ನೈಸರ್ಗಿಕವಾಗಿ ಬೆಳೆವ ಕಾಡುಗಳಲ್ಲಿ ಅನೇಕ ಪ್ರಬೇಧದ ಜೀವಕುಲವಿದೆ, ಅವುಗಳಿಗೆ ಜೀವಸೆಲೆಯು ಈ ನೈಸರ್ಗಿಕ ಅರಣ್ಯವೇ ಆಗಿದೆ. ನೈಸರ್ಗಿಕವಾಗಿ ಬೆಳೆವ ಕಾಡುಗಳಿಂದ ಭುವಿಯ ಫಲವತ್ತತೆ ಹಾಗೂ ಉಪಯೋಗಕ್ಕೆ ಯಾವುದೇ ಧಕ್ಕೆಯಿಲ್ಲ. ಅಂತರ್ಜಲದ ಮಟ್ಟಕ್ಕೂ ಅಪಾಯವಿಲ್ಲ, ನೈಸರ್ಗಿಕ ಕಾಡುಗಳಲ್ಲಿ ಭೂ ಮೇಲ್ಮೈಯನ್ನು ಕಾಪಾಡುವ ಅನೇಕ ಸಣ್ಣ ಸಸ್ಯಗಳು, ಹುಲ್ಲು ಮಾದರಿ ಸಸ್ಯಗಳು ಬೆಳೆಯುತ್ತವೆ, ಮಳೆಗಾಲದಲ್ಲಿ ಜೋರಾಗಿ ಹರಿಯುವ ನೀರಿನಲ್ಲಿ ಮಣ್ಣು ಕೊಚ್ಚಿಕೊಂಡು ಹೋಗದಂತೆ ತಡೆಯುತ್ತವೆ, ಭೂ ಮೇಲ್ಮೈ ರಕ್ಷಿಸುತ್ತವೆ. ಭೂ ಸವಕಳಿಯನ್ನು ತಡೆಯುತ್ತವೆ. ಹಸಿರು ಹೊದಿಕೆಯಿಂದ ಆವೃತ ನೈಸರ್ಗಿಕ ಅರಣ್ಯಗಳಲ್ಲಿ ಭೂ ಸವಕಳಿಯು ಸಂಭವಿಸುದಿಲ್ಲ, ಜೊತೆಗೆ ಪ್ರಾಣಿ ಸಂಕುಲದ ಬದುಕಿಗೆ ಆಧಾರವಾಗಿರುತ್ತವೆ. ಹರಿವ ನದಿತೊರೆಗಳಲ್ಲಿ ನೀರು ಮಣ್ಣು ಮಿಶ್ರಣಗೊಳ್ಳದೇ ಶುದ್ಧ ನೀರು ಹರಿಯುತ್ತದೆ. ನೀರಿನ ತಣಿವನ್ನು ವರ್ಷದುದ್ಧ ಬಹುಕಾಲದವರೆಗೂ ಉಳಿಸಿಕೊಂಡು ಹೋಗುವ ಗುಣವಿರುತ್ತದೆ. ಉದುರುವ ಎಲೆಗಳು ಕೊಳೆತು ಮಣ್ಣಾಗುತ್ತವೆ, ನೈಸರ್ಗಿಕ ಅರಣ್ಯದ ಅವಷೇಶಗಳು ಬೇಗನೇ ಕೊಳೆಯುತ್ತವೆ, ಇದರಲ್ಲಿ ಅನೇಕ ಸೂಕ್ಷ್ಮಾಣು ಜೀವಿಗಳು ಬದುಕುತ್ತವೆ. ಇವುಗಳೇ ಮಣ್ಣಿನ ರಚನೆಗೂ ಕಾರಣವಾಗಿ ಭುವಿಯ ಫಲವತ್ತತೆಯನ್ನು ಹೆಚ್ಚಿಸುತ್ತಾ ಭುವಿಯ ಮೇಲೆ ಬಿಸಿಲು ಕಿರಣಗಳು ನೆಲವನ್ನು ತಾಕದಂತೆ ತಡೆದು ಭುವಿಯ ಮೇಲೆ ತಾಪವನ್ನು ಕಡಿಮೆ ಮಾಡುತ್ತವೆ. ಮರಗಳಲ್ಲಿ ಬೆಳೆಯುವ ಹೂವು ಮತ್ತು ಹಣ್ಣುಗಳು ಅನೇಕ ಜೀವಿಗಳಿಗೆ ಆಹಾರವಾಗಿದೆ. ಒಂದೇ ಮಾದರಿ ಮರವಲ್ಲದೇ ಅನೇಕ ಮಾದರಿಯ ಮರಗಳು ಒಟ್ಟಾಗಿ ಸ್ವಾಭಾವಿಕವಾಗಿ ಬೆಳೆಯುವುದರಿಂದ ಪರಿಸರದ ಸಮತೋಲನಕ್ಕೂ ಉತ್ತಮ. ವಿವಿಧ ಬಗೆಯ ಮರಗಳು ಒಟ್ಟಾಗಿ ಬೆಳೆಯುವುದರಿಂದ ಜೀವಕುಲಕ್ಕೆ ಅಗತ್ಯವಾದ ಆಹಾರವು ದೊರೆಯುತ್ತದೆ.
ಆದರೆ ಇಂದು ವ್ಯಾಪಕವಾಗಿ ಅರಣ್ಯನಾಶವಾಗುತ್ತಿದೆ, ನಾಶವಾದ ಜಾಗದಲ್ಲಿ ನೀಲಗಿರಿ ಮತ್ತು ಅಕೇಶಿಯಾದಂತ ನೆಡುತೋಪುಗಳನ್ನು ನೆಡುವುದು ಸಾಮಾನ್ಯವಾಗಿದೆ. ಮೂಲತಃ ಆಷ್ಟ್ರೇಲಿಯಾ ಒಣ ಬಂಜರು ಭೂಮಿಯಲ್ಲಿ ಬೆಳೆಯುವ ಬೆಳೆಗಳಿವು, ಇವುಗಳ ಕಾಡಿನಲ್ಲಿ ಬೇರೆ ಯಾವುದೇ ಜೀವಕುಲ ಉಳಿಯಲು ಸಾಧ್ಯವಿಲ್ಲ. ಇವುಗಳಿಂದ ಉದುರಿದ ಎಲೆಗಳು ಮಳೆಗಾಲದಲ್ಲೂ ಕೊಳೆಯುವುದು ಕಡಿಮೆ, ತೀರಾ ನಿಧಾನಗತಿಯಲ್ಲಿ ಇವುಗಳ ತ್ಯಾಜ್ಯ ಕರಗುತ್ತದೆ, ಪ್ಲಾಸ್ಟಿಕ್ ನಂತೆ ಇದುವೂ ಎಂದರು ತಪ್ಪಿಲ್ಲ. ಕೇವಲ 5 ವರ್ಷದಲ್ಲಿ ಬೃಹತ್ ಮರವಾಗಿ ಬೆಳೆಯುತ್ತವೆ, ಸುಮಾರು ಹತ್ತು ಮೀಟರ್ ಎತ್ತರವನ್ನು ಮುಟ್ಟಬಲ್ಲದು. ಎಂಥಾ ಬಂಜರು ಭೂಮಿಯಾದರೂ ಸರಿ, ಅತೀ ವೇಗವಾಗಿ ಬೆಳೆದು ಭುವಿಯ ಸಾರವನ್ನು ಕರಗಿಸಿಬಿಡುತ್ತದೆ. ಈ ಕೃತಕ ಅರಣ್ಯದಲ್ಲಿ ಬೆಳೆಯುವ ಈ ಮರಗಳ ಸುತ್ತಲೂ ಯಾವುದೇ ಗಿಡವೂ ಬೆಳೆಯುವುದಿಲ್ಲ, ಮಳೆಗಾಲದಲ್ಲೂ ಇವುಗಳ ಸುತ್ತಲೂ ಹುಲ್ಲುಗಿಡವು ಬೆಳೆಯುವುದು ಇಲ್ಲ. ಮತ್ತು ಅಂತರ್ಜಲದ ಮೇಲೆ ಈ ಕೃತಕ ಕಾಡುಗಳಿಂದ ಅಪಾಯವೇ ಜಾಸ್ತಿ. ಈ ಕೃತಕ ನೆಡುತೋಪುಗಳಿಂದ ಅಕ್ಕಪಕ್ಕದ ಕೆರೆ ಬಾವಿಗಳಲ್ಲಿ ನೀರು ಉಳಿಯುವುದಿಲ್ಲ, ಬೇಗನೇ ಬತ್ತಿಹೋಗುತ್ತದೆ. ಈ ಮರಗಳ ಬೇರುಗಳು ತುಂಬಾ ಉದ್ದವಾಗಿ ಹರಡುವುದರಿಂದ ನೀರಿನ ಅಂಶವನ್ನು ಆಶವಾಗಿ ಎಳೆದು ತನ್ನ ಅಕ್ಕಪಕ್ಕದ ಪರಿಸರದಲ್ಲಿ ಯಾವುದೇ ಸಸ್ಯಕುಲ ಬೆಳೆಯದಂತೆ ತಡೆಯುತ್ತವೆ. ನೀಲಗಿರಿ, ಅಕೇಶಿಯಾ ಬೆಳೆಗಳನ್ನು ಅನೇಕ ವರ್ಷಗಳು ಬೆಳೆದರೆ ಆ ಭೂಮಿಯ ಫಲವತ್ತತೆಯು ಬೇಗನೇ ಕಡಿಮೆಯಾಗಿ ಬೇರೆ ಮರಗಳು ಬೆಳೆಯದಂತಾಗುತ್ತದೆ. ಈ ಬೆಳೆಗಳನ್ನು ಬೆಳೆದುಬಂಜರು ಭೂಮಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗೂ ನೈಸರ್ಗಿಕವಾಗಿ ಉಳಿಯಬೇಕಾದ ಜೀವಕುಲವನ್ನು ನಾಶಮಾಡಿದಂತಾಗುತ್ತದೆ.
ಕೇವಲ ವಾಣಿಜ್ಯ ದೃಷ್ಟಿಯಿಂದ ಪೇಪರ್ ಮಿಲ್ಲುಗಳಿಗೆ ಸರಬರಾಜು ಮಾಡಲು ಇವುಗಳನ್ನು ಬೆಳೆಯಲಾಗುತ್ತದೆ, ಮತ್ತು ಅಕೇಶಿಯಾವನ್ನು ಪೀಠೋಪಕರಣಗಳಿಗೂ ಬಳಸುವುದಿದೆ. ಹಿಂದೆ ಬಿದಿರನ್ನು ಹೆಚ್ಚಾಗಿ ಪೇಪರ್ ಮಿಲ್ಲುಗಳು ಅವಲಂಬಿಸಿದ್ದವು. ಆದರೆ ಅವುಗಳ ಬೆಳೆ ಅಕೇಶಿಯಾಗೆ ಹೋಲಿಸಿದರೆ ನಿಧಾನ ಮತ್ತು ಅಕೇಶಿಯಾದಷ್ಟು ಲಾಭದಾಯಕವಲ್ಲ. ಇಂದಿನ ಪೂರೈಕೆಗೆ ತಕ್ಕಂತೆ ಕಾಗದದ ಉತ್ಪಾದನೆಯು ಹೆಚ್ಚಾಗಬೇಕಿದೆ. ಉತ್ಪಾದನೆಯ ಹೆಚ್ಚಳಕ್ಕೆ ಅಕೇಶಿಯಾ ಮೊರೆಹೋಗುವುದು ಅನಿವಾರ್ಯವಾಗಿದೆ. ಪರೋಕ್ಷವಾಗಿ ಹೇಳುವುದಾದರೆ ಪೇಪರ್ನ ಉಪಯೋಗ ಕಡಿಮೆಮಾಡಿದಷ್ಟು ನಾವು ಪರಿಸರವನ್ನು ಉಳಿಸಬಹುದು. ಪೇಪರ್ ಮಿಲ್ಲುಗಳು ಯಥೇಚ್ಚವಾಗಿ ಬಳಸುವ ಅಕೇಶಿಯಾ ಬೆಳೆಗಳನ್ನು ಸರ್ಕಾರವು ಹಿಂದೆ ನಿಷೇಧಿಸಿತ್ತಾದರೂ ಪೇಪರ್ ಉತ್ಪಾದನೆಯ ಮೇಲಾಗುವ ದುಷ್ಪರಿಣಾಮದಿಂದ ಮತ್ತೆ ನಿಷೇಧವನ್ನು ಹಿಂಪಡೆಯುವುದು ಅನಿವಾರ್ಯವೆಂದಿತು. ಅನೇಕ ಸಾಮಾಜಿಕ ಅರಣ್ಯಗಳಲ್ಲಿ ಇಂದು ಹಣದ ಉದ್ದೇಶದಿಂದ ಅಕೇಶಿಯಾ ಬೆಳೆಸಿ ನೈಸರ್ಗಿಕ ಭುವಿಯ ಸಂಪತ್ತು ನಾಶಮಾಡಲಾಗುತ್ತಿದೆ. ಉದುರಿದ ಅಕೇಶಿಯಾ ಎಲೆಗಳು ಮಳೆಗಾಲದಲ್ಲೂ ಕೊಳೆಯುವುದಿಲ್ಲ, ಇಂತಹ ಬೆಳೆಗಳನ್ನು ಬೆಳೆದು ಪರಿಸರವನ್ನು ನಾಶ ಮಡುವ ಬದಲು ನೈಸರ್ಗಿಕ ಅರಣ್ಯ ಸಂಪತ್ತುಗಳನ್ನು ಉಳಿಸಿಕೊಳ್ಳಬೇಕು. ಅರಣ್ಯ ನಾಶವಾದ ಜಾಗದಲ್ಲಿ ದೇಶೀಯ ಮರಗಳಾದ ಮಾವು, ಬೇವು, ಹಲಸು, ಹೊನ್ನೆ, ನೇರಳೆ ಮರಗಳನ್ನೇ ಯಥೇಚ್ಚವಾಗಿ ಬೆಳೆಸಿದಲ್ಲಿ ಇವುಗಳ ಉತ್ಪನ್ನಗಳು ಕಾಡುಗಳಲ್ಲಿ ವಾಸಿಸುವ ಜೀವಕುಲದ ಉಳಿವಿಗೂ ಆಸರೆಯಾಗುತ್ತವೆ. ಎಲ್ಲದೂ ಮಾನವನ ಕೈಯಲ್ಲಿದೆ. ಕಡಿಮೆ ಪೇಪರ್ ಬಳಸುವುದರಿಂದ ಮತ್ತು ನೈಸರ್ಗಿಕ ಅರಣ್ಯದ ರಕ್ಷಣೆಯ ಮೂಲಕ ಎಲ್ಲರೂ ಕೈ ಜೋಡಿಸಬೇಕು...ಪ್ರೀತಿಯಿಂದ ಕೈ ಜೋಡಿಸೋಣ...
ರಾಮಚಂದ್ರ ಸಾಗರ್