Saturday, 28 September 2019

ಹೃದಯ ದನಿಸುತಿದೆ ನಿನ್ನಿಂದಲೇ-2

ವಿನಯ ಮತ್ತು ಧನ್ಯಾ ಬಾಲ್ಯದಿಂದಲೇ ಒಟ್ಟಿಗೆ ಬೆಳೆದವರು, ಇಬ್ಬರದೂ ಅಪ್ರತಿಮ ಸ್ನೇಹ. ಒಟ್ಟಾರೆ ದಿನದಲ್ಲಿ ಒಮ್ಮೆಯಾದರೂ ಒಬ್ಬರನ್ನೊಬ್ಬರು ನೋಡಲೇಬೇಕು. ಯಾವುದೇ ಸಂತಸ, ದುಃಖವಿರಲಿ ಇಬ್ಬರೂ ವಿನಿಮಯಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿ ಅಪ್ಪ, ಅಮ್ಮನಿಗೆ ಹೇಳದಿದ್ದರೂ ಸರಿಯೇ ಅದೂ ಇಬ್ಬರಲ್ಲೂ ವಿನಿಮಯವಾಗುತ್ತಿತ್ತು. ಹೀಗೆ ಧನ್ಯಾ ತನ್ನ ಹಳೆ ನೆನಪುಗಳನ್ನು ನೆನೆಯುತ್ತಾ ರೈಲಿನಲ್ಲಿ ಕುಳಿತಿದ್ದಾಳೆ. ಹಾಗೇ ಬಾಲ್ಯದ ಜೀವನ ನೆನಪಾಗುತ್ತಿದೆ. 
ಶಾಲೆಗೆ ಹೋಗುವಾಗ ಇಬ್ಬರೂ ಹಸಿರು ಗದ್ದೆಯ ಬದಿಯ ಮೇಲೆ ಸಾಗುತ್ತಾ ಬಿಳಿ ಕೊಕ್ಕರೆಗಳ ನೋಡಿ ಸಂಭ್ರಮಿಸಿದ ಆ ದಿನಗಳು, ಹೂ ಬನದ ನಡುವೆ ನಲಿಯುತಾ ಓಡೋಡಿ ಸಾಗಿದ ಸವಿ ದಿನಗಳು, ಮುಂಗಾರು ಮಳೆಯಲ್ಲಿ ಖುಷಿಯಿಂದ ಕುಣಿಯುತಾ ಆಲಿಕಲ್ಲು ಆರಿಸಿದ ಮಧುರ ನೆನಪು, ರಾತ್ರಿ ಶೀತವಾಗಿ ಒದ್ದಾಡುವಾಗ ಅಮ್ಮ ಗದರಿದರೂ ಹೆದರದೇ ನಲಿದ ನೆನಪು. ಕಾಡಂಚಲಿ  ಸಾಗುವಾಗ ನೇರಳೆ, ಮಾವು ಮರಕ್ಕೆ ಕಲ್ಲು ಹೊಡೆದು ಹಣ್ಣು ಕಿತ್ತು ಸವಿದ ನೆನಪು. ಇಂದ್ರನ ಹೂವು ಬೇಕೇ ಬೇಕೆಂದು ಹಠವಿಡಿದು ಕುಳಿತಾಗ ನನ್ನಾಸೆಗೆ ಇಲ್ಲವೆನ್ನದೇ ವಿನಯ್ ಮುಳ್ಳುಕಂಟಿಯ ಪೊದೆಯಲ್ಲಿ ಇಳಿದು ಹೂವು ತಂದು ಕೈಲಿಟ್ಟಾಗ ಮನವು ವಿಸ್ಮಿತಗೊಂಡು ತದೇಕಚಿತ್ತದಿಂದಲೇ ಆ ಹೂವನ್ನೇ ನೋಡಿ ನಲಿದ ಆ ಘಳಿಗೆಯೇ ನೀನೆಷ್ಟು ಹಿತ. ಎಷ್ಟು ಮಧುರ.! ಖುಷಿಗೆ ಅಂಕುಶವಿಲ್ಲದ ಸವಿ ಘಳಿಗೆಗಳೇ ಅಲೆ ಅಲೆಯಾಗಿ ಬೀಸಿದ ಆ ದಿನಗಳೇ ನೀವೆಷ್ಟು ಸುಂದರ, ನೀವೆಷ್ಟು ಆತ್ಮೀಯ. ಬಾಳಿಗೆ ಸಿರಿತನ ಮೂಡಿಸಿದವರು ನೀವೇ!
ಮನದ ನೆನಪುಗಳ ಬುತ್ತಿಯು ಕಡಲಾಗಿದೆ, ಏನೆಂದರೂ ಬರೀ ಮಾತಲ್ಲಿ ಮುಗಿಯುವುದೇ ನಿರ್ಮಲ ಸ್ನೇಹದ ಹಾದಿಯ ಪಯಣವು. ಒಟ್ಟಾರೆ ಹೀಗೆ ಸಾಗುತ್ತಿದ್ದ ಧನ್ಯಾ ಮತ್ತು ವಿನಯರ ನಡುವಿನ ಸ್ನೇಹವು ದಿನದಿಂದ ದಿನಕ್ಕೆ ಇನ್ನಷ್ಟು ಆತ್ಮೀಯವಾಗುತ್ತಿತ್ತು. ಇಬ್ಬರೂ ತಾಳಗುಪ್ಪದಲ್ಲಿ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ಮುಗಿಸಿದರು. ನಂತರ ಪಿ.ಯು.ಸಿ ಹೋಗಬೇಕೆಂದಾಗ ಸಾಗರದ ಕಾಲೇಜಿಗೆ ಸೇರಿದರು. ಆಗಲೂ ಇಬ್ಬರೂ ಒಟ್ಟಿಗೆ ಸಾಗುತ್ತಿದ್ದರು.

ಹಸಿರು ಗಿರಿಯ ನಡುವಿನ ಸುಂದರ ದಾರಿಯಲ್ಲಿ ಇಬ್ಬರೂ ಕ್ರಮಿಸುತ್ತಾ ಹೋಗುವಾಗ ಮುದ್ದು ಮಾತುಗಳ ಸಲ್ಲಾಪದಲ್ಲಿ ಸುಂದರ ಹಾದಿಯು ಸಾಗಿದ್ದೇ ಗೊತ್ತಾಗುತ್ತಿರಲಿಲ್ಲ, ಮೂರ್ನಾಲ್ಕು ಮೈಲು ನಡೆದದ್ದು ಖುಷಿಯ ಸಂಭ್ರದ ಹಾದಿಯಾಗಿ ನಿಲಿಯುತ್ತಿತ್ತೇ ವಿನಃ, ಗತಿಸಿದ ವೇಳಯು ಗೊತ್ತಾಗುತ್ತೇ ಇರಲಿಲ್ಲ. ಓಹ್, ಇಷ್ಟು ಬೇಗನೇ ತಾಳಗುಪ್ಪ ತಲುಪಿದೆವೇನು ಎನ್ನುವಂತೆ ಮನಕ್ಕೆ ಭಾಸವಾಗುತ್ತಿತ್ತು..
ಕಾಲೇಜಿನಲ್ಲೂ ಮಧ್ಯಾಹ್ನ ಊಟದ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು. ಆಗಲೇ ಧನ್ಯಾಳಿಗೆ ಅಡುಗೆಯನ್ನು ಮಾಡುವುದರಲ್ಲಿ ಪಾರಂಗತಳಾಗಿದ್ದಳು. ವಿನಯನಿಗೇನಿಷ್ಟವೋ ಅದೇ ಅಡುಗೆಯನ್ನು ಅಕ್ಕರೆಯಿಂದ ತರುತ್ತಿದ್ದಳು. ಇತ್ತ ವಿನಯ್ ಕೂಡ ಧನ್ಯಾಳಿಗೆ ಏನಿಷ್ಟವೋ ಅದನ್ನೇ ಮಡಿಕೊಡುವಂತೆ ಅಮ್ಮನಿಗೆ ಪಟ್ಟು ಹಿಡಿಯುತ್ತಿದ್ದ. ಹೀಗೆ ಒಬ್ಬರ ಸುಖಕ್ಕೆ ಇನ್ನೊಬ್ಬರುಹಾತೊರೆಯುತ್ತಿದ್ದರು.. ಮೆಲುಗಾಳಿಯ ಪ್ರೀತಿಸುವ ಕೆನ್ನೈದಿಲೆಯಂತೆ ಧನ್ಯಾಳ ಮನವಾದರೆ, ಕೆನ್ನೈದಿಲೆಯನ್ನು ಪ್ರೀತಿಸುವ ಮೆಲುಗಾಳಿಯಂತೆ ವಿನಯ್ ಮನ.
ಹೀಗೆ ಸಾಗುತ್ತಲೇ ಇಬ್ಬರೂ ಪಿ.ಯು.ಸಿ ಮುಗಿಸುತ್ತಾ ಬಂದರು, ಕಾಲೇಜಿನಲ್ಲಿ ಓದಿನಲ್ಲೂ ಇಬ್ಬರೂ ತುಂಬ ಚುರುಕಾಗಿದ್ದರು. ಧನ್ಯಾ ಮತ್ತು ವಿನಯ್ ಓದಿನ ಜೊತೆಗೆ ಆಟ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲೂ ಫಾಲ್ಗೊಳ್ಳುತ್ತಿದ್ದರು. ಒಂದಂತೂ ಸತ್ಯ. ಇಬ್ಬರದೂ ತ್ಯಾಗದ ಭಾವ. ಅದೂ ಒಬ್ಬರಿಗೊಬ್ಬರಿಗಾಗಿ. ನನ್ನ ಖುಷಿಯು ನಿನಗಾಗಿ, ನೀ ನಲಿವ ಘಳಿಗೆಗಾಗಿ ಎನ್ನುವುದೇ ಬದುಕಾಗಿತ್ತು.
ಅಂತೂ ದಿನಗಳು ಕಳೆಯುತ್ತಾ ಇಬ್ಬರೂ ಪಿ.ಯು.ಸಿ ಮುಗಿಸುವ ಕಾಲ ಒದಗಿ ಬರುತ್ತಿದೆ.  ಇನ್ನೂ ಪರೀಕ್ಷೆಯ ಕಾಲವೂ ಬಂತು. ಇನ್ನೇನು ಕಾಲೇಜು ಮುಗಿಯುತ್ತದೆ ಎಂದು ಎಲ್ಲರೂ ಒಟ್ಟಾಗಿ ಸ್ನೇಹಿತರೆಲ್ಲಾ ಸೇರಿ ಸಿನಿಮಾ ನೋಡಲು ಹೋಗುತ್ತಿದ್ದರು. ಹಾಗೇ ಅವರೊಂದಿಗೆ ವಿನಯ್ ಮತ್ತು ಧನ್ಯಾ ಕೂಡ ಹೋಗುತ್ತಿದ್ದರು. ಎಲ್ಲರಿಗೂ ಸಿನಿಮಾ ಹೀರೋ ಮತ್ತು ಹೀರೋಯಿನ್ ಗಳೇ ಐಕಾನ್ ಆಗಿ ಹೋಗುತ್ತಿದ್ದರು. ಹಲವರ ಪುಸ್ತಕಗಳ ಮೇಲೆ ಇನ್ನೂ ಮನದಲ್ಲಿ ಹಲವರಿಗೆ ಕೆಲವು ಚಲನಚಿತ್ರಗಳು ಆರಾಧನೆಯಾಗಿ ಹೋಗಿದ್ದವು. ಹಲವರ ಮನಸ್ಸು ಮಾರುಹೋಗುತ್ತಿತ್ತು. ಹದಿನಾರರ ಹರೆಯದಲ್ಲಿ ಎಲ್ಲವೂ ಸಹಜವಾಗಿ ಅರಳುವ ಆಸೆಗಳು ಅರಳಿ ಕಾಡುವ ಘಳಿಗೆಗೆ ಕಾರಣವೇನೆಂದು ಕೇಳಬೇಕೆ?
ಹೀಗೆ ಸಾಗುತ್ತಲೇ ಇಬ್ಬರು ಪಿ.ಯು.ಸಿ ಪರೀಕ್ಷೆಯನ್ನು ಬರೆದರು, ಇಬ್ಬರಿಗೂ ಉತ್ತಮ ಅಂಕಗಳು ಲಭಿಸಿದವು. ಇನ್ನೂ ಧನ್ಯಾಳಿಗೆ ಕಂಪ್ಯೂಟರ್ ಸೈನ್ಸ್‍ನಲ್ಲಿ ಇಂಜಿನೀಯರಿಂಗ್ ಓದಲು ಶಿವಮೊಗ್ಗದಲ್ಲೇ ಅವಕಾಶ ಲಭಿಸಿತು. ಆದರೆ ವಿನಯ್‍ಗೆ ಮನೆಯಲ್ಲಿ ಅವನ ಅಣ್ಣನ ಇಚ್ಚೆಯಂತೆ ಮತ್ತು ಅಪ್ಪನ ಆಜ್ಞೆಯಂತೆ ಆತನು ವೈದ್ಯನಾಗಬೇಕು. ಇನ್ನೂ ವಿನಯ್ ಅಣ್ಣ ದರ್ಶನ್ ಪ್ರಖ್ಯಾತ ವೈದ್ಯನಾಗಿ ಆಸ್ಟ್ರೇಲಿಯಾದಲ್ಲಿದ್ದಾನೆ. ಹೀಗಾಗಿ ಮೆಡಿಕಲ್ ಓದಲು ವಿನಯ್ ಅನಿವಾರ್ಯವಾಗಿ ದೂರದ ಬೆಂಗಳೂರಿನ ಕಾಲೇಜೊಂದರಲ್ಲಿ ವ್ಯಾಸಾಂಗಕ್ಕೆ ಹೋಗುತ್ತಾನೆ..
ಇಷ್ಟು ದಿವಸವೂ ಒಟ್ಟಿಗೇ ಇದ್ದವರು, ಈಗ ವಿಧಿಯಿಲ್ಲದೇ ದೂರವಾಗಬೇಕು, ದಿನವೂ ಅರಳಿದ ನೈದಿಲೆಯ ನೊಡಲು ಓಡೋಡಿ ಮೋಡಗಳ ಅಂಚಿಂದ ಇಣುಕುವ ಶಶಿಯಂತೆ ವಿನಯ್ ನಿತ್ಯವೂ ಧನ್ಯಾಳಿಗೆ ಪರಿತಪಿಸಬೇಕು. ಇತ್ತ ಧನ್ಯಾಳು ಕೂಡ ಅಕ್ಕರೆಯಿಂದ ಕಡಲ ಕಿನಾರೆಯತ್ತ ಬೀಸುವ ತಂಗಾಳಿಯಂತೆ ವಿನಯ್ ಎನ್ನುವ ಸ್ನೇಹದ ಕಿನಾರೆಯ ಬಯಸುತಾ ಹಾತೊರೆಯುತ್ತಿದ್ದಾಳೆ..
ಈಗ ಇದೇ ಬೇಸರದಲ್ಲಿ ಇಬ್ಬರೂ ಸಾಗರಕ್ಕೆ ಹೋಗಿ ಕೆಲವೊಂದು ಕೆಲಸಗಳನ್ನು ಮುಗಿಸಿ ಊರಿಗೆ ಹಿಂತಿರುಗುತ್ತಿದ್ದಾರೆ. ಊರಿನೊಳಗೆ ಬರುತ್ತಿದ್ದಂತೆ ಆಗಲೇ ಮುಸ್ಸಂಜೆಯಾಗಿದೆ. ಇಬ್ಬರಿಗೂ ಒಂದೆಡೆ ಕುಳಿತು ಮಾತನಾಡಬೇನ್ನುವ ಇರಾದೆ. ಈಗ ಊರ ಗುಡಿಯ ಎದುರಿನ ಕಾಸಾರದ ಬಳಿ  ಒಂದೆಡೆ ಕುಳಿತು ಮಾತನಾಡಿಕೊಳ್ಳುತ್ತಿದ್ದಾರೆ, ಹಾಗೇ ಸಮಯ ಜಾರುತ್ತಾ ಸಂಜೆಯು ಮರೆಯಾಗಿ ಕತ್ತಲು ಭುವಿಯನ್ನು ಆವರಿಸುತ್ತಿದೆ,  ಇಬ್ಬರಿಗು ಒಬ್ಬರೊನ್ನಬ್ಬರನ್ನು ಬಿಟ್ಟಿರಲು ಆಗುತ್ತಿಲ್ಲ. ಓದು, ಭವಿಷ್ಯ ಎನ್ನುವ ಅನಿವಾರ್ಯ ಇಬ್ಬರನ್ನು ಅಗಲುವಂತೆ ಮಾಡಿದೆ, ಅದೇ ನೋವು ಬೇಡವೆಂದರೂ ಕಾಡುತ್ತಿದೆ.
 ಈಗ ಧನ್ಯಾ ತಿಳಿ ಕಾಸಾರದಲ್ಲಿ ನಗುವ ತುಂಬು ಚಂದಿರನ ಬಿಂಬವನ್ನು ನೋಡುತ್ತಾಳೆ. ಅಷ್ಟರಲ್ಲಿ ಕಾಸಾರದ ಎಲೆಗಳು ಗಾಳಿಯ ರಬಸಕ್ಕೆ ಉದುರಿ ಬೀಳುತ್ತವೆ. ತಿಳಿ ನೀರು ಚದುರಿ ಹೋಗುತ್ತದೆ. ತುಂಬು ಚಂದಿರನ ಬಿಂಬವನ್ನು ನೀರಲ್ಲಿ ಹುಡುಕಾಡಿದರೂ ಕಾಣದೇ ಚೂರಾಗುತ್ತಾನೆ. ಈಗ ಇದೇ ರೀತಿ ವಿನಯನ ಸ್ನೇಹವೂ ಮರೆಯಾಗುತ್ತದೇನೋ? ಕೂಡಲೇ ಧನ್ಯಾ ವಿಯನ್‍ಗೆ ಕೇಳುತ್ತಾಳೆ..
ಏನು ನಾವು ಮುಂದೆ ಓದಲೇಬೇಕೆಂದು ಮನೆಯಲ್ಲಿಯೂ ಹೇಳುತ್ತಾರೆ, ಹಾಗೂ ನಮ್ಮ ಆಸೆಯು ಅದೇ. ಆದರೆ ನನಗೆ ನಿನ್ನನ್ನು ಬಿಟ್ಟಿರುವ ಶಕ್ತಿಯು ಮನಸ್ಸಿಗೆ ಕೊಂಚವೂ ಇಲ್ಲ, ನಾನು ಈ ವಿಷಯದಲ್ಲಿ ನಿತ್ರಾಣಳಾಗಿದ್ದೇನೆ..
ಹೌದು, ಧನ್ಯಾ ನಿನ್ನ ಮಾತು ಸತ್ಯ, ನನಗೂ ನಿನ್ನನ್ನು ಅರೆಘಳಿಗೆಯು ಬಿಟ್ಟಿರಲು ಅಸಾಧ್ಯ. ಇನ್ನೇನು ಕೆಲವೇ ದಿನಗಳಲ್ಲಿ ನಾನು ಬೆಂಗಳೂರು ಹೋಗಬೇಕು, ಮನೆಯಲ್ಲಿ ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಿಟ್ಟುಕೊಳ್ಳಲು ಹೋದರೂ ಕೈ ನಡುಗುತ್ತಿದೆ..ಇಷ್ಟು ದಿನ ಎಷ್ಟು ಊರಿಗೆ ಹೋದಾಗಲೂ ಆ ರೀತಿ ಆಗಲಿಲ್ಲ, ಆದರೆ ಅದೇಕೋ ನನಗೆ ಅರ್ಥವಾಗುತ್ತಿಲ್ಲ. ಏನೇ ಆಗಲಿ ನೀನಿಲ್ಲ, ನಿನ್ನ ಸ್ನೇಹವಿಲ್ಲ, ನಿನ್ನ ಸಾನಿಧ್ಯವಿಲ್ಲ ಎನ್ನುವ ಕೊರಗು ನನಗೆ ಕಾಡುವುದಂತೂ ನಿಜ.. 
ಹೌದು, ವಿನಯ್, ನನ್ನ ಮನಸ್ಸು ಕೂಡ ನಿನ್ನಂತೆಯೇ ಆಗಿದೆ, ಏನೇ ಆಗಲಿ ನೀನು ಮೆಡಿಕಲ್ ಮುಗಿಸಲು ಐದಾರು ವರ್ಷ ಬೇಕು, ಇತ್ತ ನನಗೆ ಇಂಜಿನೀಯರಿಂಗ್ ಮುಗಿಸಲು ಹೆಚ್ಚು ಕಡಿಮೆ ಎಂದರೂ ಮೂರ್ನಾಲಕು ವರ್ಷವೇ ಬೇಕು, ನಂತರ ನಮ್ಮ ಬದುಕು ಹೇಗೋ ಏನೋ? ಅಷ್ಟು ದಿವಸಗಳಲ್ಲಿ ನಾವು ಬೇರೆ ಬೇರೆಯೇ ಊರಿನಲ್ಲಿ ಇರುತ್ತೇವೆ.. ಏನೇ ಆದರೂ ಒಂದೇ ಊರಿನಲ್ಲಿ ಇಬ್ಬರೂ ಓದಲು ಅವಕಾಶ ಸಿಕ್ಕರೆ ಚೆನ್ನಾಗಿತ್ತು, ಆದರೆ ನನ್ನ ಮನೆಯಲ್ಲಿ ನನ್ನನ್ನು ಆಗಲೇ ಶಿವಮೊಗ್ಗದ ಕಾಲೇಜಿಗೆ ಸೇರಿಸಿದ್ದಾರೆ. ಇನ್ನು ನನಗೆ ಯಾವುದೇ ಅವಕಾಶ ಲಭ್ಯವಿಲ್ಲ, ಅದೂ ಕೂಡ ರಾಜ್ಯದ ಪ್ರತಿಷ್ಠಿತ ಕಾಲೇಜು ಕೂಡ, ಹಾಗಾಇ ಮನೆಯಲ್ಲಿ ಏನೂ ಕೊಂಕು ನುಡಿಯುವಂತಿಲ್ಲ..
ಇರಲಿ ಬಿಡು ಧನ್ಯಾ, ಏನೇ ಆಗಲಿ ಇಬ್ಬರೂ ಪ್ರೀತಿಯಿಂದ ಓದನ್ನು ಮುಗಿಸೋಣ, ಏನಾದರೂ ಸಾಧಿಸುವ ಛಲಗೈಯ್ಯೋಣ. ಬದುಕಲ್ಲಿ ನಾವು ಅಂದುಕೊಂಡಿದ್ದು ಎಣಿಸಿದಂತೆ ನಡೆದರೆ ಆ ಬಾಳಿಗೆ ಸಿದ್ಧಿಯೆಲ್ಲಿರುತ್ತದಲ್ಲವೇ? ಸಿಹಿಯೇ ತುಂಬಿದರೆ ಕಹಿಗೆ ಬೆಲೆಯೆಲ್ಲಿದೆ? ನಗುವೇ ನಲಿದಾಡಿದರೆ ಕಣ್ಣೀರಿಗೆ ಕೆಲಸವೆಲ್ಲಿ? ಹೂ ಪಥವೇ ಬಾಳಾದರೆ ಮುಳ್ಳು ಹಾದಿ ಎದುರಾದರೆ ಬಾಳಿಗೆ ಉಳಿಗಾಲವೆಲ್ಲಿ? ಎಲ್ಲವೂ ಬರಲಿ, ಆಗಿದ್ದು ಆಗಲಿ, ಬಾಳನ್ನು ಪ್ರೀತಿಯಿಂದ ಸ್ವಾಗತಿಸೋಣ..ಸ್ನೇಹದಿಂದ ಗೆಲ್ಲೋಣ..
ಅಯ್ಯೋ, ನೀನೇನೋ ವಿನಯ್ ಬಹಳ ಸರಳವಾಗಿ ನುಡಿದೆ, ಆದರೆ ನನ್ನ ಮನಸಿಗೆ ಅಷ್ಟೊಂದು ಸರಳವಾಗಿ ಹೇಳಲು ಆಗುತ್ತಿಲ್ಲ. ಮನಸ್ಸಿಗೆ ಸದಾ ನೀನೇ ಜೊತೆಯಾಗಿರಬೇಕೆನ್ನುವ ಇರಾದೆ ಅವಿರತ ಕಾಡುತ್ತಿದೆ. ಅರೆ ಅಲ್ಲಿ ನೋಡು ವಿನಯ್, ಕಾಸಾರದ ತಿಳಿ ನೀರಿನಲ್ಲಿ ಮತ್ತೆ ಚಂದಿರನ ಬಿಂಬವು ಕಾಣುತ್ತಿದೆ, ನೀರು ತಿಳಿಯಾಗಿದೆ, ಎಂತಹ ಸೊಗಸಲ್ಲವೇ?
ಹೌದು, ಧನ್ಯಾ, ತಿಳಿ ಕಾಸಾರದಲ್ಲಿ ನಗುವ ಚಂದಿರನಂತೆ ನಮ್ಮ ಬಾಳ್ವೆಯ ಸ್ನೇಹದ ಹಾದಿಯು ಶುಭ್ರವಾಗಿರಲಿ, ಅವನೇ ನಮ್ಮೀ ಸ್ನೇಹಕೆ ಪುರಾವೆಯಾಗಿರಲಿ..ಮುಂದಿನ ಬಾಳು ಕೂಡ ಸೊಗಸಾಗಿರುತ್ತದೆ, ಮನೆಯಲ್ಲಿ ಎಲ್ಲರ ಅಣತಿಯಂತೆ ನಾವು ಚೆನ್ನಾಗಿ ಓದಬೇಕು. ನನಗೆ ಮೊನ್ನೆ ಅಣ್ಣ ಮತ್ತೆ ಆಸ್ಟ್ರೇಲಿಯಾದಿಂದ ಫೋನ್ ಮಾಡಿದ್ದ. ಆತನಿಗೂ ನಾನು ಅವನಂತೆ ವೈದ್ಯನಾಗಬೇಕೆನ್ನುವಾಸೆ. ಹಾಗಾಗಿ ಅವನೇ ಬೆಂಗಳೂರಿನ ಆ ಕಾಲೇಜ್‍ನ್ನು ಆಯ್ಕೆಮಾಡಿ ಅಲ್ಲಿಯೇ ಓದಲು ಹೇಳಿದ್ದು. ನಾನು ಕೂಡ ಅಪ್ಪ, ಅಮ್ಮ, ಅಣ್ಣನಿಗೆ ಇಲ್ಲವೆನ್ನಲು ಆಗದೇ ಒಪ್ಪಿಕೊಂಡೆ ..
ನನ್ನ ಸ್ಥಿತಿಯೂ ಹಾಗೇ ವಿನಯ್, ಮನೆಯಲ್ಲಿ ಅನ್ನುವುದಕ್ಕಿಂತ ಹೆಚ್ಚಾಗಿ ನನ್ನ ಮನದಲ್ಲೂ ಏನಾದರೂ ಸಾಧಿಸಲೇಬೇಕೆನ್ನುವ ಹಠವಿದೆ. ಇಲ್ಲಿಯವರೆಗೂ ಸಾಕಷ್ಟು ಉತ್ತಮವಾಗಿಯೇ ಓದಿದ್ದೇವೆ. ಓದಿನ ಸಾಧನೆಯು ಮುಂದಿನ ಸಾಧನೆಗೆ ಮೆಟ್ಟಿಲಾಗಬೇಕು. ಅದು ಬರೀ ಪಿ.ಯು.ಸಿಗೆ ಕೊನೆಯಾಗಬಾರದು, ಹಾಗಾಗಿ ನಾನು ಕೂಡ ಇಂಜಿನೀಯರಿಂಗ್ ಓದಲು ಉತ್ಸುಕಳಾಗಿದ್ದೇನೆ.
ಈಗ ಧನ್ಯಾಳ ಕಣ್ಣಲ್ಲಿ ನೀರಿನ ಹನಿಗಳು ನಿಧಾನವಾಗಿ ಹೊರ ಬರುತ್ತಿವೆ, ಆದರೆ ವಿನಯ್ ಗಮನ ಮಾತ್ರ ಬೇರೆಡೆಯೇ ನೆಟ್ಟಿದೆ, ಆತ ಏನೋ ಯೋಚಿಸುತ್ತಾ ಹಾಗೇ ಕುಳಿತಿದ್ದಾನೆ..ಈಗ ಮೆತ್ತನೆ ಧನ್ಯಾ ವಿನಯ್ ಕಡೆ ನೋಡುತ್ತಾಳೆ. ಆತನ ಗಮನ ಬೇರೆಡೆ ನೆಟ್ಟಿರುವುದು ಗಮನಿಸುತ್ತಾಳೆ. ಈಗ ಮೆತ್ತನೆ ದನಿಯಲ್ಲಿ ವಿನಯ್ ಎನ್ನುತ್ತಾಳೆ. ಆತ ಧನ್ಯಾಳೆಡೆ ತಿರುಗಿ ನೋಡುತ್ತಾನೆ, ಅವಳ ಮೊಗದಲ್ಲಿ ಭಯ ತುಂಬಿದ ಕಳೆಯೇ ಆವರಸಿದೆ, ಜೊತೆಗೆ ಕಣ್ಣಲ್ಲಿ ನೀರು ಹನಿಯುತ್ತಿದೆ. ವಿಸ್ಮಿತತೆಯ ಜೊತೆಗೆ ಆತನೂ ಬಹಳ ನೊಂದುಕೊಂಡು ಭಾವುಕನಾಗುತ್ತಾನೆ. ಆತನ ಕಣ್ಣಲ್ಲಿಯು ನೀರಿನ ಹನಿಗಳು ನಿಧಾನವಾಗಿ ಹೊರಬಂದವು..ಮೌನ ಮುರಿಯಲು ಮನ ಹಾತೊರೆಯ ತೊಡಗಿತು..
ಕಥೆ ಮುಂದುವರೆಯುವುದು
ರಾಮಚಂದ್ರ ಸಾಗರ್