![]() |
ಇದೇ ಪ್ರೇಮ ತ್ಯಾಗದ ಕಥಾ ಹಂದರವೇ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಾಯಕ ‘ಮನು’ವಿನ ಕಥೆ. ನಾಯಕನಾಗಿ ರಕ್ಷಿತ್ ಶೆಟ್ಟಿ ಅಮೋಘವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ‘ಪುಟ್ಟಿ’ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಒಳ್ಳೆಯ ನಟಿಯಾಗಿ ನೆಲೆಯೂರುವ ಸಾಕ್ಷ್ಯವನ್ನು ನಿರೂಪಿಸಿದ್ದಾರೆ ಎಂದರೆ ಅತಿಶಯವಲ್ಲ. ಮಧ್ಯಮ ವರ್ಗದ ಕುಟುಂಬದ ಇಬ್ಬರು ಪ್ರೇಮಿಗಳ ಬಣ್ಣದ ಚಿತ್ತಾರದ ಕನಸುಗಳು ಮೆರವಣಿಗೆಯು ಚಿತ್ರದಲ್ಲಿ ಮೊದಲು ನವಿರಾಗಿ ಮೂಡಿ ಬಂದು ನಿಜ ಪ್ರೀತಿಯೇ ವಿಜೃಂಭಿಸಿದೆ.
ತಾನು ಬಯಸಿದ ಜೀವದ ಹಿತವನ್ನೇ ಬಯಸಿ ಭವಿಷ್ಯದ ಹಿತಕ್ಕಾಗಿ ಎಲ್ಲವನ್ನೂ ಪಣಕ್ಕಿಟ್ಟು ಪವಿತ್ರ ಪ್ರೀತಿಗಾಗಿ ಕಥೆಯ ನಾಯಕ ಅನುಕ್ಷಣವೂ ಹಾತೊರೆಯುತ್ತಾನೆ. ಎಲ್ಲ ರೀತಿಯ ಕಷ್ಟವನ್ನು ಎದುರಿಸಲು ಸದಾ ಸನ್ನದ್ದವಾಗಿರುತ್ತಾರೆ. ಪ್ರೇಮದ ಯಶಸ್ಸಿಗಾಗಿ ನಿಜ ಪ್ರೇಮಿಯು ಯಾವುದೇ ತ್ಯಾಗಕ್ಕೂ ಸಿದ್ಧ ಎನ್ನುವುದನ್ನು ನಿರೂಪಿಸಲು ಯಾವುದೇ ರೀತಿಯ ಆಪತ್ತಿಗೂ ಬೆಲೆ ತೆರಲು ಮನು ಸಿದ್ಧವಾಗಿರುತ್ತಾನೆ.
ಬಯಸಿದ್ದೆಲ್ಲಾ ಬಾಳಲ್ಲಿ ಲಭಿಸಲು ಹಣ ಎನ್ನುವ ಇಂಧನವು ಅಗತ್ಯವಿರುತ್ತದೆ. ಮನು ಸಾಮಾನ್ಯ ಡ್ರೆöÊವರ್ ಆಗಿರುತ್ತಾನೆ. ಆತನಿಗೆ ತಿಂಗಳಿಗೆ ಕೇವಲ ಹನ್ನೆರಡು ಸಾವಿರ ಸಂಬಳ. ಆದರೆ ಆತ ಮತ್ತು ಪುಟ್ಟಿಯ ಪ್ರೇಮದ ಯಾತ್ರೆಯಲ್ಲಿ ಜೊತೆಯಾದವು ಸಾವಿರಾರು ಬಣ್ಣದ ಕನಸುಗಳು. ನಿತ್ಯವೂ ಕಾಣುವ ಕನಸುಗಳು ಎಂದು ನೆರವೇರುತ್ತವೆಂದು ದಾಪುಗಾಲಿಟ್ಟು ಕಾಡುವ ಪ್ರಶ್ನೆಗಳ ಸರಮಾಲೆಗಳು. ಇವುಗಳನ್ನೇ ಬೆಂಬತ್ತಿ ಮನುವಿನ ಮನಸ್ಸು ಓಡುತ್ತಿರುತ್ತದೆ.
‘ಪುಟ್ಟಿ’ಗೆ ಕಡಲ ಕಿನಾರೆಯಲ್ಲಿ ಮನೆಯನ್ನು ಕಟ್ಟಿ ಅಲ್ಲೇ ಜೀವನದ ಕೊನೆವರೆಗು ನೆಲೆಯಾಗಬೇಕೆನ್ನುವ ಆಸೆ. ಅವಳ ಆಸೆಯನ್ನು ನೆರವೇರಿಸುವ ನಿಜ ಪ್ರೇಮಿಯಾಗಿ ಮನು ಸಿದ್ಧವಾಗುತ್ತಾನೆ. ಅವಳ ಆಸೆಯನ್ನು ಈಡೇರಿಸುವುದೇ ತನ್ನ ಬಾಳಿನ ಗುರಿಯೆಂದು ಪಣತೊಡುತ್ತಾನೆ. ಅನುಮಪ ಕಡಲ ಕಿನಾರೆಯ ಬಳಿ ಮನೆಕಟ್ಟಿ, ಬೀಸುವ ಅಲೆಗಳನ್ನು ಎಣಿಸುತ್ತಾ, ಮುಸ್ಸಂಜೆಯ ರಂಗಲ್ಲಿ ಮೆಲುಗಾಳಿಗೆ ತನುವೊಡ್ಡಿ, ಅಲೆಗಳ ನಿನಾದಲ್ಲಿ ಪ್ರೇಮದ ಸ್ವರಮೇಳದಲ್ಲಿ ಅನುರಾಗದ ಗೀತೆಯನ್ನು ಕೇಳುತ್ತಾ ಪ್ರೇಮದ ಸುಧೆಯನ್ನು ಸವಿಯುತ್ತಾ ಬಾಳಿಗೆ ಜೊತೆಯಾದವಳ ನಗುವಿನಲ್ಲಿ ಬಾಳು ಸಾಗಲಿ ಎನ್ನುವ ಮಹೋನ್ನತ ಆಸೆಯಿಂದ ‘ಮನು’ ನಿತ್ಯವೂ ತವಕಿಸುತ್ತಿರುತ್ತಾನೆ.
ಆ ಆಸೆ ಕೈಗೂಡಲು ಕಾಡುವ ಹಣದ ಕೊರತೆಗೆ ಅವಕಾಶವೊಂದು ಅಪರಾದದ ರೂಪದಲ್ಲಿ ಎದುರಾಗುತ್ತದೆ..! ಮಾಡದ ತಪ್ಪನ್ನು ಒಪ್ಪಿಕೊಂಡು ಯಾರನ್ನೋ ರಕ್ಷಿಸಿ ಇನ್ನೇನೋ ಅಪೇಕ್ಷಿಸಿ ತನ್ನ ಬದುಕು, ಜೀವ ಒತ್ತೆಯಿಡುತ್ತಾನೆ. ಎಲ್ಲಕ್ಕೂ ಸಿದ್ಧನಾದ ನಿಸ್ವಾರ್ಥ ಪ್ರೇಮಿ ಭವಿಷ್ಯದಲ್ಲಿ ತನ್ನ ಗೆಳತಿಯ ಸುಖಕ್ಕಾಗಿ ಅವಳ ಕನಸುಗಳ ಸಕಾರಕ್ಕಾಗಿ ಬೇಡುತ್ತಾ ಶರಣಾಗುತ್ತಾನೆ. ಎಲ್ಲವೂ ಹೃದಯವೊಪ್ಪಿದ ಅವಳಿಗಾಗಿ, ಅವಳೊಲುಮೆಯ ನಗುವಾಗಿಯೇ ಆಗಿರುತ್ತದೆ ಎನ್ನುವುದು ದಿಟ..!
ಆದರೆ ಮುಂದೇನಾಯ್ತು..? ಕಥೆಯಲ್ಲಿ ನಾಯಕ ಮನುವಿನ ಆಸೆ ಕೈಗೂಡಿ ಪುಟ್ಟಿಯೊಂದಿಗೆ ಕಡಲ ಕಿನಾರೆಯಲ್ಲಿ ಸಂಭ್ರಮಿಸಿದನೇ..? ಇಲ್ಲವೇ ಆಮಿಷಕ್ಕೆ ಬಲಿಯಾಗಿ ಮಾಡದ ತಪ್ಪಿಗೆ ಬಲಿಯಾದನೇ..? ಅವನು ಬಣ್ಣದ ಕನಸುಗಳು ಕಮರಿ ಬದುಕು ಜೀವಂತ ಸ್ಮಶಾಣವಾಯಿತೇ..? ಎಲ್ಲವೂ ವಿಧಿಯಾಟವೇ ಅಂಕಿತವಾಯಿತೆ..? ಎಲ್ಲಕ್ಕೂ
ಉತ್ತರವನ್ನು ಚಿತ್ರ ನೋಡಿಯೇ ಹೇಳಿ.
ಒಟ್ಟಾರೆ ಪ್ರೇಮದ ನದಿಯು ತನ್ನಲ್ಲಿ ಕನುಸಗಳನ್ನು ದಹಿಸಿಕೊಳ್ಳುತ್ತಾ ಕಂಬನಿಗಳನ್ನು ತನ್ನೊಂದಿಗೆ ಹೆಚ್ಚಿಸಿಕೊಳ್ಳುತ್ತಾ ಕಣ್ಣೀರ ಕಡಲಲಿ ಮರೆಯಾಗುತ್ತದೆ. ಆ ಪರಿಯನ್ನು ತೆರೆಯ ಮೇಲೆ ತೆರೆದಿಡುವ ಬಗೆಯನ್ನು ನಿರ್ದೇಶಕ ಹೇಮಂತ್ ಎಂ. ರಾವ್ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ನೋಡುಗರ ಮನಕ್ಕೆ ಸೈ ಎನ್ನಿಸುವ ಚಿತ್ರ ಮಾಡಿದ್ದಾರೆ. ಅವರ ರಚನೆ ಮತ್ತು ನಿರ್ದೇಶನ ಮೋಡಿ ಮಾಡಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸಾಕಷ್ಟು ಗಟ್ಟಿಯಾಗಿ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರದ ಛಾಯಾತ್ರಹಣ, ಸಂಗೀತ, ಚಿತ್ರ ಕಥೆ, ಪಾತ್ರಗಳ ಅಭಿನಯದಲ್ಲಿ ಎಲ್ಲರೂ ಸೈ ಎನ್ನಿಸಿಕೊಂಡಿದ್ದಾರೆ. ಹಲವು ದಿನಗಳ ನಂತರ ಕನ್ನಡಲ್ಲಿ ಮೂಡಿದ ಒಂದೊಳ್ಳೆ ಸಿನಿಮಾ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಚಿತ್ರ ತಂಡಕ್ಕೆ ಶುಭವಾಗಲಿ.
ರಾಮಚಂದ್ರ ಸಾಗರ್