದವರು. ಸದಾ ಬಡವರ, ನೊಂದವರ ಬಗ್ಗೆ ದನಿಯಾಗಿ ತಮ್ಮ ಸಾಹಿತ್ಯ ಬರವಣಿಗೆಯ ಮೂಲಕ ಹೋರಾಟದ ಸೆಲೆಯಾದವರು. ಗೌರವಾನ್ವಿತರು ತಮ್ಮ ಅಮೂಲ್ಯ ಬದುಕಿನುದ್ದಕ್ಕೂ ನಮ್ಮ ನಾಡು ನುಡಿಗೆ ಶ್ರೇಷ್ಠತೆಯ ಶ್ರೀಕಾರವಾದರು. ಸರಳತೆಯಲ್ಲೇ ಬದುಕಿಗೆ ಮೆರುಗು ರೂಪಿಸಿಕೊಂಡ ಮಹಾನ್‌ ವ್ಯಕ್ತಿತ್ವದವರು. ದಿನಾಂಕ: 05.01.2025 ರಂದು ವಯೋಸಹಜ ಮರಣ ಹೊಂದಿ ನಮ್ಮನ್ನು ಅಗಲಿದ್ದಾರೆ. ಆದರೆ ಅವರ ಸಾಹಿತ್ಯ ಜ್ಞಾನದ ಪ್ರಕರತೆಯು ಎಂದಿಗೂ ಮುಗಿಯದ ನಿತ್ಯ ದೀವಿಗೆ.

ಗೌರವಾನ್ವಿತರು ನನ್ನ ಎರಡು ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದು ಹಾರೈಸಿದವರು. ನನ್ನ ಮೊದಲ ಕವನ ಸಂಕಲನ ʼಬುದ್ದೀಜೀವಿʼ ಯನ್ನು ಸ್ವತಃ ಬಿಡುಗಡೆಗೊಳಿಸಿ ಹಾರೈಸಿದವರು. ಆ ದಿನ ಸದರಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಸಾಗರ ಇವರು ಹಮ್ಮಿಕೊಂಡು ನನಗೆ ಹಾರೈಸಿದರು. ನಾನು ಅನೇಕ ಬಾರಿ ಇವರ ಮನೆಗೆ ಹೋದಾಗ ಅಕ್ಕರೆಯಿಂದ ಸ್ವಾಗತಿಸಿ ಸಮಾಲೋಚಿಸುತ್ತಿದ್ದರು. ಎಷ್ಟೇ ಹಿರಿತನ ಸಾಹಿತ್ಯ ಸಾಧನೆಯಲ್ಲಿದ್ದರು ಎಂದಿಗೂ ತಮ್ಮ ಸಿರಿತನವನ್ನು ಸರಳತೆಯಲ್ಲೇ ತೋರಿಸಿ ಸಮಾಜಕ್ಕೆ ಮಾದರಿಯಾದವರು. ಇಂದು ದಿನಾಂಕ:07.01.2025 ರಂದು ಅವರ ಪ್ರಾರ್ಥಿವ ಶರೀರದ ದರ್ಶನವನ್ನು ಸಾಗರದ ಗಾಂಧೀ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಸರ್ಕಾರ ವ್ಯವಸ್ಥೆ ಮಾಡಿರುತ್ತದೆ.

 

ಶ್ರೀಯುತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಈ ಕವಿತೆ ಬರೆದಿರುವೆ;

 

ನಿಗರ್ವ ಲೋಕದ ತಾರೆ

 

ಸರಳ ಸಜ್ಜನಿಕೆಯ ಸಾಕ್ಷಾತ್ಕಾರ

ಸಚ್ಚರಿತ ಗುಣಗಣ ಮಹಾಸಾಗರ

ಮಲೆನಾಡ ಬವಣೆಗೆ ಹೋರಾಟದ ಸಾರಥಿ

ಅಕ್ಷರಗಳ ಯಾತ್ರೆಯಲಿ ಸಮಾಜಕೆ ದೀವಿಗೆ

 

ಸಿರಿತನ ನಿಸ್ವಾರ್ಥತೆಯಲಿ ವಿಜೃಂಭಿಸಿದವರು

ನಿರ್ವಿವಾದ ಮಂದಿರದ ದೈವವಾದವರು

ಸಹೃದಯಗಳ ಸ್ನೇಹಕೆ ಸೇತುವೆಯಾದವರು

ಪರಿಸರ ಆರಾಧನೆಯ ಯೋಗಿಯಾದವರು

 

ಆಡಂಬರದ ಬದುಕು ತ್ಯಜಿಸಿದ ತ್ಯಾಗಿಯಾದವರು

ನಿಷ್ಕಾಮ ನಡೆಯಲಿ ಸಂಭ್ರಮವಾದವರು

ಭೀಭತ್ಸ ಸಮಾಜದ ಶುದ್ಧಿಯಲಿ ಯೋಧರಾದವರು

ನಾಡು ನುಡಿ ವಿಚಾರದಲಿ ಚಾಟಿ ಬೀಸಿದವರು

 

ಸುಯೋಗದ ಶಿಖರವನು ಏರಿದವರು

ಸುಜ್ಞಾನದ ಕನ್ನಡ ದೀವಿಗೆಯಾದವರು

ಸಹಿಷ್ಣುತೆಯ ಧೂಪದಾರತಿ ಬೆಳಗಿದವರು

ಸಂಪನ್ನ ಸದ್ಗತಿಯ ಅಲೆಯಾದವರು

 

ಘನಸಾರ ಸಂದೇಶಗಳನು ಪಠಿಸಿದವರು

ಗೌರವದ ಸಮಾಜಕೆ ಮುನ್ನುಡಿಯಾದವರು

ಬರವಣಿಗೆಯಲಿ ಮಕ್ಕಳ ಮನ ಹೂವಾಗಿಸಿದವರು

ಸೀಜೇನಂತೆ ಮುದ್ದು ಮನಗಳಿಗೆ ಪ್ರಿಯವಾದವರು

 

ನಿಗರ್ವದ ಲೋಕದಲಿ ನಿತ್ಯ ನೆಲೆಯಾದವು

ನಿರ್ವಾಣದ ಬಾಳು ಸಿದ್ಧಿಸಿಕೊಂಡವರು

ಬೆಳಗುವ ದೀಪದಲಿ ಮುಗಿಯದ ತೈಲವಾದವರು

ಕನ್ನಡ ಸಾಹಿತ್ಯದಲಿ ನಿತ್ಯ ಪ್ರಕರ ಕಿರಣವಾದವರು

 

ದೇಹದಿಂದ ಮರೆಯಾದರು ಜ್ಞಾನದ

ಕಡಲು ಸೃಜಿಸಿ ನಕ್ಕವರು

ಇವರೇ ನಮ್ಮೆಲ್ಲರ ಮೆಚ್ಚಿನ ನಾಡಿ

ಘನ ಸಾರ ಸಾಹಿತ್ಯದಲಿ ಆಕ್ಷಯವಾದವರು

 

ರಚನೆ: ರಾಮಚಂದ್ರ ಸಾಗರ್‌

 



Thursday, 31 October 2024

ದೀಪಾವಳಿ...

 

ಎಲ್ಲಾ ಸಹೋದರ ಬಂಧುಗಳಿಗೂ ದೀಪಾವಳಿಯ ಶುಭಾಶಯಗಳು.

"ಬೆಳಕಿನ ಹಬ್ಬ ಎಲ್ಲರ ಬದುಕನ್ನು ಬೆಳಗಲಿ, ಅಂಧಕಾರ ಕರಗಿ ಹರುಷದ ದೀಪದ ಬೆಳಕಲ್ಲಿ ಸಂತಸ ಮೂಡಲಿ,  ಎಲ್ಲರ ಬದುಕಲ್ಲಿ ಕನುಸಗಳು ನನಸಾಗಿ ಒಲುಮೆಯ ಜಗವಾಗಲಿ" ಎನ್ನುವ ಆಶಯದೊಂದಿಗೆ ನಾ ಬರೆದ "ದೀಪಾವಳಿ" ಕವಿತೆಯನ್ನು ಪೋಸ್ಟ್‌ ಮಾಡುತ್ತಿದ್ದೇನೆ. ಎಲ್ಲರಿಗೂ ಮತ್ತೊಮ್ಮೆ ಬೆಳಕಿನ ಹಬ್ಬದ ಶುಭಾಶಯಗಳು.

ದೀಪಾವಳಿ...

ದಿಗಂತದ ತುದಿಯಲಿ

ಚಿಮ್ಮಿದಾ ಬೆಳಕಲಿ

ನವ್ಯತೆಯ ಭಾವದಲಿ

ಭವ್ಯತೆಯ ದೀಪಾವಳಿ....

ಎಲ್ಲರೆದೆಯ ಬೆಸುಗೆಯಲ್ಲಿ

ಸಹೋದರತ್ವ ಬಂಧದಲ್ಲಿ

ದೀನತೆಯ ಅಂತ್ಯದಲ್ಲಿ

ಹರುಷದಾ ದೀಪಾವಳಿ...

ಶ್ರಮದಾನದ ಕಾಯದಲ್ಲಿ

ಶ್ರಮದ ಹನಿಗಳ ನಗುವಿನಲ್ಲಿ

ನೊಂದ ದನಿಯ ಗೆಲುವಿನಲ್ಲಿ

ಚೈತನ್ಯದ ದೀಪಾವಳಿ..

ಬಡತನದ ಅಳಿವಿನಲ್ಲಿ

ಅಸಹಾಯಕರ ನಗುವಿನಲ್ಲಿ

ನಿಸ್ವರ‍್ಥ ಮನಗಳ ಅಕ್ಷಯದಲಿ

ಅಕ್ಷಯ ದೀಪಾವಳಿ...

ಜ್ಞಾನ ದೀವಟಿಗೆ ಬೆಳಗಿನಲ್ಲಿ

ಅಜ್ಞಾನ ಅಂಧಕಾರಗಳ ದಹನದಲ್ಲಿ

ಹೊಸ ಗುರಿಗಳ ಕನಸಿನಲ್ಲಿ

ಜ್ಞಾನದ ದೀಪಾವಳಿ...

ರಾಮಚಂದ್ರ ಸಾಗರ್

Sunday, 21 January 2024

ಶ್ರೀ ರಾಮ...

 

ಅಯೋಧ್ಯೆಯ ರಂಗದಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ಮುಹೂರ್ತದ ಶುಭದ ಘಳಿಗೆಗೆ ಧನ್ಯತೆಯಲ್ಲಿ ಕೈ ಮುಗಿದು ಪ್ರಾರ್ಥಿಸುತ್ತಾ ಈ ಅವಿಸ್ಮರಣೀಯ ಪಾವನ ಕಾರ್ಯವು ನಾಡಿಗೆ ಸಕಲ ಹೆಮ್ಮೆಯ ಸಂಗತಿಯಾಗಿದೆ.  ಸತ್ಯದ ಪಥದಲಿ ಮಿಥ್ಯದ ಜಗವ ಸೋಲಿಸಿದ ನನ್ನ ಮನದ ದೇವ ಶ್ರೀ ರಾಮನ ನೆನೆಯುತ್ತಾ ಈ ಕ್ಷಣದಲ್ಲಿ “ಶ್ರೀ ರಾಮ” ಕವಿತೆ ಬರೆದಿದ್ದೇನೆ. ಎಲ್ಲರೂ ಒಂದಾಗಿ ಶ್ರೀ ರಾಮನ ಪ್ರಾರ್ಥಿಸೋಣ ಬನ್ನಿ. ನಿಜ ರಾಮ ರಾಜ್ಯ ನಮ್ಮೆಲ್ಲರ ಗುರಿಯಾಗಲಿ. ಪ್ರೀತಿ, ಶಾಂತಿ, ಸ್ನೇಹ, ಸೌಹಾರ್ದತೆ, ಸಹಿಷ್ಣುತೆಗಳು ಎಲ್ಲರೆದೆಯ ಉಸಿರಾಗಲಿ. ಎಂದೆAದಿಗೂ ಸತ್ಯದ ಗುಡಿಯಲಿ ಆರಾಧನೆಗೆ ಅರ್ಹನು ನಮ್ಮೆಲ್ಲರ ಶ್ರೀ ರಾಮನೇ..


ಶ್ರೀ ರಾಮ...


ಸತ್ಯದ ಪಥದಲಿ ಜಗವ ಜಯಿಸಿದ ವೀರನೇ

ಸಭ್ಯತೆಯ ನಡೆಯಲಿ ಉದಯಿಸಿದ ಶೂರನೇ 

ಸಚ್ಚರಿತ ಮನದಲಿ ಸಂಭ್ರಮಿಸಿದ ಧೀರನೇ

ಸಜ್ಜನಿಕೆಯ ಸಿರಿತನದಲಿ ದೊರೆಯಾದ ದೇವನೇ 

ಶ್ರೀ ರಾಮ..


ಸದ್ಗತಿಯ ಮನಗಳಲಿ ಮಂದಿರವಾದವನೇ

ಸತ್ಕಾರದ ಭಾವನೆಗಳಲಿ ದೇವರಾದವನೇ

ಸಂಕಲ್ಪ ಕಾಯಕದಿ ಜಗಕೆ ಬೆಳಕಾದವನೇ

ಸಂಯಮದ ಸತ್ರದಲಿ ಸುಯೋಗವಾದವನೇ

ಶ್ರೀ ರಾಮ..


ಸದ್ಗುಣಗಳ ಗಗನದಲಿ ಶುಭದ ಮಳೆಯಾದವನೇ

ಸಂಪನ್ನ ಸತ್ವಗಳಲಿ ಧರಿತ್ರಿಯಲಿ ಹೆಸರಾದವನೇ

ಸಂಭಾವಿತರ ಸಖ್ಯದಲಿ ಸನ್ಮಾರ್ಗ ತೋರಿದವನೇ

ಸವಿನಯ ಪರಿವಾರದಲಿ ಸೌಜನ್ಯ ಮೆರೆದವನೇ

ಶ್ರೀ ರಾಮ..


ಸಹನೆಯಲಿ ಸಫಲತೆಯ ಸಂಕೀರ್ತನೆಯಾದವನೇ

ಸಹಿಷ್ಣುತೆಯ ಗುಣದಲಿ ಜಗಕೆ ಮುನ್ನುಡಿಯಾದವನೇ

ಶಾಂತಿ ದೇಗುಲದ ಶಾಂತೆಯ ಸಹೋದರನೇ

ಶಾಂತ ಸೌಧದ ಜಗಕೆ ಉಸಿರಾದವನೇ

ಶ್ರೀ ರಾಮ...

ರಚನೆ: ರಾಮಚಂದ್ರ ಸಾಗರ್


Monday, 15 January 2024

ಸಂಕ್ರಮಣವಾಗಲಿ..

 

ನನ್ನೆಲ್ಲಾ ಮುಖಪುಟದ ಸಹೋದರ ಬಂಧುಗಳಿಗೂ ಸಂಕ್ರಾಂತಿಯ ಶುಭಾಶಯಗಳು..ಈ ರ‍್ಷದ ಮೊದಲ ಹಬ್ಬ ಸಂಕ್ರಾಂತಿಯು ನಿಮ್ಮೆಲ್ಲರ ಬಾಳಲಿ ಪ್ರಗತಿಯನ್ನು ಸಿಂಚಿಸಿ, ಹೊಸತನವನ್ನು ಮೂಡಿಸಲೆಂದು ದೇವರಲ್ಲಿ ಪ್ರರ‍್ಥಿಸುತ್ತಾ...."ಸಂಕ್ರಮಣವಾಗಲಿ "ಕವಿತೆ ಪೋಸ್ಟ್ ಮಾಡುತ್ತಿರುವೆ..ಎಲ್ಲರಿಗೂ ಮತ್ತೊಮ್ಮೆ ಸಂಕ್ರಾಂತಿಯ ಶುಭಾಶಯಗಳು..

ಸಂಕ್ರಮಣವಾಗಲಿ..

ಎಳ್ಳು ಎಂಬ ಸ್ನೇಹವು
ಬೆಲ್ಲ ಎಂಬ ಪ್ರೀತಿಯು
ಮನ ಮನಗಳ ಬೆಸೆಯಲಿ
ಸಹೋದರತೆಯ ಬಂಧದಲಿ
ಈ ಸಮಯದೀ
ಸೌಹರ‍್ದ ಸಂಕ್ರಮಣವು ಸಂಭ್ರಮಿಸಲಿ..

ವಿರಸದ ಮನಸು ಮರೆಯಾಗಲಿ
ಕಹಿ ಘಳಿಗೆಯು ಕಾಡದಿರಲಿ
ವಿಮೋಹ ದುರಾಸೆ ದೂರಾಗಲಿ
ಈ ಸಮಯದೀ
ಸಂಪನ್ನ ಮನಗಳ ಸಂಕ್ರಮಣವಾಗಲಿ..

ದ್ವೇಷ ಅಸೂಯೆಗಳು ದೂರಾಗಲಿ
ಸ್ನೇಹ ಎಲ್ಲರೆದೆಯ ಗೂಡಾಗಲಿ
ಸಖ್ಯ ಸಮಾಗಮ ಚಿರಾಯುವಾಗಲಿ
ಈ ಸುಸಮಯದೀ
ಗೆಳೆತನದ ಸಂಕ್ರಮಣವಾಗಲಿ..

ವಿಘ್ನ ಬದುಕಲಿ ಬಾರದಿರಲಿ
ಸವೆ ಬಾಳಲಿ ಕಾಡದಿರಲಿ
ಬವಣೆ ಯಾರನು ಮುಟ್ಟದಿರಲಿ
ರೋಧನೆ ಯಾರಿಗೂ ತಟ್ಟದಿರಲಿ
ಈ ಸಮಯದೀ
ಸಂತಸದ ಸಂಕ್ರಮಣವಾಗಲಿ..

ಬಾಂಧವ್ಯಗಳು ಚಿಗುರೊಡೆಯಲಿ
ಬಂಧುರ ಜಗದ ವಿಕ್ರಮವಾಗಲಿ
ಇನನ ಹೊಳಪಿನಲಿ
ವಸುಂಧರೆಯ ಮಡಿಲು
ಈ ಸುಸಮಯದೀ
ಪ್ರೀತಿಯ ಸಂಕ್ರಮಣವಾಗಲಿ..

ರಚನೆ: ರಾಮಚಂದ್ರ ಸಾಗರ್

Friday, 14 April 2023

ಮಹಾನಾಯಕ

 


ದಿವಸ ಜಗತ್ತು ಕಂಡ ಮಹಾನ್ ಮಾನವತಾವಾದಿ, ಸುಜ್ಞಾನದ ಸಾಗರ, ಸಮಾಜಮುಖಿ ಚಿಂತನೆಯ ಹರಿಕಾರ, ಜ್ಷಾನದ ಬೆಳಕಿನ ಸೂರ್ಯ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತೋತ್ಸವ. ಸುದಿನ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗಾಗಿ ಧಾರೆಯೆರೆದ ಜ್ಞಾನದ ಬೆಳಕನ್ನು ಸಮಾಜದ ಸರ್ವತೋಮುಖ ಶ್ರೇಯಕ್ಕಾಗಿ ನಿತ್ಯವೂ ಸಶಕ್ತವಾಗಿ ಬಳಸಿಕೊಳ್ಳಲು ಪಣತೊಡುತ್ತೇವೆ ಎನ್ನುವ ಆಶಯದೊಂದಿಗೆ ಎಲ್ಲರಿಗೂ ಶ್ರೀಯುತರ 132ನೇ ಜಯಂತೋತ್ಸವದ ಶುಭಾಶಯಗಳನ್ನು ಕೋರುತ್ತಾ ನಾ ಬರೆದ "ಮಹಾನಾಯಕ" ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ..

ವಂದನೆಗಳೊಂದಿಗೆ...

 

ಮಹಾನಾಯಕ

 

ಜಾತಿ ಧರ್ಮಗಳ ಸಂಕೋಲೆಯನು

ವಿಮುಕ್ತಿಗೊಳಿಸಿದ ಮಹಾನಾಯಕನು

ವರ್ಣ ದ್ವೇಷಗಳ ಜ್ವಾಲೆಯನು

ಆರಿಸಿದ ದಿವ್ಯ ಯೋಗಿಯು..

 

ಸಂವಿಧಾನ ರಚಿಸಿದ ಶಿಲ್ಪಿಯು

ಭವ್ಯ ದೇಶ ಬೆಳಗಿದ ಕಿಡಿಯು

ದೀನ ದಲಿತರ ದೀವಟಿಗೆಯು

ಶ್ರಮಿಕ ಕಾಯಕೆ ಸ್ಪೂರ್ತಿಯು..

 

ಶಿಕ್ಷಣ ಜ್ಞಾನವು ಬೆಳಕೆಂದರು

ಬವಣೆಗಳ ಪರಿಹರಿಸಿಕೊಳ್ಳಲು

ಸಂಘಟನೆಯೆ ಪರಿಹಾರವೆಂದರು

ಒಂದಾಗಿ ನಡೆವುದೆ ಬಾಳೆಂದರು..

 

ಮಾನವೀಯತೆ ಸಹಬಾಳ್ವೆ

ಪ್ರೀತಿ ವಿಶ್ವಾಸಗಳನು ಆರಾಧಿಸೆಂದರು

ಬೇದವೆಣಿಸದ ಕುಲಕೇಳದ ನಾಡು

ಎಲ್ಲರೆದೆಯ ಗುರಿಯಾಗಲೆಂದರು...

 

ದಾರಿದ್ರ್ಯ ಬಡತನ ಕೊನೆಯಾಗಿಸಲು

ಜೀವಮಾನವನು ಸವೆಸಿದರು

ಜೀವದುಸಿರಿನ ಕೊನೆವರೆಗು

ಬುದ್ಧ ನುಡಿಯನು ನುಡಿದವರು..

 

ಜಗದ ಇತಿಹಾಸ ಪುಟದಲಿ

ಪದಗಳಿಗೆ ಸೀಮಿತಗೊಳ್ಳದ ಮಹಾನಾಯಕನು

ನಮ್ಮೆಲ್ಲರ ಹೃದಯದಲ್ಲಿ

ನಿತ್ಯ ಬೆಳಗುವ ದೇವನು...


ರಚನೆ: ರಾಮಚಂದ್ರ ಸಾಗರ್


Wednesday, 22 March 2023

ಯುಗಾದಿ..

 

ಎಲ್ಲಾ ಸಹೋದರ ಬಂಧುಗಳಿಗೂ ಯುಗಾದಿಯ  ಶುಭಾಶಯಗಳು. ಚಂದ್ರಮಾನ ಯುಗಾದಿಯು ಎಲ್ಲರ ಬಾಳಲ್ಲೂ ಆರೋಗ್ಯ, ನಗು, ಸಂಪತ್ತು, ಪ್ರೀತಿ, ಸ್ನೇಹ, ಸಹಬಾಳ್ವೆಯನ್ನು ಕರುಣಿಸಲಿ..

ಸಮಾಜ  ಎನ್ನುವುದು ಒಂದು ಸುಂದರ ಹೂಗಿಡ. ಆ ಗಿಡಕ್ಕೆ ಹಾನಿಮಾಡುವ ಎಲ್ಲಾ ಬಗೆಯ ಕೀಟಗಳು, ರೋಗಗಳು, ದುಷ್ಟ, ವಿಕೃತ ಮನಸ್ಸಗಳು ಇನ್ನು ಮುಂಬರುವ ದಿನಗಳಲ್ಲಿ ಮರೆಯಾಗಲಿ ಆ ಹೂಗಿಡವು ಚೆಲುವನ್ನು ಕಂಗೊಳಿಸುತ್ತಾ ಸುಂದರವಾದ ಚೆಲುವನ್ನು ಬೀರುತ್ತಾ ಸಮೃದ್ಧ ಹಾಗೂ ಸಂಪ್ರೀತಿಯ ಸಮಾಜವು ನಮ್ಮೆಲ್ಲರದಾಗಲಿ ಮುಂಬರುವ ವರ್ಷದುದ್ದಕ್ಕೂ ಎಲ್ಲರ ಕಣ್ಣಲ್ಲೂ ಸ್ನೇಹ, ಸಹಬಾಳ್ವೆ, ಪ್ರೀತಿ, ವಿಶ್ವಾಸಗಳು ಸದಾ ಅರಳುತ್ತಾ ಅಲೆಯಾಗಿ  ನೆಲೆಯಾಗಲಿ ಆದಷ್ಟು ಬೇಗನೇ ಈಗ ಕೂಡಿ ಬಂದಿರುವ ಸಕಾಲದಲ್ಲಿ ವಿಕೃತ ಮನಸ್ಸುಗಳು ದಹನವಾಗಲಿ ಎಂದು ಆಶಿಸಿ ಯುಗಾದಿ ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ...ಎಲ್ಲರಿಗು ಯುಗಾದಿಯ ಹೊಸ ಹರುಷದ ಸ್ವಾಗತವನ್ನು ಕೋರುತ್ತಾ ಮತ್ತೊಮ್ಮೆ ಎಲ್ಲಾ ಸಚ್ಚರಿತ ಮನಸ್ಸುಗಳಿಗೆ ಶುಭಾಶಯಗಳು..

ಯುಗಾದಿ..

ಕಹಿಯ ಬವಣೆ ಕರಗಲು
ಸಿಹಿಯ ಬದಕು ಅರಳಲು
ಮನ ಮನಗಳಲಿ ಯುಗಾದಿ
ಹಚ್ಚಬೇಕಿದೆ ಹೊಸ ದೀವಟಿ..

ಚೈತ್ರಮಾಸದ ಹೊಸದಿನ
ಕರೆತರಲಿ ಹೊಸತನ
ಎಲ್ಲರೆದೆಯ ಬೆಳಗಲು
ಉದಯಿಸಲಿ ಬಂಧುತ್ವ...

ರವಿ ಚಂದ್ರರ ಗತಿಯಲ್ಲಿ
ಬಾನು ಭುವಿಯ ಪರಿಧಿಯಲ್ಲಿ
ಬದಲಾಗುವ ಘಳಿಗೆಯಲ್ಲಿ
ಮರೆಯಾಗಲಿ ಮತ್ಸರ
ಯುಗಾದಿ ತರಲಿ ಸಂತಸ ...

ಅರೆ ನಿಮಿಷವಾದರು
ಅನ್ಯರ ಮನ ನೋಯಿಸದಿರು
ಕಹಿಯ ಮನಸು ದಹಿಸಿ
ಸಿಹಿಯ ಮನಸು ಅರಳಿಸಿ
ಹರುಷದ ಗೂಡಾಗು..

 

ಹರಕುಬಾಯಿ ಮೂಕವಾಗಲಿ

ವಿಕೃತ ಮನಸ್ಸು ದಹನವಾಗಲಿ

ಸಜ್ಜನನು ನಾಯಕನಾಗಲಿ

ಸಹಿಷ್ಣುತೆ ಮೆರೆದಾಡಲಿ..

 

ವರುಷದ ಆಯುಷ್ಯ
ಕರಗದಿರಲಿ ವ್ಯರ್ಥ
ಅಂತ್ಯವಾಗುವ ಮುನ್ನ
ಬೆಳಗುವ ದೀಪವಾಗು
ಸಿಹಿಯಾದಿಯಾಗಲಿ ತನು ಮನ...

ರಚನೆ: ರಾಮಚಂದ್ರ ಸಾಗರ್


Sunday, 12 June 2022

ಜೇನಿನ ಹೂಮಳೆ


ಗೆಳೆಯಾ ..

ನನ್ನೆದೆಯಲಿ ಬಿಡುವಿರದೆ ಸುರಿದಿದೆ

ನಿನ್ನೊಲವಿನ ಸವಿಜೇನಿನ ಹೂಮಳೆ

ಅನುರಾಗದ ಜಗದಲಿ ಬೀಸುತಿದೆ

ನೀನೆನ್ನುವ ಪ್ರೀತಿಯ ಅತಿಶಯವೆ


ಸೌರಭದ ತಂಗಾಳಿಯಲಿ ಕಾಡಿದೆ

ಜೊತೆಯಾಗಿ ಸಾಗುವ ಬಯಕೆ

ಶಮನವಾಗದ ಕನಸಲಿ ಬೇಡಿದೆ

ನೀನೆನ್ನುವ ಚುಂಬಕ ದೊರೆಯ


ಪ್ರೇಮಕಾಸಾರದ ನಾವೆಯೊಳು

ಬಾಹುಬಂಧನಕೆ ಆಸರೆಯಾಗು

ಅಧರಗಳ ನಿವೇದನೆಗೆ ಉತ್ತರಿಸು

ಕಾರ್ಗಾಲದ ಚಳಿ ಮರೆಯಾಗಿಸು


ಹೃದಯ ತರಂಗದ ಒಲವಿನ ಸ್ವರದಲಿ

ಕಾತರಿಸುವ ಬಾಳಿಗೆ ನೀ ವರವಾಗು

ಮನ ನಲಿಸು ಸೌಜನ್ಯದ ನಗುವಿನಲಿ 

ಸೋಲಿಲ್ಲದ ಹಾದಿಗೆ ನೀ ಸ್ವಾಗತಿಸು


ಹೂಮಳೆಯ ಚಿತ್ತಾರದ ಜಗದಲಿ

ಮುಗುದೆಯ ಪಾವನ ಹೃದಯಕೆ 

ಅನುದಿನವು ನೀ ಜೊತೆಯಾಗಿರು

ಪ್ರೇಮವೇ ಬಾಳಾಗಿಸಿ ಉಸಿರಾಗಿಸು


ರಚನೆ: ರಾಮಚಂದ್ರ ಸಾಗರ್


ರಂಗೇರಿಸು ಬಾ


ಗೆಳೆಯಾ..

ಮುಸ್ಸಂಜೆಯ ಕೆಂಪು ಕಡಲ ರಮಿಸುವ ಕಿನಾರೆಯಲಿ

ಕೆನ್ನೆಗೆ ಕೆಂಪು ರಂಗೇರಿಸು ಬಾ ಮುತ್ತುಗಳ ಕಾಣಿಕೆಯಲಿ..


ರಂಗು ತುಂಬಿದ ಮೋಡಿಯ ಸೋಜಿಗದ ಜಗದಲಿ

ಬಿಸಿಯುಸಿರು ತಾಕಿಸಿ ಹೃದಯಕೆ ಸಂತೈಸು ಕ್ಷಣದಲಿ..


ಹೂಮನದ ಸಿಂಗಾರದ ಪ್ರೇಮೋಲ್ಲಾಸದ ಘಮಲಿನಲಿ

ಭಾವಬಂಧನಕೆ ಹರುಷವೇ ಉಡುಗೊರೆಯಾಗಲಿ..


ನನ್ನೆದೆಯಲಿ ನರ್ತಿಸುವ ಹೊಂಗನಸುಗಳ ಸಾಕಾರದಲಿ

ನಿನ್ನ ಅನುಪಮ ಪ್ರೇಮವು ಸದಾ ಭೋರ್ಗಯರೆಯಲಿ..


ಒಲವು ತುಂಬಿದ ನಿನ್ನ ಕಂಗಳು ಸದಾ ಕೆಣಕುತಿರಲಿ

ಬಾಳು ಸಿಹಿಯಾಗಿಸುವ ಹಂಬಲದ ಅತಿಶಯದಲಿ..


ನಮ್ಮೊಲವ ಸಮ್ಮೋಹದ ಪ್ರೇಮಾಮೃತದ ಸವಿಪಾನದಲಿ

ಸಾವಿಲ್ಲದ ಪ್ರೀತಿಯ ಕಡಲು ಉಲ್ಲಾಸದಿ ಉದಿತವಾಗಲಿ..


ಅಧರಾಮೃತದ ಸವಿಲೇಪದ ಪಾರುಪತ್ಯದ ಸಡಗರದಲಿ

ಸಂಭ್ರಮದ ಸಿಂಗಾರದ ಸವಿಜೇನಿನ ಬಾಳು ನಮ್ಮದಾಗಲಿ..


ರಚನೆ: ರಾಮಚಂದ್ರ ಸಾಗರ್


Wednesday, 26 January 2022

ಭಾರತೀಯನೆಂದು ಹೆಮ್ಮೆಯಿಂದ ಬೀಗು


 ಎಲ್ಲ ದೇಶಾಭಿಮಾನಿಗಳಿಗೆ  ಗಣರಾಜ್ಯೋತ್ಸವದ ಶುಭಾಶಯಗಳು. ಈ ಸುಸಮಯದಲ್ಲಿ ಎಲ್ಲ ಮನಸ್ಸುಗಳ ಐಕ್ಯತೆ ಮತ್ತಷ್ಟು ಗಟ್ಟಿಯಾಗಲಿ, ಎಲ್ಲರಲ್ಲು ದೇಶವನ್ನು ಪ್ರಗತಿಯತ್ತ ಮುನ್ನಡೆಸುವ ಛಲ ವೃದ್ಧಿಯಾಗಲಿ, ದೇಶವು ಬರುವ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ದೇಶದ ಸಾಲಿನಲ್ಲಿ ಬೇಗನೇ ಸೇರಲಿ, ಭಾರತದ ಹೆಸರು ವಿಶ್ವದೆಲ್ಲೆಡೆ ಪ್ರೀತಿಯ ಕುರುಹು ಆಗಲಿ, ಜಗದೆಲ್ಲ ಭಾರತವೇ ಕಂಗೊಳಿಸಲಿ, ಭಾರತದ ವೈವಿದ್ಯತೆಯ ಸತ್ವವು ಜಗಕೆ ಸಂದೇಶಸಾರವಾಗಲಿ ಎನ್ನುತ್ತಾ ಈ ಸಮಯದಲ್ಲಿ ನಾ ಬರೆದ ಕವಿತೆಯನ್ನು ನಿಮ್ಮೊಂದಿಗೆ ನೆನಪುಮಾಡಿಕೊಳ್ಳುತ್ತಿರುವೆ..ಎಲ್ಲಾ ದೇಶಾಭಿಮಾನಿಗಳಿಗೂ ಮತ್ತೊಮ್ಮೆ  ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು;

ಭಾರತೀಯನೆಂದು ಹೆಮ್ಮೆಯಿಂದ ಬೀಗು


ಕೋಟ್ಯಾಂತರ ಜೀವಿಗಳ ಉಸಿರು

ಸೌಹಾರ್ದ ಸಮ್ಮೇಳನದ ಬೀಡು

ವೈವಿಧ್ಯತೆಮಯ ಸಂಸ್ಕೃತಿಯ ತೇರು

ಭರತ ಭೂತಾಯ ಮಡಿಲು ...


ಜ್ಞಾನಸೆಲೆಯ ಅಮೃತ ಸಿಂಚನವು

ಸಹಿಷ್ಣುತೆ ಸಂದೇಶ ಸಾಗರವು

ಶಾಂತಿಯ ಸತ್ವದ ದೀವಟಿಗೆಯು

ಭರತ ಭೂತಾಯ ನೆಲೆಯು..


ಜಗಕೆ ಶಾಂತಿ ಬೋಧಿಸಿದ ನಾಡು

ಜಗಕೆ ಜ್ಞಾನದ ಕೊಡುಗೆಯ ಬಟ್ಟಲು

ಜಗದ ಸಿರಿವಂತ ಸಂಸ್ಕೃತಿಯ ಕಣಜ

ಜನಿಸಿದ ಎಲ್ಲರ ಪುಣ್ಯಧಾಮ..


ಭರತ ತಾಯ ಮಡಿಲಲಿ ಜನನವೆ

ಪ್ರತಿ ಭಾರತೀಯನ ಹೆಮ್ಮೆ

ಉಸಿರಿನ ಪ್ರತಿ ಘಳಿಗೆ ಮುಡಿಪಾಗಿಡು

ದೇಶ ಗಟ್ಟಿಗೊಳಿಸಲು, ಪ್ರಕಾಶಿಸಲು..


ಭರತ ತಾಯಿ ನೆಲದಲಿ ಜನ್ಮವು

ಸಾವಿರ ಜನ್ಮಕು ತೀರದ ಋಣವು

ದಿವ್ಯ ನಾಡಿನ ದಾರ್ಶನಿಕರ ವಚನದಲಿ

ಪುಣ್ಯ ಪುರುಷರ ಜ್ಞಾನ ಸೆಲೆಯಲಿ

ಜಳಪಿಸುವ ಶಕ್ತಿಯಲಿ ನೀ ಬೆಳಗು..


ಭಾರತೀಯತೆಯ ಉಸಿರು ಜೀವಸೆಲೆಯಾಗಿರಲು

ಭಾರತೀಯನೆಂದು ಹೆಮ್ಮೆಯಿಂದ ಬೀಗು

ನಿನ್ನೆದೆಯ ಪ್ರತಿ ಬಡಿತದಲ್ಲು

ಭಾರತೀಯನೆಂಬ ಸದ್ದಿನ ದನಿ ಕೇಳು

ಪುಣ್ಯನಾಡನು ಆರಾಧಿಸು..ಪ್ರೀತಿಸು..


ರಾಮಚಂದ್ರ ಸಾಗರ್


Saturday, 2 October 2021

ಪ್ರೇಮದ ಮಳೆ


ಪ್ರೇಮದ ಸಿಹಿ ಮಳೆಯಾಗುತಿದೆ 

ಒಲುಮೆಯಾ ಸಿರಿ ಜಗದೊಳಗೆ

ಜೊತೆಯಾಗು ಬಾ ಗೆಳೆಯನೆ

ಅನುರಾಗದ ಸವಿ ಬಾಳಿನೊಳಗೆ..


ಪ್ರೀತಿಯ ಅಮಲಿನ ಉಡುಗೊರೆಯೆ

ಮೊಗದಲಿ ಅನುಪಮ ನಗುವು ಬೆಳಗಿಸಿದೆ

ರಂಗೇರಿದ ಸ್ವಪ್ನಗಳ ಸವಿಯೊಳಗೆ

ನಿನದೇ ನೆನಪು ಕಾಡುತಿದೆ..


ಹರುಷದ ಹಾದಿಯಲಿ ಮೂಡುತಿದೆ 

ನಿನದೇ ಅನುಪಮ ಸವಿಗಾನವು

ಸಂಭ್ರಮದ ಕನಸಿನಲಿ ಅರಳುತಿದೆ 

ನಿನದೇ ಅನುತಾಪದ ಅಭಿಮಾನವು..


ಚಡಪಡಿಸುವ ಕಳವಳದ ಕಣ್ಣಿಗೆ 

ನೀ ಒಲವಿನ ಸುಧೆಯಾಗಿರುವೆ

ಚೆಲುವಿನ ಬಾಳಿನ ಚಲನೆಗೆ

ನೀ ಪ್ರೀತಿಯ ವರವಾಗಿರುವೆ


ಮೈಮರೆಸುವ ಮೋಹದ ಘಳಿಗೆಗೆ

ನೀ ಪ್ರೀತಿಯ ಉತ್ತರವಾಗು ಬಾ

ನಲ್ಮೆಯ ವಿನಯದ ಬೆಸುಗೆಗೆ

ನೀ ಕರುಣೆಯ ಒಲವಾಗು ಬಾ


ವಿರಹದ ನೋವಿನ ಪರಿಹಾರಕೆ

ನೀ ನಗುವಿನ ದೊರೆಯಾಗು ಬಾ

ವಿನಯದ ಪ್ರೇಮದ ಕೋರಿಕೆಗೆ

ನೀ ಪ್ರೇಮದ ಅಂಕಿತವಾಗು ಬಾ..


ರಾಮಚಂದ್ರ ಸಾಗರ್


Thursday, 9 September 2021

ಸರ್ವರಿಗೂ ಗೌರಿ, ಗಣೇಶ ಹಬ್ಬದ ಶುಭಾಶಯಗಳು;



 ಪರಿಸರ ಸ್ನೇಹಿ ಗೌರಿ, ಗಣಪ

ಸಡಗರಿಸೋಣ ಬಾಂಧವರೆ ಒಟ್ಟಾಗಿ ಬನ್ನಿ
ಪರಿಸರ ಸ್ನೇಹಿ ಗೌರಿ ಗಣಪರ ಭಕ್ತಿಯಲಿ ಕರೆತನ್ನಿ
ಸಜ್ಜನರಾಗೋಣ ರಾಸಾಯನಿಕದ ಮೂರ್ತಿಗಳ ತ್ಯಜಿಸಿ
ಸಂಭ್ರಮಿಸೋಣ ಹಬ್ಬದುದ್ದಗಲ ಧರಿತ್ರಿಯ ಪ್ರೀತಿಸಿ

ಸತ್ರದಲಿ ರಂಗೋಲಿ, ಸಿಂಗಾರ, ಕುಂಕುಮವು
ಸಕಲ ಪೂಜಾ ಪರಿಕರವು ಸಸ್ಯೋಜನ್ಯವಾಗಲಿ
ಸಜ್ಜನಿಕೆಯ ಮಣ್ಣಿನ ದೀಪಗಳೆ ಬೆಳಗಲಿ
ಸನಾತನ ಸಂಸ್ಕೃತಿಯು ಸೋಜಿಗದಿ ಮೇಳೈಸಲಿ

ಸಚ್ಚರಿತ ಸಂಗೀತದ ಸ್ವರಮೇಳವೆ ಹೊಮ್ಮಲಿ
ಸಭ್ಯವಲ್ಲದ ಅಶ್ಲೀಲದ ಗೀತೆಗಳು ತೊಲಗಲಿ
ಸದ್ಗತಿಗೆ ಗೌರಿ ಗಣಪರಲಿ ಆರಾಧಿಸೋಣ
ಸತ್ಕಾರದ ಭಾವನೆಗಳಲಿ ನಾಡಿಗಾಗಿ ಪ್ರಾರ್ಥಿಸೋಣ

ಸಂಪನ್ನವಾಗುವುದು ನಮ್ಮೆಲ್ಲರ ಪ್ರಾರ್ಥನೆಯು
ಸಂಭ್ರಮದ ಸುಂದರ ವಸುಂಧರೆಯ ಮಹಲಿನೊಳು
ಸಕಲವು ಮಂಗಳವಾಗುವುದು ಗೌರಿಯ ಸ್ತುತಿಯಲಿ
ಸಫಲತೆಯು ಒಲಿವುದು ಗಣೇಶನ ಒಲುಮೆಯಲಿ

ಶಬ್ದಮಾಲಿನ್ಯದ ಪಟಾಕಿಯೆನ್ನುವ ಪಿಶಾಚಿಯೇತಕೆ?
ಸಮಂಜಸದ ದೇಸೀ ದೀವಿಗೆಗಳು ಜಗಮಗಿಸಲಿ
ಸಖ್ಯದ ಬಟ್ಟೆ ಚೀಲವು ಹಣ್ಣು ಕಾಯಿಗಿರಲಿ
ಸಖ್ಯವಲ್ಲದ ಪ್ಲಾಸ್ಟಿಕ್ ಚೀಲವು ಮರೆಯಾಗಲಿ

ಸಡಗರದ ಮೆರವಣಿಗೆಯಲಿ ದೇವನೊಲುಮೆ ಬಯಸೋಣ
ಸೌಜನ್ಯದ ದೈವದಾ ಗೀತೆಗೆ ಹೆಜ್ಜೆಯನು ಹಾಕೋಣ
ಸಡಗರಿಸುವುದು ಭಾವೈಕ್ಯದ ಸಮಾಜದ ಕನಸಾಗಲಿ
ಸಭ್ಯತೆಯ ಹಬ್ಬವು ಮತ್ತೆ ಮತ್ತೆ ಬರಲಿ..

ರಾಮಚಂದ್ರ ಸಾಗರ್