Sunday, 21 January 2024

ಶ್ರೀ ರಾಮ...

 

ಅಯೋಧ್ಯೆಯ ರಂಗದಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ಮುಹೂರ್ತದ ಶುಭದ ಘಳಿಗೆಗೆ ಧನ್ಯತೆಯಲ್ಲಿ ಕೈ ಮುಗಿದು ಪ್ರಾರ್ಥಿಸುತ್ತಾ ಈ ಅವಿಸ್ಮರಣೀಯ ಪಾವನ ಕಾರ್ಯವು ನಾಡಿಗೆ ಸಕಲ ಹೆಮ್ಮೆಯ ಸಂಗತಿಯಾಗಿದೆ.  ಸತ್ಯದ ಪಥದಲಿ ಮಿಥ್ಯದ ಜಗವ ಸೋಲಿಸಿದ ನನ್ನ ಮನದ ದೇವ ಶ್ರೀ ರಾಮನ ನೆನೆಯುತ್ತಾ ಈ ಕ್ಷಣದಲ್ಲಿ “ಶ್ರೀ ರಾಮ” ಕವಿತೆ ಬರೆದಿದ್ದೇನೆ. ಎಲ್ಲರೂ ಒಂದಾಗಿ ಶ್ರೀ ರಾಮನ ಪ್ರಾರ್ಥಿಸೋಣ ಬನ್ನಿ. ನಿಜ ರಾಮ ರಾಜ್ಯ ನಮ್ಮೆಲ್ಲರ ಗುರಿಯಾಗಲಿ. ಪ್ರೀತಿ, ಶಾಂತಿ, ಸ್ನೇಹ, ಸೌಹಾರ್ದತೆ, ಸಹಿಷ್ಣುತೆಗಳು ಎಲ್ಲರೆದೆಯ ಉಸಿರಾಗಲಿ. ಎಂದೆAದಿಗೂ ಸತ್ಯದ ಗುಡಿಯಲಿ ಆರಾಧನೆಗೆ ಅರ್ಹನು ನಮ್ಮೆಲ್ಲರ ಶ್ರೀ ರಾಮನೇ..


ಶ್ರೀ ರಾಮ...


ಸತ್ಯದ ಪಥದಲಿ ಜಗವ ಜಯಿಸಿದ ವೀರನೇ

ಸಭ್ಯತೆಯ ನಡೆಯಲಿ ಉದಯಿಸಿದ ಶೂರನೇ 

ಸಚ್ಚರಿತ ಮನದಲಿ ಸಂಭ್ರಮಿಸಿದ ಧೀರನೇ

ಸಜ್ಜನಿಕೆಯ ಸಿರಿತನದಲಿ ದೊರೆಯಾದ ದೇವನೇ 

ಶ್ರೀ ರಾಮ..


ಸದ್ಗತಿಯ ಮನಗಳಲಿ ಮಂದಿರವಾದವನೇ

ಸತ್ಕಾರದ ಭಾವನೆಗಳಲಿ ದೇವರಾದವನೇ

ಸಂಕಲ್ಪ ಕಾಯಕದಿ ಜಗಕೆ ಬೆಳಕಾದವನೇ

ಸಂಯಮದ ಸತ್ರದಲಿ ಸುಯೋಗವಾದವನೇ

ಶ್ರೀ ರಾಮ..


ಸದ್ಗುಣಗಳ ಗಗನದಲಿ ಶುಭದ ಮಳೆಯಾದವನೇ

ಸಂಪನ್ನ ಸತ್ವಗಳಲಿ ಧರಿತ್ರಿಯಲಿ ಹೆಸರಾದವನೇ

ಸಂಭಾವಿತರ ಸಖ್ಯದಲಿ ಸನ್ಮಾರ್ಗ ತೋರಿದವನೇ

ಸವಿನಯ ಪರಿವಾರದಲಿ ಸೌಜನ್ಯ ಮೆರೆದವನೇ

ಶ್ರೀ ರಾಮ..


ಸಹನೆಯಲಿ ಸಫಲತೆಯ ಸಂಕೀರ್ತನೆಯಾದವನೇ

ಸಹಿಷ್ಣುತೆಯ ಗುಣದಲಿ ಜಗಕೆ ಮುನ್ನುಡಿಯಾದವನೇ

ಶಾಂತಿ ದೇಗುಲದ ಶಾಂತೆಯ ಸಹೋದರನೇ

ಶಾಂತ ಸೌಧದ ಜಗಕೆ ಉಸಿರಾದವನೇ

ಶ್ರೀ ರಾಮ...

ರಚನೆ: ರಾಮಚಂದ್ರ ಸಾಗರ್


Monday, 15 January 2024

ಸಂಕ್ರಮಣವಾಗಲಿ..

 

ನನ್ನೆಲ್ಲಾ ಮುಖಪುಟದ ಸಹೋದರ ಬಂಧುಗಳಿಗೂ ಸಂಕ್ರಾಂತಿಯ ಶುಭಾಶಯಗಳು..ಈ ರ‍್ಷದ ಮೊದಲ ಹಬ್ಬ ಸಂಕ್ರಾಂತಿಯು ನಿಮ್ಮೆಲ್ಲರ ಬಾಳಲಿ ಪ್ರಗತಿಯನ್ನು ಸಿಂಚಿಸಿ, ಹೊಸತನವನ್ನು ಮೂಡಿಸಲೆಂದು ದೇವರಲ್ಲಿ ಪ್ರರ‍್ಥಿಸುತ್ತಾ...."ಸಂಕ್ರಮಣವಾಗಲಿ "ಕವಿತೆ ಪೋಸ್ಟ್ ಮಾಡುತ್ತಿರುವೆ..ಎಲ್ಲರಿಗೂ ಮತ್ತೊಮ್ಮೆ ಸಂಕ್ರಾಂತಿಯ ಶುಭಾಶಯಗಳು..

ಸಂಕ್ರಮಣವಾಗಲಿ..

ಎಳ್ಳು ಎಂಬ ಸ್ನೇಹವು
ಬೆಲ್ಲ ಎಂಬ ಪ್ರೀತಿಯು
ಮನ ಮನಗಳ ಬೆಸೆಯಲಿ
ಸಹೋದರತೆಯ ಬಂಧದಲಿ
ಈ ಸಮಯದೀ
ಸೌಹರ‍್ದ ಸಂಕ್ರಮಣವು ಸಂಭ್ರಮಿಸಲಿ..

ವಿರಸದ ಮನಸು ಮರೆಯಾಗಲಿ
ಕಹಿ ಘಳಿಗೆಯು ಕಾಡದಿರಲಿ
ವಿಮೋಹ ದುರಾಸೆ ದೂರಾಗಲಿ
ಈ ಸಮಯದೀ
ಸಂಪನ್ನ ಮನಗಳ ಸಂಕ್ರಮಣವಾಗಲಿ..

ದ್ವೇಷ ಅಸೂಯೆಗಳು ದೂರಾಗಲಿ
ಸ್ನೇಹ ಎಲ್ಲರೆದೆಯ ಗೂಡಾಗಲಿ
ಸಖ್ಯ ಸಮಾಗಮ ಚಿರಾಯುವಾಗಲಿ
ಈ ಸುಸಮಯದೀ
ಗೆಳೆತನದ ಸಂಕ್ರಮಣವಾಗಲಿ..

ವಿಘ್ನ ಬದುಕಲಿ ಬಾರದಿರಲಿ
ಸವೆ ಬಾಳಲಿ ಕಾಡದಿರಲಿ
ಬವಣೆ ಯಾರನು ಮುಟ್ಟದಿರಲಿ
ರೋಧನೆ ಯಾರಿಗೂ ತಟ್ಟದಿರಲಿ
ಈ ಸಮಯದೀ
ಸಂತಸದ ಸಂಕ್ರಮಣವಾಗಲಿ..

ಬಾಂಧವ್ಯಗಳು ಚಿಗುರೊಡೆಯಲಿ
ಬಂಧುರ ಜಗದ ವಿಕ್ರಮವಾಗಲಿ
ಇನನ ಹೊಳಪಿನಲಿ
ವಸುಂಧರೆಯ ಮಡಿಲು
ಈ ಸುಸಮಯದೀ
ಪ್ರೀತಿಯ ಸಂಕ್ರಮಣವಾಗಲಿ..

ರಚನೆ: ರಾಮಚಂದ್ರ ಸಾಗರ್

Saturday, 23 September 2023

ಸರ್ವ ಪೌರಕಾರ್ಮಿಕರಿಗೂ ಪೌರಕಾರ್ಮಿಕ ದಿನಾಚರಣೆಯ ಶುಭಾಶಯಗುಳು;

 

ಈ ಸುದಿನ ಸೆಪ್ಟಂಬರ್ ಮಾಹೆಯ ೨೩ನೇ ದಿನ ಪೌರಕಾರ್ಮಿಕರ ದಿನಾಚರಣೆ. ನಮ್ಮ ನಗರವನ್ನು ಶುಚಿತ್ವವಾಗಿಟ್ಟು ನಮ್ಮ ಆರೋಗ್ಯದ ರಕ್ಷೆಯಲ್ಲಿ ಸದಾ ನಿರತರಾಗಿ ನಗರ ಆರೋಗ್ಯದ ರಕ್ಷೆಗಾಗಿ ಸದಾ ಹೋರಾಡುವ ಯೋಧರಾಗಿ ಶ್ರಮಿಸುವ ಎಲ್ಲಾ ಪೌರಕಾರ್ಮಿಕರಿಗೆ ನನ್ನ ನಮನಗಳು.

ಇಡೀ ಊರಿನ ಜನರೆಲ್ಲ ಸವಿ ನಿದ್ರೆಯಲ್ಲಿ ಜಾರಿರುವ ಮುಂಜಾನೆಯ ಸಮಯದಲ್ಲಿ ಬೇಗನೇ ಎದ್ದು ಕರ್ತವ್ಯದ ಶ್ರದ್ಧೆಯೊಂದಿಗೆ ಎಲ್ಲರೂ ಕೈಜೋಡಿಸಿ ಊರಿನ ನೈರ್ಮಲೀಕರಣ, ನೀರು ಸರಬರಾಜು ಕಾರ್ಯಗಳಲ್ಲಿ ಮಗ್ನರಾಗಿ ನಮ್ಮೆಲ್ಲರ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಆ ಎಲ್ಲಾ ಕಾಯಕ ಚೇತನಗಳಿಗೆ ಈ ದಿನ ಗೌರವಿಸುವ ಸುಸಮಯ. ಬನ್ನಿ ಎಲ್ಲರೂ ಸೇರಿ ಅವರನ್ನು ತುಂಬು ಹೃದಯದಿಂದ ಗೌರವಿಸೋಣ. ಈ ದಿನವನ್ನು ನಮ್ಮ ಬಾಳಲ್ಲಿ ಅರ್ಥಪೂರ್ಣವಾಗಿಸೋಣ.

ಊರಿನ ಯಾವುದೇ ಸಮಸ್ಯೆಯಿರಲಿ ಮೊದಲು ನೆನಪಾಗುವುದು ನಮ್ಮೂರಿನ ಪೌರಸಭೆ. ಮನುಷ್ಯನ ಜನನದಿಂದ ಹಿಡಿದು ಆತನ ಮರಣದವರೆಗೂ ಇಲ್ಲಿನ ಸೇವೆಗಳು ಅಗತ್ಯ. ಜನನ ಪ್ರಮಾಣ, ಮರಣ ಪ್ರಮಾಣ ಪತ್ರಗಳೇ ಈಗ ಮನುಷ್ಯನ ಜನನ, ಅವಸಾನದ ದಾಖಲೆಗಳಾಗಿವೆ. ಊರಿನ ಯಾವುದೇ ಭಾಗದಲ್ಲಿ ಯಾವುದೇ ನೈರ್ಮಲೀಕರಣ ಸಮಸ್ಯೆ, ನೀರಿನ ಸಮಸ್ಯೆ, ರಸ್ತೆ, ಚರಂಡಿ, ಬೀದಿ ದೀಪ, ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಪೌರಸಭೆಗಳ ಪಾತ್ರ ಪ್ರಮುಖ. 

ಇತ್ತೀಚೆಗೆ ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಪೌರಸಭಾ ಸಿಬ್ಬಂದಿಗಳ ಸೇವೆ ಅನನ್ಯ. ಕೋವಿಡ್ ಸಮಯದಲ್ಲಿ ಎಷ್ಟೋ ಜನ ಅಸುನೀಗಿದಾಗ ಅವರ ವಾರಸುದಾರರು ಶವ ಸಂಸ್ಕಾರ ಮಾಡದೇ ಕೆಲವೊಮ್ಮೆ ಕೆಲವರು ಪಲಾಯನ ಮಾಡಿದ್ದುಂಟು.  ಆಸ್ತಿಗಾಗಿ ಬಡಿದಾಡುವವರು ಕೋವಿಡ್ ಹೆಮ್ಮಾರಿಗೆ ಬೆದರಿ ಉಸಿರಿನ ಸಂಬAಧಕ್ಕೆ ತಿಲಾಂಜಲಿ ಹೇಳಿದ್ದರು. ಅಂತಹ ಸಮಯದಲ್ಲಿ ಪೌರಸಭೆಗಳ ಕಾರ್ಮಿಕರು ಕೋವಿಡ್ ನಿಂದ ಮೃತಪಟ್ಟವರ ಶವÀ ಸಂಸ್ಕಾರ ಮಾಡಿ ಅಸುನೀಗಿದವರ ಆತ್ಮಕ್ಕೆ ಗೌರವಿಸಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ನಮ್ಮ ಅನೇಕ ಜನ ಕಾರ್ಮಿಕರು ತಮ್ಮ ನಿಸ್ವಾರ್ಥ ಸೇವೆಯಲ್ಲಿ ಬಲಿದಾನವಾಗಿದ್ದಾರೆ. ಅಂತವರೆಲ್ಲರ ಸೇವೆಯನ್ನು ಯಾವುದೇ ಪರಿಹಾರದ ಮೌಲ್ಯದಿಂದ ಅಳತೆಗೋಲಾಗಿಸಲು ಸಾಧ್ಯವೇ..? ಒಂದು ಕ್ಷಣ ಪೌರಕಾರ್ಮಿಕರಿಲ್ಲದ ನಿಮ್ಮ ಬದುಕು, ನಗರವನ್ನು ಕಲ್ಪಿಸಿಕೊಳ್ಳಿ. ಮನಸಾರೆ ಎಲ್ಲವನ್ನು ಅವಲೋಖಿಸಿದಾಗ ಮಾತ್ರವೇ ನೈಜತೆಯ ಮೌಲ್ಯ ಅರ್ಥವಾಗುತ್ತದೆ. ಇನ್ನೊಬ್ಬರ ಶ್ರಮಹ ಹನಿಗಳ ಮೌಲ್ಯ ಅರಿವಾಗುತ್ತದೆ.

ಸುಂದರ ನಗರಕ್ಕೆ ಅರ್ಪಿತವಾಗುವ ಪ್ರಶಸ್ತಿ, ಪ್ರಶಂಸೆಗಳು ಕಾರ್ಮಿಕರ ಕೈಗೆ ಪ್ರಧಾನವಾದರೆ ಉತ್ತಮ. ಕಾರ್ಮಿಕರು ಶ್ರಮದಾನ ಮಾಡಿ ದುಡಿದ ಕಾರ್ಯವನ್ನು ತಮ್ಮ ಕಾರ್ಯವೆಂದು ಹೆಮ್ಮೆಪಡುವವರು, ಹಾರಹಾಕಿಸಿಕೊಳ್ಳುವವರು ಕಡಿಮೆಯಾಗಬೇಕು. ಎಲ್ಲವೂ ಸಾಧ್ಯವಾಗಿದ್ದು ಪೌರಕಾರ್ಮಿಕ ನಿಷ್ಠೆಯಿಂದ ಎನ್ನುವುದನ್ನು ಅವರನ್ನು ದುಡಿಸಿಕೊಳ್ಳುವವರು ಅರ್ಥೈಸಿಕೊಳ್ಳಬೇಕು. ಅವರಿಗೆ ಸರಿಯಾದ ಕಾಲದಲ್ಲಿ ಉತ್ತಮ ಆರೋಗ್ಯ ತಪಾಸಣೆ, ಭವಿಷ್ಯನಿಧಿ, ವಿಮೆಯ ಸೌಲಭ್ಯಗಳು ದೊರೆಯುವಂತೆ ನೋಡುವುದು ಅವರಿಂದ ಕೆಲಸ ತೆಗೆದುಕೊಳ್ಳುವವರ ಮತ್ತು ಅವರಿಗೆ ಕೆಲಸ ಹೇಳುವವರ ಜವಬ್ದಾರಿ ಎನ್ನುವದನ್ನು ಸಹಾ ಅಧಿಕಾರ ನಡೆಸುವವರಿಗೆ ಅರ್ಥವಾಗಬೇಕು. ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಕಾಯ್ದೆ, ನಿಯಮಗಳ ನಿಬಂಧನೆಗಳಿವೆ. ಅವೆಲ್ಲವೂ ಕೂಡ ಪಾರದರ್ಶಕವಾಗಿ ಜಾರಿಮಾಡುವುದು ಕಾರ್ಮಿಕರನ್ನು ದುಡಿಸಿಕೊಳ್ಳುವವರು ಕೆಲಸ. ಜೊತೆಗೆ ಪೌರಕಾರ್ಮಿಕರ ಸೇವೆ ಪಡೆಯುವ ಪ್ರತೀ ನಾಗರೀಕನ ಜವಬ್ದಾರಿಯೂ ಹೌದು ಎನ್ನುತ್ತಾ..ಈ ದಿನ ಪೌರಕಾರ್ಮಿಕರ ದಿನಾಚರಣೆ. ಅವರನ್ನು ಗೌರವಿಸುವ ಸುದಿನ. ಊರಿನ ಎಲ್ಲರೂ ಸಹಾ ಶ್ರಮದ ಜೀವಿಗಳಾದ ಪೌರಕಾರ್ಮಿಕರಿಗೆೆ ಒಂದಾಗಿ ಗೌರವಿಸಿ ಅಭಿನಂದಿಸೋಣ ಅಕ್ಕೆಯಿಂದ ಬನ್ನಿ..

ರಾಮಚಂದ್ರ ಸಾಗರ್


Sunday, 3 September 2023

ಕಣ್ಣೀರ ಕಡಲಲಿ ಮರೆಯಾದ ಪ್ರೇಮದ ನದಿ- “ಸಪ್ತ ಸಾಗರದಾಚೆ ಎಲ್ಲೋ”

ಪ್ರೀತಿ, ಪ್ರೇಮದ ವೈಭವದ ಯಾತ್ರೆಯು ಎಲ್ಲರ ಬಾಳಲ್ಲೂ ಸಿದ್ಧಿಸುವುದಿಲ್ಲ. ಪಾವನ ಪ್ರೀತಿಗಾಗಿ ತವಕಿಸುವುದೇ ನಿಸ್ವಾರ್ಥ ಪ್ರೇಮಿಯ ಪಣವಾಗಿರುತ್ತದೆ. ಸಾವಿರ ವರುಷವಾದರು ಬಯಸಿದ ಜೀವಕ್ಕಾಗಿ ಹಾತೊರೆಯುತ್ತಾ, ಬಾಳಿನುದ್ದಕ್ಕೂ ಪಣತೊಟ್ಟು ಶರಣಾಗುವುದೇ ಪಾವನ ಪ್ರೀತಿ. ನಿಸ್ವಾರ್ಥ ಪ್ರೀತಿಯಲ್ಲಿ ಬಯಸಿದ ಜೀವದ ಕ್ಷೇಮವನ್ನೇ ಅನುಕ್ಷಣವೂ ಬೇಡುತ್ತಾ ಪ್ರಾರ್ಥಿಸುವುದೇ ನಿಜ ಪ್ರೇಮಿಯ ಬದಕಾಗಿರುತ್ತದೆ.. ಬದುಕು, ಜಗವೂ ಎಲ್ಲವೂ ಬಯಸಿದ ಜೀವದ ಹಿತವನ್ನೇ ಬಯಸುತ್ತಿರುತ್ತದೆ. ಎಂತಹ ತ್ಯಾಗಕ್ಕೂ ಮನಸ್ಸು ಗಟ್ಟಿಯಾಗಿ ಸಿದ್ಧವಾಗಿರುತ್ತದೆ. ಬಯಸಿದಾ ಜೀವದಾ ಹಿತವೇ ಬಾಳಿನ ಉಸಿರಾಗಿರುತ್ತದೆ. ಹೃದಯದ ಬಡಿತಕ್ಕೇ ಅದುವೇ ಇಂಧನವಾಗಿರುತ್ತದೆ.

ಇದೇ ಪ್ರೇಮ ತ್ಯಾಗದ ಕಥಾ ಹಂದರವೇ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಾಯಕಮನುವಿನ ಕಥೆ. ನಾಯಕನಾಗಿ ರಕ್ಷಿತ್ ಶೆಟ್ಟಿ ಅಮೋಘವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿಪುಟ್ಟಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಒಳ್ಳೆಯ ನಟಿಯಾಗಿ ನೆಲೆಯೂರುವ ಸಾಕ್ಷ್ಯವನ್ನು ನಿರೂಪಿಸಿದ್ದಾರೆ ಎಂದರೆ ಅತಿಶಯವಲ್ಲ. ಮಧ್ಯಮ ವರ್ಗದ ಕುಟುಂಬದ ಇಬ್ಬರು ಪ್ರೇಮಿಗಳ ಬಣ್ಣದ ಚಿತ್ತಾರದ ಕನಸುಗಳು ಮೆರವಣಿಗೆಯು ಚಿತ್ರದಲ್ಲಿ ಮೊದಲು ನವಿರಾಗಿ ಮೂಡಿ ಬಂದು ನಿಜ ಪ್ರೀತಿಯೇ ವಿಜೃಂಭಿಸಿದೆ.

 ತಾನು ಬಯಸಿದ ಜೀವದ ಹಿತವನ್ನೇ ಬಯಸಿ ಭವಿಷ್ಯದ ಹಿತಕ್ಕಾಗಿ ಎಲ್ಲವನ್ನೂ ಪಣಕ್ಕಿಟ್ಟು ಪವಿತ್ರ ಪ್ರೀತಿಗಾಗಿ ಕಥೆಯ ನಾಯಕ ಅನುಕ್ಷಣವೂ ಹಾತೊರೆಯುತ್ತಾನೆ. ಎಲ್ಲ ರೀತಿಯ ಕಷ್ಟವನ್ನು ಎದುರಿಸಲು ಸದಾ ಸನ್ನದ್ದವಾಗಿರುತ್ತಾರೆ. ಪ್ರೇಮದ ಯಶಸ್ಸಿಗಾಗಿ ನಿಜ ಪ್ರೇಮಿಯು ಯಾವುದೇ ತ್ಯಾಗಕ್ಕೂ ಸಿದ್ಧ ಎನ್ನುವುದನ್ನು ನಿರೂಪಿಸಲು ಯಾವುದೇ ರೀತಿಯ ಆಪತ್ತಿಗೂ ಬೆಲೆ ತೆರಲು ಮನು ಸಿದ್ಧವಾಗಿರುತ್ತಾನೆ.

ಬಯಸಿದ್ದೆಲ್ಲಾ ಬಾಳಲ್ಲಿ ಲಭಿಸಲು ಹಣ ಎನ್ನುವ ಇಂಧನವು ಅಗತ್ಯವಿರುತ್ತದೆ. ಮನು ಸಾಮಾನ್ಯ ಡ್ರೆöÊವರ್ ಆಗಿರುತ್ತಾನೆ. ಆತನಿಗೆ ತಿಂಗಳಿಗೆ ಕೇವಲ ಹನ್ನೆರಡು ಸಾವಿರ ಸಂಬಳ. ಆದರೆ ಆತ ಮತ್ತು ಪುಟ್ಟಿಯ ಪ್ರೇಮದ ಯಾತ್ರೆಯಲ್ಲಿ ಜೊತೆಯಾದವು ಸಾವಿರಾರು ಬಣ್ಣದ ಕನಸುಗಳು. ನಿತ್ಯವೂ ಕಾಣುವ ಕನಸುಗಳು ಎಂದು ನೆರವೇರುತ್ತವೆಂದು ದಾಪುಗಾಲಿಟ್ಟು ಕಾಡುವ ಪ್ರಶ್ನೆಗಳ ಸರಮಾಲೆಗಳು. ಇವುಗಳನ್ನೇ ಬೆಂಬತ್ತಿ ಮನುವಿನ ಮನಸ್ಸು ಓಡುತ್ತಿರುತ್ತದೆ.

 ‘ಪುಟ್ಟಿಗೆ ಕಡಲ ಕಿನಾರೆಯಲ್ಲಿ ಮನೆಯನ್ನು ಕಟ್ಟಿ ಅಲ್ಲೇ ಜೀವನದ ಕೊನೆವರೆಗು ನೆಲೆಯಾಗಬೇಕೆನ್ನುವ ಆಸೆ. ಅವಳ ಆಸೆಯನ್ನು ನೆರವೇರಿಸುವ ನಿಜ ಪ್ರೇಮಿಯಾಗಿ ಮನು ಸಿದ್ಧವಾಗುತ್ತಾನೆ. ಅವಳ ಆಸೆಯನ್ನು ಈಡೇರಿಸುವುದೇ ತನ್ನ ಬಾಳಿನ ಗುರಿಯೆಂದು ಪಣತೊಡುತ್ತಾನೆ. ಅನುಮಪ ಕಡಲ ಕಿನಾರೆಯ ಬಳಿ ಮನೆಕಟ್ಟಿ, ಬೀಸುವ ಅಲೆಗಳನ್ನು ಎಣಿಸುತ್ತಾ, ಮುಸ್ಸಂಜೆಯ ರಂಗಲ್ಲಿ ಮೆಲುಗಾಳಿಗೆ ತನುವೊಡ್ಡಿ, ಅಲೆಗಳ ನಿನಾದಲ್ಲಿ ಪ್ರೇಮದ ಸ್ವರಮೇಳದಲ್ಲಿ ಅನುರಾಗದ ಗೀತೆಯನ್ನು ಕೇಳುತ್ತಾ ಪ್ರೇಮದ ಸುಧೆಯನ್ನು ಸವಿಯುತ್ತಾ ಬಾಳಿಗೆ ಜೊತೆಯಾದವಳ ನಗುವಿನಲ್ಲಿ ಬಾಳು ಸಾಗಲಿ ಎನ್ನುವ ಮಹೋನ್ನತ ಆಸೆಯಿಂದಮನು ನಿತ್ಯವೂ ತವಕಿಸುತ್ತಿರುತ್ತಾನೆ.

ಆಸೆ ಕೈಗೂಡಲು ಕಾಡುವ ಹಣದ ಕೊರತೆಗೆ ಅವಕಾಶವೊಂದು ಅಪರಾದದ ರೂಪದಲ್ಲಿ ಎದುರಾಗುತ್ತದೆ..! ಮಾಡದ ತಪ್ಪನ್ನು ಒಪ್ಪಿಕೊಂಡು ಯಾರನ್ನೋ ರಕ್ಷಿಸಿ ಇನ್ನೇನೋ ಅಪೇಕ್ಷಿಸಿ ತನ್ನ ಬದುಕು, ಜೀವ ಒತ್ತೆಯಿಡುತ್ತಾನೆ. ಎಲ್ಲಕ್ಕೂ ಸಿದ್ಧನಾದ ನಿಸ್ವಾರ್ಥ ಪ್ರೇಮಿ ಭವಿಷ್ಯದಲ್ಲಿ ತನ್ನ ಗೆಳತಿಯ ಸುಖಕ್ಕಾಗಿ ಅವಳ ಕನಸುಗಳ ಸಕಾರಕ್ಕಾಗಿ ಬೇಡುತ್ತಾ ಶರಣಾಗುತ್ತಾನೆ. ಎಲ್ಲವೂ ಹೃದಯವೊಪ್ಪಿದ ಅವಳಿಗಾಗಿ, ಅವಳೊಲುಮೆಯ ನಗುವಾಗಿಯೇ ಆಗಿರುತ್ತದೆ ಎನ್ನುವುದು ದಿಟ..!

ಆದರೆ ಮುಂದೇನಾಯ್ತು..? ಕಥೆಯಲ್ಲಿ ನಾಯಕ ಮನುವಿನ ಆಸೆ ಕೈಗೂಡಿ ಪುಟ್ಟಿಯೊಂದಿಗೆ ಕಡಲ ಕಿನಾರೆಯಲ್ಲಿ ಸಂಭ್ರಮಿಸಿದನೇ..? ಇಲ್ಲವೇ ಆಮಿಷಕ್ಕೆ ಬಲಿಯಾಗಿ ಮಾಡದ ತಪ್ಪಿಗೆ ಬಲಿಯಾದನೇ..? ಅವನು ಬಣ್ಣದ ಕನಸುಗಳು ಕಮರಿ ಬದುಕು ಜೀವಂತ ಸ್ಮಶಾಣವಾಯಿತೇ..? ಎಲ್ಲವೂ ವಿಧಿಯಾಟವೇ ಅಂಕಿತವಾಯಿತೆ..? ಎಲ್ಲಕ್ಕೂ ಉತ್ತರವನ್ನು ಚಿತ್ರ ನೋಡಿಯೇ ಹೇಳಿ.

ಒಟ್ಟಾರೆ ಪ್ರೇಮದ ನದಿಯು ತನ್ನಲ್ಲಿ ಕನುಸಗಳನ್ನು ದಹಿಸಿಕೊಳ್ಳುತ್ತಾ ಕಂಬನಿಗಳನ್ನು ತನ್ನೊಂದಿಗೆ ಹೆಚ್ಚಿಸಿಕೊಳ್ಳುತ್ತಾ ಕಣ್ಣೀರ ಕಡಲಲಿ ಮರೆಯಾಗುತ್ತದೆ. ಪರಿಯನ್ನು ತೆರೆಯ ಮೇಲೆ ತೆರೆದಿಡುವ ಬಗೆಯನ್ನು ನಿರ್ದೇಶಕ ಹೇಮಂತ್ ಎಂ. ರಾವ್ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ನೋಡುಗರ ಮನಕ್ಕೆ ಸೈ ಎನ್ನಿಸುವ ಚಿತ್ರ ಮಾಡಿದ್ದಾರೆ. ಅವರ ರಚನೆ ಮತ್ತು ನಿರ್ದೇಶನ ಮೋಡಿ ಮಾಡಿದೆ.

 ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸಾಕಷ್ಟು ಗಟ್ಟಿಯಾಗಿ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರದ ಛಾಯಾತ್ರಹಣ, ಸಂಗೀತ, ಚಿತ್ರ ಕಥೆ, ಪಾತ್ರಗಳ ಅಭಿನಯದಲ್ಲಿ ಎಲ್ಲರೂ ಸೈ ಎನ್ನಿಸಿಕೊಂಡಿದ್ದಾರೆ. ಹಲವು ದಿನಗಳ ನಂತರ ಕನ್ನಡಲ್ಲಿ ಮೂಡಿದ ಒಂದೊಳ್ಳೆ ಸಿನಿಮಾ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಚಿತ್ರ ತಂಡಕ್ಕೆ ಶುಭವಾಗಲಿ.

ರಾಮಚಂದ್ರ ಸಾಗರ್