Monday, 26 November 2018

ರಾಮಚಂದ್ರ ಸಾಗರ್ ರವರ ಪರಿಚಯ

           
                     "ಹರಯ ನೀ ಬಂದಂತ ಸಮಯ"
                                         ಡಾ. ನಾ. ಡಿಸೋಜ,

     ಸಾಗರ ನಗರ ಸಭೆಯ ಲೆಕ್ಕಾಧಿಕಾರಿಗಳು, ಕವಿಗಳೂ, ನನ್ನ ಸ್ನೇಹಿತರೂ ಆದ ಶ್ರೀ ರಾಮಚಂದ್ರ ಅವರ
ಈವರೆಗಿನ 5 ಕವನ ಸಂಕಲನಗಳನ್ನ ನನ್ನ ಮುಂದಿರಿಸಿಕೊಂಡು ಈ ಮಾತುಗಳನ್ನ ಬರೆಯುತ್ತಿದ್ದೇನೆ.
2014ರಲ್ಲಿ ಪ್ರಕಟವಾದ "ಬುಧ್ದಿ ಜೀವಿ", 2015 "ಶ್ರಮದ ಹನಿಗಳು". 2016 "ಜನನಾಯಕ" 2016
"ನಗುವ ಚಂದಿರ" ಹಾಗು 2018ರ "ಒಲವ ಸಾನಿಧ್ಯದಲೆ" ಇವುಗಳ ಮೂಲಕ ಕವಿಯಾಗಿ ಶ್ರೀ ರಾಮಚಂದ್ರ
ನಡೆದು ಬಂದ ದಾರಿಯನ್ನ ಗುರುತಿಸಲು ಸಾಧ್ಯವಾಗುತ್ತದೆ ಎಂಬ ಉದ್ದೇಶದಿಂದ ನಾನು ಈ ಮಾತುಗಳನ್ನ
ಬರೆಯುತ್ತಿದ್ದೇನೆ.

    ಸುಮಾರು 25 ಕವನಗಳ, ಕೇವಲ 50 ಪುಟಗಳ ರಾಮಚಂದ್ರ ಅವರ ಮೊದಲ ಸಂಕಲನ "ಬುಧ್ದಿ ಜೀವಿ"
ಅವರೇ ಮುನ್ನುಡಿಯಲ್ಲಿ ಹೇಳಿ ಕೊಂಡಿರುವ ಹಾಗೆ " ಮನುಷ್ಯ ಅಂತರಂಗದಲ್ಲಿ ತನಗೆ ತಿಳಿದಿರುವ ಸತ್ಯ ಬಯಕೆ
ಹಿತ ಅನಿಷ್ಟ ಮೋಸ ಏನೇ ಇದ್ದರು ಅದನ್ನು ಬಹಿರ್ಲೋಕದಲಿ ವೈರುಧ್ಯವಾಗಿ ನಟಿಸಿ ಬಿಂಬಿಸಿ ಮುಖವಾಡ
ಧರಿಸಿದ್ದಾನೆ. ದಿನಗಳೆದಂತೆ ಸ್ವಾರ್ಥ ಸಾಧನೆಯೇ ಗುರಿಯಾಗಿದೆ. ಅನ್ಯರ ಬದುಕು ಜೀವಿಗಳ ಮೇಲಿನ ಪ್ರೀತಿ
ಕಡಿಮೆ ಅಗುತ್ತಿದೆ". ಇಂತಹಾ ವಿಷಯವನ್ನ ತಮ್ಮ ಕವಿತೆಗಳಲ್ಲಿ ನೀಡುವ ಒಂದು ಯತ್ನವನ್ನ ರಾಮಚಂದ್ರ
ಮಾಡಿದ್ದಾರೆ. ನಮ್ಮ ಸಮಾಜದ ಒಂದು ವರ್ಗವನ್ನ "ಬುಧ್ದಿಜೀವಿ" ವರ್ಗ ಎಂದು ಪರಿಗಣಿಸಿ, ಈ ಬುಧ್ದ್ದಿವಂತ
ವರ್ಗ ತನ್ನ ಜಾಣತನದ ಮೂಲಕ ಏನೆಲ್ಲ ಅನುಚಿತವಾದುದನ್ನ ಮಾಡುತ್ತ ಬಂದಿದೆ ಎಂಬುದನ್ನ ಅವರು
ಕಾವ್ಯದ ಮೂಲಕ ಹೇಳುವ ಯತ್ನ ಮಾಡಿದ್ದಾರೆ

     ಚಂಗಪ್ಪ ಸಿದ್ದಪ್ಪ ಎಂಬ ಈರ್ವರು ದುಡಿಮೆ ಗಾರರನ್ನ ಇರಿಸಿ ಕೊಂಡು ಬುಧ್ದಿ ಜೀವಿ ಅನಿಸಿ ಕೊಂಡವರು
ಈ ದುಡಿಮೆಗಾರರನ್ನ ಹೇಗೆ ವಂಚನೆಗೆ ಒಳಪಡಿಸುತ್ತಾರೆ ಎಂಬುದನ್ನ ಹೇಳುತ್ತಾರೆ ರಾಮಚಂದ್ರ.
ದಿನಕೊಂದು ಬಾರಿ ನೀ ಹಾಕಿದರು ಅನ್ನ
ನಿನ್ನ ಮನೆಗೆ ಹಾಕದೆ ಕನ್ನ
ಸುರಿಸಿದರು ನಿನ್ನ ಮನೆಗೆ ಹೊನ್ನ
ಇಂಥಹಾ ಚಂಗಪ್ಪ ಸಿದ್ದಪ್ಪ ಸತ್ತಾಗ ಮಾತ್ರ ಈ ಬುಧ್ದಿ ಜೀವಿ ಅವರ ಹೆಣವನ್ನು ಕೂಡ ನೋಡಲು ಹೋಗಲಿಲ್ಲ
ಎಂಬುದೇ ಕವಿಯ ಆಕ್ರೋಶ. ಅವರ ಈ ಸಿಟ್ಟು ಉಳಿದ ಕವನಗಳಲ್ಲೂ ಕಾಣಿಸಿ ಕೊಂಡಿದೆ. ನೀ ತಲುಪುವು
ದೆಲ್ಲಿಗೆ, ಆತ್ಮಹತ್ಯೆ, ಸಮಾನತೆ, ಹೆಸರು, ಪೌರಕಾರ್ಮಿಕ, ಮೊದಲಾದ ಕವಿತೆಗಳು ಇಲ್ಲಿವೆ. ಇದು ಲೇಖಕರ
ಮೊದಲ ಕವನ ಸಂಕಲನವಾದರೂ ಕಾವ್ಯದಲ್ಲಿ ಪ್ರೌಢಿಮೆ ಇದೆ. ಆದರೂ ಪ್ರಾರಂಭದ ಕೆಲ ದೋಷಗಳು
ಅಲ್ಲಲ್ಲಿ ಕಾಣಿಸುತ್ತವೆ.

     ರಾಮಚಂದ್ರ ಅವರ ಎರಡನೇ ಕವನ ಸಂಕಲನ "ಶ್ರಮದ ಹನಿಗಳು". ಈ ಸಂಕಲನದಲ್ಲಿ ಸುಮಾರು
65 ಕವಿತೆಗಳಿವೆ. ಈ ಸಂಕಲನದ ಮೊದಲ ಕವಿತೆಯೇ ಶ್ರಮ ಜೀವಿಯೋರ್ವನ ನೋವನ್ನು ಪ್ರತಿ
ಬಿಂಬಿಸುತ್ತದೆ.
ಬೆಂಕಿಯಲಿ ಬೆಂದು ಬಸವಳಿದು
ಕಬ್ಬಿಣವನು ಮೃದುವಾಗಿಸುತಲಿರಲು
ಜ್ವಾಲೆಯ ಕೆನ್ನಾಲಿಗೆಯಲಿ ಬೆವರಿಳಿದು
ಶ್ರಮದ ಹನಿಗಳು ದೇಹವನು ಒದ್ದೆಯಾಗಿಸಿರಲು

ಓರ್ವ ಶ್ರಮ ಜೀವಿ ತನ್ನ ಬದುಕನ್ನ ಹೇಗೆ ಸಾಗಿಸುತ್ತಾನೆ ಅನ್ನುವ ಚಿತ್ರಣ ಇಲ್ಲಿದೆ. ಉಳಿದ ಕವನಗಳು ಕೂಡ
ಇದೇ ಧ್ವನಿಯನ್ನ ಹೊರಡಿಸುತ್ತವೆ, ಈ ಕವಿತೆಯ ಜೊತೆಯಲ್ಲಿ ಕವಿ ಕೆಲ ಪ್ರಣಯ ಕವಿತೆಗಳನ್ನೂ
ನೀಡಿದ್ದಾರೆ. ಓರ್ವ ಗೆಳತಿ "ಜೊತೆಯಾಗು" ಎಂದು ತನ್ನ ಗೆಳೆಯನಿಗೆ ಹೇಳುತ್ತ;

ಬಾನ ವಿಸ್ತಾರಕಿಂತಲು ನಮ್ಮೊಲವು ಮಿಗಿಲೆಂದು
ನೀ ನುಡಿದ ಪದಗಳೇ ಗುನುಗುತಿರಲು
ಬಾನ ಚುಕ್ಕಿಯಂತೆ ಬೆಳಗು ಬಾ ನನ್ನನು
ನಿಧಾನಿಸದಿರು ಅಂಜದಿರು ಗೆಳೆಯನೆ

ಎಂದು ಗೆಳತಿ ಅಹ್ವಾನಿಸುವ ಚಿತ್ರ ಸೊಗಸಾಗಿದೆ.
     ಇವರ ಮೂರನೆಯ ಸಂಕಲನ "ಜನನಾಯಕ"ಕ್ಕೆ ಮುನ್ನುಡಿ ಬರೆದ ಶ್ರೀ ಕಡಿದಾಳ ಶಾಮಣ್ಣ ಮುನ್ನುಡಿಯಲ್ಲಿ
"ಇಂದಿನ ಹೆಚ್ಚು ಸಂಖ್ಯೆಯ ಪೊಳ್ಳು ನಾಯಕರ ಬಗ್ಗೆ ಅರಿವು ಮೂಡಿಸುತ್ತ ಜೊತೆಗೆ ಪ್ರಜೆಗಳಿಗೆ ಕಿವಿಮಾತು
ಹೇಳುತ್ತ" ಈ ಕವಿತಗಳು ಸಾಗುತ್ತವೆ ಅನ್ನುವ ಮಾತನ್ನ ಹೇಳುತ್ತಾರೆ. ಇಲ್ಲಿಯ 74 ಕವಿತೆಗಳ ಇದೇ ಕೆಲಸ
ಮಾಡುತ್ತವೆ ಕೂಡ, ಇವರ ದೃಷ್ಟಿಯಲ್ಲಿ ಜನನಾಯಕ ಅಂದರೆ;

ಜನತಂತ್ರವನು ಸ್ವಹಿತಕೆ ಸರಕಾಗಿಸಿ ಕೊಂಡವನು
ದ್ರವ್ಯ ಕೇಳಿಯನು ಬದುಕಿಗೆ ಉಸಿರಾಗಿಸಿ ಕೊಂಡವನು
ದಾರಿದ್ರ್ಯಗಳನು  ಹಾಗೆಯೇ ಉಳಿಸುವನು
ದಮ್ಮಿರದ ಸಮಾಜಕೆ ಮುನ್ನುಡಿಗಾರನು.....

ಅನ್ನುತ್ತಾರೆ. ನಮ್ಮಲ್ಲಿ ಇದೀಗ ಜನ ನಾಯಕರು ಎಂದು ಕರೆಸಿ ಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಅಲ್ಲದೆ ಇವರೆಲ್ಲ
ಜನ ನಾಯಕರೆಂದು ಕರೆಸಿ ಕೊಳ್ಳುತ್ತಾರಲ್ಲದೆ ಅವರಿಗೆ ಖಂಡಿತ ಆ ಯೋಗ್ಯತೆ ಇರುವುದಿಲ್ಲ. ಇಂತಹಾ
ಜನ ನಾಯಕರ ಬಗ್ಗೆ ವಿವಿಧ ರೀತಿಯಲ್ಲಿ ಬರೆಯುತ್ತಾರೆ ರಾಮಚಂದ್ರ. ಇವುಗಳ ನಡುವೆಯೂ ಅಂಬೇಡ್ಕರ್
ಲಾಲ್ ಬಹದ್ದೂರ ಶಾಸ್ತ್ರಿ, ಮಹಾತ್ಮ ಗಾಂಧಿ ಮೊದಲಾದ ಕವಿತೆಗಳು ಚೆನ್ನಾಗಿವೆ. ಇಂದು ಇಡೀ ಸಮುದಾಯ
ವನ್ನ ಕೆಡಿಸುತ್ತಿರುವ ರಾಹಕೀಯ ನಾಯಕರ ಕುರಿತು ರಾಮಚಂದ್ರ ಬರೆದಿರುವುದು ಮೆಚ್ಚ ಬೇಕಾದ ವಿಷಯ
.
     ರಾಮಚಂದ್ರ ಅವರ ನಾಲ್ಕನೆಯ ಪುಸ್ತಕ "ನಗುವ ಚಂದಿರ". ಮತ್ತೆ 75 ಕವಿತೆಗಳ ಸಂಕಲನ. ಹಜ್ಜೆ
ಹೆಜ್ಜೆಗೂ ತನ್ನನ್ನ ಒಲಿದವಳ ಚೆಲುವನ್ನ ಕುರಿತು ಹೊಗಳುತ್ತ, ಅವಳ ಆಟ ಒಡನಾಟ ಬಳುಕು ಕುಲುಕು
ಗಳನ್ನ ಕೊಂಡಾಡುತ್ತ ಮೈಮರೆಯುತ್ತಾನೆ ಈ ಕವಿ.

ನಿನ್ನ ನೆರಳಲಿ ತಂಪಾಗಿದೆ ತನುವು
ನಿನ್ನ ನಗುವಲಿ ಸೆರೆಯಾಗಿದೆ ಮನಸು
ನಿನ್ನ ಜೊತೆಯಲಿ ಸಾಗ ಬೇಕಿದೆ ಬದುಕು
ಬಾಳ ಪಥದಲಿ ನಲಿಯ ಬೇಕಿದೆ ನಾವು

ಇಲ್ಲಿಯ ಎಲ್ಲ ಕವಿತೆಗಳೂ ಇದೇ ದಾಟಿಯಲ್ಲಿ ಸಾಗುತ್ತವೆ. "ಸದಿಲ್ಲದೆ ಬಂದೆ" "ಹಾಲು ಜೇನು" "ಅವಳ ಹೆಸರು"
"ನಿನ್ನ ಕಣ್ಣಾಲಿಯಲಿ" "ನೀನೇನೆ ಚೆಲುವೆ"  "ಕಾಡುತಿದೆ ನಗುವು" "ನೀ ರಕ್ಷೆಯಾದೆ"
"ನೋಯಿಸದಿರು" ಹೀಗೆ ತನ್ನೊಲವಿನ ಪ್ರೀಯ ತಮೆಯನ್ನು ಪ್ರತಿ ಸಂದರ್ಭದಲ್ಲಿಯೂ ನೆನಸಿ ಕೊಳ್ಳುವ,
ಕೊಂಡಾಡುವ, ಬಣ್ಣಿಸುವ ಈ ಪ್ರಯತ್ನ ಕನ್ನಡಕ್ಕೆ ಹೊಸದಲ್ಲ. ಕವಿ ಕೆ. ಎಸ್. ನರಸಿಂವ ಸ್ವಾಮಿಯವರು ಈ
ಕೆಲಸ ಮಾಡಿದ್ದಾರಾದರೂ ಪ್ರೀತಿ ಪ್ರೇಮ ಅನ್ನುವಂತಹದೇ ಅಂತಹದ್ದು. ಅದು ಎಷ್ಟೇ ಹಾಡಿದರೂ ಬರೆದರೂ
ಬೇಸರ ವಾಯಿತು ಎಂದಿಲ್ಲ. ರಾಮಚಂದ್ರ ಅದನ್ನ ಮತ್ತೊಮ್ಮೆ ಇಲ್ಲಿ ಬಳಸಿ ಕೊಂಡಿದ್ದಾರೆ. ಅವರಯತ್ನ
ಸಾರ್ಥಕವಾಗಿದೆ ಕೂಡ.

     "ಒಲವಸಾನಿಧ್ಯದಲೆ" ಅವರ ಐದನೆಯ ಸಂಕಲನ ಪ್ರಕಟವಾದದ್ದು 2018ರಲ್ಲಿ. ಮತ್ತೆ ಇದರಲ್ಲಿ ಕೇವಲ
70 ಕವನಗಳನ್ನ ಕವಿ ನೀಡಿದ್ದಾರೆ. ಇನ್ನೂ ಒಂದು ವಿಶೇಷ ಅಂದರೆ ಪ್ರತಿ ಕವನವೂ ತನ್ನ ಜೊತೆಯಲ್ಲಿ
ಒಂದೊಂದು ಛಾಯಾ ಚಿತ್ರವನ್ನ ಜೋಡಿಸಿ ಕೊಂಡು ಸಂಕಲನದ ಹೆಸರಿಗೆ ಸಾರ್ಥಕ್ಯವನ್ನ ತಂದು ಕೊಟ್ಟಿದೆ.
ಭಾವ ಚಿತ್ರಗಳು ನೆಪಕ್ಕೆ ಚಿತ್ರಗಳಾಗಿ ಉಳಿದಿಲ್ಲ. ಅವು ಕವಿತೆಯ ಭಾವವನ್ನ ಪ್ರತಿ ಬಿಂಬಿಸುವಂತೆ ಇವೆ.

     ಪ್ರೀತಿಯ ಕುರಿತು ಬಹಳ ದಿನ ಬರೆಯಲು ಆಗುವುದಿಲ್ಲ. ಹೀಗೆಲ್ಲ ಬರೆಯಲು ಅಲ್ಲಿ ಏನಿರುತ್ತದೆ ಎಂಬುದು
ಕೆಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ರಾಮಚಂದ್ರ ಅವರಲ್ಲಿ ಇದೆ.

ಕವಿತೆ ಎಂದರೆ ಎದೆಯೊಳಗೆ
ನೀ ಅರಳಿಸಿದ ಸವಿಗನಸು
ಒಲವ ತಂಗಾಳಿಯೊಳಗೆ
ನೀ ಬೆರೆಸಿದ ಸೌಗಂಧವು.

ಇಂತಹಾ ಒಂದು ಉತ್ತರವನ್ನ ಕಂಡು ಕೊಂಡಿರುವ ಈ ಕವಿ, ಪ್ರೇಮ ಕಾವ್ಯಗಳನ್ನ ಮತ್ತೂ ಬರೆಯುತ್ತಿರಲಿ
ಎಂದು ನಾನು ಹಾರೈಸುತ್ತೇನೆ. ಅಲ್ಲದೆ ಶ್ರೀ ರಾಮಚಂದ್ರ ಅವರಿಗೆ ಆ ವಯಸ್ಸಿದೆ ಇದು ಬರೆಯುವ ಕಾಲ.
ಬೆರೆಯುವ ಕಾಲ. ಈ ಕಾಲದ ಪ್ರಯೋಜನವನ್ನ ಅವರು ಪಡೆಯಲಿ ಎಂದು ಹಾತೈಸುತ್ತೇನೆ.

ಸಾಗರ=577 401. =ಡಾ. ನಾ. ಡಿಸೋಜ.