Sunday, 13 January 2019

ಇದು ದಿಟವು

ಹುರುಳಿಲ್ಲದ ಸಾರದ ಜಪದಲಿ
ಹುಲು ಮಾನವ ನೀನಾಗದಿರು
ಬಲವಿಲ್ಲದ ಸತ್ವದ ಜೊತೆಯಲಿ
ಸಮಯದ ಕ್ಷಯ ಮಾಡದಿರು

ಹುರಿಯಾಳು ಇರುವ ಜಗದಲಿ
ಗೆಲುವು ತನ್ನದೆಂದು ಮೈಮರೆಯದಿರು
ಹುರಿದು ಹೊಸೆದ ಜೀವದಲಿ
ನಲಿವು ನಲಿದಾಡುವುದು ಮರೆಯದಿರು

ಹುಸಿ ಮಾತಿನ ಮಹಲಿನಲ್ಲಿ
ಮುಗ್ಧರ ಮನ ಘಾಸಿಗೊಳಿಸದಿರು
ಅಸತ್ಯದ ಬಲೆಯ ಮೋಹದಲಿ
ನಂಬಿದವರ ಬೀಳಿಸಿ ನಗದಿರು

ಹುಗಿ ತುಂಬಿದ ನದಿಯಲಿ
ದೋಣಿ ಸಾಗದು ಮರೆಯದಿರು
ಹುಳಿ ತುಂಬಿದ ಮನದಲಿ
ನಗುವು ಅರಳದು ತಿಳಿದಿರು

ಹುಂಬ ಮನದ ಮತಿಯಲಿ
ವಿವೇಕ ಮುದುಡುವುದು ತಿಳಿದಿರು
ಹುಡಿಮಾಡಿದ ಜನರ ಮನದಲಿ
ಸಾಮರಸ್ಯ ಸಾಯುವುದು ಅರಿವಿರಲಿ

ಹುಳು ಹರಿದಾಡುವ ವನದಲಿ
ಸೊಬಗು ಮರೆಯಾಗುವುದು ನಿಶ್ಚಯವು
ಹುಳುಕಾದ ಸಮಾಜದ ನಡೆಯಲಿ
ಜಗವು ಬವಣೆಯಲಿ ಬೇಯುವುದು ದಿಟವು

ರಾಮಚಂದ್ರ ಸಾಗರ್