ಈ ಸುದಿನ ಸೆಪ್ಟಂಬರ್ ಮಾಹೆಯ ೨೩ನೇ ದಿನ ಪೌರಕಾರ್ಮಿಕರ ದಿನಾಚರಣೆ. ನಮ್ಮ ನಗರವನ್ನು ಶುಚಿತ್ವವಾಗಿಟ್ಟು ನಮ್ಮ ಆರೋಗ್ಯದ ರಕ್ಷೆಯಲ್ಲಿ ಸದಾ ನಿರತರಾಗಿ ನಗರ ಆರೋಗ್ಯದ ರಕ್ಷೆಗಾಗಿ ಸದಾ ಹೋರಾಡುವ ಯೋಧರಾಗಿ ಶ್ರಮಿಸುವ ಎಲ್ಲಾ ಪೌರಕಾರ್ಮಿಕರಿಗೆ ನನ್ನ ನಮನಗಳು.
ಇಡೀ ಊರಿನ ಜನರೆಲ್ಲ ಸವಿ ನಿದ್ರೆಯಲ್ಲಿ ಜಾರಿರುವ ಮುಂಜಾನೆಯ ಸಮಯದಲ್ಲಿ ಬೇಗನೇ ಎದ್ದು ಕರ್ತವ್ಯದ ಶ್ರದ್ಧೆಯೊಂದಿಗೆ ಎಲ್ಲರೂ ಕೈಜೋಡಿಸಿ ಊರಿನ ನೈರ್ಮಲೀಕರಣ, ನೀರು ಸರಬರಾಜು ಕಾರ್ಯಗಳಲ್ಲಿ ಮಗ್ನರಾಗಿ ನಮ್ಮೆಲ್ಲರ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಆ ಎಲ್ಲಾ ಕಾಯಕ ಚೇತನಗಳಿಗೆ ಈ ದಿನ ಗೌರವಿಸುವ ಸುಸಮಯ. ಬನ್ನಿ ಎಲ್ಲರೂ ಸೇರಿ ಅವರನ್ನು ತುಂಬು ಹೃದಯದಿಂದ ಗೌರವಿಸೋಣ. ಈ ದಿನವನ್ನು ನಮ್ಮ ಬಾಳಲ್ಲಿ ಅರ್ಥಪೂರ್ಣವಾಗಿಸೋಣ.
ಊರಿನ ಯಾವುದೇ ಸಮಸ್ಯೆಯಿರಲಿ ಮೊದಲು ನೆನಪಾಗುವುದು ನಮ್ಮೂರಿನ ಪೌರಸಭೆ. ಮನುಷ್ಯನ ಜನನದಿಂದ ಹಿಡಿದು ಆತನ ಮರಣದವರೆಗೂ ಇಲ್ಲಿನ ಸೇವೆಗಳು ಅಗತ್ಯ. ಜನನ ಪ್ರಮಾಣ, ಮರಣ ಪ್ರಮಾಣ ಪತ್ರಗಳೇ ಈಗ ಮನುಷ್ಯನ ಜನನ, ಅವಸಾನದ ದಾಖಲೆಗಳಾಗಿವೆ. ಊರಿನ ಯಾವುದೇ ಭಾಗದಲ್ಲಿ ಯಾವುದೇ ನೈರ್ಮಲೀಕರಣ ಸಮಸ್ಯೆ, ನೀರಿನ ಸಮಸ್ಯೆ, ರಸ್ತೆ, ಚರಂಡಿ, ಬೀದಿ ದೀಪ, ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಪೌರಸಭೆಗಳ ಪಾತ್ರ ಪ್ರಮುಖ.
ಇತ್ತೀಚೆಗೆ ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಪೌರಸಭಾ ಸಿಬ್ಬಂದಿಗಳ ಸೇವೆ ಅನನ್ಯ. ಕೋವಿಡ್ ಸಮಯದಲ್ಲಿ ಎಷ್ಟೋ ಜನ ಅಸುನೀಗಿದಾಗ ಅವರ ವಾರಸುದಾರರು ಶವ ಸಂಸ್ಕಾರ ಮಾಡದೇ ಕೆಲವೊಮ್ಮೆ ಕೆಲವರು ಪಲಾಯನ ಮಾಡಿದ್ದುಂಟು. ಆಸ್ತಿಗಾಗಿ ಬಡಿದಾಡುವವರು ಕೋವಿಡ್ ಹೆಮ್ಮಾರಿಗೆ ಬೆದರಿ ಉಸಿರಿನ ಸಂಬAಧಕ್ಕೆ ತಿಲಾಂಜಲಿ ಹೇಳಿದ್ದರು. ಅಂತಹ ಸಮಯದಲ್ಲಿ ಪೌರಸಭೆಗಳ ಕಾರ್ಮಿಕರು ಕೋವಿಡ್ ನಿಂದ ಮೃತಪಟ್ಟವರ ಶವÀ ಸಂಸ್ಕಾರ ಮಾಡಿ ಅಸುನೀಗಿದವರ ಆತ್ಮಕ್ಕೆ ಗೌರವಿಸಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ನಮ್ಮ ಅನೇಕ ಜನ ಕಾರ್ಮಿಕರು ತಮ್ಮ ನಿಸ್ವಾರ್ಥ ಸೇವೆಯಲ್ಲಿ ಬಲಿದಾನವಾಗಿದ್ದಾರೆ. ಅಂತವರೆಲ್ಲರ ಸೇವೆಯನ್ನು ಯಾವುದೇ ಪರಿಹಾರದ ಮೌಲ್ಯದಿಂದ ಅಳತೆಗೋಲಾಗಿಸಲು ಸಾಧ್ಯವೇ..? ಒಂದು ಕ್ಷಣ ಪೌರಕಾರ್ಮಿಕರಿಲ್ಲದ ನಿಮ್ಮ ಬದುಕು, ನಗರವನ್ನು ಕಲ್ಪಿಸಿಕೊಳ್ಳಿ. ಮನಸಾರೆ ಎಲ್ಲವನ್ನು ಅವಲೋಖಿಸಿದಾಗ ಮಾತ್ರವೇ ನೈಜತೆಯ ಮೌಲ್ಯ ಅರ್ಥವಾಗುತ್ತದೆ. ಇನ್ನೊಬ್ಬರ ಶ್ರಮಹ ಹನಿಗಳ ಮೌಲ್ಯ ಅರಿವಾಗುತ್ತದೆ.
ಸುಂದರ ನಗರಕ್ಕೆ ಅರ್ಪಿತವಾಗುವ ಪ್ರಶಸ್ತಿ, ಪ್ರಶಂಸೆಗಳು ಕಾರ್ಮಿಕರ ಕೈಗೆ ಪ್ರಧಾನವಾದರೆ ಉತ್ತಮ. ಕಾರ್ಮಿಕರು ಶ್ರಮದಾನ ಮಾಡಿ ದುಡಿದ ಕಾರ್ಯವನ್ನು ತಮ್ಮ ಕಾರ್ಯವೆಂದು ಹೆಮ್ಮೆಪಡುವವರು, ಹಾರಹಾಕಿಸಿಕೊಳ್ಳುವವರು ಕಡಿಮೆಯಾಗಬೇಕು. ಎಲ್ಲವೂ ಸಾಧ್ಯವಾಗಿದ್ದು ಪೌರಕಾರ್ಮಿಕ ನಿಷ್ಠೆಯಿಂದ ಎನ್ನುವುದನ್ನು ಅವರನ್ನು ದುಡಿಸಿಕೊಳ್ಳುವವರು ಅರ್ಥೈಸಿಕೊಳ್ಳಬೇಕು. ಅವರಿಗೆ ಸರಿಯಾದ ಕಾಲದಲ್ಲಿ ಉತ್ತಮ ಆರೋಗ್ಯ ತಪಾಸಣೆ, ಭವಿಷ್ಯನಿಧಿ, ವಿಮೆಯ ಸೌಲಭ್ಯಗಳು ದೊರೆಯುವಂತೆ ನೋಡುವುದು ಅವರಿಂದ ಕೆಲಸ ತೆಗೆದುಕೊಳ್ಳುವವರ ಮತ್ತು ಅವರಿಗೆ ಕೆಲಸ ಹೇಳುವವರ ಜವಬ್ದಾರಿ ಎನ್ನುವದನ್ನು ಸಹಾ ಅಧಿಕಾರ ನಡೆಸುವವರಿಗೆ ಅರ್ಥವಾಗಬೇಕು. ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಕಾಯ್ದೆ, ನಿಯಮಗಳ ನಿಬಂಧನೆಗಳಿವೆ. ಅವೆಲ್ಲವೂ ಕೂಡ ಪಾರದರ್ಶಕವಾಗಿ ಜಾರಿಮಾಡುವುದು ಕಾರ್ಮಿಕರನ್ನು ದುಡಿಸಿಕೊಳ್ಳುವವರು ಕೆಲಸ. ಜೊತೆಗೆ ಪೌರಕಾರ್ಮಿಕರ ಸೇವೆ ಪಡೆಯುವ ಪ್ರತೀ ನಾಗರೀಕನ ಜವಬ್ದಾರಿಯೂ ಹೌದು ಎನ್ನುತ್ತಾ..ಈ ದಿನ ಪೌರಕಾರ್ಮಿಕರ ದಿನಾಚರಣೆ. ಅವರನ್ನು ಗೌರವಿಸುವ ಸುದಿನ. ಊರಿನ ಎಲ್ಲರೂ ಸಹಾ ಶ್ರಮದ ಜೀವಿಗಳಾದ ಪೌರಕಾರ್ಮಿಕರಿಗೆೆ ಒಂದಾಗಿ ಗೌರವಿಸಿ ಅಭಿನಂದಿಸೋಣ ಅಕ್ಕೆಯಿಂದ ಬನ್ನಿ..
ರಾಮಚಂದ್ರ ಸಾಗರ್