Tuesday, 6 December 2016

ಕಾಲವೇ ನೀನೆಷ್ಟು ಕಠೋರ..

    ನಾ ನಡೆವ ದಾರಿಯಲ್ಲಿ      ಅಂದು ವರ್ಷಧಾರೆ ಜೋರಾಗಿತ್ತು ಸಂಜೆಯ ಸಮಯ ಬೇಗನೇ ಕತ್ತಲೆಡೆ ಜಾರುತ್ತಿತ್ತು, ಮುಂಗಾರು ಮಳೆಯ ಅಬ್ಬರ ಬಿರುಸಾಗಿತ್ತು. ಗುಡುಗುಗಳ ಗರ್ಜನೆಯಲ್ಲಿ ಮೂಡುವ ಮಿಂಚಿನ ಸಂಚು ಎದೆ ಝಲ್ಲೆಜಿಸುತ್ತಿತ್ತು. ಕೈಲಿದ್ದ ಕೊಡೆಯು ಗಾಳಿಗೆ ಬಾಗಿ ಬಾಗಿ ನಿಲ್ಲದೇ ಹಪಹಪಿಸುತ್ತಿತ್ತು. ಗಾಳಿಯ ವೇಗಕ್ಕೆ ಉದುರಿದೆಲೆಗಳು ತೂರಿ ಬಂದು ಎರಗುತ್ತಿದ್ದವು. ಆತಂಕದಲ್ಲೇ ಸಾಗುತ್ತಿದ್ದೆ ಕತ್ತಲು ಬೇಗನೆ ಆವರಿಸತೊಡಗಿತು. ಕತ್ತಲೆಯ ಛಾಯೆಯಲ್ಲಿ ಬೆಳಕು ಕರಗುತ್ತಿತ್ತು. ಕಾಲು ನಿಲ್ಲದೇ ಸಾಗುತ್ತಿತ್ತು. ತುಸುದೂರ ಸಾಗಿದಾಗ ಮಳೆ ಇನ್ನೂ ಜೋರಾಯಿತು. ಮುಂದೆ ಸಾಗುವುದು ಕಠಿಣವೆನಿಸಿ ಮರದ ರಕ್ಷೆಯಲ್ಲಿ ನಿತ್ತೆ. ಅಲ್ಲೇ ನಡುಗುತ್ತಾ ಭಯದಲ್ಲಿ ಯಾರೋ ಇದ್ದಂತೆ ಅನಿಸಿತು, ಭಯದಲ್ಲಿ ಜೋರಾಗಿ ಉಸಿರೆಳೆದಂತೆ ಕೇಳಿಸಿತು, ಗುಡುಗು ಜೋರಾಗಿ ಆರ್ಭಟಿಸುತ್ತಿತ್ತು. ಮಿಂಚುವ ಬೆಳಕು ಹರಿದಾಗ ನೋಡಿದೆ ಅದು ಅವಳೇ ನನ್ನೊಂದಿಗೆ ಫ್ಯಾಕ್ಟರಿಗೆ ಕೆಲಸಕ್ಕೆ ಬರುತ್ತಿದ್ದ ಅನುಸೂಯ. ಅವಳೂ ನನ್ನನ್ನು ಬೇಗನೇ ಆತಂಕದಲ್ಲೇ ಗುರುತಿಸಿದಳು, ಆದರೆ ನನ್ನನು ಕಂಡು ಇನ್ನೂ ಹೆದರಿದಂತೆ ನನಗನಿಸಿತು. ನಾನೇ ಮಾತನಾಡಿಸಿದೆ. ಮಳೆ ತುಂಬಾ ಜೋರಾಯಿತು ಬಿರುಮಳೆಗೆ ಸಾಗಲಾರದೆ ಇಲ್ಲೇ ನಿತ್ತಿರುವೆ ಎಂದಳು, ಸುಮಾರು ಒಂದು ತಾಸು ಕಳೆದರೂ ಮಳೆ ನಿಲ್ಲುತ್ತಿಲ್ಲವೆಂದು ಗೊಣಗುತ್ತಾ ಇದ್ದಳು. ಗಾಳಿ ನಿಧಾನಿಸಿದಂತೆ ಭಾಸವಾಯಿತು, ಆಗ ಅವಳು ಬೇಗನೇ ಮನೆಗೆ ಹೋಗಬೇಕು ಮನೆಯಲ್ಲಿ ಅಮ್ಮ ಒಬ್ಬಳೇ ಇದ್ದಾಳೆ, ಒಬ್ಬಳಿಗೆ ಕ್ರಮಿಸಲು ಹೆದರಿಕೆ ನೀವು ಬನ್ನಿ ಜೊತೆಯಾಗಿ ಸಾಗೋಣವೆಂದಳು, ನಾನು ಕೂಡ ಅದೇ ದಾರಿಯಲ್ಲಿ ಸಾಗಬೇಕಿದ್ದರಿಂದ
ಅವಳೊಂದಿಗೆ ನಡೆದೆ, ದಾರಿಯುದ್ದಕ್ಕೂ ನಡೆವಾಗ ಮೌನದಲ್ಲೇ ನಡೆದೆವು, ಇಬ್ಬರೂ ಒಂದೇ ಕಡೆ ಕೆಲಸಮಾಡಿದರೂ ಹೆಚ್ಚು ಪರಿಚಯವಿಲ್ಲ ಹಾಗೂ ಅವಳು ಯಾರೊಂದಿಗೂ ಹೆಚ್ಚು ಮಾತನಾಡದ್ದರಿಂದ ಅವಳ ಪರಿಚಯ ಕಡಿಮೆ. ನಿಧಾನವಾಗಿ ಸಾಗಿದಂತೆ ಮಳೆ ಮತ್ತೆ ಜೋರಾದಂತೆ ಎನಿಸಿತು ಆದರೂ ಜೊತೆಯಲ್ಲೇ ಸಾಗತೊಡಗಿದೆವು. ಅವಳು ನಿಮ್ಮ ಮನೆ ಇಲ್ಲಿ ಎಲ್ಲಿ ಎಂದು ಕೇಳಿದಳು. ನಾನು ಶಿವನ ದೇವಸ್ತಾನದ ಬೀದಿಯ ಕೊನೆಯಲ್ಲಿ ಒಬ್ಬರ ಮನೆಯಲ್ಲಿ ಬಾಡಿಗೆಯಿರುವೆ ಎಂದೆ. ಆಗ ಅವಳು ನಮ್ಮ ಮನೆ ಅದರ ಪಕ್ಕದ ಬೀದಿಯಲ್ಲಿ ಎಂದಳು. ನನಗೆ ಅವಳನ್ನು ಒಬ್ಬಳೇ ಬಿರುಮಳೆ ಗಾಳಿಯಲ್ಲಿ ಕಳಿಸಲು ಮನಸಾಗಲಿಲ್ಲ, ಅವಳಿಗೂ ಹೋಗಲು ಸಾಧ್ಯವಿರಲಿಲ್ಲ, ಅದನ್ನು ಅರಿತು ನಾನು ಮನೆವರೆಗೂ ಹೋಗಿ ಅವಳನ್ನು ಬೀಳ್ಕೊಟ್ಟು ಬಂದೆ. ಮಾರನೇಯ ದಿನ ಫ್ಯಾಕ್ಟರಿಯಲ್ಲಿ ನಾನು ಮಧ್ಯಾಹ್ನ ಕ್ಯಾಂಟೀನ್ನಲ್ಲಿ ಊಟಮಾಡುವಾಗ ಅವಳು ಬಂದು ನನಗೆ ಥ್ಯಾಂಕ್ಸ್ ಎಂದು ತುಸುನಕ್ಕಳು. ನಾನು ಬನ್ನಿ ಊಟಮಾಡೋಣವೆಂದೆ. ಅವಳು ಊಟಮಾಡಿ  ಎಂದು ನಡೆದಳು. ದಿನಾ ಕಳೆದಂತೆ ಅವಳು ನನಗೆ ಅತ್ಮೀಯವೆನಿಸುತ್ತಾ ಸಾಗಿದಳು, ಇಬ್ಬರೂ ಒಳ್ಳೆಯ ಸ್ನೇಹಿತರಾದೆವು. ದಿನವೊಮ್ಮೆಯಾದರೂ ಅವಳನ್ನು ಮಾತನಾಡಿಸಬೇಕೆನ್ನಿಸುತ್ತಿತ್ತು. ಅವಳು ಅಷ್ಟೇ ಒಮ್ಮೆಯಾದರೂ ನನ್ನ ಕಾಣುತ್ತಿದ್ದಳು. ದಿನಾ ಸಂಜೆ ನಾವಿಬ್ಬರು ಜೊತೆಯಾಗಿ ಮನೆಗೆ ನಡೆದುಕೊಂಡು ಹೋಗುವುದು ಹವ್ಯಾಸವಾಯಿತು. ಏನೇ ವಿಶೇಷವಿದ್ದರೂ ಆಕೆ ನನ್ನನ್ನೂ ತಪ್ಪದೇ ಶುಭಕೋರುತ್ತಿದ್ದಳು. ಇಬ್ಬರಲ್ಲೂ ಅತ್ಮೀಯತೆ ಗಾಢವಾಗಿ ಬೆಳೆಯತೊಡಗಿತು. ದಿನವು ಒಬ್ಬರನ್ನೊಬ್ಬರು ನೋಡದೇ ಇರದಷ್ಟು ಹತ್ತಿರವಾಗತೊಡಗಿತು ನಮ್ಮ ಮನಸ್ಸು. ಅದೂ ಪ್ರೀತಿಯಾಗಿ ಅರಳಿತು. ಈ ಸಮಯದಲ್ಲೇ ನಾವು ಕೆಲಸ ಮಾಡುತ್ತಿದ್ದು ಫ್ಯಾಕ್ಟರಿ ಆರ್ಥಿಕ ನಷ್ಟಕ್ಕೆ ಈಡಾಗಿ ಮುಚ್ಚುವ ಹಂತಕ್ಕೆ ತಲುಪಿತು. ಎಲ್ಲರೂ ಬೇರೆಡೆ ಕೆಲಸಕ್ಕೆ ಅಲಿಯುವ ಪ್ರಸಂಗ ಉದ್ಭವವಾಯಿತು. ಇಬ್ಬರ ಮನೆಯಲ್ಲೂ  ನಿರ್ವಹಣೆ ನಮ್ಮ ಆಧಾಯವೇ ಮೂಲವಾಗಿದ್ದರಿಂದ ನಮಗೆ ಆತಂಕ ಇನ್ನೂ ಹೆಚ್ಚಾಯಿತು. ಬೇರೆ ಕೆಲಸ ಹುಡುಕುತ್ತಾ  ಅಲೆಯುವುದು ನಿತ್ಯವಾಯಿತು. ಇದರ ನಡುವೆ ನಡುವೆ ಸ್ನೇಹಿತರೊಬ್ಬರು ಹಿಂದೆ ಮಾಡಿಸಿಕೊಟ್ಟಿದ್ದ ಪಾಸ್‍ಪೋರ್ಟ ಇತ್ತು. ಸ್ನೇಹಿತರೊಬ್ಬರು ದುಬೈನಲ್ಲಿದ್ದರು. ಅವರ ಸಲಹೆಯಂತೆ ನಾನೂ ದುಬೈಗೆ ಹೊರಡಲು ಸಿದ್ದವಾದೆ. ಇತ್ತ ಅನೂಗೆ ಇನ್ನು ಕೆಲಸ ಸಿಗದೆ ಅವಳು ಓಡಾಡುತ್ತಿದ್ದಳು. ಮನೆಯಲ್ಲೇ ಆಕೆಯೇ ದುಡಿದ ಹಣದಿಂದ ಆಕೆ ಮತ್ತು ತಾಯಿ ಬದುಕಬೇಕಿತ್ತು. ಸದ್ಯ ಆಕೆ ಕೂಡಿದ್ದ ಹಣದಿಂದ ಬದುಕು ನಡೆಸುತ್ತಿದ್ದರು. ಒಂದೆರಡು ದಿನದಲ್ಲಿ ಎಲ್ಲಾದರೂ ಕೆಲಸಸಿಗುವುದೆಂದು ಅನೇಕ ಕಡೆ ಸಂದರ್ಶನ ಮುಗಿಸಿ ಬಂದಿರುವುದಾಗಿ ಹೇಳಿದ್ದಳು. ನಾನು ಆಕೆಗೆ ದುಬೈಗೆ ಹೋಗುವ ವಿಚಾರ ತಿಳಿಸಿ ನನ್ನ ಬಳಿ ಇದ್ದ ಸ್ವಲ್ಪ ಹಣವನ್ನು ಅವಳಿಗೆ ನೀಡಲು ಹೋದೆ. ಆಕೆ ಸ್ವಾಭಿಮಾನಿ ಕಂಡಿತಾ ಬೇಡವೆಂದಳು. ಸಾಲವಾಗಿ ಎಂದು ನೀಡಿದೆ. ಮಾರನೆಯ ದಿನ ಬೆಳಿಗ್ಗೆ ಬೆಂಗಳೂರು ಹೊರಟು ನಂತರ ದುಬೈಗೆ ಹೋಗುತ್ತಿರುವುದಾಗಿ ತಿಳಿಸಿದೆ. ಏಕೋ ಅವಳ ಕಣ್ಣಲ್ಲಿ ಒಂದೆರಡು ಹನಿಗಳು ಉದುರಿದವು. ನನಗೂ ಎದೆಯ ಕನಸು ಹನಿಗಳಾಗಿ ಉದುರಿದವು, ಮೂರು ವರ್ಷಕ್ಕೆಂದು ಹೊರಟಿರುವೆ, ಒಳ್ಳೆ ಸಂಬಳ ಸಿಗುತ್ತದೆ. ಬಂದ ನಂತರ ಇಬ್ಬರೂ ಮದುವೆಯಾಗೋಣ, ಬಂದು ನಿಮ್ಮ ತಾಯಿಯೊಂದಿಗೆ ಮಾತನಾಡುವೆನೆಂದು ಹೊರಟೆ. ಅವಳಿಗೂ ನನ್ನನ್ನು ಬೀಳ್ಕೊಡಲು ಮನಸ್ಸಿರಲಿಲ್ಲ, ನನಗೂ ಅವಳಿಲ್ಲದೇ ಸಾಗಲು ಮನಸ್ಸು ಬಿಲ್‍ಕುಲ್ ಒಪ್ಪುತ್ತಿರಲಿಲ್ಲ. ಭಾರವಾದ ಮನದಲ್ಲೇ ಹೆಜ್ಜೆ ಹಾಕತೊಡಗಿದೆ, ಮತ್ತೆ ಮತ್ತೆ ಹಿಂತಿರುಗಿ ನೋಡಿದಾಗ ಅವಳೂ ಅದೇ ರೀತಿ ಹಿಂತಿರುಗಿ ನೋಡುತ್ತಿದ್ದಳು. ಮತ್ತೆ ಅವಳೆಡೆಯೇ ಸಾಗಿದೆ, ಅವಳನ್ನು ಸಂತೈಸಲು ಪ್ರಯತ್ನಿಸಿದೆ, ಅವಳೂ ನನ್ನನ್ನೂ ಸಂತೈಸಿ, ಮೂರು ವರ್ಷಗಳು ತಾನೇ, ಎಲ್ಲಾ ನಮ್ಮ ಒಳಿತಿಗಾಗಿಯೇ ಕಾಯೋಣವೆಂದು ನಮಗೆ ನಾವೇ ಧೈರ್ಯವನ್ನು ಹೇಳಿಕೊಳ್ಳುತ್ತಾ, ಮತ್ತೊಮ್ಮೆ ಬೀಳ್ಕೊಟ್ಟು ನಡೆದೆ. ಪರಸ್ಪರ ಕಣ್ಣು ಹನಿಗಳ ವಿನಿಮಯವಂತು ಆಯಿತು ಕಾಡಿತು.
    ಸರಿಯಾಗಿ ಎಲ್ಲ ಅಂದುಕೊಂಡಂತೆ ದುಬೈ ತಲುಪಿ ಕೆಲಸಕ್ಕೆ ಸೇರಿದೆ, ಕೆಲಸ ದಿನಕ್ಕೆ 14 ಗಂಟೆಯಂತೆ ಮಾಡುತ್ತಿದ್ದೆ. ಬೇಗನೇ ಹೆಚ್ಚು ಗಳಿಸಬೇಕೆಂಬ ಹಂಬಲಕ್ಕೆ ಆಯಾಸವೆನ್ನದೇ ಇನ್ನೂ ಹಗಲಿರುಳು ಕೆಲಸಸಿಕ್ಕರೂ ಮಾಡಲು ಹಠವಿಡಿದೆ. ನನ್ನ ಕೌತುಕಕ್ಕೆ ತಕ್ಕಂತೆ ಕೆಲಸದ ಕಂಪನಿಯವರು ರಜೆಯ ದಿನದಲ್ಲೂ ಕೆಲಸವಿದ್ದಾಗ ಕರೆಯುತ್ತಿದ್ದರು. ಹೋಗಿ ಕೆಲಸಮಾಡಿ ಸಂಪಾದಿಸತೊಡಗಿದೆ. ಮೊದಲಬಾರಿಗೆ ಅನೂಗೆ ಪತ್ರ ಬರೆದೆ. ನನ್ನ ವಿಳಾಸ, ಕೆಲಸದ ಬಗ್ಗೆ ಎಲ್ಲವನ್ನೂ ಹೇಳಿದೆ. ಇನ್ನೂ ಹಗಲಿರುಳು ಅವಳದೇ ಧ್ಯಾನದಲ್ಲೇ ಕಳೆಯುತ್ತಾ ಬಿಡುವಿಲ್ಲದೇ ಗಟ್ಟಿಯಾಗಿ ಕೆಲಸಮಾಡುತ್ತಾ ಸಾಗಿದೆ, ಅನೇಕ ಜನ ಭಾರತೀಯ ಸ್ನೇಹಿತರೊಂದಿಗೆ ಸ್ನೇಹವನ್ನೂ ಬೆಳೆಸಿದೆ. ಒಬ್ಬೊರದೂ ಒನ್ನೊಂದು ವ್ಯಥೆ ಎಲ್ಲರು ಇಲ್ಲಿ ಹೆಚ್ಚು ಸಂಪಾದಿಸಿ ಸ್ವದೇಶಕ್ಕೆ ಮರಳಿ ಏನಾದರೂ ಸ್ವಯಂ ಉದ್ಯೋಗಮಾಡಬಹುದೆಂಬ ಹಂಬಲದಿಂದ ಬಂದವರು. ಒಬ್ಬಬ್ಬರದೂ ಒನ್ನೊಂದು ಕಷ್ಟ ಕೇಳುತ್ತಾ ದಿನದೂಡುತ್ತಾ ನನಗೆ ನಾನೇ ಸಮಾಧಾನಿಸಿಕೊಲ್ಳುತ್ತಿದ್ದೆ. ಮಾರನೇಯ ತಿಂಗಳು ಅನು ಬರೆದ ಪತ್ರ ತಲುಪಿತು. ಅವಳೂ ಬೇರೊಂದು ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕಿರವುದಾಗಿ ತನ್ನ ಬಗ್ಗೆ ಎಲ್ಲವನ್ನೂ ಹೇಳಿ ನನಗೆ ಚೆನ್ನಾಗಿರು ಎಂದು ಪ್ರೀತಿಯಿಂದ ಹಾರೈಸಿ ಬರೆದಿದ್ದಳು. ಆ ಪದಗಳು ಇಂದಿಗೂ ಮಾಸದೇ ಹಾಗೇ ಮನದಲ್ಲಿ ಉಳಿದಿವೆ. ಅತೀ ಬಯಸಿದ ಜೀವದಿಂದ ಅನೇಕ ದಿನಗಳ ನಂತರ ಬಂದ ಮೊದಲ ಪದಗಳು ಬಹಳ ಇಷ್ಟ ಮತ್ತು ಮನಕ್ಕೆ ಅಂದು ಬಹಳ ಖುಷಿಯನ್ನು ನೀಡಿತ್ತು. 
    ನಂತರ ದಿನಗಳುರುಳಿದವೂ ಇಬ್ಬರ ನಡುವೆ ಪತ್ರಗಳ ವಿನಿಮಯ ಸಾಧ್ಯವಾದಾಗ ಒಮ್ಮೆ ದೂರವಾಣಿ ಕರೆ ಮಾಡುವುದು ಇನ್ನೂ ಒಲವ ಬಂಧವನ್ನು ಬಿಗಿಗೊಳಿಸುತ್ತಾ ಸಾಗಿತ್ತು. ಯಾವಾಗ ಒಬ್ಬರನ್ನೊಬ್ಬರು ನೋಡುತ್ತೇವೋ ಎಂಬ ಹಂಬಲ ಇನ್ನೂ ಗಾಢವಾಗತೊಡಗಿತು. ಇತ್ತ ನನಗೆ ದಿನಗಳೆದಂತೆ ದುಬೈಗೆ ಬಂದು ಎರಡು ವರ್ಷವಾಯಿತು. ಇನ್ನೂ ಭಾರತಕ್ಕೆ ಮರಳಲು ಉಳಿದಿರುವುದು ಒಂದೇ ವರ್ಷ. ಬೇಗನೇ ಮುಗಿದು ಹೋಗಲಿ ಎಂಬ ಖುಷಿಯಲ್ಲಿರುವಾಗ ಏಕೋ ಅನಾರೋಗ್ಯ ವಿಪರೀತ ಕಾಡತೊಡಗಿತು. ಸ್ನೇಹಿತರು ಅತೀ ಕೆಲಸದ ಒತ್ತಡ. ಸ್ವಲ್ಪ ವಿಶ್ರಾಂತಿ ಪಡೆ ಎಂದು ಸಲಹೆ ನೀಡಿದರು. ಒಂದೆರಡು ದಿನಕಳೆದೆ ವೈದ್ಯರನ್ನು ಭೇಟಿಯಾದೆ. ಮೈಮೇಲೆ ಗುಳ್ಳೆಗಳು ವಿಪರೀತ ಏರತೊಡಗಿದವು. ಅತೀ ಶೆಖೆಗೆ ಆದವೆಂದು ಚಿಕಿತ್ಸೆ ಪಡೆಯುತ್ತಾ ಸಾಗಿದೆ. ತಿಂಗಳುಗಳು ಕಳೆದರೂ ಗುಣವಾಗಲಿಲ್ಲ. ಖಾಯಿಲೆಯಿಂದ ಬಳಲತೊಡಗಿದೆ. ನಂತರ ನಿಧಾನವಾಗಿ ದೇಹದ ಮೇಲೆ ಕಲೆಗಳು ಹಾಗೆಯೇ ಉಳಿಯುತ್ತಾ ದೇಹದ ತುಂಬೆಲ್ಲಾ ಹರಡಿತು. ವೈದ್ಯರು ಇದೊಂದು ಅತೀ ಅಪರೂಪವಾಗಿ ಕೆಲವರಿಗೆ ಮಾತ್ರವೇ ಕಾಡುವ ಚರ್ಮವ್ಯಾಧಿಯೆಂದು ಇದು ಗುಣವಾಗಲೂ ಹಲವು ವರ್ಷಗಳು ಬೇಕಾಗಬಹದು ಹಾಗೂ ಕಲೆಗಳು ಮಾತ್ರ ಗುಣವಾಗಲು ಸಾಧ್ಯವಿಲ್ಲವೆಂದರು.  ನಾನು ನಿಧಾನವಾಗಿ ಚೇತರಿಸತೊಡಗಿದರೂ ಅನೂಗೆ ನಾನು ಉತ್ತಮ ಜೊತೆಯಾಗ ಬಲ್ಲೆನೇ ಎಂದು ಭಯ ಶುರುವಾಯಿತು. ಏನಾದರೂ ಮಾಡಿ ಅವಳನ್ನು ತ್ಯಾಗಮಾಡುವುದೇ ಒಳಿತು, ನಾನು ಚೇತರಿಸಿ ಮೊದಲಿನಂತಾಗಲು ಹಲವಾರು ವರ್ಷಗಳು ಬೇಕೆಂದು ವೈದ್ಯರು ಹೇಳಿದ್ದು ಹಾಗೂ ದೇಹದ ತ್ವಚೆಯು ಗುಣವಾಗದೇ ಉಳಿಯುತ್ತದೆಂದು ವೈದ್ಯರು ಹೇಳಿದ್ದು ಇನ್ನಷ್ಟು ಚಿಂತೆಗೆ ಹಚ್ಚಿತ್ತು. ಇನ್ನೂ ಭಾರತಕ್ಕೆ ಮರಳಲು ಉಳಿದಿರುವುದು ಕೇವಲ ಆರು ತಿಂಗಳು. ಇತ್ತ ಅನೂ ಕೂಡ ನಾ ಬರುವ ಘಳಿಗೆಗಾಗೆ ಕಾಯುತ್ತಾ ಕುಳಿತಿದ್ದಳು ಅತೀ ಪ್ರೀತಿಯಿಂದ. ಅದೂ ನನಗೆ ಇನ್ನೂ ಭಯವಾಗತೊಡಗಿತು. ದಿನಗಳುರುಳಿದಂತೆ ಭಾರತಕ್ಕೆ ಹೇಗೆ ಹೋಗಲಿ, ಹೇಗೆ ಅನೂ ಎದುರು ನಿಲ್ಲಲಿ ಎಂಬ ನೋವು ಕಾಡತೊಡಗಿತು. ಬೇಗನೇ ದಿನಗಳುರಳಿ ಎಂದು ಅಂದು ಅವಳಿಗಾಗಿ ಬೇಡುತ್ತಿದ್ದ ನಾನು ಇಂದು ದಿನಗಳುರುಳಿದಂತೆ ಹೆದರತೊಡಗಿದೆ. ಒಂದು ಗಟ್ಟಿ ನಿರ್ಧಾರಕ್ಕೆ ಅಂದು ಬಂದೇ ಬಿಟ್ಟೆ. ಏನಾದರೂ ಮಾಡಿ ಅನೂಳನ್ನು ತ್ಯಾಗಮಾಡುವುದೇ ಮಿಗಿಲೆಂದು ಅರಿತೆ, ಮನಸ್ಸನ್ನು ಗಟ್ಟಿಗೊಳಿಸಿದೆ. ಹರಿವ ಕಣ್ಣೀರಲ್ಲಿ ರೋಧಿಸುತ್ತಾ ಅವಳಿಗಾಗಿ ಒಂದು ಪತ್ರವನ್ನು ಬರೆದೆ. ಅದೂ ಬೇರೆಯವರ ಕೈಯಲ್ಲಿ ಬರೆಸಿದೆ, ಇಲ್ಲಿ ನಿನ್ನ ಸ್ನೇಹಿತ ಪ್ರಕಾಶ ಬೇರೆಯ ಹುಡುಗಿಯೊಂದಿಗೆ ಮದುವೆಯಾಗಿದ್ದಾನೆಂದು ಹಲವು ವರ್ಷಗಳಿಂದ ಅವಳೊಂದಿಗೇ ಇದ್ದಾನೆಂದು ಅವನು ಉತ್ತಮನಲ್ಲವೆಂದು ಬರೆಸಿದೆ. ಇದನ್ನು ಓದಿ ಅವಳು ನನ್ನನ್ನು ತಿರಸ್ಕರಿಸುತ್ತಾಳೆಂದು ಎಣಿಸಿದೆ. ಅವಳು ಎಷ್ಟೇ ನನ್ನನ್ನು ಸಂಪರ್ಕಿಸಲು ಸಿಗದಂತೆ ಎಲ್ಲಾ ಸಂಪರ್ಕವನ್ನು ಕಡಿತಗೊಳಿಸಿದೆ. ಅವಳು ಅನೇಕ ಪತ್ರಗಳನ್ನು ಬರೆದು ನನ್ನಿಂದ ಉತ್ತರ ಬಯಸಿದರೂ ನಾನು ಉತ್ತರಿಸದೇ ಸುಮ್ಮನಾದೆ, ಎಲ್ಲವೂ ಅವಳಿಗಾಗಿ ಅವಳ ಒಳಿತಿಗಾಗಿ ಎಂದು ಸುಮ್ಮನಾದೆ. ಅವಳು ಚೆನ್ನಾಗಿರಲೆಂದು ದೇವರಲ್ಲಿ ಬೇಡಿಕೊಳ್ಳುತ್ತಾ ಭಾರವಾದ ಮನದಲ್ಲಿ ದಿನಕಳೆಯ ತೊಡಗಿದೆ. ಇತ್ತ ಅವಳೂ ನಾನು ಹಣಗಳಿಸಿ ಬದಲಾಗಿರುವೆನೇನೋ ಎಂಬ ನಂಬಿಕೆ ಅವಳಲ್ಲಿ ನಿಧಾನ ನೆಲೆಯೂರ ತೊಡಗಿತು. 
     ಎರಡು ತಿಂಗಳು ಮೊದಲೇ ಅವಧಿ ಮುಗಿಯುವ ಮೊದಲು ಸ್ವದೇಶಕ್ಕೆ ಮರಳಿದೆ, ಬಂದವನೇ ಸೀದಾ ಏನೊಂದು ಎಣಿಸದೇ ನಮ್ಮೂರ ದಾರಿ ಹಿಡಿದೆ. ದಾರಿಯಲ್ಲಿ ಸಿಕ್ಕ ಅನೇಕರು ನನ್ನನ್ನು ಗುರುತಿಸಲಾರದಂತೆ ನಾನು ವಿರೂಪನಾಗಿದ್ದೆ. ಪರಿಚಯದವರೇ ಎದುರು ಹೋದರೂ ಗುರುತು ಸಿಗಲಿಲ್ಲ, ನಾನೇ ಪರಿಚಯ ಮಾಡಿಕೊಳ್ಳುವಂತಾಯಿತು. ಎಲ್ಲಾ ವಿಧಿಯ ಬರಹವೆಂದು ದೂರುತ್ತಾ ಮನೆ ತಲುಪಿದೆ. ಮನೆಯಲ್ಲಿ ನನ್ನಾವಸ್ಥೆಯನ್ನು ಮೊದಲೇ ತಿಳಿಸಿದ್ದ ಎಲ್ಲವನ್ನು ಅರಿತಿದ್ದ ವಯೋವೃದ್ಧ ತಂದೆ ತಾಯಿ ಅತೀವ ನೊಂದಿದ್ದರೂ ಏನೊಂದು ಹೇಳದೇ ಪ್ರೀತಿಯಿಂದಲೇ ಬರಮಾಡಿಕೊಂಡರು. ಏನನ್ನೂ ಹೇಳದೇ ನನಗೇನಾಗಿದೆ ಎಂದು ಕೇಳದೇ ಸುಮ್ಮನಿದ್ದರು. ನಂತರ ನಿಧಾನವಾಗಿ ತಂದೆ ವಿಚಾರಿಸಿದರು. ನಾನು ದುಬೈನಲ್ಲಿ ವೈದ್ಯರು ಹೇಳಿದ್ದೆಲ್ಲವನ್ನೂ ಹೇಳಿದೆ. ಆಗ ತಂದೆ ಪಕ್ಕದ ಊರಿನ ಅವರ ಸ್ನೇಹಿತರೊಬ್ಬರ ಬಳಿ ಬೆಳಿಗ್ಗೆ ಕರೆದುಕೊಂಡು ಹೋದರು. ಅವರು ಮನೆಯಲ್ಲೇ ಔಷಧಿ ತಯಾರಿಸಿ ನೀಡುವವರು. ಅವರ ಆರೈಕೆಯಂತೆ ಚಿಕಿತ್ಸೆ ತೆಗೆದುಕೋ ಎಂದರು. ನನಗೆ ಮನದಲ್ಲಿ ನಗು, ದುಬೈನಲ್ಲೇ ಅಂತಾ ಅತ್ಯುತ್ತಮ ಆಸ್ಪತ್ರೆಯಲ್ಲಿ ಗುಣವಾಗದ ಖಾಯಿಲೆ ಸಾಧ್ಯವೇ ಎಂಬ ಅಳುಕು, ಏನೋ ತಂದೆಯವರ ಸಮಾಧಾನಕ್ಕೆಂದು ತೆಗೆದುಕೊಳ್ಳುತ್ತಾ ಸಾಗಿದೆ, ದಿನಗಳು ಕಳೆದಂತೆ ಒಂದೆರಡು ತಿಂಗಳಲ್ಲಿ ಕಲೆಗಳು ದೇಹದಲ್ಲಿ ಮರೆಯಾಗತೊಡಗಿದವು. ದೇಹದಲ್ಲಿ ಮತ್ತೆ ತ್ವಚೆಯು ಮೊದಲಿನಂತೆ ಗುಣವಾಗತೊಡಗಿತು, ಹರ್ಷವು ಮನೆಮಾಡಿತು. ಧೈರ್ಯಮಾಡಿ ಒಮ್ಮೆ ಪಟ್ಟಣದ ಕಡೆ ಸಾಗಿದೆ, ಅನೂಳ ಮನೆಯೆಡೆ ಸಾಗಿದೆ. ಅವಳ ಮನೆ ಮುಂದೆ ಹೋದೆ. ಮದುವೆ ಚಪ್ಪರ ಮನೆ ಮುಂದೆ ಅಲಂಕರಿಸಿತ್ತು, ಎದುರು ಮನೆಯವರನ್ನು ಕೇಳಿದೆ ಇಂದು ಅನೂಳ ಮದುವೆ ಎಲ್ಲರೂ ಹೋಗಿದ್ದಾರೆ ಈಗ ನಾವು ಹೊರಟಿದ್ದೇವೆ, ನೀವು ಮದುವೆಗೆ ಬಂದವರೇ ಬನ್ನಿ ನಮ್ಮೊಂದಿಗೆ ಎಂದರು. ನನಗೆ ಬೆಂಕಿಮಳೆಯಲ್ಲಿ ಸುಟ್ಟ ಮಲ್ಲಿಗೆಯಂತೆ ನನ್ನ ಮನ ಸುಡತೊಡಗಿತು. ಭಾರವಾದ ಮನದೊಂದಿಗೆ ಆಸೆಗಳನ್ನೆಲ್ಲಾ ಸುಟ್ಟು ಇಂದು ಮೌನದಲ್ಲೇ ಏನೊಂದು ಎಣಿಸದೇ ಊರಹೊರಗಿನ ಗುಡ್ಡದಲ್ಲಿ ಕುಳಿತಿರುವೆ, ಮುಂದೇನು ಮಾಡಲಿ ಎಂದು..? ಎಲ್ಲಾ ನನ್ನದು ದುರ್ದೈವದ ಜೀವವೆಂದು ರೋಧಿಸುತ್ತಾ ಕುಳಿತೆ, ಮನಕ್ಕೆ ಸಂತೈಸುವುದೂ ಸಾಧ್ಯವಿಲ್ಲದಿದ್ದರೂ.. ಪ್ರೀತಿಯ ಹನಿಗಳು ನದಿಯಾಗಿ ಹರಿಯುತಿರಲು ದಾಹಕೆ ಜಾಗವಿರದು ಎಂದೆಣಿಸದ ಜೀವದಲ್ಲಿ ಇಂದು ನೀ ಕಾಣದೇ ಉಳಿದಿರಲು ಗೆಳತಿ ಮನ ಶಾಶ್ವತ ಮರುಭೂಮಿಯಾಗಿದೆ. ತಣ್ಣನೆ ಸುಳಿದಾಡುತ್ತಿದ್ದ ನಿನ್ನ ಒಲವ ವರಸೆಯ ಅಮೃತಗಾಳಿ ಇಂದಿಲ್ಲದೆ ವಿರಹದ ಬೇಗೆ ಸುಡುತಿದೆ ಬೆವರು ಹನಿಗಳು ನದಿಯಾಗಿದೆ, ಮಳೆ ನಿಂತ ಮೇಲೆ ಬೀಳುವ ಮಳೆ ಹನಿಗಳಂತೆ ಮೌನದಲ್ಲಿ ಕಣ್ಣೀರು ಒಂದೊಂದೆ ಉದುರುತ್ತಿವೆ. ಕಾರಣ ನೀನಿಂದು ನನಗೆ ಎಟುಕದಷ್ಟು ದೂರ ಸಾಗಿರುವೆ. ನನಗೆ ಗೊತ್ತು ಅಂದು ನೀ ನೀಡುತ್ತಿದ್ದ ಹೂನಗು ಇನ್ನು ಮುಂದೆ ನನ್ನದಲ್ಲ, ಈ ನೊಂದ ಹೃದಯದ ವ್ಯಥೆಯ ಕಥೆಯೇನು ಹೇಳಲಿ ಗೆಳತಿ.. ನಿನ್ನಾಸೆರೆಯಲಿ ಲೀನವಾದ ಹೃದಯ ಇಂದು ನೀನಿಲ್ಲದಿದ್ದರೂ ಅದು ನಿನ್ನನೇ ಬಯಸುತ್ತದೆ. ನೀನಿಲ್ಲದ ಜಗವನ್ನು ನಾ ಕಾಣುವುದು ಸಾಧ್ಯವಿಲ್ಲ. ನೀನಿಲ್ಲದ ಈ ಬದುಕು ನನಗೆ ಬದುಕಲ್ಲ ಅದುವೇನಿದ್ದರೂ ಹೃದಯಕ್ಕೆ ನಿತ್ಯ ಚುಚ್ಚುವ ಸೂಜಿಯಂತೆ. ಬೆಂಕಿ ಮಳೆಯಲ್ಲಿ ನನ್ನೆದೆಯ ಕನಸು ಸುಟ್ಟು ಕರಕಲಾಗುತ್ತಿವೆ. ನೀನಿರದೆ ಜೊತೆಯಲ್ಲಿ ನಾನು ಬಿರು ಪ್ರವಾಹದಲ್ಲಿ ಕೊಚ್ಚಿ ನೂಕುವ ತುಂಬೆಯ ಹೂವಂತೆ ತೂರಿಹೋಗಿರುವೆ, ನಿನ್ನೊಲವ  ಆರೈಕೆಯಿಲ್ಲದೇ ನಾನುಳಿಯಲಾರೆ ಗೆಳತಿ..ಏನೆಂದರೂ ಇಂದು ವಿಧಿಯ ದೂರಿ ಪ್ರಯೋಜನವೆಲ್ಲಿ.? ಎಲ್ಲವೂ ನನ್ನದೇ ಹುಂಬುತನವೇನೋ. ಇಲ್ಲವೇ ದುರಾದೃಷ್ಟವೇನೋ ಗೆಳತೀ..
ಏನೇ ಅಗಲಿ ಗೆಳತಿ ನೀ ನಗುತಿರು ನಿತ್ಯ.. ನಿನ್ನ ಮೊಗದಲಿ ನಗುವಿರಲಿ ನಿತ್ಯ..