Friday, 9 December 2016

ವಾತ್ಸಲ್ಯದ ಸೆರೆಯಲ್ಲಿ..

ಇದು ಕಳೆದ ಒಂದು ವರ್ಷದ ಹಿಂದಿನ ಮಾತಿದು. ನಾನು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಸುಮಾರು ರಾತ್ರಿ 11 ರ ಸಮಯಕ್ಕೆ ಬೆಂಗಳೂರು ಹೊರಡುವ ಬಸ್‍ಗಾಗಿ ಕಾಯುತ್ತಾ ನಿತ್ತಿದ್ದೆ. ನಾನು ಬೆಂಗಳೂರಿಗೆ ಹೋಗುವುದು ಅನಿಶ್ಚಿತವಾಗಿದ್ದರಿಂದ ಪೂರ್ವ ತಯಾರಿಯಿಲ್ಲದೇ ಸಮಯ ಕೊಂಚ ತಡವಾಗಿತ್ತು, ಏನೇ ಆಗಲಿ ಹೋಗಿ ಮುಟ್ಟುವುದು ಬೆಳಿಗ್ಗೆಯೇ ಅಲ್ಲವೇ ಎಂದು ಸಮಾಧಾನಿಸಿಕೊಳ್ಳುತ್ತಾ ನಿತ್ತಿರುವಾಗ ವಯೋವೃದ್ಧ ದಂಪತಿಗಳಿಬ್ಬರು ಬಸ್ ನಿಲ್ದಾಣದತ್ತ ನಡೆದು ಬಂದರು. ಕೊರೆವ ಚಳಿ ಜೋರಾಗಿತ್ತು, ನಾನು ಬೆಚ್ಚನೆಯ ಉಡುಗೆಯಲ್ಲಿದ್ದರೂ ನಡುಗುವ ವಾತಾವರಣವಿತ್ತು, ಅಂತದರಲ್ಲಿ ಆ ವಯೋವೃದ್ಧ ದಂಪತಿಗಳು ಸಾದಾರಣ ಉಡುಗೆಯಲ್ಲಿ ನಡುಗುತ್ತಾ ಬಂದರು, ಸ್ವಲ್ಪ ಹೊತ್ತು ಹಾಗೆಯೇ ಕಾಯುತ್ತಾ ಇರುವಾಗ ಕಾಫಿ ಮಾರುವವನು ಬರುತ್ತಾನೆ, ನಿಧಾನ ಕಾಫಿ ಕುಡಿಯುತ್ತಾ ನಿತ್ತಿರುವಾಗ, ಆ ದಂಪತಿಗಳು ಬಂದು ನಿಲ್ದಾಣದ ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಾರೆ, ಪಕ್ಕದಲ್ಲೇ ಇದ್ದ ನನಗೆ ಬಸ್ ಬರುವ ಸಮಯ ಕೇಳುತ್ತಾರೆ, ನಾನು 11.45 ಕ್ಕೆ ಎಂದೆ. ಅದು ಕಾರವಾರದಿಂದ ಬರುವ ಬಸ್, ಸೀಟು ಸಿಗುವುದು ನನಗೆ ಅನುಮಾನವಿತ್ತು, ಏನೇ ಆಗಲಿ ಎಂದು ಕಾಯತೊಡಗಿದೆ, ಆ ಯಜಮಾನರಿಗೆ ಕೇಳಿದೆ ನೀವು ಬೆಂಗಳೂರಿಗೆ ಹೊರಟಿದ್ದೀರ ಎಂದು, ಅವರು ಹೌದು ಎಂದರು, ನಿಮ್ಮದೂ ಸೀಟು ಕಾಯ್ದಿರಿಸಿದ್ದೀರ ಎಂದೆ, ಅವರು ಇಲ್ಲಾ, ನಾವೂ ಯಾವುದೇ ತಯಾರಿಯಿಲ್ಲದೇ ಹೊರಟಿದ್ದು ಎಂದರು, ನನಗೆ ಮಹಾದಾಶ್ಚರ್ಯವಾಯಿತು, ಇಂತ ವಯಸ್ಸಿನಲ್ಲಿ ಪಾಪ ಹೇಗೆ ಹೋಗುತ್ತಾರೆ, ನನಗೆ ಸೀಟು ಸಿಗದಿದ್ದರೆ ರಾತ್ರಿಯಿಡೀ ಸಾಗುವುದು ಸಾಧ್ಯವಿಲ್ಲ, ಇನ್ನು ಇವರ ಗತಿ ಹೇಗೆ ಎಂದು ಕಸಿವಿಸಿಯಾದೆ. ಹಾಗೆಯೇ ಸಮಯ ಕಳೆಯುವ ಸರದಿ, ಅವರು ನಿಧಾನವಾಗಿ ತಮ್ಮಲ್ಲೇ ಮಾತಾಡಿಕೊಳ್ಳುತ್ತಾ ತಮ್ಮ ಮಗ ನಾಳೆಯೇ ಹೊರಟು ಹೋಗುತ್ತಾನೆ, ಈ ಬಸ್‍ಗೆ ಏನಾದರೂ ಮಾಡಿ ಹೋಗಬೇಕು. ಇಲ್ಲದಿದ್ದರೆ ಒಂದು ವೇಳೆ ತಡವಾದರೆ ಹೇಗೆ ಎಂದು ಆತಂಕ ಪಟ್ಟುಕೊಳ್ಳುತ್ತಿದ್ದರು, ನನಗೆ ಇನ್ನಷ್ಟು ಕಸಿವಿಸಿಯೆನಿಸಿತು, ಸ್ವಲ್ಪ ಹಾಗೇ ಬೇಸರವೆನಿಸಿತು, ಸಮಯ 11.40 ಆಯಿತು, ಆ ಯಜಮಾನರು ನನ್ನ ಬಳಿ ಬಂದು ಸಮಯವಾಯಿತಲ್ಲವೇ ಎಂದರು, ಹೌದು ಬಸ್ ಬರುವ ಸಮಯವಾಯಿತು, ಬಂದ ಕೂಡಲೇ ನಿಮಗೆ ಸೀಟು ಹಿಡಿದು ಕೊಡುವೆ ಎಂದೆ, ಅವರಿಗೆ ನಾನು ಹಾಗೆ ಹೇಳಿದ್ದು ಏನೋ ಗೆದ್ದಷ್ಟು ಸಂತಸ ಅವರ ಮೊಗದಲ್ಲಿ ಮೂಡಿಸಿತು. ಹಾಗೇ ಮಾತನಾಡುತ್ತಾ ನಿತ್ತೆವು. ಸಮಯ 12 ಆದರೂ ಬಸ್ ಬರಲಿಲ್ಲ, ಅವರು ಮಾತ್ರ ನಡುಗುತ್ತಲೇ ಚಳಿಯಲ್ಲಿ ನಿತ್ತಿದ್ದರು, ನಾನೂ ಹೇಗೆ ಕೇಳುವುದು ಎಂದು ಸಂಕೋಚದಲ್ಲೇ ಸುಮ್ಮನಿದ್ದವನು ಈಗ ತಡೆಯಲಾರದೇ ಅವರ ಬಳಿ ಕಾಫೀ ತಂದು ಕೊಡಲೇ ಚಳಿ ತುಂಬಾ ಇದೆಯೆಂದೆ. ಅದಕ್ಕವರು
ಬೇಡಪ್ಪಾ ಇರಲಿ ಈಗ ಬಸ್ ಬಂದುಬಿಡಬಹುದು ಎಂದರು, ನಾನು ನನ್ನ ಬಳಿಯಿರುವ ಉದ್ದನೆಯ ಶಾಲನ್ನು ತೆಗೆದು ಕೊಟ್ಟೆ. ಬೇಸರಿಕೊಳ್ಳದಿರಿ ಉಪಯೋಗಿಸಿ ತುಂಬಾ ಚಳಿಯಿದೆ ಎಂದೆ. ಅವರು ಹೊದ್ದು ಕೂತರು ಮತ್ತೆ ಬಸ್‍ಗಾಗಿ ಕಾದು ಕೂತೆವು, ಆದರು ಬಸ್ ಬರಲಿಲ್ಲ. ಅಷ್ಟರಲ್ಲೇ ಅವರು ಮಾತಾಡಿಕೊಳ್ಳುತ್ತಿದ್ದರು, ಒಂದು ವೇಳೆ ಬಸ್ ತಡವಾಗಿ ಬಂದರೆ ಏನು ಮಾಡುವುದು, ನಾವು ಸರಿಯಾದ ಸಮಯಕ್ಕೆ ಹೋಗದಿದ್ದರೆ ಹೇಗೆ, ಮಗ ಹೋಗಿಬಿಟ್ಟರೆ ಹೇಗೆ, ಎಂದು ಗೋಗರೆಯುತ್ತಿದ್ದರು, ನಾನು ಇದು ಅವರ ವೈಯಕ್ತಿಕ ವಿಚಾರವೆಂದು ಸುಮ್ಮನೇ ಕುಳಿತಿದ್ದೆ. ಅಷ್ಟರಲ್ಲಿ ಬಸ್ ಬೆಳಕು ಕಾಣಿಸಿತು, ಬಸ್ ಬರುತ್ತಿರುವುದನ್ನು ಅರಿತು ಅವರೂ ನಿಟ್ಟಿಸಿರು ಬಿಟ್ಟರು, ಬಸ್ ಹತ್ತಿ ಒಳಗೆ ಕೂತೆವು. ಬಸ್‍ನಲ್ಲಿ ಸೀಟು ಸಿಕ್ಕಿದ್ದು ನಮಗೆ ಬಸ್‍ಗಾಗಿ ಅಷ್ಟೊತ್ತು ಕಾದಿದ್ದಕ್ಕೂ ಸಾರ್ಥಕವೆನಿಸಿತು. ಬಸ್‍ನಲ್ಲಿ ನಿಧಾನ ನಿದ್ರೆಗೆ ಜಾರಿದೆ. ಬೆಳಿಗ್ಗೆ ಯಾರೋ ಕರೆದಂತೆ. ನೋಡಿದೆ ಆ ವಯೋವೃದ್ಧ ದಂಪತಿಗಳು ನನಗೆ ಶಾಲುಕೊಟ್ಟು ಧನ್ಯವಾದ ಹೇಳಿದರು, ಆಗಲೇ ನನಗೆ ಬೆಳಗಾಗಿದ್ದು ಅರಿವಾಯಿತು, ಸಮಯ 7 ಗಂಟೆಯಾಗಿತ್ತು. ನಾನು ಮಲ್ಲೇಶ್ವರಂನಲ್ಲಿ ಇಳಿದು ನನ್ನ ಸ್ನೇಹಿತನ ಮನೆಯೆಡೆ ಸಾಗಿದೆ. ನಂತರ ಆ ವೃದ್ಧ ದಂಪತಿಯ ಪರಿಸ್ಥಿಯ ಬಗ್ಗೆ ಬೇಸರಿಸಿಕೊಳ್ಳುತ್ತಾ ನಡೆದೆ, ನಂತರ ದಿನವಿಡೀ ಬೆಂಗಳೂರಿನಲ್ಲಿ ನನ್ನ ಕಚೇರಿ ಕೆಲಸಗಳನ್ನೆಲ್ಲಾ ಮುಗಿಸಿ ಸ್ನೇಹಿತನಿಗೆ ವಿಧಾಯವೇಳಿ ಊರಿಗೆ ಹೊರಡುವ ತಯಾರಿಯಲ್ಲಿದ್ದೆ. ಅಷ್ಟರಲ್ಲೇ ಸ್ನೇಹಿತ ರೈಲು ಸೀಟನ್ನು ಕಾಯ್ದಿರಿಸಿ ತಂದಿದ್ದ. ಬೇಗನೇ ಆತನ ಬೈಕ್ ಏರಿ ರೈಲು ನಿಲ್ದಾಣ ತಲುಪಿದೆವು.
ಸ್ನೇಹಿತನಿಗೆ ವಿಧಾಯವೇಳಿ ನಾನು ಪ್ಲಾಟ್ ಫಾರಂ ಎಂಟರಲ್ಲಿ ಬಂದು ಕುಳಿತೆ. ಚಳಿ ಅತೀಯಾಗಿ ಬೀಸುತ್ತಿತ್ತು. ಎಷ್ಟೇ ಆಗಲಿ ಡಿಸೆಂಬರ್ ತಿಂಗಳಲ್ಲಿ ಎಂಥವರನ್ನೂ ನಡುಗಿಸುವ ಚಳಿಗೆ ಎಲ್ಲರೂ ಬೆಂಡಾಗಲೇ ಬೇಕು. ಕಾಫಿ ಕುಡಿಯುತ್ತಾ ನಿತ್ತಿದ್ದೆ, ಅದೇ ಧನಿಯೊಂದು ಮತ್ತೆ ಕೇಳಿದಂತೆ ಭಾಸವಾಯಿತು, ತಿರುಗಿ ನೋಡಿದೆ, ಅದೇ ವಯೋವೃದ್ಧ ದಂಪತಿಗಳು. ಎಂತಾ ಕಾಕತಾಳೀಯವೆಂದು ಮಾತಾಡಿಸಿದೆ, ಊಟವಾಯಿತಾ ಎಂದೆ.? ಅವರು ಆಯಿತು ಎಂದರು ಆದರೂ ನನಗೇಕೋ ಅವರ ಮುಖದ ಭಾವ ನೋಡಿದರೆ ಊಟ ಮಾಡಿದಂತಾಗಲಿ ಇಲ್ಲವೇ ನೆಮ್ಮದಿಯಿಂದ ಇದ್ದಂತೆ ಕಾಣಲಿಲ್ಲ, ನನಗೆ ಒಂದೇ ದಿನಕ್ಕೆ ಬೆಂಗಳೂರಿಗೆ ಬಂದು ಹೋಗಲು ಎಷ್ಟು ಆಯಾಸ, ಅದರಲ್ಲಿ ಇಂಥಾ ವಯೋವೃದ್ಧರು ಒಂದೇ ದಿನದಲ್ಲಿ ಮತ್ತೆ ಪುನಃ ಬಂದ ರೀತಿಯಲ್ಲಿಯೇ ನಿನ್ನೆ ಯಾವ ಬಟ್ಟೆಯಲ್ಲಿದ್ದರೋ ಇಂದೂ ಅದೇ ಬಟ್ಟೆಯಲ್ಲಿದ್ದರು, ಅದೇ ಸ್ಥಿತಿಯಲ್ಲಿದ್ದರು, ಏನೋ ಕಷ್ಟದಲ್ಲಿದ್ದರಂತೆ ಮೇಲ್ನೋಟಕ್ಕೆ ಅನಿಸುತ್ತಿದ್ದಂತೂ ನಿಜ. ನಾನೂ ಏನಾದರೂ ಮಾಡಿ ಕೇಳಲೇ ಬೇಕೆಂದು ನಿಧಾನವಾಗಿ ನಿಮ್ಮ ಕೆಲಸವಾಯಿತೇ ಎಂದೆ, ಮತ್ತೆ ನನ್ನ ಬಳಿಯಿದ್ದ ಶಾಲುಕೊಟ್ಟೆ, ನಿಧಾನವಾಗಿ ಅವರು ಮಾತಾಡತೊಡಗಿದರು. ಅವರು ತಮಗೆ ಎರಡು ಜನ ಗಂಡು ಮಕ್ಕಳಿದ್ದಾರೆ, ಇಬ್ಬರೂ ಕೂಡ ಅಮೇರಿಕಾದಲ್ಲಿ ಕೆಲಸಮಾಡುತ್ತಾರೆ. ನಾನು ಶಾಲೆಯ ಶಿಕ್ಷಕನಾಗಿ ನಿವೃತ್ತಿಯಾಗಿದ್ದು ನಾವು ಶಿವಮೊಗ್ಗದಲ್ಲೇ ವಾಸವಿದ್ದೇವೆ, ಮಕ್ಕಳು ಅಮೇರಿಕಾ ಹೋಗು ಮೊದಲು ಬೆಂಗಳೂರಿನಲ್ಲಿದ್ದರು, ಆಗ ವಾರಕ್ಕೆ ಇಲ್ಲವೇ ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದರು, ಬಿಡುವಿದ್ದಾಗ ನಮಗೆ ಕರೆದುಕೊಂಡು ಹೋಗುತ್ತಿದ್ದರು. ಈಗ ಅವರು ಅಮೇರಿಕಾದಲ್ಲಿದ್ದಾರೆ. ಕೇವಲ ಒಂದು ವರ್ಷಕ್ಕೆಂದು ಹೋದವರು ಈಗ ಅವರು ಅಮೇರಿಕಾ ಹೋಗಿ  ಐದು ವರ್ಷಗಳಾಗಿದೆ. ಮೊನ್ನೆಯ ದಿವಸ ಮಗ ಬೆಂಗಳೂರಿಗೆ ಒಂದು ಮುಖ್ಯ ಕೆಲಸದ ಮೇಲೆ ಬಂದಿದ್ದ. ಆತ ನಮ್ಮ ಊರಿಗೆ ಬರಲು ಆತನಿಗೆ ಸಮಯವಿರಲಿಲ್ಲ, ಆತ ಒಂದೇ ದಿನದಲ್ಲಿ ಆತನ ಕಂಪನಿಯ ಕೆಲಸಮುಗಿಸಿ ಮಧ್ಯಾಹ್ನದ ವಿಮಾನಕ್ಕೆ ಅಮೇರಿಕಾ ಹೋಗುವನಿದ್ದ, ಆತನನ್ನು ನಾವು ನೋಡದೇ ಐದು ವರ್ಷಗಳಾಗಿತ್ತು. ನಿನ್ನೆಯ ದಿವಸ ರಾತ್ರಿ ಆತ ಕರೆಮಾಡಿ ಹೀಗೆ ಒಂದು ದಿವಸದಮಟ್ಟಿಗೆ ಮಾತ್ರ ಭಾರತ ಬಂದು ಹೋಗುತ್ತಿರುವೆ ಎಂದ. ನಾವು ಬೆಂಗಳೂರಿನಲ್ಲಿ ಆತನ ಕಂಪನಿಯಲ್ಲಿ ಭೇಟಿಯಾಗುತ್ತೇವೆ, ಬರುತ್ತೇವೆ ಎಂದೆ, ಆತನೇನೋ ಬೇಡ ಮುಂದಿನ ವರ್ಷ ಬರುತ್ತೇನೆ, ತುಂಬಾ ಒತ್ತಡದ ಕೆಲಸವಿದೆ, ಮುಂದೆ ಬಂದು ಭಾರತದಲ್ಲೇ ಇರುತ್ತೇವೆ ಎಂದ. ನಮಗೆ ಆತನನ್ನು ನೋಡಲೇಬೇಕೆಂಬ ಆತುರದಲ್ಲಿ ನಾವು ಹೇಗಿದ್ದೆವೋ ಹಾಗೇ ಹೊರಟು ಬಂದೆವು ಇಂದು ಆತನನ್ನು ಆತನ ಕಂಪನಿಯ ಬಳಿ ಎರಡು ತಾಸು ಕಾದು ಆತನ್ನು ಭೇಟಿಯಾಗಿ ಹತ್ತು ನಿಮಿಷಮಾತನಾಡಿದೆವೆಂದು ನುಡಿದರು, ನನಗೇ ಕೇಳಿ ಅತೀ ಬೇಸರವಾದರು, ಅವರಿಗೆ ಅವರ ಮಗನನ್ನು ಕಂಡು ಕಣ್ತುಂಬಿಕೊಂಡ ಸಂತಸ ಮತ್ತು ಸಾಧನೆಯೆರಡೂ ಇತ್ತು. ದುಡಿಮೆಗೆಂದು ಮಕ್ಕಳು ವಿದೇಶಕ್ಕೇನೋ ಹೋಗುತ್ತಾರೆ, ಅದು ಹಲವರಿಗೆ ಅನಿವಾರ್ಯವೂ ಹೌದು, ಆದರೆ ಇಲ್ಲಿ ಅವರ ತಂದೆ ತಾಯಿಯರ ಬವಣೆ ಹೇಳತೀರದು. ಏನೇ ಆಗಲಿ ವಿದೇಶದಲ್ಲಿ ಸಿಗುವ ಸಕಲ ಸೌಲಭ್ಯ ಉದ್ಯೋಗಾವಕಾಶಗಳು ಇಲ್ಲಿ ಎಲ್ಲರಿಗೂ ದೊರೆತಲ್ಲಿ ನಮ್ಮ ನಾಡೂ ಅಮೇರಿಕಾದಂತೆ ಅಭಿವೃದ್ಧಿ ಹೊಂದಿದರೆ ನಮ್ಮಲ್ಲಿನ ಇಂತಾ ಎಷ್ಟೋ ಸಂಬಂಧಗಳು ನಲಿಯುತ್ತವೆ ಮತ್ತು ವಾತ್ಸಲ್ಯಗಳು ಉಳಿಯುತ್ತವೆ ಅಲ್ಲವೇ..?
ರಾಮಚಂದ್ರ ಸಾಗರ್