ಶ್ರೀಯುತ ಡಾ. ನಾ ಡಿಸೋಜ ಅವರು ಕನ್ನಡ ನಾಡು ಕಂಡಂತ ಅಪರೂಪದ ಪ್ರತಿಭೆ. ವಿಶೇಷವಾಗಿ ಮಲೆನಾಡು ಭಾಗದ ಸಮಸ್ಯೆಗಳ ಬಗ್ಗೆ ಸದಾ ಧ್ವನಿಯಾದವರು. ನಾಡು ನುಡಿ ವಿಚಾರದಲ್ಲಿ ಯಾರನ್ನೂ ಬಿಡದೆ ಚಾಟಿ ಬೀಸಿದವರು. ಸದಾ ಬಡವರ, ನೊಂದವರ ಬಗ್ಗೆ ದನಿಯಾಗಿ ತಮ್ಮ ಸಾಹಿತ್ಯ ಬರವಣಿಗೆಯ ಮೂಲಕ ಹೋರಾಟದ ಸೆಲೆಯಾದವರು. ಗೌರವಾನ್ವಿತರು ತಮ್ಮ ಅಮೂಲ್ಯ ಬದುಕಿನುದ್ದಕ್ಕೂ ನಮ್ಮ ನಾಡು ನುಡಿಗೆ ಶ್ರೇಷ್ಠತೆಯ ಶ್ರೀಕಾರವಾದರು. ಸರಳತೆಯಲ್ಲೇ ಬದುಕಿಗೆ ಮೆರುಗು ರೂಪಿಸಿಕೊಂಡ ಮಹಾನ್ ವ್ಯಕ್ತಿತ್ವದವರು. ದಿನಾಂಕ: 05.01.2025 ರಂದು ವಯೋಸಹಜ ಮರಣ ಹೊಂದಿ ನಮ್ಮನ್ನು ಅಗಲಿದ್ದಾರೆ. ಆದರೆ ಅವರ ಸಾಹಿತ್ಯ ಜ್ಞಾನದ ಪ್ರಕರತೆಯು ಎಂದಿಗೂ ಮುಗಿಯದ ನಿತ್ಯ ದೀವಿಗೆ.
ಗೌರವಾನ್ವಿತರು ನನ್ನ
ಎರಡು ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದು ಹಾರೈಸಿದವರು. ನನ್ನ ಮೊದಲ ಕವನ ಸಂಕಲನ ʼಬುದ್ದೀಜೀವಿʼ ಯನ್ನು
ಸ್ವತಃ ಬಿಡುಗಡೆಗೊಳಿಸಿ ಹಾರೈಸಿದವರು. ಆ ದಿನ ಸದರಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು
ಸಾಗರ ಇವರು ಹಮ್ಮಿಕೊಂಡು ನನಗೆ ಹಾರೈಸಿದರು. ನಾನು ಅನೇಕ ಬಾರಿ ಇವರ ಮನೆಗೆ ಹೋದಾಗ ಅಕ್ಕರೆಯಿಂದ ಸ್ವಾಗತಿಸಿ
ಸಮಾಲೋಚಿಸುತ್ತಿದ್ದರು. ಎಷ್ಟೇ ಹಿರಿತನ ಸಾಹಿತ್ಯ ಸಾಧನೆಯಲ್ಲಿದ್ದರು ಎಂದಿಗೂ ತಮ್ಮ ಸಿರಿತನವನ್ನು
ಸರಳತೆಯಲ್ಲೇ ತೋರಿಸಿ ಸಮಾಜಕ್ಕೆ ಮಾದರಿಯಾದವರು. ಇಂದು ದಿನಾಂಕ:07.01.2025 ರಂದು ಅವರ ಪ್ರಾರ್ಥಿವ
ಶರೀರದ ದರ್ಶನವನ್ನು ಸಾಗರದ ಗಾಂಧೀ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಸರ್ಕಾರ ವ್ಯವಸ್ಥೆ ಮಾಡಿರುತ್ತದೆ.
ಶ್ರೀಯುತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಈ ಕವಿತೆ ಬರೆದಿರುವೆ;
ನಿಗರ್ವ ಲೋಕದ ತಾರೆ
ಸರಳ ಸಜ್ಜನಿಕೆಯ ಸಾಕ್ಷಾತ್ಕಾರ
ಸಚ್ಚರಿತ ಗುಣಗಣ ಮಹಾಸಾಗರ
ಮಲೆನಾಡ ಬವಣೆಗೆ ಹೋರಾಟದ
ಸಾರಥಿ
ಅಕ್ಷರಗಳ ಯಾತ್ರೆಯಲಿ
ಸಮಾಜಕೆ ದೀವಿಗೆ
ಸಿರಿತನ ನಿಸ್ವಾರ್ಥತೆಯಲಿ
ವಿಜೃಂಭಿಸಿದವರು
ನಿರ್ವಿವಾದ ಮಂದಿರದ
ದೈವವಾದವರು
ಸಹೃದಯಗಳ ಸ್ನೇಹಕೆ ಸೇತುವೆಯಾದವರು
ಪರಿಸರ ಆರಾಧನೆಯ ಯೋಗಿಯಾದವರು
ಆಡಂಬರದ ಬದುಕು ತ್ಯಜಿಸಿದ
ತ್ಯಾಗಿಯಾದವರು
ನಿಷ್ಕಾಮ ನಡೆಯಲಿ ಸಂಭ್ರಮವಾದವರು
ಭೀಭತ್ಸ ಸಮಾಜದ ಶುದ್ಧಿಯಲಿ
ಯೋಧರಾದವರು
ನಾಡು ನುಡಿ ವಿಚಾರದಲಿ
ಚಾಟಿ ಬೀಸಿದವರು
ಸುಯೋಗದ ಶಿಖರವನು ಏರಿದವರು
ಸುಜ್ಞಾನದ ಕನ್ನಡ ದೀವಿಗೆಯಾದವರು
ಸಹಿಷ್ಣುತೆಯ ಧೂಪದಾರತಿ
ಬೆಳಗಿದವರು
ಸಂಪನ್ನ ಸದ್ಗತಿಯ ಅಲೆಯಾದವರು
ಘನಸಾರ ಸಂದೇಶಗಳನು ಪಠಿಸಿದವರು
ಗೌರವದ ಸಮಾಜಕೆ ಮುನ್ನುಡಿಯಾದವರು
ಬರವಣಿಗೆಯಲಿ ಮಕ್ಕಳ
ಮನ ಹೂವಾಗಿಸಿದವರು
ಸೀಜೇನಂತೆ ಮುದ್ದು ಮನಗಳಿಗೆ
ಪ್ರಿಯವಾದವರು
ನಿಗರ್ವದ ಲೋಕದಲಿ ನಿತ್ಯ
ನೆಲೆಯಾದವು
ನಿರ್ವಾಣದ ಬಾಳು ಸಿದ್ಧಿಸಿಕೊಂಡವರು
ಬೆಳಗುವ ದೀಪದಲಿ ಮುಗಿಯದ
ತೈಲವಾದವರು
ಕನ್ನಡ ಸಾಹಿತ್ಯದಲಿ
ನಿತ್ಯ ಪ್ರಕರ ಕಿರಣವಾದವರು
ದೇಹದಿಂದ ಮರೆಯಾದರು
ಜ್ಞಾನದ
ಕಡಲು ಸೃಜಿಸಿ ನಕ್ಕವರು
ಇವರೇ ನಮ್ಮೆಲ್ಲರ ಮೆಚ್ಚಿನ
ನಾಡಿ
ಘನ ಸಾರ ಸಾಹಿತ್ಯದಲಿ
ಆಕ್ಷಯವಾದವರು
ರಚನೆ: ರಾಮಚಂದ್ರ ಸಾಗರ್