Sunday, 4 December 2016

ಆ ನಗುವು ನನ್ನದಾಗಲಿಲ್ಲ..

    ಅಂದು ದಿಗಂತದ ತುದಿಯಲ್ಲಿ ರವಿಯ ಕದಿರು ಕತ್ತಲೆಯನ್ನು ಸೀಳಿ ಮುನ್ನುಗ್ಗುತ್ತಿತ್ತು, ಬೆಳಕಿನ ಕಿರಣಗಳು ಜಗದ ಸೊಬಗನ್ನು ತೋರಿಸುತ್ತಾ ಸಾಗುತ್ತಿದ್ದವು. ಚುಮು ಚುಮು ಬೆಳಕಿನಲ್ಲಿ ಇಬ್ಬನಿಯ ಹನಿಗಳು ಕುಸುಮಿತ ಎಸಳುಗಳ ಮೇಲೆ ಕೂತು ನಗುತ್ತಿದ್ದವು. ಚಿಗುರೆಲೆಯು ಹಿತವಾಗಿ ಮೆಲುಗಾಳಿಗೆ ಮೈಯೊಡ್ಡಿ ಬೀಸುತ್ತಿತ್ತು, ಕಪ್ಪು ಕರಗಿ ಹಸಿರು ಸಿರಿಯ ಸೊಬಗು ಅರಳುತ್ತಿತ್ತು, ನಾನು ಆಗ ಬಹು ಬೇಗನೇ ಬಂದು ಹಸಿರು ಸಿರಿಯ ದಿಣ್ಣೆಗಳ ಮೇಲಿನ ಗದ್ದೆಯಲ್ಲಿ ಬಂದು ವಲ್ಲರಿಯು ಆಗಮಿಸುವ ಘಳಿಗೆಗಾಗಿ ಕಾತರಿಸುತ್ತಾ ಅವಳದೇ ಧ್ಯಾನದಲ್ಲಿ ಕಾರ್ಯೋನ್ಮುಖನಾಗಿರುತ್ತಿದ್ದೆ. ಬಾನಲ್ಲಿ ಬೆಳ್ಳಕ್ಕಿಗಳ ಸಾಲು ಹಾರಿ ಬಂದು ಗದ್ದೆಯ ಬದದ ಮೇಲೆ ಕೂತು ಬೆಳ್ಳಿ ಗೆರೆ ಎಳೆದಂತೆ ಕಾಣುತ್ತಿದ್ದವು, ಆಗ ತಾನೇ ಗೂಡಿನಿಂದ ಹೊರಬಂದ ಪಕ್ಷಿಗಳು ಇನನ ಕದಿರಿಗೆ ಸ್ವಗತ ಹೇಳಿದಂತೆ ಗುನುಗುತ್ತಿದ್ದವು. ಜಗವೆಲ್ಲಾ ಸಂತಸದ ಸಂಭ್ರಮದಲ್ಲಿರಲು ನನ್ನ ಮನಸ್ಸು ವಲ್ಲರಿಯ ಕಾತರತೆಯಲ್ಲಿ ಮುಳುಗಿತ್ತು.  ಸ್ವಲ್ಪ ನಿಲ್ಲಿ ನಂದೂ ಚೂರು ಪರಿಚಯ ಮಾಡಿಸುವೆ, ನನ್ಹೆಸರು ರವಿ..ಪೇಟೆಯಲ್ಲಿ ಸ್ವಲ್ಪ ಓದಿದ್ದೆ. ಎಲ್ಲೂ ಉತ್ತಮ ಅನ್ನೋ ಕೆಲಸ ಅಂತಾ ಏನೂ ಸಿಗಲಿಲ್ಲ. ಹಳ್ಳಿಗೇ ಬಂದು ನಮಗಿದ್ದ ಗದ್ದೆಯಲ್ಲೇ ಸ್ವಾಭಿಮಾನದಿಂದ ದುಡಿಯಲು ಶುರುಮಾಡಿದೆ.  ನಾನು ಅಪ್ಪಟ ಪರಿಸರ ಪ್ರೇಮಿಯೂ ಹೌದು. ಈ ನಡುವೆ ಹೃದಯಕ್ಕೆ ಒಬ್ಬಳು ಪ್ರೇಯಸಿಯೂ ಲಗ್ಗೆಯಿಟ್ಟಿದ್ದಾಳೆ. ತುಸುನಗುವಿನಲ್ಲಿ ನನ್ನ ಹೃದಯಕೋಟೆಯನ್ನು ಚೂರುಮಾಡಿ ನೇರವಾಗಿ ನನ್ನೆದೆಯಾ ಒಳಗೇ ಇಳಿದು ಕೂತಿದ್ದಾಳೆ. ಈಗ ಏನಿದ್ರೂ ಅವಳದೇ ನೆನಪುಗಳ ಹಾವಳಿ, ಅವಳದೇ ನನೆಪುಗಳ ಸರಮಾಲೆ. ಆದರೆ ಇದು ಏಕಮುಖ ಪ್ರೀತಿ. ಅವಳ ಮನದಲ್ಲಿ ಏನಿದೆಯೋ ಗೊತ್ತಿಲ್ಲ.. ನನ್ನ ನೋಡಿದಾಗ ತುಸು ನಗುತ್ತಾ ನಡೆಯುತ್ತಾಳಷ್ಟೇ. ಅದುವೇ ನನಗೆ ಒಲವ ಶರಧಿಯಾಗಿದೆ. ಇನ್ನೂ ಈಗ ಅವಳು ಬರುವ ಸಮಯವಾಗಿದೆ. ಹಸಿರು ವನದ ದಾರಿಯಲ್ಲಿನ್ನು ಕ್ರಮಿಸಿ, ಮಲ್ಲಿಗೆ ಹೂಬನವ ಬಳಸಿ, ಕೈಗೆಟುಕಿದಷ್ಟು ಮಲ್ಲಿಗೆಯ ಮುಡಿದು ಬರುವ ಅವಳ ನಗು ಮೊಗದ ರೂಪಕ್ಕಾಗಿ ನಾ ಬೇಡುತ್ತಾ ನನ್ನ ಪಾಡಿಗೆ ನಾನು ನಮ್ಮ ಗದ್ದೆಯಲ್ಲಿ ಕೆಲಸಮಾಡುತ್ತಿರುವಾಗ,  ಆಗ ದುಂಡು ಮಲ್ಲಿಗೆಯ ಮೊಗದವಳು ತಲೆ ತುಂಬಾ ಮಲ್ಲಿಗೆಯ ಹೊದ್ದು ನಗುತ್ತಾ ಚೆಲುವ ಬಳ್ಳಿಯೊಂದು ನಗುತಾ ನಡೆದು ಬಂದಂತೆ ಅವಳು ಬರುತ್ತಿದ್ದಳು. ಅವಳಾಗಮನಕ್ಕೆ ಹಪಹಪಿಸುತ್ತಿದ್ದ,
ಕಾತರಿಸುತ್ತಿದ್ದ ಮನಕ್ಕೆ ತುಸು ನಗುವಿನಲ್ಲಿ ಸಂತೈಸುತ್ತಿದ್ದಳು. ಎಲ್ಲವೂ ಅವಳ ನಗುಮೊಗದ ಮಾಯೇ. ಕ್ಷಣದಲ್ಲೇ ಕಾತರತೆಯ ನೋವು ಕರಗಿಸಿ ಆನಂದದ ಮೇನೆಯಲ್ಲಿ ನಲಿಸಿಬಿಡುತ್ತಿದ್ದಳು. ಅವಳ ಪ್ರೀತಿಯ ಬಾಣ ಎದೆಗೆ ನೂಕಿ ಬಿಡುತ್ತಿದ್ದಳು. ಜೊತೆಗೆ ಪಕ್ಕದ ಅವಳ ಗದ್ದೆಯಲ್ಲಿ ಅವಳ ಪಾಡಿಗೆ ಅವಳು ಕೆಲಸದಲ್ಲಿ ಮಗ್ನವಾಗಿ ಬಿಡುತ್ತಿದ್ದಳು. ನನಗೆ ಅವಳು ನಕ್ಕಾಗಲೆಲ್ಲಾ ಅವಳು ನನ್ನನ್ನೂ ಪ್ರೀತಿಸುತ್ತಿರಬಹುದೇನೋ ಎಂಬ ಕುತೂಹಲ, ಆಸೆ ಹೆಚ್ಚುತಿತ್ತು, ಅದನ್ನೂ ಕೇಳಲೇ ಬೇಕೆಂಬ ಆಸೆಯು ಕ್ಷಣದಿಂದ ಕ್ಷಣಕ್ಕೆ ಅಮಿತವಾಗುತಿತ್ತು, ದಿನವೂ ಅವಳು ಬಳುವಳಿಯಾಗಿ ನೀಡಿದ ನಗುವಿನ ಎಸಳಿನಿಂದ ನಾ ನಲಿಯುತ್ತಿದ್ದೆ, ಮತ್ತೆ ಮತ್ತೆ ಅವಳು ನಕ್ಕು ಹೋದ ಘಳಿಗೆಯನ್ನೇ ಮೆಲುಕು ಹಾಕುತ್ತಿದ್ದೆ. ಪ್ರೀತಿಯ ಸಜೆಯಲ್ಲಿ ಬಂಧಿಯಾಗಿ ಬಿಡುತ್ತಿದ್ದೆ. ಏನೇ ಆಗಲಿ ಬಾಳಿಗೆ ಸಿಕ್ಕರೆ ಇಂತ ಹುಡುಗಿಯೇ ಬೇಕು, ಇಲ್ಲವಾದರೇ ಬಾಳು ನಶ್ವರವೆಂದು ಅವಳಿಂದಲೇ ಈ  ಮನ ತೀರ್ಮಾನ ಹೊಂದಿಬಿಟ್ಟಿತ್ತು. ಇದುವೇ ನಿತ್ಯ ಜೀವನವಾಗಿಬಿಟ್ಟಿತು. ಇದೆಲ್ಲಾ ಸರಿ ಅದುವು ಸಾಧ್ಯವೇ ಎಂಬ ಚಿಂತೆಯು ಹೆಚ್ಚಾಗತೊಡಗಿತು.
    ಏನೇ ಆಗಲಿ ವಲ್ಲರಿಯು ನನಗೇ ಒಲಿಯಲೆಂದು ಉದಯಿಸುವ ರವಿಗೆ ಬೇಡುತ್ತಾ ದಿನ ಆರಂಭಿಸುತ್ತಿದ್ದೆ. ಪ್ರೀತಿಯ ಹಂದರದಲ್ಲಿ ಅವಳು ನಾನು ನಗುತ್ತಾ ನಲಿಯಬೇಕೆಂಬ ಆಸೆ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದ್ದಳು. ಏನೇ ಆದರು ಅವಳ ಬಳಿ ದಿನಕ್ಕೆರಡು ಬಾರಿ ಮಾತಾಡುತ್ತಿದ್ದೆ. ನಮ್ಮ ಎರಡೂ ಮನೆಯವರು ಮದ್ಯಾಹ್ನ ಊಟಕ್ಕೆ ಒಟ್ಟಿಗೇ ಕೂರುತ್ತಿದ್ದೆವು. ಎರಡೂ ಕುಟುಂಬದ ನಡುವೆ ಉತ್ತಮ ಸಾಮರಸ್ಯವಿತ್ತು. ಊಟದ ಸಮಯದಲ್ಲಿ ಹಾರುವ ಅವಳ ಮುಂಗುರುಳು ನನಗೇ ಕರೆದಂತೆ ಕುಣಿಯುತ್ತಿದ್ದವು, ಅವಳು ಮಾತಾಡದಿದ್ದರೇನಂತೆ, ಅವಳ ಮುಂಗುರುಳ ಕುಣಿತವೇ ನನ್ನೊಂದಿಗೆ ಸಂಭಾಷಣೆ ನಡೆಸಿದಂತೆ ಕನಸು ಕಾಣುತ್ತಿದ್ದೆ, ಸಂತಪಡುತ್ತಿದ್ದೆ. ದಿನವೆಲ್ಲಾ ಅವಳದೇ ರಂಗಲ್ಲಿ ಕಳೆಯುತ್ತಿದ್ದೆ, ಮುಸ್ಸಂಜೆಯ ರಂಗಲ್ಲಿ ಮುಳುಗುವ ರವಿಯಲ್ಲಿ ಮತ್ತೆ ಬೇಡಿಕೊಳ್ಳುತ್ತಿದ್ದೆ, ರವಿಯೇ ವಲ್ಲರಿಯು ನನಗೆ ಒಲಿಯಲಿ, ನಾಳೆ ನೀ ಹೊದ್ದು ತರುವ ಬೆಳಗಿನಲ್ಲಿಯಾದರೂ ಅವಳ ಮನಸ್ಸು ನನಗೆ ಒಲಿಯಲಿ ಅವಳ ಮನದಲ್ಲಿ ಏನಿದೆಯೋ..? ನಗುವ ಅವಳ ಮೊಗದ ಅರ್ಥವೇನೋ ನಾನರಿಯೇ. ನಾಳೆಯಾದರೂ ಅವಳ ಒಲುಮೆ ನನಗೆ ಒಲಿಯುವಂತೆ ಮಾಡು ಎಂದು ವಿನಮ್ರನಾಗಿ ಪ್ರಾರ್ಥಿಸಿ ಮನೆಯೆಡೆ ಸಾಗುತ್ತಿದ್ದೆ. ಈ ದಿನ ಮಾತ್ರ ಮನದಲ್ಲಿ ಗಟ್ಟಿ ನಿಧಾರಕ್ಕೆ ಬಂದಿರುವೆ, ಏನೇ ಆಗಲಿ ನಾಳೆ ಮಾತ್ರ ಅವಳಿಗೆ ಎಲ್ಲವನ್ನು ಹೇಳಲೇಬೇಕು, ಪ್ರೀತಿಯ ವಿಷಯ ಹಾಗೇಯೇ ಬಿಟ್ಟರೆ ಇನ್ನು ನನ್ನಿಂದ ಸಹಿಸಲು ಅಸಾಧ್ಯವೆಂಬ ನಿರ್ಧಾರಕ್ಕೆ ಬಂದುಬಿಟ್ಟೆ. 
    ಅದೇ ಧ್ಯಾನದಲ್ಲಿ ಇರುಳಿಡೀ ನಿದ್ರೆ ಬಾರದೇ ಒದ್ದಾಡುತ್ತಿದ್ದೆ, ಮೆತ್ತನೇ ಕಿಟಕಿಯಾಚೆ ನೋಡಿದೆ, ಕತ್ತಲು ಕಡಿಮೆಮಾಡಿ ಚಂದ್ರಮ ನಗುತ್ತಿದ್ದ. ಒಮ್ಮೆ ಮೆಲ್ಲನೆ ಎದ್ದು ಸುತ್ತಾಡಿ ಬರೋಣವೆಂದು ನಡೆದೆ. ದನದ ಹಟ್ಟಿಯನ್ನು ದಾಟಿ ಮನೆ ಮುಂದಿನ ಹೂಗಿಡಗಳನ್ನು ದಾಟಿ ನಡೆಯುತ್ತಿದ್ದೆ, ಆಗ ಈ ಗಿಡದಿಂದಲೇ ಅವಳಿಗೊಂದು ಹೂ ತೆಗೆದುಕೊಂಡು ಹೋಗಬೇಕೆಂದು ನಿರ್ದರಿಸಿದೆ, ಒಂದು ವೇಳೆ ಅವಳು ಒಪ್ಪಿದರೆ ಕೊಡಬೇಕು.. ಒಂದು ವೇಳೆ ಒಪ್ಪದಿದ್ದರೆ ನನ್ನ ಬದುಕು ಸಾಧ್ಯವೇ..? ಅವಳಿಲ್ಲದೇ ನಾನು ಬಾಳ ನೌಕೆಯಲ್ಲಿ ಹೇಗೆ ಸಾಗಲಿ. ಒಂಟಿ ನಾವಿಕನೆದೆಯ ಜ್ವಾಲೆಯು ತಣಿವುದಾದರು ಹೇಗೆ.. ಎಲ್ಲಾ ಪ್ರಶ್ನೆಗಳ ಮಾಲೆ. ಇನ್ನೂ ಈ ದಿನ ನಿದ್ರೆ ಬರಲು ಸಾಧ್ಯವೇ.. ಏನೇ ಆಗಲಿ ಎಲ್ಲವೂ ನಾಳೆಯ ವರೆಗೆ ಕಾಯಲೇಬೇಕು.. ಮೋಡಗಳ ನಡುವೆ ಓಡುವ ಚಂದಿರನ ನೋಡಿದೆ, ಮನದಲ್ಲಿ ಅಷ್ಟೇ ವೇಗವಾಗಿ ಕನಸುಗಳು ಓಡುತ್ತಿವೆ. ನಾಳೆಗಾಗಿ ಕಾತರಿಸುತಾ ನಿದ್ರೆ ಕಸಿದು ಕುಳಿತಿವೆ, ನಾಳೆ ಅವಳು ಒಲಿದರೇ ನಗುವ ನೈದಿಲೆಯ ಮೊಗದಲ್ಲಿ ಪಳಿಸುವ ಬೆಳಕು ಒಮ್ಮೆಗೇ ಸಾವಿರಪಟ್ಟು ನನಗೇ ಬಂದಪ್ಪಿದಂತೆ, ತಂಪಿರುಳಲ್ಲೂ ಮನವಿಂದು ಅವಿರತ ಸುಡುತ್ತಿದ್ದೆ. ಸ್ವಲ್ಪ ಹೆದರಿಕೆಯೂ ಆವರಿಸಿ ಒಂದೆರಡು ಬೆವರು ಹನಿಗಳು ಉದುರಿದಂತೆ ಭಾಸ. ಒಲವದೊರೆ ಚಂದಿರದೂ ನಿಲ್ಲದೇ ಓಟ ಬಾನಲ್ಲಿ..ಭುವಿಯಲ್ಲಿ ನನ್ನ ಮನದಲ್ಲಿ ಸಾವಿರ ಚಿಂತೆಗಳ ಓಟ..ಕಾಣೆಯಾದ ಮನಸ್ಸು ಅವಳಿಂದ ನಾ ಪಡೆಯಬೇಕು..ಮುಚ್ಚುಮರೆಯಿಲ್ಲದೇ ಅವಳಲ್ಲಿ ನಾ ಎಲ್ಲವನ್ನೂ ಹೇಳಬೇಕು. ಕನಸು ಕಾಣುವುದನ್ನು ಇನ್ನು ಸಾಕುಮಾಡಬೇಕು. ಹೇಳದೇ ಕೇಳದೇ ಮನದಲ್ಲಿ ಇದೇ ಪದಗಳ ಓಡಾಟ. ರಾತ್ರಿಯಿಡೀ ನಿದ್ರೆಯಿಲ್ಲ. ಇಷ್ಟು ದಿನವಿದ್ದ ನಿದ್ರೆ ನಾಳೆ ಅವಳಿಗೆ ಎಲ್ಲವನ್ನು ಹೇಳಬೇಕು, ನನ್ನುಸಿರಿನಲ್ಲಿ ಅವಳ ಉಸಿರು ಬೆರೆಯಬೇಕೆಂಬ ಛಲದ ಫಲವು, ಪ್ರೀತಿಯ ನೋವಿನ ಸ್ಪರ್ಷವು, ಅವಿರತ ಅರೆನಿಮಿಷ ಬಿಡುವು ನೀಡದೇ ಕಾಡುತ್ತಿತ್ತು, ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದೆ. ಬೆಳುದಿಂಗಳ ಬೆಳಕಿನಲ್ಲಿ ತುಸು ದೂರ ನಡೆದು ಮನೆಯೆದರು ಮುಂದಿನ ಬದಿಯಲ್ಲಿ ಸಾಗಿ ಹರಿವ ತೊರೆಯ ಬಳಿಸಾಗಿದೆ. ನೀರಿನ ಹನಿಗಳನ್ನು ಮೊಗೆದು ಮುಖಕ್ಕೆ ಎರಚಿದೆ, ಕನಸುಗಳೇ ಸ್ವಲ್ಪ ಸಮಾಧಾನಿಸಿ, ಮನವೇ ತುಸು ಯೋಚಿಸುವುದು ನಿಲ್ಲಿಸು ಎಂದೇ.. ದಣಿವಾದ ಮೊಗದಲ್ಲಿ ಹನಿಗಳು ಸ್ವಲ್ಪ ಉಲ್ಲಾಸ ತಂದಂತೆ ಏನೋ ಉಲ್ಲಾಸ. ಯಾವುದೇ ತಯಾರಿಯಿಲ್ಲದೇ ನಾನು ನಾಳೆ ಹೇಗೆ ಅವಳಿಗೆ ಎಲ್ಲವನ್ನೂ ಹೇಳಲಿ.. ಪ್ರೀತಿಯ ಹೊನಲಿನಲ್ಲಿ ಅವಳು ಬದುಕಿಗೆ ನಾವಿಕಳಾಗುವಳೆಂಬ ಜಂಬವಂತೂ ಇದೆ. ಇರಲಿ ಏನೇ ಆಗಲಿ, ಬೇಗನೇ ನಾಳೆಯಾಗಲಿ ಎಂಬ ನಿರ್ಧಾರದಲ್ಲಿ ನಾ ಚಲಿಸತೊಡಗಿದೆ. ಎಂದೆಂದಿಗೂ ನನ್ನಲ್ಲಿ ನಲಿವ ಮಂದಹಾಸ ಅವಳು.. ಎನ್ನುತ್ತಾ ನಾ ನಡೆಯುತ್ತಿದ್ದೆ. ಬಾಳನಾವೆಗೆ ಒಬ್ಬಳು ನಾವಿಕಳು ಬಂದೇ ಬರುತ್ತಾಳೆ, ಬಾಳೆ ನಾವೆಗೆ ಹರಿಗೋಲಾಗುತ್ತಾಳೆ ಎನ್ನು ಸಂಭ್ರಮ ಒಂದೆಡೆಯಾದರೆ, ಅವಳ ನಗುವಿನ ಮರ್ಮವೇನೋ ಎಂಬ ಭಯ ಇನ್ನೊಂದು ಕಡೆ.  ಆಗ ಯಾರೋ ಕತ್ತಲೆಯಲ್ಲಿ ಆ ಬದಿಯಿಂದ ನಡೆದು ಬಂದಂತೆ ಭಾಸವಾಯಿತು. ಮೆತ್ತನೆ ಮರದ ಮರೆಯಲ್ಲಿ ನಿತ್ತು ನೋಡಿದೆ, ಅದು ಅವಳೇ ವಲ್ಲರಿ.. ಈ ರಾತ್ರಿಯಲ್ಲಿ ಅವಳೆಲ್ಲಿಗೆ ಹೊರಟಿದ್ದಾಳೆಂದು ನಾ ವಿಸ್ಮಿತ ಮತ್ತು ಭಯದಿಂದ ಅಡಗಿನೋಡಿದೆ, ಅಷ್ಟರಲ್ಲೇ ಯಾರಿಗೂ ಅವಳು ಕಾಯುತ್ತಿರುವಂತೆ ಅನಿಸಿತು, ಅಷ್ಟರಲ್ಲೇ ಒಬ್ಬ ಹುಡುಗ ಬಂದ.. ಅವಳು ಏಕೆ ತಡವಾಯಿತು, ಬೇಗನೇ ಹೋಗಬೇಕು, ಪಕ್ಕದಲ್ಲೇ ರವಿಯ ಮನೆಯಿದೆ ಎಂದು ಪಿಸುಗುಟ್ಟುತ್ತಾ ನಡೆದಳು.. ಆಗ ನನಗೆ ಆಗಸದ ಚಂದಿರ ನನಗೆ ಸುಡುವ ಜ್ವಾಲೆಯಂತೆ ಕಂಡ, ನಗುವ ನೈದಿಲೆಯು ನನ್ನ ಕಣ್ಣನ್ನು ಚುಚ್ಚುವ ಸೂಜಿಯಾಯಿತು. ಏನೇ ಆಗಲಿ ನನಗೆ ಒಲಿಯದ್ದು ಬೇರೆಯರಿಗೆ ಒಲಿಯಿತು...ಒಲವದೊರೆ ಚಂದಿರ ನೀ ಮಾಡಿದೆ ಮೋಸ..ನಾಳೆ ಬರುವ ರವಿಯೇ ..ನೀ ನಾಳೆ ಬಂದು ಹರಸುವುದು ಬೇಕಿಲ್ಲವೆಂದು ನೋವಲ್ಲೇ ನಗುತ್ತಾ ನಾ ಉದುರುವ ಹನಿಗಳೊಂದಿಗೆ ಮೆತ್ತಗೆ ಮೌನದ ಮನದಲ್ಲೇ ಮನೆಯೆಡೆಗೆ ಸಾಗಿದೆ. ಮನದಲ್ಲಿ ಅರಳಿದ ಮೊದಲು ಒಲವು ಹೆಚ್ಚು ದಿವಸಗಳು ಉಳಿಯಲಿಲ್ಲ, ಬಿಳುಪು ಬೆಳುದಿಂಗಳು ಕಪ್ಪಾಗಿ ಕಣ್ಣನ್ನು ಚುಚ್ಚಿದಂತೆ ಕೆಣಕಿತು, ರೋಧನದ ಮನದಲ್ಲಿ ಒಲವಿಗೆಲ್ಲಿ ಜಾಗ..!
    ರಾತ್ರಿಯಿಡೀ ನಿದ್ರೆಯಿರದೇ ಹೊರಳಾಡಿ, ಕಹಿ ನೆನಪುಗಳ ಸುಳಿಯಲ್ಲಿ ಸಿಲುಕಿ, ಮುಂಜಾವಿನ ರವಿ ಬರುವುದಕ್ಕೂ ಮೊದಲೇ ಗದ್ದೆಯೆಡೆ ಸಾಗಿದೆ, ಮುಂಜಾವಿನ ಬೆಳಗಿಗೆ ಕಾಯುತ್ತಿದ್ದ ನಾನು ಅಂದಿನಿಂದ ಕೊಂಚ ಕುಗ್ಗತೊಡಗಿದೆ, ದಿನವಿಡೀ ಅವಳ ಗುಂಗಲ್ಲಿ ತೇಲುತ್ತಿದ್ದ ನಾನು ಇಂದು ಅವಳನ್ನು ಮರೆಯುವ ನೋವಲ್ಲಿ ಜಗವನ್ನೆಲ್ಲಾ ಶಪಿಸುತ್ತಾ ಕೊರಗತೊಡಗಿದೆ. ಇದೇ ರೋಧನೆಯಲ್ಲಿ ಆರೋಗ್ಯವೂ ಕೊಂಚ ಹದಗೆಡತೊಡಗಿತು. ಇಡೀ ಊರೆಲ್ಲಾ ವಲ್ಲರಿ ಊರುಬಿಟ್ಟು ಹೋಗಿದ್ದಾಳೆಂಬ ಗುಲ್ಲು ಹರಡಿತ್ತು. ಗದ್ದೆಯಲ್ಲಿ ಕೆಲಸಮಾಡುವವರು ಕೂಡ ಅದನ್ನೇ ಮಾತನಾಡತೊಡಗಿದರು, ಆಗ ನನಗೆ ಹಸಿ ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ನೋವು ಕಾಡುತ್ತಿತ್ತು, ನೋವಿಂದ ನೋವಿಗೆ ಬೀಳುವುದಾಂಯಿತು, ಅವಳು ನಗುವನ್ನು ನಾನು ತಪ್ಪಾಗಿ ಅರ್ಥೈಸಿ ಏನೇನೋ ಕನಸು ಕಂಡು ಇದು ನನಗೆ ನಾನೇ ವಿಧಿಸಿಕೊಂಡ ಶಿಕ್ಷೆಯೆಂಬುದು ನನಗೆ ಅರಿವುಮಾಡಿಕೊಳ್ಳುವುದೇ ನಿತ್ಯ, ಕ್ಷಣ ಕ್ಷಣದ ಕಾಯಕವಾಯಿತು, ನಗುವು ಎಲ್ಲರಿಗಾಗಿ ಪ್ರೀತಿ ಒಬ್ಬರಿಗಾಗಿ ಎಂಬುದನ್ನು ಅರಿಯದೇ ಇದು ನನಗೆ ನಾನೇ ನೀಡಿದ ಶಿಕ್ಷೆ..!
    ಸ್ವಲ್ಪ ದಿನಗಳ ನಂತರ ಪತ್ರಿಕೆ ಓದುತ್ತಾ ಕುಳಿತಿದ್ದೆ, ಆಗ ದಂಪತಿಯಿಂದ ಆತ್ಮಹತ್ಯೆ ಯತ್ನ ಎಂಬ ಸುದ್ದಿಯಿತ್ತು, ಅದೂ ವಲ್ಲರಿಯ ಸಂಸಾರದ ವಿಷಯವಾಗಿತ್ತು. ಏನೇ ಆಗಲಿ ತಿಳಿದುಕೊಳ್ಳೋಣವೆಂದು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹೋಗಿ ವಿಚಾರ ತಿಳಿದೆ. ಅವರು ಸಂಸಾರದ ಬಿರುಕಿನಿಂದ ಆತ್ಮಹತ್ಯೆಗೆ ಯತ್ನಿಸಿ ವಲ್ಲರಿಯ ಗಂಡ ತೀರಿಹೋದನೆಂದು ವಲ್ಲರಿ ಮತ್ತು ಮಗು ಪ್ರಾಣಾಪಾಯದಿಂದ ಉಳಿದರೆಂದು ತಿಳಿಯಿತು. ವಲ್ಲರಿಯ ಮನೆಯವರಿಗೆ ವಿಷಯ ತಿಳಿಯಿತು, ಅವರೂ ತಮಗಾದ ಅವಮಾನ ನೋವಿನಿಂದ ಹೊರಬರದೇ ಬಳಲಿದ್ದವರು, ಮತ್ತೇಕೆ ಅವಳ ಗೋಜು ಎಂದು ಸುಮ್ಮನಾದರು. ಅದರೂ ಕೆಲದಿನಗಳ ನಂತರ ಎಷ್ಟೇ ಆದರು ಮಗಳ ಬವಣೆ ನೋಡಲಾರದೇ ಹೋಗಿ ನೋಡಿ ಕರೆತಂದರು. ಈಗ ಅವಳು ನಗುತಿರಲಿ ಎಂದು ನನ್ನ ಮನ ಬೇಡುತ್ತಿದ್ದೆ, ಆದರೆ ಅವಳ ಮೊಗದಲ್ಲಿ ಮೊದಲಿನಂತೆ ನಗುವಿಲ್ಲ, ದುಂಡು ಮಲ್ಲಿಗೆಯು ಮುಡಿಯಲ್ಲಿ ನಗುತ್ತಿಲ್ಲ, ಅವಳು ಪೇಟೆಯಲ್ಲೇ ಕೆಲಸಕ್ಕೆ ಸೇರಿ, ಮನೆ ಮಗುವಿನ ಪಾಲನೆಗೆ ದುಡಿಮೆಮಾಡತೊಡಗಿದಳು..ಅವಳು ಆಗಾಗ ಊರಿಗೆ ಬಂದಾಗ ನಾ ಬೇಡುವುದೊಂದೇ..

"ಗೆಳತೀ..ನೀ ನಗುವುದಾದರೆ ನಕ್ಕುಬಿಡು
ನೋವು ಶರಧಿಯು ಕರಗಿಬಿಡಲಿ
ಸಾವಿರ ಬವಣೆಯು ಬೆವರಿಹೋಗಲಿ
ಹೊಸತರ ಆಸೆಯು ನಿನ್ನ ಸೇರಲಿ.."