ನನ್ನ ಹೆಸರು ಸುಮ, ನಮ್ಮೂರು ಶಿವಮೊಗ್ಗ, ಸುಂದರ ಬದುಕೂ ಅನ್ನೋ ಆಸೆಯಲ್ಲಿ ಆಗಷ್ಟೇ ಪದವಿ ಮುಗಿಸಿದ್ದ ನಾನು ಉದ್ಯೋಗವರಸಿ ಮಾಯ ನಗರ ಬೆಂಗಳೂರು ಸೇರಿದೆ. ನನ್ನ ಕುಟುಂಬ ಬಡ ಕುಟುಂಬ. ತಂದೆ ನಾನು ತೀರ ಚಿಕ್ಕವಳಿದ್ದಾಗಲೇ ತೀರಿ ಹೋಗಿದ್ದರು, ನನ್ನ ತಾಯಿ ಮತ್ತು ಎರಡು ಜನ ತಂಗಿಯರು ಸೇರಿ ನಾವು ಒಟ್ಟು ನಾಲ್ಕು ಜನರ ಕುಟುಂಬ. ತಾಯಿ ಗಾರ್ಮೆಂಟ್ಸ್ ಕೆಲಸದಲ್ಲೇ ಮಕ್ಕಳನ್ನು ಕಷ್ಟಪಟ್ಟು ಓದಿಸುತಿದ್ದಳು, ಬಿಡುವು ಮಾಡಿಕೊಂಡು ಮನೆಯಲ್ಲೂ ಟೈಲರಿಂಗ್ ಮಾಡುತ್ತಿದ್ದಳು, ನಾನೂ ಕೂಡ ಬಿಡುವಿದ್ದಾಗ ತಾಯಿಗೆ ಕೊಂಚ ಸಹಕರಿಸುತ್ತಿದ್ದೆ, ನಾನೇ ಮನೆಗೆ ಹಿರಿಯ ಮಗಳಾದ್ದರಿಂದ ನನಗೆ ಸಹಜ ಜವಾಬ್ದಾರಿ. ಬಡ ಕುಟುಂಬವನ್ನು ಬಡತನದಿಂದ ಪಾರು ಮಾಡಲು ಹಠ ಹಿಡಿದು ದುಡಿಯಬೇಕೆಂಬ ಹಂಬಲದಿಂದ ಬದುಕುವವಳು. ಏನೇ ಆದರೂ ವಯಸ್ಸಾದ ತಾಯಿಯ ಭಾರವನ್ನು ಕೆಳಗಿಳಿಸಬೇಕೆಂಬ ಛಲವಂತೂ ಕಂಡಿತಾ ಇತ್ತು, ಉಳಿದ ನನ್ನ ಸಹೋದರಿಯರ ಮನದಲ್ಲೂ ಅದೇ ಆಸೆ ಇತ್ತು. ಆದರೆ ಅವರು ನನಗಿಂತ ಇನ್ನೂ ಕಿರಿಯರು, ಅವರಿನ್ನೂ ಓದಬೇಕು, ಆದಷ್ಟು ಚೆನ್ನಾಗಿ ಓದಬೇಕು, ಅದಕ್ಕೆ ಅವರು ಮತ್ತೆ ಅಮ್ಮನಿಗಾಗಿ ಅವಲಂಬಿಸುವುದು ಬೇಡ. ನಾನೇ ಆದಷ್ಟು ಅವರ ಜವಾಬ್ದಾರಿಯನ್ನು ಬೇಗನೇ ತೆಗೆದುಕೊಳ್ಳಬೇಕು, ಈ ಲೆಕ್ಕಾಚಾರದೊಂದಿಗೆ ಬೆಂಗಳೂರು ಸೇರಿದೆ. ಒಂದು ಸಾಧಾರಣ ಕೆಲಸವನ್ನು ಒಂದು ಪೇಪರ್ ಕಂಪನಿಯಲ್ಲಿ ಪಡೆದೆ, ನನ್ನ ಅರ್ಹತೆಗೆ ಅಷ್ಟು ಉತ್ತಮವಲ್ಲದಿದ್ದರೂ ದುಡಿವ ಮನಕ್ಕೆ, ನನ್ನ ಹುಮ್ಮಸ್ಸಿಗೆ ಸಹಕಾರಿಯಂತೂ ಆಯಿತು. ಬರಡಾದ ನಮ್ಮ ಕುಟುಂಬಕ್ಕೆ ವರದಾನವಂತೂ ಆಯಿತು, ಮನೆಯಲ್ಲಿ ಅಮ್ಮನಿಗೆ ಸ್ವಲ್ಪ ನಿರಾಳವೂ ಆಯಿತು. ನನ್ನೊಂದಿಗೆ ಅಮ್ಮ ಮಾತನಾಡುವಾಗಲೆಲ್ಲಾ ನಿನ್ನಂತೆಯೇ ನಿನ್ನ ಎರಡು ಜನ ತಂಗಿಯರು ಕೆಲಸ ಪಡೆದು ಎಲ್ಲರೂ ದುಡಿಯುವಂತಾದರೆ ನಿಮ್ಮ ತಂದೆಯ ಕನಸು ನನಸಾದಂತೆ, ಅವರಿಗೆ ಆತ್ಮ ಸಂತೃಪ್ತಿಹೊಂದಿದಂತೆ, ಹೀಗೆ ಏನೆಲ್ಲಾ ಅಮ್ಮನ ನುಡಿಗಳು, ಅವುಗಳೇ ಅವಳ ಬಾಳಿನ ಗುರಿಗಳು, ಅವಳದೇ ಏಕೆ.? ಮಕ್ಕಳಾದ ನಮ್ಮೆಲ್ಲರ ಗುರಿಗಳೂ ಹೌದು. ಇವುಗಳನ್ನು ನನಸು ಮಾಡಿಕೊಳ್ಳುವ ಛಲದಲ್ಲಿ ನಾವೆಲ್ಲರೂ ಬದುಕುತಿದ್ದೆವು.
ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಲು ನನಗೆ ಸಹಕರಿಸಿದ ಗೆಳತಿ ಒಂದು ದಿನ ಭಾನುವಾರ ನನಗೆ ಒಂದು ಪಾರ್ಟಿಗೆ ಕರೆದಳು, ಅದೆಲ್ಲಾ ಅವಳ ಫೇಸ್ಬುಕ್ ಸ್ನೇಹಿತರ ಕೂಟ, ಅದರಲ್ಲಿ ಹೆಚ್ಚಿನವರು ಅವಳಿಗೇ ಅತೀ ಆತ್ಮೀಯರು, ಅವಳೆಲ್ಲಾ ಆಗೂ ಹೋಗುಗಳಿಗೆ ಜೊತೆಯಾದವರು. ಸ್ನೇಹದ ಬೆಸುಗೆಯಲ್ಲಿ ಎಲ್ಲರೂ ಒಂದಾದವರು. ನನಗೆ ಆ ಪಾರ್ಟಿಯಲ್ಲಿ ಆಕೆ ಎಲ್ಲರನ್ನೂ ಪರಿಚಯಿಸಿದಳು, ಅಲ್ಲಿದ್ದ ಎಲ್ಲರೊಳಗಿನ ಆತ್ಮೀಯತೆ, ನಿರ್ಮಲ ಸ್ನೇಹ ನನಗೆ ತುಂಬಾ ಇಷ್ಟವಾಯಿತು. ದಿನವಿಡೀ ನಿಮಿಷದಂತೆ ಆ ದಿನ ಎಲ್ಲರೊಂದಿಗೆ ಕಳೆದೆ, ಬಹುದಿನಗಳ ನಂತರ ಮನದಲ್ಲಿ ಏನೋ ಉಲ್ಲಾಸದಲೆ ಬೀಸಿ ಮನವು ದಣಿವು ದೂರಾಗಿಸಿ ಕೊಂಚ ವಿರಮಿಸಿಕೊಂಡ ಅನುಭೂತಿ. ಎಲ್ಲವೂ ಸ್ನೇಹದ ಆ ಪಾರ್ಟಿಯ ಫಲ. ಆಗ ನನಗೂ ಫೇಸ್ಬುಕ್ ಅಕೌಂಟ್ ಬೇಕೆನಿಸಿತು, ಮನೆಗೆ ಬಂದವಳೇ ರಾತ್ರಿಯೇ ಕೂತು ಫೇಸ್ ಬುಕ್ ಅಕೌಂಟ್ ತೆರೆದೆ. ಪ್ರೀತಿಯಿಂದ ಎಲ್ಲರನ್ನೂ ಸ್ನೇಹಿತರನ್ನಾಗಿಸಿಕೊಂಡೆ, ಅನೇಕ ಜನ ಊರಿನ ಗೆಳೆಯರು, ಸಂಬಂಧಿಕರು, ಶಾಲಾ ಕಾಲೇಜಿನ ಸ್ನೇಹಿತರು ಆದಷ್ಟು ಜನ ಒಂದೇ ವೇದಿಕೆಯಲ್ಲಿ ಒಗ್ಗೂಡಿದಂತಾಯಿತು. ಅತ್ಮೀಯತೆ ಮತ್ತೆ ಗಟ್ಟಿಯಾಯಿತು, ಹಳೆ ನೆನಪುಗಳು ಹೊಸ ಬದುಕು ಎರಡರ ಸಾಂಗತ್ಯವು ಮನಕ್ಕೆ ಹೊಸ ಹುರುಪು ನೀಡಿತು. ದಿನಾ ಬೆಳಿಗ್ಗೆ ಗೆಳತಿಯೊಂದಿಗೆ ವಾಯುವಿಹಾರಕ್ಕೆ ಹೋದಾಗ ಪರಿಚಿತರಾದವರು, ಕೆಲಸ ಮಾಡುವ ಕಂಪನಿಯಲ್ಲಿ ಜೊತೆಯಾದವರು ಎಲ್ಲರೂ ಮೊಬೈಲ್ನಲ್ಲೇ ಇನ್ನೂ ಹತ್ತಿರವಾದೆವು, ಏನೇ ಬೇಕಿದ್ದರೂ ಉತ್ತರ ನೀಡುವರ ಸಂಖ್ಯೆಯು ಅಧಿಕವಾಯಿತು. ಯಾರಿಲ್ಲವೆಂಬ ಕೊರಗು ದೂರಾಗತೊಡಗಿತು, ಸ್ನೇಹ ಸಂಪಾದನೆಯೊಂದಿಗೆ ಬದುಕಲ್ಲಿ ಎಲ್ಲವನ್ನು ಸಾಧಿಸಬಲ್ಲೆನೆಂಬ ಹಠವು ಇನ್ನೂ ಗಟ್ಟಿಯಾಗತೊಡಗಿತು. ಈ ಧೈರ್ಯದಲ್ಲಿ ನನ್ನ ತಂಗಿಯರನ್ನು ಉತ್ತಮವಾಗಿ ಓದಿಸಿ ನನ್ನ ತಾಯಿಯನ್ನು ಸುಖವಾಗಿ ಬದುಕಲ್ಲಿ ನಡೆಸಬಲ್ಲೆನೆಂಬ ಕನಸು ಕಂಡಿತಾ ನನಸಾಗುತ್ತದೆಂದು ಎಣಿಸಿದೆ. ಮನೆಯಲ್ಲಿದ್ದವರಿಗೂ ಧೈರ್ಯದಿಂದ ಸಂತೈಸುವ ಮಟ್ಟಕ್ಕೆ ನಾ ಬೆಳೆದೆ, ಒಂದಂತೂ ಸತ್ಯ ನನ್ನ ಮನಸ್ಸೀಗ ಮೊದಲಿನಂತೆ ಬಾಡಿರಲಿಲ್ಲ, ಕೆಲಸದಲ್ಲಿ ನನಗಿದ್ದ ನೆಮ್ಮದಿಯು ನನ್ನ ಮನಸ್ಸನ್ನು ಗಟ್ಟಿಗೊಳಿಸಿತ್ತು, ಇದಕ್ಕೆ ನನಗೆ ದೊರೆತ ಹೊಸ ಸ್ನೇಹಿತ ವಲವೂ ಮುಖ್ಯವಾಗಿತ್ತು, ಇನ್ನೂ ನನಗಿಂತ ಚೆನ್ನಾಗಿ ನನ್ನ ಸಹೋದರಿಯರು ಓದಿದಲ್ಲಿ ಅವರಿಗೆ ನನಗಿಂತ ಉತ್ತಮ ಅವಕಾಶಗಳು ಸಿಗುತ್ತವೆ, ಅವರ ಮೇಲಿನ ಅಮ್ಮನ ಜವಾಬ್ದಾರಿಯು ಕಡಿಮೆಯಾಗುತ್ತದೆ, ಕೊರಗು ಕುಟುಂಬದಿಂದ ದೂರಾಗುತ್ತದೆಂದು ಆಶಾವಾದದಲ್ಲಿ ದಿನ ದೂಡುತ್ತಾ ಸಾಗುತ್ತಿದ್ದೆ.
ದಿನಗಳುರುಳಿದಂತೆ ವರ್ಷವೂ ಕಳೆಯಿತು, ತಂಗಿಯರು ಉತ್ತಮವಾಗಿ ಓದುತ್ತಿದ್ದರು, ಅದರಲ್ಲಿ ಒಬ್ಬಳು ಒಂದು ವರ್ಷ ಓದಿದಲ್ಲಿ ಬಿ.ಎಸ್ಸಿ ಮುಗಿಯುತ್ತದೆ, ಇನ್ನೊಬ್ಬಳು ಈಗ ಪಿ.ಯು.ಸಿ ಮುಗಿಸಿ ಬಿಕಾಂ ಸೇರಿದ್ದಾಳೆ. ಏನೇ ಆದರೂ ಒಬ್ಬಳು ತಂಗಿ ಸಹಾ ಮುಂದಿನ ವರ್ಷದಿಂದಲೇ ಪದವಿ ಮುಗಿಸಿ ನನ್ನೊಂದಿಗೆ ಕೆಲಸಕ್ಕೆ ಬರಬೇಕೆಂದು ಹಾತೊರೆಯುತಿದ್ದಾಳೆ, ಆದರೆ ನನಗೆ ಅವಳನ್ನು ಇನ್ನೂ ಓದಿಸಬೇಕೆಂಬ ಹಂಬಲ, ಆದರೆ ಎಲ್ಲವೂ ನಮ್ಮ ಕುಟುಂಬದ ಆಧಾಯವನ್ನು ಅವಲಂಬಿಸಿದೆ, ಎಲ್ಲವನ್ನೂ ಕಾಯ್ದು ನೋಡೋಣವೆನ್ನುತ್ತಾ ದಿನ ಸಾಗತೊಡಗಿದೆ. ಒಂದು ದಿವಸ ಸಂಜೆ ಕಂಪನಿಯಿಂದ ಬಂದವಳು ಸ್ವಲ್ಪ ವಿಶ್ರಾಂತಿ ಪಡೆಯುತ್ತಾ ಫೇಸ್ ಬುಕ್ ನೋಡುತ್ತಿದ್ದೆ, ಆಗ ಹಿರಿಯರೊಬ್ಬರಿಂದ ವರದರಾಜ್ ಎಂಬ ಹೆಸರಿನಿಂದ ಒಂದು ಸ್ನೇಹದ ಕೋರಿಕೆ ಬಂತು, ಅವರು ನನಗೆ ಪರಿಚಿತರಲ್ಲ, ಯಾರೆಂದು ಯೋಚಿಸಿದೆ, ಅವರ ಟೈಮ್ ಲೈನ್ ಹುಡುಕಿ ನೋಡಿದೆ, ಅದರ ತುಂಬಾ ಅನೇಕ ಜನ ಹೆಣ್ಮಕ್ಕಳು ಅಪ್ಪಾ ಎಂದು ಸ್ಟೇಟಸ್ ಹಾಕಿದ್ದನ್ನು ಕಂಡೆ, ಇವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದ ಬಣ್ಣದ ಛಾಯ ಚಿತ್ರಗಳು ನನ್ನನ್ನು ಇನ್ನಷ್ಟು ವಿಸ್ಮಿತಗೊಳಿಸಿತು, ನೊಂದ ಮನಕ್ಕೆ ಉತ್ತಮ ಛಾಯಾಚಿತ್ರಗಳು ಮಂದಹಾಸ ಮೂಡಿಸಬಲ್ಲವು, ನನಗೂ ಅಪ್ಪನಿಲ್ಲದ ಕೊರಗು, ಏನನ್ನು ತೀರ ಯೋಚಿಸದೇ ಸ್ನೇಹ ಕೋರಿಕೆಯನ್ನು ಸ್ವೀಕರಿಸಿದೆ, ಆ ಹಿರಿಯರಿಂದ ಕೂಡಲೇ “ಧನ್ಯವಾದಗಳು ಮಗಳೇ..” ಎಂದು ಪ್ರತಿಕ್ರಿಯೆ ಬಂತು, ಅಪ್ಪನಿಲ್ಲದ ನನ್ನ ಮನಕ್ಕೆ ಖುಷಿಯ ಪರಿಧಿಗೆ ಮಿತಿಯಿರಲಿಲ್ಲ..ಸದ್ದಿಲ್ಲದೇ ಮನ ಸಂಭ್ರಮಾಚರಣೆಯಲ್ಲಿ ತೊಡಗಿತು..
..ಕಥೆ ಮುಂದುವರೆಯಲಿದೆ...
ರಾಮಚಂದ್ರ ಸಾಗರ್