Saturday, 14 January 2017

ನೋವಿನ ಶರಧಿ ಕರಗುವುದೇ..

      ಚೂರಾದ ಕನಸು ನನಸಾಗಬೇಕಿದೆ, ಮಾಯವಾದ ಸ್ವರ್ಗವು ಕೈಸೆರೆಯಾಗಬೇಕು, ನಗುವು ಮರೆತ ಮೊಗವು ನಗಬೇಕು, ತಿಳಿ ಸರೋವರದಲ್ಲಿ ಎದ್ದ ಅಲೆಗಳು ನಿಲ್ಲಬೇಕು, ಅದರಲ್ಲಿ ಪ್ರಶಾಂತ ತಂಪಿರುಳಲ್ಲಿ ನಿನ್ನ ಮೊಗವನ್ನು ನೋಡಬೇಕು. ಸಾಲು ಸಾಲು ನಿತ್ತು ಗಹಗಹಿಸುವ ಕಹಿ ನೆನಪುಗಳನ್ನು ನಿನ್ನಾಸರೆಯಲ್ಲಿ ಕರಗಿಸಿ ದೂರಕ್ಕೆಸೆಯಬೇಕು. ಮತ್ತೆ ಅವು ನನ್ನ ತಿರುಗಿ ನೋಡದಷ್ಟು ದೂರ ಎಸೆಯಬೇಕು, ಎಲ್ಲಕ್ಕೂ ನಿನ್ನಾಗಮನವಾಗಬೇಕು, ಮುನಿಸು ಕರಗಬೇಕು, ನೋವಿನ ಶರಧಿಯು ದೂರಾಗಬೇಕು, ಒಲವ ಅಲೆಯ ಬೀಸಬೇಕು. ಎದೆಯಾಳದಿಂದ ಅರಳಿದ ಪದ ನಿನಗೆ ಮೀಸಲಾಗಿ ಅವಿತಿರುವುದು ನನ್ನ ಅಧರದಿಂದ ಗುನುಗಬೇಕು, ನೀ ಬರಬೇಕು, ಮಧುರ ಪದಗಳೆಂದು ನುಡಿಯಬೇಕು. ಮಧುರವಲ್ಲದಿದ್ದರೂ ನಿನಗೆ ಬೇಸರವಾಗದಿದ್ದರೆ ಸಾಕು. ಬೆಳುದಿಂಗಳ ರಾತ್ರಿಯ ತಣ್ಣನೆಯ ಹವೆಯೂ ಬಿಸಿ ಬೇಸಿಗೆಯಂತೆ ಸುಟ್ಟರೆ ನಿನಗದುವು ಸಾಧುವೇ ಗೆಳೆಯಾ.? ಇದೇ ಕಂಪನ, ತಲ್ಲಣದಲ್ಲಿ ದಿನ ಕಳೆಯುವುದು ಹೇಗೆ ಗೆಳೆಯಾ.? ಮನದಲ್ಲಿ ನೀ ಬರುವ ಸೂಚನೆ ಸುಳಿವು ಸಿಗದಾಗಿದೆ, ಆದರೂ ವಿಧಿಯಿಲ್ಲ ನೀ ಬರುವ ಘಳಿಗೆಗಾಗಿ ತಂಪಿರುಳಲ್ಲಿ ಬೆಳುದಿಂಗಳ ಧಾರೆಯಲ್ಲೂ ನೋವಲ್ಲಿ ನಡುಗುವ ತನುವು ನನ್ನದಾಗಿದೆ, ಯಾವೂರು ನೀ ತಲುಪಿದರೂ ಯಾವ ಅಂತರ ನೀ ಮುಟ್ಟಿದರೂ ನೀ ನನ್ನ ಮರೆಯಲಾನೆಂಬ ಜಂಬದಲ್ಲಿ ನನ್ನ ಮನ ತುಂಬಿದೆ. ಏನೆಂದು ಹೆಸರಿಡಬೇಕು ಈ ನನ್ನ ಹುಚ್ಚು ಮನಕ್ಕೆ ..? ಇಲ್ಲೆಲ್ಲಾ ನಿನ್ನ ನೆನಪುಗಳ ಚಟುವಟಿಕೆಯ ಹಾವಳಿ. ನಿತ್ಯ ಕಾಡುವ ಸಲ್ಲಾಫದ ಜಾತ್ರೆಯಲ್ಲಿ ನೀ ಕೊಟ್ಟ ಒಲವ ಒಸಗೆಯ ಗುನುಗು ಇಡೀ ರಾತ್ರಿ ಕಳೆದರೇ ನಾ ಹಗಲು ಅದರಲ್ಲಿ ವ್ಯಯಿಸಿದರೆ ಏನೆಂದು ಕರೆಯಬೇಕು ನನ್ನಾವ್ಯಸಕೆ ಗೆಳೆಯಾ. ಹೊತ್ತಿಲ್ಲ ಗೊತ್ತಿಲ್ಲದೆ ನಿನ್ನ ವಶವಾದ ಮನದ ತಳಮಳಕ್ಕೆ ವಿರಹದ ನೋವೇ ವಾದ್ಯವಾಗಿದೆ, ವಿರಹದ ಗೀತೆಯೇ ಹಾಡಾಗಿದೆ. ಒಲವ ಗೀತೆ ಹೆದರಿ ದೂರಾಗಿದೆ. ಸುರಿವ ಬೆಳುದಿಂಗಳಲ್ಲಿ ನಲಿವ ನೈದಿಲೆಯಲ್ಲಿ ನಾ ದಿಟ್ಟಿಸಿದಾಗ ಮನದಲ್ಲಿ ಉಲ್ಲಾಸವಿಲ್ಲ, ನಿನ್ನ ಕಣ್ಣ ಸಂಭಾಷಣೆಯ ನೈವೇದ್ಯ ಬೇಕಿರಲು ಜಗದೆಲ್ಲ ಸೊಬಗು ಗೌಣ, ಬರೀ ಮೌನ, ರಂಗು ತುಂಬಿದ ಜಗವು ಬೆಳ್ಳಿ ಸೊಬಗು ನೀನಿಲ್ಲದೇ ಕಪ್ಪು ಗೆಳೆಯಾ. ನಮ್ಮಿಬ್ಬರ ಖಾಸಗೀ ಸಂಭ್ರಮಕೆ ಬೇಕಿರುವುದು ನಮ್ಮಿಬ್ಬರ ಮನಗಳ ಮಿಲನವೇ ಹೊರತು ಉಳಿದೆಲ್ಲ ಸೊಬಗು ಗೌಣ ಗೆಳೆಯಾ. ನೆನಪಿನ ಕಿಟಕಿಯ ತೆರೆದು ನೀನೊಮ್ಮೆ ನೋಡು ಗೆಳೆಯಾ. ನಮ್ಮ ಪ್ರೀತಿಯ ಹೊನಲಿನಲ್ಲಿ ಅರಳಿದ ಕುಸುಮವನ್ನಾದರೂ ಕೇಳಿ ನೋಡು, ಒಲವು ಜೀವಂತವಿದೆಯೆಂದು ನೀ ಅರಿತು ನೋಡು, ನೆನೆದು ನೊಂದು ನಿನಗೆಂದು ಮೀಸಲಾದ ಹೃದಯ ರೋಧನ ದೂರದಿಂದಲಾದರು ಒಮ್ಮೆ ದಿಟ್ಟಿಸಿ ನೋಡು. ಒಲವ ನಾವೆ ಮುಳುಗದೇ ಸಾಗಬೇಕು, ಒಲವತೀರ ತಲುಪಬೇಕು, ಅದರಲ್ಲಿ ನಾನು ನೀನು ನಗುತಾ ಸಾಗಬೇಕು. ವಿಧಿಯ ಹಗೆತನವೆಷ್ಟೇ ಕ್ರೂರಿ ಎಂದು ಹಠ ಹಿಡಿದರೂ ಹುಡುಗ ನಾನಿನ್ನ ಕಣ್ಣಲ್ಲಿ ಕದಲದೇ ಕಾಪಿಡುವೆ. ಕಣ್ಣೀರಿಗೂ ಜಾಗವಿರದಂತೆ ಕಾಪಿಡುವೆ ಇದು ದಿಟ. ಚಿನ್ನದಂತ ಕನಸುಗಳು ತುಕ್ಕು ಹಿಡಿದ ಹಳೆಯ ದಾತುವಿನಂತೆ ಕಳೆಗುಂದಿವೆ. ನನ್ನ ಮನದೆಲ್ಲಾ ಆಸೆಯು ಮುದುಡಿವೆ ನಿನ್ನಾಗಮನದ ಜಾಡು ಬಯಸುತಾ ಅರಸುತಾ ನಿನ್ನ ಸ್ಥುತಿಸುವ ಕಾಯಕದಲ್ಲಿ ನೊಂದು ಬೆಂದ ಮನದಲ್ಲಿ ಸಾವರಿಸದ ಮನದಲ್ಲಿ ವಿರಹದ ಬಿರುಗಾಳಿ ಎದ್ದಿದೆ. ಎಷ್ಟೇ ನಾ ಸಂತೈಸಿದರೂ ಅದು ನಿಲ್ಲುತ್ತಿಲ್ಲ, ಕದಲದೇ ಕಾಡುವ ನಿನ್ನ ನೆನಪುಗಳು ನನ್ನ ಪದೇ ಪದೇ ಬೆದರಿಸುತ್ತಿವೆ. ನನ್ನ ಕಡುಕೆಂಪು ಕೆನ್ನೆ ಕಪ್ಪಿಟ್ಟಿದೆ, ನಯನಗಳು ಮಂಜು ಕವಿದಿವೆ, ಮಾತು ಮರೆತು ಮೌನ ತಾಳಿದೆ. ಜೀವದ ಉಸಿರಲ್ಲೂ ಏರು ಪೇರು, ಎಲ್ಲಾ ನಿನ್ನಮಲಿನಲ್ಲಿ ಲೀನವಾದ ವ್ಯಸನ. ಹುಚ್ಚು ಮನದ ಸ್ಥಿರತೆಗೆ ಬೇಕಿದೆ ಗೆಳೆಯ ನಿನ್ನೊಲವ ಸಾನಿಧ್ಯ. ನಿನ್ನ ನಗುವ ಮೊಗದ ದರ್ಶನ. ಜಾತಿ ಮತದ ಗೌಜಿಗೆ , ಸಂಪತ್ತು ಸಿರಿಯ ಅಂತರವ ಎಣಿಸದೆ, ಸಾಧುವಲ್ಲದ ಮಾತುಗಳಿಗೆ ಸಿಲುಕಿ ನಲುಗದೆ, ಅನ್ಯರಿಗೆ ಅಂಜದೇ ನೀ ನನ್ನೆಡೆ ಬಾ ಹುಡುಗಾ. ಉಪವಾಸದ ಮನಸು ನಿನ್ನೊಲವ ಸಾಂಗತ್ಯದಲ್ಲಿ ನಗುತ ಹಸಿವು ದೂರಾಗಿಸಿಕೊಳ್ಳಬೇಕು. ನಿನ್ನ ಮನವನ್ನು ಗೆದ್ದು ಬೀಗಿದ ಹೃದಯ ನನ್ನದು, ನಿನ್ನ ಮನಕೆ ಒಡತಿಯೂ ನಾನು. ನೀ ಎಲ್ಲೇ ಇದ್ದರೂ ನಿನ್ನ ಹೃದಯ ನನ್ನಲ್ಲಿ ಸೆರೆಯಾಗಿದೆ. ನಾ ಇಲ್ಲದೇ ಸಾಗದ ಜೀವ ನೀನು, ಕಂಡಿತಾ ಸಾಗಲಾರೆ ಬಹುದೂರ, ಬಹು ಸಮಯವೆಂಬುದು ನನ್ನ ಕಿವಿಗೆ ಅಪ್ಪಳಿಸಿ ಹೇಳುತ್ತಿದೆ ಬೀಸುವ ತಂಗಾಳಿಯ ಮೊರೆತದ ಪ್ರತೀ ಸದ್ದು. ಒಲವಗರಿಯಿಂದ ನಿನ್ನೆದೆಯಲ್ಲಿ ನಾ ಬರೆದ ಸಾಲು ನಿನ್ನ ಹೃದಯದಿಂದ ಹೊರಬರಲಾರವು ಎಂಬ ದಿಟ ನಂಬಿಕೆಯಲ್ಲೇ ನಿನ್ನಾಗಮನಕ್ಕಾಗಿ ಹಾತೊರೆಯುತಾ ಜಂಬದಲ್ಲೇ ಕುಳಿತಿರುವೆ..!! ಚೂರಾದ ಮನಸು ಒಂದಾಗಿಸುವವನೇ ಬೇಗನೇ ಬಾ..ನೋವಿನ ಶರಧಿಯ ಕರಗಿಸುವವನೇ ಬೇಗನೇ ಬಾ. ಜೊತೆಗೆ ನೀನು ನಗಬೇಕು, ಒಲವ ಪಥದಲಿ ನನ್ನೊಂದಿಗೆ ನಗುತಾ ಸಾಗು.
ಗೆಳೆಯಾ..ನೀ ಬರುವುದನು ಮರೆದಿರು..
ಬರುವಾಗ ತರಲು ಮರೆದಿರೊಂದು ಕೆಂಗುಲಾಬಿಯನೂ..

         ರಾಮಚಂದ್ರ ಸಾಗರ್