Monday, 26 December 2016

ನೋವ ಶರಧಿಯಿಂದ ಮೇಲೆತ್ತಿಬಿಡು

ಗೆಳೆಯಾ..
ನೀ ಬರುವುದಾದರೆ ಬಂದುಬಿಡು
ಕನಸಲಿ ಕನಲಿಸಿ ಕಾಡದಿರು
ನೀ ಜೊತೆಯಾಗುವುದಾರೆ ಜೊತೆಯಾಗಿಬಿಡು
ಮರೆಯಲುಳಿದು ನೋವನು ನೀಡದಿರು..


ನೋವ ಶರಧಿಯಲ್ಲಿ ನೊಂದಿಹೆನು
ನಿನಗಾಗಿ ಬೇಡುವ ಜೋಗಿಣಿ ನಾನು
ಜೋಲಾಡುವ ಬದುಕಿಗೆ ಜೊತೆಯಾಗು
ನಗು ಮರೆತ ಮೊಗದಲಿ ನಗುತುಂಬು..



ಕಾತರದ ಮನಸನು ಸಂತೈಸು
ಕಾಂತಾರದ ದಾರಿಯಲು ನೀ ನಡೆಸು
ಬಾಳ ನಾವೆಗೆ ನಾವಿಕನಾಗು
ನನ್ನೆದೆಯಾಸೆಗೆ ಜೇನಾಗು..


ನನ್ನೆದೆ ಗೂಡಲಿ ಕಾರುಬಾರು ನೀ ನಡೆಸು
ಕಾಠಿಣ್ಯದ ನೋವನು ಹೂವಾಗಿಸು
ಕಾರುಣ್ಯದ ಒಲವು ನೀ ನೀಡು
ಕಾತರಿಸುವ ನನ್ನನೂ ನೀ ರಮಿಸು..


ಗೆಳೆಯಾ..
ನೀ ನಗುತ ನನ್ನೆಡೆ ಬಂದುಬಿಡು
ನೋವ ಶರಧಿಯಿಂದ ಮೇಲೆತ್ತಿಬಿಡು
ಕಾರುಣ್ಯದ ಒಲವು ನೀ ನೀಡು
ಕಾತರಿಸುವ ನನ್ನನೂ ನೀ ರಮಿಸು..


           ರಾಮಚಂದ್ರ ಸಾಗರ್

ಸಕಾರಾತ್ಮಕಭಾವದಲ್ಲಿ ಸಾವಿಗೂ ಸೋಲಿದೆ..

     ನಿಮ್ಮ ಹತಾಶೆಯು ಇನ್ನೊಬ್ಬರಿಗೆ ನಿಮ್ಮನ್ನು ಇನ್ನಿಲ್ಲದಂತೆ ಮಾಡುವ ಆಯುಧವಾಗುತ್ತದೆ, ನೀವು ಹತಾಶೆಯಲ್ಲಿ ಮುಳುಗಿದ್ದ ಸಮಯವೇ ಅವರಿಗೆ ವರದಾನವಗುತ್ತದೆ, ಸಮಯಕ್ಕಾಗಿ ಹೊಂಚಿ ಕುಳಿತ ಶತ್ರುಗಳು ನಿಮ್ಮನ್ನು ಮುಗಿಸಲು ಇನ್ನಿಲ್ಲದಂತೆ ಆಗ ಮುಗಿಬಿದ್ದರೆ ನೀವು ಏಳುವುದು ಅಸಾಧ್ಯ, ಆದ್ದರಿಂದ ನೀವುಗಳು ಹತಾಶೆಯೆಂಬುದನ್ನು ತೋರಿಸದೇ ಸಕಾರಾತ್ಮಕ ಭಾವದಲ್ಲಿರಬೇಕು. ಸೋಲು, ನೋವು, ನರಳಿಕೆ, ಕಾಯಿಲೆಗಳು, ಹಣಕಾಸು ತೊಂದರೆ ಸಾಮಾನ್ಯವಾಗಿ ನಮ್ಮನ್ನು ಕಾಡುತ್ತವೆ. ಎಲ್ಲ ಸಮಯದಲ್ಲೂ ಉನ್ನತಿಯು ಸಾಧ್ಯವಿಲ್ಲ. ಕೆಲವೊಮ್ಮೆ ನಮ್ಮ ಪ್ರಯತ್ನ ಎಷ್ಟೇ ಗಟ್ಟಿಯಾಗಿದ್ದರೂ ಸೋಲೆಂಬ ಕಹಿಯು ಅಪ್ಪುತ್ತದೆ, ಬಿಡದೇ ಕಾಡುತ್ತದೆ. ಆಗ ನಾವು ಮಾನಸಿಕವಾಗಿ ಜರ್ಜರಿತವಾಗುವುದು ಸಾಮಾನ್ಯ, ನೋವು ತುಂಬಿದ ಮನದಲ್ಲಿ ಬದುಕುವುದು ವಿಧಿಬರಹವಾಗುತ್ತದೆ. ಆದರೆ ಆ ನೋವಿಗೆ ಬೆದರಿ ಕೂತರೇ ನಮಗೆ ನಾವೇ ಶತ್ರುವಾದಂತೆ, ಮನದ ಅಳುಕೇ ನಮ್ಮನ್ನು ಕುಗ್ಗಿಸುವ ಆಯುಧವಾಗುತ್ತದೆ, ಜೊತೆಗೆ ಹಗೆಯುಳ್ಳ ಮಂದಿಗೆ ಅದು ಸಕಾಲವಾಗಿ ನಮ್ಮನ್ನು ಮೆಟ್ಟಿಬಿಡುತ್ತಾರೆ. ಎಲ್ಲದಕ್ಕೂ ಗಟ್ಟಿಯಾದ ಗುಂಡಿಗೆಯಿರಬೇಕು, ಗಟ್ಟಿಯಾದ ಗುಂಡಿಗೆಯ ಸಕಾರಾತ್ಮಕ ಭಾವದಲ್ಲಿ ಎಲ್ಲಾ ಮುಗಿದ ಮೇಲು ಅರಳುವ ಹೂವು ಇದ್ದೇ ಇರುತ್ತದೆ. ಎಲ್ಲಾ ಬಿರುಗಾಳಿಗೆ ನೂಕಿಹೋದರೂ, ಸುನಾಮಿಗೆ ತುತ್ತಾದರೂ ಎಲ್ಲೋ ಒಂದು ಸಣ್ಣ ಜೀವಸೆಲೆಯಾದರೂ ಉಳಿಯುತ್ತದೆ, ಉಳಿಯುವುದೆಂಬ ಆಸೆಯ ಜೊತೆಗೆ ಗೆಲ್ಲುವೆನೆಂಬ ಹಠವೂ ಇರಬೇಕು. ಸೋತರೂ ಗೆದ್ದಂತೆ ಈ ಜಗದಲ್ಲಿ ನಗಬೇಕು, ಬಿದ್ದರೂ ನೋವಾಗದಂತೆ ನಟಿಸಬೇಕು, ಕಾಣೆಯಾದ ಸುಖಕೆ ಚಿಂತಿಸಿ ಸಮಯವನ್ನು ಕರಗಿಸದೇ ನಿತ್ಯ ಹಠವಂತ ಕಾರ್ಯದಲ್ಲಿ ಸುಖವೇ ನಮ್ಮನ್ನರಸಿ ಬರುವಂತೆ ಮಾಡಬೇಕು. ನೋವು, ಬವಣೆಗಳಿಗೆ ಹೆದರಿ ನಮ್ಮ ಕನಸುಗಳನ್ನು ಸಾಕು ಮಾಡಬಾರದು, ಬದುಕೊಂದು ನಿರಂತರ ಚಲಿಸುವ ನೌಕೆಯಾಗಬೇಕು. ಬದುಕಿಗೆ ಕೊನೆಯೆಂಬುದು ನಿಶ್ಚಿತ ಮತ್ತು ಖಚಿತವಾದರೂ ಬಾಳಲ್ಲಿ ಎದುರಾದ ಬವಣೆಗೆ ಕೊನೆ ಸನಿಹವೆಂದು ಎಂದಿಗೂ ಅಳುಕಬಾರದು. ಕೊನೆಯನ್ನು ದೂರತಳ್ಳುವ ಆತ್ಮಸ್ತೈರ್ಯವಿದ್ದಲ್ಲಿ ಸಾವು ಹೆದರುತ್ತದೆ, ಮನಬಲವಿದ್ದಲ್ಲಿ ದೈಹಿಕ ಬಲವೂ ಗಟ್ಟಿಯಾಗಿರುತ್ತದೆ. ಕೊನೆ ಎಂಬುದು ದಿಟವೆಂದು ಕೊರಗುವವರು ಏನೇ ಆಗಲಿ ಒಮ್ಮೆ ನೋಡಿ ಬಿಡೋಣ, ಆಟ ಮುಗಿಸಿ ಹೋಗುವುದರೊಳಗೆ ಒಂದು ಕೈ ಎಂದು ಮುನ್ನುಗ್ಗಿದವರು ಇಂದು ಜೀವ ಮತ್ತು ಜೀವನ ಎರಡನ್ನು ಗೆದ್ದ ಅನೇಕ ಉದಾಹರಣೆಗಳಿವೆ. ಒಬ್ಬರು ಅಪಘಾತದಲ್ಲಿ ತಮ್ಮ ಕೈಕಾಲು ಸ್ವಾದವನ್ನು ಕಳೆದುಕೊಂಡವರು ಇನ್ನೆಂದು  ತಮ್ಮಿಂದ ಆಗದು ಎಂದು ಕುಳಿತುಕೊಳ್ಳದೇ ಹಠವಿಡಿದು ತಾವು ಕೂತಲ್ಲೇ ಒಂದು ಗೃಹ ಉಧ್ಯಮವನ್ನು ಕಟ್ಟಿ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಹೀಗೆ ಉದಾಹರಣೆಗಳು ಅನೇಕ ಇವೆ. ಬದುಕು ಮುಗಿದೇ ಹೋಯಿತು, ಎದುರಾಳಿಯು ನಮ್ಮನ್ನು ಮುಗಿಸಿಯೇ ಬಿಟ್ಟ ಎಂದಾಗಲೂ ಹೋರಾಟದ ಕೊನೆ ಕ್ಷಣದಲ್ಲೂ ಗೆಲುವು ನಮ್ಮದಾಗುತ್ತದೆ. ಒಲಂಪಿಕ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಕೊನೆವರೆಗೂ ಅಂಕಗಳಲ್ಲಿ ತೀವ್ರ ಹಿನ್ನಡೆಯಲ್ಲಿದ್ದರೂ ಕೊನೆಯ 20 ಸೆಕೆಂಡ್ ನಲ್ಲಿ ಆಕೆ ಆಟವನ್ನೇ ಬದಲಾಯಿಸಿದಳು.  
      ಅನೇಕ ವಾಸಿಯಾಗದೇ ಬಳಲುವ ತೀವ್ರತರವಾದ ರೋಗದಿಂದ ಬಳಲುವವರೂ ಕೂಡ ಎಷ್ಟೋ ಮಂದಿಗಳು ತಾವು ಹೆದರದೇ, ಹೋಗುವುದೇ ವಿಧಿ ಬರಹವಾದಲ್ಲಿ ಇನ್ನೇಕೆ ಎಂದು ಅಂಜದೇ ಸಾವನ್ನು ಧೈರ್ಯದಿಂದ ಎದುರು ನೋಡುವವರು ಎಷ್ಟೋ ಜನ ವರ್ಷಗಳುರುಳಿದರೂ ಬಂಡೆಯಂತೆ ಗಟ್ಟಿಯಾಗಿದ್ದಾರೆ. ಎಲ್ಲವೂ ಅವರರವ ಮನೋಸ್ಥೈರ್ಯವೇ ಹೊರತು ಇನ್ನೇನಲ್ಲ. ಆದ್ದರಿಂದ ಮನೋಸ್ಥೈರ್ಯವಿಲ್ಲದೇ ಯಾರೂ ಕೂಡ ಅರೆಘಳಿಗೆಯೂ ಬದುಕುಳಿಯಲು ಸಾಧ್ಯವಿಲ್ಲ. ಆದ್ದರಿಂದ ಹೆದರಿಕೆಯಲ್ಲಿ ಕಾಲ ಕಳೆಯದೇ ಸಕಾರಾತ್ಮಕ ಭಾವದಲ್ಲಿ ಬಂಡುತನವನ್ನೇ ಮೈಗೂಡಿಸಿಕೊಂಡು ಬದುಕುವುದು ಜೀವಕ್ಕೆ ಮತ್ತು ಬದುಕಿಗೆ ಎರಡಕ್ಕೂ ಉತ್ತಮ. ಅನ್ಯರ ಹಂಗಿಕೂ ಸಿಗದೆ ಬಾಳಬಹುದು. ಪಚನವಾಗದ ಕಹಿಗೆ ಚಿಂತಿಸುತ್ತಾ ಕೂರುವ ಬದಲು ಸಕಾರಾತ್ಮಕ ಭಾವದಲ್ಲಿ ಅರಳುವ ಬೆಳಕನ್ನು ನಾವು ಅಪ್ಪಬೇಕು. ಆಗದು ಎಂಬ ಜಾಗದಲ್ಲಿ ಆಗುತ್ತದೆ ಎಂಬುದನ್ನು ಬರೆಯಬೇಕು, ಇದು ಎಲ್ಲರ ಬದುಕಾಗಬೇಕು, ಹಠವಿರುವ ಮನದಲ್ಲಿ ಗೆಲುವು ಎಲ್ಲರದಾಗಬೇಕು ಮತ್ತೂ ಇದು ಸೌಹಾರ್ದ ಬದುಕನ್ನು ಕಟ್ಟುವುದಾಗಿರಬೇಕೆಂಬುದು ನನ್ನಾಶಯ...
         ರಾಮಚಂದ್ರ ಸಾಗರ್

Sunday, 25 December 2016

ಸ್ವಾಭಾವಿಕ ಸಸ್ಯಕುಲ ಉಳಿಸಿ...

      ನೈಸರ್ಗಿಕವಾಗಿ ಬೆಳೆವ ಕಾಡುಗಳಲ್ಲಿ ಅನೇಕ ಪ್ರಬೇಧದ ಜೀವಕುಲವಿದೆ, ಅವುಗಳಿಗೆ ಜೀವಸೆಲೆಯು ಈ ನೈಸರ್ಗಿಕ ಅರಣ್ಯವೇ ಆಗಿದೆ. ನೈಸರ್ಗಿಕವಾಗಿ ಬೆಳೆವ ಕಾಡುಗಳಿಂದ ಭುವಿಯ ಫಲವತ್ತತೆ ಹಾಗೂ ಉಪಯೋಗಕ್ಕೆ ಯಾವುದೇ ಧಕ್ಕೆಯಿಲ್ಲ. ಅಂತರ್ಜಲದ ಮಟ್ಟಕ್ಕೂ ಅಪಾಯವಿಲ್ಲ, ನೈಸರ್ಗಿಕ ಕಾಡುಗಳಲ್ಲಿ ಭೂ ಮೇಲ್ಮೈಯನ್ನು ಕಾಪಾಡುವ ಅನೇಕ ಸಣ್ಣ ಸಸ್ಯಗಳು, ಹುಲ್ಲು ಮಾದರಿ ಸಸ್ಯಗಳು ಬೆಳೆಯುತ್ತವೆ, ಮಳೆಗಾಲದಲ್ಲಿ ಜೋರಾಗಿ ಹರಿಯುವ ನೀರಿನಲ್ಲಿ ಮಣ್ಣು ಕೊಚ್ಚಿಕೊಂಡು ಹೋಗದಂತೆ ತಡೆಯುತ್ತವೆ, ಭೂ ಮೇಲ್ಮೈ ರಕ್ಷಿಸುತ್ತವೆ. ಭೂ ಸವಕಳಿಯನ್ನು ತಡೆಯುತ್ತವೆ. ಹಸಿರು ಹೊದಿಕೆಯಿಂದ ಆವೃತ ನೈಸರ್ಗಿಕ ಅರಣ್ಯಗಳಲ್ಲಿ ಭೂ ಸವಕಳಿಯು ಸಂಭವಿಸುದಿಲ್ಲ, ಜೊತೆಗೆ ಪ್ರಾಣಿ ಸಂಕುಲದ ಬದುಕಿಗೆ ಆಧಾರವಾಗಿರುತ್ತವೆ. ಹರಿವ ನದಿತೊರೆಗಳಲ್ಲಿ ನೀರು ಮಣ್ಣು ಮಿಶ್ರಣಗೊಳ್ಳದೇ ಶುದ್ಧ ನೀರು ಹರಿಯುತ್ತದೆ. ನೀರಿನ ತಣಿವನ್ನು ವರ್ಷದುದ್ಧ ಬಹುಕಾಲದವರೆಗೂ ಉಳಿಸಿಕೊಂಡು ಹೋಗುವ ಗುಣವಿರುತ್ತದೆ. ಉದುರುವ ಎಲೆಗಳು ಕೊಳೆತು ಮಣ್ಣಾಗುತ್ತವೆ, ನೈಸರ್ಗಿಕ ಅರಣ್ಯದ ಅವಷೇಶಗಳು ಬೇಗನೇ ಕೊಳೆಯುತ್ತವೆ, ಇದರಲ್ಲಿ ಅನೇಕ ಸೂಕ್ಷ್ಮಾಣು ಜೀವಿಗಳು ಬದುಕುತ್ತವೆ. ಇವುಗಳೇ ಮಣ್ಣಿನ ರಚನೆಗೂ ಕಾರಣವಾಗಿ ಭುವಿಯ ಫಲವತ್ತತೆಯನ್ನು ಹೆಚ್ಚಿಸುತ್ತಾ ಭುವಿಯ ಮೇಲೆ ಬಿಸಿಲು ಕಿರಣಗಳು ನೆಲವನ್ನು ತಾಕದಂತೆ ತಡೆದು ಭುವಿಯ ಮೇಲೆ ತಾಪವನ್ನು ಕಡಿಮೆ ಮಾಡುತ್ತವೆ. ಮರಗಳಲ್ಲಿ ಬೆಳೆಯುವ ಹೂವು ಮತ್ತು ಹಣ್ಣುಗಳು ಅನೇಕ ಜೀವಿಗಳಿಗೆ ಆಹಾರವಾಗಿದೆ. ಒಂದೇ ಮಾದರಿ ಮರವಲ್ಲದೇ ಅನೇಕ ಮಾದರಿಯ ಮರಗಳು ಒಟ್ಟಾಗಿ ಸ್ವಾಭಾವಿಕವಾಗಿ ಬೆಳೆಯುವುದರಿಂದ ಪರಿಸರದ ಸಮತೋಲನಕ್ಕೂ ಉತ್ತಮ. ವಿವಿಧ ಬಗೆಯ ಮರಗಳು ಒಟ್ಟಾಗಿ ಬೆಳೆಯುವುದರಿಂದ ಜೀವಕುಲಕ್ಕೆ ಅಗತ್ಯವಾದ ಆಹಾರವು ದೊರೆಯುತ್ತದೆ.
 
      ಆದರೆ ಇಂದು ವ್ಯಾಪಕವಾಗಿ ಅರಣ್ಯನಾಶವಾಗುತ್ತಿದೆ, ನಾಶವಾದ ಜಾಗದಲ್ಲಿ ನೀಲಗಿರಿ ಮತ್ತು ಅಕೇಶಿಯಾದಂತ ನೆಡುತೋಪುಗಳನ್ನು ನೆಡುವುದು ಸಾಮಾನ್ಯವಾಗಿದೆ. ಮೂಲತಃ ಆಷ್ಟ್ರೇಲಿಯಾ ಒಣ ಬಂಜರು ಭೂಮಿಯಲ್ಲಿ ಬೆಳೆಯುವ ಬೆಳೆಗಳಿವು, ಇವುಗಳ ಕಾಡಿನಲ್ಲಿ ಬೇರೆ ಯಾವುದೇ ಜೀವಕುಲ ಉಳಿಯಲು ಸಾಧ್ಯವಿಲ್ಲ. ಇವುಗಳಿಂದ ಉದುರಿದ ಎಲೆಗಳು ಮಳೆಗಾಲದಲ್ಲೂ ಕೊಳೆಯುವುದು ಕಡಿಮೆ, ತೀರಾ ನಿಧಾನಗತಿಯಲ್ಲಿ ಇವುಗಳ ತ್ಯಾಜ್ಯ ಕರಗುತ್ತದೆ, ಪ್ಲಾಸ್ಟಿಕ್ ನಂತೆ ಇದುವೂ ಎಂದರು ತಪ್ಪಿಲ್ಲ. ಕೇವಲ 5 ವರ್ಷದಲ್ಲಿ ಬೃಹತ್ ಮರವಾಗಿ ಬೆಳೆಯುತ್ತವೆ, ಸುಮಾರು ಹತ್ತು ಮೀಟರ್ ಎತ್ತರವನ್ನು ಮುಟ್ಟಬಲ್ಲದು. ಎಂಥಾ ಬಂಜರು ಭೂಮಿಯಾದರೂ ಸರಿ, ಅತೀ ವೇಗವಾಗಿ ಬೆಳೆದು ಭುವಿಯ ಸಾರವನ್ನು ಕರಗಿಸಿಬಿಡುತ್ತದೆ. ಈ ಕೃತಕ ಅರಣ್ಯದಲ್ಲಿ ಬೆಳೆಯುವ ಈ ಮರಗಳ ಸುತ್ತಲೂ ಯಾವುದೇ ಗಿಡವೂ ಬೆಳೆಯುವುದಿಲ್ಲ,  ಮಳೆಗಾಲದಲ್ಲೂ ಇವುಗಳ ಸುತ್ತಲೂ ಹುಲ್ಲುಗಿಡವು ಬೆಳೆಯುವುದು ಇಲ್ಲ. ಮತ್ತು ಅಂತರ್ಜಲದ ಮೇಲೆ ಈ ಕೃತಕ ಕಾಡುಗಳಿಂದ ಅಪಾಯವೇ ಜಾಸ್ತಿ. ಈ ಕೃತಕ ನೆಡುತೋಪುಗಳಿಂದ ಅಕ್ಕಪಕ್ಕದ ಕೆರೆ ಬಾವಿಗಳಲ್ಲಿ ನೀರು ಉಳಿಯುವುದಿಲ್ಲ, ಬೇಗನೇ ಬತ್ತಿಹೋಗುತ್ತದೆ. ಈ ಮರಗಳ ಬೇರುಗಳು ತುಂಬಾ ಉದ್ದವಾಗಿ ಹರಡುವುದರಿಂದ ನೀರಿನ ಅಂಶವನ್ನು ಆಶವಾಗಿ ಎಳೆದು ತನ್ನ ಅಕ್ಕಪಕ್ಕದ ಪರಿಸರದಲ್ಲಿ ಯಾವುದೇ ಸಸ್ಯಕುಲ ಬೆಳೆಯದಂತೆ ತಡೆಯುತ್ತವೆ. ನೀಲಗಿರಿ, ಅಕೇಶಿಯಾ ಬೆಳೆಗಳನ್ನು ಅನೇಕ ವರ್ಷಗಳು ಬೆಳೆದರೆ ಆ ಭೂಮಿಯ ಫಲವತ್ತತೆಯು ಬೇಗನೇ ಕಡಿಮೆಯಾಗಿ ಬೇರೆ ಮರಗಳು ಬೆಳೆಯದಂತಾಗುತ್ತದೆ. ಈ ಬೆಳೆಗಳನ್ನು ಬೆಳೆದುಬಂಜರು ಭೂಮಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗೂ ನೈಸರ್ಗಿಕವಾಗಿ  ಉಳಿಯಬೇಕಾದ ಜೀವಕುಲವನ್ನು ನಾಶಮಾಡಿದಂತಾಗುತ್ತದೆ. 

      ಕೇವಲ ವಾಣಿಜ್ಯ ದೃಷ್ಟಿಯಿಂದ ಪೇಪರ್ ಮಿಲ್ಲುಗಳಿಗೆ ಸರಬರಾಜು ಮಾಡಲು ಇವುಗಳನ್ನು ಬೆಳೆಯಲಾಗುತ್ತದೆ, ಮತ್ತು ಅಕೇಶಿಯಾವನ್ನು ಪೀಠೋಪಕರಣಗಳಿಗೂ ಬಳಸುವುದಿದೆ. ಹಿಂದೆ ಬಿದಿರನ್ನು ಹೆಚ್ಚಾಗಿ ಪೇಪರ್ ಮಿಲ್ಲುಗಳು ಅವಲಂಬಿಸಿದ್ದವು. ಆದರೆ ಅವುಗಳ ಬೆಳೆ ಅಕೇಶಿಯಾಗೆ ಹೋಲಿಸಿದರೆ ನಿಧಾನ ಮತ್ತು ಅಕೇಶಿಯಾದಷ್ಟು ಲಾಭದಾಯಕವಲ್ಲ. ಇಂದಿನ ಪೂರೈಕೆಗೆ ತಕ್ಕಂತೆ ಕಾಗದದ ಉತ್ಪಾದನೆಯು ಹೆಚ್ಚಾಗಬೇಕಿದೆ. ಉತ್ಪಾದನೆಯ ಹೆಚ್ಚಳಕ್ಕೆ ಅಕೇಶಿಯಾ ಮೊರೆಹೋಗುವುದು ಅನಿವಾರ್ಯವಾಗಿದೆ. ಪರೋಕ್ಷವಾಗಿ ಹೇಳುವುದಾದರೆ ಪೇಪರ್‍ನ ಉಪಯೋಗ ಕಡಿಮೆಮಾಡಿದಷ್ಟು ನಾವು ಪರಿಸರವನ್ನು ಉಳಿಸಬಹುದು. ಪೇಪರ್ ಮಿಲ್ಲುಗಳು ಯಥೇಚ್ಚವಾಗಿ ಬಳಸುವ ಅಕೇಶಿಯಾ ಬೆಳೆಗಳನ್ನು ಸರ್ಕಾರವು ಹಿಂದೆ ನಿಷೇಧಿಸಿತ್ತಾದರೂ ಪೇಪರ್ ಉತ್ಪಾದನೆಯ ಮೇಲಾಗುವ ದುಷ್ಪರಿಣಾಮದಿಂದ ಮತ್ತೆ ನಿಷೇಧವನ್ನು ಹಿಂಪಡೆಯುವುದು ಅನಿವಾರ್ಯವೆಂದಿತು. ಅನೇಕ ಸಾಮಾಜಿಕ ಅರಣ್ಯಗಳಲ್ಲಿ ಇಂದು ಹಣದ ಉದ್ದೇಶದಿಂದ ಅಕೇಶಿಯಾ ಬೆಳೆಸಿ ನೈಸರ್ಗಿಕ ಭುವಿಯ ಸಂಪತ್ತು ನಾಶಮಾಡಲಾಗುತ್ತಿದೆ. ಉದುರಿದ ಅಕೇಶಿಯಾ ಎಲೆಗಳು ಮಳೆಗಾಲದಲ್ಲೂ ಕೊಳೆಯುವುದಿಲ್ಲ, ಇಂತಹ ಬೆಳೆಗಳನ್ನು ಬೆಳೆದು ಪರಿಸರವನ್ನು ನಾಶ ಮಡುವ ಬದಲು ನೈಸರ್ಗಿಕ ಅರಣ್ಯ ಸಂಪತ್ತುಗಳನ್ನು ಉಳಿಸಿಕೊಳ್ಳಬೇಕು. ಅರಣ್ಯ ನಾಶವಾದ ಜಾಗದಲ್ಲಿ ದೇಶೀಯ ಮರಗಳಾದ ಮಾವು, ಬೇವು, ಹಲಸು, ಹೊನ್ನೆ, ನೇರಳೆ ಮರಗಳನ್ನೇ ಯಥೇಚ್ಚವಾಗಿ ಬೆಳೆಸಿದಲ್ಲಿ ಇವುಗಳ ಉತ್ಪನ್ನಗಳು ಕಾಡುಗಳಲ್ಲಿ ವಾಸಿಸುವ ಜೀವಕುಲದ ಉಳಿವಿಗೂ ಆಸರೆಯಾಗುತ್ತವೆ. ಎಲ್ಲದೂ ಮಾನವನ ಕೈಯಲ್ಲಿದೆ. ಕಡಿಮೆ ಪೇಪರ್ ಬಳಸುವುದರಿಂದ ಮತ್ತು ನೈಸರ್ಗಿಕ ಅರಣ್ಯದ ರಕ್ಷಣೆಯ ಮೂಲಕ ಎಲ್ಲರೂ ಕೈ ಜೋಡಿಸಬೇಕು...ಪ್ರೀತಿಯಿಂದ ಕೈ ಜೋಡಿಸೋಣ...


           ರಾಮಚಂದ್ರ ಸಾಗರ್