ಎಲ್ಲ ದೇಶಾಭಿಮಾನಿಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳು. ಈ ಸುಸಮಯದಲ್ಲಿ ಎಲ್ಲ ಮನಸ್ಸುಗಳ ಐಕ್ಯತೆ ಮತ್ತಷ್ಟು ಗಟ್ಟಿಯಾಗಲಿ, ಎಲ್ಲರಲ್ಲು ದೇಶವನ್ನು ಪ್ರಗತಿಯತ್ತ ಮುನ್ನಡೆಸುವ ಛಲ ವೃದ್ಧಿಯಾಗಲಿ, ದೇಶವು ಬರುವ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ದೇಶದ ಸಾಲಿನಲ್ಲಿ ಬೇಗನೇ ಸೇರಲಿ, ಭಾರತದ ಹೆಸರು ವಿಶ್ವದೆಲ್ಲೆಡೆ ಪ್ರೀತಿಯ ಕುರುಹು ಆಗಲಿ, ಜಗದೆಲ್ಲ ಭಾರತವೇ ಕಂಗೊಳಿಸಲಿ, ಭಾರತದ ವೈವಿದ್ಯತೆಯ ಸತ್ವವು ಜಗಕೆ ಸಂದೇಶಸಾರವಾಗಲಿ ಎನ್ನುತ್ತಾ ಈ ಸಮಯದಲ್ಲಿ ನಾ ಬರೆದ ಕವಿತೆಯನ್ನು ನಿಮ್ಮೊಂದಿಗೆ ನೆನಪುಮಾಡಿಕೊಳ್ಳುತ್ತಿರುವೆ..ಎಲ್ಲಾ ದೇಶಾಭಿಮಾನಿಗಳಿಗೂ ಮತ್ತೊಮ್ಮೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು;
ಭಾರತೀಯನೆಂದು ಹೆಮ್ಮೆಯಿಂದ ಬೀಗು
ಕೋಟ್ಯಾಂತರ ಜೀವಿಗಳ ಉಸಿರು
ಸೌಹಾರ್ದ ಸಮ್ಮೇಳನದ ಬೀಡು
ವೈವಿಧ್ಯತೆಮಯ ಸಂಸ್ಕೃತಿಯ ತೇರು
ಭರತ ಭೂತಾಯ ಮಡಿಲು ...
ಜ್ಞಾನಸೆಲೆಯ ಅಮೃತ ಸಿಂಚನವು
ಸಹಿಷ್ಣುತೆ ಸಂದೇಶ ಸಾಗರವು
ಶಾಂತಿಯ ಸತ್ವದ ದೀವಟಿಗೆಯು
ಭರತ ಭೂತಾಯ ನೆಲೆಯು..
ಜಗಕೆ ಶಾಂತಿ ಬೋಧಿಸಿದ ನಾಡು
ಜಗಕೆ ಜ್ಞಾನದ ಕೊಡುಗೆಯ ಬಟ್ಟಲು
ಜಗದ ಸಿರಿವಂತ ಸಂಸ್ಕೃತಿಯ ಕಣಜ
ಜನಿಸಿದ ಎಲ್ಲರ ಪುಣ್ಯಧಾಮ..
ಭರತ ತಾಯ ಮಡಿಲಲಿ ಜನನವೆ
ಪ್ರತಿ ಭಾರತೀಯನ ಹೆಮ್ಮೆ
ಉಸಿರಿನ ಪ್ರತಿ ಘಳಿಗೆ ಮುಡಿಪಾಗಿಡು
ದೇಶ ಗಟ್ಟಿಗೊಳಿಸಲು, ಪ್ರಕಾಶಿಸಲು..
ಭರತ ತಾಯಿ ನೆಲದಲಿ ಜನ್ಮವು
ಸಾವಿರ ಜನ್ಮಕು ತೀರದ ಋಣವು
ದಿವ್ಯ ನಾಡಿನ ದಾರ್ಶನಿಕರ ವಚನದಲಿ
ಪುಣ್ಯ ಪುರುಷರ ಜ್ಞಾನ ಸೆಲೆಯಲಿ
ಜಳಪಿಸುವ ಶಕ್ತಿಯಲಿ ನೀ ಬೆಳಗು..
ಭಾರತೀಯತೆಯ ಉಸಿರು ಜೀವಸೆಲೆಯಾಗಿರಲು
ಭಾರತೀಯನೆಂದು ಹೆಮ್ಮೆಯಿಂದ ಬೀಗು
ನಿನ್ನೆದೆಯ ಪ್ರತಿ ಬಡಿತದಲ್ಲು
ಭಾರತೀಯನೆಂಬ ಸದ್ದಿನ ದನಿ ಕೇಳು
ಪುಣ್ಯನಾಡನು ಆರಾಧಿಸು..ಪ್ರೀತಿಸು..
ರಾಮಚಂದ್ರ ಸಾಗರ್