Friday, 14 February 2020

ಕ್ಷಮಿಸಿ ಬಿಡಿ ಯೋಧರೇ.

ಇಂದು ಪುಲ್ವಾಮ ದಾಳಿ ನಡೆದ ದಿನ. ಈ ದಿನ ನಮ್ಮ ನೆಲದಲ್ಲಿ ಉಗ್ರರ ಅಟ್ಟಹಾಸಕ್ಕೆ ನಮ್ಮ ಯೋಧರು ಬಲಿಯಾದರು. ಪ್ರೀತಿಯ ದಿನಾಚರಣೆಯ ದಿನವೇ ಹಿಂಸೆಯ ನರ್ತನವಾಗಿ ಪ್ರೀತಿಯೆ ಕೊಲೆಯಾದ ದಿನವಿದು. ಹಿಂಸೆಯನ್ನು ಹಿಂಸೆಯಿಂದಲೇ ಕೊನೆಯಾಗಿಸಿ ಶಾಂತಿ ನಿರ್ಮಾಣ ಮಾಡುವುದು ಕೆಲವೊಮ್ಮೆ ಅನಿವಾಯೌವಾಗುತ್ತದೆ. ಮನುಷ್ಯ ತಪ್ಪು ಮಾಡಿದಾಗ ಆತನಿಗ ಬುದ್ಧಿ ಹೇಲಿ ಸರಿಯಾದ ದಾರಿಗೆ ತರಬಹುದು ಆದರೆ ಮಾನವೀಯ ಗುಣಗಳನ್ನೇ ಕಳೆದುಕೊಂಡು ತಲೆಮಾಸಿದವನು ಮಾನವನ ರೂಪದಲ್ಲಿ ಇರುತ್ತಾನೆಯೇ ಹೊರತು ಆತ ಮಾನವನಲ್ಲ! ಆದ್ದರಿಂದ ಅಂತಹವರನ್ನು ಕೊನೆಯಾಗಿಸಿ ಶಾಂತಿ ನಿರ್ಮಿಸುವುದೇ ಅನಿವಾರ್ಯವೆನ್ನುತ್ತಾ ಪುಲ್ವಾಮ ದಾಳಿಯಲ್ಲಿ ಅಮರರಾದ ಯೋಧರನ್ನು ನೆನೆಯುತ್ತಾ "ಕ್ಷಮಿಸಿ ಬಿಡಿ ಯೋಧರೇ" ಎನ್ನುವ ಗದ್ಯ ಪದ್ಯವನ್ನು ಬರೆದಿದ್ದೇನೆ..ಇಷ್ಟವಾದರೆ ಶೇರ್ ಮಾಡಿ..

ಕ್ಷಮಿಸಿ ಬಿಡಿ ಯೋಧರೇ.

ಪ್ರೀತಿಯ ಕಡಲಿನ ಉಬ್ಬರದಲ್ಲಿ
ಜಗವೆಲ್ಲ ತೋಯ್ದ ದಿನದಲ್ಲಿ
ರಕ್ತತ ಹೊಳೆ ಹರಿಸಿದ ರಕ್ಕಸರ ನೆನೆದಾಗ
ಪುಲ್ವಾಮದ ಕರಾಳತೆಯ ನೆನಪು 
ಮತ್ತೆ ಮತ್ತೆ ಮಾರ್ದನಿಸಿದಾಗ ನನ್ನೆದೆಯಲ್ಲಿ
ಕ್ರೌರ್ಯತೆಯ ಬಿಂಬದ ದೆವ್ವವು 
ಅಣಕಿಸುತ ಗಹಗಹಿಸಿ ಕುಣಿವಾಗ
ನಿಮ್ಮ ನೆನಪು ಕೇವಲ ನೆನಪಾದರೆ ಸಾಕೆ?

 ಎಡ-ಬಲದ ಬಡಿದಾಟದಲ್ಲಿ
ದೇಶದುದ್ದ ಚರ್ಚೆಯಾಗಿದ್ದಾದರೂ
 ನಿಮ್ಮ ಕುಟುಂಬದ ಆರ್ತನಾದ 
ಇನ್ನೂ ಮುಗಿಯದೇ
ಕೇವಲ ಕಪಟಿಗಳೆ 
ಮುಗಿಬಿದ್ದು ಕುಣಿವಾಗ
ನೈಜತೆಯ ನಿಮ್ಮ ದೇಶ ಪ್ರೇಮದ ಋಣಕೆ
ನಿಮ್ಮಂತೆ ನಾನು ರೋಧಿಸುತ ಕೂರುವುದೆ?

ಹಗಲು ರಾತ್ರಿಗಳು ಅರಿವಿಗೆ ಬಾರದೆ
ದೇಶಾಭಿಮಾನವೆ ಉಸಿರಾಗಿಸಿ ಅಮರರಾದವರು ನೀವು
ನಿಮ್ಮಂತೆ ನಾವು ನಮ್ಮಂತೆ ನೀವೆಂದು
ಹೆಗಲಿಗೆ ಹೆಗಲುಕೊಟ್ಟು ನಡೆದರೆ ಸಾಕೇನು?
ಆದರ್ಶಗಳ ಪಾಲನೆಯು ಬಾಷಣಕೆ ಮಿತಿಯೇನು?

ಏನಾದರೇನು ಸ್ವಾಮಿ
ಬೆಂಬಿಡದೆ ಕಾಡುವ ರಕ್ಕಸರಿಗೆ ಕೊನೆಹಾಡದೆ
ಜಟಿಲ ಸಮಸ್ಯೆಗಳ ಜೀವಂತವಿಟ್ಟರೆ
ಕಂಬನಿಗಳ ಮಳೆಯು ಸುರಿಯದೆ ಇರುವುದೆ?

ಶಾಂತಿಗೆ ಹಿಂಸೆಯು ಅನಿವಾರ್ಯವೆ ಎನುವಾಗ
ಮುಗ್ಧರ ಜೀವವು ಕ್ಷಣವು ಕ್ಷಣವು ಗತಿಸುವಾಗ
ಯಾರಪ್ಪಣೆಗೆ ಕಾಯಬೇಕಿದೆ?
ಮೌನದಿ ಯಾರನ್ನು ಮೆಚ್ಚಿಸಬೇಕು
ಅಮರರಾದವರ ಆತ್ಮಕೆ ತುಸು ಶಾಂತಿಯನು
ನೀಡಲೇಬೇಕು..
ಪ್ರೀತಿಯ ಬದುಕಿಗೆ ಸಾರ್ಥಕ್ಯ ಕೊಡಲೇಬೆಕು.
ಅಲ್ಲಿಯವರೆಗು ನಮ್ಮ ಕ್ಷಮಿಸಿಬಿಡಿ ಯೋಧರೇ

ರಾಮಚಂದ್ರ ಸಾಗರ್