Sunday, 3 September 2023

ಕಣ್ಣೀರ ಕಡಲಲಿ ಮರೆಯಾದ ಪ್ರೇಮದ ನದಿ- “ಸಪ್ತ ಸಾಗರದಾಚೆ ಎಲ್ಲೋ”

ಪ್ರೀತಿ, ಪ್ರೇಮದ ವೈಭವದ ಯಾತ್ರೆಯು ಎಲ್ಲರ ಬಾಳಲ್ಲೂ ಸಿದ್ಧಿಸುವುದಿಲ್ಲ. ಪಾವನ ಪ್ರೀತಿಗಾಗಿ ತವಕಿಸುವುದೇ ನಿಸ್ವಾರ್ಥ ಪ್ರೇಮಿಯ ಪಣವಾಗಿರುತ್ತದೆ. ಸಾವಿರ ವರುಷವಾದರು ಬಯಸಿದ ಜೀವಕ್ಕಾಗಿ ಹಾತೊರೆಯುತ್ತಾ, ಬಾಳಿನುದ್ದಕ್ಕೂ ಪಣತೊಟ್ಟು ಶರಣಾಗುವುದೇ ಪಾವನ ಪ್ರೀತಿ. ನಿಸ್ವಾರ್ಥ ಪ್ರೀತಿಯಲ್ಲಿ ಬಯಸಿದ ಜೀವದ ಕ್ಷೇಮವನ್ನೇ ಅನುಕ್ಷಣವೂ ಬೇಡುತ್ತಾ ಪ್ರಾರ್ಥಿಸುವುದೇ ನಿಜ ಪ್ರೇಮಿಯ ಬದಕಾಗಿರುತ್ತದೆ.. ಬದುಕು, ಜಗವೂ ಎಲ್ಲವೂ ಬಯಸಿದ ಜೀವದ ಹಿತವನ್ನೇ ಬಯಸುತ್ತಿರುತ್ತದೆ. ಎಂತಹ ತ್ಯಾಗಕ್ಕೂ ಮನಸ್ಸು ಗಟ್ಟಿಯಾಗಿ ಸಿದ್ಧವಾಗಿರುತ್ತದೆ. ಬಯಸಿದಾ ಜೀವದಾ ಹಿತವೇ ಬಾಳಿನ ಉಸಿರಾಗಿರುತ್ತದೆ. ಹೃದಯದ ಬಡಿತಕ್ಕೇ ಅದುವೇ ಇಂಧನವಾಗಿರುತ್ತದೆ.

ಇದೇ ಪ್ರೇಮ ತ್ಯಾಗದ ಕಥಾ ಹಂದರವೇ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಾಯಕಮನುವಿನ ಕಥೆ. ನಾಯಕನಾಗಿ ರಕ್ಷಿತ್ ಶೆಟ್ಟಿ ಅಮೋಘವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿಪುಟ್ಟಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಒಳ್ಳೆಯ ನಟಿಯಾಗಿ ನೆಲೆಯೂರುವ ಸಾಕ್ಷ್ಯವನ್ನು ನಿರೂಪಿಸಿದ್ದಾರೆ ಎಂದರೆ ಅತಿಶಯವಲ್ಲ. ಮಧ್ಯಮ ವರ್ಗದ ಕುಟುಂಬದ ಇಬ್ಬರು ಪ್ರೇಮಿಗಳ ಬಣ್ಣದ ಚಿತ್ತಾರದ ಕನಸುಗಳು ಮೆರವಣಿಗೆಯು ಚಿತ್ರದಲ್ಲಿ ಮೊದಲು ನವಿರಾಗಿ ಮೂಡಿ ಬಂದು ನಿಜ ಪ್ರೀತಿಯೇ ವಿಜೃಂಭಿಸಿದೆ.

 ತಾನು ಬಯಸಿದ ಜೀವದ ಹಿತವನ್ನೇ ಬಯಸಿ ಭವಿಷ್ಯದ ಹಿತಕ್ಕಾಗಿ ಎಲ್ಲವನ್ನೂ ಪಣಕ್ಕಿಟ್ಟು ಪವಿತ್ರ ಪ್ರೀತಿಗಾಗಿ ಕಥೆಯ ನಾಯಕ ಅನುಕ್ಷಣವೂ ಹಾತೊರೆಯುತ್ತಾನೆ. ಎಲ್ಲ ರೀತಿಯ ಕಷ್ಟವನ್ನು ಎದುರಿಸಲು ಸದಾ ಸನ್ನದ್ದವಾಗಿರುತ್ತಾರೆ. ಪ್ರೇಮದ ಯಶಸ್ಸಿಗಾಗಿ ನಿಜ ಪ್ರೇಮಿಯು ಯಾವುದೇ ತ್ಯಾಗಕ್ಕೂ ಸಿದ್ಧ ಎನ್ನುವುದನ್ನು ನಿರೂಪಿಸಲು ಯಾವುದೇ ರೀತಿಯ ಆಪತ್ತಿಗೂ ಬೆಲೆ ತೆರಲು ಮನು ಸಿದ್ಧವಾಗಿರುತ್ತಾನೆ.

ಬಯಸಿದ್ದೆಲ್ಲಾ ಬಾಳಲ್ಲಿ ಲಭಿಸಲು ಹಣ ಎನ್ನುವ ಇಂಧನವು ಅಗತ್ಯವಿರುತ್ತದೆ. ಮನು ಸಾಮಾನ್ಯ ಡ್ರೆöÊವರ್ ಆಗಿರುತ್ತಾನೆ. ಆತನಿಗೆ ತಿಂಗಳಿಗೆ ಕೇವಲ ಹನ್ನೆರಡು ಸಾವಿರ ಸಂಬಳ. ಆದರೆ ಆತ ಮತ್ತು ಪುಟ್ಟಿಯ ಪ್ರೇಮದ ಯಾತ್ರೆಯಲ್ಲಿ ಜೊತೆಯಾದವು ಸಾವಿರಾರು ಬಣ್ಣದ ಕನಸುಗಳು. ನಿತ್ಯವೂ ಕಾಣುವ ಕನಸುಗಳು ಎಂದು ನೆರವೇರುತ್ತವೆಂದು ದಾಪುಗಾಲಿಟ್ಟು ಕಾಡುವ ಪ್ರಶ್ನೆಗಳ ಸರಮಾಲೆಗಳು. ಇವುಗಳನ್ನೇ ಬೆಂಬತ್ತಿ ಮನುವಿನ ಮನಸ್ಸು ಓಡುತ್ತಿರುತ್ತದೆ.

 ‘ಪುಟ್ಟಿಗೆ ಕಡಲ ಕಿನಾರೆಯಲ್ಲಿ ಮನೆಯನ್ನು ಕಟ್ಟಿ ಅಲ್ಲೇ ಜೀವನದ ಕೊನೆವರೆಗು ನೆಲೆಯಾಗಬೇಕೆನ್ನುವ ಆಸೆ. ಅವಳ ಆಸೆಯನ್ನು ನೆರವೇರಿಸುವ ನಿಜ ಪ್ರೇಮಿಯಾಗಿ ಮನು ಸಿದ್ಧವಾಗುತ್ತಾನೆ. ಅವಳ ಆಸೆಯನ್ನು ಈಡೇರಿಸುವುದೇ ತನ್ನ ಬಾಳಿನ ಗುರಿಯೆಂದು ಪಣತೊಡುತ್ತಾನೆ. ಅನುಮಪ ಕಡಲ ಕಿನಾರೆಯ ಬಳಿ ಮನೆಕಟ್ಟಿ, ಬೀಸುವ ಅಲೆಗಳನ್ನು ಎಣಿಸುತ್ತಾ, ಮುಸ್ಸಂಜೆಯ ರಂಗಲ್ಲಿ ಮೆಲುಗಾಳಿಗೆ ತನುವೊಡ್ಡಿ, ಅಲೆಗಳ ನಿನಾದಲ್ಲಿ ಪ್ರೇಮದ ಸ್ವರಮೇಳದಲ್ಲಿ ಅನುರಾಗದ ಗೀತೆಯನ್ನು ಕೇಳುತ್ತಾ ಪ್ರೇಮದ ಸುಧೆಯನ್ನು ಸವಿಯುತ್ತಾ ಬಾಳಿಗೆ ಜೊತೆಯಾದವಳ ನಗುವಿನಲ್ಲಿ ಬಾಳು ಸಾಗಲಿ ಎನ್ನುವ ಮಹೋನ್ನತ ಆಸೆಯಿಂದಮನು ನಿತ್ಯವೂ ತವಕಿಸುತ್ತಿರುತ್ತಾನೆ.

ಆಸೆ ಕೈಗೂಡಲು ಕಾಡುವ ಹಣದ ಕೊರತೆಗೆ ಅವಕಾಶವೊಂದು ಅಪರಾದದ ರೂಪದಲ್ಲಿ ಎದುರಾಗುತ್ತದೆ..! ಮಾಡದ ತಪ್ಪನ್ನು ಒಪ್ಪಿಕೊಂಡು ಯಾರನ್ನೋ ರಕ್ಷಿಸಿ ಇನ್ನೇನೋ ಅಪೇಕ್ಷಿಸಿ ತನ್ನ ಬದುಕು, ಜೀವ ಒತ್ತೆಯಿಡುತ್ತಾನೆ. ಎಲ್ಲಕ್ಕೂ ಸಿದ್ಧನಾದ ನಿಸ್ವಾರ್ಥ ಪ್ರೇಮಿ ಭವಿಷ್ಯದಲ್ಲಿ ತನ್ನ ಗೆಳತಿಯ ಸುಖಕ್ಕಾಗಿ ಅವಳ ಕನಸುಗಳ ಸಕಾರಕ್ಕಾಗಿ ಬೇಡುತ್ತಾ ಶರಣಾಗುತ್ತಾನೆ. ಎಲ್ಲವೂ ಹೃದಯವೊಪ್ಪಿದ ಅವಳಿಗಾಗಿ, ಅವಳೊಲುಮೆಯ ನಗುವಾಗಿಯೇ ಆಗಿರುತ್ತದೆ ಎನ್ನುವುದು ದಿಟ..!

ಆದರೆ ಮುಂದೇನಾಯ್ತು..? ಕಥೆಯಲ್ಲಿ ನಾಯಕ ಮನುವಿನ ಆಸೆ ಕೈಗೂಡಿ ಪುಟ್ಟಿಯೊಂದಿಗೆ ಕಡಲ ಕಿನಾರೆಯಲ್ಲಿ ಸಂಭ್ರಮಿಸಿದನೇ..? ಇಲ್ಲವೇ ಆಮಿಷಕ್ಕೆ ಬಲಿಯಾಗಿ ಮಾಡದ ತಪ್ಪಿಗೆ ಬಲಿಯಾದನೇ..? ಅವನು ಬಣ್ಣದ ಕನಸುಗಳು ಕಮರಿ ಬದುಕು ಜೀವಂತ ಸ್ಮಶಾಣವಾಯಿತೇ..? ಎಲ್ಲವೂ ವಿಧಿಯಾಟವೇ ಅಂಕಿತವಾಯಿತೆ..? ಎಲ್ಲಕ್ಕೂ ಉತ್ತರವನ್ನು ಚಿತ್ರ ನೋಡಿಯೇ ಹೇಳಿ.

ಒಟ್ಟಾರೆ ಪ್ರೇಮದ ನದಿಯು ತನ್ನಲ್ಲಿ ಕನುಸಗಳನ್ನು ದಹಿಸಿಕೊಳ್ಳುತ್ತಾ ಕಂಬನಿಗಳನ್ನು ತನ್ನೊಂದಿಗೆ ಹೆಚ್ಚಿಸಿಕೊಳ್ಳುತ್ತಾ ಕಣ್ಣೀರ ಕಡಲಲಿ ಮರೆಯಾಗುತ್ತದೆ. ಪರಿಯನ್ನು ತೆರೆಯ ಮೇಲೆ ತೆರೆದಿಡುವ ಬಗೆಯನ್ನು ನಿರ್ದೇಶಕ ಹೇಮಂತ್ ಎಂ. ರಾವ್ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ನೋಡುಗರ ಮನಕ್ಕೆ ಸೈ ಎನ್ನಿಸುವ ಚಿತ್ರ ಮಾಡಿದ್ದಾರೆ. ಅವರ ರಚನೆ ಮತ್ತು ನಿರ್ದೇಶನ ಮೋಡಿ ಮಾಡಿದೆ.

 ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸಾಕಷ್ಟು ಗಟ್ಟಿಯಾಗಿ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರದ ಛಾಯಾತ್ರಹಣ, ಸಂಗೀತ, ಚಿತ್ರ ಕಥೆ, ಪಾತ್ರಗಳ ಅಭಿನಯದಲ್ಲಿ ಎಲ್ಲರೂ ಸೈ ಎನ್ನಿಸಿಕೊಂಡಿದ್ದಾರೆ. ಹಲವು ದಿನಗಳ ನಂತರ ಕನ್ನಡಲ್ಲಿ ಮೂಡಿದ ಒಂದೊಳ್ಳೆ ಸಿನಿಮಾ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಚಿತ್ರ ತಂಡಕ್ಕೆ ಶುಭವಾಗಲಿ.

ರಾಮಚಂದ್ರ ಸಾಗರ್



Friday, 14 April 2023

ಮಹಾನಾಯಕ

 


ದಿವಸ ಜಗತ್ತು ಕಂಡ ಮಹಾನ್ ಮಾನವತಾವಾದಿ, ಸುಜ್ಞಾನದ ಸಾಗರ, ಸಮಾಜಮುಖಿ ಚಿಂತನೆಯ ಹರಿಕಾರ, ಜ್ಷಾನದ ಬೆಳಕಿನ ಸೂರ್ಯ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತೋತ್ಸವ. ಸುದಿನ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗಾಗಿ ಧಾರೆಯೆರೆದ ಜ್ಞಾನದ ಬೆಳಕನ್ನು ಸಮಾಜದ ಸರ್ವತೋಮುಖ ಶ್ರೇಯಕ್ಕಾಗಿ ನಿತ್ಯವೂ ಸಶಕ್ತವಾಗಿ ಬಳಸಿಕೊಳ್ಳಲು ಪಣತೊಡುತ್ತೇವೆ ಎನ್ನುವ ಆಶಯದೊಂದಿಗೆ ಎಲ್ಲರಿಗೂ ಶ್ರೀಯುತರ 132ನೇ ಜಯಂತೋತ್ಸವದ ಶುಭಾಶಯಗಳನ್ನು ಕೋರುತ್ತಾ ನಾ ಬರೆದ "ಮಹಾನಾಯಕ" ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ..

ವಂದನೆಗಳೊಂದಿಗೆ...

 

ಮಹಾನಾಯಕ

 

ಜಾತಿ ಧರ್ಮಗಳ ಸಂಕೋಲೆಯನು

ವಿಮುಕ್ತಿಗೊಳಿಸಿದ ಮಹಾನಾಯಕನು

ವರ್ಣ ದ್ವೇಷಗಳ ಜ್ವಾಲೆಯನು

ಆರಿಸಿದ ದಿವ್ಯ ಯೋಗಿಯು..

 

ಸಂವಿಧಾನ ರಚಿಸಿದ ಶಿಲ್ಪಿಯು

ಭವ್ಯ ದೇಶ ಬೆಳಗಿದ ಕಿಡಿಯು

ದೀನ ದಲಿತರ ದೀವಟಿಗೆಯು

ಶ್ರಮಿಕ ಕಾಯಕೆ ಸ್ಪೂರ್ತಿಯು..

 

ಶಿಕ್ಷಣ ಜ್ಞಾನವು ಬೆಳಕೆಂದರು

ಬವಣೆಗಳ ಪರಿಹರಿಸಿಕೊಳ್ಳಲು

ಸಂಘಟನೆಯೆ ಪರಿಹಾರವೆಂದರು

ಒಂದಾಗಿ ನಡೆವುದೆ ಬಾಳೆಂದರು..

 

ಮಾನವೀಯತೆ ಸಹಬಾಳ್ವೆ

ಪ್ರೀತಿ ವಿಶ್ವಾಸಗಳನು ಆರಾಧಿಸೆಂದರು

ಬೇದವೆಣಿಸದ ಕುಲಕೇಳದ ನಾಡು

ಎಲ್ಲರೆದೆಯ ಗುರಿಯಾಗಲೆಂದರು...

 

ದಾರಿದ್ರ್ಯ ಬಡತನ ಕೊನೆಯಾಗಿಸಲು

ಜೀವಮಾನವನು ಸವೆಸಿದರು

ಜೀವದುಸಿರಿನ ಕೊನೆವರೆಗು

ಬುದ್ಧ ನುಡಿಯನು ನುಡಿದವರು..

 

ಜಗದ ಇತಿಹಾಸ ಪುಟದಲಿ

ಪದಗಳಿಗೆ ಸೀಮಿತಗೊಳ್ಳದ ಮಹಾನಾಯಕನು

ನಮ್ಮೆಲ್ಲರ ಹೃದಯದಲ್ಲಿ

ನಿತ್ಯ ಬೆಳಗುವ ದೇವನು...


ರಚನೆ: ರಾಮಚಂದ್ರ ಸಾಗರ್


Wednesday, 22 March 2023

ಯುಗಾದಿ..

 

ಎಲ್ಲಾ ಸಹೋದರ ಬಂಧುಗಳಿಗೂ ಯುಗಾದಿಯ  ಶುಭಾಶಯಗಳು. ಚಂದ್ರಮಾನ ಯುಗಾದಿಯು ಎಲ್ಲರ ಬಾಳಲ್ಲೂ ಆರೋಗ್ಯ, ನಗು, ಸಂಪತ್ತು, ಪ್ರೀತಿ, ಸ್ನೇಹ, ಸಹಬಾಳ್ವೆಯನ್ನು ಕರುಣಿಸಲಿ..

ಸಮಾಜ  ಎನ್ನುವುದು ಒಂದು ಸುಂದರ ಹೂಗಿಡ. ಆ ಗಿಡಕ್ಕೆ ಹಾನಿಮಾಡುವ ಎಲ್ಲಾ ಬಗೆಯ ಕೀಟಗಳು, ರೋಗಗಳು, ದುಷ್ಟ, ವಿಕೃತ ಮನಸ್ಸಗಳು ಇನ್ನು ಮುಂಬರುವ ದಿನಗಳಲ್ಲಿ ಮರೆಯಾಗಲಿ ಆ ಹೂಗಿಡವು ಚೆಲುವನ್ನು ಕಂಗೊಳಿಸುತ್ತಾ ಸುಂದರವಾದ ಚೆಲುವನ್ನು ಬೀರುತ್ತಾ ಸಮೃದ್ಧ ಹಾಗೂ ಸಂಪ್ರೀತಿಯ ಸಮಾಜವು ನಮ್ಮೆಲ್ಲರದಾಗಲಿ ಮುಂಬರುವ ವರ್ಷದುದ್ದಕ್ಕೂ ಎಲ್ಲರ ಕಣ್ಣಲ್ಲೂ ಸ್ನೇಹ, ಸಹಬಾಳ್ವೆ, ಪ್ರೀತಿ, ವಿಶ್ವಾಸಗಳು ಸದಾ ಅರಳುತ್ತಾ ಅಲೆಯಾಗಿ  ನೆಲೆಯಾಗಲಿ ಆದಷ್ಟು ಬೇಗನೇ ಈಗ ಕೂಡಿ ಬಂದಿರುವ ಸಕಾಲದಲ್ಲಿ ವಿಕೃತ ಮನಸ್ಸುಗಳು ದಹನವಾಗಲಿ ಎಂದು ಆಶಿಸಿ ಯುಗಾದಿ ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ...ಎಲ್ಲರಿಗು ಯುಗಾದಿಯ ಹೊಸ ಹರುಷದ ಸ್ವಾಗತವನ್ನು ಕೋರುತ್ತಾ ಮತ್ತೊಮ್ಮೆ ಎಲ್ಲಾ ಸಚ್ಚರಿತ ಮನಸ್ಸುಗಳಿಗೆ ಶುಭಾಶಯಗಳು..

ಯುಗಾದಿ..

ಕಹಿಯ ಬವಣೆ ಕರಗಲು
ಸಿಹಿಯ ಬದಕು ಅರಳಲು
ಮನ ಮನಗಳಲಿ ಯುಗಾದಿ
ಹಚ್ಚಬೇಕಿದೆ ಹೊಸ ದೀವಟಿ..

ಚೈತ್ರಮಾಸದ ಹೊಸದಿನ
ಕರೆತರಲಿ ಹೊಸತನ
ಎಲ್ಲರೆದೆಯ ಬೆಳಗಲು
ಉದಯಿಸಲಿ ಬಂಧುತ್ವ...

ರವಿ ಚಂದ್ರರ ಗತಿಯಲ್ಲಿ
ಬಾನು ಭುವಿಯ ಪರಿಧಿಯಲ್ಲಿ
ಬದಲಾಗುವ ಘಳಿಗೆಯಲ್ಲಿ
ಮರೆಯಾಗಲಿ ಮತ್ಸರ
ಯುಗಾದಿ ತರಲಿ ಸಂತಸ ...

ಅರೆ ನಿಮಿಷವಾದರು
ಅನ್ಯರ ಮನ ನೋಯಿಸದಿರು
ಕಹಿಯ ಮನಸು ದಹಿಸಿ
ಸಿಹಿಯ ಮನಸು ಅರಳಿಸಿ
ಹರುಷದ ಗೂಡಾಗು..

 

ಹರಕುಬಾಯಿ ಮೂಕವಾಗಲಿ

ವಿಕೃತ ಮನಸ್ಸು ದಹನವಾಗಲಿ

ಸಜ್ಜನನು ನಾಯಕನಾಗಲಿ

ಸಹಿಷ್ಣುತೆ ಮೆರೆದಾಡಲಿ..

 

ವರುಷದ ಆಯುಷ್ಯ
ಕರಗದಿರಲಿ ವ್ಯರ್ಥ
ಅಂತ್ಯವಾಗುವ ಮುನ್ನ
ಬೆಳಗುವ ದೀಪವಾಗು
ಸಿಹಿಯಾದಿಯಾಗಲಿ ತನು ಮನ...

ರಚನೆ: ರಾಮಚಂದ್ರ ಸಾಗರ್


Sunday, 12 June 2022

ಜೇನಿನ ಹೂಮಳೆ


ಗೆಳೆಯಾ ..

ನನ್ನೆದೆಯಲಿ ಬಿಡುವಿರದೆ ಸುರಿದಿದೆ

ನಿನ್ನೊಲವಿನ ಸವಿಜೇನಿನ ಹೂಮಳೆ

ಅನುರಾಗದ ಜಗದಲಿ ಬೀಸುತಿದೆ

ನೀನೆನ್ನುವ ಪ್ರೀತಿಯ ಅತಿಶಯವೆ


ಸೌರಭದ ತಂಗಾಳಿಯಲಿ ಕಾಡಿದೆ

ಜೊತೆಯಾಗಿ ಸಾಗುವ ಬಯಕೆ

ಶಮನವಾಗದ ಕನಸಲಿ ಬೇಡಿದೆ

ನೀನೆನ್ನುವ ಚುಂಬಕ ದೊರೆಯ


ಪ್ರೇಮಕಾಸಾರದ ನಾವೆಯೊಳು

ಬಾಹುಬಂಧನಕೆ ಆಸರೆಯಾಗು

ಅಧರಗಳ ನಿವೇದನೆಗೆ ಉತ್ತರಿಸು

ಕಾರ್ಗಾಲದ ಚಳಿ ಮರೆಯಾಗಿಸು


ಹೃದಯ ತರಂಗದ ಒಲವಿನ ಸ್ವರದಲಿ

ಕಾತರಿಸುವ ಬಾಳಿಗೆ ನೀ ವರವಾಗು

ಮನ ನಲಿಸು ಸೌಜನ್ಯದ ನಗುವಿನಲಿ 

ಸೋಲಿಲ್ಲದ ಹಾದಿಗೆ ನೀ ಸ್ವಾಗತಿಸು


ಹೂಮಳೆಯ ಚಿತ್ತಾರದ ಜಗದಲಿ

ಮುಗುದೆಯ ಪಾವನ ಹೃದಯಕೆ 

ಅನುದಿನವು ನೀ ಜೊತೆಯಾಗಿರು

ಪ್ರೇಮವೇ ಬಾಳಾಗಿಸಿ ಉಸಿರಾಗಿಸು


ರಚನೆ: ರಾಮಚಂದ್ರ ಸಾಗರ್