Tuesday, 13 December 2016

ಕನ್ನಡದ ದೀವಟಿಗೆ ಹಿಡಿದ ಜೋಗಿ..

ನಮ್ಮ ನಾಡಿನ ಜನಪರ ಕವಿಗಳು ಹಾಗೂ ಡಾ. ಸಿದ್ದಲಿಂಗಯ್ಯ ಪ್ರರಿಷ್ಠಾನದ ಅಧ್ಯಕ್ಷರೂ ಹಾಗು ಸರಳ ಸಜ್ಜನರೂ ಆದ ಶ್ರೀಯುತ ಮುದಲ್ ವಿಜಯ್ ರವರ ಜನ್ಮದಿನವಿಂದು, ನಾಡಿನ ಅನೇಕ ಯುವ ಬರಹಗಾರರನ್ನು ನನ್ನನ್ನೂ ಒಳಗೊಂಡಂತೆ ಪೋಷಿಸುತ್ತಾ ಎಲ್ಲರನ್ನು ಸಾಹಿತ್ಯದೆಡೆ ಒಲುಮೆ ಬೆಳೆಸಿಕೊಳ್ಳುವಂತೆ ಅರಿವನ್ನು ಮೂಡಿಸುತ್ತಾ ತಾಯಿ ಭುವನೇಶ್ವರಿಯ ಸೇವೆಯನ್ನು ಮಾಡುತ್ತಾ ಸಾಗುತ್ತಿದ್ದಾರೆ. ಇವರು ಮೂಲತಃ ತಮಿಳುನಾಡಿನವರು, ಇವರ ತಂದೆ ತಾಯಿಯರ ಮಾತೃ ಭಾಷೆ ತಮಿಳು. ಇವರು ಬೆಂಗಳೂರಿಗೆ ಬಂದಾಗ ಇವರ ತಂದೆ ತಾಯಿ ಇವರನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಿದರು. ಆಗ ಬೆಂಗಳೂರಿನಲ್ಲಿ ತಮಿಳು ಮಾಧ್ಯಮ ಶಾಲೆಗಳು, ಆಂಗ್ಲ ಮಾಧ್ಯಮದ ಶಾಲೆಗಳು  ಸಾಕಷ್ಟು ಇದ್ದರೂ ಇವರನ್ನು ಇವರ ತಾಯಿ ಮಗ ಕನ್ನಡದಲ್ಲೇ ಓದಲೆಂದು ಕನ್ನಡ ಮಾಧ್ಯಮಕ್ಕೆ ಸೇರಿಸಿದರು. ಇವರು ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳುತ್ತಾ ಸಾಗಿದರು. ಕನ್ನಡ ಭಾಷೆ, ಕನ್ನಡ ಸಾಹಿತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಇವರು ಕನ್ನಡದಲ್ಲಿ ಕವಿತೆಗಳನ್ನು ಬರೆಯಲು ಕೂತರೇ ಓದುಗನಿಗೆ ಅದೊಂದು ಹಬ್ಬವೇ ಸರಿ. ಕನ್ನಡ ಪದಗಳು, ವ್ಯಾಕರಣದ ಮೇಲೆ ಅವರಿಗಿರುವ ಪ್ರಭುತ್ವ, ಮತ್ತು ಕಾವ್ಯ ಕಟ್ಟುವ ದಾಟಿ ಎಂಥವರನ್ನು ವಿಸ್ಮಿತಗೊಳಿಸುತ್ತದೆ, ಯಾವ ಹಿರಿಯ ಕವಿಗಳಿಗೂ ಕಮ್ಮಿಯಿಲ್ಲದಂತೆ ಇವರ ಕವಿತ್ವ ಗಟ್ಟಿಯಾಗಿದೆ. ಅನೇಕ ಕವನ ಸಂಕಲನ ಹಾಗೂ ಕಾದಂಬರಿಗಳನ್ನು ಹೊರತಂದಿದ್ದಾರೆ. ಇವರ ಗೀತೆಗಳು ಭಾವಗೀತೆಗಳಾಗಿ ಜನಪ್ರಿಯವಾಗಿವೆ. ಅನೇಕ ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ಗಟ್ಟಿಯಾಗಿದ್ದರೂ ಇವರಿಗೆ ಯಾವುದೇ ಪುರಸ್ಕಾರ ಒದಗಿಬಂದಿಲ್ಲ. ಅವೆಲ್ಲಾ ಪಾಪಾ ತೀರ ಸ್ವಾಭಿಮಾನಿಯಾದ ಇಂತವರಿಗೆ ಒಲಿಯುವುದು ಕಷ್ಟ. ಎಷ್ಟೋ ಬಾಲಿಶ ವ್ಯಕ್ತಿಗಳನ್ನು ಹೊಗಳಿ ಸನ್ಮಾನಿಸಿ ದುಂದು ವೆಚ್ಚ ಮಾಡುವ ಬದಲು ಇಂತ ಒಬ್ಬೊಬ್ಬರನ್ನು ಆಯ್ದು ಜಾಣ್ಮೆ ಮೆರೆದಲ್ಲಿ ಅದು ಆ ಪ್ರಶಸ್ತಿಗಳಿಗೂ ಗೌರವ ದೊರೆತಂತೆ..! ಏನು ಮಾಡುವುದು ಕೆಲವರಿಗೆ ಅರ್ಹತೆ ಇದ್ದರೂ ಅದು ಉಪಯೋಗಕ್ಕೆ ಬರುವುದಿಲ್ಲ. ಏನೇ ಆಗಲಿ ಜನರ ಮಧ್ಯೆಯಿಂದ ಬರುವ ದನಿಗಿಂತ ಮಿಗಿಲಾದ ಪ್ರಶಸ್ತಿ, ಪುರಸ್ಕಾರ ಯಾವುದೂ ಇಲ್ಲ. ಜನದನಿಯಲ್ಲಿ ಗೆದ್ದವರೇ ನೈಜ ಸನ್ಮಾನಿತರು, ನಾವು ಮಾಡುವ ಸೇವೆಗೆ ಪುರಸ್ಕಾರದ ಮಾನದಂಡವೇಕೆ..? ಎಂದು ಕೇಳುತ್ತಾ ಸುಮ್ಮನೇ ತಮ್ಮ ಪಾಡಿಗೆ ತಾವು ತಮ್ಮ ಜೀವನದ ಜೋಳಿಗೆಯ ಜೊತೆಗೆ ಕನ್ನಡದ ದೀವಟಿಗೆ ಹಿಡಿದು ಕನ್ನಡಕ್ಕಾಗಿ ಚಲಿಸುತ್ತಿರುವ ಒಬ್ಬರು ಜೋಗಿಯಂತೆ ಕಾಣುತ್ತಾರೆ. ಸಾಹಿತ್ಯದ ಬಗ್ಗೆ ಏನೇ ಗೊಂದಲವಿದ್ದರೂ ಯಾವುದೇ ಸಮಯದಲ್ಲಿ ಕರೆಮಾಡಿದರೂ ಸ್ಪಂದಿಸುವ ಸರಳ ಹಾಗೂ ಅಷ್ಟೇ ಚತುರ ಸಾಹಿತ್ಯಾಭಿಮಾನಿ. ಬೆಂಗಳೂರಿನ ಅನೇಕ ಜನ ನಮ್ಮ ರಾಜ್ಯದವರೇ ಕನ್ನಡ ಮರೆತು ಬೇರೆ ಭಾಷೆ ಮಾತನಾಡುತ್ತಿರುವ ಈ ಘಳಿಗೆಯಲ್ಲಿ ಕನ್ನಡ ಕಂಪನ್ನು ಹರಡುತ್ತಾ ನಾಡಿನುದ್ದಗಲಕ್ಕೂ ಯುವ ಕನ್ನಡ ಬರಹಗಾರರಿಗೆ ಆತ್ಮೀಯರಾಗಿರುವ ಇವರನ್ನು ಈ ಸುಸಮಯದಲ್ಲಿ ಅಭಿನಂದಿಸೋಣ.. ಇವರು ನೂರು ವರ್ಷಗಳ ಕಾಲ ಗಟ್ಟಿಯಾಗಿ ನಾಡಿನುದ್ದಗಲ ತಾಯಿ ಭುವನೇಶ್ವರಿಯ ಸೇವೆ ಮಾಡಲೆಂದು ಬೇಡಿಕೊಳ್ಳೋಣ..ಈ ಮೂಲಕ ಕನ್ನಡವೂ ಎಲ್ಲರೆದೆಯಲಿ ಗಟ್ಟಿಯಾಗಲಿ ಎಂದು ಹಾರೈಸೋಣ..
ರಾಮಚಂದ್ರ ಸಾಗರ್

Monday, 12 December 2016

ಸಂಗೀತದಲೆಯಲ್ಲಿ ಮೋಡಿಮಾಡಿದ ನನ್ನವರು..

       ಮುಖಪುಟದ ಲೋಕವೇ ಹಾಗೇ, ಅನೇಕರು ಸಿಗುತ್ತಾರೆ, ಅದು ಆಕಸ್ಮಿಕವಾದರೂ ಅವರಿಂದ ಕೆಲವೊಮ್ಮೆ ಸಿಗುವ ಸ್ನೇಹ ಸಿಹಿ ಸಿಂಚಿಸಿ ಮನ ಬೆಸೆದರೆ ಇನ್ನೂ ಕೆಲವೊಮ್ಮೆ ಮನಕ್ಕೆ ಘಾಸಿ ಮಾಡಿ ದೂರುವವರೂ ಇರುತ್ತಾರೆ. ಮುಖಪುಟವನ್ನು ಒಳ್ಳೆಯದಕ್ಕೂ  ಬಳಸಿಕೊಳ್ಳುವವರೂ ಇರುತ್ತಾರೆ. ಜಾತಿ, ಧರ್ಮವಂತ ಬಡಿದಾಡುವುದಕ್ಕೂ ಬಳಸುತ್ತಾರೆ, ಇನ್ನೂ ರಾಜಕೀಯದ ಎರಚಾಟವಂತೂ ಹೇಳತೀರದು, ಮನೆಯಲ್ಲಿ ಕೂತವನ ಮುಖಕ್ಕೂ ಮೊಬೈಲ್ ಮೂಲಕ ಕೆಸರು ಬಂದು ಬಿದ್ದ ಅನುಭವ, ಏನೇ ಆಗಲಿ ಎಲ್ಲವೂ ನಮ್ಮ ಸುತ್ತಲೂ ಸಮಾಜದಲ್ಲಿ ನಡೆಯುವ ಸಂಗತಿ ತಾನೇ, ಸಮಾಜದಲ್ಲಿನ ಬಿಂಬಕವಲ್ಲವೇ. ಕಂಡಿತಾ ಹೌದು, ಹಾಗಾಗಿ ಎಲ್ಲವನ್ನು ಮುಕ್ತವಾಗಿ ಸ್ವೀಕರಿಸಿಕೊಂಡು ಹೋಗಬೇಕು, ಕೈಲಾದಷ್ಟು ಉತ್ತಮ ಕೆಲಸವನ್ನು ಮಾಡಬೇಕು. ಉತ್ತಮ ಉದ್ದೇಶಕ್ಕೆ ಸದ್ಬಳಕೆಗೆ ಮಾರ್ಗವಾಗಬೇಕು. ಈ ನಿಟ್ಟಿನಲ್ಲಿ ಒಂದು ವಿನೂತನ ಪ್ರಯೋಗವೆಂಬಂತೆ ಶ್ರೀಯುತ ಶಶಿಕಾಂತ್ ರವರು ಮತ್ತು ಪ್ರಕಾಶ್ ಅಂಬರಕರ್ ರವರ ನೈತೃತ್ವದಲ್ಲಿ ಅರಳಿದ ‘ನನ್ನ ಗೀತೆ ನನ್ನವರ ಗಾಯನ’ ಯೋಜನೆಯು ಕನ್ನಡದ ಬೆಳವಣಿಗೆಗೆ ಪೂರಕವಾದದ್ದು, ಜೊತೆಗೆ ಗಬ್ಬೆದ್ದು ಬಿದ್ದಿರುವ ಕನ್ನಡ ಸಿನಿಮಾ ಗೀತೆಗಳಿಗೆ ಪರ್ಯಾಯ ಮಾರ್ಗವರಸಿದ ಪರಿ ಉತ್ತಮವಾಗಿದೆ, ಇಲ್ಲಿ ಅನೇಕ ಜನ ಹಿರಿಯ ಕವಿಗಳೂ ಇದ್ದಾರೆ, ಅನೇಕ ಜನ ಹೊಸಬರು ಇದ್ದಾರೆ, ದೇಶ, ನಾಡು, ನುಡಿಗಳ ಪ್ರೇಮದ ಜೊತೆಗೆ ಸಮಾಜದ ಸಾಮರಸ್ಯ ಬೆಸೆವ ಕವಿತೆಗಳಿವೆ, ಅವುಗಳಿಗೆ ತುಂಬಾ ಹಿತವಾಗಿ ಮಧುರ ದನಿಯನ್ನು ಶ್ರೀಮತಿ ಸಂಧ್ಯಾಲಕ್ಷ್ಮಿ ಯವರ ರಾಗ ಸಂಯೋಜನೆ ತುಂಬಾ ಮಾಧುರ್ಯತನ ತುಂಬಿದೆ. ಕವಿತೆಗಳ ಮೇಲೆ ಕಣ್ಣಾಡಿಸುತ್ತಾ ಹೋದೆ. ಎಂ.ಜಿ. ದೇಶಪಾಂಡೆಯವರ ಬಾಳು ಕವಿತೆಯ ಸಾಲುಗಳು “ಗುಲಾಬಿ ಕೆಳಗೆ ಮುಳ್ಳು ಆದರೂ ಅರಳಿದೆ
       ಆನಂದ ನೀಡುತ್ತಿದೆ ದುಃಖ ತಾನು ಹೇಳದೇ” ಬಾಳಿನ ತಿರುಳು ತಿಳಿಸುವ ಕವಿತೆ. ತುಂಬಾ ಒಳಾರ್ಥದ ದನಿಯನ್ನು ಹೇಳುತ್ತದೆ. ಹಾಗೂ ಶ್ರೀಯುತ ಡಾ. ಜೆ.ಎಸ್. ಪಾಟೀಲರ ಬದ್ದವಣ ಹಾಡು ಪ್ರೇಮದಂದಣವ ಏರಿಸುತ್ತದೆ. ಅಕ್ಕಮಹಾದೇವಿಯವರ “ಹೊಂಚು ಹಾಕುತಿದೆ ಕಾಮನಬಿಲ್ಲದು..ಕಣ್ಣಂಚಿನ ಬಣ್ಣಗಳ ಕದಿಯಲು ಸೋತು”..ಒಲವಗೀತೆ ಬಲು ಚೆಂದಾ ಇದೆ. ಬಳುದಿಂಗಳು ತಂಪಿರುಳಲಿ ಬೀಸುವ ತಣ್ಣನೆಯ ಗಾಳಿಯಲ್ಲಿ ನಿನ್ನ ನೆನಪುಗಳ ಕಚಗುಳಿ ಮನಕ್ಕೆ ಒಲವ ಕಂಪು ಸೂಸುತ್ತಾ ಅನುರಾಗದಲೆ ಬೀಸುವ ಪರಿ ಸೊಗಸುಭರಿತವಾಗಿದೆ. ಮೋಹಕಗೀತೆ. ಹಾಗೂ ಶ್ರೀಯುತ ರಾಜ್ ಆಚಾರ್ಯರ ‘ಬಾ ವಸಂತ’ ಪಕೃತಿಯ ಸಿರಿಯ ಮೇನೆಯಲ್ಲಿ ಸೊಬಗು ಹೊತ್ತು ತಂದಂತಿದೆ, ಕೇಳಲು ಹಾಗೂ ಸಾಹಿತ್ಯವೆರಡೂ ಪಕ್ವತೆಯಲ್ಲಿವೆ. ಹಾಗೂ ನನ್ನ ಪ್ರೀತಿಯ ಒಲವಿನ ಕವಿ ಸತೀಶ್ ಕೋಲಾರ ಅವರು ಇಲ್ಲಿ ಮೋಡಿ ಮಾಡಿದ್ದಾರೆ, ಒಲವ ರಂಗನ್ನು ಅವರ ಶಾಯಿಯಲ್ಲಿ ತುಂಬಿ ಬರೆದ ಪ್ರೀತಿಯ ಸಾಲುಗಳು ಅಮೋಘವಾಗಿವೆ, ಇರಲೇಬೇಕಲ್ಲವೇ..? ಗೀತೆಯನ್ನು ಕೇಳಲು ಅಷ್ಟೇ ಮುದ್ದಾಗಿದೆ. ನಾಡಿನ ಉತ್ತಮ ಚಿಂತಕರು ನಮ್ಮ ಸಿದ್ಧರಾಮ ಹೊನ್ಕಲ್ ರವರ ‘ಯಾರಿಗಾಗಿ ಹಾಡಲಿ’ ಇಂದಿನ ದೇಶದ ವಾಸ್ತವ ಕನ್ನಡಿ. ಈ ಕವಿತೆಯನ್ನೂ ಪ್ರತಿಯೊಬ್ಬರೂ ಕೇಳಲೇ ಬೇಕು, ದೇಶದುದ್ಧಗಲ ಭಾವೈಕ್ಯತೆ ಬೆಸೆಯಬೇಕು, ಶಾಂತಿ ಅರಳಬೇಕೆಂಬ ಅವರ ಮನದಾಸೆಯು ಕವಿತ್ವದಲ್ಲಿ ಗಟ್ಟಿಯಾಗಿ ಕೂಗಿದೆ. ಸಾರ್ಥಕತೆಯ ಭಾವವನ್ನು ತುಂಬಿದೆ, ಇದಕ್ಕೆ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ‘ಗಾಂಧಿಯ ನಾಡಲ್ಲಿ ಗುಂಡಿನ ಮಳೆಗರೆದು ಭೂತಾಯಿ ನೆತ್ತರು ಕುಡಿದು ಅತ್ತಳಲ್ಲೋ..’ ಎಂಥಾ ಮಾರ್ಮಿಕ ನುಡಿಗಳು. ಕಟು ವಾಸ್ತವ ಹಾಗೂ ಸತ್ಯ. ಇನ್ನು ನನ್ನ ಆತ್ಮೀತ ಸ್ನೇಹಿತರಾದ ಗಂಗಾಧರ್ ಕಂಭೀಮಠ್ ರವರ ಪ್ರೇಮಸುಧೆ ಸುಂದರ ನೈದಿಲೆಯಂತೆ ನಗುತಿದೆ, ಅದಕ್ಕೆ ಅಷ್ಟೇ ಹಿತವಾದ ರಾಗದ ಮೇಳವು ಅದರ ಅಂದವನ್ನು ಮತ್ತಷ್ಟು ಅರಳಿಸಿದೆ. ಶ್ರೀಮತಿ ಪದ್ಮಾ ಶ್ರೀನಿವಾಸ್ ರವರ ಮೌನದೀಪ್ತಿ ಹಿತವೆನಿಸಿ ಮತ್ತೆ ಕೇಳಲು ಹೇಳುತ್ತದೆ ಕವಿತೆಯ ಪ್ರತಿ ಸಾಲುಗಳು. ಎಂದಿನಂತೆ ಅವರ ಶೈಲಿಯಲ್ಲಿ ಉತ್ತಮವಾಗಿ ಕವಿತೆಯನ್ನು ಕಟ್ಟಿದ್ದಾರೆ. ಶ್ರೀಯುತ ದೊರೆಸ್ವಾಮಿ, ವೆಂಕಣ್ಣನವರ, ಪ್ರಕಾಶ್ ಶಿರಗಂಬಿ, ವೆಂಕರೆಡ್ಡಿ ಯವರ ಸಾಹಿತ್ಯವು ಗಟ್ಟಿಯಿದ್ದು ರಾಗಕ್ಕಷ್ಟೇ ಅಲ್ಲದೇ ಬದುಕಿನ ಸಾರವನ್ನು ತಿಳಿಹೇಳಿವೆ. ಶ್ರೀಯುತ ಭೀಮಣ್ಣ ಹುಣಸೀಕಟ್ಟಿಯವರ ರೈತಾಭಿಮಾನದ ಕವಿತೆ ತುಂಬಾ ಇಷ್ಟವೆನಿಸಿತು. ಹೀಗೆ ಇನ್ನೂ ಅನೇಕ ಕವಿಗಳ ಕವಿತೆಗಳು ತುಂಬಾ ಸೊಗಸಾಗಿವೆ. ಎಲ್ಲವನ್ನೂ ನೀವು ಕೇಳಿಯೇ ಆನಂದಿಸಬೇಕು. ಶ್ರೀಮತಿ ಕಪಿಲಾ ಶ್ರೀಧರ್ ರವರ ನಭ ನೀಲಾಂಜನ ಕವಿತೆ ಮತ್ತೆ ಮತ್ತೆ ಕೇಳಬೇಕೆನಿಸಿತು. ಈ ಸಂಕಲನದಲ್ಲಿ ನನಗೆ ಅತೀ ಇಷ್ಟವಾದ ಗೀತೆಯಿದು. ತುಂಬಾ ಸೊಗಸಾಗಿದೆ. ‘ಜಗದಾದಿಯಲಿ ನೀನೊಂದು ಗೋಳ ನಾನೊಂದು ಗೋಳವಾಗಿ ಆದಿತ್ಯ ಮಂಡಲದ ಸುತ್ತ ತಿರುಗುತಾ ಪರಿಭ್ರಮಣ ಯಾತ್ರೆಯಾಗಿ..’ ಎಂತಾ ಕನಸು ಅಲ್ಲವೇ..ಸುಮಧುರ ಭಾವನೆಗಳ ಧಾರೆಯು ಮನದ ಉಲ್ಲಾಸವನ್ನು ಹೆಚ್ಚಿಸುತ್ತದೆ, ನಲಿಸುತ್ತದೆ. ಹೀಗೆ ಹಲವರ ಕವಿತೆಗಳ ಸಾಹಿತ್ಯವು ತುಂಬಾ ಸೊಗಸಾಗಿದ್ದು ಅದಕ್ಕೆ ಅಷ್ಟೇ ಹಿತವಂತಿಕೆಯ ರಾಗ ಸಂಯೋಜಿಸಿ ಮನ ನಲಿಸಿದ ಎಲ್ಲಾ ರಾಗ ಸಂಯೋಜಕರು, ಗಾಯಕರು ಸಂಪೂರ್ಣ ಯೋಜನೆಯ ಸಾರಥಿಗಳೆಲ್ಲರಿಗೂ ಧನ್ಯವಾದಗಳು..

ಇದು ಈ ಕಿರಿಯನ ಅನಿಸಿಕೆ...ಏನಾದರೂ ತಪ್ಪಿದ್ದರೆ ಕ್ಷಮಿಸಿ..
ವಂದನೆಗಳೊಂದಿಗೆ..
ಮತ್ತೆ ಮತ್ತೆ ಬರಲಿ..ನನ್ನವರ ಗೀತೆ..

ರಾಮಚಂದ್ರ ಸಾಗರ್

Sunday, 11 December 2016

ಬಕೇಟ್ ಹಿಡಿವ ಸಂತತಿ ನಾಶವಾಗಲಿ

  ವಿವೇಕಯುತ ಜಗದಲ್ಲಿ ಅವಿವೇಕಿಯಗಾದಿರು, ವಿವೇಕಿಗಳ ಸಂಗದಲ್ಲಿ ಅವಿವೇಕಿತನ ನೂಕದಿರು. ಇವು ನಾನೇ ಬರೆದ ಸಾಲುಗಳು, ಇನ್ನೊಮ್ಮೆ ಮೆಲುಕು ಹಾಕುತ್ತಾ ಕೂತಿದ್ದೇನೆ, ಜೊತೆಗೆ ತೀರ ಬುದ್ಧಿವಂತರೆನಿಸುಕೊಳ್ಳುವವರ ಕೆಲವು ಬಾಲಿಶತನದ ಪರಮಾವಧಿ ಕಂಡು ಮನಕ್ಕೆ ಬೇಸರವೆನಿಸುವುದಕ್ಕಿಂತ ಇದು ಅವರ ಹೊಟ್ಟೆಪಾಡೋ ಇಲ್ಲ ತಮ್ಮ ಸ್ವಂತಿಕೆಯನ್ನು ಮಾರಿಕೊಂಡ ಅವರ ಗತಿಯೋ ಇಲ್ಲವೇ ಅವರ ಬದುಕಿನ ದಾಟಿಯೇ ಹಾಗೋ ಎಂಬ ಚಿಂತನೆ ಕಾಡುವುದಂತೂ ಸಹಜವಾಗಿದೆ. ಎಲ್ಲೇ ನೋಡಲಿ, ಯಾರೇ ಒಬ್ಬ ಉನ್ನತವೆನ್ನಿಸಿದರೆ ಅದು ಅಧಿಕಾರದಲ್ಲಿದ್ದರಂತೂ ಹೇಳತೀರದು ಆತ ಏನೇ ಮಾಡಿದರೆ ಆತನಿಗೆ ಜೈ ಎನ್ನುತ್ತಾ ಆತನಿಗೆ ಇನ್ನಟ್ಷು ಅಟ್ಟಕ್ಕೆ ಏರಿಸುತ್ತಾ ತಮ್ಮ ಅನೀತಿ ಬುದ್ಧಿಯಿಂದ ಅವನಿಗೆ ಹತ್ತಿರವಾಗುವುದು, ಮತ್ತೂ ಮುಂದುವರೆದು ಆತನಿಗೆ ಸಾಧ್ಯವಿದ್ದ ಎಲ್ಲಾ ರೀತಿಯ ಕುಟಿಲ ತಂತ್ರಗಳಿಗೆ ಸಹಕಾರವನ್ನು ನೀಡುವುದು. ಕೆಲವರು ತಮ್ಮ ಪಂಥಗಳಿಗಾಗಿ ಬಡಿದಾಡುತ್ತಾರೆ, ಅವು ಸುಳ್ಳಾಗಲಿ, ಪೊಳ್ಳಾಗಲಿ, ಜೊಳ್ಳಿನ ಕಣಜವಾಗಿರಲಿ ಅವುಗಳನ್ನು ಗಟ್ಟಿಯೆಂದು ಗುಡುಗುವುದಷ್ಟೇ ಅವರ ಕೆಲಸ. ಕಾರಣ ಅವರು ಆ ಪಂಥದ ಅನುಯಾಯಿಗಳು, ಅವರು ಸತ್ಯವನ್ನು ಸುಳ್ಳೆಂದು ನಂಬಿಸಲು ತಮ್ಮಿಂದ ಏನೆಲ್ಲ ಸಾಧ್ಯವೆಂದು ಚಿಂತಿಸುತ್ತಾ ದಿನಕಳೆಯುವುದು. ಕಂಡಿತಾ ಇದರಿಂದ ನಾಡು, ದೇಶವೂ ಉದ್ಧಾರವಾಗೋಲ್ಲ. ತಾವು ಒಪ್ಪಿದ ಮಠಾಧಿಪತಿಯಿರಲಿ, ಪಕ್ಷದ ನಾಯಕನಿರಲಿ, ಧರ್ಮದ ಮುಖಂಡನಿರಲಿ, ಪಂಥಗಳ ಮುಖ್ಯ ಸೂತ್ರ ಚಿಂತಕನಿರಲಿ, ಇಲ್ಲವೇ ತಾವು ಒಪ್ಪಿದ ಸಮುಧಾಯದ ಜಾತಿಯ ಮುಖ್ಯಸ್ತನಿರಲಿ ಅವರು ಏನೇ ಅನಾಚಾರ ಮಾಡಲಿ ಅದನ್ನು ಕಂಡಿಸುವುದಿಲ್ಲ. ಅವರ ಅನುಯಾಯಿಗಳು ಅವರನ್ನು ಉಳಿಸಲು ಶತಾಯ ಗತಾಯ ಗುದ್ದಾಡುತ್ತಾ ಬಡಿದಾಡುತ್ತಾರೆ, ಸಾಧ್ಯವಿದ್ದರೆ ಸಮಾಜದ ಅಶಾಂತಿಗೂ ಕಾರಣರಾಗುತ್ತಾರೆ, ಅವರು ಬೆಂಕಿ ಹಚ್ಚಿದ ಹಳೆಯ ಹರಿದ ಟೈರುಗಳ ಜ್ವಾಲೆ ರಸ್ತೆಯ ಮೇಲೆ ನಿಗಿ ನಿಗಿದು ಉರಿಯುತ್ತದೆ ಜೊತೆಗೆ ಇವರ ಕಣ್ಣಾಲಿಯಲ್ಲೂ ಜ್ವಾಲೆ ಉರಿಯುತ್ತಿರುತ್ತದೆ, ಕೇಳುವ ಧೈರ್ಯ ಸಾಮಾನ್ಯ ಜನತೆಗೆ ಇರುವುದೇ..? ಕಂಡಿತಾ ಕೇಳುವುದೇ ಅಪರಾದವೆನಿಸುವ ಮಟ್ಟಿಗೆ ಸಾಮಾನ್ಯನ ಸ್ಥಿತಿಗೆ ನಮ್ಮ ಸಮಾಜ ತಲುಪುತ್ತಿರುವುದರ ಗತಿ ನೋಡಿದರೆ, ಇದು ದೇಶದ ಸಾಮಾನ್ಯನ ದನಿಯು ಕ್ಷೀಣವಾಗುವುದರ ಪ್ರತೀಕವೆನಿಸುತ್ತಿದೆ.
     ಕೆಲವರು ಮಾಡಿದ್ದು ತಪ್ಪಲ್ಲದಿದ್ದರೂ ಅದನ್ನು ತಪ್ಪೆಂದು ಸಮಾಜವನ್ನು ಒಪ್ಪಿಸಬೇಕೆಂಬ ಛಲ ಒಂದು ಪಂಥದ್ದಾದರೆ ಇನ್ನೊಂದು ಪಂಥದ ಚಿಂತೆ ಇದರ ಮಧ್ಯೆ ತಮ್ಮ ಲಾಭದ ಬೇಳೆ ಬೇಯಿಸಿಕೊಳ್ಳುವುದಾಗಿರುತ್ತದೆ. ಪ್ರತಿಯೊಂದು ಚರ್ಚೆಯೂ ಆರೋಗ್ಯಕರವಾಗಿದ್ದಲ್ಲಿ ಅದು ಸಮಾಜದ ಅರಿವಿಗೆ ಬರುತ್ತದೆ. ಆದರೆ ಅರಿವಿಗೆ ಬಂದರೂ ಅದನ್ನು ಒಪ್ಪದೇ ತಪ್ಪೆಂದು ಬಿಂಬಿಸಲೇಬೇಕೆಂಬ ಹಠಹಿಡಿದು ಕುತ್ತವರನ್ನು ಸರಿಮಾಡುವುದು ಹೇಗೆ. ಈ ರೀತಿ ಪ್ರಸಂಗಗಳಿಂದಲೇ ಎಲ್ಲರಿಂದ ನುಣುಚಿಕೊಂಡು ಕೆಲವರು ಸಾಚಾಗಳಂತೆ ಬಿಂಬಿತವಾಗುತ್ತಾರೆ. ಸಮಾಜದಲ್ಲಿ ಸಿಗುವ ಪ್ರಶಸ್ತಿ ಪುರಸ್ಕಾರಗಳು ಇತ್ತೀಚೆಗೆ ವರ್ಗಕ್ಕೆ ಮತ್ತು ಜಾತಿಗೆ ಜೊತೆಗೆ ಪಂಥಕ್ಕೆಂದು ಹಂಚಿಹೋಗುತ್ತಿವೆ, ಬಾಲಿಶಹ ವ್ಯಕ್ತಿಗಳಿಗೆ ಪುರಸ್ಕರಿಸಿ ಬೀಗಿದರೆ ಅದು ಆ ಪ್ರಶಸ್ತಿಗೆ ಮತ್ತು ಪುರಸ್ಕಾರಗಳಿಗೆ ಮಾಡಿದ ಅವಮಾನವೇ ಹೊರತು ಇದರಿಂದು ಕಾಲಿ ಕೊಡದಂತಿರುವವನಿಗೆ ನೀಡಿದ ಪ್ರಶಸ್ತಿ, ಪುರಸ್ಕಾರದಿಂದ ಆತನಲ್ಲಿ ಯಾವುದೇ ದಿವ್ಯ ಜ್ಞಾನ ಉದಯಿಸುವುದಿಲ್ಲ. ಮತ್ತು ನಾಡಿಗೆ ಯಾವುದೇ ರೀತಿಯ ಪ್ರಯೋಜನವೆನಿಸುವುದಿಲ್ಲ. ಜೊತೆಗೆ ನಾವು ನಾಡಿಗೆ ಸಮಾಜಕ್ಕೆ ಯಾವುದೇ ಸಂದೇಶ ರವಾನಿಸಿದಂತಾಗುವುದಿಲ್ಲ. ಅವರ ಜಾತಿಯನ್ನು ಓಲೈಸಿದಂತಾಗುತ್ತದೆ ಅಷ್ಟೇ. ತಮಗೆ ಬೇಕಾದವರೆಂದು ಆರಾಧಿಸುವುದರ ಬದಲಿಗೆ ನಾಡಿಗೆ ಅಭಿವೃದ್ಧಿಗೆ ಮತ್ತು ಮಾರ್ಗದರ್ಶಕರೆನಿಸುವವರನ್ನು ಆರಾಧಿಸುವುದರ ಮೂಲಕ ಭಾವೈಕ್ಯತೆ ಬೆಳೆಸಬೇಕು. ಆದರೆ ಅದವೂ ಗೌಣವಾಗಿದೆ. ಎಲ್ಲದಕ್ಕೂ ಈ ಬಕೇಟ್ ಹಿಡಿವವರೇ ಬಂದು ಅಡ್ಡಗಾಲಾಗಿ ಎಲ್ಲ ಸೌಲಭ್ಯವನ್ನು ನೈಜ ಫಲಾನುಭವಿಗಳಿಂದ ಕಸಿಯುತ್ತಾರೆ. ಸುಮ್ಮನೇ ಇವರ ಕತ್ತಿಗೊಂದು ಹಾರ ಬೀಳುತ್ತದೆ, ಅದೂ ಯಾವ ಪುರುಷಾರ್ಥಕ್ಕೋ ಅರಿದಾಗುತ್ತದೆ. ಇಂತವರಿಂದ ಸಮಾಜ ಎಷ್ಟೊಂದು ಉದ್ದಾರವಾಗಿದೆ, ಇವರು ಮಾಡಿದ ನಾಡಿನ ಸೇವೆ, ಬಡತನ ನಿರ್ಮೂಲನ, ಸಾಮಾಜಿಕ ಸಮಾನತೆಗಾಗಿನ ಇವರ ಹೋರಾಟ ಅವಿಸ್ಮರಣೀಯವೆಂದು ಹಾರಹಾಕಿಕೊಳ್ಳುವವರನ್ನು ನಾವು ದಿನ ನಿತ್ಯ ನೋಡುತ್ತೇವೆ, ನೋಡಲೇಬೇಕಾದ ಸ್ಥಿತಿಯಲ್ಲಿ ಬಿದ್ದಿದ್ದೇವೆ. ಆದರೂ ಏಕೆ ದೇಶದಿಂದ ಬಡತನ, ಸಾಮಾಜಿಕ ಅಸಮಾನತೆ, ಜಾತಿ, ಅಸ್ಪøಷ್ಯತೆ, ಮೋಸ, ವಂಚನೆ ಭ್ರಷ್ಟಾಚಾರ ತೊಲಗಿಲ್ಲ. ಏಕೆಂದರೆ ಎಲ್ಲವೂ ಬಕೇಟ್ ಹಿಡಿವವರ ಕೈವಶದಲ್ಲಿರಲು ವಿವೇಕಿಗಳಿಗಳಿಗೆ(ಸಾಮಾನ್ಯನಿಗೆ) ಜಾಗವೆಲ್ಲಿ..?
      ಸ್ವಾಭಿಮಾನಿಗಳಿಗೆ ನಮ್ಮ ಸಮಾಜದಲ್ಲಂತೂ ಕಂಡಿತಾ ಗೌರವವಿದೆ, ಅದು ಈ ದೇಶದ ಮಣ್ಣಿನ ಗುಣ, ಎಲ್ಲರೂ ಸ್ವಾಭಿಮಾನವನ್ನು ಹೆಚ್ಚಿಸಿಕೊಳ್ಳುತ್ತಾ, ಸತ್ಯವನ್ನು ಸತ್ಯವೆನ್ನಿಸುತ್ತಾ ಈ ಬಕೇಟ್ ಹಿಡಿವ ಸಂತತಿಯನ್ನು ನಾಶಗೊಳಿಸಲು ಎಲ್ಲರೂ ಪ್ರಯತ್ನಿಸೋಣ, ಎಲ್ಲರೂ ಕೈ ಜೋಡಿಸೋಣ. ಒಳ್ಳೆಯ ಕಾರ್ಯಕ್ಕೆ ಅಭಿವೃದ್ಧಿಪರ ಚಿಂತನೆಗಳಿಗೆ ಜೈ ಎನ್ನೋಣ..

ಕಾದಿರುವೆ ನಿನಗಾಗಿ..

ಗೆಳತೀ..
ನೀ ಬರುವ ಹಾದಿಯಲ್ಲಿ
ನಿನ್ನೊಲವ ರಂಗು
ತುಂಬಿದ ಮನದಲ್ಲಿ
ನಿನ್ನಾಸೆರೆಯ ಬಯಸಿ
ಕಾದಿರುವೆ ನಿನಗಾಗಿ..

ನೀ ತರುವುದನು
ಮರೆಯದಿರು
ನನಗೊಂದು ಕೆಂಗುಲಾಬಿ..
ಹೊತ್ತು ತರುವುದನು
ಮರೆಯದಿರು
ನಗುಮೊಗದ
ಸಿರಿಯನು..