Thursday, 15 December 2016
ಕಾತರತೆಯ ಕಾರ್ಮೋಡ ಕರಗಲಿ..
ಶರಧಿ ಉಕ್ಕಿ ಒಮ್ಮೆಲೇ ತಡಿಯನು ಅಪ್ಪಿದಂತೆ, ಶರಧಿಗಾಗಿ ಹವಣಿಸುತ್ತಿದ್ದ ತಡಿಯು ಸಂತೃಪ್ತಿಯಲ್ಲಿ ಬೀಗಿದಂತೆ. ತುಂಬು ಚಂದಿರನ ಬೆಳುದಿಂಗಳು ಹರಸಿ ಹಾರೈಸುತಿರಲು, ಹೂಬನದ ದಾರಿಯಲ್ಲಿ ನಾನು ನೀನು ಕೈಹಿಡಿದು ಸಂಭ್ರಮಿಸುತಾ ಸಾಗುವಾಗ ಮೆಲುಗಾಳಿಗೆ ಬಾಗಿ ಬಾಗಿ ನೋಡುವ ಕುಸುಮಗಳು ನಮ್ಮನ್ನೇ ಹಾರೈಸಿದಂತೆ ಭಾಸವಾಗುತ್ತಿತ್ತು, ಪ್ರೀತಿಯ ಸವಿ ಮಳೆಯು ಮನದಲ್ಲಿ ಭೋರ್ಗರೆಯುತ ನಿನ್ನ ಕೈಹಿಡಿದು ನಾ ಸಾಗುತಿರಲು ಗೆಳತಿ ಅಂದು ಜಗದೆಲ್ಲ ಉನ್ನತ ಉಚ್ಛ ಶಿಖರವೇರಿದ ಸಂಭ್ರಮದಲ್ಲಿ ಮನ ತೇಲುತಿತ್ತು, ನಿನ್ನ ಕೆಣಕುವ ನಯನಗಳು ಸಾವಿರ ಕನಸುಗಳನ್ನು ಕಾಣಿಸುತ್ತಾ ನನ್ನ ಕೈ ಹಿಡಿದು ನಡೆಯುತಿದ್ದೆ. ಮನದಲ್ಲಿ ನೆನಪುಗಳ ಜಲಧಿಯು ಅಮಿತವಾಗುತಿರಲು ನೀನೊಂದು ಸುಮಧುರ ಭಾವನೆಗಳ ಕಣಜವಾಗಿ ಕಾಣುತಿದ್ದೆ. ತುಸು ನನ್ನ ನೋಡಿ ನೀ ನಕ್ಕರೆ ಮನದ ಆಯಾಸ ನೀ ಕರಗಿಸಿ ಬಿಡುತಿದ್ದೆ, ನಿನಗಾಗಿ ದಿನವಿಡಿ ಕಾದರೂ ಆಗ ನಿನ್ನ
ಕುಡಿ ನಗು ಎಲ್ಲವನ್ನು ಮಾಯವಾಗಿಸಿ ಬಿಡುತಿತ್ತು, ಎಲ್ಲವೂ ಗೆಳತಿ ನಿನ್ನ ನಗುಮೊಗದ ಮಾಯೆಯಾಗಿತ್ತು. ಪ್ರೀತಿಯ ಹೊನಲು ಹರಿಸುವ ನಿನ್ನ ನವಿರು ನಗುವ ಒಲವ ಶರಧಿಯೆಡೆ ನಾನು ನಿನ್ನೊಂದಿಗೆ ನಲಿಯುತಾ ಸಾಗಲು ಸಂಭ್ರಮಿಸುತಿತ್ತು. ತುಂಬು ಚಂದಿರನ ಮಹಿಮೆಗೆ ಉಕ್ಕುವ ಶರಧಿಯಂತೆ ಮನದಾಸೆಯು ಉಕ್ಕಿ ಬಾನೆತ್ತರ ಹರಡಿತ್ತು, ನಾ ನಿನ್ನ ಕೈ ಹಿಡಿದು ತಡಿಯ ಅಪ್ಪುವ ಶರಧಿಯನ್ನು ಕಣ್ಣು ತುಂಬಿಕೊಳ್ಳಬೇಕೆಂದು ಹಠ ಹಿಡಿದು ನೀನು ನನ್ನೊಂದಿಗೆ ಸಾಗುತಿದ್ದೆ. ದೂರದ ದಿಣ್ಣೆಯ ಮೇಲೆ ತಂಪಿರುಳಲಿ ನಿತ್ತು ಉಕ್ಕುವ ಶರಧಿಯ ನೋಡಿ ಬೆಳುದಿಂಗಳಲ್ಲಿ ಹೊಳೆವ ಅಲೆಗಳ ಬೆಳ್ಳಿಕಾಂತಿಗೆ ನಿನ್ನ ಮೊಗದ ಕಾಂತಿಯು
ಅರಳುತಿತ್ತು, ಜೊತೆಗೆ ನನ್ನೆದೆಯ ಕನಸು ಅರಳುತ್ತಿತ್ತು, ಎಲ್ಲವೂ ಚೆಲುವೆ ನಿನ್ನ ನಗು ಮೊಗದ ಮಾಯೆಯ ಫಲವಾಗಿತ್ತು, ನಿನ್ನ ಸಾಂಗತ್ಯದ ಸುಖದ ಫಲವಾಗಿತ್ತು, ನೀ ಜೊತೆಯಿರುವೆಯೆಂಬ ಜಂಬದ ಗತ್ತಾಗಿತ್ತು, ಏನೇ ಆಗಲಿ ಜಗದಲ್ಲಿನ ಸುಖವೆಲ್ಲಾ ನಮಗೆ ಒಲಿದಂತೆ, ತಂಪಿರುಳ ತಂಪಲ್ಲಿ ತಣಿಸುವ ತಂಗಾಳಿಯಲ್ಲಿ ನಲಿವ ಗುಲಾಬಿ ತೋಟದ ಕುಸುಮಗಳಿಗೂ ನಮ್ಮ ಸಂಭ್ರಮ ಕಂಡು ವಿಸ್ಮಿತ, ಕಡಲತಡಿಯ ಸಮೀಪದ ದಿಣ್ಣೆಗಳ ಮೇಲೆ ನಿತ್ತು, ತುಂಬು ಚಂದಿರನತ್ತಾ ನೋಡುತ್ತಾ, ಕಡಲಲೆಗಳ ಮೋರ್ಗರೆತಕೆ ಪುಟಿದೇಳುತ್ತಾ, ನಲಿವ ನಿನ್ನ ನಗುಧಾರೆಯ ಸೊಬಗಿನೆದುರು ನನ್ನ ಮನಕೆ ಸ್ವರ್ಗದ ಅನುಭೂತಿ. ಗೆಳತಿ ಈ ನಿನ್ನ ಸಂಗದಲ್ಲೇ ಹತ್ತಾರು ಜನುಮವೆಂದಿದ್ದರೂ ಅದು ಹೀಗೆ ನಿನ್ನೊಂದಿಗೆ ನಗುತ ಸಾಗಲಿ ಎಂದು ಮನ ಕೈ ಮುಗಿದು ಒಲವದೊರೆ ಚಂದಿರನಲ್ಲಿ ಬೇಡುತ್ತಿತ್ತು. ಓಡುವ ಮೋಡಗಳ ನಡುವೆ ಓಡುತ್ತಾ ಭುವಿಯಲ್ಲಿ ನಮ್ಮ ಮನದಲ್ಲಿ ಸಾವಿರ ಕನಸುಗಳ ನೂಕುತ್ತಾ ಹರಸುವ ನಿಸ್ವಾರ್ಥಿಯವನ ಪ್ರೀತಿಯು ನಮಗೇ ಹಾರೈಸಿದಂತೆ. ಮನದುಂಬಿ ನಲಿದು ಸಂತೃಪ್ತ ಮನದಲ್ಲಿ ಇನ್ನು ಮನೆಗೆ ಹೋಗೋಣವೆಂದು ನೀ ನುಡಿವಾಗ..ನನಗೆ ಹೀಗೇಕೆ ಎಂದು ಗೊಣಗುವ ಮನದ ಸದ್ದು ಜೋರಾಗುತ್ತಿತ್ತು. ಮೆತ್ತನೆ ನಿನ್ನೊಂದಿಗೆ ಆದಷ್ಟು ಮತ್ತನೆ ಸಾಗುತ್ತಿದ್ದೆ, ಬೇಗನೆ ಹೆಜ್ಜೆ ಹಾಕಿದರೆ ಊರು ಬಂದು ಬಿಟ್ಟಾತು, ನಮ್ಮ ಸಂಭ್ರಮ ನಡಿಗೆ ಮುಗಿದು ಬಿಟ್ಟರೆ ಮತ್ತೆ ಮತ್ತೆ ಕಾಯುವ ಮನಕೆ ಉತ್ತರ ನೀಡುವ ತಾಕತ್ತು, ಸಂತೈಸುವ ಧೈರ್ಯವಿಲ್ಲದೇ ಈ ಹಂದೆ ಮನಸು ಸಾಗುವ ದಾರಿ ಉದ್ದವಾಗಲಿ.. ಇನ್ನೂ ಉದ್ದವಾಗಲಿ..ಊರು ಇನ್ನೂ ಕಾಣದಿರಲಿ ಎಂದು ಹಪಹಪಿಸುತಿತ್ತು. ನಾನು ಬೇಕೆಂತಲೇ ನಿನಗೆ ದಾರಿಯ ಇಬ್ಬಗೆಯಲ್ಲಿ ಹೂ ಅರಳುತಿದೆ ನೋಡು ಗೆಳತಿ ಎನ್ನುತ್ತಿದ್ದೆ.. ನೀನು ಮುದ್ದಾಗಿ ನಗುತ್ತಾ ಆ ಘಳಿಗೆ ಇನ್ನೂ ಬಂದಿಲ್ಲವೆನ್ನುತ್ತಾ ಸಾಗುತ್ತಿದ್ದೆ. ಅರಳುವ ಹೂಮೊಗ್ಗೆ ತಂಗಾಳಿಗೆ ನಲಿವಾಗ ನಿನಗೆ ಮತ್ತೆ ಮತ್ತೆ ತೋರಿಸುತ್ತಾ ನೋಡು ಹೂವು ಅರಳುವುದು ತುಸು ನಿಲ್ಲೋಣವೇ ಗೆಳತಿ ಎನ್ನುತ್ತಿದ್ದೆ.. ನೀ ನಗುತಾ ನೋಡೋಣ ..ನೋಡುತ್ತಲೇ ಸಾಗುತ್ತಾ ಇರೋಣ.. ದಾರಿತುಂಬ ಹೂಗಳಿವೆ, ಎಂದು ನಕ್ಕು ಮೆತ್ತನೆ ಹಿಡಿದಿದ್ದ ಕೈಯನು ಬಿಗಿಯಾಗಿ ಒಮ್ಮೆ ಹಿಡಿದು ಕರೆದೊಯ್ಯುತ್ತಿದ್ದೆ, ನೀ ನಡೆಸುವ ಘಳಿಗೆಯು ರಾಜರಥದಲ್ಲಿ ನಾ ಸಾಗಿದಂದೆ, ನನ್ನೊಡನೆ ರಥದಲ್ಲಿ ನೀ ಕುಳಿತು ಬೀಗಿದಂತೆ ಅನುಭೂತಿ. ಮನಕ್ಕೊಲಿದ ಗೆಳತಿಯಿರಲು ಜೊತೆಯಲ್ಲಿ ಬಾಳೆಲ್ಲಾ ಹೋಗಂಧ ಬೆರೆದ ಜಗವಾಗಿರಲು ಮನಕ್ಕೆ ಕೊರಗೆಂಬುದು ಎಲ್ಲಿಯೂ ಎಳ್ಳಷ್ಟು ಕಾಡದೇ ನನ್ನ ಮನ ಸಂಭ್ರಮಿಸುತ್ತಿತ್ತು. ಊರು ಹತ್ತಿರ ಬಂದಾಗ ನಿನಗೆ ವಿಧಾಯವೇಳಲು ಮನ ರೋಧಿಸುತ್ತಾ ಇರಲು ನೀ ಕುಡಿ ನಗುವಿನಲ್ಲಿ ನನ್ನ ಕೆನ್ನೆಗೆ ಮುದ್ದಾಗಿ ಸ್ಪರ್ಷಿಸಿ ನಾ ಬರುವೆ ಎಂದಾಗ ನಾನು ನಿನ್ನ ನಗುಮೊಗವನ್ನು ಇನ್ನೊಮ್ಮೆ ಕಣ್ತುಂಬಿಕೊಂಡು ಬೀಳ್ಕೊಡುತಿದ್ದೆ.. ಬೀಳ್ಕೊಡುವಾಗ ತಪ್ಪದೇ ನೀಡುತ್ತಿದ್ದೆ ಹೂಬನದ ಸುಂದರ ಗುಲಾಬಿಯನ್ನು.. ನೀ ನುಡಿಯುತಿದ್ದೆ ಇದು ನೀ ಬರುವ ನಾಳೆವರೆಗೂ ನಗುವುದೆಂದು, ಅದೂ ಮುದ್ದು ಮುದ್ದಾಗಿ ನುಡಿಯುತಿದ್ದೆ ಗೆಳತೀ.. ಮರು ದಿನವಿಂದು ಮತ್ತೆ ನಿನ್ನ ಮಡಲಲ್ಲಿ ಸಂಭ್ರಮಿಸಲು ನಿನಗಾಗಿ ಬರೆದ ಹೊಸ ಒಲವಗೀತೆಯೊಂದಿಗೆ ಕಡಲತಡಿಯಲ್ಲಿ ಗುನುಗುತ್ತಿದ್ದೇನೆ..ಕಾರ್ಮೋಡ ಕರಗಿ ನಗುವ ಚಂದಿರ ಹೊರಬರಬೇಕು, ಜೊತೆಗೆ ನೀನು ಬಂದು ನನ್ನ ಕೈ ಹಿಡಿಯಬೇಕು.. ಬೇಗನೇ ಬಾ ಗೆಳತಿ..
ಜಪಿಸುತಿರುವೆ ಗೆಳತಿ ನಿನಗಾಗಿ
ನೀ ತರುವ ನಗುವಿಗಾಗಿ
ನಿನ್ನ ನಗುಮೊಗದ ಸಿರಿಗಾಗಿ...
ರಾಮಚಂದ್ರ ಸಾಗರ್
Wednesday, 14 December 2016
Tuesday, 13 December 2016
ನೀ ಬರೆಸಿದೆ ಕವಿತೆ..
ಗೆಳತೀ..
ಬರೆಸಿದೆ ನೀನು ಸಾವಿರ ಕವಿತೆ
ಹವಣಿಸು ನಿನ್ನ ಕಣ್ಣೋಟದ ಮಿಂಚಿನಲ್ಲಿ
ನಿನ್ನೊಲವ ರಂಗಿನ ಶಾಹಿಯಲ್ಲಿ
ನಿನ್ನ ಸಾಂಗತ್ಯದ ನವಿರು ಹಿತದಲ್ಲಿ..
ನೋಡುವ ನೋಟವು ಮುತ್ತಾಗುತಿರಲು
ನಗುವಿನ ಸೊಬಗು ಆವರಿಸುತಿರಲು
ಬಂಗಾರಿಯ ನಯನವು ಸೆಳೆಯುತಿರಲು
ಉಲ್ಲಾಸದ ಉಯ್ಯಾಲೆಯಲಿ ನಾ ತೇಲಿದಂತೆ..
ಹವಣಿಸು ನಿನ್ನ ಕಣ್ನೋಟಕೆ ಸೋತಿರಲು
ನಿನ್ನಾಸರೆಯ ಅವಿರತ ಬಯಸುತಿರಲು
ಕಾರುಣ್ಯದ ನಿನ್ನೊಲವು ಜಲಧಿಯಾಗಿರಲು
ಕಾತರಿಸುವ ಮನವು ನದಿಯಾಗಿ
ನಿನ್ನೆಡೆಯೇ ಓಡಿದಂತೆ..
ರಮಿಸುವ ನಗುವಿಗೆ ಮನ ಶರಣಾಗಿರಲು
ರಂಜಿಸು ಬದುಕಿಗೆ ನೀ ಕರೆದೊಯ್ಯುತಿರಲು
ಭುವಿಯ ಸೊಬಗೆಲ್ಲವು ನೀನಾಗಿರಲು
ತುಸು ನಗುತಾ ನನ್ನೆದುರು ನೀನಿರಲು
ಕಾಡಿಸುವ ಕನಸಿಗೆ ಇನ್ನೆಲ್ಲಿ ಜಾಗವು..
ಚೆಲುವ ತನಯೆಯ ನಗುವಿಗೆ
ಒಲವ ಬೊಂಬೆಯ ನಲುಮೆಗೆ
ಕೆಣಕುವ ಇವಳ ಸವಿನೋಟಕೆ
ಬರೆದೆ ನಾನು ಸಾವಿರ ಕವಿತೆ
ಗುನುಗಿಸಿದೆ ನೀನು ಒಲವಗಾಥೆ..
ರಾಮಚಂದ್ರ ಸಾಗರ್
ಬರೆಸಿದೆ ನೀನು ಸಾವಿರ ಕವಿತೆ
ಹವಣಿಸು ನಿನ್ನ ಕಣ್ಣೋಟದ ಮಿಂಚಿನಲ್ಲಿ
ನಿನ್ನೊಲವ ರಂಗಿನ ಶಾಹಿಯಲ್ಲಿ
ನಿನ್ನ ಸಾಂಗತ್ಯದ ನವಿರು ಹಿತದಲ್ಲಿ..
ನೋಡುವ ನೋಟವು ಮುತ್ತಾಗುತಿರಲು
ನಗುವಿನ ಸೊಬಗು ಆವರಿಸುತಿರಲು
ಬಂಗಾರಿಯ ನಯನವು ಸೆಳೆಯುತಿರಲು
ಉಲ್ಲಾಸದ ಉಯ್ಯಾಲೆಯಲಿ ನಾ ತೇಲಿದಂತೆ..
ಹವಣಿಸು ನಿನ್ನ ಕಣ್ನೋಟಕೆ ಸೋತಿರಲು
ನಿನ್ನಾಸರೆಯ ಅವಿರತ ಬಯಸುತಿರಲು
ಕಾರುಣ್ಯದ ನಿನ್ನೊಲವು ಜಲಧಿಯಾಗಿರಲು
ಕಾತರಿಸುವ ಮನವು ನದಿಯಾಗಿ
ನಿನ್ನೆಡೆಯೇ ಓಡಿದಂತೆ..
ರಮಿಸುವ ನಗುವಿಗೆ ಮನ ಶರಣಾಗಿರಲು
ರಂಜಿಸು ಬದುಕಿಗೆ ನೀ ಕರೆದೊಯ್ಯುತಿರಲು
ಭುವಿಯ ಸೊಬಗೆಲ್ಲವು ನೀನಾಗಿರಲು
ತುಸು ನಗುತಾ ನನ್ನೆದುರು ನೀನಿರಲು
ಕಾಡಿಸುವ ಕನಸಿಗೆ ಇನ್ನೆಲ್ಲಿ ಜಾಗವು..
ಚೆಲುವ ತನಯೆಯ ನಗುವಿಗೆ
ಒಲವ ಬೊಂಬೆಯ ನಲುಮೆಗೆ
ಕೆಣಕುವ ಇವಳ ಸವಿನೋಟಕೆ
ಬರೆದೆ ನಾನು ಸಾವಿರ ಕವಿತೆ
ಗುನುಗಿಸಿದೆ ನೀನು ಒಲವಗಾಥೆ..
ರಾಮಚಂದ್ರ ಸಾಗರ್
Subscribe to:
Comments (Atom)



