Sunday, 2 August 2020

ಎಲ್ಲಿ, ಯಾರಿಂದ ತಪ್ಪಾಗಿದೆ?


(ಕಾಲ್ಪನಿಕ ಬರಹ)

ನಾನು ಅನೇಕ ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿರುವೆ. ಕೆಲವು ವರ್ಷಗಳಿಗೊಮ್ಮೆ ಆಗಾಗ್ಗೆ ಭಾರತಕ್ಕೆ ಬರುತ್ತಿದ್ದೆ. ಬರುವಾಗಲೆಲ್ಲಾ ಬಂಧು ಬಳಗದವರಿಗೆ, ಅಕ್ಕರೆಯ ಸ್ನೇಹಿತರಿಗೆ ಸಾಕಷ್ಟು ಉಡುಗೊರೆಗಳನ್ನು ತರುತ್ತಿದ್ದೆ. ಮುಖ್ಯವಾಗಿ ನಾನು ಅಮೇರಿಕಾದಲ್ಲಿ ಕೆಲಸಕ್ಕೆ ಸೇರಿದ ಮೇಲೆಯೇ ಊರಿನಲ್ಲಿದ್ದ ನನ್ನ ಕುಟುಂಬದವರು, ಬಳಗದವರು ಸಾಕಷ್ಟು ಚೇತರಿಕೆಯನ್ನು ಕಂಡರು. 
ಸಾಕಷ್ಟು ಭೂಮಿ ಇದ್ದರೂ ಅಭಿವೃದ್ಧಿ ಪಡಿಸಲು ಹಣಕಾಸಿನ ಕೊರತೆಯಿತ್ತು. ಅದೂ ಸಹಾ ನಾನು ನೀಡಿದ ಆರ್ಥಿಕ ಸಹಾಯದಿಂದಲೇ ನೆರವೇರಿತು. ಬೇಸಿಗೆಯಲ್ಲೂ ನೀರಿನ ವ್ಯವಸ್ಥೆಯಾಗಿ ಇಡೀ ಗದ್ದೆ ಮತ್ತು ತೋಟ ಹಸಿರಿನಿಂದ ನಳನಳಿಸುವಂತಾಯಿತು. ಇದ್ದ ಹಳೇ ಮನೆಯ ದುರಸ್ತಿಯನ್ನು ನಾನು ಕಳುಹಿಸುತ್ತಿದ್ದ ಹಣದಿಂದಲೇ ಮಾಡಿಸಿದರು. ಇದರ ನಡುವೆ ಅನೇಕ ಜನ ಸ್ನೇಹಿತರಿಗೆ ಹಣಕಾಸಿನ ನೆರವನ್ನು ಮಾಡಿದ್ದೆ. ಅದರಿಂದ ಅವರು ಸಹಾ ಉದ್ಯೋಗವನ್ನು ನಡೆಸಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸ್ವಾವಲಂಬಿಗಳಾಗಿದ್ದರು. 
ಏನಿಲ್ಲವೆಂದರೂ ವಾರದಲ್ಲಿ ಎರಡು ಮೂರು ಬಾರಿ ಊರಿನಿಂದ ನನಗೆ ಕರೆ ಬರುತ್ತಿತ್ತು. ಬಹಳ ಅಕ್ಕರೆಯಿಂದ ಮಾತನಾಡುತ್ತಿದ್ದರು. ಏನು ಕೇಳುವುದನ್ನು ಮರೆತರೂ ಮತ್ತೆ ಯಾವಾಗ ಊರಿಗೆ ಬರುತ್ತೀಯಾ? ಹೇಗಿದ್ದೀಯಾ? ಒಬ್ಬನೇ ಎಷ್ಟು ವರ್ಷವಂತ ಭ್ರಹ್ಮಚಾರಿಯಾಗಿ ಇರುತ್ತೀಯ? ಬೇಗನೇ ಮದುವೆಯಾಗು. ಈ ಬಾರಿ ನೀನು ಊರಿಗೆ ಬಂದಾಗ ಖಂಡಿತವಾಗಿ ನಿನ್ನ ಮದುವೆಯನ್ನು ಮಾಡಿಯೇ ತೀರುತ್ತೇವೆ. ನಿನ್ನ ಮನದ ಇಂಗಿತವನ್ನು ಈಡೇರಿಸುವ ಸೌಖ್ಯವತಿಯು ನಿನಗೆ ಒಲಿದು ಬರುತ್ತಾಳೆ. ಎಷ್ಟೇ ಆದರು ಹೂವಂತ ಮನದವನು ನೀನು. ನಿನಗೇ ಆ ದೇವರು ಖಂಡಿತವಾಗಿಯೂ ಉತ್ತಮ ಕನ್ಯೆಯನ್ನೇ ಕರುಣಿಸುತ್ತಾನೆ. ಈ ಬಾರಿ ನೀನು ಊರಿಗೆ ಬಂದರೆ ಒಂಟಿಯಾಗಿ ಅಮೇರಿಕಾಗೆ ಹಿಂತಿರುವುದಿಲ್ಲ. ಜೊತೆಯಾಗಿಯೇ ಹಿಂತಿರುಗುವೆ. ಇದು ಸತ್ಯ. ಎಲ್ಲದಕ್ಕೂ ಕಾಲ ಕೂಡಬೇಕು. ನೀನು ಊರಿಗೆ ಆದಷ್ಟು ಬೇಗ ಬಾ ಎಂದು ಎಲ್ಲರೂ ಅಕ್ಕರೆಯಿಂದ ಹಂಬಲಿಸುತ್ತಿದ್ದರು. 
ನನಗೂ ಇವರೆಲ್ಲರ ಮಾತನ್ನು ಕೇಳಿ ಆದಷ್ಟು ಬೇಗ ಊರಿಗೆ ಹೋಗಬೇಕೆನ್ನುವ ಆಸೆ ಅರಳಿತು. 
ಏನೇ ಆಗಲಿ ಹರೆಯದ ಘಳಿಗೆಯಲ್ಲಿ ಕಂಡ ಕನಸುಗಳ ಸಕಾರವಾಗಬೇಕು. ಈಗ ಕೈಯಲ್ಲಿ ಸಾಕಷ್ಟು ಗಳಿಸಿದ ಹಣವಿದೆ. ಉತ್ತಮ ಕೆಲಸವಿದೆ. ಬಾಳು ಸಾರ್ಥಕ್ಯದ ದಡ ಸೇರಲು ಸಂಗತಿ ಎನ್ನುವ ನೌಕೆಯ ಅಗತ್ಯವಿದೆ. ವಯಸ್ಸು ಮೂವತ್ತರ ಸನಿಹದಲ್ಲಿದೆ. ಬೇಗನೇ ಮದುವೆಯಾಗುವುದು ಉತ್ತಮ. ಈಗ ಮನೆಯವರಿಗೂ ಕಷ್ಟ ಎನ್ನುವುದು ಮರೆಯಾಗಿದೆ. ನನಗೂ ಸಂಭ್ರಮದ ದಿನಗಳೇ ಎದುರಾಗುತ್ತಿವೆ. ಈಗಿರುವ ಸಂತಸದ ಜೊತೆಗೆ ಇನ್ನಷ್ಟು ಸಂತಸವೂ ಜೊತೆಯಾಗುತ್ತದೆ. 
ಮದುವೆಯೆನ್ನುವ ಪಾವಿತ್ರ್ಯ ಬಂಧದಲ್ಲಿ ಒಲವಿನ ತೇರೆಳೆಯಲು ಬರುವವಳ ಕನಸು ಕಾಣುತ್ತಾ ಹೀಗೆಯೇ ಊರಿಗೆ ಹೊರಡುವ ಕನಸು ಕಾಣತೊಡಗಿದೆ.
ನಾನು ಊರಿಗೆ ಬರುವುದೆಂದರೆ ಎಲ್ಲರಿಗೂ ಒಂದು ರೀತಿಯಲ್ಲಿ ಹಬ್ಬವೇ. ನನಗಾಗಿ ಇಷ್ಟದ ಅಡುಗೆಯನ್ನು ಮಾಡಿ ಮನೆಯವರು, ಬಳಗದವರು ಸಂಭ್ರಮಿಸುತ್ತಿದ್ದರು. ಸ್ನೇಹಿತರು ನಾನು ಬರುವ ಹಾದಿಯನ್ನೇ ಕಾಯುತ್ತಿರುತ್ತಿದ್ದರು. ನನಗೆ ಎಲ್ಲರೂ ಪದೇ ಪದೇ ಫೋನ್ ಮಾಡಿ ಎಲ್ಲಿದ್ದೀಯಾ? ಇನ್ನು ಎಷ್ಟೊತ್ತಾಗುತ್ತದೆ? ಛೇ, ವಿಮಾನ ಬುರುವುದು ತಡವಾಯಿತೆ? ಹೀಗೆ ಕಾತರದ ಅಲೆಯೇ ಸುಳಿದಾಡುತ್ತಿತ್ತು. ಕೊನೆಗೆ ನನ್ನನ್ನು ನೋಡಿದೊಡನೆ ಎಲ್ಲರೂ ಬಂದು ಸುತ್ತುವರಿದು ಸಂಭ್ರಮಿಸುತ್ತಿದ್ದರು. 
ನಾನು ಊರಿಗೆ ಬಂದು ಹೋಗುವವರೆಗೂ ಎಲ್ಲರೂ ತಮ್ಮ ಕೆಲಸವನ್ನು ಬಿಟ್ಟು ನನ್ನ ಜೊತೆಯಲ್ಲೇ ಇರುತ್ತಿದ್ದರು. ನಾನು ಏನೇ ಕೇಳಿದರು ಕ್ಷಣಾರ್ಧದಲ್ಲಿ ನನ್ನ ಬಯಕೆ ಈಡೇರುತ್ತಿತ್ತು. ನಾನು ಊರಿಗೆ ಬಂದಾಗ ಇವರ ಮೊಗದಲ್ಲಿ ಅರಳುವ ನಗುವು ನೋಡಿ ನಾನು ಬಾಳಲ್ಲಿ ಕಂಡ ನೋವು, ಅಮೇರಿಕಾದಲ್ಲಿ ಒಬ್ಬಂಟಿಯೆನ್ನುವ ಕೊರಗು ಮರೆಯುತ್ತಿದ್ದೆ. ನಾನು ಅಮೇರಿಕಾಗೆ ಹಿಂತಿರುವುದು ಎಂದೊಡನೆ ಎಲ್ಲರಿಗೂ ಬೇಸರ ಮೂಡುತ್ತಿತ್ತು. ನನಗಿಂತ ಒಂದು ಪಟ್ಟು ಹೆಚ್ಚು ಬೇಸರ ಇವರಿಗೆ! ಇನ್ನೂ ಒಂದೆರಡು ದಿನ ಇರಬೇಕಿತ್ತು. ಏಕಿಷ್ಟು ಬೇಗನೇ ಹೊರಡುತ್ತೀಯಾ? ಎನ್ನುವ ಪ್ರಶ್ನೆಗಳೇ ಪದೇ ಪದೇ ಕಾಡುತ್ತಿದ್ದವು.
ಈಗ ಇಡೀ ಜಗತ್ತಿಗೆ ಕೊರೋನಾ ಕಂಟಕ ಎದುರಾಗಿದೆ. ಎಲ್ಲರೂ ನೋವಿನ ಸ್ಪರ್ಶದ ಸನಿಹ ಹೋಗಿದ್ದಾರೆ. ಅಮೇರಿಕಾದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಇಂದು ಮಂಕಾಗಿ ಹೋಗಿವೆ. ಇಡೀ ವೈದ್ಯಕೀಯ ವಿಜ್ಞಾನವೇ ಈ ವೈರಸ್ ನ್ನು ಕಟ್ಟಿಹಾಕಲು ಆಗದೇ ಸೋತಿದೆ. ದಿನವೂ ಎಲ್ಲೆಡೆಯೂ ಹೋಗುವಂತಿಲ್ಲ. ಎಲ್ಲಿ ನೋಡಿದರೂ ನಿರ್ಬಂಧ. ಇತ್ತೀಚೆಗೆ ಅಮೇರಿಕಾದಲ್ಲಿ ನೆಲೆಸುವುದು ನನಗೆ ಕಷ್ಟವೆನಿಸಿತು. ಏನೇ ಆಗಲಿ ಊರಿಗೆ ಮರಳುವುದು ಉತ್ತಮವೆಂದು ನಿರ್ಧರಿಸಿದೆ. ಭಾರತದಲ್ಲು ಕೊರೋನಾದ ಅಟ್ಟಹಾಸ ಇದ್ದರೂ ಅದು ಅಮೇರಿಕಾವನ್ನು ಬಾಧಿಸಿದಷ್ಟು ಕಾಡುತ್ತಿಲ್ಲ. ಭಾರತೀಯರು ಎಷ್ಟೇ ಅಂದರು ಧೈರ್ಯವಂತರು. ಎಂತಹ ಸಂಕಷ್ಟದಲ್ಲು ಗೆದ್ದು ನಿಲ್ಲುವ ಛಲವನ್ನು ಹೊಂದಿದ್ದಾರೆ. ಅದುವೇ ನನಗೆ ಭದ್ರತೆಗೆ ಯೋಗ್ಯವಾದ ಜಾಗ. ಆದಷ್ಟು ಬೇಗನೇ ಊರಿಗೆ ಮರಳುವುದು ಉತ್ತಮವೆಂದು ಅಂತೂ ಪ್ರಯಾಣ ಆರಂಭಿಸಿದೆ..
ಅಂತು ಊರಿಗೆ ಬರುತ್ತಿರುವ ವಿಚಾರವನ್ನು ಎಲ್ಲರಿಗೂ ತಿಳಿಸಿದೆ. ಮನೆಯವರು ಆಯ್ತು ಈ ಸಮಯದಲ್ಲಿ ನೀನು ಭಾರತಕ್ಕೆ ಮರಳುತ್ತಿರುವುದು ಉತ್ತಮವೇ? ಬೇಗನೇ ಬಾ ಎಂದರು. ಇನ್ನು ಕೆಲವು ಸ್ನೇಹಿತರು, ಬಳಗದವರು ಅಯ್ಯೋ ಈ ಸಮಯದಲ್ಲಿ ಪ್ರಯಾಣ ಉತ್ತಮವಲ್ಲ. ಈ ಹಳ್ಳಿಯಲ್ಲಿ ಸರಿಯಾದ ಆಸ್ಪತ್ರೆಯಿಲ್ಲ. ಇಲ್ಲಿ ಬಂದು ಏನ್ಮಾಡ್ತೀಯಾ? ಅಲ್ಲೇ ಕೆಲವು ಸಮಯ ಕಳೆ ಎಂದರು. ಆದರೆ ಏನು ಮಾಡುವುದು? ನಾನೀನು ಪ್ರಯಾಣ ಆರಂಭಿಸಿಯಾಗಿದೆ. ಈಗ ನನಗೆ ಅರಿವಾಗುತ್ತಿದೆ. ಈಗ ನಾನು ಊರಿಗೆ ಮರಳುವುದರಿಂದ ಅಲ್ಲಿ ಇವರಿಗೆ ಖಂಡಿತವಾಗಿಯೂ ಹಿತ ಕಾಣುವುದಿಲ್ಲ. ಬೇಸರವೇ ಅಲೆಯಾಗುವುದೆನ್ನುವುದು ಖಚಿತವಾಯಿತು. ಆದರೆ ಈಗ ಏನು ಮಾಡುವುದು?
ಅಂತೂ ಬೆಂಗಳೂರು ಬಂದು ತಲುಪಿದೆ. ಮೊದಲೇ ಅಮೇರಿಕಾದಲ್ಲಿ ಸ್ವಲ್ಪ ಶೀತದಿಂದ ಬಳಲುತ್ತಿದ್ದೆ. ಸರ್ಕಾರದ ಆದೇಶದಂತೆ ವಿದೇಶದಿಂದ ಬಂದವರು 14ದಿನಗಳ ಕ್ಯಾರಂಟೈನ್‍ಗೆ ಅವರು ನಿಗದಿ ಪಡಿಸಿದ ಹೋಟೆಲ್‍ಗೆ ಹೋದೆ. ನೇರವಾಗಿ ಮನೆಗೆ ಹೋಗಲು ಆಗಲಿಲ್ಲ ಎನ್ನುವುದು ಒಂದೆಡೆ ಬೇಸರವಾದರೆ ಅಲ್ಲಿನವರ ಆರೋಗ್ಯದ ದೃಷ್ಟಿಯಿಂದ ಇದು ಅಗತ್ಯವೂ ಹೌದು ಎನ್ನುವುದು ಸತ್ಯ. ಹಾಗಾಗಿ ನಾನು ಬೇಸರಿಸಿಕೊಳ್ಳದೇ 14 ದಿನಗಳನ್ನು ಕಳೆಯುವುದರಲ್ಲಿ ತಲ್ಲೀನನಾದೆ. ಸುಮಾರು ಆರೇಳು ದಿನಗಳಾದವು. ಶೀತದ ಜೊತೆಗೆ ಅತಿಯಾದ ಆಯಾಸ ಹಾಗೆಯೇ ಮುಂದುವರೆದಿತ್ತು. ಸುಧೀರ್ಘವಾದ ಪ್ರಯಾಣದ ಜೊತೆಗೆ ಈ 14 ದಿನಗಳನ್ನು ಕಳೆಯಬೇಕೆನ್ನುವ ಇಕ್ಕಟ್ಟು ಮನಸ್ಸಿಗೆ ಮಾಡಿದ ಘಾಸಿಯಿಂದ ಸ್ವಲ್ಪ ಬೇಸರದಲ್ಲೇ ಮನ ದಿನಗಳನ್ನು ಎಣಿಸುವಂತೆ ಮಾಡಿತು. ಇತ್ತಕಡೆ ಮನೆ, ಸ್ನೇಹಿತರು ಫೋನ್ ಮಾಡಿ ವಿಚಾರಿಸುತ್ತಿದ್ದರು. ಹೀಗೆ ದಿನಗಳು ಕಳೆದಂತೆ ಸುಮಾರು ಹತ್ತನೇ ದಿನ ಇದ್ದಕ್ಕಿದ್ದಂತೆ ಅತಿಯಾಗಿ ಜ್ವರ ಕಾಡಿಸಲಾರಂಭಿಸಿತು. ಇನ್ನೊಂದೆಡೆ ಸ್ವಾಬ್ ಟೆಸ್ಟ್ ರಿಪೋರ್ಟ್ ಕೂಡ ಪಾಸಿಟಿವ್ ಎಂದು ಬಂತು. ಕೂಡಲೇ ಮನೆಯವರಿಗೆ, ಸ್ನೇಹಿತರಿಗೆ ಕರೆಮಾಡಿದೆ. ಅಷ್ಟರೊಳಗಾಗಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 
ಈ ಸಮಯದಲ್ಲಿ ಮನಸ್ಸು ಬಹಳ ಖಿನ್ನತೆಗೆ ಒಳಗಾಯಿತು. ಮನೆ, ಸ್ನೇಹಿತರು ಎಷ್ಟೇ ಧೈರ್ಯದ ಮಾತುಗಳನ್ನು ಹೇಳಿದರು ಮನಸ್ಸಸಿಗೆ ಒತ್ತಡ ಕಡಿಮೆಯಾಗಲಿಲ್ಲ. ಹೀಗೆ ದಿನ ಕಳೆಯುತ್ತಾ ಸುಮಾರು ಒಂದು ವಾರಾವಾಯಿತು. ಈಗ ನಾನೇ ಎಲ್ಲರಿಗೂ ಫೋನ್ ಮಾಡಬೇಕು. ಮನೆಯವರು ಧೈರ್ಯದ ಮಾತುಗಳನ್ನಾಡಿದರೆ ಉಳಿದವರು ಎಲ್ಲಿ ಏನು ಉಸಾಬರಿ ಎಂದು ಮೌನಿಯಾಗಿದ್ದರು. ಹಲವರ ಫೋನ್ ಬೇರೆ ಯಾರೋ ಎತ್ತಿ ಎಲ್ಲಿಯೋ ಹೋಗಿದ್ದಾರೆ ಎನ್ನುವ ಮಾತು.
 ಈಗ ನನಗೆ ಅರ್ಥವಾಯಿತು. ಒಟ್ಟಾರೆ ನಾನೀಗ ಹಲವರಿಗೆ ಈ ಸಮಯದಲ್ಲಿ ಬೇಡವಾಗಿದ್ದೇನೆ ಎನ್ನುವುದು ದಿಟವಾಯಿತು. ನನ್ನ ಚಿಕಿತ್ಸೆ ಹೀಗೆ ಮುಂದುವರೆಯುತ್ತಾ ಸುಮಾರು ಹದಿನೈದು ದಿನಗಳಾದರೂ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲೇ ಇಲ್ಲ. ಮೂರು ಬಾರಿಯ ವರದಿಯಲ್ಲಿಯೂ ಪಾಸಿಟಿವ್ ವರದಿಯೇ ಇತ್ತು. ವೈದ್ಯರು ಸಾಕಷ್ಟು ಧೈರ್ಯದ ಮತ್ತು ಸಕಾರಾತ್ಮಕ ಮಾತುಗಳನ್ನಾಡಿ ನನಗೆ ಹುರಿದುಂಬಿಸುತ್ತಿದ್ದರು. ಫೋನ್ ರಿಂಗಾದರೆ ಅದು ಖಂಡಿತವಾಗಿಯೂ ನನಗೆ ಮೆಡಿಕಲ್ ಕೌನ್ಸಿಲಿಂಗ್‍ನವರದೇ ಆಗಿರುತ್ತಿತ್ತು. ನನಗೆ ಅವರ ಮಾತುಗಳನ್ನು ಕೇಳುತ್ತಾ ಮನ ಪಾಸಿಟಿವ್ ಮೂಡ್ ನಲ್ಲಿ ಬಂದರೂ ಕೆಲವು ಕ್ಷಣದ ನಂತರ ಮತ್ತೆ ನಕರಾತ್ಮಕ ಚಿಂತನೆ!
ಇತ್ತ ಮನೆಗೆ ಫೋನ್ ಮಾಡಿದೆ. ಅವರಲ್ಲಿ ಬೇಸರ, ನೋವು, ದುಃಖ ಏನೇ ಇದ್ದರೂ ತೋರಿಸಿಕೊಳ್ಳದೇ ನನಗೆ ಸಮಾಧಾಸಿಸುತ್ತಿದ್ದರು. ಒಮ್ಮೆ ಎಲ್ಲರನ್ನು ನೋಡಬೇಕೆಂದರೂ ಅದು ಅಸಾಧ್ಯ. ಕೋವಿಡ್ ವಾರ್ಡ್ ಬಳಿ ಯಾರನ್ನು ಕಳಿಸುವುದಿಲ್ಲ. ಮನೆಯಲ್ಲಿ ಅಪ್ಪ, ಅಮ್ಮನಿಗೆ ವಯಸ್ಸಾಗಿದೆ. ಅವರಿಗೆ ಒಡಾಡಲು ಆಗುವುದಿಲ್ಲ. ಇರುವ ತಂಗಿಗೆ ಪೇಟೆಗೆ ಬಂದು ನನಗೆ ಊಟವನ್ನು ಕೊಡುವುದಕ್ಕೆ ಕಷ್ಟ. ಅವಳ ಇಷ್ಟವಿದ್ದರೂ ತೊಂದರೆಯೆಂದು ಬೇಡವೆಂದಿದ್ದೆ. ಬಳಗದವರು ಕೂಡ ಮನಸ್ಸು ಮಾಡಿಲ್ಲ. ಆಗ ಅಪ್ಪ ಒಂದು ದಿನ ನನಗೆ ಕರೆಮಾಡಿ ನಿನಗೆ ಮನೆಯಿಂದ ಊಟ ಕೊಟ್ಟು ಕಳುಹಿಸುವೆ. ನಿನ್ನ ಸ್ನೇಹಿತ ಮಂಜುವಿನ ಮನೆಗೆ ಈದಿನ ಹೋಗಿ ಹೇಳುವೆ ಎಂದರು. ಮನದಲ್ಲಿಯೇ ಎಣಿಸಿದೆ. ಹತ್ತು ಬಾರಿ ನಾನು ಫೋನ್ ಮಾಡಿದರು ತೆಗೆದುಕೊಳ್ಳದವನು ಇನ್ನು ಬರುವುದು ಸಾಧ್ಯವೇ?
ಎರಡು ದಿನಗಳ ನಂತರ ನಾನೇ ಮನೆಗೆ ಫೋನ್ ಮಾಡಿದೆ. ಆಗ ಅಪ್ಪನ ದನಿಯಲ್ಲಿ ಬೇಸರ, ದುಗುಡ ತುಂಬಿದೆ. ನಾನೇ ಹೇಳಿದೆ. ನಾನು ಇಲ್ಲಿ ಚೆನ್ನಾಗಿರುವೆ. ನೀವು ಹೇಗಿದ್ದೀರಾ? ಎಂದೆ. ಆಗ ಅತ್ತಕಡೆಯಿಂದ ಅಪ್ಪ ಬಿಕ್ಕುತ್ತಲೇ ಉತ್ತರಿಸಿದರು ಈ ಸಮಯದಲ್ಲಿ ನಿನ್ನನ್ನು ನೋಡಲು ನಮಗೆ ಆಗುತ್ತಿಲ್ಲ. ಅದಕ್ಕೆ ಕ್ಷಮಿಸು ಎಂದರು. ಇದ್ದ ಪರಿಸ್ಥಿಯನ್ನು ಅವಲೋಕಿಸಬೇಕು. ನಾನಾದರೆ ಮೂವತ್ತು ವರ್ಷದವನು. ಇಲ್ಲಿಯೇ ಪಕ್ಕದಲ್ಲಿ ಕೇವಲ ಮೂರು ವರ್ಷದ ಮಗುವಿದೆ. ಆ ಮಗುವಿನ ಬಗ್ಗೆ ನೋಡಿದರೆ ಮನಸ್ಸು ಬಹಳ ನೋವಿನಲ್ಲಿ ತೊಯ್ಯುತ್ತದೆ. ಹೀಗಿರುವಾಗ ಜಗದ ಸಾಕಷ್ಟು ತಿಳುವಳಿಕೆ ಹೊಂದಿದ ನಾನೇ ಬೇಸರಿಸಿಕೊಳ್ಳುವುದು ಹಾಸ್ಯಾಸ್ಪದ ಸುಮ್ಮನಿರಿ ಎಂದು ಅವರಿಗೆ ಧೈರ್ಯ ತುಂಬಿದೆ..ಅತ್ತ ಸ್ನೇಹಿತರ ಇಲ್ಲವೇ ಬಳಗದವರ ಮುಖಾಂತರ ಮನೆಯಿಂದ ಊಟ ಕಳುಹಿಸುವ ಅಪ್ಪನ ಯೋಜನೆ ವಿಫಲವಾಗಿದೆ. ಅದು ಅವರಿಂದ ಹೊರಹಾಕಲು ಆಗುತ್ತಿಲ್ಲ. ಎಲ್ಲವೂ ನನಗೆ ಅರ್ಥವಾಗಿ ಮನೆಯಲ್ಲಿ ಎಲ್ಲರಿಗೂ ಕೇಳಿದೆ ಎಂದು ಹೇಳಿ ಮೌನಿಯಾಗಿ ಒಂದೆಡೆ ಕುಳಿತೆ.
ಛೇ, ಬದುಕು ಎಷ್ಟು ನಿಗೂಢ! ಬಾಳಿನಲ್ಲಿ ಎಲ್ಲವೂ ಇದ್ದು ಇಲ್ಲದಂತೆ ಮಾಡುವ ಘಳಿಗೆಯಿತು. ಕೈಲಿ ಏನಿದ್ದರೇನು? ನಮ್ಮ ಬಳಿ ಯಾರು ಬರದಂತೆ ಮಾಡಿರುವ ಕಣ್ಣಿಗೆ ಕಾಣದ ಈ ವೈರಸ್ ನನಗೆ ಬದುಕಿನ ಎಷ್ಟೆಲ್ಲಾ ಸತ್ಯಗಳನ್ನು ತೋರಿಸಿತು.
 ಒಂದು ಕಾಲದಲ್ಲಿ ನಾನೆಂದರೆ ಬಹಳ ಪ್ರೀತಿಯಿಂದ ತಮ್ಮ ಜೀವವೇ ನೀಡುತ್ತೇನೆ ಎನ್ನುತ್ತಿದ್ದವರು ಈಗ ಮನೆಯಿಂದ ಊಟ ತಂದು ಆಸ್ಪತ್ರೆಗೆ ತಲುಪಿಸಲು ಹೆದರಿಕೆ! ಎಲ್ಲವೂ ವಿಧಿಯಾಟ. ಕಾಲದ ಮುಂದೆ ಯಾರು ಇಲ್ಲ! ಹಾಗಂದ ಮಾತ್ರಕ್ಕೆ ಇಲ್ಲಿ ಊಟಕ್ಕೆ ಕೊರತೆಯೇನಿಲ್ಲ. ಸಾಕಷ್ಟು ಪ್ರೋಟೀನ್ ತುಂಬಿದ ಆಹಾರವನ್ನು ಸರಿಯಾದ ಸಮಯಕ್ಕೆ ನೀಡುತ್ತಾರೆ. ಆದರೆ ಅಪ್ಪ, ಅಮ್ಮನ ಆಸೆ ಅವರು ಮಾಡಿದ ಅಡುಗೆಯನ್ನು ಮಗನಿಗೆ ಕಳುಹಿಸಿಕೊಡಬೇಕು ಎನ್ನುವುದಷ್ಟೇ.
ಇದೇ ಬೇಸರದಲ್ಲಿ ಆಸ್ಪತ್ರೆಯ ಕೋಣೆಯಲ್ಲಿ ಹಾಗೆಯೇ ಬೆಡ್ ಮೇಲೆ ಒರಗಿದ್ದೇನೆ. ಅಷ್ಟರಲ್ಲಿ ಫೋನ್ ರಿಂಗಾಯ್ತು. ಅತ್ತಕಡೆಯಿಂದ ವೈದ್ಯರು ಮಾತನಾಡಿದರು. ನಿಮ್ಮ ರಿಪೋರ್ಟ್ ನೆಗೇಟಿವ್ ಬಂದಿದೆ. ನಿಮ್ಮನ್ನು ನಾಳೆ ಡಿಸ್ಚಾರ್ಜ್ ಮಾಡುತ್ತೇವೆ ಎಂದರು. ಇದ್ದ ಖುಷಿಯನ್ನು ಕೂಡಲೇ ಮನೆಗೆ ಫೋನ್ ಮಾಡಿ ತಿಳಿಸಿದೆ. ಉಳಿದವರಿಗೆ ತಿಳಿಸೋಣವೆಂದರೆ ಅವರು ನನ್ನ ಕಾಲ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ವ್ಯರ್ಥ ಪ್ರಯತ್ನಬೇಡವೆಂದು ಸುಮ್ಮನಾನೆ.
ಮಾರನೇಯ ದಿವಸ ಆಸ್ಪತ್ರೆಯಿಂದ ನೇರವಾಗಿ ಊರಿಗೆ ಹೋದೆ. ಊರಿನ ತುಂಬಾ ನನದೇ ಸುದ್ದಿಯಾಗಿದೆ. ನನ್ನನ್ನು ನೋಡಿ ಹಲವರು ಓಡಿ ಹೋದರು. ಇನ್ನೊಂದೆಡೆ ಜನರು ಗುಂಪಾಗಿ ಬಂದು ಈ ಸಮಯದಲ್ಲಿ ನೀನು ಊರಿನ ಒಳಗೆ ಬರುವುದು ಬೇಡ. ನೀನು ಅಮೇರಿಕಾದಿಂದ ಬಂದವನು. ನಿನಗೆ ಕೊರೋನಾ ಇದೆ. ನಮ್ಮ ಊರೆಲ್ಲಾ ಹಾಳಾಗುವುದು ನಮಗೆ ಇಷ್ಟವಿಲ್ಲ. ನೀನು ಊರಿನ ಒಳಗೆ ಪ್ರವೇಶಿಸಕೂಡದು ಎಂದು ಬೊಬ್ಬೆ ಹಾಕತೊಡಗಿದರು. ಅಷ್ಟರಲ್ಲಿ ಅವರ ನಡುವೆ ನುಸುಳಿಕೊಂಡು ಬಂದ ನಮ್ಮಪ್ಪ ಆತನಿಗೆ ಕೊರೋನಾ ಇಲ್ಲ. ಆತ ಸಂಪೂರ್ಣ ಗುಣಮುಖನಾಗಿದ್ದಾನೆ. ಸುಮ್ಮನಿರಿ ಎಂದು ಪರಿಪರಿಯಾಗಿ ಬೇಡಿದರೂ ಜನ ಕೇಳುತ್ತಿಲ್ಲ. ಇತ್ತ ನನ್ನ ಬಂಧು ಬಳಗದವರು, ಸ್ನೇಹಿತರು ಯಾರು ಕಾಣುತ್ತಿಲ್ಲ. ವಯೋವೃದ್ಧ ನನ್ನ ತಂದೆಯೊಬ್ಬರೇ ಒಂಟಿಯಾಗಿ ತವಕಿಸುತ್ತಿದ್ದರು.
ಕೊನೆಗೆ ಪೋಲಿಸರೇ ಬಂದು ಜನರನ್ನು ಚದುರಿಸಿ ನನ್ನನ್ನು ಊರಿನ ಒಳಗೆ ಹೋಗಲು ಅನುವು ಮಾಡಿಕೊಡಬೇಕಾಯ್ತು. ಇದರ ಪರಿಣಾಮವಾಗಿ ಊರಿನವರ ದ್ವೇಷವೂ ಅಪ್ಪನ ಮೇಲಾಯ್ತು. ವೈದ್ಯರ ಶಿಫಾರಸ್ಸಿನಂತೆ ನಾನು 14ದಿನಳ ಕ್ವಾರಂಟೈನ್ ಮುಗಿಸಿದೆ. ಹೀಗೆ ದಿನಗಳು ಕಳೆಯುತ್ತಾ ಸುಮಾರು ಒಂದು ತಿಂಗಳಾಯಿತು. ನಮ್ಮ ಮನೆಯಲ್ಲೇ ಆರೋಗ್ಯವಾಗಿದ್ದೇನೆ. ಜೊತೆಗೆ ಜನರ ನಿಜಗುಣದ ದರ್ಶನವೂ ನನಗೆ ಆಗಿದೆ. ಅಲ್ಲಿ ಇಲ್ಲಿ ಚುಚ್ಚು ಮಾತಾಡುವವರ ಸಂಖ್ಯೆಯೇ ಹೆಚ್ಚಾಗಿದೆಯೇ ಹೊರತು ರೋಗದ ವಿರುದ್ಧ ಮಾತನಾಡುವ ಗುಣವಿಲ್ಲ. ಈಗ ಊರಿನಲ್ಲಿ ನಾನು ಮುಕ್ತವಾಗಿ ಓಡಾಡಲು ಇಷ್ಟವಿಲ್ಲ. ನನ್ನ ನೋಡಲು ಮನೆಗೆ ಯಾರೂ ಬರಲೂ ಇಲ್ಲ!
ಕೊರೋನಾ ನಾನು ಬಯಸಿ ಬಂದದ್ದಲ್ಲ. ಅದು ವಿಧಿ ಬರಹ. ಅದಕ್ಕೆ ಯಾರು ಏನು ಎನ್ನುವ ಬೇದವಿಲ್ಲ. ನಾನು ಎಷ್ಟೇ ಮುಂಜಾಗ್ರತೆವಹಿಸಿದರೂ ಅದು ನನಗೆ ಕಾಡಿತು. ಇದಕ್ಕೆ ನಾನು ಯಾರಿಗೆ, ಯಾವುದಕ್ಕೆ ಏನೆಂದು ದೂಷಿಸಲಿ? ಆದರೆ ನಾನೀಗ ಹಲವರಿಗೆ ಬೇದ, ಭಾವದ ಬಿಂಬಕವಾಗಿ ಕಾಣುತ್ತಿದ್ದೇನೆ. ಇನ್ನೂ ಕೆಲವರ ಮಾತಿನಂತೆ ಈ “ಕೊರೋನಾ ವಾಸಿಯಾದರೂ ಮತ್ತೆ ಕೆಲವು ಸಮಯದ ನಂತರ ಬರುತ್ತದೆ. ಆ ಮನೆಕಡೆ ಹೋಗಬೇಡಿ” ಎನ್ನುವ ಮಾತು ನಮ್ಮ ಮನೆಯವರಿಗೆ ಇನ್ನಷ್ಟು ಘಾಸಿ ಮಾಡಿದೆ. ಏನೇ ಆಗಲಿ ಇಷ್ಟೊಂದು ಕಠೋರವಾಗಿ ಜನರು ವರ್ತಿಸುವುದನ್ನು ನೋಡಿ ಮನೆಯವರೆಲ್ಲಾ ರೋಸಿ ಹೋಗಿದ್ದಾರೆ.. ಮನೆಯವರು ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಹೋಗುವುದಕ್ಕೆ ಮುಜುಗರವಾಗುತ್ತಿದೆ. ಅಲ್ಲೆಲ್ಲಾ ಕುಹಕದ ಮಾತುಗಳನ್ನೇ ಆಡುತ್ತಿದ್ದಾರೆ. ಊರಿನಲ್ಲಿ ಯಾರಿಗೆ ಶೀತ, ಜ್ವರ ಬಂದರೆ ಅದಕ್ಕೆ ನಾನೇ ಕಾರಣವೆಂದು ಬೊಬ್ಬೆ ಹಾಕುತ್ತಿದ್ದಾರೆ.
ಇತ್ತ ನಾನು ಯೋಚಿಸತೊಡಗಿದೆ. ಇಲ್ಲಿ ತಪ್ಪು ಎಲ್ಲಿಂದ ಆರಂಭವಾಗಿದೆ? ಯಾರಿಂದ ಘಟಿಸಿದೆ ಎನ್ನುತ್ತಾ..ಉತ್ತರ ಎಷ್ಟೇ ತಡಕಾಡಿದರೂ ಸಿಗುತ್ತಿಲ್ಲ! ಇನ್ನು ನಿಮಗೇನಾದರೂ...ದೊರೆಯಿತೆ?
ರಾಮಸಾಗರ್ ಸಾಗರ್