Saturday, 10 December 2016

ಸಂಗೀತದಲೆಯಲ್ಲಿ ಅರಳಿದ ಒಲವು..

      ನಮ್ಮ ಅಜ್ಜ ನಮ್ಮೂರಿನಲ್ಲಿ ನಡೆಸುವ ಸಂಗೀತ ಶಾಲೆಗೆ ನಾಡಿನಲ್ಲೇ ಒಳ್ಳೆಯ ಹೆಸರಿದೆ, ಅವರ ಹೆಸರು ರಘುನಾರಾಯಣ್ ಅಂತ, ಅವರ ಶಿಶ್ಯವೃಂದ ಜಗದಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ, ನಮ್ಮ ಅಜ್ಜನವರು ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ನಾಡಿನಾದ್ಯಾಂತ ಸುತ್ತುವ ಅವರದೂ ಸಂಗೀತವನ್ನು ಜಗದೆಲ್ಲೆಡೆ ಕಂಪಿಸುವ ಹೃದಯ. ವಿದೇಶಗಳಿಗೆ ಹೋಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದವರು, ಅವರಿಗೆ ಅವರ ಮಗನನ್ನು ಒಳ್ಳೆಯ ಸಂಗೀತಗಾರನನ್ನಾಗಿ ಮಾಡಬೇಕೆಂಬ ಮಹದಾಸೆಯಿತ್ತು, ಆದರೆ ನನ್ನ ತಂದೆ ವಿಜ್ಞಾನ ಕ್ಷೇತ್ರದಲ್ಲೇ ಆಸಕ್ತಿ ಯಥೇಚ್ಚವಾದ್ದರಿಂದ ಕೃಷಿ ವಿಜ್ಞಾನದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಾ ಬೆಂಗಳೂರು ರೀಸರ್ಚ ಸೆಂಟರ್‍ನಲ್ಲಿ ಒಬ್ಬರು ಸಂಶೋಧಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ನನ್ನ ತಂದೆ ಅವರ ತಂದೆಯ ಆಸೆಯನ್ನು ನನ್ನ ಮೂಲಕವಾದರೂ ಈಡೇರಿಸುವ ಉದ್ದೇಶದಿಂದ ನನಗೆ ಸ್ವಲ್ಪ ಸಂಗೀತದ ಅಭ್ಯಾಸಕ್ಕೆಂದು ನನ್ನನ್ನು ಬಾಲ್ಯದಿಂದಲೇ ಸಂಗೀತಕ್ಕೆ ಸೇರಿಸಿದ್ದರು, 6ನೇ ವಯಸ್ಸಿಗೆ ಸಂಗೀತಭ್ಯಾಸಕ್ಕೆ ಸೇರಿದವನು ನಾನು, ನಂತರ ಹತ್ತನೇ ತರಗತಿ ಬಂದೊಡನೆ ಮನೆಯಲ್ಲಿ ಸಂಗೀತ ಅಭ್ಯಾಸ ಬಿಡಿಸಿದರು, ಪಿ.ಯು.ಸಿ ಯಲ್ಲೂ ನಾನು ವಿಜ್ಞಾನದ ಅಧ್ಯಯನಕ್ಕೇ ಹೆಚ್ಚು ಒತ್ತು ಕೊಡಲೆಂದು ಬೇರೆ ಚಟುವಟಿಕೆಗಳ ಕಡೆ ಗಮನ ಕಡಿಮೆಮಾಡಿ ತಂದೆಯಂತೆ ಉನ್ನತ ಸ್ಥಾನಕ್ಕೇರಬೇಕೆಂಬ ಕನಸು ಮತ್ತು ನನ್ನ ತಂದೆ ತಾಯಿಯರ ಹಠಕ್ಕೆ ನಾನು ಮುಗಿಬಿದ್ದು ಪಠ್ಯದ ಅಧ್ಯಯನದಲ್ಲೇ ತಲ್ಲೀನನಾದೆ. ಆದರೆ ನಾನು ಊರಿಗೆ ಅಜ್ಜನ ಮನೆಗೆ ಹೋದಾಗ ನನ್ನ ಅಜ್ಜ ನನ್ನಿಂದ ಒಂದೆರಡು ಗೀತೆ ಹಾಡಿಸಿ ನನ್ನನ್ನು ತಿದ್ದಲು ಪ್ರಯತ್ನಿಸುತ್ತಾ ತುಂಬಾ ಆನಂದ ಪಡುತ್ತಿದ್ದರು, ಅವರಿಗೆ ಕೆಲವೊಮ್ಮೆ ಎಷ್ಟೇ ಆಯಾಸವಿರಲೀ ಎಲ್ಲಿಂದಲೇ ಬಂದಿರಲಿ ಬಂದವರೇ ಒಂದು ಗೀತೆಯನ್ನು ಹಾಡಲು ಕೇಳುತ್ತಿದ್ದರು. ಅದು ಸಂಗೀತ ತನ್ನ ಮೊಮ್ಮಗನಲ್ಲಿ ಉಳಿಯಲಿ ಎಂಬುದುರ ಬಿಂಬಕವಾಗಿತ್ತು, ನನಗೆ ಸಂಗೀತ
ಮತ್ತು ಅದರ ಮಹತ್ವದ ಬಗ್ಗೆ ಹೇಳುತ್ತಾ ಎಷ್ಟೋ ರೋಗಗಳು ಸಂಗೀತದಿಂದ ಗುಣವಾಗುತ್ತವೆ, ಸಂಗೀತವು ಮಾನವನ ಮಾನಸಿಕ ಸದೃಡತೆಗೂ ಬೇಕು, ನಾವು ಇದನ್ನು ಗಟ್ಟಿಗೊಳಿಸಿ ಬೆಳೆಸಬೇಕು, ನೀನು ಇದನ್ನು ನಿತ್ಯ ಅಧ್ಯಯನ ಮಾಡು ಇದರಿಂದ ನಿನಗೂ ಉತ್ತಮ ಏಕಾಗ್ರತೆ ಮತ್ತು ನೆಮ್ಮಧಿಯ ಸಾನಿಧ್ಯ ದೊರೆಯುತ್ತದೆಂದು ನನಗೆ ಅರಿವು ಮೂಡಿಸಲು ಶತ ಪ್ರಯತ್ನಿಸುತ್ತಿದ್ದರು, ಆದರೆ ನನ್ನ ಮನಸ್ಸು ಸಂಗೀತದೆಡೆ ಅಷ್ಟೊಂದು ಪಕ್ವವಾಗಿರಲಿಲ್ಲ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವನು, ಅಲ್ಲಿಯ ಆಧುನಿಕ ಜೀವನ ಮತ್ತು ಈಗಿನ ಶೈಕ್ಷಣಿಕ ರಂಗದ ಪೈಪೋಟಿಯಲ್ಲಿ ಅರೆಘಳಿಗೆಯು ಅತ್ತಿತ್ತ ನೋಡದೇ ಇರುವುದಾಗಿದೆ, ಒಂದೆರಡು ಅಂಕಗಳು ಕಡಿಮೆಯಾದರೂ ಭವಿಷ್ಯದ ಆತಂಕ ಹೆಚ್ಚತೊಡಗುತ್ತದೆ. ಹಾಗಿರುವಾಗ ಇನ್ನೂ ಇನ್ನಿತರೆ ಚಟುವಟಿಕೆಗಳಿಗೆ ನಾನು ಗಮನ ಹರಿಸುವು ಕಡಿಮೆ, ಏಕೆಂದರೆ ನನ್ನ ಮತ್ತು ತಂದೆ ತಾಯಿಯರ ಮಹದಾಸೆ ನಾನು ಕೂಡ ಒಬ್ಬ ವಿಜ್ಞಾನಿಯಾಗಬೇಕೆಂಬುದು. ಆದರೆ ನನ್ನಜ್ಜನ ಆಸೆ ಉದ್ದೇಶಗಳು ನನ್ನ ತಂದೆ ತಾಯಿಯರಿಗೆ ಇಷ್ಟವಿದ್ದರೂ ಅದು ಅವರಿಗೆ ಎರಡನೇ ಆಯ್ಕೆಯಾಗಿತ್ತು, ಹಾಗೆಂದು ಕೆಲವೊಮ್ಮೆ ಬಿಡುವು ದೊರೆತಾಗ ನನಗೆ ಸಂಗೀತದಲ್ಲೇ ಕಾಲಕಳೆಯುವಂತೆ ಮತ್ತು ಅಧ್ಯಯನಕ್ಕೆ ಕಳುಹಿಸುತ್ತಿದ್ದರು. ಆಗ ಅಜ್ಜನ ಮನೆಗೆ ಬಂದು ಅಜ್ಜನೊಡನೆ ಕಾಲಕಳೆಯುತ್ತಿದ್ದೆ. ಅಜ್ಜನ ಸಂಗೀತ ಶಾಲೆಗೆ ನಾಡಿನ ಹಲವು ಭಾಗಗಳಿಂದ ಅಧ್ಯನಕ್ಕೆಂದು ಬರುವವರ ಸಂಖ್ಯೆ ಅಧಿಕವಾಗಿತ್ತು, ಈ ಬಾರಿ ನಾನು ವಿಜ್ಞಾನ ಪದವಿ ಮುಗಿಸಿ ಫಲಿತಾಂಶಕ್ಕಾಗಿ ಎದುರು ನೋಡುವುದು ಮಾತ್ರವೇ ಕೆಲಸವಾಗಿದ್ದರಿಂದ ನನಗೆ ಮನೆಯಲ್ಲಿ ಸ್ವಲ್ಪ ಆಯಾಸ ಕಳೆಯಲಿ ಹಾಗೂ ಊರಿಗೆ ಹೋಗಿ ಬರಲಿ ಎಂದು ಅಪ್ಪ ಅಮ್ಮ ನನ್ನನ್ನು ಈ ಬಾರಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸಲು ನನಗೆ ಅಜ್ಜನ ಸಂಗೀತ ಶಾಲೆಗೆ ಹೊರಡಲು ಅನುವು ನೀಡಿದ್ದರು. ಅದೇ ಖುಷಿಯಲ್ಲಿ ಹೊರಟಿದ್ದೇನೆ. ಏನೇ ಆಗಲಿ ಸಂಗೀತದ ಅಲೆಗಳ ನಡುವೆ ಅಜ್ಜನ ಮೊಗದ ಮಂದಹಾಸದ ಹಾಡೇ ಅದ್ಭುತ, ಆ ವಯಸ್ಸಿನಲ್ಲೂ ನಮ್ಮಜ್ಜ ಬಲು ಗಟ್ಟಿ, ಬಲು ಅದ್ಭುತ ಅವರ ದನಿಯು, ಅವರೊಂದು ಉತ್ಸಾಹದ ಜಲಧಿ. ರಾತ್ರಿ ಪ್ರಯಾಣಮಾಡಿ ಬೆಳಿಗ್ಗೆ ಅಜ್ಜನ ಮನೆಗೆ ಬಂದೆ, ನಾ ಬರುವುದನ್ನು ಅರಿತಿದ್ದ ನನ್ನ ಅಜ್ಜ ನನಗಾಗಿ ಹಾಡೊಂದನು ರಚಿಸಿ ನಾನು ಬಂದೊಡನೆ ಹಾಡತೊಡಗಿದರು...
“ಪದವಿ ಮುಗಿಸಿದ ಬಂದ ಪೋರನೇ
ವಿಧ್ಯಾ ಜ್ಞಾನದ ಪಾರಂಗತನೇ
ನಮ್ಮೂರು ನಾಡಿಗೆ ಹೆಮ್ಮೆಯ ಮಗ ನೀನೇ
ಅದೇನೋ ನುಡಿಯುತಿದೆ ನಿನ್ನ ಕಣ್ಣ ಸನ್ನೇ
ಅದುವಿರಬಹುದೇನೋ ವಿಜಯದ ಮಹಿಮೇ..”

ಎಂದು ಅಜ್ಜ ಹಾಡುತ್ತಾ ನನ್ನ ಕೆಣಕುತ್ತಾ ಬರಮಾಡಿಕೊಂಡರು, ಜೊತೆ ನನ್ನಜ್ಜಿಯ ಮಂದಹಾಸದ ಸ್ವಾಗತ, ಇದು ವರ್ಷವಿಡೀ ಓದಿ ಬಸವಳಿದಿದ್ದ ನನಗೆ ಮನ ನಿರಾಳಗೊಳಿಸಿತು, ರಾತ್ರಿ ಪ್ರಯಾಣ ಸುಸ್ತು ಹೋಯಿತು, ನಿದ್ರೆ ಮಾಡಿ ಸುಸ್ತು ಕಳೆಯಬೇಕಿದ್ದವನಿಗೆ ಇನ್ನು ನಿದ್ರೆಯು ಹಾರಿಹೋಯಿತು, ಅಜ್ಜನ ಸಂಗೀತ ಶಕ್ತಿಗೆ ನಾ ಸೋತೆ. ಅಜ್ಜ ನಿನಗೆ ಮೊದಲು ನಾನು ಸೋತಿದ್ದು ಇಲ್ಲೇ. ನಂತರ ಬೇಗನೇ ಸಿದ್ಧವಾಗಿ ಅಜ್ಜ ಬೇಸಿಗೆ ಶಿಬಿರದ ಸಂಗೀತ ತರಗತಿಗೆ ಹೋದೆ. ನಾಡಿನ ವಿವಿಧ ಭಾಗಗಳಿಂದ ಬಂದವರು ಅನೇಕರಿದ್ದರು, ಮೊದಲು ಉದ್ಘಾಟನೇ ಕಾರ್ಯಕ್ರಮ, ನಂತರ ಪ್ರಾರ್ಥನೆ ಸರದಿ, ವಿಘ್ನೇಶ್ವರ ನಿನ್ನ ನೆನೆದರೇ..ಮನದ ದುಗುಡಕೆಲ್ಲಿದೆ ಆಸರೇ.. ಎಂದು ಒಬ್ಬಳು ಹುಡುಗಿ ಪ್ರಾರ್ಥಿಸಿದಳು, ಸಂಗೀತ ಅಲೆಯಲ್ಲಿ ಮನ ನಲಿಸಿ ಆ ಸಮಯದಲ್ಲಿ ಮಧುರತೆಗೇ ಸವಾಲೆನಿಸುವ ದನಿಯು ನನ್ನ ಮೋಡಿ ಮಾಡತೊಡಗಿತು, ಆ ಮಾಧುರ್ಯದ ಸ್ವರಕೇ ಪ್ರತಿಧ್ವನಿಸುವ ರಾಗಗಳ ಭೋರ್ಗರೆತಕೆ ಮನವು ಆಗ ಬೆರಗಾಯಿತು, ಎಷ್ಟೋ ಗಾಯಕರ ಸ್ವರ ಸವಿಯುಂಡಿದ್ದರೂ ಇದುವೇನೋ ವಿಶೇಷವೆಂದು ಹಂಬಲಿಸತೊಡಗಿತು, ಆ ದನಿಯ ಸವಿಯಲ್ಲಿ ಸದಾ ನಾ ಮುಳುಗಬೇಕೆಂಬ ಹಂಬಲವು ದಿನದಿಂದ ದಿನಕ್ಕೆ ಮರವಾಯಿತು, ಅದುವು ಕದಲದೇ ನನ್ನೆದೆಯ ಮೇಲೆ ಬೆಳೆದು ಆ ಮರದಲ್ಲಿ ಅವಳ ದನಿಯು ಹೂವಾಗಿ ಅರಳಿಬಿಟ್ಟಿತು, ಆ ಹೂವು ನಿತ್ಯ ನಗುತ ನನ್ನೆದೆಯ ಬನದಲ್ಲಿ ಗುನುಗುತಿರಲಿ ಒಲವಗಾಥೆಯು ನನ್ನ ಹೃದಯ ಮೀಟುತಿರಲಿ ಎಂದು ಜೀವದುಸಿರುವ ಬೇಡುವ ಹಂತಕ್ಕೆ ನನ್ನ ಮನ ಕೆಲವೇ ದಿನಗಳಲ್ಲಿ ತಲುಪಿತು, ಜೊತೆಗೆ ಅಜ್ಜನ ಸಂಗೀತ ಶಾಲೆಯು ನನಗೆ ಅತೀ ಇಷ್ಟವಾಗ ತೊಡಗಿತು, ಬೆಳಿಗ್ಗೆ ಬೇಗನೇ ಎದ್ದು ಈಗ ಸಂಗೀತಾಭ್ಯಾಸ ಹಾಗೂ ನನ್ನ ಅತೀ ಆಸಕ್ತಿ ನೋಡಿ ಅಜ್ಜ ತುಂಬಾ ಸಂತಸಗೊಂಡರು, ಆದರೆ ಅದಕ್ಕೆ ಕಾರಣ ಅವಳು ಅರಭಿಯಾಗಿದ್ದಳು. ಅರಭಿ ಎಂಬುದು ಒಂದು ರಾಗದ ಹೆಸರು, ಅವರದೂ ಸಂಗೀತದ ಮನೆತನವಾದ್ದರಿಂದ ಮಗಳಿಗೆ ಪ್ರೀತಿಯಿಂದ ರಾಗವನ್ನೇ ಹೆಸರಾಗಿಟ್ಟಿರಬಹುದೆಂದು ನಂಬಿದೆ. ಬಿಡುವಿದ್ದಾಗ ಕೆಲವೊಮ್ಮೆ ಮಾತಾನಾಡುತ್ತಿದ್ದೆ, ಸಂಗಿತ ಶಿಭಿರದಲ್ಲೀ ಅವಳು ನನಗೆ ಬಹಳ ಆಪ್ತವೆನಿಸತೊಡಗಿದಳು, ಮನದಲ್ಲಂತೂ ಒಂದು ಪ್ರೀತಿ ತಲ್ಲಣ ಶುರುಮಾಡಿ ಬಿಟ್ಟಿದ್ದಳು..ಅರಭೀ. ನಮ್ಮಿಬ್ಬರ ಪರಿಚಯ ಅತೀ ಆಪ್ತವೆನಿಸಿತು, ಇಬ್ಬರ ಮನಸುಗಳು ಹತ್ತಿರವಾದವು ಪ್ರೀತಿಗೆ ತಿರುಗುವುದು ಜಾಸ್ತಿ ಸಮಯ ತೆಗೆದುಕೊಳ್ಳಲಿಲ್ಲ, ಜೊತೆಗೆ ಕಾಲವೂ ಸುಮ್ಮನೇ ನಿಲ್ಲಲಿಲ್ಲ, ಅದು ಶಿಭಿರದ ದಿನಗಳನ್ನು ಕಳೆಯುತ್ತಾ ಬರುತ್ತಿತ್ತು. ಈಗ ದಿನಾ ನಗುವಿದ್ದ ನನ್ನ ಮತ್ತು ಅವಳ ಮೊಗದಲ್ಲಿ ಒಂದು ಆತಂಕ ಶುರುವಾಯಿತು. ನಮ್ಮಿಬ್ಬರ ನೋಟದಲ್ಲಿ ಆತಂಕದ ಛಾಯೇ ಎದ್ದು ಕಾಣುತ್ತಿತ್ತು, ಅಗಲಿಕೆ ಅಸಾಧ್ಯವೆನ್ನುವಂತೆ ಮಾಡಿತು ನಮ್ಮಿಬ್ಬರ ಒಲವು. 
ಇಂದು ರಾತ್ರಿ ಏನೂ ಹೇಳದೇ ನೇರ ಅಜ್ಜನ ಬಳಿ ಹೋದೆ, ಸಂಗೀತ ಹಾಡೋದನ್ನೇನೋ ಹೇಳಿಕೊಡುತ್ತೀರಿ, ಸಾಹಿತ್ಯ ರಚನೆಯನ್ನು ಹೇಳಿಕೊಡಿ ಎಂದೆ. ಅವರು ಅನೇಕ ಗೀತೆಗಳನ್ನು ರಚಿಸಿದವರು, ಸಾಕಷ್ಟು ಪಾಂಡಿತ್ಯವಿದ್ದವರು, ಅವರಿಗೆ ನನ್ನ ಈ ಆಸೆ ಕಂಡು ಇನ್ನಷ್ಟು ಖುಷಿಯಾಯತು, ನಾಳೆಯಿಂದ ಹೇಳಿ ಕೊಡುವೆ, ಮೊದಲು ಸಾಹಿತ್ಯದ ಪುಸ್ತಕಗಳನ್ನು ಚೆನ್ನಾಗಿ ಓದು ಎಂದರು. ನಾನು ಇಲ್ಲ ಈಗಲೇ ನಾನು ಒಂದು ಗೀತೆ ಬರೆಯಬೇಕೆಂದೆ, ಅದಕ್ಕಾಗಿ ಈಗಲೇ ಹೇಳಿಕೊಡಿ ಎಂದೆ. ದಾವಂತದಲ್ಲೀ ಯಾವುದೂ ಸಿದ್ಧಿಸುವುದಿಲ್ಲ, ಅದೆಲ್ಲಾ ಆಗಲ್ಲವೆಂದರು, ಆದರೆ ನಾನು ಒಂದು ಗೀತೆಯನ್ನು ರಚಿಸಿ ಅರಭಿಗಾಗಿ ಹಾಡಲೇ ಬೇಕಿತ್ತು. ಏನು ಮಾಡುವುದೆಂದು ಯೋಚಿಸತೊಡಗಿದೆ. ನಿಧಾನವಾಗಿ ಭಾರವಾದ ಮನದಲ್ಲೆ ಹೆಜ್ಜೆಹಾಕುತ್ತಾ ನನ್ನ ಕೋಣೆಗೆ ಬಂದೆ, ಕಿಟಕಿಯಾಚೆ ಇಣುಕಿದೆ, ಚಂದಿರ ಓಡುತ್ತಿದ್ದ, ನೀಲಾಗಾಸದ ದೊರೆಯ ಚೆಲುವಿಗೆ ಮನ ಸ್ವಲ್ಪ ತಣಿವಾಯಿತು, ಚಂದಿರನ ಮೊಗದಲ್ಲಿ ಅರಭಿಯ ನಗುವ ಮೊಗವನ್ನು ತುಂಬಿದೆ, ನಾನೇ ಮೊದಲ ಕವಿತೆಯಂತೂ ಪೂರ್ಣಗೊಳಿಸಿದೆ, ನನ್ನದೇ ರಾಗ ಸಂಯೋಜಿಸಿ ಗುನುಗತೊಡಗಿದೆ. 
ನಗುವ ಶಶಿಯ ಮೊಗದಲ್ಲಿ 
ಮೂಡಿ ಕೆಣಕುವವಳೇ..
ಬಯಸುವ ಈ ಹೃದಯದಲ್ಲಿ
ಸದಾ ನೆಲೆಯಾಗಬೇಕು ನೀನು.. ಎಂದು ಮೆತ್ತನೆ ರಾತ್ರಿಯ ಸಮಯದಲ್ಲಿ ಬೇರೆಯರಿಗೆ ಸದ್ದು ಮಾಡದಂತೆ ಮೆತ್ತನೆ ಹಾಡತೊಡಗಿದೆ, ಯಾರೋ ಬಾಗಿಲು ದಬ್ಬಿ ಒಳಬಂದಂತಾಯ್ತು, ಕೊಂಚ ಹೆದರಿಕೆಯಲ್ಲಿ ನೋಡಿದೆ, ಎದುರುಗಡೆ ನನ್ನಜ್ಜ ನಿತ್ತಿದ್ದರು, ಏನು ಮಾಡುತ್ತಿರುವೆ ಎನ್ನುತ್ತಾ ಬಂದವರೇ ನಾನು ಟೇಬಲ್ ಮೇಲೆ ಬರೆದಿಟ್ಟ ಕವಿತೆ ತೆಗೆದುಕೊಂಡರು, ಅಲ್ಲೇ ಇದ್ದ ಪುಸ್ತಕ ತೆಗೆದು ನೋಡಿದರು, ಅವರಿಗೆ ನಾನು ಹೇಳುವುದು ಏನೂ ಉಳಿದಿರಲಿಲ್ಲ, ನನ್ನ ಮತ್ತು ಅರಭಿಯ ನಡುವಿನ ಪ್ರೀತಿಯ ವಿಷಯ ಗೊತ್ತಾಗಿಬಿಟ್ಟಿತು. ನನಗೆ ಮೈ ಬೆವರತೊಡಗಿತು, ಅಜ್ಜಾ ಎಲ್ಲವನ್ನೂ ಓದುತ್ತಾ ಒಮ್ಮೆ ನನ್ನನ್ನೂ ದುರುಗುಟ್ಟು ನೋಡುತ್ತಾ ಇದ್ದರು, ಎಲ್ಲಾ ಮುಗಿದ ನಂತರ ನಾನು ಬರೆದ ಕವಿತೆಯನ್ನು ಇನ್ನೊಮ್ಮೆ ಮತ್ತೆ ಮತ್ತೆ ಓದತೊಡಗಿದರು, ನನ್ನದೇ ಹಸ್ತಾಕ್ಷರವೆಂದು ನನ್ನದೇ ಮನದ ಭಾವನೆಯ ಹಾತೊರೆತವನ್ನು ಅವರು ಅರ್ಥೈಸಿಕೊಂಡರು. ಪ್ರೀತಿ ಬರೆಸಿದ ಮೊದಲ ಕವಿತೆ ಅಜ್ಜನ ಕೈಲಿತ್ತು, ನನ್ನ ಹೃದಯ ಜೋರಾಗಿ ಬಡಿಯುತ್ತಿತ್ತು. ಏನಪ್ಪಾ ಅಜ್ಜನ ನಡೆ, ಎಲ್ಲಾ ಇನ್ನು ಅಪ್ಪ, ಅಮ್ಮನಿಗೆ ಹೇಳಿ ನನಗೆ ಬೆಂಗಳೂರಿಗೆ ಕಳುಹಿಸಿಬಿಡುತ್ತಾರೆ, ಏನು ಮಾಡುವುದು ನನ್ನ ಪ್ರೀತಿಯ ಗತಿ ಏನೆಂದು ನರಳತೊಡಗಿದೆ. ಅಜ್ಜ ಸ್ವಲ್ಪ ಹೊತ್ತು ಮೌನವಾಗಿದ್ದರು, ಏನೂ ಮಾತಾಡಲಿಲ್ಲ, ನಂತರ ಅಜ್ಜ ಜೋರಾಗಿ ನಕ್ಕು ಎದ್ದು ಹೋದರು. ನನಗೆ ಏನೂ ಅರಿವಾಗಲಿಲ್ಲ, ರಾತ್ರಿಯಿಡೀ ನಿದ್ರೆಬಾರದೇ ನರಳಿದೆ. ಬೆಳಿಗ್ಗೆ ಶಿಬಿರದ ಕಡೆ ಹೋಗಲು ಮನಸ್ಸಿಲ್ಲದೇ ಕೊರಗತೊಡಗಿದೆ, ಅರಭಿ ನನ್ನನ್ನು ನೋಡಿದರೆ ಏನು ಹೇಳುವುದು ಎಂದು ಮೌನದಲ್ಲೇ ಉಳಿದೆ, ಬೆಳಿಗ್ಗೆ ಶಿಬಿರಕ್ಕೆ ಹೋಗಲಿಲ್ಲ, ಮಧ್ಯಾಹ್ನ ಅರಭಿಯೇ ನನ್ನ ಬಗ್ಗೆ ವಿಚಾರಿಸಿ ಅಜ್ಜನ ಬಳಿಕೇಳಿದ್ದಳಂತೆ, ಅದುವೂ ನನಗೆ ರಂಗಣ್ಣನ ಮೂಲಕ ಗೊತ್ತಾಯಿತು, ಅರಭಿ ಹತ್ತಿರ ಅಜ್ಜ ಸುಮಾರು ಹೊತ್ತು ಮಾತಾನಾಡುತ್ತಿದ್ದರು ಎಂದು ಕೇಳಿದ್ದು ನನಗೆ ಇನ್ನೂ ಹೆದರಿಕೆ ಶುರುವಾಯಿತು, ಅವಳಿಗೂ ಅಜ್ಜ ಬೈದರೋ ಏನೋ ಎಂತ ಎನ್ನುತ್ತಾ ಮನ ಇನ್ನಷ್ಟು ಕಸಿವಿಸಿಗೊಂಡಿತು. ಇನ್ನಷ್ಟು ಭಯ ಆವರಿಕೊಳ್ಳತೊಡಗಿತು.
 ಅಷ್ಟರಲ್ಲಿ ಊಟಕ್ಕೆ ಬರಲು ಅಜ್ಜಿ ಕರೆದರು ಹೋದೆ, ಪಕ್ಕಕ್ಕೆ ನೋಡಿದೆ  ಎದುರು ಅಂಗಳದಲ್ಲಿ ಯಾವುದೋ ಕಾರು ಬಂದು ನಿತ್ತಿತ್ತು, ಹೋಗುತ್ತಲೇ ಅಜ್ಜ ಕವಿತೆ ಬರೆದರಲ್ಲ ಹಾಡಬೇಕು, ಹಾಡು ಎಂದರು, ನನಗೆ ಹೆದರಿಕೆ ಶುರುವಾಯಿತು, ಅಪ್ಪ ಅಮ್ಮನ ಆಸೆಯೇನು, ನಾನು ಮಾಡಿದ್ದೇನು, ಈಗಷ್ಟೇ ಪದವಿ ಮುಗಿಸಿದ್ದೇನೆ ಎನ್ನುವ ಆತಂಕ ಇನ್ನಷ್ಟು ಮನೆಮಾಡತೊಡಗಿತು. ಊಟದ ಕೋಣೆಯೊಳಗೆ ನಡುಗುತ್ತಾ ಹೋದೆ. ಅಲ್ಲಿ ಅನೇಕ ಜನರಿದ್ದರು, ಅಜ್ಜ ಮತ್ತೆ ಹಾಡು ಹೇಳಪ್ಪ ಶಶಿ..ಜೋರಾಗಿ ಹೇಳು..ಕೇಳಲು ನೋಡಿಲ್ಲಿ ಅರಭಿನೂ ಬಂದಿದ್ದಾಳೆ, ಅವರ ಅಪ್ಪ ಅಮ್ಮ ಕೂಡ ಬಂದಿದ್ದಾರೆ ಎಂದರು.
ನೋಡಿದೆ ಅರಭಿನೂ ಬಂದು ಊಟಕ್ಕೆ ಕೂತಿದ್ದಳು, ನನ್ನ ನೋಡಿ ನಾಚಿಕೆಯಿಂದ ನಕ್ಕಳು. ಅಜ್ಜಾ ಮತ್ತೆ ಹಾಡು ಹೇಳು, ನೀನು ಹೇಳಿದರೆ ಮಾತ್ರ, ನಿನಗೂ ಅರಭಿಗೂ ಮದುವೆ ಮಾಡಿಸುವೆ ಎಂದರು. ನನಗೆ ಆಗ ಎಲ್ಲಾ ಆತಂಕ ಮರೆಯಾಗಿ ಸುರಿವ ಬಿಸಿಲಲ್ಲಿ ತಣಿಸುವ ಮಳೆ ಸುರಿಯದಂತಾಯಿತು..ಮುಲಾಜಿಲ್ಲದೇ ನಾನು ಬರೆದ ಮೊದಲ ಪ್ರೇಮಗೀತೆ ಜೋರಾಗಿ ನನ್ನದೇ ರಾಗದಲ್ಲಿ ಹಾಡಿದೆ.. ಈಗ ಅಜ್ಜನ ಸಂಗೀತಶಾಲೆಗೆ ನಾನು ಮತ್ತು ಅರಭಿಯೇ ಸಾರಥಿ...ಕೊನೆಯಲ್ಲಿ ನನ್ನ ತಂದೆ ನನಗೆ ಹೇಳಿದರು ನೆಮ್ಮದಿಯಿಲ್ಲದ ನನ್ನ ಬದುಕಿಗಿಂತ ನೀನೆ ಮೇಲು, ಜೊತೆಗೆ ನಮ್ಮ ತಂದೆಯವರ ಮಾತು ಉಳಿಸಿದೆ ಎಂದರು..ಒಟ್ಟಾರೆ ಅರಭಿಯ ಸ್ವರದಲ್ಲಿ ನನ್ನ ಬಾಳ ನಾವೆಯು ಮೇಳೈಸಿತು..

Friday, 9 December 2016

ವಾತ್ಸಲ್ಯದ ಸೆರೆಯಲ್ಲಿ..

ಇದು ಕಳೆದ ಒಂದು ವರ್ಷದ ಹಿಂದಿನ ಮಾತಿದು. ನಾನು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಸುಮಾರು ರಾತ್ರಿ 11 ರ ಸಮಯಕ್ಕೆ ಬೆಂಗಳೂರು ಹೊರಡುವ ಬಸ್‍ಗಾಗಿ ಕಾಯುತ್ತಾ ನಿತ್ತಿದ್ದೆ. ನಾನು ಬೆಂಗಳೂರಿಗೆ ಹೋಗುವುದು ಅನಿಶ್ಚಿತವಾಗಿದ್ದರಿಂದ ಪೂರ್ವ ತಯಾರಿಯಿಲ್ಲದೇ ಸಮಯ ಕೊಂಚ ತಡವಾಗಿತ್ತು, ಏನೇ ಆಗಲಿ ಹೋಗಿ ಮುಟ್ಟುವುದು ಬೆಳಿಗ್ಗೆಯೇ ಅಲ್ಲವೇ ಎಂದು ಸಮಾಧಾನಿಸಿಕೊಳ್ಳುತ್ತಾ ನಿತ್ತಿರುವಾಗ ವಯೋವೃದ್ಧ ದಂಪತಿಗಳಿಬ್ಬರು ಬಸ್ ನಿಲ್ದಾಣದತ್ತ ನಡೆದು ಬಂದರು. ಕೊರೆವ ಚಳಿ ಜೋರಾಗಿತ್ತು, ನಾನು ಬೆಚ್ಚನೆಯ ಉಡುಗೆಯಲ್ಲಿದ್ದರೂ ನಡುಗುವ ವಾತಾವರಣವಿತ್ತು, ಅಂತದರಲ್ಲಿ ಆ ವಯೋವೃದ್ಧ ದಂಪತಿಗಳು ಸಾದಾರಣ ಉಡುಗೆಯಲ್ಲಿ ನಡುಗುತ್ತಾ ಬಂದರು, ಸ್ವಲ್ಪ ಹೊತ್ತು ಹಾಗೆಯೇ ಕಾಯುತ್ತಾ ಇರುವಾಗ ಕಾಫಿ ಮಾರುವವನು ಬರುತ್ತಾನೆ, ನಿಧಾನ ಕಾಫಿ ಕುಡಿಯುತ್ತಾ ನಿತ್ತಿರುವಾಗ, ಆ ದಂಪತಿಗಳು ಬಂದು ನಿಲ್ದಾಣದ ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಾರೆ, ಪಕ್ಕದಲ್ಲೇ ಇದ್ದ ನನಗೆ ಬಸ್ ಬರುವ ಸಮಯ ಕೇಳುತ್ತಾರೆ, ನಾನು 11.45 ಕ್ಕೆ ಎಂದೆ. ಅದು ಕಾರವಾರದಿಂದ ಬರುವ ಬಸ್, ಸೀಟು ಸಿಗುವುದು ನನಗೆ ಅನುಮಾನವಿತ್ತು, ಏನೇ ಆಗಲಿ ಎಂದು ಕಾಯತೊಡಗಿದೆ, ಆ ಯಜಮಾನರಿಗೆ ಕೇಳಿದೆ ನೀವು ಬೆಂಗಳೂರಿಗೆ ಹೊರಟಿದ್ದೀರ ಎಂದು, ಅವರು ಹೌದು ಎಂದರು, ನಿಮ್ಮದೂ ಸೀಟು ಕಾಯ್ದಿರಿಸಿದ್ದೀರ ಎಂದೆ, ಅವರು ಇಲ್ಲಾ, ನಾವೂ ಯಾವುದೇ ತಯಾರಿಯಿಲ್ಲದೇ ಹೊರಟಿದ್ದು ಎಂದರು, ನನಗೆ ಮಹಾದಾಶ್ಚರ್ಯವಾಯಿತು, ಇಂತ ವಯಸ್ಸಿನಲ್ಲಿ ಪಾಪ ಹೇಗೆ ಹೋಗುತ್ತಾರೆ, ನನಗೆ ಸೀಟು ಸಿಗದಿದ್ದರೆ ರಾತ್ರಿಯಿಡೀ ಸಾಗುವುದು ಸಾಧ್ಯವಿಲ್ಲ, ಇನ್ನು ಇವರ ಗತಿ ಹೇಗೆ ಎಂದು ಕಸಿವಿಸಿಯಾದೆ. ಹಾಗೆಯೇ ಸಮಯ ಕಳೆಯುವ ಸರದಿ, ಅವರು ನಿಧಾನವಾಗಿ ತಮ್ಮಲ್ಲೇ ಮಾತಾಡಿಕೊಳ್ಳುತ್ತಾ ತಮ್ಮ ಮಗ ನಾಳೆಯೇ ಹೊರಟು ಹೋಗುತ್ತಾನೆ, ಈ ಬಸ್‍ಗೆ ಏನಾದರೂ ಮಾಡಿ ಹೋಗಬೇಕು. ಇಲ್ಲದಿದ್ದರೆ ಒಂದು ವೇಳೆ ತಡವಾದರೆ ಹೇಗೆ ಎಂದು ಆತಂಕ ಪಟ್ಟುಕೊಳ್ಳುತ್ತಿದ್ದರು, ನನಗೆ ಇನ್ನಷ್ಟು ಕಸಿವಿಸಿಯೆನಿಸಿತು, ಸ್ವಲ್ಪ ಹಾಗೇ ಬೇಸರವೆನಿಸಿತು, ಸಮಯ 11.40 ಆಯಿತು, ಆ ಯಜಮಾನರು ನನ್ನ ಬಳಿ ಬಂದು ಸಮಯವಾಯಿತಲ್ಲವೇ ಎಂದರು, ಹೌದು ಬಸ್ ಬರುವ ಸಮಯವಾಯಿತು, ಬಂದ ಕೂಡಲೇ ನಿಮಗೆ ಸೀಟು ಹಿಡಿದು ಕೊಡುವೆ ಎಂದೆ, ಅವರಿಗೆ ನಾನು ಹಾಗೆ ಹೇಳಿದ್ದು ಏನೋ ಗೆದ್ದಷ್ಟು ಸಂತಸ ಅವರ ಮೊಗದಲ್ಲಿ ಮೂಡಿಸಿತು. ಹಾಗೇ ಮಾತನಾಡುತ್ತಾ ನಿತ್ತೆವು. ಸಮಯ 12 ಆದರೂ ಬಸ್ ಬರಲಿಲ್ಲ, ಅವರು ಮಾತ್ರ ನಡುಗುತ್ತಲೇ ಚಳಿಯಲ್ಲಿ ನಿತ್ತಿದ್ದರು, ನಾನೂ ಹೇಗೆ ಕೇಳುವುದು ಎಂದು ಸಂಕೋಚದಲ್ಲೇ ಸುಮ್ಮನಿದ್ದವನು ಈಗ ತಡೆಯಲಾರದೇ ಅವರ ಬಳಿ ಕಾಫೀ ತಂದು ಕೊಡಲೇ ಚಳಿ ತುಂಬಾ ಇದೆಯೆಂದೆ. ಅದಕ್ಕವರು
ಬೇಡಪ್ಪಾ ಇರಲಿ ಈಗ ಬಸ್ ಬಂದುಬಿಡಬಹುದು ಎಂದರು, ನಾನು ನನ್ನ ಬಳಿಯಿರುವ ಉದ್ದನೆಯ ಶಾಲನ್ನು ತೆಗೆದು ಕೊಟ್ಟೆ. ಬೇಸರಿಕೊಳ್ಳದಿರಿ ಉಪಯೋಗಿಸಿ ತುಂಬಾ ಚಳಿಯಿದೆ ಎಂದೆ. ಅವರು ಹೊದ್ದು ಕೂತರು ಮತ್ತೆ ಬಸ್‍ಗಾಗಿ ಕಾದು ಕೂತೆವು, ಆದರು ಬಸ್ ಬರಲಿಲ್ಲ. ಅಷ್ಟರಲ್ಲೇ ಅವರು ಮಾತಾಡಿಕೊಳ್ಳುತ್ತಿದ್ದರು, ಒಂದು ವೇಳೆ ಬಸ್ ತಡವಾಗಿ ಬಂದರೆ ಏನು ಮಾಡುವುದು, ನಾವು ಸರಿಯಾದ ಸಮಯಕ್ಕೆ ಹೋಗದಿದ್ದರೆ ಹೇಗೆ, ಮಗ ಹೋಗಿಬಿಟ್ಟರೆ ಹೇಗೆ, ಎಂದು ಗೋಗರೆಯುತ್ತಿದ್ದರು, ನಾನು ಇದು ಅವರ ವೈಯಕ್ತಿಕ ವಿಚಾರವೆಂದು ಸುಮ್ಮನೇ ಕುಳಿತಿದ್ದೆ. ಅಷ್ಟರಲ್ಲಿ ಬಸ್ ಬೆಳಕು ಕಾಣಿಸಿತು, ಬಸ್ ಬರುತ್ತಿರುವುದನ್ನು ಅರಿತು ಅವರೂ ನಿಟ್ಟಿಸಿರು ಬಿಟ್ಟರು, ಬಸ್ ಹತ್ತಿ ಒಳಗೆ ಕೂತೆವು. ಬಸ್‍ನಲ್ಲಿ ಸೀಟು ಸಿಕ್ಕಿದ್ದು ನಮಗೆ ಬಸ್‍ಗಾಗಿ ಅಷ್ಟೊತ್ತು ಕಾದಿದ್ದಕ್ಕೂ ಸಾರ್ಥಕವೆನಿಸಿತು. ಬಸ್‍ನಲ್ಲಿ ನಿಧಾನ ನಿದ್ರೆಗೆ ಜಾರಿದೆ. ಬೆಳಿಗ್ಗೆ ಯಾರೋ ಕರೆದಂತೆ. ನೋಡಿದೆ ಆ ವಯೋವೃದ್ಧ ದಂಪತಿಗಳು ನನಗೆ ಶಾಲುಕೊಟ್ಟು ಧನ್ಯವಾದ ಹೇಳಿದರು, ಆಗಲೇ ನನಗೆ ಬೆಳಗಾಗಿದ್ದು ಅರಿವಾಯಿತು, ಸಮಯ 7 ಗಂಟೆಯಾಗಿತ್ತು. ನಾನು ಮಲ್ಲೇಶ್ವರಂನಲ್ಲಿ ಇಳಿದು ನನ್ನ ಸ್ನೇಹಿತನ ಮನೆಯೆಡೆ ಸಾಗಿದೆ. ನಂತರ ಆ ವೃದ್ಧ ದಂಪತಿಯ ಪರಿಸ್ಥಿಯ ಬಗ್ಗೆ ಬೇಸರಿಸಿಕೊಳ್ಳುತ್ತಾ ನಡೆದೆ, ನಂತರ ದಿನವಿಡೀ ಬೆಂಗಳೂರಿನಲ್ಲಿ ನನ್ನ ಕಚೇರಿ ಕೆಲಸಗಳನ್ನೆಲ್ಲಾ ಮುಗಿಸಿ ಸ್ನೇಹಿತನಿಗೆ ವಿಧಾಯವೇಳಿ ಊರಿಗೆ ಹೊರಡುವ ತಯಾರಿಯಲ್ಲಿದ್ದೆ. ಅಷ್ಟರಲ್ಲೇ ಸ್ನೇಹಿತ ರೈಲು ಸೀಟನ್ನು ಕಾಯ್ದಿರಿಸಿ ತಂದಿದ್ದ. ಬೇಗನೇ ಆತನ ಬೈಕ್ ಏರಿ ರೈಲು ನಿಲ್ದಾಣ ತಲುಪಿದೆವು.
ಸ್ನೇಹಿತನಿಗೆ ವಿಧಾಯವೇಳಿ ನಾನು ಪ್ಲಾಟ್ ಫಾರಂ ಎಂಟರಲ್ಲಿ ಬಂದು ಕುಳಿತೆ. ಚಳಿ ಅತೀಯಾಗಿ ಬೀಸುತ್ತಿತ್ತು. ಎಷ್ಟೇ ಆಗಲಿ ಡಿಸೆಂಬರ್ ತಿಂಗಳಲ್ಲಿ ಎಂಥವರನ್ನೂ ನಡುಗಿಸುವ ಚಳಿಗೆ ಎಲ್ಲರೂ ಬೆಂಡಾಗಲೇ ಬೇಕು. ಕಾಫಿ ಕುಡಿಯುತ್ತಾ ನಿತ್ತಿದ್ದೆ, ಅದೇ ಧನಿಯೊಂದು ಮತ್ತೆ ಕೇಳಿದಂತೆ ಭಾಸವಾಯಿತು, ತಿರುಗಿ ನೋಡಿದೆ, ಅದೇ ವಯೋವೃದ್ಧ ದಂಪತಿಗಳು. ಎಂತಾ ಕಾಕತಾಳೀಯವೆಂದು ಮಾತಾಡಿಸಿದೆ, ಊಟವಾಯಿತಾ ಎಂದೆ.? ಅವರು ಆಯಿತು ಎಂದರು ಆದರೂ ನನಗೇಕೋ ಅವರ ಮುಖದ ಭಾವ ನೋಡಿದರೆ ಊಟ ಮಾಡಿದಂತಾಗಲಿ ಇಲ್ಲವೇ ನೆಮ್ಮದಿಯಿಂದ ಇದ್ದಂತೆ ಕಾಣಲಿಲ್ಲ, ನನಗೆ ಒಂದೇ ದಿನಕ್ಕೆ ಬೆಂಗಳೂರಿಗೆ ಬಂದು ಹೋಗಲು ಎಷ್ಟು ಆಯಾಸ, ಅದರಲ್ಲಿ ಇಂಥಾ ವಯೋವೃದ್ಧರು ಒಂದೇ ದಿನದಲ್ಲಿ ಮತ್ತೆ ಪುನಃ ಬಂದ ರೀತಿಯಲ್ಲಿಯೇ ನಿನ್ನೆ ಯಾವ ಬಟ್ಟೆಯಲ್ಲಿದ್ದರೋ ಇಂದೂ ಅದೇ ಬಟ್ಟೆಯಲ್ಲಿದ್ದರು, ಅದೇ ಸ್ಥಿತಿಯಲ್ಲಿದ್ದರು, ಏನೋ ಕಷ್ಟದಲ್ಲಿದ್ದರಂತೆ ಮೇಲ್ನೋಟಕ್ಕೆ ಅನಿಸುತ್ತಿದ್ದಂತೂ ನಿಜ. ನಾನೂ ಏನಾದರೂ ಮಾಡಿ ಕೇಳಲೇ ಬೇಕೆಂದು ನಿಧಾನವಾಗಿ ನಿಮ್ಮ ಕೆಲಸವಾಯಿತೇ ಎಂದೆ, ಮತ್ತೆ ನನ್ನ ಬಳಿಯಿದ್ದ ಶಾಲುಕೊಟ್ಟೆ, ನಿಧಾನವಾಗಿ ಅವರು ಮಾತಾಡತೊಡಗಿದರು. ಅವರು ತಮಗೆ ಎರಡು ಜನ ಗಂಡು ಮಕ್ಕಳಿದ್ದಾರೆ, ಇಬ್ಬರೂ ಕೂಡ ಅಮೇರಿಕಾದಲ್ಲಿ ಕೆಲಸಮಾಡುತ್ತಾರೆ. ನಾನು ಶಾಲೆಯ ಶಿಕ್ಷಕನಾಗಿ ನಿವೃತ್ತಿಯಾಗಿದ್ದು ನಾವು ಶಿವಮೊಗ್ಗದಲ್ಲೇ ವಾಸವಿದ್ದೇವೆ, ಮಕ್ಕಳು ಅಮೇರಿಕಾ ಹೋಗು ಮೊದಲು ಬೆಂಗಳೂರಿನಲ್ಲಿದ್ದರು, ಆಗ ವಾರಕ್ಕೆ ಇಲ್ಲವೇ ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದರು, ಬಿಡುವಿದ್ದಾಗ ನಮಗೆ ಕರೆದುಕೊಂಡು ಹೋಗುತ್ತಿದ್ದರು. ಈಗ ಅವರು ಅಮೇರಿಕಾದಲ್ಲಿದ್ದಾರೆ. ಕೇವಲ ಒಂದು ವರ್ಷಕ್ಕೆಂದು ಹೋದವರು ಈಗ ಅವರು ಅಮೇರಿಕಾ ಹೋಗಿ  ಐದು ವರ್ಷಗಳಾಗಿದೆ. ಮೊನ್ನೆಯ ದಿವಸ ಮಗ ಬೆಂಗಳೂರಿಗೆ ಒಂದು ಮುಖ್ಯ ಕೆಲಸದ ಮೇಲೆ ಬಂದಿದ್ದ. ಆತ ನಮ್ಮ ಊರಿಗೆ ಬರಲು ಆತನಿಗೆ ಸಮಯವಿರಲಿಲ್ಲ, ಆತ ಒಂದೇ ದಿನದಲ್ಲಿ ಆತನ ಕಂಪನಿಯ ಕೆಲಸಮುಗಿಸಿ ಮಧ್ಯಾಹ್ನದ ವಿಮಾನಕ್ಕೆ ಅಮೇರಿಕಾ ಹೋಗುವನಿದ್ದ, ಆತನನ್ನು ನಾವು ನೋಡದೇ ಐದು ವರ್ಷಗಳಾಗಿತ್ತು. ನಿನ್ನೆಯ ದಿವಸ ರಾತ್ರಿ ಆತ ಕರೆಮಾಡಿ ಹೀಗೆ ಒಂದು ದಿವಸದಮಟ್ಟಿಗೆ ಮಾತ್ರ ಭಾರತ ಬಂದು ಹೋಗುತ್ತಿರುವೆ ಎಂದ. ನಾವು ಬೆಂಗಳೂರಿನಲ್ಲಿ ಆತನ ಕಂಪನಿಯಲ್ಲಿ ಭೇಟಿಯಾಗುತ್ತೇವೆ, ಬರುತ್ತೇವೆ ಎಂದೆ, ಆತನೇನೋ ಬೇಡ ಮುಂದಿನ ವರ್ಷ ಬರುತ್ತೇನೆ, ತುಂಬಾ ಒತ್ತಡದ ಕೆಲಸವಿದೆ, ಮುಂದೆ ಬಂದು ಭಾರತದಲ್ಲೇ ಇರುತ್ತೇವೆ ಎಂದ. ನಮಗೆ ಆತನನ್ನು ನೋಡಲೇಬೇಕೆಂಬ ಆತುರದಲ್ಲಿ ನಾವು ಹೇಗಿದ್ದೆವೋ ಹಾಗೇ ಹೊರಟು ಬಂದೆವು ಇಂದು ಆತನನ್ನು ಆತನ ಕಂಪನಿಯ ಬಳಿ ಎರಡು ತಾಸು ಕಾದು ಆತನ್ನು ಭೇಟಿಯಾಗಿ ಹತ್ತು ನಿಮಿಷಮಾತನಾಡಿದೆವೆಂದು ನುಡಿದರು, ನನಗೇ ಕೇಳಿ ಅತೀ ಬೇಸರವಾದರು, ಅವರಿಗೆ ಅವರ ಮಗನನ್ನು ಕಂಡು ಕಣ್ತುಂಬಿಕೊಂಡ ಸಂತಸ ಮತ್ತು ಸಾಧನೆಯೆರಡೂ ಇತ್ತು. ದುಡಿಮೆಗೆಂದು ಮಕ್ಕಳು ವಿದೇಶಕ್ಕೇನೋ ಹೋಗುತ್ತಾರೆ, ಅದು ಹಲವರಿಗೆ ಅನಿವಾರ್ಯವೂ ಹೌದು, ಆದರೆ ಇಲ್ಲಿ ಅವರ ತಂದೆ ತಾಯಿಯರ ಬವಣೆ ಹೇಳತೀರದು. ಏನೇ ಆಗಲಿ ವಿದೇಶದಲ್ಲಿ ಸಿಗುವ ಸಕಲ ಸೌಲಭ್ಯ ಉದ್ಯೋಗಾವಕಾಶಗಳು ಇಲ್ಲಿ ಎಲ್ಲರಿಗೂ ದೊರೆತಲ್ಲಿ ನಮ್ಮ ನಾಡೂ ಅಮೇರಿಕಾದಂತೆ ಅಭಿವೃದ್ಧಿ ಹೊಂದಿದರೆ ನಮ್ಮಲ್ಲಿನ ಇಂತಾ ಎಷ್ಟೋ ಸಂಬಂಧಗಳು ನಲಿಯುತ್ತವೆ ಮತ್ತು ವಾತ್ಸಲ್ಯಗಳು ಉಳಿಯುತ್ತವೆ ಅಲ್ಲವೇ..?
ರಾಮಚಂದ್ರ ಸಾಗರ್

ಸಂಪರ್ಕಿಸಿರಿ

ರಾಮಚಂದ್ರ ಸಾಗರ್, ಎಂ.ಐ.ಜಿ.೨೪, ಕೆ.ಹೆಚ್.ಬಿ ಕಾಲೋನಿ. ಅಣಲೇಕೊಪ್ಪ. ಸಾಗರ. ಶಿವಮೊಗ್ಗ.. ದೂರವಾಣಿ: ೯೪೪೯೧೮೭೭೯೦.
ಇಮೈಲ್: ramachandra.id@gmail.com

Thursday, 8 December 2016

ಆಗಮಿಸು ಗೆಳೆಯ..

ಪ್ರೀತಿಯ ಹುಡುಗ...
ಕಡಲತಡಿಯಲ್ಲಿ ಉಸುಕು ಗೋಪುರ ಕಟ್ಟುತ್ತಿದ್ದೇನೆ ಇಂದು ನಾನೊಬ್ಬಳೆ. ಅದೂ ಅಸಹಾಯಕಳಾಗಿ..!  ಅಂದು ಜೊತೆಯಲ್ಲಿ ನೀ ಕಟ್ಟಿದ ಗೋಪುರ ಅಲೆಗಳ ಉಬ್ಬರದಲ್ಲಿ ಕಳಚಿಹೋಗಿದೆ. ಗೋಪುರದ ಕುರುಹು ಕಾಣೆಯಾಗಿದೆ, ಜೊತೆಗೆ ನೀನು ಮರೆಯಾಗಿರುವೆ. ಆದರೆ ಇಂದು ಕಡಲತಡಿಯಲ್ಲೇನೋ ನಿನ್ನ  ಮಧುರ ನೆನಪುಗಳ ಅತಿಶಯ ನನ್ನ ಮನಕೆ ವಿಷವಾಗಿ ಕಾಡುತ್ತಿದೆ. ತಂಪಲೆಗಳ ಹಿತವಂತಿಕೆಯು ನನ್ನ ತ್ವಚೆಗೆ ಹಿತ ನೀಡುತ್ತಿಲ್ಲ. ನೀ ಕಾಣದ ಘಳಿಗೆ ಅವಿಶ್ರಾಂತ ಮನದಲ್ಲಿ ಒಂಟಿ ಎಂಬ ಕೊರಗಲ್ಲಿ ಸಂತೈಸುವ ನಿನ್ನ ಹಿತವಂತಿಕೆಯ ನಗುವಿಲ್ಲದೆ ನಾನು ನೀರಿಂದ ಹೊರಬಿದ್ದ ಮೀನಂತೆ ನನ್ನ ಜೀವವಾಗಿದೆ. ಈ ಮೃದು ಮಸಸ್ಸು ನೀನಿಲ್ಲದೆ ನೋವಲ್ಲಿ ಅವಿರತ ದುಃಖದ ಅಲೆಗೆ ತತ್ತರಿಸಿದೆ. ಆದರೂ ಉಸುಕಿನಲ್ಲಿ ಗೋಪುರ ಕಟ್ಟಿ ಅದರಲ್ಲಿ ನಿನ್ನ ನಗು ಕಾಣುವ ಹಂಬಲ ಅತಿಶಯವಾಗುತ್ತಿದೆ. ಮೌನಿ ನನ್ನ ಮಾತಾಡಿಸಲು ನಿನ್ನ ದನಿ ಇಂದೇಕೋ? ಆಸರೆಯಾಗಿಲ್ಲ. ಇರಲಿ, ನೀ ಬರಬಹುದು ಜೊತೆಗೆ ನಮ್ಮೊಲವ ಗೋಪುರಕ್ಕೂ ನೀ ಒಂದಾಗುವೆ ಎಂಬ ನಂಬಿಕೆ ಪ್ರತಿ ಉಸಿರೆಳೆತದಲ್ಲೂ ನುಡಿಯುತ್ತಿದೆ. ಆದೇನೇ ಆದರು ನಿನ್ನಾಗಮನವಿಲ್ಲದ ಈ ಸಂಜೆ ಸಾಗರದಲ್ಲಿ ಮುಳುಗಲು ರವಿಗೂ ಕೊರಗು! ಈ ಒಂಟಿ ಹುಡುಗಿಯ ನೋವು ರವಿಗೂ ಅಯ್ಯೋ ಎನಿಸುತಿದ್ದೆ. ಕಡಲಲೆಗಳ ಸದ್ದಿನ ಗಾನದಲ್ಲೂ ಹಿತವಿಲ್ಲ. ಅಲ್ಲೂ ಶೋಕಗೀತೆಯಂತೆ ಮೌನಾಚರಣೆ.  ಒಂಟಿ ಹುಡುಗಿಯ ನೋವಿಗೆ ಅದಕೂ ಬೇಸರ. ಆದರೂ ನೀ ದೂರ ಉಳಿದಿರಲೇನು ಕಾರಣ? ದೂರದಲ್ಲಿ ನೀ ಕೈಸನ್ನೆ ಮಾಡಿ ಬಂದಂತೆ ಕಾಡುವ ಬಿಂಬ ಒತ್ತಾಸೆಯಾಗಿ ನಿಲ್ಲುವ ನಿನ್ನ ನಗು ಇಂದೇಕೋ ಅವಿರತ ಕಾಡಿಸುತ್ತಿದೆ. ಜೊತೆಗೆ ನನ್ನ ಮೊಗದಲ್ಲೂ ನಗು ಕದ್ದಿರುವೆ ಗೆಳೆಯಾ..ಇದೆಲ್ಲಾ ಹೃದಯ ಕದ್ದ ನಿನ್ನದೇ ಕೃತ್ಯವು, ನಿನ್ನದೇ ಪಾರುಪತ್ಯವು. ಅಂದು ಕಡಲತಡಿಯಲ್ಲಿ ನನ್ನ ಹಾಡಿ ಹೊಗಳುತಿದ್ದ ನಿನ್ನ ದನಿ ಎಲ್ಲಿ..? ‘ಕಡಲತಡಿಯಲ್ಲಿ ನವಿರು ನಡಿಗೆಯಲ್ಲಿ ನಡೆವ ಚೆಲುವ ಬೊಂಬೆ’ ಎಂದು ನನ್ನ  ಕೊಂಡಾಡುತ್ತಿದ್ದ ಪೋರ ನೀ ಎಲ್ಲಿ ಮರೆಯಾದೆ..? ಸಂಪತ್ತಿನ ಅಂತಸ್ತಿಗೆ ಬೆಲೆ ನೀಡದ ಹುಡುಗಿ ನಾನು. ಮರು ಮಾತಿಲ್ಲದೇ ಬಂದು ಬಿಡು. ಬಂದವನೇ ನನ್ನ ಒಪ್ಪಿ ಅಪ್ಪಿ ಬಿಡು. ಅಂಜಿಕೆಯ ಬಿಟ್ಟು ಬೇಗನೇ ಆಗಮಿಸು.
ಆಸೆಗಳ ರಾಶಿಯಲ್ಲಿ ನನ್ನ ಮನಸು ಭಾರವಾಗಿದೆ. ಭಾರ ಇಳಿಸುವ ನಿನ್ನ ಸಾಂಗತ್ಯ, ನಿನ್ನ ತುಸು ನಗು, ಬಾಹು ಬಂಧನವಿಲ್ಲದೆ ನಾನು ಉರಿ ಬಿಸಿಲಲ್ಲಿ ಧಗೆಗೆ ಸೊರಗುವ ಹೂವಂತೆ  ಬಾಡುತ್ತಿದ್ದೇನೆ. ಬಾಡುವ ಮುಗ್ದ ಹುಡುಗಿಗೆ ನೀ ಬಂದು ಎಂದು ಸಂತೈಸುವೆ ಗೆಳೆಯ?..ನಾ ಕಣ್ಣಗಲಿಸಿ ನೋಡಿದಲ್ಲೆಲ್ಲಾ ನೀ ಕೈಸನ್ನೆ ಮಾಡಿ ನನ್ನ ಕರೆದಂತೆ! ನಿನ್ನ ಪ್ರೀತಿಯ ಮಾಯೆ ನನ್ನ ಬಾಳನ್ನೇ ಆವರಿಸಿ ಎಲ್ಲವೂ ಪ್ರೇಮದ ಕಡಲಿಗೆ ಮನ ಹಂಬಲಿಸಿದಂತೆ. ಕ್ಷಣ ಕ್ಷಣವೂ ನಿನ್ನದೇ ನಾಯ ನನ್ನೆದೆಯ ಗಾನವಾಗಿದೆ ಗೆಳೆಯ. ಅಂಜಿಕೆಯ ಬಿಟ್ಟು ಬೇಗನೇ ಆಗಮಿಸು...ನಿನ್ನೊಲವಿಗೆ ಪರಿತಪಿಸಿದ ಕೋಮಲೆಯ ಮನ ತಣಿಸು...