Saturday, 24 December 2016

ಸುರಿವ ಮಳೆಯಲ್ಲಿ ನಲಿಯೋಣ ಬಾ ಗೆಳತಿ..

  ಗೆಳತೀ..ಕಾರ್ಮೋಡ ಬಾನಲ್ಲಿ ಒತ್ತರಿಸಿ ಬರುತಿದೆ, ಗುಡುಗು ಮಿಂಚುಗಳ ಆರ್ಭಟವೇರುತ್ತಿದೆ, ಮನದಲ್ಲಿ ನಿನ್ನ ನೆನಪುಗಳ ಆರ್ಭಟವೂ ಏರುತ್ತಿದೆ, ನೀ ಬರುವ ಸವಿ ಘಳಿಗಾಗಿ ಎದುರು ನೋಡುತ್ತಾ ಮನಸ್ಸು ಸಿಹಿಯಾಗುತ್ತಿದೆ ಗೆಳತಿ, ನೀ ಬರುವ ಹಾದಿಯನ್ನು ಕಣ್ಣು ಮಿಟುಕಿಸದೇ ನೋಡುತ್ತಿದೆ, ಬೇಗನೇ ಬಾ ಗೆಳತಿ, ಸುರಿವ ತುಂತುರು ಮಳೆಯಲ್ಲಿ ಕೈ ಗಟ್ಟಿಯಾಗಿ ಹಿಡಿದು ಎರಡು ಹೆಜ್ಜೆ ಕುಣಿದು ಬಿಡೋಣ, ಜಗದೆಲ್ಲ ಬವಣೆಗಳನ್ನು ದೂರಾಗಿಸಿಕೊಳ್ಳೋಣ, ನಾಳೆಯ ಚಿಂತೆಗಳನ್ನು ನಮ್ಮ ಹರ್ಷದಿಂದಲೇ ಬೆದರಿಸೋಣ, ಅಂತೆ ಕಂತೆಗಳ ಸಂತೆಯಲ್ಲಿ ನಾನೂ ನೀನು ಕಳೆದು ಹೋಗುವುದು ಬೇಡ, ಪ್ರೀತಿಯಲ್ಲಿ ನಗುತಾ ನಿನ್ನ ಕಣ್ಣಾಲಿಯಲ್ಲಿ ನನ್ನ ಕಣ್ಣಾಲಿಯನು ನಾ ನೋಡುತಾ, ನನ್ನ ಕಣ್ಣಾಲಿಯಲ್ಲಿ ನಿನ್ನ ಕಣ್ಣಾಲಿಯನು ನೀ ನೋಡುತಾ ಸಂಭ್ರಮಿಸೋಣ, ಈ ಸಂಭ್ರಮದಲ್ಲೇ ಒಲವ ತೇರು ಎಳೆಯೋಣ, ಪ್ರೀತಿಯ ಓರಣದಲ್ಲಿ ನಗುತ್ತಾ ಕುಣಿಯೋಣ, ನೀ ಆಗಮಿಸಬೇಕು, ಆದಷ್ಟು ಬೇಗನೇ ನಿನ್ನ ದರ್ಶನವಾಗಬೇಕು, ಸುರಿವ ಹನಿಗಳು ತೊಟ್ಟಿಕ್ಕುತಿವೆ ಆಗಲೇ. ಮಳೆ ನಿಂತ ಮೇಲೆ ಬಂದರೇನು ನವಿರುತನ ಉಳಿದೀತು ಗೆಳತಿ, ಸುರಿವ ಮಳೆಯಲ್ಲಿ ನಾಲ್ಕು ಹೆಜ್ಜೆ ಕುಣಿದು ಬಿಡೋಣ ಬಾ. ನೊಂದ ಮನಸ್ಸುಗಳು ಸುರಿವ ವರ್ಷಧಾರೆಯಲ್ಲಿ ರಮಿಸಿ ಆನಂದದ ಉಯ್ಯಾಲೆಯಲ್ಲಿ ತೇಲಬೇಕಿದೆ, ಕಂಡಿತಾ ತೇಲುತ್ತವೆ, ಎಲ್ಲದಕ್ಕೂ ನಿನ್ನಾಗಮನವಾಗಬೇಕು, ನಿನ್ನ ನಗುಮೊಗದ ಸಿರಿಯ ದರ್ಶನವಾಗಬೇಕು. ಸಾಂಗತ್ಯದ ಬಲದಲ್ಲಿ ಜಗಗೆಲ್ಲುವ ಛಲದಲ್ಲಿ ಒಂದಾಗಿ ನಾವು ಸಾಗಬೇಕು. ಗುಡುಗುವ ಸದ್ಧಿಗೆ ನೀ ಬೆದರಬೇಕು, ಬೆದರಿ ನನ್ನನ್ನು ಆದಷ್ಟೂ ಬಿಗಿಯಾಗಿ ಹಿಡಿದು ಅಪ್ಪಿಕೊಳ್ಳಬೇಕು, ನಾನು ನಿನಗೆ ಸಂತೈಸಬೇಕು, ಗುಡುಗು ಗರ್ಜನೆಗೆ ಬೆದರುವ ನಿನ್ನ ಮೊಗದ ಆತಂಕವನ್ನು ನಾ ದೂರಾಗಿಸಿ ಸಂಭ್ರಮಿಸಬೇಕು, ಜೊತೆಯಲ್ಲಿ ನಾನಿರುವೆ ಹೆದರಿಕೆಯೇಕೆ ಎಂದು ನಾನು ಜಂಬ ಕೊಚ್ಚಕೊಳ್ಳಬೇಕು, ಗರ್ಜಿಸುವ ಗುಡುಗು ಮರೆಯಾಗುವುದರೊಳಗೆ ಬೇಗನೇ ಆಗಮಿಸು ಗೆಳತಿ, ಮಿಂಚಿನ ಬೆಳಕಿನಲ್ಲಿ ಗುಡುಗು ಸದ್ಧಿಗೆ ಬೆದರಿದ ನಿನ್ನ ಮೊಗದವನ್ನು ನಾನು ನೋಡಬೇಕು, ಹೊಳೆವ  ನಿನ್ನ ಕಣ್ಣುಗಳಲ್ಲಿ ಧೈರ್ಯವರಳುವ ಘಳಿಗೆಯನ್ನು ನಾ ನೋಡಬೇಕು,

ನನ್ನಾಸರೆಯಲ್ಲಿ ನೀನು ನಗುತಿರಬೇಕು, ಪಿಸುಮಾತಗಳನ್ನು ನೀನು ಆದಷ್ಟು ಗಟ್ಟಿಯಾಗಿ ಮಳೆಹನಿಗಳ ಸದ್ದಿಗೆ ಸೋಲಿಸುವಂತೆ ನೀ ನುಡಿಯುತಿರಬೇಕು, ಮಳೆಹನಿಗಳ ಸದ್ದು ನಮ್ಮ ಸವಿ ಸಲ್ಲಾಫದ ಸಂಭಾಷಣೆಗೆ ಕೊಂಚ ಅಡ್ಡಿಪಡಿಸಿದರೂ ನಾವು ಪ್ರೀತಿಯ ನುಡಿಗಳನ್ನು ಗಟ್ಟಿಯಾಗಿ ಪಿಸುಗುಟ್ಟೋಣ, ಪ್ರಿತಿಯ ಸುಖವನ್ನು ಆನಂದಿಸೋಣ, ಮಳೆ ಹನಿಗಳು ಆಗಲೇ ಒಂದೊಂದು ತೊಟ್ಟಿಕ್ಕುತಿವೆ, ಮಳೆ ಮುಗಿದು ಹೋಗುವುದರೊಳಗಾಗಿ ನೀ ಬಾ ಗೆಳತಿ..ನಿನ್ನ ನಗುಮೊಗದ ಸಿರಿಯ ದರ್ಶನ ನೀಡು..ಹರಿವ ಮಳೆ ನೀರಲ್ಲಿ ನಾನು ನೀನು ಕಾಲನ್ನು ಬೀಸುತ್ತಾ ಕೈ ಹಿಡಿದು ಜೊತೆಯಾಗಿ ಮೈಲುದ್ದ ಅಂದಿನಂತೆ ಸಾಗೋಣ, ಹರಿವ ನೀರನ್ನು ಇಬ್ಬರೂ ಒಬ್ಬರಿಗೊಬ್ಬರು ಎರಚುತ್ತಾ ಒಂದು ಘಳಿಗೆ ಆಟವಾಡಬೇಕು, ಜಗದೆಲ್ಲ ನೋವು ಮರೆಯಬೇಕು, ನೀರೆರೆಚಾಟದಲ್ಲಿ ನಾ ಮುಂದು ನೀ ಮುಂದು ಎನ್ನುತ್ತಾ ನಾವಿಬ್ಬರೂ ಕಾದಾಡಬೇಕು, ಆ ಕಾದಾಟದಲ್ಲಿ ನಾ ಗೆಲ್ಲುವವನಿದ್ದರೂ ಸೋಲುವೆ.. ನಿನ್ನ ಗೆಲುವು ನೋಡಿ ಸಂಭ್ರಮಿಸುವೆ ನೀ ಬೇಗನೇ ಆಮಿಸು ಒಲವೇ.. ನಿನ್ನ ನಗುಮೊಗದ ಸಿರಿಯ ಹೊತ್ತು ತಾ ಗೆಳತಿ, ಮಳೆಹನಿಗಳು ಮುಗಿದು ಹೋಗುವುದರೊಳಗಾಗಿ ಹರಿವ ನೀರು ಮುಗಿದುಹೋಗುವುದರೊಳಗಾಗಿ ನೀ ಬರುವುದನು ಮರೆಯದಿರು, ಕಾಗದದ ದೋಣಿಯನ್ನು ನಿನಗಾಗಿ ಆಗಲೇ ಸಿದ್ದಪಡಿಸಿ ತಂದಿದ್ದೇನೆ, ನೀನು ನಗುತ್ತಾ ಕಾಗದದ ದೋಣಿಯನ್ನು ಹರಿವ ನೀರಿನಲ್ಲಿ ತೇಲಿ ಬಿಟ್ಟು, ಜೊತೆಯಾಗಿ ಸಾಗಲಿ ಎಂದು ನೀನು ಪ್ರಾರ್ಥಿಸುವ ಸವಿ ಘಳಿಗೆಯನ್ನು ನಾನು ಕಣ್ತುಂಬಿಕೊಳ್ಳಬೇಕು, ಮೈಯೆಲ್ಲಾ ಒದ್ದೆಯಾದರೂ ಬೀಸುವ ತಣ್ಣನೆ ಗಾಳಿಯಲ್ಲಿ ತನುವೊಡ್ಡಿ ಮೈಯೊಣಗಿಕೊಳ್ಳುತ್ತಾ ತಾಸುಗಟ್ಟಲೇ ಹರಟೆ ಹೊಡೆಯತ್ತಾ ಸಾಗಬೇಕು, ಸಾಗುವಾಗ ನೀನು ನಾನು ಒಲವಗಾಥೆಯನು ದಾರಿಯುದ್ದಕ್ಕೂ ಗುನುಗಬೇಕು, ವರ್ಷಕಾಲದ ಸವಿಯ ಸಂಭ್ರಮಿಸಬೇಕು, ನಿನ್ನೊಂದಿಗೆ ನನ್ನ ಮನ ರಮಿಸಬೇಕು..ನೀ ಬರುವುದನು ಮರೆದಿರು ಗೆಳತಿ..ನೀ ಬಂದಾಗ ನೀಡಲು ತಂದಿರುವೆ ನಿನಗೆಂದು ಒಂದು ಚೆಲುವಾದ ಕೆಂಗುಲಾಬಿ. 

“ಮಳೆ ಹನಿಗಳು ಮುಗಿದು ಹೋಗುವುದರೊಳಗಾಗಿ ನೀ ಆಗಮಿಸು
ಸುರಿವ ಹನಿಗಳಲಿ ನನ್ನೊಂದಿಗೆ ಜೊತೆಯಾಗಿ ಮನ ರಮಿಸು...”

           ರಾಮಚಂದ್ರ ಸಾಗರ್

Thursday, 22 December 2016

ವಚನ ಕೊಟ್ಟವರು ನಾವು..

ಗುಮಾನಿಯ ಸಣ್ಣ ಕುರುಹು 
ನಿನಗೆಂದೂ ಕಾಡದಿರಲಿ ಗೆಳತಿ 
ಲಭಿಸುವುದು  ನಮ್ಮೊಲವಲಿ  
ಗೆಲುವು ಇದು ದಿಟವೂ..
ಗೆಲ್ಲುವುದೇ ಬಾಳಿನಾ ಹಠವೂ..

ಜಗವೇನೋ ಗುಡುಗಲಿ ಗೆಳತಿ
ಜನರೇನೋ ಶಪಿಸಲಿ ಗೆಳತಿ
ಶರಧಿಯೇ ಉಕ್ಕಲಿ ಗೆಳತಿ
ಬಿರುಗಾಳಿಯೇ ನೂಕಲಿ ಗೆಳತಿ...

ಒಲವ ಕುರುಹು ಗುಂಡಿಗೆ ಗಟ್ಟಿಯಿರಲು
ಉಸಿರು ಉಸಿರಿನಲ್ಲಿ ಬೆರೆತನಾವು
ಪ್ರೀತಿ ನಾವೆಯಲ್ಲಿ ಪಯಣಿಗರು ನಾವು
ಸೋಲು ಕಾಣದ ಪ್ರೀತಿ ನಮ್ಮದು...

ಜೀವದಾ ಕರೆಯು ನೀನಾಗಿರಲು
ಒಲವ ಸೌಧವು ನಮ್ಮ ಗುಡಿಸಲು
ಪ್ರೀತಿ ಕಸೂತಿ ನಮ್ಮ ಕಾಯಕವು
ಜಗದ ಮಾತಿಗೆ ಕಿವುಡರೂ ನಾವು..

ಕಮನೀಯ ಹೃದಯದವರು ನಾವು
ಒಲವರಾಧನೆಯ ಆರಾಧಕರೂ ನಾವು
ಒಲವು ಕವಿಸಿದ ಮನದವರು ನಾವು
ಹೃದಯಕೆ ವಚನ ಕೊಟ್ಟವರು ನಾವು..

ಗೆಳತೀ..
ಗುಮಾನಿಯ ಸಣ್ಣ ಕುರುಹು ಕಾಡದಿರಲಿ
ನಮ್ಮೊಲವಿಗೇ ಜಯವೂ ಇದು ದಿಟವೂ
ಇದುವೇ ಬಾಳಿನಾ ಹಠವೂ...
ಹೃದಯಕೆ ವಚನ ಕೊಟ್ಟವರು ನಾವು..

          ರಾಮಚಂದ್ರ ಸಾಗರ್

ಪ್ರೀತಿಯ ಹಂದರಲ್ಲಿ ಹೊನ್ನಿನ ಹಂಗೇಕೆ..

      ನೋಡು ಗೆಳತಿ ಬಾನಲ್ಲಿ ಒಲವ ಗೋಪುರ ಕಟ್ಟಿ ದೇವತೆಗಳು ಹರಸುತ್ತಿದ್ದಾರೆ, ನೋಡು ನಮ್ಮದು ತುಂಬಾ ಗಟ್ಟಿಯಾದ ಪ್ರೀತಿ, ನಿರ್ಮಲ ಭಾವನೆಗಳ ಬೆಸುಗೆ, ನನಗೆ ನಿನ್ನಿಂದ ಪ್ರೀತಿಯೊಂದೆ ಸಾಕು, ನಿನ್ನ ನಗುಮೊಗದ ಸಾನಿಧ್ಯವಿದ್ದರೆ ಸಾಕು ಅಲ್ಲವೇ ಎನ್ನುತ್ತಾ ಭುಜದ ಮೇಲೆ ಭುಜವಿಟ್ಟು ಓಡುವ ಬಿಳಿ ಮೋಡಗಳ ನಡುವೆ ಆಕೆ ಏನೋ ಹುಡುಕಲು ಮತ್ತೆ ಮತ್ತೆ ತವಕಿಸಿದಂತೆ ನನ್ನ ಮನದಲ್ಲೂ ಅದೇ ಧ್ಯಾನ ಜೀವನವೆಂದರೆ ಇನ್ನೇನು, ನಿರ್ಮಲ ಮನದವಳ ಜೊತೆ ಬಾಳು ಮುಗಿಸಿದರೆ ಸಾಕಲ್ಲವೆ..? ಎಷ್ಟು ಹಣವಿದ್ದರೇನು, ಇಲ್ಲದಿದ್ದರೇನು, ಜೀವನದಲ್ಲಿ ನೆಮ್ಮದಿ ಮುಖ್ಯವಲ್ಲವೇ..ನಿರ್ಮಲ ಪ್ರೀತಿಯನ್ನು ನೀಡುವ ಬಾಳ ಗೆಳತಿಯ ಜೊತೆ ಇರುವಷ್ಟು ಕಾಲ ನೆಮ್ಮದಿಯಿಂದ ಬದುಕು ಸಾಗಿಸುವುದೇ ಮೇಲು, ಇರುವ ಸೀಮಿತದಲ್ಲೇ ಜೀವನದ ಸೌಂದರ್ಯದ ಮಹಲನ್ನು ಕಟ್ಟಬೇಕು, ಅದರಲ್ಲಿ ನಾನು ಮತ್ತು ಅವಳು ಪ್ರೀತಿಯಿಂದ ಬದುಕನ್ನು ಅರೆನಿಮಿಷಂದೆ ಕರಗಿಸಬೇಕು, ನೋವು ಬವಣೆಗಳು ಜಗಕೆ ಇರಲಿ, ನಮ್ಮದೇನಿದ್ದರೂ ಅತಿಯಾಸೆಯ ಒತ್ತಡ ಜೀವನ ಬೇಡ ಅಲ್ಲವೇ ಎಂದೆ. ಅವಳು ಹೌದು, ನೆಮ್ಮದಿಯಲ್ಲಿ ಪ್ರೀತಿಯ ಹಾರೈಕೆಯಲ್ಲಿ ಬಾಳಿನುದ್ದಕ್ಕೂ ನಗುತ್ತಾ ಸಾಗೋಣ, ಒತ್ತಡದ ಜೀವನವೇಕೆ, ನಮಗದು ಸಾದುವೂ ಅಲ್ಲ, ಜೀವನವನ್ನು ಸಂಪೂರ್ಣ ಒತ್ತಡದಲ್ಲೇ ಕಳೆದು ಕೊನೆಗೆ ಕೂಡಿಟ್ಟ ಸಂಪತ್ತು ಯಾವುದಕ್ಕೆ ಯೋಗ್ಯ, ಕೂಡಿಡುವುದಕ್ಕಿಂತ ಬೇಕಾದಷ್ಟು ಅಗತ್ಯವಿರುವಷ್ಟು ಬದುಕಿಗೆ ಅಣಿಮಾಡಿಕೊಳ್ಳೋಣ, ಅಗತ್ಯವಿಲ್ಲದ ನಿಧಿ ಸಂಗ್ರಹದ ಚಿಂತೆಯಲ್ಲಿ ಜಗದ ಸುಖವನ್ನು ತ್ಯಾಗಮಾಡಿ, ನನಗೆ ನೀನು, ನಿನಗೆ ನಾನು ನಿತ್ಯ ಪ್ರೀತಿಸದಿದ್ದರೆ, ಪ್ರೀತಿಯ ನುಡಿಗಳನ್ನು ನುಡಿಯದೇ ಓಡುವ ಸಂಗ್ರಾಮದ ಓಟದ ದುಡಿಮೆ ಬೇಡ, ಅತೀ ಸಣ್ಣ ಊರಾದರೂ ಸಾಕು ನಾವಿರುವಲ್ಲಿಯೇ ನಮಗಿರುವ ಸಣ್ಣ ಆಲಯಲ್ಲೇ ದುಡಿಯೋಣ, ದುಡಿಮೆ ಕಡಿಮೆ, ಅತೀ ಸಿರಿವಂತಿಕೆಯಿಲ್ಲವೆಂಬ ಕೊರಗು ಬೇಡ, ಕೊರಗಿನಲ್ಲೆ ಜೀವನ ಮುಗಿದರೆ ಬಾಳು ರೋಧನೆಯಲ್ಲೇ ಕರಗಿದರೆ ನಮಗೆ ದೊರೆತ ಅಮೂಲ್ಯ ಕ್ಷಣಗಳನ್ನು ನಾವು ಭುವಿಯಲ್ಲಿ ಅನುಭವಿಸದೇ ಹಾಗೆಯೇ ನಮ್ಮ ಪ್ರಯಾಣವನ್ನು ಈ ಲೋಕದಿಂದ ಮುಗಿಸುವುದು ಸಾದುವಲ್ಲ, ನಾವಿಬ್ಬರು ಪ್ರೀತಿಯ ನಮ್ಮ ಪುಟಾಣಿ ಮಂದಿರದಲ್ಲೇ ಸಣ್ಣ ದುಡಿಮೆಯನ್ನೇ ನಿಷ್ಠೆಯಿಂದ ಮಾಡೋಣ, ಅದರಲ್ಲೂ ನಮ್ಮಿಬ್ಬರ ಪ್ರೀತಿಯ ಬೆಸುಗೆಯಿರಲಿ, ಪರಸ್ಪರ ಸಹಕಾರವಿರಲಿ ಅಲ್ಲವೇ ಎಂದೆ, ಅವಳು ಹೌದು, ಪ್ರೀತಿಯಲ್ಲಿ ಎಲ್ಲಾ ಇದೆ, ಬದುಕಿಗೆ ಬೇಕಿರುವಷ್ಟು ಹಣವಿದ್ದರೆ ಸಾಕು, ಅತೀ ಆಸೆಯಲ್ಲಿ ಕೂಡಿಡುವ ಪಣಬೇಡ, ನಿನ್ನ ಮಾತು ಸತ್ಯ, ನಾವಿರುವ ನಾಡಿನಲ್ಲೇ, ನಮ್ಮ ದೇಶದಲ್ಲೇ ಪ್ರೀತಿಯಿಂದ ನಮಗಿರುವ ಅವಕಾಶದಲ್ಲೇ ದುಡಿಯುತ್ತಾ, ನಗುತ್ತಾ ಬಾಳನ್ನು ನಡೆಸೋಣ, ಒತ್ತಡದಲ್ಲಿ ನಡೆಸುವ ಜೀವನ ನಮಗೇಕೆ.. ಬಾಯಿತುಂಬ ನಾನು ನೀನು ಒಂದೆಡೆ ಕೂತು ಮಾತನಾಡಲು ಸಾಧ್ಯವಿಲ್ಲದಂತೆ ದುಡಿಮೆ ನಮಗೇಕೆ..? ಹೊಟ್ಟೆ ತುಂಬಿದರೆ ಸಾಕು, ಭವಿಷ್ಯಕೆ ತುಸು ಹೊನ್ನಿದ್ದರೆ ಸಾಕು, ನಾವೆಷ್ಟೇ ಓದಿದ್ದರೇನು, ಅದರ ಮೆಲುಕು ಬೇಡ, ವಿದೇಶಕ್ಕೆ ಹೋಗಿ ಗಳಿಸಿ ಇಲ್ಲಿ ಬಂದು ಅರಮನೆ ಕಟ್ಟುವ ಕನಸು ಬೇಡ, ಆ ಅರಮನೆ ಕಟ್ಟುವ ಕಾಯಕದಲ್ಲೆ ನಾನು ನೀನು ಬೆಂದು ಬಸವಳಿದು ದುಡಿವ ಕಾಯಕದಲ್ಲೇ ದಿನಕ್ಕೆ ನಾನು ನೀನು ಎಷ್ಟು ಬಾರಿ ಮಾತನಾಡಬಹುದು ಅಲ್ಲವೇ ಎಂದಳು. ಮನಕ್ಕೂ ಹೌದೆನ್ನಿಸಿತು. ವಿದೇಶದಲ್ಲಿ ಗಳಿಸಿ ನಮ್ಮೂರಿಗೆ ನಾವು ಪುನಃ ಬರುತ್ತೇವೋ ಇಲ್ಲವೊ ಗೊತ್ತಿಲ್ಲ.

      ವಿದೇಶಕ್ಕೆ ದುಡಿಮೆಗೆಂದು ಇದ್ದುದನ್ನು ಬಿಟ್ಟು  ಹೋದವರು ಬಂದಿದ್ದು ಕಡಿಮೆ, ಅವರ ಜೀವನವು ವೈಭವೋಪೇತವಾಗಿದ್ದರೂ ಅದು ನಮಗೆ ಬೇಡ, ನಮಗೆ ನಮ್ಮ ಬದುಕಿಗೆ ನೆಮ್ಮದಿ ಮುಖ್ಯ, ಹಣ ಮುಖ್ಯವಲ್ಲ ಎಂದಳು ಮನಕ್ಕೆ ಅವಳ ನುಡಿಯು ತೀರ ಆಪ್ತವೆನಿಸಿತು, ಬಿರುಬಿಸಿಲಿನಲ್ಲಿ ಸುರಿವ ಮಳೆಧಾರೆಯಂತೆ ಅವಳ ನುಡಿಯಲ್ಲಿ ಮನದ ಚಿತ್ತವು ಅವಳ ಹಿತಧಾರೆಗೆ ನಲಿಯುತ್ತಾ ಭುಜವನ್ನೂ ಅವಳ ಭುಜಕ್ಕೇ ಹಾಗೆಯೇ ತಾಕಿಸಿ ಕಡಲಲೆಗಳ ಎಣಿಸುತ್ತಾ ಬೀಸುವ ತಂಗಾಳಿಗೆ ತನುವೊಡ್ಡಿ ಹೀಗೆ ಕೂರುವ ಘಳಿಗೆಯಲ್ಲಿ ಎಷ್ಟು ಹಿತವಿದೆಯಲ್ಲವೇ..? ಹೌದು, ಒತ್ತಡದ ಕಾಯಕದಲ್ಲೆ ಅತೀಯಾಸೆಯಲ್ಲೇ ನಮ್ಮ ಬದುಕು ಮುಗಿದು ಹೋಗುವುದು ಬೇಡ, ಪ್ರೀತಿಯ ನಾವೆಯಲ್ಲಿ ನಾವಿಬ್ಬರು ತುಸು ಕಡಿಮೆ ಹೊನ್ನಾದರೂ ಸಾಕು ಅದರಲ್ಲೇ ಬದುಕು ಸಾಗಿಸೋಣ, ಬಾಳಿನುದ್ದಕ್ಕೂ ಪ್ರೀತಿಯ ಓರಣವು ಎದುರು ನೋಡೋಣ, ಪ್ರೀತಿಯ ಹಂದರದಲ್ಲೇ ಜಗವ ಮರೆಯೋಣವೆನ್ನುತ್ತಾ ಹರಟೆಹೊಡೆಯುತ್ತಾ ವಿದೇಶಕ್ಕೆ ಹೋಗುವ ಅತೀ ಗಳಿಸುವ ಆಸೆಯನ್ನು ಕೈಬಿಟ್ಟು ನಮ್ಮೂರ ನಮ್ಮ ಪುಟಾಣಿ ಆಲಯದಲ್ಲೇ ನಮ್ಮ ಕನಸಿನ ಗೂಡನ್ನು ಕಟ್ಟಿ ನಿತ್ಯ ಒಲವ ರಂಗೋಲಿ ಹಾಕಲು ನಾವು ಪಣತೊಡುತ್ತಾ .. ಪ್ರೀತಿಯ ಬದುಕಿಗೆ ಸೈ ಎಂದೆವು..ಬೀಸುವ ತಂಗಾಳಿಯು ಮೆತ್ತನೆ ಹೇಳಿತು ನೀವು ಬರುತಿರಿ ನಿತ್ಯವಿಲ್ಲಿಗೆಂದು..ಕಡಲಲೆಗಳು ಗುನುಗಿದವು ನೀವು ನಮ್ಮನ್ನೆಣಿಸಲು ಬರುತಿರಿ ನಿತ್ಯವೆಂದಂತೆ ಅನುಭವ..ಎಲ್ಲವೂ ನಿರ್ಮಲ ಒಲವು ಬೆಸೆದ ಮನಗಳ ಚಿತ್ತಾರ..

         ರಾಮಚಂದ್ರ ಸಾಗರ್

Wednesday, 21 December 2016

ಕಾದಿರುವೆ ನಿನಗಾಗಿ..

ಕಾತರಿಸುತಿದೆ ಮನವಿಂದು
ಮುಸ್ಸಂಜೆ ಕಡಲತಡಿಯಲಿ
ನಿನ್ನ ಗುಣಗಾನ ಮಾಡಲೆಂದು
ನೀ ಬರುವೆಯೇನು..

ಅಲೆಗಳ ಸಾವರಿಸಿದ 
ತಂಗಾಳಿಯ ಹಿತದಲ್ಲಿ
ನೀ ಜೊತೆಯಿರದ
ಕೊರಗಿನ ನೋವಲ್ಲಿ
ಕಾದಿರುವೆನು ನಿನಗಾಗಿ ನಾ ನೊಂದು..

ತಡಿಯ ಅಪ್ಪುವ 
ಅಲೆಗಳಿಗು ವ್ಯಸನವು
ತಣಿವು ತುಂಬಿದ
ತಂಗಾಳಿಯೂ ತಣಿವೆನಿಸದು
ನೀ ಕಾಡುತಿರಲು ಒಂಟಿ
ನನ್ನ ಮನಕೆ..

ಬಾಳ ನಾವೆಯಲ್ಲಿ
ಜೊತೆಯಾದ ನೀನು
ಮುಸ್ಸಂಜೆ ರಂಗಲ್ಲಿ
ಒಲವ ರಂಗೋಲಿ
ಹಾಕುವೆನು ನಿನಗಾಗಿ
ನೀ ಬರುವೆಯೇನು..

ಕನವರಿಕೆಯ ಕಾರ್ಮೋಡವನು
ನೀ ಕರಗಿಸುವೆಯೇನು
ಕಾತರಿಸುವ ಮನಕೆ
ನೀ ರಮಿಸುವೆಯೇನು..

ಕಾದಿರುವೆನು ನಿನಗಾಗಿ
ಕಡಲತಡಿಯಲಿಂದು...
      
       ರಾಮಚಂದ್ರ ಸಾಗರ್