Thursday, 27 August 2020

ಸುಜ್ಞಾತನ ಸತ್ರದಲಿ


ಆಭಾರದ ಹೃದಯಕೆ ಸೋಲೆಲ್ಲಿದೆ

ಆಭಾಸದ ಹೃದಯಕೆ ಗೆಲುವೆಲ್ಲಿದೆ

ಸಂಕೋಲೆಯ ಬದುಕಿಗೆ ಸುಖವೆಲ್ಲಿದೆ

ಸಂಕೋಚದ ಬತ್ತಳಿಕೆಗೆ ಗುರಿಯೆಲ್ಲಿದೆ


ಸಾಂಗತ್ಯ ಬಯಸದೆ ಸ್ನೇಹವೆಲ್ಲಿದೆ

ಸಾಂಗತೆ ಬಗಲೇರದೆ ಪ್ರೀತಿಯೆಲ್ಲಿದೆ

ಸಾಧನೆಯ ಕನಸಿಲ್ಲದೆ ಫಲವೆಲ್ಲಿದೆ

ಸಾಧಕರ ಕಟಾಕ್ಷವಿರದೆ ಯೋಗವೆಲ್ಲಿದೆ


ಆನಂದವ ಬಲ್ಲವನಿಗೆ ನೋವೆಲ್ಲಿದೆ

ಆನನಕೆ ನಗುವಿರದೆ ಭೂಷಣವೆಲ್ಲಿದೆ

ಸಂಕುಚಿತ ಗುಣಕೆ ಗೌರವವೆಲ್ಲಿದೆ

ಸಂಕುಲದ ಸಿರಿತನಕೆ ಅವಮಾನವೆಲ್ಲಿದೆ


ಸಚ್ಚರಿತ ಸಂಕಲ್ಪಕೆ ಕಳವಳವೇತಕೆ

ಸಚ್ಛತೆಯ ಸಂಘಟನೆಗೆ ಕಳಂಕವೆಲ್ಲಿದೆ

ಸಂಪದದ ಉತ್ಕರ್ಷವೆ ಕೂಳಾಗದು

ಸಂಪನ್ನದ ಉಗಮವೆ ಕನಕವಾಗುವುದು


ಅಜ್ಞಾನಿಯ ಎದೆಯೊಳಗೆ ಬೆಳಕೆಲ್ಲಿದೆ

ಅಜ್ಞಾತನ ಎಲ್ಲೆಯೊಳಗೆ ಬೆಡಗೆಲ್ಲಿದೆ

ಸುಜ್ಞಾನಿಯ ಸಖ್ಯದಲಿ ನಾಕವಿದೆ

ಸುಜ್ಞಾತನ ಸತ್ರದಲಿ ನಾಡಿನೊಳಿತಿದೆ..


ರಾಮಚಂದ್ರ ಸಾಗರ್