Monday, 11 March 2019

ನೀ ಕಾಣದೇ..

ಗೆಳೆಯಾ..
ದುಗುಡದ ಕಣ್ಣಿಗೆ ಕೊಂಚವು ನೀ ಕಾಣದೆ 
ಹಗಲಿರುಳು ಸೂಜಿಯಾಗಿ ಚುಚ್ಚಬೇಡ
ಬಯಸಿದ ಹೃದಯಕೆ ನೀ ರಮಿಸದೆ
ನೋವಿನ ಮಳೆಯಾಗಿ ಸುರಿಯಬೇಡ

ದುಮ್ಮಾನದ ಘಳಿಗೆಗೆ ನೀ ಸಂತೈಸದೆ
ದೂರದ ಜಗದಲಿ  ಉಳಿಯಬೇಡ
ಮುಗ್ಧೆಯ ಅಕ್ಕರೆಯ ಮನಕೆ
ದಾವಾಗ್ನಿಯಾಗಿ ನೀ ಅಪ್ಪಳಿಸಬೇಡ

ಪೀಡಿಸುವ ಕನಸಿಗೆ ನೀ ತಣಿಸದೆ
ವಿರಹದ ವಿಷವನು ಸುರಿಯಬೇಡ
ಕಳವಳಿಸುವ ಮನಕೆ ನೀ ಜೊತೆಯಾಗದೆ
ವ್ಯಥೆಯ ಸಾಗರದಲಿ ಒಂಟಿಯಾಗಿಸಬೇಡ

ಕಾಂತಾರದ ದುರ್ಗಮದಲಿ ನೀ ಬೆಳಗದೆ
ನೋವಿನ ಕಂದರಕೆ ನೂಕಬೇಡ
ಕಾರುಣ್ಯದ ಒಲವು ನೀ ನೀಡದೆ
ಗತಿಸುವ ಹೃದಯಕೆ ಕಾರಣವಾಗಬೇಡ

ಹೊಂಗನಸು ಕಾಣುವ ಜೀವಕೆ
ನೋವಿನ ಬಿಸಿಯಲೆಯಾಗಿ ಬೀಸಬೇಡ
ಪ್ರೀತಿಯೆ ಉಸಿರಾಡುವ ಎದೆಗೆ
ರೋದನೆ ವಿಧಿಯಾಗಿಸಿ ನಡೆಯಬೇಡ

ಗೆಳೆಯಾ..
ನೀ ಬರುವುದಾದರೆ ಬಂದುಬಿಡು
ವಿರಹದ ವಿಷದ ಕಡಲನು ಸಿಹಿಜೇನಾಗಿಸು ಬಾ
ರೋದಿಸುವ ನನ್ನೊಲವನು
ನಿನ್ನೊಲವ ರಕ್ಷೆಯಲಿ ನಲಿಸಲು ಬಾ

ರಾಮಚಂದ್ರ ಸಾಗರ್