(ಕಾಲ್ಪನಿಕ ಬರಹ)
ನಾನು ಅನೇಕ ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿರುವೆ. ಕೆಲವು ವರ್ಷಗಳಿಗೊಮ್ಮೆ ಆಗಾಗ್ಗೆ ಭಾರತಕ್ಕೆ ಬರುತ್ತಿದ್ದೆ. ಬರುವಾಗಲೆಲ್ಲಾ ಬಂಧು ಬಳಗದವರಿಗೆ, ಅಕ್ಕರೆಯ ಸ್ನೇಹಿತರಿಗೆ ಸಾಕಷ್ಟು ಉಡುಗೊರೆಗಳನ್ನು ತರುತ್ತಿದ್ದೆ. ಮುಖ್ಯವಾಗಿ ನಾನು ಅಮೇರಿಕಾದಲ್ಲಿ ಕೆಲಸಕ್ಕೆ ಸೇರಿದ ಮೇಲೆಯೇ ಊರಿನಲ್ಲಿದ್ದ ನನ್ನ ಕುಟುಂಬದವರು, ಬಳಗದವರು ಸಾಕಷ್ಟು ಚೇತರಿಕೆಯನ್ನು ಕಂಡರು.
ಸಾಕಷ್ಟು ಭೂಮಿ ಇದ್ದರೂ ಅಭಿವೃದ್ಧಿ ಪಡಿಸಲು ಹಣಕಾಸಿನ ಕೊರತೆಯಿತ್ತು. ಅದೂ ಸಹಾ ನಾನು ನೀಡಿದ ಆರ್ಥಿಕ ಸಹಾಯದಿಂದಲೇ ನೆರವೇರಿತು. ಬೇಸಿಗೆಯಲ್ಲೂ ನೀರಿನ ವ್ಯವಸ್ಥೆಯಾಗಿ ಇಡೀ ಗದ್ದೆ ಮತ್ತು ತೋಟ ಹಸಿರಿನಿಂದ ನಳನಳಿಸುವಂತಾಯಿತು. ಇದ್ದ ಹಳೇ ಮನೆಯ ದುರಸ್ತಿಯನ್ನು ನಾನು ಕಳುಹಿಸುತ್ತಿದ್ದ ಹಣದಿಂದಲೇ ಮಾಡಿಸಿದರು. ಇದರ ನಡುವೆ ಅನೇಕ ಜನ ಸ್ನೇಹಿತರಿಗೆ ಹಣಕಾಸಿನ ನೆರವನ್ನು ಮಾಡಿದ್ದೆ. ಅದರಿಂದ ಅವರು ಸಹಾ ಉದ್ಯೋಗವನ್ನು ನಡೆಸಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸ್ವಾವಲಂಬಿಗಳಾಗಿದ್ದರು.
ಏನಿಲ್ಲವೆಂದರೂ ವಾರದಲ್ಲಿ ಎರಡು ಮೂರು ಬಾರಿ ಊರಿನಿಂದ ನನಗೆ ಕರೆ ಬರುತ್ತಿತ್ತು. ಬಹಳ ಅಕ್ಕರೆಯಿಂದ ಮಾತನಾಡುತ್ತಿದ್ದರು. ಏನು ಕೇಳುವುದನ್ನು ಮರೆತರೂ ಮತ್ತೆ ಯಾವಾಗ ಊರಿಗೆ ಬರುತ್ತೀಯಾ? ಹೇಗಿದ್ದೀಯಾ? ಒಬ್ಬನೇ ಎಷ್ಟು ವರ್ಷವಂತ ಭ್ರಹ್ಮಚಾರಿಯಾಗಿ ಇರುತ್ತೀಯ? ಬೇಗನೇ ಮದುವೆಯಾಗು. ಈ ಬಾರಿ ನೀನು ಊರಿಗೆ ಬಂದಾಗ ಖಂಡಿತವಾಗಿ ನಿನ್ನ ಮದುವೆಯನ್ನು ಮಾಡಿಯೇ ತೀರುತ್ತೇವೆ. ನಿನ್ನ ಮನದ ಇಂಗಿತವನ್ನು ಈಡೇರಿಸುವ ಸೌಖ್ಯವತಿಯು ನಿನಗೆ ಒಲಿದು ಬರುತ್ತಾಳೆ. ಎಷ್ಟೇ ಆದರು ಹೂವಂತ ಮನದವನು ನೀನು. ನಿನಗೇ ಆ ದೇವರು ಖಂಡಿತವಾಗಿಯೂ ಉತ್ತಮ ಕನ್ಯೆಯನ್ನೇ ಕರುಣಿಸುತ್ತಾನೆ. ಈ ಬಾರಿ ನೀನು ಊರಿಗೆ ಬಂದರೆ ಒಂಟಿಯಾಗಿ ಅಮೇರಿಕಾಗೆ ಹಿಂತಿರುವುದಿಲ್ಲ. ಜೊತೆಯಾಗಿಯೇ ಹಿಂತಿರುಗುವೆ. ಇದು ಸತ್ಯ. ಎಲ್ಲದಕ್ಕೂ ಕಾಲ ಕೂಡಬೇಕು. ನೀನು ಊರಿಗೆ ಆದಷ್ಟು ಬೇಗ ಬಾ ಎಂದು ಎಲ್ಲರೂ ಅಕ್ಕರೆಯಿಂದ ಹಂಬಲಿಸುತ್ತಿದ್ದರು.
ನನಗೂ ಇವರೆಲ್ಲರ ಮಾತನ್ನು ಕೇಳಿ ಆದಷ್ಟು ಬೇಗ ಊರಿಗೆ ಹೋಗಬೇಕೆನ್ನುವ ಆಸೆ ಅರಳಿತು.