Saturday, 28 September 2019

ಭಗತನೆಂಬ ಹುಲಿ

ಹುಲಿಯ ರೋಷಾಗ್ನಿ ಕುದಿದು
ಕ್ರಾಂತಿಯ ತೇಜಸ್ಸು ಉರಿದು
ಭ್ರಷ್ಟ ಬ್ರಿಟೀಷರ ಬೇಟೆಯನಾಡಲು
ಹೊರಡಿಸಿದೆ ಕಟ್ಟಾಜ್ಞೆ ಮನಕೆ
ಭಗತನೆಂಬ ಹೆಬ್ಬುಲಿಯ ಮನಕೆ...

ವಿಚಾರಗಳ ಸಾಣೆಕಲ್ಲಿನ ಮೇಲೆ
ಹರಿತಗೊಂಡ ಕತ್ತಿಯ ಜೊತೆ
ಶೋಶಿತ ವ್ಯವಸ್ತೆಯ ಕಿತ್ತೊಗೆದು
ಶ್ರಮಿಕರ ವಿಮೋಚನೆ ಮಾಡಲು
ಭಗತನೆಂಬ ಹುಲಿಯು ಹಸಿದಿತ್ತು...

ಬ್ರಿಟೀಷರ ಕಪಟ ಬುದ್ಧಿಯು
ಮುಗ್ದ ಭಾರತೀಯರ ಹತ್ಯೆಯು
ಜಲಿಯನವಾಲಬಾಗ್ ಪ್ರತೀಕಾರದ ಕಿಚ್ಚು
ರಕ್ತ ಪಿಪಾಸುಗಳ ದಹಿಸುವ ರೊಚ್ಚು
ಭಗತನೆಂಬ ಹುಲಿಯಲಿ ಆವರಿಸಿತ್ತು..

ಎದೆ ಝಲ್ಲೆನ್ನಿಸುವ ಧೈರ್ಯದಲಿ
ಸ್ಪೂರ್ತಿಯ ವಿದ್ಯುತ್ ಸಂಚಲದಲಿ
ಧುಮ್ಮಿಕ್ಕುವ ಜಲಧಾರೆಯ ಹುಮ್ಮಸ್ಸಿನಲಿ
ಯುವಜನರ ಕೆಚ್ಚೆದೆಯ ಪ್ರತೀಕವಾಗಿ
ಭಗತನೆಂಬ ಹುಲಿಯು ಸಂಚರಿಸಿತ್ತು..

ಲಾಲ ಲಜಪತರಾಯರ ಹತ್ಯೆಯ ನೋವು
ಜಲಿಯನವಾಲಬಾಗ್ ಪ್ರತೀಕಾರದ ಕಿಚ್ಚು
ಗುಲಾಮಗಿರಿಯ ಹೊಡೆದೋಡಿಸಲು
ಬ್ರಿಟೀಷರ ಕ್ರೂರತೆಯ ದಹಿಸಲು
ಭಗತನೆಂಬ ಹುಲಿಯು ಹಸಿದಿತ್ತು....

ಗುಳ್ಳೆನರಿ ಬ್ರಿಟೀಷ್‍ರ ನೆತ್ತರು ಹರಿಸಿತ್ತು
ಸ್ವಾತಂತ್ರ್ಯ ಭಾರತಕ್ಕಾಗಿ ಗುಡುಗಿತ್ತು
ಪ್ರತೀಕಾರದ ಜಯದಲಿ ಬೀಗಿತ್ತು
ಕ್ರಾಂತಿಯು ಚಿರಾಯುವೆಂದು ಸಾರಿತು
ಭಗತನೆಂಬ ಹುಲಿಯು ಚಿರಾಯುವಾಯಿತು...

ರಾಮಚಂದ್ರ ಸಾಗರ್-ಜನನಾಯಕ-ಕವನಸಂಕಲನ