Saturday, 14 January 2017

ಅಂಜಿಕೆ ಮನ ಕರಗಿಸಿದವಳು...

     ನಗುವಿನ ಮುಖವಾಡ ಹೊದ್ದು ಅಂದು ಶ್ಯಾಮಲೆಯೆದುರು ಕುಳಿತಿದ್ದೆ, ಅವಳಿಗೆ ಯಾವುದೂ ಅರಿವಿಗೆ ಬಾರದಂತೆ ನಟಿಸುವುದು ನನ್ನ ಕೆಲಸವಾಗಿತ್ತು, ಅದು ಅರೆನಿಮಿಷವೂ ಅತೀ ಕಠಿಣವೆಂದು ಅರಿವಿತ್ತು, ಆದರೂ ಮನಕ್ಕೆ ನಾನು ಅಪ್ಪಣೆ ನೀಡಿಯಾಗಿತ್ತು, ಯಾವುದೇ ಕಾರಣಕ್ಕೂ ಅವಳಿಗೆ ನನ್ನ ಮನದ ದುಗುಡ ಹೊರಬರಬಾರದೆಂದು. ಅವಳು ಎಲ್ಲವನ್ನು ನುಡಿಯುತ್ತಾ ಒಮ್ಮೆ ನನ್ನೆಡೆ ನೋಡಿದಳು, ಮನದಲ್ಲಿ ಕೊಂಚ ಅಂಜಿಕೆ ಮೂಡಿದರು ಕಾಣದಂತೆ ನಟಿಸುವುದು ಮೊದಲೇ ನಿರ್ದರಿಸಿದ್ದರಿಂದ ನಗುತಲೇ ಸುಮ್ಮನಿದ್ದೆ. ಆದರೂ ಮನದ ತಳಮಳವ ಹೊರಹಾಕಲಾದೀತೇ..? ಸುಮಾರು 5 ವರ್ಷಗಳು ಜೊತೆಯಲ್ಲೇ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದೆವು, ಇಬ್ಬರೂ ಒಟ್ಟಿಗೆ ಸಾವಿರಾರು ಘಳಿಗೆ ಕೂತು ಹರಟೆಹೊಡೆದೆವು. ನೂರಾರು ಸಾರಿ ಎದುರು ಕೂತು ಊಟ ಮಾಡಿದ್ದೆವು. ಮಾಡಿದ ಚೇಷ್ಟೆ, ಆಡಿದ ತುಂಟಾಟ ಎಲ್ಲವೂ ಕಣ್ಣೆದುರು ಬರುತ್ತದೆ, ಒಮ್ಮೆಲೇ ನಾಳೆಯಿಂದ ಇವಳು ಜೊತೆಯಿರುವುದಿಲ್ಲವೆಂಬ ಕೂಗು ಗಟ್ಟಿಯಾಗುತ್ತದೆ. ರೋಧಿಸುವ ಮನದ ಜೊತೆಗೆ ನಗುವ ನಟನೆಯ ಮೊಗದಲ್ಲಿ ನಾ ಸುಮ್ಮನೆ ಕುಳಿತಿದ್ದೆ. ಅವಳು ಅವಳಿಷ್ಟದ ಪ್ರಶ್ನೆಗಳನ್ನು ಕೇಳುತ್ತಾ ಸಾಗುತ್ತಿದ್ದಳು, ನಾನು ಉತ್ತರಿಸಲು ತೊಡಕಾದರೂ ಪ್ರಯತ್ನಿಸುತ್ತಿದ್ದೆ. ಆಗ ಅವಳ ಗಮನ ನನ್ನೆಡೆ ಬೀಳುವುದು ತಡವಾಗಲಿಲ್ಲ. ಕೇಳಿಯೇ ಬಿಟ್ಟಳು, ಇಂದು ನೀನು ನಿನ್ನೆಯಂತೆ ಇಲ್ಲ, ಏನಾಗಿದೆ ಎಂದಳು. ನಾನೂ ಏನೂ ಇಲ್ಲ, ಹಾಗೇನಿಲ್ಲವೆಂದೆ, ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದಳು. ನನಗೆ ಮನದ ರೋಧನ ತಡೆಯುವುದು ಕಠಿಣವಾಗುತ್ತಿತ್ತು, ಆದರೂ ಮುಖವಾಡದ ಮುಖ ಹೊದ್ದು ನಗಲು ಪ್ರಯತ್ನಿಸತೊಡಗಿದೆ. ಅವಳು ನೇರವಾಗಿ ನನ್ನನ್ನೇ ನೋಡುತ್ತಾ ಕಾರಣವನ್ನು ಬಯಸಿದಂತಿತ್ತು. 

     ಹೌದು, ಇನ್ನು ನನ್ನಿಂದ ಮುಚ್ಚಿಡಲು ಸಾಧ್ಯವೇ, ಇಲ್ಲವೆಂದು ಮನ ಸೋಲೊಪ್ಪುವ ಸಮಯ ಬಂದಂತೆನಿಸಿತು. ಅವಳು ನನ್ನ ಹತ್ತಿರ ಬಂದು ಹೇಳದೇ ನೀನು ಕಾರಣ ಎಷ್ಟು ದೂರ ಹೋಗುತ್ತೀಯ, ಅದು ನಿನ್ನಿಂದಲೂ ಸಾಧ್ಯವಿಲ್ಲ ಮತ್ತು ನನ್ನಿಂದಲೂ ಸಾಧ್ಯವಿಲ್ಲ. ಮತ್ತೆ ನೀನು ಯೋಚಿಸು, ಅವಸರದಲ್ಲಿ ಎಲ್ಲವನ್ನು ಮುಗಿಸಬೇಡ, ಇನ್ನೊಮ್ಮೆ ಅವಲೋಕಿಸು, ನಮ್ಮ ನಡುವಿನ ಬಂಧವು ಅಮರ ಸ್ನೇಹದೊಡಗೂಡಿದ ಪ್ರೇಮ ಬಂಧ. ಅದನ್ನು ಕಾಪಿಡುವ ಸಿದ್ದಿಯು ನಮ್ಮದಾಗಲಿ, ಅಂಜಿಕೆಯೇತಕೆ ಎಂದು ನನ್ನ ಕೈಹಿಡಿದು ಕೇಳಿದಳು. ನನಗೆ ಅವಳ ಪ್ರೀತಿಯನ್ನು ನಿರಾಕರಿಸುವ ಶಕ್ತಿಯು ಇಲ್ಲ, ಜೊತೆಗೆ ಅವಳಿಲ್ಲದೇ ಬದುಕುವ ಧೈರ್ಯವೂ ಇಲ್ಲ, ಪ್ರತಿಘಳಿಗೆಯು ಅವಳಿಗಾಗಿ ಹಪಹಪಿಸುವ ಈ ಮನ, ಅವಳಂಬಿ ಜೀವ, ಅವಳಿರುವ ಕನಸು, ಅವಳಿರುವ ದಾರಿಯು ಎಲ್ಲವನ್ನು ಪ್ರೀತಿಸುವ ನಾನು ಅವಳಿಗಾಗಿ ಮನ ಹಂಬಲಿಸುತ್ತಿದ್ದರು ಮುಖವಾಡದ ಮೊಗದಲ್ಲಿ ಅವಿತು ಕುಳಿತಿದ್ದೆ. ಕಾರಣವದೇ, ಮತ್ತೆ ನನ್ನದೂ ಅದೇ ಉತ್ತರ. ನಮಗೀಗ 23 ಹರಯ, ನಾವೀಗ ಕಾಲೇಜು ಮುಗಿಸಿದ್ದೇವಷ್ಟೇ. ನಮಗೀಗ ದುಡಿದು ತಿನ್ನುವ ತಾಕತ್ತು ಇರಬಹುದು, ಆದರೆ ಉದ್ಯೋಗ ಸಿಗಬೇಕು, ನಾವು ನಮ್ಮ ಬದುಕಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಬೇಕು. ಅಷ್ಟು ಉತ್ತಮವಲ್ಲದಿದ್ದರೂ ಬದುಕಿನ ಬಂಡಿ ಸಾಗುವಂತಿರಬೇಕೆಂಬ ಹಂಬಲ. ಆದರೆ ಈಗಷ್ಟೆ ಓದು ಮುಗಿಸಿ ಹೊರಬರುತ್ತಿರುವ ನಾನು ಇವಳಿಗೇನೆಂದು ವಚನ ನೀಡಲಿ. ನೀಡಿದ ಮಾತು ಉಳಿಸಿಕೊಳ್ಳಲು ಸಾಧ್ಯವೇ..? ಏನೇ ಆದರೂ ನೈಜ ಜೀವನಕ್ಕೂ ಕಾಲೇಜು ಜೀವನದ ತುಂಟಾಟಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮ ಐದು ವರ್ಷಗಳ ಸ್ನೇಹ, ಪ್ರೀತಿಯೆಲ್ಲವೂ ಇಲ್ಲಿಯೇ ಕೊನೆಯಷ್ಟೇ.. ಇವಳಿಗೆ ನಾನು ಮದುವೆಯಾಗುವುದು ಸಾಧ್ಯವೇ ಎಂಬ ಕೊರಗು. ಮನದಲ್ಲೇನೋ ಇವಳೇ ಬೇಕೆಂಬ ಹಂಬಲ. ಆದರೆ ಅವಳ ಮನೆಯಲ್ಲಿ ಆಗಲೇ ಅವಳಿಗೆ ವರಾನ್ವೇಷಣೆ ಮಾಡಿ ಮುಗಿಸಿದ್ದಾರೆ. ಅವಳಿಗೆ ಕಾಲೇಜು ಮುಗಿದೊಡನೆ ಮದುವೆಮಾಡುವುದಾಗಿ ಅವರ ಮನೆಯಲ್ಲಿ ನಿರ್ಧರಿಸಿಯಾಗಿದೆ. ಆದರೆ ಅವಳದು ಒಂದೇ ಹಠ. ತಾನೂ ಇನ್ನೂ ಓದುವುದಾಗಿ ಮನೆಯಲ್ಲಿ ನಂಬಿಸುತ್ತೇನೆ, ಇನ್ನೂ ಓದುತ್ತೇನೆ, ನೀನು ಅಷ್ಟರಲ್ಲಿ ಒಂದೊಳ್ಳೆಯ ಕೆಲಸವನ್ನು ಅಂದರೆ ನಮ್ಮ ಪುಟ್ಟ ಸಂಸಾರ ಬದುಕುವಷ್ಟು ಸಂಪಾದನೆ ಬರುವ ಸಣ್ಣ ಕೆಲಸವಾದರೂ ಸಾಕು, ನಮ್ಮ ಬದುಕಿಗೆ ಸಿರಿತನ ಹಂಗಿಲ್ಲ, ನೀನು ನಿನ್ನ ಪಾಡಿಗೆ ನಿನ್ನ ಕೆಲಸಮಾಡು ಎಂಬುದು ಅವಳ ಹಠ. ನನ್ನ ಮನದಾಸೆಯೂ ಅದೇ. ಆದರೆ ಕಾಲೇಜು ಮುಗಿದ ಕೂಡಲೇ ಕೆಲಸಸಿಗಬೇಕು. ಬೇಗನೇ ವರ್ಷ ಕಳೆಯುವುದರೊಳಗಾಗಿ ಅವಳನ್ನು ಸಾಕುವಷ್ಟು ಶಕ್ತಿಯನ್ನು ನಾನು ಹೊಂದಬೇಕು. ಅವಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ನನಗಾಗಿ ಶಬರಿಯಂತೆ ಕಾಯುವ ಅವಳ ಮನದ ಬವಣೆಗೆ ನಾನು ಕೊನೆಕಾಣಿಸಬೇಕು. ಒಲವ ಹಂದರದಲ್ಲಿ ನಾನು ಅವಳು ಒಂದಾಗಬೇಕು. ಇದೆಲ್ಲವೂ ನನ್ನ ಮನದಾಸೆ, ಆದರೆ ಅದು ನೆರವೇರುವುದೇ ಎಂಬ ಗೊಂದಲ ಮತ್ತು ನೋವು. ಆಯಿತು ಈಗ ಮನ ನಿರ್ಧರಿಸಿತು, ಅವಳನ್ನು ಬಿಟ್ಟು ಬದುಕುವುದು ನನ್ನಿಂದ ಸಾಧ್ಯವಿಲ್ಲ, ಅವಳಿಗಿರುವ ಧೈರ್ಯದರ್ಧವಾದರೂ ನಾನು ಹೊಂದದಿದ್ದರೇಗೆ ಎಂಬ ಛಲದಲ್ಲಿ ಅವಳಿಗೆ ಮಾತು ಕೊಟ್ಟೆ. ಗೆಳತೀ ನಾನು ಕಂಡಿತಾ ನಿನಗಾಗಿ ಪಣತೊಡವೆ, ನನ್ನವಳನ್ನಾಗಿ ಮಾಡಿಕೊಳ್ಳಲು ದೇವರಲ್ಲಿ ಬೇಡುವೆನೆಂದು ಅವಳಿಗೆ ಮಾತು ಕೊಟ್ಟೆ. ಅವಳು  ಕಣ್ಣಲ್ಲಿ ಆಗ ಎರಡು ಹನಿ ನೀರುಗಳುದುರಿದವು ಮೆತ್ತನೇ ಜೊತೆಯಲ್ಲಿ ನನ್ನ ಕಣ್ಣಲ್ಲೂ ಕೂಡ. 

ಅವಳ ಮಾತನ್ನು ನನ್ನ ಮನದ ಬಯಕೆಯನ್ನು ಈಡೇರಿಸಿಕೊಳ್ಳಬೇಕೆಂದರೆ ಈಗ ನಾನು ಒಂದು ಒಳ್ಳೆಯ ಕೆಲಸವನ್ನು ಪಡೆಯಬೇಕು, ಆದರೆ ನಾನಿನ್ನೂ ಈಗಷ್ಟೇ ಕಾಲೇಜು ಮುಗಿಸಿಬಂದವನು. ಅನುಭವವಿಲ್ಲದೇ ಎಲ್ಲಿಯೂ ಬೇಗನೇ ಕೆಲಸ ಸಿಗುವುದಿಲ್ಲ. ಏನೇ ಆಗಲಿ ಬೆಂಗಳೂರಿನಲ್ಲಿರುವ ನನ್ನ ಗೆಳೆಯನನ್ನು ಭೇಟಿಮಾಡಿ ಬರೋಣವೆಂದು ನಿರ್ಧರಿ ಪ್ರಯಾಣ ಬೆಳೆಸಿದೆ. ಗೆಳೆಯನೊಡಗೂಡಿ ಒಂದು ವಾರದ ಕಾಲ ಬೆಂಗಳೂರನ್ನು ಅಲೆದಾಡಿದೆ, ಹೇಳಿಕೊಳ್ಳುವಂತಹದೇನು ಕೆಲಸ ಸಿಗಲಿಲ್ಲ, ಗೆಳೆಯ ರೂಂಗೆ ಬರುವುದು ರಾತ್ರಿ ಹತ್ತಕ್ಕೆ.  ಬೇಸರದಲ್ಲಿ ರಾತ್ರಿ ಹಾಗೆಯೇ ಮಲಗಿದ್ದೆ. ಅಷ್ಟೊತ್ತಿಗೆ ಗೆಳೆಯ ಯಾರೋ ಸ್ನೇಹಿತರೊಡನೆ ಬಂದ. ಅವರು ಕೃಷ್ಣಪ್ಪ ಎಂದೂ ಸಣ್ಣ ಕೈಗಾಡಿಯಲ್ಲಿ ಊಟದ ಕ್ಯಾಂಟೀನ್ ನಡೆಸುತ್ತಾರೆಂದು ಪರಿಚಯಿಸಿದ. ನನಗೆ ಅವರದೇ ಕ್ಯಾಂಟೀನ್ ನಿಂದ ತಂದ ಊಟವೆಂದು ಹೇಳಿ ಊಟಕ್ಕೆ ಕರೆದ. ಎಲ್ಲರೂ ಊಟ ಮಾಡುತ್ತಾ ನಮ್ಮ ನಮ್ಮ ಪರಿಚಯ ಇನ್ನೂ ಹತ್ತಿರವಾಯಿತು. ನನ್ನ ಮನದಾಸೆಯು ಕೃಷ್ಣಪ್ಪನವರಿಗೆ ಅರ್ಥವಾಯಿತು. ನಾನು ಕಾಲೇಜು ಓದಿ ಕೆಲಸಕ್ಕಾಗಿ ಅಲೆಯುವುದು ದಿನಾ ಬಂದು ರಾತ್ರಿ ಸ್ನೆಹಿತನ ರೂಂನಲ್ಲಿ ಮಲಗುವುದು ಮಾಮೂಲಾಯಿತು. ದಿನಗಳುರುಳಿ ತಿಂಗಾಯಿತು, ತಿಂಗಳುಗಳುರುಳಿ ಹತ್ತಿರ ಅರ್ಧವರ್ಷವು ಮುಗಿಯಿತು, ಮನದಲ್ಲೂ ದುಗುಡ ಹೆಚ್ಚತೊಡಗಿತು. ಒಂದು ದಿನ ಕುಳಿತಿದ್ದಾಗ ನಾನು ಕೃಷ್ಣಪ್ಪನಿಗೆ ಕೇಳಿದೆ, ನೀವು ಒಂದು ದಿನಕ್ಕೆಷ್ಟು ದುಡಿಮೆಯಾಗುತ್ತದೆಂದು, ಅವರು 4 ರಿಂದ 5 ಸಾವಿರ, ಎಲ್ಲಾ ಖರ್ಚು ಕಳೆದು 7 ರಿಂದ 8 ನೂರು ಉಳಿಯುತ್ತದೆಂದರು. ಜೊತೆಗೆ ನನ್ನದೇ ಕ್ಯಾಂಟೀನ್ ಆದ್ದರಿಂದ ಯಾರದ್ದೂ ಹಂಗಿಲ್ಲವೆಂದರು, ನನಗೆ ಅತೀವ ಸಂತಸವಾಯಿತು. ಸಣ್ಣ ಕೈಗಾಡಿಯಲ್ಲಾದರೂ ಈತನ ದುಡಿಮೆ ಮತ್ತು ನೆಮ್ಮದಿಯ ಜೀವನವನ್ನು ಮೆಚ್ಚಬೇಕೆಂದು ಕೊಂಡೆ, ನನಗೂ ಮನದಲ್ಲಿ ಒಂದು ಆಸೆಯರಳಿತು, ನಾನೀಗ ಉನ್ನತ ವ್ಯಾಸಾಂಗ ಮಾಡಿರಬಹುದು, ಆದರೆ ನಾನೊಬ್ಬ ಬದುಕುವಷ್ಟು ದುಡಿಮೆಯ ಕೆಲಸ ಸಿಗದೇ ಆರು ತಿಂಗಳು ಕಳೆದಾಯ್ತು, ಇನ್ನು ಹೀಗೇ ಮುಂದುವರಿದರೆ ನನ್ನ ಶ್ಯಾಮಲೇ ನನಗೆ ದೊರೆಯುವುದು ಸಾಧ್ಯವೇ ಇಲ್ಲವೆಂಬ ಕೊರಗು ಗಟ್ಟಿಯಾಯಿತು. ಒಮ್ಮೆಗೇ ರಾತ್ರಿ ಸ್ನೇಹಿತ ಬೆಳಿಗ್ಗೆ ಏಳುವುದನ್ನೇ ಕಾಯುತ್ತಾ ರಾತ್ರಿಯಿಡಿ ನಿದ್ರೆ ಬಾರದೇ ಕನವರಿಸುತ್ತಾ ಬೆಳಿಗ್ಗೆ ಎದ್ದವನೇ ಸ್ನೇಹಿತನನ್ನ ಕೇಳಿದೆ, ನಾನು ಕೃಷ್ಣಪ್ಪನಂತೆ ಒಂದು ಕ್ಯಾಂಟೀನ್ ಮಾಡುತ್ತೇನೆ ನೀನು ಸಹಕರಿಸು ಎಂದೆ, ಜೊತೆಗೆ ನಿಧಾನವಾಗಿ ಬೇರೆಕಡೆ ಕೆಲಸವನ್ನು ಜೊತೆಯಲ್ಲೇ ಹುಡುಕುವೆ ಎಂದೆ. ಆತ ಒಮ್ಮೆ ಜೋರಾಗಿ ನಕ್ಕು ಹೇಳುವುದೆಲ್ಲ ಸುಲಭ, ಮಾಡುವುದಲ್ಲವೆಂದು ಸುಮ್ಮನೇ ನಡೆದ, ಸಾಗುತ್ತಾ ಮೊದಲು ನಿನ್ನ ಹುಡುಗಿಗೆ ಕೇಳು ಎಂದಾ.. ಮನದಲ್ಲಿ ಹೌದಲ್ಲವೇ ಎಂದೇ. ಆದರೂ ಎಲ್ಲವನ್ನೂ ಹೇಳುವುದಕ್ಕಿಂತ ಮಾಡುವುದೇ ಮೊದಲು ಲೇಸೆಂದು ಕುಳಿತೆ. ಮತ್ತೆ ಹಠವಿಡಿದೆ ಸ್ನೇಹಿತನ ಬಳಿ. ಆತ  ಕೃಷ್ಣಪ್ಪನೊಡನೆ ಮಾತಾಡೋಣವೆಂದ. ಕಾದು ಕುಳಿತು ಕೃಷ್ಣಪ್ಪನೊಡನೆ ಮಾತಾಡಿದೆವು, ಆಗ ಆತ ಹೇಳಿದ್ದು ಕೇಳಿ ನನಗೂ ಆಶ್ಚರ್ಯವಾಯಿತು. ಕೃಷ್ಣಪ್ಪನೂ ನನಗಿಂತ ಹೆಚ್ಚಿಗೆ ಓದಿದವರು, ಅವರೂ ಎಲ್ಲೂ ಕೆಲಸಸಿಗದೇ ಈ ವೃತ್ತಿಯನ್ನು ಆಯ್ದುಕೊಂಡವರು, ಅವರು ನನ್ನ ಪರಿಸ್ಥಿತಿಯನ್ನು ಆಗಲೇ ಅರಿತವರಾದ್ದರಿಂದ ನನಗೆ ಸಹಕರಿಸಿದರು, ಸ್ನೇಹಿತನ ಕಾಸೇ ಮೊದಲು ನನಗೆ ಬಂಡವಾಳ, ಜೊತೆಗೆ ಕೃಷ್ಣಪ್ಪರ ಹಾರೈಕೆ. ದಿನಕಳೆದಂತೆ ವ್ಯಾಪಾರವು ಉತ್ತಮವೆನಿಸಿತು, ನಾನೂ ಕೃಷ್ಣಪ್ಪ ಸೇರಿ ಒಟ್ಟಿಗೇ ಒಂದು ಸಣ್ಣ ಹೋಟೇಲ್ ತೆಗೆಯುವ ಆಲೋಚನೆ ಮಾಡಿದೆವು. ಅದರಂತೆ ಎಲ್ಲವೂ ಸಿದ್ದಿಸಿತು, ಇದರಲ್ಲೇ ನನ್ನ ಮನ ನಲಿಯತೊಡಗಿತು, ಶ್ಯಾಮಲೆಯ ತವಕ ಮನದಲ್ಲಿ ಇನ್ನು ಹೆಚ್ಚತೊಡಗಿತು.
 
     ಈಗ ಮೊದಲ ಬಾರಿಗೆ ಅವಳನ್ನು ಕಾಣಲು ಅವಳೂರಿಗೆ ಹೊರಟಿದ್ದೇನೆ, ಅವಳಿಗಾಗಿ ಕೊಂಡ ಪ್ರೀತಿಯ ವಸ್ತುಗಳನ್ನು ನನ್ನ ಬಳಿ ಪ್ರೀತಿಯಿಂದ ತೆಗೆದುಕೊಂಡು ಬ್ಯಾಗ್ ನಲ್ಲಿಟ್ಟುಕೊಂಡು ಹಾದಿ ಸವೆದಂತೆ ಆಗಾಗ್ಗೆ ಬ್ಯಾಗ್ ನ್ನು ಗಮನಿಸುತ್ತಾ ಸಾಗಿದೆ. ಊರಿಗೆ ಬಂದವನೇ ನಾವು ದಿನಾ ಸಂಜೆ ಭೇಟಿಯಾಗುವ ಸ್ಥಳದಲ್ಲಿ ಗಜವನ್ನೇ ಗೆದ್ದಂತೆ ಸಾಗಿದೆ. ಅವಳಿಗಾಗಲೇ ನಾನು ಬರುವುದು ತಿಳಿದಿದ್ದರಿಂದ ಅವಳು ನನಗಾಗೇ ಎದುರು ನೊಡುತ್ತಾ ನಿಂತಿದ್ದಳು. ನಾನೂ ಅವಳಿಗೆಂದು ಕಾಯ್ದಿಟ್ಟ ಪ್ರೀತಿಯಿಂದ ತಂದ ಉಡುಗೊರೆಯನ್ನು ಕೊಟ್ಟು, ನನ್ನ ಸ್ಥಿತಿಯನ್ನು ನಿಧಾನವಾಗಿ ವಿವರಿಸಿದೆ, ಅಳುಕುತ್ತಲೇ ನುಡಿದೆ, ಇದು ನಿನಗೇ ಹಿತವೇನು, ನನ್ನೊಂದಿಗೆ ನಿನಗೆ ಬದುಕಲು ಇಷ್ಟವೇ ಎಂದೆ. ಮರುಮಾತಾಡದೇ ಅವಳು ಒಪ್ಪಿದಳು. ದುಡಿಯುವುದಕ್ಕೆ ಯಾವ ಕೆಲಸವಾದರೇನು, ಶ್ರದ್ಧೆ ಮತ್ತು ಪ್ರೀತಿ ಮುಖ್ಯ. ಶ್ರದ್ಧೆಯು ಇದ್ದರೆ ಬಾಳು ಸ್ವರ್ಗ, ಅಳುಕು ಮನವೇಕೆ ಎನ್ನುತ್ತ ನನ್ನ  ಬಿಗಿದಪ್ಪಿದಳು, ಹೌದು, ಉತ್ತಮ ಕೆಲಸವೆಂದು ಕೂರುವ ಬದಲು, ಎಲ್ಲವೂ ಉತ್ತಮವೆಂದು ಬದುಕುವುದು ಜೀವನ...

      ರಾಮಚಂದ್ರ ಸಾಗರ್