Sunday, 21 January 2024

ಶ್ರೀ ರಾಮ...

 

ಅಯೋಧ್ಯೆಯ ರಂಗದಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ಮುಹೂರ್ತದ ಶುಭದ ಘಳಿಗೆಗೆ ಧನ್ಯತೆಯಲ್ಲಿ ಕೈ ಮುಗಿದು ಪ್ರಾರ್ಥಿಸುತ್ತಾ ಈ ಅವಿಸ್ಮರಣೀಯ ಪಾವನ ಕಾರ್ಯವು ನಾಡಿಗೆ ಸಕಲ ಹೆಮ್ಮೆಯ ಸಂಗತಿಯಾಗಿದೆ.  ಸತ್ಯದ ಪಥದಲಿ ಮಿಥ್ಯದ ಜಗವ ಸೋಲಿಸಿದ ನನ್ನ ಮನದ ದೇವ ಶ್ರೀ ರಾಮನ ನೆನೆಯುತ್ತಾ ಈ ಕ್ಷಣದಲ್ಲಿ “ಶ್ರೀ ರಾಮ” ಕವಿತೆ ಬರೆದಿದ್ದೇನೆ. ಎಲ್ಲರೂ ಒಂದಾಗಿ ಶ್ರೀ ರಾಮನ ಪ್ರಾರ್ಥಿಸೋಣ ಬನ್ನಿ. ನಿಜ ರಾಮ ರಾಜ್ಯ ನಮ್ಮೆಲ್ಲರ ಗುರಿಯಾಗಲಿ. ಪ್ರೀತಿ, ಶಾಂತಿ, ಸ್ನೇಹ, ಸೌಹಾರ್ದತೆ, ಸಹಿಷ್ಣುತೆಗಳು ಎಲ್ಲರೆದೆಯ ಉಸಿರಾಗಲಿ. ಎಂದೆAದಿಗೂ ಸತ್ಯದ ಗುಡಿಯಲಿ ಆರಾಧನೆಗೆ ಅರ್ಹನು ನಮ್ಮೆಲ್ಲರ ಶ್ರೀ ರಾಮನೇ..


ಶ್ರೀ ರಾಮ...


ಸತ್ಯದ ಪಥದಲಿ ಜಗವ ಜಯಿಸಿದ ವೀರನೇ

ಸಭ್ಯತೆಯ ನಡೆಯಲಿ ಉದಯಿಸಿದ ಶೂರನೇ 

ಸಚ್ಚರಿತ ಮನದಲಿ ಸಂಭ್ರಮಿಸಿದ ಧೀರನೇ

ಸಜ್ಜನಿಕೆಯ ಸಿರಿತನದಲಿ ದೊರೆಯಾದ ದೇವನೇ 

ಶ್ರೀ ರಾಮ..


ಸದ್ಗತಿಯ ಮನಗಳಲಿ ಮಂದಿರವಾದವನೇ

ಸತ್ಕಾರದ ಭಾವನೆಗಳಲಿ ದೇವರಾದವನೇ

ಸಂಕಲ್ಪ ಕಾಯಕದಿ ಜಗಕೆ ಬೆಳಕಾದವನೇ

ಸಂಯಮದ ಸತ್ರದಲಿ ಸುಯೋಗವಾದವನೇ

ಶ್ರೀ ರಾಮ..


ಸದ್ಗುಣಗಳ ಗಗನದಲಿ ಶುಭದ ಮಳೆಯಾದವನೇ

ಸಂಪನ್ನ ಸತ್ವಗಳಲಿ ಧರಿತ್ರಿಯಲಿ ಹೆಸರಾದವನೇ

ಸಂಭಾವಿತರ ಸಖ್ಯದಲಿ ಸನ್ಮಾರ್ಗ ತೋರಿದವನೇ

ಸವಿನಯ ಪರಿವಾರದಲಿ ಸೌಜನ್ಯ ಮೆರೆದವನೇ

ಶ್ರೀ ರಾಮ..


ಸಹನೆಯಲಿ ಸಫಲತೆಯ ಸಂಕೀರ್ತನೆಯಾದವನೇ

ಸಹಿಷ್ಣುತೆಯ ಗುಣದಲಿ ಜಗಕೆ ಮುನ್ನುಡಿಯಾದವನೇ

ಶಾಂತಿ ದೇಗುಲದ ಶಾಂತೆಯ ಸಹೋದರನೇ

ಶಾಂತ ಸೌಧದ ಜಗಕೆ ಉಸಿರಾದವನೇ

ಶ್ರೀ ರಾಮ...

ರಚನೆ: ರಾಮಚಂದ್ರ ಸಾಗರ್