Saturday, 6 January 2018

ಕಾದಿರುವೆ ನಿನಗಾಗಿ...

ಹುಡುಗಿ ನೀ ನಡೆವ ಹಸಿರು ಬನದ ಹಾದಿಯಲಿ
ಮತ್ತದೇ ಕಾತರಿಸುವ ಕನಸುಗಳ ಜೊತೆಯಲಿ
ಕಾದಿರುವೆ ನಿನಗಾಗಿ ನೀ ತರುವ ನಗುವಿಗಾಗಿ
ಬೇಡುತಿರುವೆ ನಿನಗಾಗಿ ನಿನ್ನೊಲವ ಮಡಿಲಿಗಾಗಿ

ಹುಡುಗಿ ನೀ ಕೈಬೀಸಿ ತೋರಿದ ಕಡಲ ಕಿನಾರೆಯಲಿ
ಮತ್ತದೇ ಕಾಡುವ ಸಿಹಿ ಕನಸುಗಳ ನೆನಪಲಿ
ಮುಸ್ಸಂಜೆಯ ರಂಗು ಕಳೆಯೇರಿದ ಘಳಿಗೆಯಲಿ
ಕಾದಿರುವೆ ನಿನಗಾಗಿ ನೀ ತರುವ ನಗುವಿಗಾಗಿ

ಹುಡುಗಿ ನೀ ನವಿರಾಗಿ ಗುನುಗಿದ ಸವಿಗಾನದ ಸಿಹಿಯಲಿ
ಒಲವಗಾನದ ಸವಿ ಕಂಪಲಿ ಒಲವರಾಗದ ಸೌರಭದಲೆಯಲಿ
ಮತ್ತದೇ ಕಾಡುವ ಸಿಹಿ ದನಿಗಾಗಿ ಸವಿ ಇಂಪಿಗಾಗಿ
ಕಾದಿರುವೆ ನಿನಗಾಗಿ ಒಲವಗಾನದ ಇಂಪಿಗಾಗಿ

ಹುಡುಗಿ ನೀ  ನಲಿವಾಗ ಅರಳುವ ಸೌಂದರ್ಯದ ಜಗದ ಮೋಡಿಗಾಗಿ
ಸೊಬಗು ಸೂಸುವ ನಿನ್ನ ಬಿನ್ನಾಣದ ನಗುವಿಗಾಗಿ
ಮತ್ತದೇ ಬೆಳುದಿಂಗಳು ರಾತ್ರಿಯಲಿ
ಕಾದಿರುವೆ ನಿನಗಾಗಿ ನೀ ನಲಿವ ಸಿರಿ ಘಳಿಗೆಗಾಗಿ...

ರಾಮಚಂದ್ರ ಸಾಗರ್

Friday, 5 January 2018

ಅಧಿಕಾರದ ಅಮಲೇರಿದವರಿಂದ ನಾಡಿನ ಅಭಿವೃದ್ಧಿ ಸಾಧ್ಯವೇ..?

ಒಂದು ಕಾಲದಲ್ಲಿ ಜನರಿಂದ ಮತಕ್ಕಾಗಿ ಭಿಕ್ಷಾಟನೆ ನಡೆಸಿದವರು ಇಂದು ಅಧಿಕಾರದ ಜಗುಲಿಯ ಮೇಲಿದ್ದಾರೆ, ಆಳ್ವಿಕೆಯನ್ನು ನಡೆಸುತ್ತಿದ್ದಾರೆ, ಆ ಸಮಯದಲ್ಲಿ ಸಾರ್ವಜನಿಕರಿಗೆ ಅವರು ನೀಡುವ ವಿಶ್ವಾಸ, ಭರವಸೆಗಳೇನು..? ನಾವು ಆಯ್ಕೆಯಾದ ನಂತರ ಉತ್ತಮ ಭ್ರಷ್ಟಾಚಾರ ರಹಿತ ಆಡಳಿತವನ್ನು ನಡೆಸುತ್ತೇವೆ, ಪ್ರೀತಿ, ಸಹೋದರತೆ ಸಹಬಾಳ್ವೆಯನ್ನು ಸಮಾಜದಲ್ಲಿ ತರುತ್ತೇವೆಂದು ಶಪಥಮಾಡುತ್ತಾರೆ. ಆದರೆ ಅಧಿಕಾರ ಲಭಿಸಿದ ಮೇಲೆ ನಡೆವುದೇನು..? ಎಲ್ಲರೂ ಅಲ್ಲದಿದ್ದರೂ ಹಲವರು ಮಾಡುವುದು ತಮ್ಮ ಸ್ವಾರ್ಥ ಸಾಧನೆಯನ್ನೇ. 
ಇದರಲ್ಲಿ ಕೆಲವರಂತೂ ಅಧಿಕಾರದ ಅಮಲೇರಿಸಿಕೊಂಡು ಸಾರ್ವಜನಿಕರನ್ನು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಮನಬಂದಂತೆ ಶೋಷಣೆಮಾಡುತ್ತಾರೆ ಹಾಗು ಹಲ್ಲೆಯನ್ನೂ ಮಾಡುತ್ತಾರೆ. ಒಂದಂತೂ ಸತ್ಯ, ಜನರಿಂದ ಜನರಿಗೋಸ್ಕರ ಇರುವ ಇಂದಿನ ವ್ಯವಸ್ಥೆಯು ಏನಾಗಿದೆ. ಎಲ್ಲವು ಅಧಿಕಾರ ಅಮಲೇರಿಸಿಕೊಂಡವರ ಭ್ರಷ್ಟಾಚಾರಕ್ಕೆ ಬಹುಪಾಲು ಮೀಸಲಾಗಿದೆ. ಇದರಲ್ಲಿ ಉತ್ತಮ ಜನನಾಯಕರು ಮಾಡುವ ಒಳ್ಳೆಯ ಕೆಲಸಗಳು ಕಾಣದಂತಾಗಿವೆ, ಕಾರಣ ಬಹುಪಾಲು ಭ್ರಷ್ಟಾಚಾರಮುಖಿ ಜನನಾಯಕರಿರುವುದರಿಂದ ದಿನದಿಂದ ದಿನಕ್ಕೆ ಹಗರಣಗಳು, ಕೆಟ್ಟ ಆಡಳಿತ ವ್ಯವಸ್ಥೆಯು ಹೆಮ್ಮರವಾಗಿ ಬೆಳೆಯುತ್ತಿದೆ, ಕೆಲವೊಂದು ಪ್ರಕರಣದಲ್ಲಿ ಅನೇಕ ಸಾರ್ವಜನಿಕ ಅಧಿಕಾರಿಗಳು ಕೆಲವರ ಬೆದರಿಕೆಗೆ ಸಹಿಹಾಕಿ ತಪ್ಪಿತಸ್ಥರಾಗಿ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದೂ ಇದೆ.
ಅಧಿಕಾರ ನಡೆಸುವವರು ಮೊದಲು ತಾವು ಶುದ್ಧರಾಗಬೇಕು, ನಂತರ ಸಾರ್ವಜನಿಕ ಅಧಿಕಾರಿಗಳನ್ನು ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು, ತನ್ಮೂಲ ಉತ್ತಮ ಆಡಳಿತವನ್ನು ನೀಡಬೇಕು, ಆದರೆ ಅಧಿಕಾರದ ಜಗುಲಿಯ ಮೇಲಿದ್ದ ಹಲವರು ತಾವು ಭ್ರಷ್ಟಾಚಾರದಲ್ಲಿ ತೊಡಗಿ ತಮ್ಮ ಅಧೀನ ಅಧಿಕಾರಿಗಳನ್ನು ಅದೇ ಭ್ರಷ್ಟಾಚಾರ ಜೊತೆಯಲ್ಲಿ ಕರೆದೊಯ್ದರೇ ನಾಡು ಅಭಿವೃದ್ಧಿಯಾದೀತೇ..? ನಾಡು ಮತ್ತೆ ಮತ್ತೆ ಇನ್ನೂ ರೋಗಿಷ್ಟ ವ್ಯವಸ್ಥೆಗೆ ಹೋಗುತ್ತದೆ. ಸರ್ಕಾರದ ಹಣ ಸದ್ಬಳಕೆ ಮಾಡಿ ಜನರಿಗೆ ಲೋಕೋಪಯೋಗಿ ಪುಣ್ಯದ ಕೆಲಸಗಳನ್ನು ಮಾಡುವುದು ಪ್ರತಿ ಸಾರ್ವಜನಿಕ ಅಧಿಕಾರಿ ಮತ್ತು ಜನಪ್ರತಿನಿಧಿಯ ಕರ್ತವ್ಯವಾಗಿರುತ್ತದೆ.
ಆದರೆ ಇಬ್ಬರೂ ಸಹಮತದಿಂದ ಸಮಾಜವನ್ನು ಮುನ್ನಡೆಸಬೆಕು, ಯಾವುದೇ ಪಕ್ಷಪಾತ, ಜಾತಿ, ಧರ್ಮವನ್ನು ಸರ್ಕಾರದ ಸೇವೆಗಳನ್ನು ನೀಡುವಾಗ ಮಾಡದೇ ಎಲ್ಲರನ್ನೂ ಇಡೀ ಸಮಾಜವನ್ನು ಪ್ರೀತಿ ಸೌಹಾರ್ದತೆಯಿಂದ ನಡೆಸಬೇಕು. ಆದರೆ ಇದು ಇಂದು ಆಗುತ್ತಿದೇಯೇ..? ಹೌದೇ ಆಗಿದ್ದಲ್ಲಿ ನಮ್ಮ ನಾಡೇಕೆ ಇನ್ನೂ ದಾರಿದ್ರ್ಯ ಮತ್ತು ಬಡತನದಲ್ಲಿ ಸೊರಗುತ್ತಿದೆ..? ದಿನದಿಂದ ದಿನಕ್ಕೆ ಏಕೆ ಹಗರಣಗಳ ಪಟ್ಟಿ ಬೆಳೆಯುತ್ತಿದೆ..? ಸಾರ್ವಜನಿಕ ಆಸ್ತಿ ಮತ್ತು ರಕ್ಷಣೆಯ ಜವಾಬು ಯಾರದ್ದು..? ಇದಕ್ಕೆಲ್ಲ ಉತ್ತಮವೊಂದೇ ಅಧಿಕಾರದ ಅಮಲೇರಿದವರೂ ಮತ್ತು ಹಣದಾಹಕ್ಕೆ ಕುಳಿತವರು ಸ್ವಲ್ಪ ವ್ಯವಸ್ಥೆಯಿಂದ ಆಚೆ ಬಂದು ಕೆಲಸಮಾಡಬೇಕು, ಇಲ್ಲದಿದ್ದರೇ ಜನರೇ ಸಾಮಾಜಿಕ ದಂಗೆ ಎದ್ದು ಇಂತವರಿಗೆ ಬುದ್ಧಿ ಕಲಿಸಬೇಕು, ಇದು ಎಂದು ಸಾಧ್ಯವೋ ಅಂದೇ ನಾಡು ಅಭಿವೃದ್ಧಿ ಹೊಂದುತ್ತದೆಂಬುದು ಮಾತ್ರ ಸತ್ಯ..ಹಾಗೂ ದೇಶದಲ್ಲಿ ಹೆಪ್ಪುಗಟ್ಟಿದ ಭ್ರಷ್ಟಾಚಾರ ಮತ್ತು ದೌರ್ಜನ್ಯದ ಕಪ್ಪುಕಲೆಯು ಮರೆಯಾಗುತ್ತದೆ.

 ರಾಮಚಂದ್ರ ಸಾಗರ್


Thursday, 4 January 2018

ನಿನದೇ ಗೆಳತೀ..

ಪ್ರೇಮ ಮಂದಿರದಲಿ ಸದಾ ಮೊರೆವ ಪ್ರತಿಧ್ವನಿಯು ನಿನದೇ ಗೆಳತಿ
ದೇಹದುಸಿರಿನಲಿ ಸದಾ ಹರಿದಾಡುವ ಜೀವವು ನಿನದೇ ಗೆಳತಿ
ಬಿರುಬೇಗೆಯಲಿ ಬಾಳು ತಣಿಸುವ ಹಿತಧಾರೆಯು ನಿನದೇ ಗೆಳತಿ
ಕಾನನದ ಇರುಳಲಿ ದಾರಿ ತೋರುವ ಕೈದೀಪವು ನಿನದೇ ಗೆಳತೀ

ನಲುಮೆಯ ಜಗದಲಿ ಸುರಿದ ಪ್ರೀತಿಯ ವರ್ಷದಾರೆಯು ನಿನದೇ ಗೆಳತಿ
ಕರಿಮುಗಿಲ ಬಾನಿನಲಿ ಹರಿದ ಬೆಳಕಿನ ಕದಿರು ನಿನದೇ ಗೆಳತಿ
ಮೋಹದ ಕಡಲಲಿ ಬೀಸುವ ಅನುರಾಗದಲೆಯು ನಿನದೇ ಗೆಳತಿ
ಮೋಹಿಸುವ ಮನದಲಿ ನಗುವ ನೈದಿಲೆಯು ನಿನದೇ ಗೆಳತಿ

ಒಲವಾಂಕುರದಲಿ ಅರಳಿದ ಹೂಬಳ್ಳಿಯು ನಿನದೇ ಗೆಳತಿ
ಮನೋಹರ ಪದಗಳಲಿ ಅಚ್ಚಾದ ಕವಿತೆಯು ನಿನದೇ ಗೆಳತಿ
ಗೌರವದ ಬಾಳಲಿ ಒಲಿದ ಒಲವ ಸತ್ಕಾರವು ನಿನದೇ ಗೆಳತಿ
ಮಮತೆಯ ಬಾಳಲಿ ನಗುವ ಮೊಲೆಗೂಸು ನಿನದೇ ಗೆಳತಿ

ಮಂಜುಳಗಾನದ ಸ್ವರಮೇಳದ ಇಂಪು ನಿನದೇ ಗೆಳತಿ
ವೈಭವದ ಬಾಳಿನಾ ಸುದೈವವು ನಿನದೇ ಗೆಳತಿ
ನೀರವದ ಮನದ ಸಲ್ಲಾಪದ ಒಲುಮೆಯು ನಿನದೇ ಗೆಳತಿ
ನಿವೇದಿಸುವ ಮನದ ಅರ್ಪಣಾ ಭಾವವೂ ನಿನದೇ ಗೆಳತಿ

ಹೃದಯದಾ ಕರೆಗೆ ಬೆಸೆದ ಬಂಧವು ನಿನದೇ ಗೆಳತಿ
ಪ್ರೀತಿಯ ಬದುಕಿಗೆ ಒಲಿದ ಸಿರಿತನವು ನಿನದೇ ಗೆಳತಿ
ಒಲವಗಾನದ ಜೀವದೊಲವು ನಿನದೇ ಗೆಳತಿ
ಅಕ್ಕರೆಯ ಬದುಕಿನಾ ಆತಿಥ್ಯವು ನಿನದೇ ಗೆಳತೀ..

ರಾಮಚಂದ್ರ ಸಾಗರ್

Wednesday, 3 January 2018

ನೀನಾಗಿ ಬಾ ಗೆಳತೀ..

ಮಧುರ ಪ್ರೇಮದ ಕುಸುಮದ ಕಂಪು
ಒಲವ ಸೌಧದಲಿ ಸದಾ ಇರಿಸು ಬಾ ಗೆಳತಿ
ಮಮತೆಯ ಕಡಲಲೆಯ ಸದ್ದು
ಒಲವ ಸೌಧದಲಿ ಸದಾ ಇಡಲು ಬಾ ಗೆಳತಿ

ನಿನ್ನೊಲುಮೆಯ ಇರಾದೆಯ ಛಲವು
ಬಾಳ ನೌಕೆಯಲಿ ಸದಾ ನೆಲೆಯಾಗಿಸಲು ಬಾ ಗೆಳತಿ
ಅನುರಾಗದ ಅತಿಶಯದ ಮಡಿಲು
ನಿನ್ನಾಸರೆಯ ಸಿರಿಯಲ್ಲಿ ಬಾಳಿಗೊಲಿಸಲು ಬಾ ಗೆಳತಿ

ಇಂಗಳದ ಅಂಗಳದಲ್ಲು ತಂಬೆಳಕನು
ಮೊಗೆದು ಚೆಲ್ಲುವ ಜೀವವು ನೀನಾಗಿ ಬಾ ಗೆಳತಿ
ಇಳಿಮೊಗದ ನೋವಿನಲ್ಲು ಮಾಧುರ್ಯವನು
ನಗುತ ತುಂಬುವ ನಗುಧಾರೆಯು ನೀನಾಗಿ ಬಾ ಗೆಳತಿ

ಬಡತನದ ನೋವಿಗೆ ಸಂತೈಸುವ ಹಿತಧಾರೆಯು
ಹಂಗಿಸುವ ಜಗಕೆ ಉತ್ತರಿಸುವ ಅತಿಶಯವು
ಕಹಿಯಲೆಯ ಮೊರೆತವ ಸದ್ದಡಗಿಸುವ ಮದ್ದು
ನಿತ್ಯ ಬಾಳು ಬೆಳಗುವವಳು ನೀನಾಗಿ ಬಾ ಗೆಳತೀ..

ಜಗದಗಲ ನಿನ್ನ ಅನುರಾಗದ ಮೇಳದಲ್ಲಿ
ಸಿಹಿ ಕನಸುಗಳ ಜಾತ್ರೆಯಲಿ ನಡೆಸುವಳು ನೀನಾಗಿ ಬಾ ಗೆಳತೀ
ಅನನ್ಯ ಅನುಪಮ ಅನುರಕ್ತಿಯ ಛಲದಲ್ಲಿ
ಪ್ರೇಮದ ಹಂದರದಲಿ ನಿತ್ಯ ನಗು ಸೂಸುವಳು ನೀನಾಗಿ ಬಾ ಗೆಳತೀ..

ರಾಮಚಂದ್ರ ಸಾಗರ್