Saturday, 14 January 2017

ನೀ ತರುವ ನಗುವಿಗಾಗಿ..

     ತಂಪಲೆಯ ತಂಪು ಇಂದೇಕೊ ನನ್ನ ತನುವಿಗೆ ತಣಿಸುತಿಲ್ಲ ಹುಡುಗಾ ನೀ ಬಾರದ ಈ ಘಳಿಗೆ, ನೀ ಜೊತೆಯಿದ್ದು ಹೆಜ್ಜೆ ಹಾಕಿದ ಘಳಿಗೆ ಬಿಸಿಗಾಳಿಯಲ್ಲೂ ತನು ಮನಕೆ ತಂಪೆನಿಸುತ್ತಿತ್ತು ಜೊತೆಗೆ ನನ್ನೇ ನಾ ಮರೆಯುತ್ತಿದ್ದೆ, ನಿನ್ನ ಸಾನಿಧ್ಯದ ಒಲುಮೆಯಲ್ಲಿ ಮನಕೆ ಸಂತಸದ ಹೊನಲೇ ಆಸರೆಯಾಗಿತ್ತು ಆ ಪ್ರೀತಿಯ ನದಿಯಲ್ಲಿ ನೀನು ಮತ್ತು ನಾನು ದೋಣಿಯಲ್ಲಿ ಸಾಗುವ ರಸಘಳಿಗೆ ಮತ್ತು ಒಂದೇ ಸಮನೆ ನಿನ್ನ ಕಣ್ಣೋಟದಲ್ಲಿ ಮುಳುಗೆದ್ದು ಒದ್ದೆಯಾದ ನನ್ನ ಮನ ನಿನ್ನಲ್ಲಿ ಲೀನವಾದ ಈ ಮುಗ್ದೆಯ ಮನದಲ್ಲಿ ನೀ ವಿರಾಜಿಸಿದ್ದೆ. ಆ ಕ್ಷಣವೇ ಮನದರಸನಾದ ನೀನು ಎಂದಿಗೂ ನನ್ನಿಂದ ಮರೆಯಲಾಗದ ಜೀವವಾದೆ ನೀನು. ನಿನ್ನ ಕಣ್ಣೋಟದಲ್ಲೇ ನನ್ನ ಕಣ್ಣೋಟ ಸದಾ ಬೆಸುಗೆಯಾಗಲೆಂಬ ಹಂಬಲದ ಹಠ ತಂದವನು ನೀನಾದೆ. ಎಂದಿಗೂ ಸಹಿಸಿಕೊಳ್ಳುವ ನವಿರು ನೋವು ನೀಡುವ ಅದರಲ್ಲೇ ಸುಖವೆಂಬ ಅನುಭೂತಿ ಕಲ್ಪಿಸಿದವನು ಮನಕೆ ಅಮಲು ಹಿಡಿಸಿದ ಹುಡುಗನೂ ನೀನಾದೆ.. 

       ತಂಗಾಳಿಯ ತಂಪಲ್ಲಿ ಒಲವ ಸೌಗಂಧ ತಂದು ನಿನ್ನ ಪ್ರೀತಿಯ ಕೈಗಳಿಂದ ನನ್ನ ಮೊಗವ ನೇವರಿಸಿ ಕೆಂಗುಲಾಬಿ ಕೊಟ್ಟವನು ಪ್ರೀತಿಯ ನಾವೆಯಲ್ಲಿ ಬಿಗಿದಪ್ಪಿ ಸಾವಿರ ವರುಷಕೂ ಅಳಿಯದ ಪ್ರೀತಿ, ಮಮತೆಗಳನು ನೀಡುವೆನೆಂದು ವಚನಕೊಟ್ಟವನು ನೀನು. ಬೆಳದಿಂಗಳ ಇರುಳಲ್ಲಿ ಸರೋವರದ ನೀರಿನಲ್ಲಿ ಇಣುಕಿ ನೋಡುವ ಚಂದಿರನಂತೆ ನನ್ನ ಮನದ ಮನೆಯ ಕಿಟಕಿಯಲ್ಲಿ ನೀ ಇಣುಕಿದೆ ಆ ಕ್ಷಣವೇ ಶರಣಾದ ನಾನು ಎಂದಿಂದಿಗೂ ನಿನ್ನನೂ ಮರೆಯಲಾಗದ ನಿನ್ನವಲಂಬಿಯಾದೆ ಗೆಳೆಯಾ. ನಿನ್ನ ಮನದಲ್ಲೂ ಹೀಗೇನೆ ಎಂಬುದು ನಿನ್ನೆದೆಯ ನೇವರಿಸಿ ತಂಪಿರುಳ ನದಿ ತಟದಲ್ಲಿ ನಿನ್ನೆದೆಯ ಸದ್ದನ್ನು ಆಲಿಸಿ ಅರಿತವಳು ನಾನು. ನಿನ್ನೆದೆಯ ಕೂಗು ಬಿಡುವು ನೀಡದೇ ಗುನುಗುತಿರುವುದು ನನ್ಹೆಸರು ಎಂಬುದನ್ನು ಅರಿತೊಡನೆ ಗೆಳೆಯ ಅದುವೇ ನಾ ಜೀವನದಲ್ಲಿ ಗಳಿಸಿದ ಅತೀ ಅಮೂಲ್ಯ ಘಳಿಗೆ.. ಅತೀ ಪ್ರೀತಿಯ ಕ್ಷಣ. ಅಂದು ನಿನ್ನೆದೆಯೂ ಅದೆಷ್ಟು ಹಿತವಾಗಿ ನನ್ನನ್ನೇ ಕೂಗುತ್ತಿತ್ತು. ಆಗಲೇ ನಾನು ವಿಸ್ಮಿತಳಾಗಿ ನಿನ್ನಲ್ಲಿ ಲೀನವಾಗಿದ್ದೆ. ನನ್ನ ಮೊಗವನ್ನು ನೀನು ಗುಲಾಬಿ ಎಸಳಿಂದ ನೇವರಿಸಿ ದುಂಡುಮಲ್ಲಿಗೆಯ ಮೊಗದವಳೆಂದು ನೀನು ಮುದ್ದಾಗಿ ಕಿವಿಯಲ್ಲಿ ಪಿಸುಗುಟ್ಟಿದ್ದು ನನಗೆ ಅತೀ ಇಷ್ಟವೆನಿಸುವ ಪದವಾಗಿದೆ. ಅರಳಿದ ನೈದಿಲೆ ಪ್ರೀತಿಸಿ ನಗುವ ಚಂದಿರನಂತೆ ನೀನು ನನಗೆಂದೇ ನಗುಮೊಗದಿಂದ ನಲಿಯುತಿರುವುದನ್ನು ಕಂಡು ನನ್ನ ಮನ ನವಿಲಂತೆ ಕುಣಿಯುತ್ತಿತ್ತು. ಸರೋವರದ ಹಂಸದಂತೆ ನೀ ನಡೆದರೆ ನನ್ನೊಂದಿಗೆ ಬೆಳದಿಂಗಳ ಪಥವೂ ಸಾರ್ಥಕ. ಒಲವದೊರೆ ಶಶಿಗೂ ಮನತೃಪ್ತಿಯೆಂದು ನೀನು ಹೇಳುತ್ತಾ ದಾರಿಯುದ್ದಕ್ಕೂ ನನ್ನೊಂದಿಗೆ ಕೈಹಿಡಿದು ಹರಟುತ್ತಾ ಗಂಟೆಗಟ್ಟಲೆ ಮೈಲುಗಟ್ಟಲೇ ಸವೆಸಿದ ಘಳಿಗೆ ನಿಮಿಷದಂತೆ ಕೆಲವೇ ಹೆಜ್ಜೆಗಳಂತೆ ಕರಗಿಹೋಯಿತು. ಆದರೆ ಅದು ಮುಧುರ ಪಯಣವಾಗಿ ನಿತ್ಯ ಕಾಡತೊಡಗಿದೆ. ಪ್ರೀತಿಯಿಂದ ನೀನು ಕೈಹಿಡಿದು ಕುಸುಮಗಳ ವನದಲ್ಲಿ ನನ್ನ ಜೊತೆಯಾಗಿ ನಡೆವಾಗ ಮೆಲುಗಾಳಿಗೆ ನಲಿವ ಹೂಗಳು ನನ್ನ ನೋಡಿ ನಾಚುತ್ತಿವೆ ಎಂದು ನೀನು ನನ್ನನು ಹೇಳಿದ್ದು ಜೊತೆಗೆ ನನ್ನ ಮೊಗದಲ್ಲಿ ತುಸು ನಗುವು ಹೆಚ್ಚಿಸಿ ನನ್ನ ವಿಸ್ಮಿತಗೊಳಿಸಿ ನಲಿವ ಕುಸುಮಗಳ ಜೊಂಪಲಿ ನಗುವ ಚೆಲುವೆ ನೀನೆಂದು ನನ್ನನ್ನು ಪದೇ ಪದೇ ಹೊಗಳಿದವನು ನೀನು. ಮನಕೆ ಸಿಹಿ ನೆನಪುಗಳನ್ನು ಹೊರೆಯಾಗಿ ನೀಡಿದವನು ನೀನು. 

      ಆದರೆ ಇಂದು ನೀ ಕಾಣದೇ ಮನ ಸೊರಗುತಾ ಉಳಿದೆ..ಮನ  ಎಡೆಬಿಡದೇ ನಿನ್ನ ಸೆರೆಯಲ್ಲಿ ನಿತ್ಯ  ಜಪಿಸುತ್ತಿದ್ದೆ. ಮನದ ದಿಟ ಹಠವೊಂದೇ ಆಗಿದೆ. ಅದೂ ನೀ ಬಂದು ನನ್ನ ಕಾಣುವ ಘಳಿಗೆ. ಮನವು ಹೇಳುತಿದೆ.. 

‘ನೀ ಒಪ್ಪುವುದಾದರೆ ನನ್ನ ಒಪ್ಪಿಬಿಡು
ನಾ ವಿಧಿಯ ಅಪ್ಪುವ ಮುನ್ನಾ…
ಕಾಯಲಾರೆನು ಇನ್ನೂ ಕಡಲತಡಿಯಲಿಂದು’ 

     ಎಂದು ಮನ ಜಪಿಸುತಿದೆ ನಿನ್ನನೂ. ಸಾವಿರ ನೆನಪುಗಳ ಭಾರವನು ನನ್ನ ಹೆಗಲೇರಿಸಿ  ಏಕೆ ಮರೆಯಾದೆ ಇಂದು. ಸಾಗರ ನೇವರಿಸಿ ಬೀಸುವ ತಂಗಾಳಿಯು ನನ್ನ ಅಪ್ಪಿದರೂ ಮನ ತಣಿಯುತ್ತಿಲ್ಲ. ತನುವಿಗೆ ದಣಿವು ಕರಗುತ್ತಿಲ್ಲ. ತಂಗಾಳಿಗೂ ನನ್ನ ರೋಧನ ಕಂಡು ವ್ಯಸನವಾಗಿದೆ ಗೆಳಯಾ..ನನಗೇಕೆ ಹೀಗೆ..? ಎಲ್ಲಾ ನಿನ್ನಿಂದಲೇ ನೀ ಇರದ ನೋವಿಂದಲೇ.. ಮುಸ್ಸಂಜೆ ರಂಗಲ್ಲಿ ಇನನು ಮುಳುಗುವಾಗ ಅವನು ನನ್ನ ದುಗುಡವನ್ನು ಕಂಡು ದುಂಖಿಸಿದಂತೆ ಭಾವ ಅವನಲ್ಲಿ..ಆದರೆ ನಿನಗೇಕೆ ಅಂಜಿಕೆ ಪ್ರೀತಿಯ ಹುಡುಗಾ.. ನಾ ಕಾದಿದ್ದೇನೆ ನೀ ಬರುವ ಸವಿಘಳಿಗೆ ಕಾದು..ಕಾದು..ನೊಂದಿದ್ದೇನೆ. ಬೇಗನೇ ಅಂಜಿಕೆ ಮರೆತು ಆಗಮಿಸಿ ಕಡಲ ತಡಿಯಲ್ಲಿ ಸಿಹಿ ಮಾತುಗಳಿಂದ ನನ್ನ ಮನ ರಂಜಿಸು. ಮುದುಡಿದ ಕುಸುಮವಾಗಿದ ನನ್ನ ಮನವನ್ನು ನೀನು ನಗುವ ಗುಲಾಬಿಯನ್ನಾಗಿಸು.. ಸದಾ ಜೊತೆಯಾಗಿ ನೀ ನಗು ಗೆಳೆಯಾ.. ಬೀಸುವ ಕಡಲಲೆಗಳ ಎಣಿಸೀ.. ಎಣಿಸೀ..ನನ್ನ ನಯನವು ಮಬ್ಬು ಕವಿದಿದೆ, ನಿನ್ನಾಗಮನವನು ಬಯಸುತಾ. ನೀ ಬಂದು ನನ್ನ ನಯನಗಳ ಸಂತೈಸು ಗೆಳೆಯಾ. ಮುಸ್ಸಂಜೆಯ ರಂಗಲ್ಲಿ ಒವಲ ರಂಗೋಲಿ ಹಾಕೋಣ ಬಾ ಗೆಳೆಯಾ..

ನಾ ಕಾದಿರುವೆ ನಿನಗಾಗಿ..ನೀ ತರುವ ನಗುವಿಗಾಗಿ..

      ರಾಮಚಂದ್ರ ಸಾಗರ್


ನೋವಿನ ಶರಧಿ ಕರಗುವುದೇ..

      ಚೂರಾದ ಕನಸು ನನಸಾಗಬೇಕಿದೆ, ಮಾಯವಾದ ಸ್ವರ್ಗವು ಕೈಸೆರೆಯಾಗಬೇಕು, ನಗುವು ಮರೆತ ಮೊಗವು ನಗಬೇಕು, ತಿಳಿ ಸರೋವರದಲ್ಲಿ ಎದ್ದ ಅಲೆಗಳು ನಿಲ್ಲಬೇಕು, ಅದರಲ್ಲಿ ಪ್ರಶಾಂತ ತಂಪಿರುಳಲ್ಲಿ ನಿನ್ನ ಮೊಗವನ್ನು ನೋಡಬೇಕು. ಸಾಲು ಸಾಲು ನಿತ್ತು ಗಹಗಹಿಸುವ ಕಹಿ ನೆನಪುಗಳನ್ನು ನಿನ್ನಾಸರೆಯಲ್ಲಿ ಕರಗಿಸಿ ದೂರಕ್ಕೆಸೆಯಬೇಕು. ಮತ್ತೆ ಅವು ನನ್ನ ತಿರುಗಿ ನೋಡದಷ್ಟು ದೂರ ಎಸೆಯಬೇಕು, ಎಲ್ಲಕ್ಕೂ ನಿನ್ನಾಗಮನವಾಗಬೇಕು, ಮುನಿಸು ಕರಗಬೇಕು, ನೋವಿನ ಶರಧಿಯು ದೂರಾಗಬೇಕು, ಒಲವ ಅಲೆಯ ಬೀಸಬೇಕು. ಎದೆಯಾಳದಿಂದ ಅರಳಿದ ಪದ ನಿನಗೆ ಮೀಸಲಾಗಿ ಅವಿತಿರುವುದು ನನ್ನ ಅಧರದಿಂದ ಗುನುಗಬೇಕು, ನೀ ಬರಬೇಕು, ಮಧುರ ಪದಗಳೆಂದು ನುಡಿಯಬೇಕು. ಮಧುರವಲ್ಲದಿದ್ದರೂ ನಿನಗೆ ಬೇಸರವಾಗದಿದ್ದರೆ ಸಾಕು. ಬೆಳುದಿಂಗಳ ರಾತ್ರಿಯ ತಣ್ಣನೆಯ ಹವೆಯೂ ಬಿಸಿ ಬೇಸಿಗೆಯಂತೆ ಸುಟ್ಟರೆ ನಿನಗದುವು ಸಾಧುವೇ ಗೆಳೆಯಾ.? ಇದೇ ಕಂಪನ, ತಲ್ಲಣದಲ್ಲಿ ದಿನ ಕಳೆಯುವುದು ಹೇಗೆ ಗೆಳೆಯಾ.? ಮನದಲ್ಲಿ ನೀ ಬರುವ ಸೂಚನೆ ಸುಳಿವು ಸಿಗದಾಗಿದೆ, ಆದರೂ ವಿಧಿಯಿಲ್ಲ ನೀ ಬರುವ ಘಳಿಗೆಗಾಗಿ ತಂಪಿರುಳಲ್ಲಿ ಬೆಳುದಿಂಗಳ ಧಾರೆಯಲ್ಲೂ ನೋವಲ್ಲಿ ನಡುಗುವ ತನುವು ನನ್ನದಾಗಿದೆ, ಯಾವೂರು ನೀ ತಲುಪಿದರೂ ಯಾವ ಅಂತರ ನೀ ಮುಟ್ಟಿದರೂ ನೀ ನನ್ನ ಮರೆಯಲಾನೆಂಬ ಜಂಬದಲ್ಲಿ ನನ್ನ ಮನ ತುಂಬಿದೆ. ಏನೆಂದು ಹೆಸರಿಡಬೇಕು ಈ ನನ್ನ ಹುಚ್ಚು ಮನಕ್ಕೆ ..? ಇಲ್ಲೆಲ್ಲಾ ನಿನ್ನ ನೆನಪುಗಳ ಚಟುವಟಿಕೆಯ ಹಾವಳಿ. ನಿತ್ಯ ಕಾಡುವ ಸಲ್ಲಾಫದ ಜಾತ್ರೆಯಲ್ಲಿ ನೀ ಕೊಟ್ಟ ಒಲವ ಒಸಗೆಯ ಗುನುಗು ಇಡೀ ರಾತ್ರಿ ಕಳೆದರೇ ನಾ ಹಗಲು ಅದರಲ್ಲಿ ವ್ಯಯಿಸಿದರೆ ಏನೆಂದು ಕರೆಯಬೇಕು ನನ್ನಾವ್ಯಸಕೆ ಗೆಳೆಯಾ. ಹೊತ್ತಿಲ್ಲ ಗೊತ್ತಿಲ್ಲದೆ ನಿನ್ನ ವಶವಾದ ಮನದ ತಳಮಳಕ್ಕೆ ವಿರಹದ ನೋವೇ ವಾದ್ಯವಾಗಿದೆ, ವಿರಹದ ಗೀತೆಯೇ ಹಾಡಾಗಿದೆ. ಒಲವ ಗೀತೆ ಹೆದರಿ ದೂರಾಗಿದೆ. ಸುರಿವ ಬೆಳುದಿಂಗಳಲ್ಲಿ ನಲಿವ ನೈದಿಲೆಯಲ್ಲಿ ನಾ ದಿಟ್ಟಿಸಿದಾಗ ಮನದಲ್ಲಿ ಉಲ್ಲಾಸವಿಲ್ಲ, ನಿನ್ನ ಕಣ್ಣ ಸಂಭಾಷಣೆಯ ನೈವೇದ್ಯ ಬೇಕಿರಲು ಜಗದೆಲ್ಲ ಸೊಬಗು ಗೌಣ, ಬರೀ ಮೌನ, ರಂಗು ತುಂಬಿದ ಜಗವು ಬೆಳ್ಳಿ ಸೊಬಗು ನೀನಿಲ್ಲದೇ ಕಪ್ಪು ಗೆಳೆಯಾ. ನಮ್ಮಿಬ್ಬರ ಖಾಸಗೀ ಸಂಭ್ರಮಕೆ ಬೇಕಿರುವುದು ನಮ್ಮಿಬ್ಬರ ಮನಗಳ ಮಿಲನವೇ ಹೊರತು ಉಳಿದೆಲ್ಲ ಸೊಬಗು ಗೌಣ ಗೆಳೆಯಾ. ನೆನಪಿನ ಕಿಟಕಿಯ ತೆರೆದು ನೀನೊಮ್ಮೆ ನೋಡು ಗೆಳೆಯಾ. ನಮ್ಮ ಪ್ರೀತಿಯ ಹೊನಲಿನಲ್ಲಿ ಅರಳಿದ ಕುಸುಮವನ್ನಾದರೂ ಕೇಳಿ ನೋಡು, ಒಲವು ಜೀವಂತವಿದೆಯೆಂದು ನೀ ಅರಿತು ನೋಡು, ನೆನೆದು ನೊಂದು ನಿನಗೆಂದು ಮೀಸಲಾದ ಹೃದಯ ರೋಧನ ದೂರದಿಂದಲಾದರು ಒಮ್ಮೆ ದಿಟ್ಟಿಸಿ ನೋಡು. ಒಲವ ನಾವೆ ಮುಳುಗದೇ ಸಾಗಬೇಕು, ಒಲವತೀರ ತಲುಪಬೇಕು, ಅದರಲ್ಲಿ ನಾನು ನೀನು ನಗುತಾ ಸಾಗಬೇಕು. ವಿಧಿಯ ಹಗೆತನವೆಷ್ಟೇ ಕ್ರೂರಿ ಎಂದು ಹಠ ಹಿಡಿದರೂ ಹುಡುಗ ನಾನಿನ್ನ ಕಣ್ಣಲ್ಲಿ ಕದಲದೇ ಕಾಪಿಡುವೆ. ಕಣ್ಣೀರಿಗೂ ಜಾಗವಿರದಂತೆ ಕಾಪಿಡುವೆ ಇದು ದಿಟ. ಚಿನ್ನದಂತ ಕನಸುಗಳು ತುಕ್ಕು ಹಿಡಿದ ಹಳೆಯ ದಾತುವಿನಂತೆ ಕಳೆಗುಂದಿವೆ. ನನ್ನ ಮನದೆಲ್ಲಾ ಆಸೆಯು ಮುದುಡಿವೆ ನಿನ್ನಾಗಮನದ ಜಾಡು ಬಯಸುತಾ ಅರಸುತಾ ನಿನ್ನ ಸ್ಥುತಿಸುವ ಕಾಯಕದಲ್ಲಿ ನೊಂದು ಬೆಂದ ಮನದಲ್ಲಿ ಸಾವರಿಸದ ಮನದಲ್ಲಿ ವಿರಹದ ಬಿರುಗಾಳಿ ಎದ್ದಿದೆ. ಎಷ್ಟೇ ನಾ ಸಂತೈಸಿದರೂ ಅದು ನಿಲ್ಲುತ್ತಿಲ್ಲ, ಕದಲದೇ ಕಾಡುವ ನಿನ್ನ ನೆನಪುಗಳು ನನ್ನ ಪದೇ ಪದೇ ಬೆದರಿಸುತ್ತಿವೆ. ನನ್ನ ಕಡುಕೆಂಪು ಕೆನ್ನೆ ಕಪ್ಪಿಟ್ಟಿದೆ, ನಯನಗಳು ಮಂಜು ಕವಿದಿವೆ, ಮಾತು ಮರೆತು ಮೌನ ತಾಳಿದೆ. ಜೀವದ ಉಸಿರಲ್ಲೂ ಏರು ಪೇರು, ಎಲ್ಲಾ ನಿನ್ನಮಲಿನಲ್ಲಿ ಲೀನವಾದ ವ್ಯಸನ. ಹುಚ್ಚು ಮನದ ಸ್ಥಿರತೆಗೆ ಬೇಕಿದೆ ಗೆಳೆಯ ನಿನ್ನೊಲವ ಸಾನಿಧ್ಯ. ನಿನ್ನ ನಗುವ ಮೊಗದ ದರ್ಶನ. ಜಾತಿ ಮತದ ಗೌಜಿಗೆ , ಸಂಪತ್ತು ಸಿರಿಯ ಅಂತರವ ಎಣಿಸದೆ, ಸಾಧುವಲ್ಲದ ಮಾತುಗಳಿಗೆ ಸಿಲುಕಿ ನಲುಗದೆ, ಅನ್ಯರಿಗೆ ಅಂಜದೇ ನೀ ನನ್ನೆಡೆ ಬಾ ಹುಡುಗಾ. ಉಪವಾಸದ ಮನಸು ನಿನ್ನೊಲವ ಸಾಂಗತ್ಯದಲ್ಲಿ ನಗುತ ಹಸಿವು ದೂರಾಗಿಸಿಕೊಳ್ಳಬೇಕು. ನಿನ್ನ ಮನವನ್ನು ಗೆದ್ದು ಬೀಗಿದ ಹೃದಯ ನನ್ನದು, ನಿನ್ನ ಮನಕೆ ಒಡತಿಯೂ ನಾನು. ನೀ ಎಲ್ಲೇ ಇದ್ದರೂ ನಿನ್ನ ಹೃದಯ ನನ್ನಲ್ಲಿ ಸೆರೆಯಾಗಿದೆ. ನಾ ಇಲ್ಲದೇ ಸಾಗದ ಜೀವ ನೀನು, ಕಂಡಿತಾ ಸಾಗಲಾರೆ ಬಹುದೂರ, ಬಹು ಸಮಯವೆಂಬುದು ನನ್ನ ಕಿವಿಗೆ ಅಪ್ಪಳಿಸಿ ಹೇಳುತ್ತಿದೆ ಬೀಸುವ ತಂಗಾಳಿಯ ಮೊರೆತದ ಪ್ರತೀ ಸದ್ದು. ಒಲವಗರಿಯಿಂದ ನಿನ್ನೆದೆಯಲ್ಲಿ ನಾ ಬರೆದ ಸಾಲು ನಿನ್ನ ಹೃದಯದಿಂದ ಹೊರಬರಲಾರವು ಎಂಬ ದಿಟ ನಂಬಿಕೆಯಲ್ಲೇ ನಿನ್ನಾಗಮನಕ್ಕಾಗಿ ಹಾತೊರೆಯುತಾ ಜಂಬದಲ್ಲೇ ಕುಳಿತಿರುವೆ..!! ಚೂರಾದ ಮನಸು ಒಂದಾಗಿಸುವವನೇ ಬೇಗನೇ ಬಾ..ನೋವಿನ ಶರಧಿಯ ಕರಗಿಸುವವನೇ ಬೇಗನೇ ಬಾ. ಜೊತೆಗೆ ನೀನು ನಗಬೇಕು, ಒಲವ ಪಥದಲಿ ನನ್ನೊಂದಿಗೆ ನಗುತಾ ಸಾಗು.
ಗೆಳೆಯಾ..ನೀ ಬರುವುದನು ಮರೆದಿರು..
ಬರುವಾಗ ತರಲು ಮರೆದಿರೊಂದು ಕೆಂಗುಲಾಬಿಯನೂ..

         ರಾಮಚಂದ್ರ ಸಾಗರ್

Friday, 13 January 2017

ಸಂಕ್ರಮಣವಾಗಲಿ..

ಎಳ್ಳು ಎಂಬ ಸ್ನೇಹವು
ಬೆಲ್ಲ ಎಂಬ ಪ್ರೀತಿಯು
ಮನ ಮನಗಳ ಬೆಸೆಯಲಿ
ಸಹೋದರತೆಯ ಬಂಧದಲಿ
ಈ ಸಮಯದೀ
ಸೌಹಾರ್ದ ಸಂಕ್ರಮಣವು ಸಂಭ್ರಮಿಸಲಿ..


ವಿರಸದ ಮನಸು ಮರೆಯಾಗಲಿ
ಕಹಿ ಘಳಿಗೆಯು ಕಾಡದಿರಲಿ
ವಿಮೋಹ ದುರಾಸೆ ದೂರಾಗಲಿ
ಈ ಸಮಯದೀ
ಸಂಪನ್ನ ಮನಗಳ ಸಂಕ್ರಮಣವಾಗಲಿ..


ವಿರಸ ತಾಪಗಳು ದೂರಾಗಲಿ
ಸ್ನೇಹ ಎಲ್ಲರೆದೆಯ ಗೂಡಾಗಲಿ
ಸಖ್ಯ ಸಮಾಗಮ ಚಿರಾಯುವಾಗಲಿ
ಈ ಸುಸಮಯದೀ
ಗೆಳೆತನದ ಸಂಕ್ರಮಣವಾಗಲಿ..


ವಿಘ್ನ ಬದುಕಲಿ ಬಾರದಿರಲಿ
ಸವೆ ಬಾಳಲಿ ಕಾಡದಿರಲಿ
ಬವಣೆ ಯಾರನು ಮುಟ್ಟದಿರಲಿ
ರೋಧನೆ ಯಾರಿಗೂ ತಟ್ಟದಿರಲಿ
ಈ ಸಮಯದೀ
ಸಂತಸದ ಸಂಕ್ರಮಣವಾಗಲಿ..


ಬಾಂಧವ್ಯಗಳು ಚಿಗುರೊಡೆಯಲಿ
ಬಂಧುರ ಜಗದ ವಿಕ್ರಮವಾಗಲಿ
ಇನನ ಹೊಳಪಿನಲಿ
ವಸುಂಧರೆಯ ಮಡಿಲು
ಈ ಸುಸಮಯದೀ
ಪ್ರೀತಿಯ ಸಂಕ್ರಮಣವಾಗಲಿ..

 
      ರಾಮಚಂದ್ರ ಸಾಗರ್

Sunday, 8 January 2017

ಜಗವನ್ನೇ ಶತ್ರುವಾಗಿಸಿ ನಡೆದಳು..

drinking is injurious to health
      ಏ ಹುಡುಗಿ..ಈ ನೋವಲ್ಲಿ ಸುಟ್ಟ ಮನದ ಸಂಕಟ ನಿನಗೇನು ಗೊತ್ತು, ಸುಮ್ಮನೇ ಸದ್ದಿಲ್ಲದೇ ಸಾಗುತ್ತಿದ್ದ ನನ್ನ ಬದುಕಲ್ಲಿ ನೀನ್ಯಾಕೆ ಬಂದೆ, ಏನೋ ತಣ್ಣೀರು ಕುಡಿದರೂ ಅಮೃತ ಕುಡಿದಂತೆ ನೆಮ್ಮದಿಯಲ್ಲಿ ನಗುತಿದ್ದೆ ಅಂದು ನಾನು, ಬಿಸಿಗಾಲದ ಶೆಕೆಯಲ್ಲಿ ಬೆವರಿಳಿದು ಬೇಯುವವಧಿಯಲ್ಲಿ ಇರುಳು ಬಿಸಿಯ ಹವೆಯೆಬ್ಬಿಸಿ ಕುಣಿದರೂ ಸಾವದಾನದಲ್ಲಿ ಕಣ್ಣುಗಳನ್ನು ನೆಮ್ಮದಿಯಿಂದ ಮುಚ್ಚಿ ಯಾವುದೇ ಆತಂಕವಿಲ್ಲದೇ  ನಿರಾಳವಾಗಿ ನಿದ್ರಿಸುತಿದ್ದೆ, ಹೃದಯದ ರೋಧನೆ, ನೋವಿಲ್ಲದೇ ನಿರಮ್ಮಳವಾಗಿದ್ದೆ. ರಾತ್ರಿ ಅನ್ನ ಉಣ್ಣದಿದ್ದರೂ ಸಂತೋಷದಲ್ಲಿರುತ್ತಿದ್ದೆ, ಬೆಳಿಗ್ಗೆ ರವಿ ಉದಯಿಸಿ ಬಿಸಿಲು ಮುಖಕ್ಕೆ ಬಡಿಯುವವರೆಗೂ ನಿರಾಳವಾಗಿ ನಿದ್ರಿಸುತ್ತಿದ್ದೆ, ಒಂಟಿ ಬದುಕಾದರೂ ಹೃದಯವು ನೆಮ್ಮದಿಯ ಸೆಲೆಯಲ್ಲಿ ಆಶ್ರಮ ಪಡೆದಿತ್ತು. ಎಲ್ಲವೂ ದೇವರ ಕೊಟ್ಟ ಬದುಕು ಬಡತನವಾದರೇನು ಮೂರು ಹೊತ್ತಲ್ಲದಿದ್ದರೂ ಎರಡು ಹೊತ್ತು ಊಟ, ನೆಮ್ಮದಿಯ ನಿದ್ರೆ ಮಾಡಿ ಹಾಯಾಗಿದ್ದವನ ಬದುಕಲ್ಲಿ ನೀ ಬಂದು ಪ್ರೀತಿಯ ಜಗದಲ್ಲಿ ನನ್ನ ಕೈಹಿಡಿದು ನೀನು ಇನ್ನೊಂದು ಜಗವಿದೆ ಎಂದು ಕರೆದೆ, ಪ್ರೀತಿಗೆ ಸೋಲದ ಮನವೆಲ್ಲಿದೆ, ಜಗದ ಮೂಲೆ, ಮೂಲೆಯೂ ಪ್ರೀತಿಯ ಬಂಧದಲ್ಲಿದೆಯೆಂದು ನನ್ನನ್ನು ನೀ ನಂಬಿಸಿದೆ, ನಾನು ನಂಬಿದೆ, ಜಗದೆಲ್ಲವೂ ಪ್ರೀತಿಯ ಸೆಲೆಯ ಬಲದ ಕೃಪೆಯೇ.. 
     
   ಪ್ರೀತಿಯ ಹಂದರಲ್ಲಿಯೇ ಜಗದ ಜೀವ ಉಳಿದಿದೆ, ಪ್ರೀತಿಯಿಲ್ಲದೇ ಜಗದಲ್ಲಿ ಯಾವುದಿದೆ, ಅರಳುವ ಹೂವು ತಂಗಾಳಿಯ ಪ್ರೀತಿಯಲ್ಲಿ ನಗುತಿದೆ ನೋಡು ಎಂದು ನನ್ನ ಮನಸ್ಸನ್ನು ನೀ ಗೆದ್ದೆ, ಸರೋವರದ ತಾವರೆಯ ತೋರಿ ನೀನಂದು ಸರೋವರ ಮತ್ತು ತಾವರೆ ನಡುವೆ ಪ್ರೀತಿಬಂಧವೆಂದೆ. ಸರೋವರವಿಲ್ಲದೇ ತಾವರೆ ಉಳಿವುದೇ, ತಾವರೆಯಿಲ್ಲದೇ ಸರೋವರ ಪಳಿಸುವುದೇ..? ನೀ ಯೋಚಿಸು ಎಂದು ಮನಕ್ಕೆ ನೀ ಲಗ್ಗೆಯಿಟ್ಟೆ, ಜಗದೆಲ್ಲವನ್ನು ಅಷ್ಟೊಂದು ಹತ್ತಿರದಿಂದ ಮನಕ್ಕೆ ಪರಿಚಯಿಸಿ ಪ್ರತಿ ವಸ್ತುವಿನಲ್ಲೂ ಪ್ರೀತಿಯ ಬಂಧವನ್ನು, ಒಲವಿನ ಸಾರವನ್ನು ಅರ್ಥೈಸಿದೆ, ಅರ್ಜುನನಿಗೆ ಸಾರಥಿಯಾದ ಕೃಷ್ಣನ ಉಪದೇಶದಂತೆ ಬದುಕಿನ ಪ್ರತಿದಿನವೂ, ಪ್ರತಿಘಟ್ಟದಲ್ಲೂ, ನನಗೆ ಪ್ರಿತಿಯ ಬಂಧದ ಪರಿಚಯವನ್ನೇ ಮಾಡಿಸುವುದನ್ನು ನೀ ಕಾಯಕವಾಗಿಸಿಕೊಂಡೆ, ನಿನ್ನ ಒಲವ ಉಪದೇಶಗಳಿಗೆ ನಾನು ಕೇಳುವ ಪ್ರಶ್ನೆಗಳಿಗೆ ನಿನ್ನ ಮುದ್ದಾದ ಉತ್ತರಕ್ಕೆ ನಾ ಶರಣಾಗಿ ಹೋದೆ. ನಿನ್ನ ತುಂಟ ನಗುವಿಗೆ ನಾ ಸೋತು ಹೋಗಿದ್ದೆ. ಪ್ರೀತಿಯ ಉಪದೇಶವನ್ನು ಮುಂಜಾನೆಯ ರವಿಯಿಂದ ಆರಂಭಿಸಿ ಮುಸ್ಸಂಜೆಯ ರವಿ ಮರೆಯಾಗುವವರೆಗೂ ನೀಡಿ, ರಾತ್ರಿ ಚಂದಿರನ್ನೂ ತೋರಿಸಿ ಬಿಡುವಿರದೇ, ಅಮವಾಸ್ಯೆಯಂದು ಹೊಳೆವ ತಾರೆಗಳ ಬೆಳಕಲ್ಲೂ ತುಸು ಬಿಡುವೂ ನೀಡದೇ ಎಲ್ಲೆಲ್ಲೂ ಪ್ರೀತಿಯೇ ಎಂದು ಒಲವೋಪದೇಶ ಮಾಡಿದೆ, ಹೊಳೆವತಾರೆಗಳಿಗೆ ಭುವಿಯ ಕುಸುಮಗಳ ಒಲವೆಂದೆ, ನಗುವ ಚಂದಿರನಿಗೆ ನಗುವ ನೈದಿಲೆ ಬೇಕೆಂದೆ ಅದಕಾಗ್ಗೆ ಅವನ ಕಾತರವೆಂದೆ, ಎಲ್ಲವನ್ನೂ ನಾ ಮರುಪ್ರಶ್ನೆ ಹಾಕದೇ ನಿನ್ನ ಮಾತುಗಳನ್ನು ನಂಬಿದೆ ಜೊತೆಗೆ ಸದ್ದಿಲ್ಲದೇ ನಿನ್ನಲಿ ವಶವಾದೆ. 

     ಪ್ರೀತಿಯ ಜಗದಲ್ಲಿ ನನ್ನ ಮನಸ್ಸಿಗೆ ಒಲವ ರಂಗು ಸಾಕಷ್ಟು ಲೇಪಿಸಿದೆ, ಎಷ್ಟೆಂದರೇ ನಾನಿಂದು ಎಷ್ಟೇ ಪ್ರಯತ್ನಿಸಿ ಯಾವ ಶರಧಿಯಲ್ಲಿ ಮುಳುಗೆದ್ದರೂ ನಿನ್ನೊಲ ರಂಗು ಕರಗುತ್ತಿಲ್ಲ ಕಣೇ, ಅಂದು ನಾನು ನೀನು ಕಡಲತಡಿಯ ಬಂಡೆಗಳ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡಿದ್ದೆವು, ಇಂದು ನಾನಲ್ಲಿ ನಡೆದು ಹೋದರೇ ಆ ಬಂಡೆಗಳೇ ಬಂದು ನನ್ನ ಎದೆಗೊರಗಿದಂತೆ ನೋವಾಗುತ್ತಿದೆ, ಜಗದೆಲ್ಲಾ ವಸ್ತುಗಳಲ್ಲಿ ಪ್ರೀತಿಯನ್ನೇ ತೋರಿಸಿ ನೀ ಏನೋ ನಡೆದೆ, ಸದ್ದಿಲ್ಲದೇ ಸಾಗಿಹೋದೆ. ನೀನಿಲ್ಲದೇ ಒಂಟಿಯಾಗಿ ನೋಡುವ ನನ್ನ ಕಣ್ಣಿಗೂ ಸರಿಯಾಗಿ ಕೆಲಸವಿಲ್ಲ, ಮಬ್ಬು ತುಂಬಿದೆ ಸಾಕಷ್ಟು, ಚಿಂತೆಗಳ ಸುರಿಮಳೆಯ ಕೊರೆತದಲ್ಲಿ ಕೊರಗುತಾ, ಮಬ್ಬು ತುಂಬಿದ ಕಣ್ಣಿನಿಂದ ಸರಿಯಾಗಿ ನಾ ಏನೂ ನೋಡಲಿ, ಕಂಡಲ್ಲೆಲ್ಲಾ ನೀ ಮುದ್ದಾಗಿ ತೋರಿಸಿದ ವಸ್ತುಗಳೇ ಕಾಡುತಿರುವಾಗ, ನಾ ನೋಡುವುದೇಗೆ, ದೇವರೇ ನನ್ನನ್ನು ಶಾಶ್ವತವಾಗಿ ಕುರುಡನನ್ನಾಗಿಸು ಎಂಬುದೊಂದೇ ದೇವರಲ್ಲಿ ಪ್ರಾರ್ಥನೆಯಾಗಿದೆ, ಒಂದಂತೂ ಸತ್ಯ ಅವಳಿಲ್ಲದೇ ನಾನೀಗ ಅಕ್ಷರಶಃ ಕುರುಡ, ಮಬ್ಬು ಆವರಿಸಿರಲು ನನ್ನ ತನುವು ನಿಯಂತ್ರಣ ತಪ್ಪಿ ಬಂಡೆಗೊರಗಿ ಬೀಳುತಿದ್ದೆ, ಒಡೆದ ಹಣೆಯಲ್ಲಿ  ಸುರಿವ ರಕ್ತದಲ್ಲಿ ಕೊರೆವ ಛಳಿಗಾಳಿಯಲ್ಲೇ ಇಂದು ನಾನು ಸಾಗುತ್ತಿರುವೆ. ಎಷ್ಟೇ ಬೇಡವೆಂದು ಒದ್ದರೂ ಹೋಗದ ನಿನ್ನ ನೆನಪುಗಳ ಹಾವಳಿ ಎದೆಯನ್ನು ಅವಿರತ ಸುಡುತಿದೆ, ಕೈಲಿದ್ದ ಸರಾಯಿ ಬಾಟಲಿ ನೋಡಿ ಎರಡು ಎಣಿಸುವುದರೊಳಗಾಗಿ ಹೊಟ್ಟೆ ಸೇರುತಿದ್ದೆ, ನೋಡು ನೋಡುತಿದ್ದಂತೆಯೇ ಕರಗುತಿದ್ದೆ, ಕರಗುತ್ತಾ ಯಾವುದೋ ಮಂಪರು ಜಗದಲ್ಲಿ ನಿನ್ನ ಮರೆಯುತ್ತಾ ವಾಲಾಡುತ್ತಿದ್ದೆ. ಇನ್ನು ಅನ್ನದ ಚಿಂತೆಯೆಲ್ಲಿ..? ತಣ್ಣೀರು ಕುಡಿದರೂ ಅಮೃತವೆಂದಿದ್ದ ನನ್ನ ಮನವಿಂದು ಎದುರು ಅಮೃತ ತಂದಿಟ್ಟರೂ ಕುಡಿಯಲು ಒಪ್ಪಿಗೆ ನೀಡುತ್ತಿಲ್ಲ. ಎಲ್ಲವೂ ನಿಶೆಯಲ್ಲೇ, ನಿನ್ನೊಲವ ಅಮಲಿನ ಅಪ್ಪುಗೆಯಲ್ಲಿ ಸರಾಯಿ ಸಹವಾಸದಲ್ಲೇ ವಾಸವಾಗಿದೆ, ಮನ ಸದ್ದಿಲ್ಲದೇ ತನಗೆ ಅರಿವಿಲ್ಲದ ಎಲ್ಲಾ ದುಶ್ಚಟಗಳ ತಾಣವಾಗಿದೆ. ನೋವಿನ ಹಂಗು ನಿನಗೇನು ಗೊತ್ತು, ಅನುಭವಿಸುವ ಮನದ ರೋಧನೆ ನಿನಗೇನು ಕೇಳಿಯಾತು, ಸುರಿವ ಹನಿಗಳಲಿ ನೀನು ಬಿಂಬವಾಗಿ ಕುಣಿಯುತಿರುವೆ ನಿತ್ಯ, ಹಗಲು ಇರುಳು ರೋಧಿಸಿ ನಾ ಹರಿಸಿದ ಕಣ್ಣೀರ ಹೊನಲಿನಲ್ಲಿ ನಿನದೇ ರೂಪ ಬಿಂಬವಾಗಿ ಕಾಡುತಿದೆ, ಇರಬಹುದು ಅದು ನೀನು ನನ್ನ ಕೊನೆಯನ್ನೇ ಬಯಸಿದಂತಿದೆ. ಅಂದು ನೀ ಪ್ರೀತಿಯಿಂದ ನನ್ನ ಮುದ್ದಾಗಿ ಕರೆದೊಯ್ಯತಿದ್ದ ಸಾಗರ ತೀರದ ದಾರಿಯಲ್ಲಿ ಇಂದು ನಾನೊಬ್ಬನೇ ರೋಧಿಸುವ ಮನದೊಂದಿಗೆ ಸಾಗುತಿದ್ದೇನೆ, ಕಣ್ಣೀರು ನನ್ನ ಅನುಮತಿ ಕೇಳದೇ ಸದ್ದಿಲ್ಲದೇ ನೆಲಮುಟ್ಟುತ್ತಿವೆ, ಏನೇ ಆಗಲಿ ಅದು ನೀ ಕೊಟ್ಟ ಕೊಡುಗೆ, ಅದು ಕ್ಷಯವಾಗುವುದುಂಟೇ. 
      
     ಇಂದು ಬಾನಲ್ಲಿ ನಗುವ ಚಂದಿರನನ್ನ ನಾ ನೋಡಿದರೇ ಕಣ್ಣಿಗೆ ಸೂಜಿ ಚುಚ್ಚಿದಂತೆ, ನಗುವ ನೈದಿಲೆಯ ನೋಡಿದರೆ ಕಣ್ಣಿಗೆ ಸುಣ್ಣಬಿದ್ದಂತೆ, ತಂಗಾಳಿ ಮೈಸೋಕಿದರೆ ಬಿಸಿನೀರನ್ನು ಮೈಮೇಲೆ ಚೆಲ್ಲಿದಂತೆ ಭಾಸ. ನೋವಿನ ಸಾಮ್ಯಾಜ್ಯಕ್ಕೆ ನನ್ನನ್ನು ಅಧಿಪತಿಯಾಗಿಸಿ ನೀ ನಡೆದೆ. ಅಂದು ಇದೇ ಸಾಗರದ ತೀರದಲ್ಲಿ ಉರಿವ ಜ್ವಾಲೆಯ ಹೊತ್ತಿಸಿ ಮೈಕಾಯಿಸಿಕೊಂಡಿದ್ದೆವು. ಇಂದು ಯಾರೋ ಹೊತ್ತಿಸಿ ಹೋದ ಬೆಂಕಿಯಲ್ಲಿ ನಾನೊಮ್ಮೆ ನೋಡಿದರೂ ಅಲ್ಲಿಯೂ ನಿನದೇ ನೆನಪು, ನಿನದೇ ಬಿಂಬದ ಕುಣಿತ. ನಿನ್ನ ಹೊರತಂದು ನಾ ಪ್ರಶ್ನಿಸಬೇಕೆಂದು ನಾನು ಹಠವಿಡಿದು ಉರಿವ ಜ್ವಾಲೆಯಲ್ಲಿ ಕೈಸುಟ್ಟುಕೊಂಡು ನೋಯುತ್ತಿದ್ದೇನೆ.. ಕೈಲಿರುವ ಸರಾಯಿ ಬಾಟಲಿ ಕಾಲಿಯಾಗುತಿದೆ, ನಾನು ಕುಡಿದಲ್ಲ ನೋಡಿದರೂ ಸಾಕು, ತಂಪು ಹವೆಯಲ್ಲೂ ನನ್ನ ತನುವು ಬೆವರು ಹನಿಗಳ ಕಣಜವಾಗಿದೆ. ಅಂದು ನಿನ್ನೊಲವ ಸೆರೆಯಲ್ಲಿ ನಿನ್ನ ತಬ್ಬಿ ಹಿಡಿದಾಗ ನಡುಗುತ್ತಾ ಬೆವರಿದ್ದೇ. ಇಂದು ಅದೇ ನೆನಪು ಸಾಕು ನಾನು ಕೊನೆಯಾಗುವವರೆಗೂ ಬೆವರಿಳಿಸಿಕೊಳ್ಳಲು.. 
     
       ಯಾರೋ ನನ್ನ ಬಗ್ಗೆ ಹೇಳಿದ ತಪ್ಪು ಮಾತಿಗೆ ನೀ ಬೆಲೆಕೊಟ್ಟು, ಅವರ ಮಾತು ನಂಬಿ, ನಿರ್ಮಲ ನನ್ನ ಪ್ರೀತಿಯನ್ನು ನೀ ತ್ಯಾಗ ಮಾಡಿದ್ದೂ ಸರಿಯೇ.. ಪ್ರತ್ಯಕ್ಷವಾಗಿ ಕಂಡರೂ ಇನ್ನೊಮ್ಮೆ ಪರಿಶೀಲಿಸಿ ನೋಡೆಂಬ ಮಾತನ್ನು ನೀ ಮರೆತೆಯೇಕೇ..? ನಮ್ಮ ಪ್ರಿತಿಯನ್ನು ಬಯಸದ ವಿಕೃತಿಗಳು ನಮ್ಮೊಲವನು ಬೂಧಿ ಮಾಡಿ, ಒಲವ ಕಣ ಕಣವನ್ನು  ಕರುಣೆಯಿಲ್ಲದೇ ಕೊಂದರು, ಅವರ ಮಾತುಗಳಿಗೆ ನೀ ತುಸು ಎಣಿಸದೇ, ಯೋಚಿಸದೇ ನಡೆದದ್ದು ವಿಧಿಯೇ.  ಅವರಸರದ ಆಟವನ್ನು ನೀನು ಆಡಿಬಿಟ್ಟೆ, ನನ್ನ ಬದುಕು ಈಗ ಕೇಲವ ನೀನಿಲ್ಲದೇ ನಿನ್ನ ಬೇಡವೆಂದರೂ ಕಾಡುವ ನೆನಪುಗಳ ಜೊತೆಗೆ, ಕೈಲಿ ಸರಾಯಿ ಬಾಟಲಿಯ ಹಿಡಿದೂ ಅದೇ ದಾರಿಯಲ್ಲಿ, ನೀನಂದು ಪ್ರೀತಿಯಿಂದ ಕೈಹಿಡಿದು ನಡೆಸುತ್ತಿದ್ದ ದಾರಿಯಲ್ಲಿ ಒಂಟಿಯಾಗಿ ತೂರಾಡುತ್ತಾ, ಸುರಿವ ಕಣ್ಣೀರು ಹನಿಗಳ ಸಂತೈಸುವಿಕೆಗೂ ಒಪ್ಪದೇ  ಸಾಗುತಿದ್ದೇನೆ..ಒಂದಂತೂ ಸತ್ಯ, ನನಗೀಗ ಇಡೀ ಜಗವೇ ಶತ್ರುವಾಗಿ ಕಾಣುತಿದೆ, ಏನನ್ನು ನಾ ಕಂಡರೂ ಹಿತವೆನಿಸುತಿಲ್ಲ..ಯಾವುದೂ ಬೇಡವಾಗಿದೆ, ನೀನೇ ನನ್ನನ್ನು ತಿರಸ್ಕರಿಸಿದ ಮೇಲೆ..ಜಗವೇ ಶತ್ರುವಾಗಿದೆ..

          ರಾಮಚಂದ್ರ ಸಾಗರ್