ಕಾರ್ಯಕ್ರಮ ಮುಗಿದೊಡನೆ ಎಲ್ಲರೂ ಒಂದೆಡೆ ಕೂತು ಊಟಮಾಡಿದೆವು, ಏನೋ ಹೊಸ ಆತ್ಮೀಯತೆ, ಹೊಸ ಜಗದ ಪರಿಚಯ, ಮತ್ತೆ ಮತ್ತೆ ಮನಕ್ಕೆ ಪುಳಕವೆನಿಸುವ ಘಳಿಗೆಗಳು ದಿನದಿಂದ ದಿನಕ್ಕೆ ಬಾಳಲ್ಲಿ ಮೂಡತೊಡಗಿತು, ಹೊಸ ಸ್ನೇಹದ ಪರ್ವ ಗಟ್ಟಿಯಾಗತೊಡಗಿತು. ನನಗೆ ಕುಮಾರ್ ಇತ್ತೀಚೆಗೆ ತುಂಬಾ ಅತ್ಮೀಯರೆನಿಸಿದರು, ಅವರಿಗೂ ಹಿರಿಯರೆಂದರೆ ತುಂಬಾ ಗೌರವ. ಅವರ ಆ ನಡೆ ನನ್ನನ್ನು ಅವರತ್ತ ಇನ್ನಷ್ಟು ಆಕರ್ಷಿತಗೊಳಿಸಿತು. ಹಾಗೆಯೇ ಇನ್ನೂ ಅನೇಕ ಸ್ನೇಹಿತರನ್ನು ಹೆಚ್ಚಿಸಿಕೊಂಡೆ, ನನ್ನ ಸ್ನೇಹಿತೆಗೂ ಎಲ್ಲವನ್ನೂ ಹೇಳಿದೆ, ಆಕೆಯು ಸಂತಪಟ್ಟಳು, ಜೊತೆಗೆ ಎಚ್ಚರಿಕೆಯ ನುಡಿಗಳನ್ನು ಹೇಳಿದಳು, ಅತೀ ಆತ್ಮೀಯತೆ ಹಿತವಲ್ಲ, ಅತೀಯಾಗಿ ಖಾಸಗಿ ವಿಚಾರಗಳನ್ನು ಯಾರಲ್ಲೂ ಹೇಳಿಕೊಳ್ಳಬೇಡ ಜಾಗ್ರತೆ ಎಂದಳು, ಅವಳ ಸಂಬಂಧಿಯೋರ್ವರಿಗೆ ಅನಾರೋಗ್ಯದ ಕಾರಣ ತುರ್ತಾಗಿ ಒಂದು ದಿನ ಸ್ನೇಹಿತೆ ಊರಿಗೆ ಹೊರಟಳು, ಆಗ ನಾನು ಮನೆಯಲ್ಲಿ ಒಬ್ಬಳೇ ಇದ್ದೆ. ಬೇಸರವೆನಿಸತೊಡಗಿತು, ಹಾಗೆಯೇ ಅಪ್ಪಾಜಿಗೆ ಕರೆ ಮಾಡಿದೆ, ಮಾತನಾಡುತ್ತಾ ಗೆಳತಿ ಊರಿಗೆ ಹೋಗಿದ್ದಾಳೆಂದೆ, ಅವರು ನಮ್ಮ ಮನೆಗೆ ಬಾ, ಇಲ್ಲಿ ಸುನಿತಾ ಕೂಡ ಇದ್ದಾಳೆ, ಅಲ್ಲಿ ಒಬ್ಬಳೇ ಏಕೆ ಇರುವೆ ಎಂದರು. ಅವರ ಮಾತಿನಂತೆ ನನಗೂ ಹಿತವೆನಿಸಿ ಒಂದೆರಡು ದಿನ ಸ್ನೇಹಿತೆ ಬರುವವರೆಗೂ ಅವರ ಮನೆಗೆ ಹೋದೆ. ಅಲ್ಲಿ ಅವರ ಮನೆಯಲ್ಲಿ ನಾನಿದ್ದಾಗ ಆಗಾಗ್ಗೆ ಕುಮಾರ್ ಬರುತ್ತಿದ್ದರು. ಭಾನುವಾರ ಹಾಗೆಯೇ ಸುನಿತಾ, ಕುಮಾರ್ರೊಂದಿಗೆ ಹಾಗೆಯೇ ಒಂದು ಸುತ್ತು ಹಾಕಿ ಬಂದೆ. ಮೂರು ದಿನಗಳ ನಂತರ ಗೆಳತಿ ಮನೆಗೆ ಬಂದೊಡನೆ ನಾನು ಹೋದೆ. ಗೆಳತಿಯೊಂದಿಗೆ ಮನೆಗೆ ಬಂದು ಎಲ್ಲವನ್ನೂ ಹೇಳುತ್ತಾ ಕುಳಿತೆ. ಆಗ ಒಮ್ಮೆ ಅವಳು ಚಕಿತಳಾಗಿ ನಿನ್ನಪ್ಪ ನಿಜವಾಗ್ಲೂ ಅದ್ಭುತ, ನಿನಗೆ ಅವರ ಪರಿಚಯ ಸಿಕ್ಕಿದ್ದು ತುಂಬಾ ಒಳ್ಳೆಯದಾಯ್ತು, ಇಲ್ಲದೇ ಹೋಗಿದ್ದಲ್ಲಿ ನನಗೆಷ್ಟು ಕಷ್ಟವಿತ್ತೋ ಎಂದು ನನ್ನ ಕಿವಿ ಹಿಂಡಿದಳು, ಅದೂ ಸತ್ಯವು ಕೂಡ ಎನಿಸಿತು.
ಒಂದೆರಡು ದಿನಗಳ ನಂತರ ಕುಮಾರ್ ನನಗೆ ಮೆಸೇಜ್ ಮಾಡಿ ನಿಮ್ಮ ಮೇಲೆ ಒಂದು ಶೃಂಗಾರ ಕವಿತೆ ಬರೆದಿರುವೆ ಎಂದರು, ಹೌದೇ ಏನದು ಎಂದೆ, ಕೂಡಲೇ ಅವರೊಂದು ಕವಿತೆಯನ್ನು ಕಳುಹಿಸಿದರು, ಓದಿದೆ;
ನೀನಿಲ್ಲದೇ ರಾತ್ರಿ ಮುಗಿಯುವುದೆ ಸುಮಬಾಲೆ
ನೀನಿಲ್ಲದೇ ಈ ತನುವು ತಣಿವುದೇನು ರತಿಯೇ..ಎಂದು ಕವಿತೆ ಸಾಗಿತ್ತು, ದೇಹದ ಉಬ್ಬು ತಗ್ಗುಗಳ ವರ್ಣನೆ ಮಿತಿಮೀರಿತ್ತು, ಪ್ರತೀ ಸಾಲಲ್ಲು ಸುಮಾ ಎಂದು ನನ್ನ ಹೆಸರಿನ ಬಳಕೆ ನನಗೆ ಮುಜುಗರ, ಅಸಹ್ಯ ಮತ್ತು ಕಸಿವಿಸಿಯಾಯಿತು, ಹೆಣ್ಣಿನ ದೇಹದ ವರ್ಣನೆ, ಮಿಲನಕ್ಕೆ ಹಾತೊರೆಯುವುದು ಅದೆಂತಾ ಪ್ರೀತಿ, ಅದೆಂತ ಕವಿತೆ, ಇದೆಂತ ಹೊಲಸು, ಇದೂ ಸಾಹಿತ್ಯವೇ, ಕಂಡಿತಾ ಅಲ್ಲ, ಕಾಮೋದ್ರೇಕಿಸುವ ಹೊಲಸು ಮಾತು, ಎನ್ನುತ್ತಾ ಏನನ್ನು ಉತ್ತರಿಸದೇ ಸುಮ್ಮನಾದೆ. ಆದರೆ ಕುಮಾರ್ ಮೆಸೇಜ್ ಮಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ, ನಿರಂತ ಮಾಡುತ್ತಲೇ ಇದ್ದ, ನನಗೆ ಎದೆ ಬಡಿತ ಜೋರಾಗತೊಡಗಿತು, ಇದೇನೆಂದು ಅರಿವಾಗದೇ ಗೆಳತಿ ಬರುವುದನ್ನೇ ಕಾಯ್ದು ಕುಳಿತೆ. ಆದರೆ ಇಂದು ಗೆಳತಿ ಬರುವುದು ಮಾತ್ರವೇಕೋ ತಡವಾಗತೊಡಗಿತು. ಏನೇ ಆಗಲಿ ಎಂದು ಕೂಡಲೇ ಸುನಿತಾಳಿಗೆ ಮೆಸೇಜ್ ಮಾಡಿದೆ, ಈ ಕವಿತೆಯ ಅರ್ಥವೇನು ಹೇಳಿ ಎಂದೆ, ಅವರು ಉತ್ತರಿಸಲಿಲ್ಲ, ಅವರು ಏನೋ ಒತ್ತಡದಲ್ಲಿರಬಹುದೆಂದು ಸುಮ್ಮನಾದೆ. ಮೆಸೇಜ್ ಮಾಡುವುದೇಕೆಂದು ಸುನಿತಾರಿಗೆ ಕರೆ ಮಾಡಿದೆ, ಹೀಗೆ ಕುಮಾರ್ ನನ್ನ ಮೇಲೊಂದು ಕವಿತೆ ಬರೆದಿದ್ದಾರಂತೆ ಈ ರೀತಿ ನೋಡಿ ಎಂದು ಹೇಳಿದೆ, ಅವರು ಜೋರಾಗಿ ನಕ್ಕರು, ಇದೆಲ್ಲಾ ಇಲ್ಲಿ ಮಾಮೂಲ ಅದನ್ನು ನೆಗ್ಲೆಟ್ ಮಾಡಿ, ಸುಮ್ಮನೆ ಡಿಲಿಟ್ ಮಾಡಿ ಸುಮ್ಮನಾಗಿ, ಜಾಸ್ತಿ ಯೋಚಿಸಿ ತಲೆ ಹಾಳುಮಾಡಿಕೊಳ್ಳಬೇಡಿ ಎಂದರು. ಇದೇ ಚರ್ಚಿಸುತ್ತಾ ಹೊದಲ್ಲಿ ನಿಮಗೇ ಬೇಸರ ಎಂದರು, ಆದರೂ ಆತ ಒಂದು ಹೆಣ್ಣು, ಪರಸ್ತ್ರೀಯ ಬಗ್ಗೆ ಇಷ್ಟು ಹಗುರವಾಗಿ ಕೀಳಾಗಿ ವರ್ಣಿಸುವುದು ತಪ್ಪಲ್ಲವೇ ಎಂದೆ, ಅದಕ್ಕೆ ಹೌದು ನೀವೇನು ಮಾಡಬಲ್ಲಿರಿ, ಆತನ ಮೇಲೆ ಕೇಸು ದಾಖಲಿ ಓಡಾಡುತ್ತೀರೋ, ಈ ಗಲಾಟೆ ನಿಮ್ಮ ಮನೆಯವರಿಗೂ ಇಡೀ ಊರಿಗೂ ಗೊತ್ತಾಗುತ್ತದೆ ಅದು ಬೇಕೋ ಎಂದರು, ಒಮ್ಮೆಲೆ ಮೈ ನಡುಗಿತು, ಇನ್ನೂ ನನಗೂ ಮದುವೆಯಾಗಿಲ್ಲ, ನಾನು ಸರಿಯಿಲ್ಲ ಎಂದರೆ ನಾಳೆ ನನ್ನ ತಂಗಿಯರಿಗೂ ಮದುವೆ ಮಾಡಿಸುವುದು ಕಷ್ಟ, ಇದೆಲ್ಲಾ ಜಗಳ ರೋಧನೆ ಏಕೆ, ಸುನಿತಾ ಹೇಳಿದಂತೆ ಪಾಲಿಗೆ ಬಂದದ್ದು ಕರ್ಮವೆಂದು ಸುಮ್ಮನಾಗವುದೇ ಒಳಿತೆಂದುಕೊಂಡೆ, ಮನೆಯಲ್ಲಿ ಅಪ್ಪಾಜಿ ಇದ್ದಾರ ಎಂದೆ, ಅದಕ್ಕವಳು ಇಲ್ಲ, ಹಳ್ಳಿಗೆ ಹೋದವರು ಬಂದಿಲ್ಲವೆಂದಳು, ಮೊನ್ನೆ ಕುಮಾರ್ ಮನೆಗೆ ಬರಲು ನೀವೇ ಆತನಿಗೆ ಕರೆಮಾಡಿ ಹೇಳಿದ್ದಂತೆ ಅದಕ್ಕಾಗಿಯೇ ಆತ ಬಂದಿದ್ದ ಎಂದರು, ನನಗೆ ಮತ್ತೆ ಭಯವಾಯಿತು, ನಾನಂತೂ ಹೇಳಿಲ್ಲ, ಇದೆಲ್ಲಾ ಕುಮಾರ್ ಮಾಡಿರುವ ವ್ಯವಸ್ತಿತ ಪಿತೂರಿ, ಆದರೂ ಅಪ್ಪಾಜಿಯವರ ಮನೆಯಲ್ಲಿ ವೀಡಿಯೋ ಮಾಡಲು ಈತನಿಗೆ ಯಾರಾದರೂ ಸಹಕರಿಸಿರಲೇ ಬೇಕಲ್ಲವೇ ಎಂಬ ಅನುಮಾನವಂತೂ ಗಟ್ಟಿಯಾಯಿತು. ಕರೆ ಕಟ್ ಮಾಡಿ ಮತ್ತೆ ಗೆಳತಿಗಾಗಿ ಕಾದು ಕುಳಿತೆ.
ಏನೋ ತಪ್ಪಾಯಿತೇ ಎಂದು ಯೋಚಿಸುತ್ತಾ ಕುಳಿತೆ. ಅಪ್ಪಾಜಿಗೆ ಕರೆ ಮಾಡಿದೆ ಅವರು ನಾಟ್ ರೀಚೇಬಲ್ ಆಗಿದ್ದರು, ನಿನ್ನೆ ಊರಿಗೆ ಹೋಗುವೆ ಎಂದಿದ್ದರು, ಇನ್ನೂ ಬಂದಿಲ್ಲವೇನೋ, ಹಾಗಾಗಿ ಮೊಬೈಲ್ ಸಿಗ್ನಲ್ ಸಿಗುತ್ತಲ್ಲವೇನೋ ಎಂದು ಅವರಿಗೆ ಪುನಃ ಪುನಃ ಕಾಲ್ ಮಾಡಲು ಪ್ರಯತ್ನಿಸುತ್ತಾ ಹಾಗೆಯೇ ಹಾಸಿಗೆ ಮೇಲೆ ಒರಗಿದೆ. ಕಷ್ಟದಲ್ಲಿರುವಾಗಲೇ ಅಪ್ಪಾಜಿಗೆ ಕರೆಹೋಗುತ್ತಿಲ್ಲ, ಎಲ್ಲಾ ವಿಧಿ ಎಂದು ಗೊಣಗುವುದಾಯಿತು. ಆದರೆ ಇತ್ತ ಕುಮಾರ್ನಿಂದ ಮೆಸೇಜ್ ಮಾತ್ರ ನಿರಂತರವಾಗಿ ಬರುತ್ತಿತ್ತು, ನಾನು ಉತ್ತರಿಸಲಿಲ್ಲ, ಮೊಬೈಲ್ ರಿಂಗ್ ಆಗತೊಡಗಿತು, ನೋಡಿದೆ ಕುಮಾರ್ ಕರೆಮಾಡಿದ್ದ, ಮನದಲ್ಲಿ ಸಿಟ್ಟು ಕುದಿಯುತ್ತಿತ್ತು, ಒಂದೇ ಸಮನೇ ಸಿಟ್ಟಿಗೆ ಬೆವರು ಹಣೆ ಮೇಲೆ ಮೂಡತೊಡಗಿತು, ಫೋನ್ ತೆಗೆದವಳೇ ಅವನಿಗೆ ಇದು ಸರಿಯೇ ಏನಿದು ಎಂದೆ, ನಿನ್ನಂದದ ವರ್ಣನೆ, ನೀನಿಲ್ಲದೇ ಈ ತನುವು ತಣಿವುದೇನು ಹೇಳು ಸುಮಾ ಎಂದ, ನನ್ನ ಹೆಸರು ಹೇಳಬೇಡ ಅದೆಂತಹ ಕೀಳು ಬಾಷೆಯಲ್ಲಿ ಬರೆದಿದ್ದೀಯ, ನೀನು ನನ್ನನ್ನು ಅದ್ಯಾವ ದೃಷ್ಟಿಯಲ್ಲಿ ನೋಡಿದ್ದೀಯ, ನಿನಗಾರು ಅಕ್ಕ ತಂಗಿ ಇಲ್ವೇ ಎಂದೆ. ನಿನ್ನ ಬಗ್ಗೆ ನನಗಿದ್ದ ಗೌರವವನ್ನೆಲ್ಲಾ ನಾಶಮಾಡಿದೆ, ಏನಿದು..? ಈ ರೀತಿ ನೀ ಮಾಡಿದರೆ ನೆಟ್ಟಗಿರುವುದಿಲ್ಲ, ನಿನಗೆ ಸರಿಯಾಗಿ ಬುದ್ಧಿ ಕಲಿಸುವೆ ಎಂದೆ, ಆತ ಒಮ್ಮೆ ಜೋರಾಗಿ ನಗತೊಡಗಿದ, ನನಗೆ ಸಿಟ್ಟು ಇನ್ನಷ್ಟು ಜೋರಾಯಿತು, ಆತನಿಗೆ ಮನ ಬಂದಂತೆ ಬಯ್ದೆ, ಆತ ಇದಕ್ಕೆಲ್ಲಾ ಕಾರಣ ಏನು ಗೊತ್ತಾ ಅಂದ, ಅದು ನೀನೇ, ನಿನ್ನ ಅಂದ, ಬೇಕಾದರೆ ಈ ವೀಡಿಯೋ ನೋಡು ಈಗ ಕಳಿಸಿದ್ದೇನೆ ಎಂದ, ಹೆದರುತ್ತಾ ವೀಡಿಯೋ ವಾಟ್ಸ್ಆಪ್ನಿಂದ ಡೌನ್ಲೋಡ್ ಮಾಡಿದೆ, ಈಗ ಮಾತ್ರ ಕೈಕಾಲು ನಡುಗಲಾರಂಭಿಸಿತು, ದೇಹದ ಶಕ್ತಿ ಉರುಳಿ ಹೋಯಿತು, ಒಮ್ಮೆಲೆ ಕುಸಿದು ಕುಳಿತೆ, ನನ್ನ ಬೆತ್ತಲೆ ಚಿತ್ರ, ನಾನು ಸ್ನಾನ ಮಾಡುವಾಗ ಮತ್ತು ಬೆಡ್ ರೂಂನಲ್ಲಿ ಬಟ್ಟೆ ಬದಲಿಸುವ ವೀಡೀಯೋ, ನೋಡುತ್ತಿದ್ದಂತೆ ಬೆವರು ಹನಿಗಳು ಸುರಿಯಲಾರಂಭಿಸಿದವು, ದೇಹವು ನಡುಗತೊಡಗಿತು, ಏನೂ ಮಾಡಬೇಕೋ ತಿಳಿಯುತ್ತಿಲ್ಲ, ಇದೆಲ್ಲಾ ಅಪ್ಪಾಜಿ ಮನೆಯಲ್ಲಿ ಉಳಿದಾಗ ಯಾರೋ ಕದ್ದು ಸೆರೆಹಿಡಿದದ್ದು, ನಡುಗುವ ಮೈಯಲ್ಲಿ ಕಣ್ಣನ್ನು ಬಿಗಿಯಾಗಿ ಹಿಡಿದು ಕುಳಿತೆ, ಆದರೆ ಮೊಬೈಲ್ ಸದ್ದು ಮಾಡುತ್ತಲೇ ಇತ್ತು, ಕುಮಾರ್ ಕರೆಮಾಡುತ್ತಲೇ ಇದ್ದ. ಅಷ್ಟರಲ್ಲಿ ಯಾರೋ ಜೋರಾಗಿ ಬಾಗಿಲು ದೂಡಿದಂತೆನಿಸಿತು, ಒಮ್ಮೆಲೆ ಬೆಚ್ಚಿಬಿದ್ದೆ..
..ಮುಂದುವರೆಯಲಿದೆ..