Thursday, 2 February 2017

ಮಗಳೇ ಎಂದವನೇ... ಕಥೆ ಭಾಗ 4

       ಮತ್ತಷ್ಟು ಹೆದರುತ್ತಾ ನೋಡಿದೆ..ಗೆಳತಿ ಬಂದಳು, ಅಳುತ್ತಾ ಓಡಿ ಹೋಗಿ ಅವಳನ್ನು ಬಿಗಿದಪ್ಪಿದೆ, ಅವಳು ಏನಾಯ್ತು ಎಂದರೂ ಉತ್ತರಿಸಲಾದೆ, ಕೂಡಲೇ ನೀರನ್ನು ನನ್ನ ನೆತ್ತಿಯ ಮೇಲೆ ಹಾಕಿ ನನಗೆ ನೀರು ಕುಡಿಸಿ ನನ್ನ ಸಾವಧಾನಿಸುತ್ತಾ ಮತ್ತೆ ಮತ್ತೆ ಕೇಳಿದಳು, ಹೆದರದಿರು ಏನಾಯ್ತು ಎಂದಳು, ನನಗೆ ಕಣ್ಣು ಕತ್ತಲೆ ಬಂದಂತಾಗಿ ಮೆತ್ತನೆ ಕಣ್ಮುಚ್ಚಿದೆ, ಎದ್ದು ನೋಡಿದಾಗ ನಾನು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದೆ, ಹೆದರಿ ಮೂರ್ಛೆಹೋಗಿದ್ದೆನಂತೆ, ಎದ್ದವಳೇ ನನ್ನ ಮೊಬೈಲ್ ಎಲ್ಲಿ ಎಂದೆ, ಗೆಳತಿಗೆ ಕೊಂಚ ಕಸಿವಿಸಿಯಾಯ್ತು, ಏನಾಯ್ತು ಏನು ಮೊದಲು ಹೇಳು, ನಿನ್ನ ಮೊಬೈಲ್ ಹೋದ್ರೆ ಇನ್ನು ಹತ್ತು ತರಬಹುದು ಸುಮ್ನಿರು ಎಂದು ಗದರಿದಳು, ಅಯ್ಯೋ ನನಗೆ ಮೊಬೈಲ್ ಸಿಕ್ಕರೆ ಸಾಕು, ಮೊದಲು ಮೊಬೈಲ್ ಬೇಕು ಎಂದು ಅಳತೊಡಗಿದೆ. ಅಯ್ಯೋ ಅದು ಮನೆಯಲ್ಲೇ ಇರಬೇಕು, ನೀನು ತಲೆಸುತ್ತಿ ಪ್ರಜ್ಞೆ ತಪ್ಪಿದಾಗ ನಾನು ನಿನ್ನನ್ನು ಮಾತ್ರ ಆಸ್ಪತ್ರೆಗೆ ತಂದೆ, ಮೊಬೈಲ್ ತರುವ ಸಮಯವೇ ಅದು ಎಂದು ಮತ್ತೆ ಗದರಿ, ಮೊದಲು ಏನಾಯ್ತು ಹೇಳು, ಧೈರ್ಯದಿಂದಿರು ಎಲ್ಲದಕ್ಕೂ ನಾನು ನಿನ್ನ ಜೊತೆ ಸದಾ ಇರುವೆ ಎಂದಳು, ಎಲ್ಲವನ್ನೂ ಅಳುತ್ತಾ ಹೇಳಿದೆ, ಕುಮಾರ್ ನನ್ನನ್ನು  ಬ್ಲಾಕ್ ಮೇಲ್ ಮಾಡುತ್ತಿದ್ದಾನೆಂದು, ಅವನು ಹೇಳಿದಂತೆ ಕೇಳದಿದ್ದರೆ ಎಲ್ಲವನ್ನು ಯುಟ್ಯೂಬ್‍ಗೆ ಇತರೆಡೆ ಅಪ್‍ಲೋಡ್ ಮಾಡುವುದಾಗಿ ಬೇರೆಯವರಿಗೆ ಆ ವೀಡಿಯೋ ಕಳಿಸುವುದಾಗಿ ಬೆದರಿಸುತ್ತಿದ್ದಾನೆಂದೆ, ಅವಳು ಒಮ್ಮೆ ಕೇಳಿ ಹೆದರಿದಂತೆ ಕಂಡರೂ ಧರ್ಯವನ್ನೇ ನನಗೆ ಹೇಳುತ್ತಾ ಸುಮ್ಮನಿರು ಇದಕ್ಕೆಲ್ಲಾ ನನ್ನ ಬಳಿ ಉಪಾಯವಿದೆ ಎಂದು ಸಂತೈಸತೊಡಗಿದಳು. 
        ಈಗ ಅವಳೂ ಕೂಡ ಅಪ್ಪಾಜಿಯ ನಂಬರ್‍ಗೆ ಕರೆಮಾಡಿದಳು, ಅದು ಈಗಲೂ ನಾಟ್ ರೀಚೇಬಲ್ ಆಗಿತ್ತು, ಈಗ ಮನದ ನಡುಕ ಮತ್ತೆ ಮತ್ತೆ ಹೆಚ್ಚತೊಡಗಿತು, ಅವರ ಹಳ್ಳಿ ಮನೆಗೆ ಹೋದ ಅಪ್ಪಾಜಿ ಇನ್ನೂ ಬಂದಿಲ್ಲವೇನೋ, ಅವರು ಬರುವವರೆಗೆ ಅವರನ್ನು ಸಂಪರ್ಕಿಸುದೇಗೆ ಎಂಬ ಚಿಂತನೆಯಲ್ಲಿ ತೊಡಗಿದೆ, ಮತ್ತೆ ಮತ್ತೆ ನನ್ನ ಅರಿವಿಲ್ಲದೇ ಭಯದಲ್ಲಿ ಬೆವರು ಹನಿಗಳು ಸುರಿಯಲಾರಂಭಿಸಿದವು. ಹೆದರಿಕೆಗೆ ಮತ್ತೆ ಕಣ್ಣು ಮಬ್ಬಾಗಿ ತಲೆ ಸುತ್ತಿದಂತಾಯ್ತು. ಮತ್ತೆ ಸಂತೈಸುವ ಸರದಿ ಗೆಳತಿಯದಾಯ್ತು. ಗೆಳತಿಗೆ ಈ ವಿಷಯನ್ನು ಯಾರಿಗೂ ಹೇಳಬೇಡವೆಂದೆ, ಅವಳು ಹೌದೆಂದಳು, ಮನೆಗೆ ಫೋನ್ ಮಾಡಬೇಕೆಂದೆ, ಫೋನ್ ಮಾಡಿ ಅಮ್ಮನೊಂದಿಗೆ ಮಾತನಾಡಬೇಕೆಂದೆ, ಆದರೆ ಗೆಳತಿ ಈಗ ಬೇಡ, ಸ್ವಲ್ಪ ಸುಧಾರಿಸಿಕೋ ಎಂದಳು, ಇಲ್ಲ ದಿನಾ ರಾತ್ರಿ ಅಮ್ಮನಿಗೆ ನಾನು ಕರೆಮಾಡಬೇಕು, ಈಗ ಎರಡು ದಿನವಾಯ್ತು ನನ್ನ ಮೊಬೈಲ್ ಬೇರೆ ಮನೆಯಲ್ಲಿದೆ ಅವರು ಏನಾಯ್ತೋ ಅನ್ನೋ ಭಯದಲ್ಲಿರುತ್ತಾರೆ, ಒಮ್ಮೆ ಊರಿಗೆ ಕರೆಮಾಡು ಎಂದೆ, ಆಯ್ತು ಎಂದು ಗೆಳತಿ ಕರೆಮಾಡಿಕೊಟ್ಟಳು, ಅಮ್ಮನಿಗೆ ಏನೂ ಹೇಳಬೇಡ, ನಾವೇ ಎಲ್ಲವನ್ನೂ ಬಗಹರಿಸೋಣವೆಂದಳು, ನಾನೂ ಒಪ್ಪಿದೆ. ಅಮ್ಮನಿಗೆ ನನಗೆ ಜ್ವರ ಬಂದಿದೆ, ಹಾಗಾಗಿ ನಿನ್ನೊಂದಿಗೆ ಮಾತನಾಡಲು ನಿನ್ನೆ ಆಗಲಿಲ್ಲವೆಂದೆ, ಓ ಹೌದಾ ನಿನ್ನ ಮೊಬೈಲ್ ಸ್ವಚ್ ಆಫ್ ಅಂತಾ ಬರುತ್ತಿತ್ತು ನಿನ್ನೆಯಿಂದ ಅಂದರು, ಓಹ್ ಕುಮಾರ್ ಒಂದೇ ಸಮನೇ ಕರೆಮಾಡುತ್ತಿದ್ದ, ಅದರಿಂದ ಬ್ಯಾಟರಿ ಬೇಗನೆ ಮುಗಿದುಹೋಗಿ ಮೊಬೈಲ್ ಬೇಗನೇ ಸ್ವಿಚ್ ಆಫ್ ಆಗಿದೆ ಎಂದೆಣಿಸಿದೆ ಮನದಲ್ಲಿ, ಅಮ್ಮ ಇತ್ತ ಆಯ್ತು ಮಗಳೇ ವಿಶ್ರಾಂತಿ ಪಡೆದುಕೋ ನಾನು ರಾತ್ರಿ ಫೋನ್ ಮಾಡುವೆ ಎಂದಳು. ಬೇಗನೇ ಮಾತು ಮುಗಿಸಿ ಗೆಳತಿಗೆ ಕೇಳಿದೆ ನಾನು ಕುಮಾರನಿಂದ ಮುಕ್ತಿ ಪಡೆಯುವುದು ಹೇಗೆ, ನಾನೀಗ ಅವನ ವಂಚನೆಯಲ್ಲಿ ಸಿಲುಕಿರುವೆ ಏನು ಮಾಡೋದು ಎಂದು ಮತ್ತೆ ರೋಧಿಸತೊಡಗಿದೆ, ಅದಕ್ಕೆ ಗೆಳತಿ ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇರುತ್ತದೆ ಕೊಂಚ ಸಾವಧಾನ ಪಡೆ, ರೋಧಿಸುವುದು ನಿಲ್ಲಿಸು, ಮೊದಲು ಆಸ್ಪತ್ರೆಯಿಂದ ಮನೆಗೆ ಹೋಗೋಣ, ನೀನು ಧೈರ್ಯದಿಂದಿರು ಎಂದಳು, ಅದು ನನಗೆ ಸಾಧ್ಯವೇ ಎನಿಸಿತು. 
        ಮನೆಗೆ ಬಂದು ಮೊಬೈಲ್ ರಿಚಾರ್ಜ ಮಾಡಿ ಆನ್ ಮಾಡಿದೆ, ಕೈ ನಡುಗುತ್ತಿತ್ತು, ಒಂದರ ಮೇಲೊಂದು ವಾಟ್ಸ್ ಆಪ್ ಮೆಸೆಜ್ಗಳು, ಎಲ್ಲಾ ಕುಮಾರ್ ಕಳಿಸಿದ್ದು, ಮತ್ತೇನು ಕಳಿಸಿದ್ನೋ ಎಂದು ಭಯದಲ್ಲಿ ನೋಡಿದೆ, ನೀನು ನನಗೆ ಬೇಗನೇ ಕರೆಮಾಡಿ ನಾನು ಹೇಳಿದಂತೆ ನೀನು ಮಾಡಬೇಕು, ಇಲ್ಲದಿದ್ದರೆ ಇನ್ನು 24 ಗಂಟೆಯೊಳಗಾಗಿ ಎಲ್ಲವನ್ನು ಬಹಿರಂಗ ಪಡಿಸುವೆ, ನೆನಪಿಟ್ಟುಕೋ ನಿನ್ನ ಜೊತೆಯಲ್ಲಿ ನಿನ್ನ ಮನೆಯವರ ಮಾನವನ್ನು ಹರಾಜ್ ಹಾಕುವೆ, ಎಂದು ಕಡಕ್ ಆಗಿ ಮೆಸೆಜ್ ಮಾಡಿದ್ದ, ಓದಿ ಬೆವರಿಹೋದೆ, ಗೆಳತಿ ಅದನ್ನು ನೋಡಿದಳು, ಈಗ ಧೈರ್ಯದಿಂದ ನಾನು ಹೇಳಿದಂತೆ ಕೇಳು ಎಂದಳು, ಏನೆಂದೆ, ಆಕೆ ವಿಷಯವನ್ನು ನನಗೆ ಬೇಕಾದ ಕೆಲವೇ ಸ್ನೇಹಿತರಿಗೆ ಹೇಳಿ ಅವರ ಸಹಾಯ ಪಡೆಯೋಣವೆಂದಳು, ನಾನು ಬೇಡವೇ ಬೇಡ ಎಂದೆ, ಹೀಗೆ ಬೇಕಾದ್ರು ಸಾಯ್ತೇನೆ, ನೀನು ಯಾರಿಗೂ ಹೇಳಬೇಡ, ಮತ್ತೆ ಇನ್ನೊಂದಾಗುತ್ತೆ, ಪೋಲಿಸ್ ಕೂಡ ಬೇಡ, ಆತ ಗೊತ್ತಾದ್ರೆ ಎಲ್ಲ ಬಹಿರಂಗ ಪಡಿಸಿದ್ರೆ ನಮ್ಮಮ್ಮ ಬದುಕುಳಿಯಲ್ಲ, ಬೇಡ ಎಂದು ಅಳತೊಡಗಿದೆ. ಆ ಕಡೆಯಿಂದ ಮೊಬೈಲ್ ರಿಂಗ್ ಆಗ ತೊಡಗಿತು, ಕುಮಾರ್ ಫೋನ್ ಮಾಡುತ್ತಿದ್ದಾನೆ, ಏನು ಮಾಡುವುದೆಂದು ಹೆದರಿ ಗೆಳತಿಯನ್ನು ನೋಡಿದೆ, ಆಕೆ ಧೈರ್ಯದಿಂದ ಕಾಲ್ ತೆಗೆದುಕೋ, ಏನು ಹೇಳುತ್ತಾನೊ ಮೊದಲು ಕೇಳು, ಹೆದರಿದಂತೆ ನಟಿಸಬೇಡ, ನೀನು ಹೆದರಿದಂತೆ ಕಂಡರೆ ಆತ ಇನ್ನಷ್ಟು ಗಟ್ಟಿಯಾಗುತ್ತಾನೆಂದಳು, ಅವಳ ಮಾತಂತೆ ಕರೆ ತೆಗೆದುಕೊಂಡೆ, ಆ ಕಡೆಯಿಂದ ಒಮ್ಮೆ ಗಹ ಗಹಿಸಿ ನಗುತ್ತಾ ಕುಮಾರ್ ಏನು ಸುಮಬಾಲೆ ಹೇಗಿರುವೆ, ನಾನು ನಿನ್ನ ವೀಡಿಯೋವನ್ನೇ ನೋಡುತ್ತಿರುವೆ, ಹಗಲಿರುಳು, ಎಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿದರೆ ನಿನ್ನ ಬಿಡುತ್ತೇನೆಂದುಕೊಂಡೆಯೋ, ನೆನಪಿರಲಿ, ನೀನು ನಾ ಹೇಳಿದಂತೆ ಮಾಡದಿದ್ದರೆ ನಿನಗೆ ಉಳಿದಿರುವುದು ಇದೊಂದು ರಾತ್ರಿ ಮಾತ್ರ, ನಾಳೆ ಬೆಳಿಗ್ಗೆಯೇ ಎಲ್ಲವೂ ಎಲ್ಲೆಡೆ ಬಹಿರಂಗ ಎಂದು ಗದರಿದ, ನಾನು ಕುಮಾರ್‍ಗೆ ನೀನು ಹೇಳಿದಂತೆಯೇ ಮಾಡುವೆ ಏನು ಎಂದೆ, ಆತ ಒಂದು ವಿಳಾಸವನ್ನು ನಿನ್ನ ಮೊಬೈಲ್ ಗೆ ಮೆಸೇಜ್ ಮಾಡುವೆ, ಅಲ್ಲಿಗೆ ನೀನೊಬ್ಬಳೇ ಬರಬೇಕು, ಯಾರಿಗೂ ನೀನು ಹೇಳಬಾರದು, ಅಲ್ಲಿ ಹೋಗಿ ಅಲ್ಲಿರುವವನೊಂದಿಗೆ ನೀನು ಎಲ್ಲಾ ರೀತಿಯಿಂದ ಸಹಕರಿಸಬೇಕು, ನಿನಗೆ ಉಳಿದಿರುವ ಅವಕಾಶ ಇದೊಂದು ರಾತ್ರಿ ಮಾತ್ರ, ನಿನಗೆ ಯೋಚಿಸಿ ಕೂರಲು ನಾನು ಸಮಯ ಕೊಡಲ್ಲ, ನಿನಗೆ ಒಪ್ಪಿಗೆ ತಾನೆ, ಹೇಳು ಬೇಗ  ಹೇಳು ಎಂದ, ಗೆಳತಿಯೂ ಪಕ್ಕದಲ್ಲೇ ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದಳು, ಒಪ್ಪಿಗೆ ಸೂಚಿಸು ಎಂದು ಸಂಜ್ಞೆಮಾಡಿದಳು, ನಾನು ಒಪ್ಪಿಗೆ ಎಂದೆ. ಆತ ಮತ್ತೊಮ್ಮೆ ಜೋರಾಗಿ ನಗತೊಡಗಿದ, ನಾನು ನಿಧಾನವಾಗಿ ಮತ್ತೆ ಮತ್ತೆ ಬೆವರತೊಡಗಿದೆ. ನಾನು ಯಾವುದನ್ನೂ ಯೋಚಿಸುವ ಶಕ್ತಿ ಕಳೆದುಕೊಂಡಿದ್ದೆ, ಮತ್ತೆ ಈ ಕಡೆ ಅಪ್ಪಾಜಿಗೆ ಕರೆಮಾಡಿದೆ, ಮತ್ತೆ ಮೊದಲಿನಂತೆ ನಾಟ್ ರೀಚೇಬಲ್ ಆಗಿತ್ತು, ಗೆಳತಿ ಪ್ರಶ್ನೆ ಕೇಳಿದಳು, ಅಪ್ಪಾಜಿ ಮನೆಯಲ್ಲಿ ಸುನೀತಾ ಮತ್ತು ಅಪ್ಪಾಜಿ ಇಬ್ಬರಲ್ಲಿ ಒಬ್ಬರಿಗೆ  ತಿಳಿಯದಂತೆ ಇದು ನಡೆಯಲು ಸಾಧ್ಯವೇ ಎಂದಳು, ನನಗೂ ಏನೋ ಅನುಮಾನ ಕಾಡತೊಡಗಿತು.
      ಅವಳು ತನ್ನ ಆತ್ಮಿಯ ಕೆಲವರಲ್ಲಿ ಮೊದಲು ಸುನೀತಾ ಕೆಲಸ ಮಾಡುವ ಕಾಲೇಜ್‍ನ ಬಗ್ಗೆ ಕೆಲವರೊಂದಿಗೆ ವಿಚಾರಿಸಿದಳು, ಆದರೆ ಆ ಕಾಲೇಜ್‍ನಲ್ಲಿ ಆ ಹೆಸರಿನ ಯಾವ ಲೆಕ್ಚರ್ ಕೂಡ ಇಲ್ಲವೆಂದು ತಿಳಿದು ಬಂತು, ನಂತರ ವರದರಾಜ್ ಬಗ್ಗೆ ಅವರು ಹೇಳಿಕೊಳ್ಳುತಿದ್ದ ಸಂಘಟನೆಗಳಲ್ಲಿ ಅವರು ನಿಮ್ಮ ಪದಾಧಿಕಾರಿಗಳೇ ಎಂದು ಕೆಲವರ ಮೂಲಕ ವಿಚಾರಿಸಿದಳು, ಅಂತಹ ವ್ಯಕ್ತಿ ಯಾರೂ ಇಲ್ಲವೆಂದು ಉತ್ತರ ಬಂತು, ಈಗ ಅನುಮಾನ ಜೋರಾಗತೊಡಗಿತು. ನಾನು ಕೆಲವರಲ್ಲಿ ಈಗ ವಿಚಾರಿಸಿ ನೋಡಿದೆ, ಎಲ್ಲರು ಅವರು ನಿಮ್ಮಿಂದ ನಮಗೆ ಪರಿಚಯವೆಂದರು, ಹಾಗಿದ್ದರೆ ವರದರಾಜ್ ಹೇಳಿದ್ದೆಲ್ಲಾ ಸುಳ್ಳೇ, ಮಾತು ಮಾತಿಗೂ ಬಾಯಿ ತುಂಬಾ ಮಗಳೇ ಎನ್ನುವ ಅವರು ನನಗೆ ದ್ರೋಹ ಮಾಡಲು ಸಾಧ್ಯವೇ, ಈಗ ನಾನು ಮೋಸಹೋದೆನೆಂದು ಕಚಿತವಾಯಿತು. ಈಗ ಮತ್ತೆ ಕುಮಾರ್ ಫೋನ್ ಮಾಡಿದ, ಆ ಕಡೆ ಕಾಯುತಿದ್ದಾರೆ, ನೀನು ಹೊರಟಿದ್ದೀಯ ಎಂದ, ನಾನು ಹೌದು ಈಗ ಹೊರಟೆ ಎಂದೆ. ಗೆಳತಿ ನನ್ನನ್ನು ಅವಳ ಗಾಡಿಯ ಮೇಲೆ ಕೂರಿಸಿಕೊಂಡು ಇನ್ನು ತಡಮಾಡುವುದು ಬೇಡವೆಂದು ಹೊರಟಳು.