ಹಿಂದೆ ಕಾಲವೊಂದಿತ್ತು, ಈಗಲೂ ಇಲ್ಲವೆಂದಿಲ್ಲ, ಇದ್ದದ್ದು ಕಡಿಮೆಯಾಗಿದೆ. ಮುಗಿದು ಹೋಗಲೇ ಎಂದು ಕೇಳುವ ಸಂಗತಿಗಳೇ ಜಾಸ್ತಿಯಾಗಿವೆ. ಅವುಗಳ ಕೂಗಿಗೆ ಕಳವಳವೂ ಇದೆ.ಅದರ ಒಂದಿಷ್ಟು ಮೆಲುಕು ನಿಮ್ಮೊಂದಿಗೆ ಹೇಳುತ್ತೇನೆ. ನಿಮ್ಮ ಮಾತು ಆಗಿರಬಹುದು ಎಂಬ ಹಂಬಲವೂ ಇದೆ. ನೋಡೋಣ ಹಿಂದಿನ ಕೆಲವು ದೃಶ್ಯಗಳನ್ನ...ಆಗ ಮನೆ ಸುತ್ತುಲೂ ಮರಗಳು, ಹೂ ಗಿಡಗಳು, ತರಕಾರಿ ಬೆಳೆಗಳ ಗಿಡ ಬಳ್ಳಿಗಳು ಸಾಮಾನ್ಯವಾಗಿದ್ದವು. ಬಸಳೆ, ಅವರೇ, ತೊಂಡೆ ಬಳ್ಳಿಗಳ ಚಪ್ಪರವಿಲ್ಲದ ಮನೆಗಳಿರಲಿಲ್ಲ. ಹಿತ್ತಲು ಎಂದರೆ ನುಗ್ಗೆ, ಹಲಸು, ಹುಣಸೆ, ಮಾವು ಇದ್ದೇ ಇರ್ತಿದ್ದವು. ಬೇಕು ಅಂದ್ರೆ ಸೀಗೆಕಾಯಿ ಮರನೂ ಇರ್ತಿತ್ತು. ಜೊತೆಗೆ ಪಶು ಸಂಗೋಪನೆಯೂ ಇರ್ತಿತ್ತು. ಆಕಳು, ಕೋಳಿ, ಕುರಿ ಸಾಮಾನ್ಯವಿದ್ದ ಕಾಲ. ಮನೆಯೆದುರು ಹೂಗಿಡಗಳ ಚಿತ್ತಾರವಿತ್ತು. ಬಂದವರಿಗೆ ಸ್ವಾಗತ ಕೋರಲು ಅರಳಿದ ದಾಸವಾಳವಂತು ಸದಾ ನಗುತಾ ಇರ್ತಿತ್ತು. ಎಲ್ಲದಕ್ಕೂ ಮನೆಯಲ್ಲೇ ಸ್ವಾವಲಂಬಿ ಇತ್ತು. ಮನೆಯಿಂದ ಸ್ವಲ್ಪ ದೂರ ಬಂದರೆ ಎದುರಾಗೋ ಕಾಡು ಸದಾ ಹಸಿರಲ್ಲಿ ನಳನಳಿಸುತ್ತಿರುತ್ತಿತ್ತು. ಹಳ್ಳ, ಕೆರೆಗಳಲ್ಲಿ ಸದಾ ನೀರಿರುತ್ತಿತ್ತು, ಕಾಲದ ತಾರತಮ್ಯವಂತೂ ಇರಲಿಲ್ಲ. ಬೇಸಿಗೆ ದಾಹಕ್ಕೆ ಒಂದು ಮೊಗಸೆ ಹಳ್ಳದ ನೀರು ದಣಿವಿತ್ತೇ ಎಂದು ಕೇಳುವಂತಿತ್ತು. ಕಾಡಿನಲ್ಲಿ ಒಂದು ಸುತ್ತು ಹಾಕಿದರೆ ನೇರಳೆ, ಮಾವು, ಕೌಳಿಗಳ ರಾಶಿಯು ಎದುರಾಗುತ್ತಿತ್ತು. ಜೇನುಗಳ ತೊಟ್ಟಿಯು ಕಣ್ಣಿಗೆ ಕಾಡುತಿತ್ತು. ಪಕ್ಷಿಗಳ ಜೀರುಂಡೆಗಳ ಸದ್ದು ಸಾಗುವ ತನುವಲ್ಲಿ ನಡುಕ ತರುತ್ತಿತ್ತು. ಕಾಡಿನ ಒಳಗೆ ತಣ್ಣನೆಯ ಹವೆಯ ಕೊರೆತ ಮೂಗನ್ನು ಕೊರೆಯುತ್ತಿತ್ತು. ಯಾವ ಪೊದೆಯಲ್ಲಿ ಏನಿದೆಯೋ ಎಂಬ ಭಯವೂ ಇರುತ್ತಿತ್ತು. ನೀರಿನ ಸೊಬಗನು ತೋರಿಸುವ ಝರಿಗಳು, ಜಲಧಾರೆಗಳು ಸ್ವರ್ಗದ ಅಂದದ ಮಿತಿ ಎಷ್ಟು ಎಂದವುಗಳು ಇದ್ದವು. ಅಲ್ಲಲ್ಲಿ ಕುಣಿದು ಕುಪ್ಪಳಿಸುವ ಮೊಲಗಳು, ಕಿಚಾಯಿಸುವ ಗೂಬೆಗಳ ನೋಟವೂ ಜೋರಾಗಿತ್ತು.
ಗದ್ದೆಗಳ ಬದಿಗಳ ಮೇಲೆ ಕೊಕ್ಕರೆಗಳ ಓರಣ ಜೋರಿತ್ತು. ನೋವಿದ್ದ ಕಣ್ಣಿಗೂ ಹಿತ ತರುವಂತಿತ್ತು. ಬೆಳ್ಳಿ ಬೆಡಗೂ ನಾನೇ ಎಂದಿತ್ತು. ರಾತ್ರಿ ಸಮಯದಲ್ಲಿ ಕಾಡು ಮೃಘಗಳ ಕೂಗು ಹೆದರಿಕೆಯ ಗಾಥೆಯು ಜೋರಿತ್ತು, ಬೆದರಿ ಹಿರಿಯರ ಮಡಿಲನ್ನು ತಬ್ಬಿದ ಅನುಭವದಲ್ಲಿ ರೋಮಾಂಚನವಿತ್ತು, ಒಂತರಾ ಛಲವೂ ಇತ್ತು, ಬಂಧನವೂ ಇತ್ತು. ಬೇಸಿಗೆ ಬಿಸಿಲನು ಮನೆಯ ಮಾಳಿಗೆ ಮುಟ್ಟಲು ಸುತ್ತಲಿದ್ದ ಮರಗಳು ಬಿಡುತ್ತಿರಲಿಲ್ಲ. ಛಳಿ, ಮಳೆಗೆ ಮುಚ್ಚಿಗೆ ಮೆನೆಯ ಬೆಚ್ಚನೆ ಹಿತವಿತ್ತು. ದಣಿವಾಗಿ ಬಂದವರಿಗೆ ಜೇನಿ ಬೆಲ್ಲ ತಂಪು ಮಡಕೆ ನೀರು ಕೊಡುವ ನಿಸ್ವಾರ್ಥ ಕೈ ಇತ್ತು. ಹುಲ್ಲು ಗುಡಿಸಲು ಮಣ್ಣಿನ ಮನೆಯಾದರೂ ಛಳಿ, ಮಳೆ, ಬಿಸಿಲಿಗೆ ಹೆದರದ ದಮ್ಮಿತ್ತು. ಮನೆಯಲ್ಲಿ ಹಿರಿಯರ ಹಿತನುಡಿಗಳದು ಅಬ್ಬರವೂ ಇರ್ತಾ ಇತ್ತು. ಮನೆ ಸುತ್ತಲ ಮರದಲ್ಲಿ ನಡು ಮದ್ಯಾಹ್ನವಾದರೂ ಕೂಗಿ ಮಾತಾಡಿಸಲು ಒಂದು ಕೋಗಿಲೆಯಂತು ಬರ್ತಿತ್ತು. ಮನೆಯೊಳಗೆ ಹೊರಗೆ ಬಂದೋಗೋ ಕಾಯದಲ್ಲೇ ಗುಬ್ಬಿಗಳದೂ ಹಾಡಿತ್ತು. ಮನೆಯಲ್ಲೇ ಒಮ್ಮೊಮ್ಮೆ ಗೂಡು ಕಟ್ಟಿದ್ದೂ ಇತ್ತು. ಮನೆಯ ಹಿಂಬದಿಯ ನೇರಲೆ ಮರದಲ್ಲಿ ಗಿಳಿಗಳಿದೂ ಕೂಗಾಟ ಜೋರಾಗಿರ್ತಾ ಇತ್ತು. ಕೊಟ್ಟಿಗೆಯಲ್ಲಿ ಗೋಮಾತೆಯ ನಗುವಿತ್ತು. ಮನೆ ಎದುರು ಕಲ್ಪವೃಕ್ಷಗಳ ಕೃಪೆಯಿತ್ತು. ಕೂಗಳತೆ ದೂರದಲ್ಲಿ ಹೊಟ್ಟೆಗೆ ಹಿಟ್ಟು ನೀಡೋ ತನುವಿಗೆ ಕಾಯಾ ನೀಡೋ ಗದ್ದೆ ಇತ್ತು. ದಿನವಿಡೀ ನಮಗೆ ಹೊತ್ತು ಬಿತ್ತುವುದರಲ್ಲೇ ನಲಿವಿತ್ತು. ರಾಸಾಯನಿಕವಿಲ್ಲದ ದೇಶೀ ತಳಿಗಳ ಬೆಳೆಯು ಹಿತವಾಗಿತ್ತು. ಮಳೆಗೇನು ಕೊರತೆಯಿರಲಿಲ್ಲ, ಕಾರ್ಮೋಡ ಕರಗಿ ವರ್ಷದ ಅರ್ಧ ಮುಲಾಜಿಲ್ಲದೇ ದುಮ್ಮಿಕ್ಕುತ್ತಿತ್ತು. ಮುಗಿಲಲ್ಲಿ ಮಿಂಚಿದ್ದ ಮೋಡಗಳ ಗುದ್ದು ಬೆಳಕಲಿ ಮೈ ನಡುಗಿದ್ದು ಕಗ್ಗತ್ತಲಲ್ಲೀ ಅದುವೇ ಬೆಳಗಾಗಿ ಕಪ್ಪಿರುಳಲಿ ಮರೆಯಾದ ಭುವಿಯ ತೋರಿಸಿದ್ದೂ ವಿಸ್ಮಿತಗೊಳಿಸಿದ್ದು ಉಂಟು. ಮಿಂಚಿನ ಬೆಳಕಲಿ ದುಂಡು ಮಲ್ಲಿಗೆಯ ಮೊಗ್ಗು ನಕ್ಕಿದ್ದು ನೆನಪುಂಟು. ಗುಡುಗುಗಳ ಗುದ್ದಾಟದಲಿ ಮತ್ತೆ ಮತ್ತೆ ಭೋರ್ಗರೆವ ಜಲಧಾರೆಯಲ್ಲಿ ಭುವಿಯ ಜಳಕದಲ್ಲಿ ಸುಳಿದಾಡೋ ತಂಗಾಳಿಯಲ್ಲಿ ತಂಪಿನ ಹವೆಯಲ್ಲಿ ಇಬ್ಬನಿಯ ಹೊಗೆಯಲ್ಲಿ ಮುಸುಕಾದ ಕಣ್ಣ ನೋಟದಲ್ಲಿ ಮುಂದೇನಿದೆ ಎಂಬ ಕುತೂಹಲ ಕಾಡಿದ್ದೂ ಉಂಟು. ಇಬ್ಬನಿಯ ಹೊಗೆಯು ಮರೆಯಾದೊಡನೆ ಗಿರಿಯ ತುದಿಯಲ್ಲಿ ಮೂಡಿದ ಬೆಳ್ಳಿ ರೇಖೆಯಂತ ಜಲಧಾರೆಗಳ ನರ್ತನದಲ್ಲಿ ಮನವು ನಲಿದು ಹೊಸ ಕಾವ್ಯಕ್ಕೆ ಅಲ್ಲೇ ಮುನ್ನುಡಿ ಹಾಕುವಂತಿತ್ತು. ಕಾರ್ಮುಗಿಲು ಕರಗಿ ಧರೆಗೆ ಉರುಳಿದಂತೆ ಬೀಳುವ ಮಳೆ ನಿಲ್ಲುವುದೇ..? ಎನ್ನುವ ಆತಂಕ ಒಮ್ಮೊಮ್ಮೆ ಕಾಡಿದ್ದೂ ಇದೆ.. ಬಾನು ಭುವಿಯು ಒಂದಾದಂತೆ ಎಲ್ಲೆಡೆಯೂ ಮಳೆಯ ಮಂಜಲಿ ಅದೇ ಭಾಸ. ರವಿಯ ದರ್ಶನವಿಲ್ಲದ ಸಮಯವದು. ಮಳೆಗಾಳಿಗೆ ನಡೆದಾಡಲೂ ನಡುಗುವ ಮೈಗೂ ಕಂಬಳಿ ಗೋಣೀ ವಸ್ತ್ರಗಳ ಬೆಚ್ಚನೆ ಹಿತವಿತ್ತು. ಮನೆಯ ಗೋಡೆಗಳ ರಕ್ಷಣೆಗೆ ಅಡಕೆ, ತೆಂಗುಗಳ ತಟ್ಟಿ ರಕ್ಷಕನಾಗಿ ವರ್ಷದಧರ್À ನಿಂತಿರುತ್ತಿತ್ತು. ಮಳೆಯ ಚಳಿಗೆ ಕಾಳು ಮೆಣಸಿನ ಕಶಾಯದ ನಂಟಿತ್ತು ಸವಿವುದರಲ್ಲೂ ಸಂತೋಷವಿತ್ತು. ಮೊದಲ ಮಳೆಗೆ ಎದ್ದ ಅಣಬೆಗಳ ರಾಶಿಯು ನೆಲದ ಮೇಲಣ ಮೂಡಿದ ತಾರೆಗಳೇನೋ..ಇವುಗಳ ಮೇಲೆ ಬಿದ್ದು ಹೊದ್ದಾಡಿದ್ದೋ ಆರಿಸಲೂ ಕುಣಿದಾಡಿದ್ದೋ ನೇರ ನಿಂತ ಅಣೆಗಳ ಸೊಂಟ ಮುರಿದಿದ್ದೂ ಒಂದು ಖುಷಿ ಇದೆ. ಅಣಬೆ ಸಾರಿನ ಘಾಟು ಮನೆಯ ಮಾಳಿಗೆಗೆ ಅಪ್ಪಳಿಸಿ ಬಂದಿದ್ದೂ ಇತ್ತು. ಕಳಲೆಯ ಪಲ್ಯದಲ್ಲಿ ಅಕ್ಕಿಯ ಕಡುಬು, ರೊಟ್ಟಿ ರುಚಿ ನೋಡಿದ್ದು ಇದ್ದೇ ಇದೆ. ಛಳಿಗಾಲದ್ದೂ ಎನು ಕಮ್ಮಿಯಲ್ಲ. ತನುವಲ್ಲಿ ನಡುಕ ತಂದು ಒಂದೆಡೆ ಕೂರಿಸುವ ಕಾಲವದು. ಬೆಳಿಗ್ಗೆದ್ದು ನೋಡಿದರೆ ಮಂಜಿನದೇ ಜಳಕ ಎಲ್ಲೆಲ್ಲೂ. ಮಂಜಿನ ಹನಿಗಳದೇ ದರ್ಬಾರು. ಬೆಳಕಿನ ಕಿರಣಗಳು ನಮ್ಮನ್ನು ನೋಡಲು ನಾವು ಅವುಗಳನ್ನು ನೋಡಲು ಪರಿತಪಿಸಬೇಕಿತ್ತು. ಸಂಜೆಯಾಗುತ್ತಲೇ ನಡುಕಕ್ಕೆ ಒಗ್ಗ ಬೇಕಾದ ದೇಹದ ಸ್ಥಿತಿಯಾಗಿತ್ತು. ಅದರಲ್ಲೂ ಒಂದು ಖುಷಿ ಅನ್ನೋ ತಾಕತ್ತು ದೇಹಕ್ಕೂ ಸಿಗುತ್ತಿತ್ತು. ಚಳಿಯಲ್ಲಿ ಮದ್ಯಾಹ್ನವಾದರೂ ಹೂಗರಿಯ ಮೇಲೆ ನಗುವ ಇಬ್ಬನಿಗಳ ದರ್ಬಾರು ಜೋರಿತ್ತು. ಬತ್ತದ ತೆನೆಯಲ್ಲಿ ಮುತ್ತಿಕ್ಕಿದ ಹನಿಗಳು ತಂಪು ಹವೆಯಲ್ಲಿ ದಿನವಿಡೀ ನಕ್ಕಿದ್ದು ಉಂಟೂ. ಛಳಿಗಾಳಿಯಲ್ಲಿ ತುಷಾರಧಾರೆಯ ಸೊಬಗಲ್ಲಿ ಗದ್ದೆಗಳಲ್ಲಿ ಬೆಳೆಯುತ್ತಿರುವ ಫಸಲುಗಳ ಜೊತೆಯಲ್ಲಿ ಸಂಕ್ರಮಣಕ್ಕೆ ಸಜ್ಜಾಗುವ ಸವಿಯು ಮನದಲ್ಲಿ ಹೊಸಗಾಳಿ ಬೀಸುತಿತ್ತು..ತನುವಲೂ ಹೊಸತನ ಬರುತ್ತಿತ್ತು.......(ಮುಂದುವರೆಯಲಿದೆ...)