ವೆಂಕಮ್ಮಜ್ಜಿ ಒಂದೇ ಸಮನೆ ಶರಧೀಪುರ ನಗರಸಭೆಗೆ ತುಸು ಧಾವಂತದಲ್ಲೇ ಉಸಿರೆಳೆದುಕೊಳ್ಳುತ್ತಾ ಬಂದಳು. ಆಕೆಗೆ ಆಟೋದಲ್ಲಿ ಓಡಾಡುವಷ್ಟು ಹಣವಂತಳೂ ಅಲ್ಲ. ನಡೆದೇ ಸಾಗಬೇಕು, ದೂರದ ತನ್ನ ಮನೆಯಿಂದ ನಗರಸಭೆಗೆ ಎರಡು ಕಿ.ಮೀ ಆಗುತ್ತದೆ. ಆದರೆ ಪಾಪ ಆಕೆಗೆ ವಿಧಿಯಿಲ್ಲ, ತನ್ನ ಮನೆ, ನೀರಿನ ಕಂದಾಯ ಕಟ್ಟಬೇಕು, ಫಾರಂ ನಂಬರ್ 3 ಪಡೆಯಬೇಕು, ಹಾಗಾಗಿ ಹಲವರು ತಿಂಗಳಿಂದ ಬರುತ್ತಳೇ ಇದ್ದಾಳೆ.
ನಗರಸಭೆಗೆ ಬಂದವಳೇ ಕಚೇರಿಯಲ್ಲಿ ಕಂದಾಯ ಕಟ್ಟಲಿಕ್ಕೆ ಅತ್ತಿತ್ತ ಹೆಣಗಾಡಿದಳು. ಆದರೆ ಆಕೆಯ ಕಂದಾಯವನ್ನು ಕಟ್ಟಿಸಿಕೊಳ್ಳುವುದಕ್ಕೆ ಯಾರೂ ಸಿದ್ದರಿಲ್ಲ. ಅಜ್ಜಿ ಇದೇ ರೀತಿ ನಗರಸಭೆಗೆ ಅಲೆಯುತ್ತಾ ಬರುವುದು ಹೊಸದಲ್ಲ. ಈಕೆಗಿರುವುದು ಹೊಟ್ಟೆಪಾಡಿಗೇ ಅಂತ ಅಡಿಕೆ ಸುಲಿಯುವ ಕೆಲಸ. ಈಕೆಯ ಮಕ್ಕಳು ಉದ್ಯೋಗವನ್ನು ಅರಸುತ್ತಾ ಬೆಂಗಳೂರು ಸೇರಿದ್ದಾರೆ. ಹಾಗಂತ ಅವರೇನು ಬಹಳ ದೊಡ್ಡ ಹುದ್ದೆಯಲಿಲ್ಲ. ಅಲ್ಲಿ ಯಾವುದೋ ಹೋಟೆಲ್ನಲ್ಲಿ ಕ್ಲೀನರ್ ಕೆಲಸಕ್ಕಿದ್ದಾರೆ. ಅವರಿಗೆ ಬಿಡುವಾಗೋದೋ ಕಡಿಮೆ. ಎಲ್ಲರಂತೆ ಭಾನುವಾರ ರಜೆ ಎಂದು ಬರುವಂತಿಲ್ಲ. ಆ ದಿನವೇ ಬೆಂಗಳೂರಿನ ಸ್ಟಾರ್ ಹೋಟೆಲ್ಗಳು ತುಂಬಿ ತುಳುಕೋದು. ಹಾಗಾಗಿ ಇತ್ತ ಶರಧೀಪುರದಲ್ಲಿ ವೆಂಕಮ್ಮಜ್ಜಿ ಒಬ್ಬಳೇ ಇದ್ದಾಳೆ. ಆಕೆಯೇ ಮನೆಗಾಗಿ ಎಲ್ಲದಕ್ಕೂ ಬಡಿದಾಡಬೇಕು.
ಹೀಗಾಗಿ ಅಜ್ಜಿಯೇ ಹಲವು ಬಾರಿ ಏನೇ ಸರ್ಕಾರಿ ಕೆಲಸವಿದ್ದರೂ ತಾನೇ ಓಡಾಡುತ್ತಾಳೆ, ಆದರೆ ಅಜ್ಜಿಗೆ ಅಡಿಕೆ ಸುಲಿಯದೇ ಹೊಟ್ಟೆಗೆ ಹಿಟ್ಟಿಲ್ಲ. ನಗರಸಭೆಗೆ ಹೋಗಬೇಕೆಂದರೆ ಆ ದಿನದ ದುಡಿಮೆಯನ್ನು ಬಿಟ್ಟು ಅಯ್ಯೋ ದೇವರೇ ಈ ದಿನದ ಅನ್ನ ಹೋಯಿತಲ್ಲಾ ಎಂದು ರೋದಿಸುತ್ತಾ ಹೋಗಬೇಕು. ಪಾಪ, ಈ ಅಜ್ಜಿ ಈ ರೀತಿ ಎಷ್ಟು ಬಾರಿ ನಗರಸಭೆಗೆ ಅಲೆದಾಡಿಲ್ಲ. ಕಂಡ ಕಂಡ ಮಹಾನ್ ಅಧಿಕಾರಿಗಳ ಬೇಡಿಲ್ಲ! ಇನ್ನೂ ಹೆಚ್ಚೆಂದರೆ ಕಾಲಿಗೆ ಒಂದು ಬಿದ್ದಿಲ್ಲ, ಈಗ ಉಳಿದುರುವುದು ಅದೊಂದೇ ಬಾಕಿ!
ಈಗ ಅಜ್ಜಿ ಮನಸ್ಸು ಮಾಡಿದ್ದಾಳೆ, ನಾನು ಎಷ್ಟೇ ಪ್ರಯತ್ನಿಸಿದರು ನನ್ನ ಮನೆ ಖಾತೆಗೆ ಕಂದಾಯ ಕಟ್ಟಲಿಕ್ಕೆ ಆಗುತ್ತಿಲ್ಲ. ಇದೇನು ಕರ್ಮವೋ, ಕಂದಾಯಕ್ಕೆ ಅಂತಾ ಕೂಡಿಟ್ಟ ಹಣದ ನೋಟುಗಳು ಒದ್ದೆಯಾಗಿ ಹಾಗೇ ಮುದುಡಿ ಬೆಂಡಾಗಿವೆ. ಅವುಗಳಿಗೂ ಪಾಪ ನಗರಸಭೆಯ ಖಜಾನೆಯನ್ನು ಸೇರುವ ಮನಸ್ಸಿಲ್ಲವೇ? ಇಲ್ಲವೋ ಅವುಗಳ ದೌಭಾಗ್ಯವೋ?
ಈಗ ಅಜ್ಜಿ ನಗರಸಭೆಯಲ್ಲಿ ತನ್ನ ಅಣತೀಕೊಪ್ಪ ಬೀದಿಯ ಬಿಲ್ ಕೆಲಕ್ಟರ್ನ ಹತ್ತಾರು ಬಾರಿ ಬೇಡಿ ಗೋಗರೆದು ಸುಸ್ತಾಗಿದೆ. ಆತನ ಹಿಂದೇ ಓಡೋಡಿ ಹೋಗಿ ಬೇಡಿದ್ದೂ ಇದೆ. ಆದರೂ ಏಕೋ ಆತ ಮಾತ್ರ ಕಂದಾಯ ಕಟ್ಟಿಸಿಕೊಳ್ಳುತ್ತಿಲ್ಲ. ಅದೇನು ಮರ್ಮವೋ! ಇನ್ನೂ ಯಾರೋ ಹೇಳಿದರು ಅಂತ ನಂತರ ಆತನ ಮೇಲಾಧಿಕಾರಿಗಳು ಕಂದಾಯ ನಿರೀಕ್ಷಕ, ಕಂದಾಯ ಅಧಿಕಾರಿಗಳನ್ನು ಭೇಟಿಯಾಗಿ ತನ್ನ ಮನೆಯ ಕಂದಾಯವನ್ನು ಕಟ್ಟಿಸಿಕೊಳ್ಳಿ ಎಂದು ಕೈಮುಗಿದು ಅಜ್ಜಿ ಬೇಡಿಕೊಳ್ಳುತ್ತಿದೆ, ಆದರೂ ಕಟ್ಟಿಸಿಕೊಳ್ಳುತ್ತಿಲ್ಲ. ಅವರೂ ಗದರಿ ನಮಗೀಗ ಬೇರೆ ಕೆಲಸವಿದೆ ಎಂದು ಹೊರ ಹಾಕಿದ್ದಾರೆ.
ಅಯ್ಯೋ, ಕಂದಾಯ ಕಟ್ಟಿಸಿಕೊಳ್ಳಬೇಕಾಗಿದ್ದು ಅವರ ಕೆಲಸ. ಅಜ್ಜಿ ನೀನೇಕೆ ಸಾವಿರ ಬಾರಿ ಕಟ್ಟಿಸಿಕೊಳ್ಳಿ ಎಂದು ಈ ನಗರಸಭೆ ಅಧಿಕಾರಿಗಳ ಕಾಲಿಗೆ ಎರಗುವೆ, ಏನಿದು ಅಜ್ಜಿ ನಿನ್ನ ವ್ಯಥೆ ಎಂದು ಯಾರೋ ಕೇಳಿದರು. ಅಜ್ಜಿ ಕಾರಣ ನುಡಿಯುತ್ತಾ ಹೋದಳು. ಅಯ್ಯೋ, ಅದೇನೋ ಸರ್ಕಾರದಿಂದ ಹೊಸ ಮನೆ ಕಟ್ಟಿಕೊಡುತ್ತಾರಂತೆ. ಅದಕ್ಕೆ ಬ್ಯಾಂಕ್ಗೆ ಸಬ್ಸಿಡಿಗೆ ಸಾಲಕ್ಕೆ ಫಾರಂ ನಂಬರ್3 ಬೇಕಾಗಿದೆ. ಅದಕ್ಕೇ ಒದ್ದಾಡುತ್ತಿರುವುದು.
ಏನೋ ಹೊಸ ಮನೆ ಅಂತಾ ಯೋಜನೆ ಬಂದಿದೆ. ಆ ಯೋಜನೆಯ ಹೆಸರು ಸರಿಯಾಗಿ ಹೇಳಲು ಬರದಿದ್ದರೂ ಏನೋ ತನ್ನ ಗುಡಿಸಲು ಮನೆಯ ಬದಲು ಸುಭದ್ರವಾದ ಹೊಸ ಮನೆಯ ಕನಸು ಕಾಣುತ್ತಿದ್ದಾಳೆ. ಆದರೆ ಏನು ಮಾಡೋದು ಸರ್ಕಾರ ಕೊಟ್ಟರೂ ಈ ಕಚೇರಿಯಲ್ಲಿರುವ ಪೂಜಾರಿಗಳು ಸಹಕರಿಸಬೇಕಲ್ಲವೇ?
ಅಂತೂ ಯಾರೋ ಬುದ್ಧಿವಂತರು ನುಡಿದಂತೆ ಅಂತೂ ಈಗ ಅಜ್ಜಿ ನೇರವಾಗಿ ಕಮೀಷನರ್ ಅವರನ್ನು ಭೇಟಿಯಾಗಲು ಅವರ ಛೇಂಬರ್ ಮುಂಬಾಗಿಲಿನಲ್ಲಿ ನಿಂತಿದೆ. ಪಾಪ, ಒಂದೆಡೆ ಅಡಿಕೆ ಸುಲಿಯುವ ಕೆಲಸವನ್ನು ಬೇರೆ ಬಿಟ್ಟು ಬಂದಿದೆ. ಈ ದಿನದ ಕೂಲಿಯಿಲ್ಲ ಎನ್ನುವ ಹೊಟ್ಟೆ ಉರಿ. ಅಯ್ಯೋ ಈ ದಿನದ ಅನ್ನಕ್ಕೆ ಮಣ್ಣಾಕಿದರು ಎನ್ನುತ್ತಾ ಹಾಗೇ ಒದ್ದೆ ಕಣ್ಣಲ್ಲಿ ಕಾಯುತ್ತಾ ಕುಳಿತಿದೆ.
ಇನ್ನಾದರೂ ಈ ಸಂಸ್ಥೆಯ ಮುಖ್ಯಸ್ಥರಾದ ಕಮೀಷನರ್ ಬಳಿ ಹೋದರೆ ಎಲ್ಲವೂ ನನ್ನ ಸಮಸ್ಯೆ ಬಗೆಹರಿಯಲಿ ಎಂದು ಊರ ಗ್ರಾಮ ದೇವತೆ ಚಾಮುಂಡಿಯನ್ನು ಬೇಡುತ್ತಿದ್ದಾಳೆ. ಮನದಲ್ಲಿ ದೇವಿಯನ್ನು ಪ್ರಾರ್ಥಿಸುತ್ತಾ ಅಜ್ಜಿ ಕುಳಿತು ಒಂದೂವರೆ ಗಂಟೆಯಾದರೂ ಒಳಗಡೆ ಹೋಗಲು ಆಗುತ್ತಲೇ ಇಲ್ಲ.
ಮತ್ತೆ ಅಜ್ಜಿ ಬಾಗಿಲು ಬಳಿ ಹೋಗಿ ನಿಂತೊಡನೆ ಅಲ್ಲಿರುವ ಸಿಬ್ಬಂದಿ, ಏಯ್, ಅಜ್ಜಿ ನಿನಗೆ ಎಷ್ಟು ಬಾರಿ ಹೇಳಬೇಕು? ಅಲ್ಲಿ ಒಳಗಡೆ ದೊಡ್ಡವರು ಕುಳಿತು ಚರ್ಚೆಮಾಡುತ್ತಿದ್ದಾರೆ. ಊರಿನ ಸಾವಿರ ಸಮಸ್ಯೆಗಳನ್ನು ಅವರು ಪರಿಹರಿಸಬೇಕು, ನೀನು ಒಳಹೋದರೆ ಅದೆಲ್ಲಾ ಹಾಳಾಗುತ್ತದೆ. ಸುಮ್ಕೇ ಒಂದ್ಕಡೆ ಕೂತ್ಕೋ ಹೋಗಲ್ಲಿ, ಅವರು ಬಿಡುವಾದಾಗ ನಾನೇ ಕರೆಯುವೆ..
ಅಜ್ಜಿ ಮತ್ತೆ ಸಪ್ಪೆ ಮೊಗದಲ್ಲಿ ಒದ್ದೆಯಾದ ಕಣ್ಣಲ್ಲಿ ಒಂದೆಡೆ ದೂರದಲ್ಲಿ ನಿತ್ತು ಕಮೀಷನರ್ ಛೇಂಬರ್ ನತ್ತಲೇ ನೋಡುತ್ತಲೇ ಇದ್ದಾಳೆ. ಹಲವಾರು ಜನರು ಒಳಹೋಗುತ್ತಾರೆ, ಬರುತ್ತಾರೆ. ಆದರೆ ನನಗೆ ಮಾತ್ರ ಒಳಗಿದ್ದವರ ನೋಡಲು ಅವಕಾಶ ದೊರೆಯುತ್ತಿಲ್ಲ. ಛೇ, ದೇವರೇ ಅದೆಂತಹ ಕರ್ಮ ನನ್ನದು!
ತಾಯಿ ಚಾಮುಂಡಿ ಈ ದಿನವಾದ್ರೂ ನನ್ನ ಸಮಸ್ಯೆ ಬಗೆಹರಿಸು, ಒಳಗಡೆಯಿರುವ ಕಮೀಷನರ್ ಕಾಣಲು ನನಗೆ ಅವಕಾಶ ಲಭಿಸುವಂತೆ ಮಾಡು, ಎಂದು ಅಜ್ಜಿಯು ದೇವರಲ್ಲಿ ಬೇಡುತ್ತಾ ಹಾಗೆಯೇ ಗೋಡೆಗೆ ಒರಗಿದ್ದಾಳೆ. ಆದರೆ ಜೀವವೆಲ್ಲಾ ಕಮೀಷನರ್ ಛೇಂಬರ್ ಬಾಗಿಲೆಡೆಯೇ ಇದೆ.
ಈಗ ಅಜ್ಜಿ ಮತ್ತೆ ಕಮೀಷನರ್ ಛೇಂಬರ್ ಬಳಿ ಹೋದಳು, ಮತ್ತೆ ಅಲ್ಲೇ ಕಾವಲಿದ್ದ ಸಿಬ್ಬಂದಿಗೆ ಈಕೆಯನ್ನು ಗದರುವ ಕೆಲಸ ಹೀಗೆಯೇ ನಡೆಯುತ್ತಿತ್ತು. ಅಜ್ಜಿಯ ಒದ್ದಾಟವನ್ನು ಬಹಳ ಸಮಯದಿಂದ ಗಮನಿಸುತ್ತಿದ್ದ ನಗರಸಭೆಯ ಕೌನ್ಸಿಲರ್ ರವಿ ಕುಮಾರ್ ಎನ್ನುವವರು ಅಜ್ಜಿಯನ್ನು ವಿಚಾರಿಸಿದರು. ಅಜ್ಜಿ ಇದ್ದಿದ್ದು ಹೇಳಿತು. ಬೇಸರಗೊಂಡ ರವಿ ಕುಮಾರ್ ಒಳಗಡೆ ಕಮೀಷನರ್ ಬಳಿ ಕರೆದುಕೊಂಡು ಹೋದರು.
ಒಳಗಡೆ ಹೋದರೆ ಅಜ್ಜಿಗೆ ಆಶ್ಚರ್ಯ, ತನಗೆ ಬೀದಿಯಲ್ಲಿ ಹಲವು ವರ್ಷಗಳಿಂದ ತೊಂದರೆ ನೀಡುತ್ತಿದ್ದ ಹಾಗೂ ನಿನ್ನ ಮನೆಯನ್ನು ನನಗೆ ಖರೀದಿಗೆ ನೀಡು ಎಂದು ಪೀಡಿಸುತ್ತಿದ್ದ ರಮೇಶ್, ಮಂಜಪ್ಪ ಇಬ್ಬರೂ ಕುಳಿತಿದ್ದಾರೆ. ಅಯ್ಯೋ ಒಂದು ಗಂಟೆಯಿಂದ ಇವರಿಗೆ ಕಮೀಷನರ್ ಬಳಿ ಅಂತಹದ್ದೇನು ಕೆಲಸ? ಇವರೇನು ಮೀಟಿಂಗ್ ಮಾಡುತ್ತಿದ್ದಾರೆ, ಇವರೇನು ಊರಿನ ಒಳಿತಿಗೆ ಹೋರಾಡುತ್ತಾರೆ, ಗೋಮುಖ ವ್ಯಾಘ್ರಗಳು, ದರಿದ್ರಗಳು ಇಲ್ಲಿಯೂ ಇವೆ ಎನ್ನುತ್ತಾ ಮನದಲ್ಲಿ ಗೊಣಗುತ್ತಾ ಅಜ್ಜಿ ಕಮೀಷನರ್ ಎದುರು ತನ್ನ ನೋವನ್ನು ಹೇಳಿಕೊಳ್ಳುತ್ತಾ ಹೋದಳು.
ಸ್ವಾಮಿ, ನನಗೆ ಹೊಸ ಮನೆ ಯೋಜನೆಗೆ ಫಾರಂ ನಂಬರ್ 3 ಬೇಕಾಗಿದೆ, ಅದಕ್ಕಾಗಿ ತೆರಿಗೆ ಕಟ್ಟಿ ಪಡೆಯಲು ಹಲವು ತಿಂಗಳುಗಳಿಂದ ಓಡಾಡುತ್ತಲೇ ಇದ್ದೇನೆ, ಯಾರು ನನ್ನಿಂದ ಹಣವನ್ನು ಕಟ್ಟಿಸಿಕೊಳ್ಳುತ್ತಿಲ್ಲ, ನನ್ನ ಕೆಲಸವೂ ಆಗುತ್ತಿಲ್ಲ..
ಅಯ್ಯೋ ಅಜ್ಜಿ ತೆರಿಗೆ ನೀನೆ ಬ್ಯಾಂಕ್ಗೆ ನೇರವಾಗಿ ಕಟ್ಟಬೇಕು, ಅಲ್ಲಿ ಹೊರಗಡೆ ಚಲನ್ ಬರೆಸಿಕೊಂಡು ಹೋಗಿ ಕಟ್ಟು. ಇನ್ನು ನೀರಿನ ತೆರಿಗೆಯನ್ನು ಬಿಲ್ ಕಲೆಕ್ಟರ್ ಬಳಿ ಕಟ್ಟು..
ಆಯ್ತು ಸ್ವಾಮಿ, ಆದರೆ ಹೊರಗಡೆ ಚಲನ್ ಬರೆಸಲು ಹೋದರೆ ಅವರು ನಿನ್ನ ಖಾತೆಯೇ ಲೆಡ್ಜರ್ ಪುಸ್ಕಕದಲ್ಲಿ ಸಿಗುತ್ತಿಲ್ಲ ಎನ್ನುತ್ತಾರೆ. ಇನ್ನೂ ನೀರಿನ ಕಂದಾಯ ಕಟ್ಟಲು ಹೋದರೆ ಆ ಬಿಲ್ ಕಲೆಕ್ಟರ್ ಕಟ್ಟಿಸಿಕೊಳ್ಳುತ್ತಿಲ್ಲ, ನೀವೇ ಒಸಿ ಹೇಳಿ ಸಹಕರಿಸಿ ಸ್ವಾಮಿ..ಪುಣ್ಯಾ ಬರುತ್ತೆ.
ಅಯ್ಯೋ ಅಜ್ಜಿ ಅದಕ್ಕೇನು? ಈಗಲೇ ನಿನ್ನ ಕೆಲಸಮಾಡಿಸುವೆ ಎನ್ನುತ್ತಾ ಕಮೀಷನರ್ ಜೋರು ದನಿಯಲ್ಲಿ ಒಂದೆಡೆ ಜನರೇ ತೆರಿಗೆ ಕಟ್ಟಲು ಬಂದರು ಕಟ್ಟಿಸಿಕೊಳ್ಳದೇ ಸಾಯಿಸುವುದೇ? ಎಂದು ರೇಗಿದರು. ಅಲ್ಲೇ ಇದ್ದ ರವಿ ಕುಮಾರ್ ಕೂಡ ದನಿಗೂಡಿಸಿದರು.
ಕೂಡಲೇ ಕಮೀಷನರ್ ಸಂಬಂಧಿಸಿದ ಸಿಬ್ಬಂದಿಯನ್ನು ಕರೆದುಕೊಂಡು ಬರುವಂತೆ ಅಟೆಂಡರ್ಗೆ ಸೂಚಿಸಿದರು.
ಅತ್ತ ಆ ಸಿಬ್ಬಂದಿಯು ತಾನು ಇಲ್ಲ, ಹೊರಗಡೆ ಸೈಟ್ ನೋಡಲು ಹೋಗಿದ್ದಾರೆಂದು ನುಡಿಯುವಂತೆ ಹೇಳಿದ, ಆ ಅಟೆಂಡರ್ ಹಾಗೆಯೇ ಮಾಡಿದಳು. ಈಗ ಕಮೀಷನರ್ ವಿಧಿಯಿಲ್ಲದೇ ಮ್ಯಾನೇಜರ್ ಕರೆದು ಈ ಅಜ್ಜಿಯ ಸಮಸ್ಯೆಯನ್ನು ಸಂಬಂಧಿಸಿದ ಸಿಬ್ಬಂದಿ ಬಂದೊಡನೆ ಕೇಳಿ ಬಗೆಹರಿಸಿ. ಈ ಅಜ್ಜಿ ಮತ್ತೆ ಮತ್ತೆ ನಗರಸಭೆಗೆ ಅಲೆಯುವುದು ಬೇಡ. ಪಾಪ ಈ ದಿನದ ದುಡಿಮೆಯನ್ನು ಬಿಟ್ಟು ಬಂದಿದೆಯಂತೇ. ನೋಡಿ ನೀವೇ ಜವಾಬ್ದಾರಿ ತೆಗೆದುಕೊಂಡು ನನಗೆ ನಂತರ ಹೇಳಬೇಕು ಎಂದರು.
ಈಗ ಅಜ್ಜಿಯ ಕನಸಿಗೆ ಅಂತ್ಯವೇ ಇಲ್ಲ, ಖುಷಿಯೋ ಖುಷಿ. ಅದೇ ಖುಷಿಗೆ ಒಂದೆರಡು ಹನಿ ನೀರುಗಳು ಉದುರಿದವೇನೋ. ಅಂತೂ ಇಂದೇ ಕೆಲಸವಾಗುತ್ತದೆ ಎನ್ನುತ್ತಾ ಅಜ್ಜಿ ಅಲ್ಲಿಯೇ ನಗರಸಭೆಯ ಮುಂಬಾಗದ ಕಟ್ಟೆಯ ಮೇಲೆ ಕುಳಿತಿದೆ.
ಆದರೆ ಯಾರು ಅಧಿಕಾರಿಗಳು ಇಲ್ಲವೆಂದು ಆ ಅಟೆಂಡರ್ ನುಡಿದಿದ್ದಳೋ ಅವರೆಲ್ಲಾ ಇಲ್ಲೇ ಇದ್ದಾರೆ! ಈಗ ಅಜ್ಜಿಗೆ ಆಶ್ಚರ್ಯ, ಮತ್ತೆ ಒಂದೇ ಸಮನೆ ಧಾವಂತದಲ್ಲಿಯೇ ಕಮೀಷನರ್ ಕೊಠಡಿ ಬಳಿ ಹೋಗಿ ಆ ಅಟೆಂಡರ್ಗೆ ಅವರೆಲ್ಲಾ ಬಂದಿದ್ದಾರೆ, ಕಚೇರಿಯಲ್ಲೇ ಇದ್ದಾರೆ ಹೋಗಿ ಕರೆದು ಬನ್ನಿ ಎಂತು. ಆದರೆ ಎಲ್ಲವೂ ಅರಿವಿದ್ದ ಆ ಅಟೆಂಡರ್ ಇರಲಿ ಬಿಡಜ್ಜಿ, ನಿನ್ನ ಸಮಸ್ಯೆ ಪರಿಹರಿಸಲು ಕಮೀಷನರ್ ಮ್ಯಾನೇಜರ್ಗೆ ಹೇಳಿದ್ದಾರೆ. ಎಲ್ಲವೂ ಆಗುತ್ತದೆ ಸುಮ್ಮನಿರು, ಪದೇ ಪದೇ ನಿನ್ನ ಒಳಗಡೆ ಬಿಡಲು ಆಗಲ್ಲ ಎಂದಳು.
ಅಜ್ಜಿ ಹಾಗೆಯೇ ಓರೆಗಣ್ಣಿನಿಂದ ಒಳಗಡೆ ನೋಡಿದಳು, ಅಲ್ಲಿ ಈಗಲೂ ಅದೇ ರಮೇಶ್, ಮಂಜಪ್ಪ ಒಳಗಡೆ ಚಹಾ ಕುಡಿಯುತ್ತಾ ಹರಟೆ ಹೊಡೆಯುತ್ತಾ ಇದ್ದಾರೆ..ಇದೇನು ಕರ್ಮವೋ? ಅವರಿಗೇನು ಇಷ್ಟೊತ್ತು ಅಂತಹ ದೊಡ್ಡ ಕೆಲಸ ಎನ್ನುತ್ತಾ ಅಜ್ಜಿ ಮತ್ತೆ ಕಣ್ಣಲ್ಲಿ ಹನಿಯುವ ನೀರನ್ನು ನಿಧಾನವಾಗಿ ಕೈಲಿಡಿದು ನೋಡಿಕೊಳ್ಳುತ್ತಾ ಪಕ್ಕದ ಮ್ಯಾನೇಜರ್ ಬಳಿ ಹೋದಳು..
ಕಥೆ ಮುಂದುವರೆಯುವುದು..
ಭಾಗ-2
ಅಜ್ಜಿ ಮ್ಯಾನೇಜರ್ ಬಳಿ ತನ್ನ ಅಹವಾಲನ್ನು ಹೇಳಿಕೊಂಡಳು. ಕೂಡಲೇ ಮ್ಯಾನೇಜರ್ ಸಂಬಂಧಿಸಿದ ಕೇಸ್ ವರ್ಕರ್ಗೆ ಬರಲು ಸೂಚಿಸುತ್ತಾರೆ. ಆ ಕೇಸ್ ವರ್ಕರ್ಗೆ ಮೊದಲೇ ವಿಷಯ ತಿಳಿದು ಆತನೂ ಬರಲೇ ಇಲ್ಲ. ಇದ್ದೂ ಇಲ್ಲದಂತೆ ನಟಿಸಿ ಅದೇ ಅಟೆಂಡರ್ಗೆ ಇಲ್ಲವೆನ್ನು ಎಂದ. ಪಾಪ ಅಜ್ಜಿ ಕಾದು ಕಾದು ಸುಸ್ತಾಗಿ ಹಾಗೆಯೇ ನಿಂತಿದೆ. ಆ ಕೇಸ್ ವರ್ಕರ್ ಬರುತ್ತಾನೇನೋ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಹಾಗೇ ಮ್ಯಾನೇಜರ್ ಚೇಂಬರ್ ಬಳಿ ನಿಂತಿದೆ, ಆದರೂ ಆ ವ್ಯಕ್ತಿ ಬರಲೇ ಇಲ್ಲ.
ಆಗಲೇ ಸಮಯ5.30 ಆಗುತ್ತಿದೆ, ಸಂಜೆಯ ಸಮಯಕ್ಕೆ ಎಲ್ಲರೂ ಅಧಿಕಾರಿಗಳು ನಗರಸಭೆಯಿಂದ ಮನೆಗೆ ಹೋಗುತ್ತಿದ್ದಾರೆ. ಒಂದೆಡೆ ಕಚೇರಿಗೆ ಬಾಗಿಲು ಎಳೆದು ಕ್ಲೋಸ್ ಮಾಡುತ್ತಿದ್ದಾರೆ. ಈಗ ಮ್ಯಾನೇಜರ್ ಕೂಡ ಎದ್ದು ಹೋಗುತ್ತಿದ್ದಾರೆ. ಕೂಡಲೇ ಅಜ್ಜಿ ಅವರ ಬಳಿ ಓಡೋಡಿ ಬಂದು ಸ್ವಾಮಿ ನನ್ನ ಕೆಲಸ ಏನಾಯ್ತು ಎಂದು ಕೇಳುತ್ತದೆ, ಆದರೆ ಮೊದಲೇ ಮನೆಗೆ ಹೋಗುವ ಧಾವಂತದಲ್ಲಿದ್ದ ಮ್ಯಾನೇಜರ್ ಅಜ್ಜಿಗೆ ಗದರುತ್ತಾರೆ, ಏಯ್ ನಮಗೆ ದಿನವೂ ನಿನದೊಂದೇ ಕೆಲಸವೇ? ಸಾವಿರ ಇರುತ್ತೆ, ನಾಳೆ ಬಾ ನೋಡೋಣ, ಎಂದು ಗೊಣಗುತ್ತಾ ಎದ್ದು ಮನೆಗೆ ಹೊರಡುತ್ತಾರೆ.
ಹಲವು ತಿಂಗಳುಗಳಿಂದ ಓಡಾಡಿ ರೋಸಿಹೋಗಿದ್ದ ಅಜ್ಜಿಯು ಕಮೀಷನರ್ ಮತು ಕೇಳಿ ಏನೇನೋ ಕನಸು ಕಂಡು ಇಂದೇ ಕೆಲಸವಾಗುತ್ತದೆ ಎಂದು ನಂಬಿದ್ದಕ್ಕೆ ಮತ್ತೆ ನಿರಾಸೆಯ ಮಳೆಯು ಅಬ್ಬರಿಸಿದೆ. ತಾನು ನಂಬಿದ್ದ ಊರ ದೇವತೆಯು ಇಂದೂ ಕಣ್ಣು ಬಿಡಲಿಲ್ಲ, ತನ್ನ ನೋವನ್ನು ಕರಗಿಸಲಿಲ್ಲ, ಯಾವ ಜನ್ಮದ ಪಾಪವೋ ಎನ್ನುತ್ತಾ ಅಜ್ಜಿ ಅದೇ ಬೇಸರ ಮುಖದಲ್ಲಿ ನಗರಸಭೆಯ ಕಟ್ಟೆಯಿಂದ ಭಾರವಾದ ಮನದಲ್ಲಿ ಹೆಜ್ಜೆಯನ್ನಿಡುತ್ತಾ ಮೆಟ್ಟಿಲು ಇಳಿಯುತ್ತಿದೆ.
ಅಷ್ಟರಲ್ಲಿ ಅದೇ ಬ್ರೋಕರ್ ರಮೇಶಪ್ಪ ಗಹಗಹಿಸಿ ನಗುತ್ತಾ ಏನು ವೆಂಕಮ್ಮಜ್ಜಿ, ನಿನ್ನ ಮನೆ ಫಾರಂ ನಂಬರ್ 3 ಸಿಕ್ತಾ? ನಿನ್ನ ಕಳೆದುಹೋದ ಮೆನ ಖಾತೆ ಸಿಕ್ತಾ? ಪಾಪ ಖಾತೆ ಯಾವ ಊರಿಗೆ ಹೋತೋ? ಇಲ್ಲ ನಿನ್ನ ಗಂಡನಲ್ಲಿಗೆ ಹೋತೋ? ಎಂದು ಲೇವಡಿ ಮಾಡುತ್ತಾನೆ. ಮೊದಲೇ ದಿನದ ದುಡಿಮೆ ಹೋಯ್ತು, ಹೊಟ್ಟೆಯ ಹಿಟ್ಟಿಗೆ ಮಣ್ಣು ಹಾಕಿದರು ಪಾಪಿ ಅಧಿಕಾರಿಗಳು, ಇಲ್ಲೇ ಇದ್ದರು ಎಲ್ಲವೆಂದು ನಾಟಕವಾಡಿದರು ಎನ್ನುವ ನೋವು ಒಂದೆಡೆ. ಇನ್ನೊಂದೆಡೆ ಈ ಬ್ರೋಕರ್ ರಮೇಶಪ್ಪನ ಕೊಂಕು ಮಾತು ಅಜ್ಜಿಯನ್ನು ಇನ್ನಷ್ಟು ಘಾಸಿಗೊಳಿಸಿತು. ನೊಂದವರ ಬಾಳಿಗೆ ಇನ್ನೂ ಸೂಜಿಯಂತೆ ಚುಚ್ಚುವ ಬೇವರ್ಸಿಗಳ ಮದ್ಯೆ ಪಾಪದ ಜನರ ಬದುಕಿಗೆ ಬೆಲೆಯೆಲ್ಲಿ?
ಕೊನೆಗೆ ಅಜ್ಜಿ ನಗರಸಭೆಯಿಂದ ಹೊರಬಂದು ಕಚೇರಿಯ ಆವರಣ ದಾಟುತ್ತಿದೆ. ಅಷ್ಟರಲ್ಲಿ ಅದೇ ಕೇಸ್ ವರ್ಕರ್ ಮತ್ತೆ ಎದುರಾದ. ಈಗ ಮತ್ತೆ ಅಜ್ಜಿ ಆತನಿಗೆ ಕೈಮುಗಿದು ಬೇಡುತ್ತಿದೆ. ಅಯ್ಯಾ ದೇವರೇ, ಸ್ವಾಮಿ, ನಿಮ್ಮ ಕಾಲಿಗೆ ಬೀಳುವೆ, ದಯವಿಟ್ಟು ನನ್ನ ತೆರಿಗೆ ಕಟ್ಟಿಸಿಕೊಂಡು ನನ್ನ ಮನೆ ಫಾರಂ ನಂಬರ್ 3 ಕೊಡಿ ಎನ್ನುತ್ತಾ ರೋದಿಸುತ್ತಾ ವಿನಂತಿಸುತ್ತಿದೆ..
ಅಷ್ಟರಲ್ಲಿ ಅದೇ ಸಮಯಕ್ಕೆ ಕಂದಾಯಾಧಿಕಾರಿಯೂ ಆ ಸ್ಥಳಕ್ಕೆ ಬರುತ್ತಾನೆ. ಮೊದಲೇ ರಮೇಶಪ್ಪನಿಂದ ಸಾಕಷ್ಟು ಹಣದ ಆಮಿಷಕ್ಕೆ ಒಳಗಾಗಿದ್ದ ಕಂದಾಯಾಧಿಕಾರಿಯು ಅಜ್ಜಿಯನ್ನು ನೋಡಿ, ಕೋಪದಿಂದ ಲೇ ಬೇವರ್ಸಿ ಮುದುಕಿ, ನೀನು ಸಾಯೋದು ಯಾವಾಗ? ನಿನ್ನ ಮಕ್ಕಳು ಹಾಳಾಗಿ ಹೋದ್ರು, ನಿನಗೂ ಸಾವು ಯಾವಾಗ ಬರುತ್ತೋ. ಏನ್ ಕರ್ಮ ನಿಂದೂ, ಒಳ್ಳೆಯ ಹಣ ಬರುತ್ತೆ, ಸುಮ್ನೆ ಮನೆಯನ್ನ ಆ ರಮೇಶಪ್ಪನಿಗೆ ನೀಡು. ಅದೂ ಬಿಟ್ಟು ದಿನಾ ಫಾರಂ ನಂಬರ್ 3 ಎಂದು ಬರಬೇಡ. ನಿನ್ನ ಖಾತೆ ಬೇರೆ ಕಳೆದು ಹೋಗಿದೆ. ನಿನ್ನ ಖಾತೆಯೇ ಸರಿಯಿಲ್ಲ. ನಿನಗೆ ಮನೆಯೇ ಮಂಜೂರಾಗಿಲ್ಲ, ನೆನಪಿರಲಿ, ನೀನಿರೋದು ಯಾರದೋ ಜಾಗದಲ್ಲಿ, ನಿಮ್ಮ ಮನೆಯ ದಾಖಲೆ ಎಲ್ಲಿದೆ?
ಅಜ್ಜಿ ಒಮ್ಮೆಲೆ ಕಂದಾಯಾಧಿಕಾರಿ ಮಾತನಿಂದ ನಡುಗುತ್ತಾ, ಹೆದರಿಕೊಂಡು ಕೇಳಿತು.
ಅಯ್ಯೋ, ಸ್ವಾಮಿ, ನನ್ನ ಮನೆಯ ಖಾತೆ ನಕಲಿಯೇ? ನಾನು ನನ್ನ ಗಂಡ ಅಲ್ಲಿಯೇ ಐವತ್ತು ವರ್ಷದಿಂದ ಇದ್ದಿದ್ದು. ನಮಗೇ ಸರ್ಕಾರವೇ 94ಸಿ ಯಲ್ಲಿ ಹಕ್ಕು ಪತ್ರ ನೀಡಿದೆ. ನಿಮಗೂ ಗೊತ್ತಲ್ಲವೇ? ಈಗ ನಾನಿರುವ ಗುಡಿಸಲು ಮನೆಯು ಸೋರುತ್ತಿದೆ, ನನಗೆ ಯಾವಾಗ ಮನೆ ಬೀಳುತ್ತದೋ ಎನ್ನುವ ಭಯ, ದಯವಿಟ್ಟು ಫಾರಂ ನಂಬರ್ 3 ಕೊಡಿ ಸ್ವಾಮಿ, ನನ್ನ ಮನೆಯ ಮೂಲ ದಾಖಲೆ ನಿಮ್ಮ ಕೇಸ್ ವರ್ಕರ್ ಬಳಿ ನೀಡಿರುವೆ, ಅವರು ಪರಿಶಿಲಿಸುವೆ ಎಂದು ತೆಗೆದುಕೊಂಡಿದ್ದಾರೆ, ಎಂದೂ ರೋದಿಸುತ್ತಾ ಕಂದಾಯಾಧಿಕಾರಿ ಕಾಲನ್ನು ಹಿಡಿದು ನೆಲದ ಮೇಲೆ ಕುಸಿದು ಬೀಳುತ್ತದೆ.
ಇತ್ತ ಹಣದ ಮೋಹದಲ್ಲಿ ಹೃದಯ ಕಲ್ಲಾಗಿದ್ದ ಕಂದಾಯಾಧಿಕಾರಿ ರೋಷದಲ್ಲಿ ಅಜ್ಜಿಯನ್ನು ಜೋರಾಗಿ ತನ್ನ ಕಾಲಿನಿಂದ ತಳ್ಳಿ, ಲೇ ಬೇವರ್ಸಿ ಮುದುಕಿ, ಬೇಗನೇ ನಿನ್ನ ಮನೆ ಮುರಿದು ಬೀಳಲಿ, ಇಲ್ಲವೇ ನಾನೇ ಬಂದು ಒದ್ದು ಬೀಳುಸುತ್ತೇನೆ, ಹೇಳಿದಂತೆ ರಮೇಶಪ್ಪನಿಗೆ ಮನೆ ನೀಡಿ, ಆತ ಕೊಟ್ಟ ಹಣವನ್ನು ತೆಗೆದುಕೊಂಡು ಹೋಗು, ನಾನು ನಿನಗೆ ಎಷ್ಟು ಬಾರಿ ಈ ಮಾತು ಹೇಳಿಲ್ಲ..ನಿನ್ನ ಮನೆಯ ದಾಖಲೆಯನ್ನು ನಮ್ಮ ಕೇಸ್ವರ್ಕರ್ ಬಳಿ ನೀಡಿದ್ದೇನೆ ಎಂದು ಸುಳ್ಳು ಹೇಳುತ್ತೀಯ? ಕೊಟ್ಟಿದ್ದಕ್ಕೆ ನಿನ್ನ ಬಳಿ ಏನು ಸಾಕ್ಷಿ ಇದೆ, ಏನು ಎಂಡಾರ್ಸ್ಮೆಂಟ್ ಕೊಟ್ಟಿದ್ದಾರ?
ಅಯ್ಯೋ ಸ್ವಾಮಿ, ನನಗೆ ಇರುವುದು ಇದೊಂದೇ ಮನೆ, ಈ ಮನೆಯಲ್ಲೇ ನನ್ನ ದೇವರು, ನನ್ನ ಗಂಡ ಬಾಳಿ ಬದುಕಿದ್ದು, ನಿಮಗೆ ಕೈಮುಗಿಯುವೆ, ಆ ಜಾಗ ಬಿಟ್ಟು ಹೋಗು ಎನ್ನಬೇಡಿ, ನನಗೆ ನನ್ನ ಗಂಡನ ನೆನಪಿದೆ, ಅವರೇ ಕಟ್ಟಿದ ಮನೆಯದು. ಆ ದೇವರಾಣೆಗೂ ಸತ್ಯ. ನನ್ನ ಮನೆಯ ದಾಖಲೆಯನ್ನು ನಿಮ್ಮ ಕೇಸ್ ವರ್ಕರ್ ಬಳಿಯೇ ನೀಡಿರುವೆ. ಇಲ್ಲ ಎಂದು ನನ್ನ ಹೊಟ್ಟೆ ಮೇಲೆ ಹೊಡೆಯಬೇಡಿ..
ಲೇ, ಬೇವರ್ಸಿ ಮುದುಕಿ, ನಿನ್ನದೇನು ಮೈಸೂರು ಅರಮನೇನಾ? ಇನ್ನೊಮ್ಮೆ ಫಾರಂ3 ಎಂದು ನಗರಸಭೆಗೆ ಬಂದರೆ ಕಾಲು ಮುರಿಯುತ್ತೇನೆ, ಹುಷಾರ್ ಎಂದು ಕೂಗುತ್ತಾ ಕಂದಾಯಾಧಿಕಾರಿ ಕೋಪದಲ್ಲಿ ಅಲ್ಲಿಂದ ಜಾಗ ಕಾಲಿಮಾಡಿದ..
ಇತ್ತ ಅಜ್ಜಿ ಆವರಣದಲ್ಲಿ ನಿಂತಿದೆ, ನೋಡಿದರೆ ಯಾರೋ ಇಲ್ಲ, ಒಂದೆಡೆ ಲೈಸೆನ್ಸ್ ಹೊಂದಿದ ಗೂಂಡಾನಂತೆ ಅಧಿಕಾರಿಯು ಅಟ್ಟಹಾಸ ಮೆರೆದು ಹೋದ. ಅಜ್ಜಿಗೆ ತನ್ನ ಗಂಡ, ಮಕ್ಕಳು ಬಾಳಿದ ಮನೆಯನ್ನು ಹೇಗಾದರು ಉಳಿಸಿಕೊಂಡು ಬದುಕಬೇಕೆನ್ನುವ ಛಲವಿದೆ. ತನ್ನ ನೆನಪುಗಳ ಬುತ್ತಿಯನ್ನು ಜೀವದುಸಿರಿನ ಕೊನೆವರೆಗೂ ಉಳಿಸಿಕೊಳ್ಳುವ ಕನಸಿದೆ. ತನ್ನ ಮಕ್ಕಳಿಗೆ ತಾನು ನೀಡಿದ ಕೈತುತ್ತನ್ನು ಮೊಮ್ಮಕ್ಕಳಿಗೂ ನೀಡಿ ನಲಿವ ಜೀವದಾಸೆಯಿದೆ.
ಆದರೆ ಇತ್ತ ರಮೇಶಪ್ಪ ಎನ್ನುವ ಮಹಾನ್ ವಿಚಿದ್ರಕಾರಿ ಹಣವಂತ ದುಷ್ಟನಿಗೆ ಭುಮಿಯ ದಾಹವಿದೆ, ಆತನಿಗೆ ಹಣಕ್ಕೆ ಲೆಕ್ಕವೇ ಇಲ್ಲ. ಊರಿನ ಅನೇಕ ಆಸ್ಥಿಗಳನ್ನು ಲಪಟಾಯಿಸಿದ್ದಾನೆ. ಸರ್ಕಾರಿ ಭುಮಿಯನ್ನು ಕೊಳ್ಳೆ ಹೊಡೆದಿದ್ದಾನೆ. ಇದಕ್ಕೆ ಸಾಕಷ್ಟು ಹಣವನ್ನು ಅಧಿಕಾರಿಗಳಿಗೆ ನೀಡಿದ್ದಾನೆ. ಹಣವೊಂದಿದ್ದರೇ ಹೆಣವೇ ಬಾಯಿ ಬಿಡುತ್ತದೆ, ಇನ್ನೂ ಹಣಕ್ಕೆ ಸರ್ಕಾರದ ಭೂಮಿಯೇನು ಮಹಾ! ಈ ಭ್ರಷ್ಟ ಅಧಿಕಾರಿಗಳು ಅದನ್ನೂ ಆತನಿಗೆ ಆಕ್ರಮವಾಗಿ ಮಾಡಿಕೊಡುತ್ತಾರೆ. ಹಣ ತೋರಿಸಿದರೆ ಸಾಕು, ಅವರೇ ನಕಲಿ ದಾಖಲೆಗಳನ್ನು ತಯಾರಿಸಿ ಖಾತೆ ಮಡಿಕೊಡುವ ಸರದಾರರು ಇದೇ ನಗರಸಭೆಯಲ್ಲಿ ಬೇರೂರಿ ಲೆಕ್ಕವಿಲ್ಲದಷ್ಟು ವರ್ಷಗಳೇ ಆಗಿವೆ. ಇವರಿಗೆ ವರ್ಗಾವಣೆ ಎನ್ನುವುದು ಕೂಡ ಹತ್ತಿರಬಾರದು. ಈ ನಗರಸಭೆ ಮಾತ್ರ ಇವರಿಗೆ ಅಜ್ಜನ ಮನೆಯಾಗಿದೆ.
ಹಲವು ದಿನಗಳಿಂದ ರಮೇಶಪ್ಪನ ಕಣ್ಣು ಅಜ್ಜಿಯ ಜಾಗದ ಮೇಲೆ ಬಿದ್ದಿದೆ, ಬೆಂಗಳೂರಿನ ಒಬ್ಬರು ಉದ್ಯಮಿಗೆ ಮುಖ್ಯ ರಸ್ತೆಯ ಪಕ್ಕದಲ್ಲಿ ಹೋಟೆಲ್ ಕಟ್ಟಲು ಜಾಗದ ಅಗತ್ಯವಿದೆ. ಅವರಿಗೆ ಜಾಗ ಕೊಡಿಸುವ ಡೀಲ್ ಈತ ತೆಗೆದುಕೊಂಡಿದ್ದಾನೆ, ಎಲ್ಲವೂ ಆತನು ಯೋಜಿಸಿದಂತೆ ಆಗಿದೆ, ಆದರೆ ಪಕ್ಕದಲ್ಲಿ ಈ ಅಜ್ಜಿಯ ಜಾಗವಿದೆ. ಅದರ ಪಕ್ಕದಲ್ಲೇ ಸಾಕಷ್ಟು ಸರ್ಕಾರಿ ಜಾಗವೂ ಇದೆ. ಅದನ್ನು ಕಬಳಿಸಬೇಕೆಂದರೆ ಹಲವು ವರ್ಷದಿಂದ ವಾಸವಿದ್ದ ಅಜ್ಜಿಯ ಮನೆಯನ್ನು ಮೊದಲು ಖರೀದಿಸಿದರೆ ಉತ್ತಮವೆಂದು ನಿರ್ಧರಿಸಿ ಅಜ್ಜಿಯ ಬೆನ್ನು ಬಿದ್ದಿದ್ದಾನೆ, ಆದರೆ ಅಜ್ಜಿಯು ಒಪ್ಪಿಲ್ಲ. ಎಷ್ಟೇ ಪ್ರಯತ್ನಿಸಿದರೂ ಆಗಿಲ್ಲ. ಅಜ್ಜಿ ಯಾವುದಕ್ಕೂ ಬಗ್ಗಿಲ್ಲ..ತನ್ನ ಉಸಿರಿನ ಕೊನೆವರೆಗು ಮನೆ ಬಿಡಲಾರೆ ಎಂದು ಹಠವಿಡಿದಿದೆ..
ಅಜ್ಜಿಯ ಮನೆಯ ಸುತ್ತಲೂ ಸಾಕಷ್ಟು ಸರ್ಕಾರಿ ಜಾಗವಿದೆ. ಅದನ್ನು ಕಬಳಿಸುವುದಕ್ಕೆ ಮೊದಲು ಅಜ್ಜಿಯ ಜಾಗವನ್ನು ಪಡೆದರೆ ಅನುಕೂಲ. ಇದಕ್ಕೆ ಅಧಿಕಾರಿಗಳು ಸಾಕಷ್ಟು ಹಣವನ್ನು ಪಡೆದಿದ್ದಾರೆ. ರಮೇಶಪ್ಪನ ಅಣತಿಯಂತೆ ಎಲ್ಲವೂ ಸಿದ್ದವಾಗಿಟ್ಟುಕೊಂಡಿದ್ದಾರೆ. ಹೊರಗಡೆ ಮುಕ್ತ ಮಾರುಕಟ್ಟೆಯಲ್ಲಿ ಅಡಿಗೆ ಸಾವಿರ ರೂ ಇದ್ದರೆ ಈ ಅಧಿಕಾರಿಗಳಿಗೆ ಇನ್ನೂರು ಕೊಟ್ಟರೆ ಸರ್ಕಾರಿ ಜಾಗಕ್ಕೂ ನಕಲಿ ದಾಖಲೆ ನೀಡಲು ಸಿದ್ದರು. ಯಾರದೋ ಮಂಜೂರಾತಿಗೆ ಯಾರಿಗೂ ಯಾವುದೋ ಜಾಗಕ್ಕೆ ಹೊಂದಿಸಿ ನೀಡುತ್ತಾರೆ. ಅದೇ ಹೆಸರಿನ ಒಂದೇ ಒಂದು ಮಂಜೂರಾತಿ ಸಿಕ್ಕರೂ ಸಾಕು. ಅದೇ ಹೆಸರಿನಲ್ಲಿ ಹತ್ತಾರು ಜನರಿಗೆ ಮಂಜೂರಾತಿ ಇದೆ ಎಂದು ವರದಿ ನೀಡಿ ಸರ್ಕಾರಿ ಭೂಮಿಯನ್ನು ಕಂಡ ಕಂಡವರಿಗೆ ನೀಡುತ್ತಾ, ಅನ್ನ ನೀಡಿದ ಸರ್ಕಾರಕ್ಕೆ ಎದೆಗೊದೆಯುವ ಕಲೆಗಾರರಾಗಿ ನಗುತ್ತಿದ್ದಾರೆ. ಒಟ್ಟಾರೆ ಹೆತ್ತ ತಾಯಿಯ ಬಟ್ಟೆ ಬಿಚ್ಚಿ ಒಂದು ಕೈ ನೋಡುವ ಪ್ರರಾಕ್ರಮಿಗಳಾಗಿ ಮಾನ ಮರ್ಯಾದೆ ಸತ್ತು ಹಣಕ್ಕಾಗಿ ಎಲ್ಲಕ್ಕೂ ಸಿದ್ದರಿದ್ದಾರೆ.
ಹಾಗಾಗಿ ಅಜ್ಜಿಯ ಜಾಗಕ್ಕೆ ರಮೇಶಪ್ಪ ಎನ್ನುವ ದುಷ್ಟನಿಂದ ಬಂದ ಡೀಲ್ಗೆ ಅಧಿಕಾರಿಗಳು ಸಾಕಷ್ಟು ಹಣವನ್ನು ಪೀಕಿದ್ದಾರೆ. ಅಜ್ಜಿಯ ಖಾತೆಯೇ ಇಲ್ಲವೆಂದು ಅಜ್ಜಿಗೆ ನುಡಿದಿದ್ದಾರೆ. ಅಜ್ಜಿಗೆ ನಿನ್ನ ಮನೆ ದಾಖಲೆ ತಂದು ತೋರಿಸು ಎಂದಿದ್ದಾರೆ. ನಂಬಿದ ಅಜ್ಜಿ ದಾಖಲೆಗಳನ್ನು ನೀಡಿದೆ. ಕಚೇರಿಯಲ್ಲಿ ಪಡೆದುಕೊಂಡ ಅಧಿಕಾರಿ ಪರಿಶೀಲಿಸುವುದಾಗಿ ನುಡಿದು ಇಟ್ಟುಕೊಂಡಿದ್ದಾರೆ. ನಂತರ ಅಜ್ಜಿಗೆ ನಾಳೆ, ನಾಡಿದ್ದು ಎಂದಿದ್ದಾರೆ. ಅಜ್ಜಿಗೆ ನಿತ್ಯವೂ ಹೋಗಲು ಆಗಲ್ಲ. ಹೋದರೆ ಹೊಟ್ಟೆಯ ಗತಿಯೇನು? ಕೊನೆಗೊಂದು ದಿನ ಹುಡುಕುವ, ನೋಡುವೆ ಎನ್ನುತ್ತಾ ಇನ್ನೊಂದೆಡೆ ಕೇಸ್ವರ್ಕರ್ ಸತಾಯಿಸುತ್ತಾ ಅದು ಕಾಣುತ್ತಿಲ್ಲ, ಗೊತ್ತಿಲ್ಲ, ಯಾವಾಗ ಕೊಟ್ಟಿದ್ದು, ಯಾರಿಗೆ ಎಂದು ಗದರುತ್ತಿದ್ದಾನೆ.
ಇತ್ತ ಅಜ್ಜಿಗೆ ಫಾರಂ ನಂಬರ್ 3 ಕೂಡ ಇಲ್ಲ, ಇಲ್ಲ ಮೂಲ ದಾಖಲೆಗಳೂ ಕೈಲಿ ಇಲ್ಲ. ಅಧಿಕಾರಿಗಳೇ ದೇವರೆಂದು ನಂಬಿದ್ದ ಅಜ್ಜಿಯೀಗ ಕಣ್ಣೀರಲ್ಲೇ ದಿನಕಳೆಯುತ್ತಾ ರೋದಿಸುತ್ತಿದೆ. ಏನು ಮಾಡಲಿ, ಯಾರಲ್ಲಿ ಹೇಳಲಿ, ನಗರಸಭೆಯ ಎಲ್ಲಾ ಅಧಿಕಾರಿಗಳನ್ನು ಕಂಡಿದ್ದಾಗಿದೆ. ಇಂದೂ ಕಮಿಷನರ್ ಅವರನ್ನು ಕೇಳಿದ್ದಾಗಿದೆ. ಅವರೇನೋ ಮ್ಯಾನೇಜರ್ ಬಳಿ ಹೇಳಿದರು. ಆದರೆ ಅವರೂ ಈ ದಿನ ಆಗುವುದಿಲ್ಲ, ಹೊತ್ತಾಯಿತು ಎಂದು ಎದ್ದು ಹೋದರು. ಇತ್ತ ಕಚೇರಿಯಲ್ಲೇ ಇದ್ದರೂ ಕಾಣದಂತೆ ನಟಿಸಿ ಬಾರದೇ ಹೋದ ಕೇಸ್ ವರ್ಕರ್. ಕೊನಗೆ ಕಚೇರಿ ಹೊರಗಡೆ ಧಮಕಿ ಹಾಕುವ ಲೈಸೆನ್ಸ್ ಹೊಂದಿದ ಗೂಂಡಾನಂತಾ ಕಂದಾಯಾಧಿಕಾರಿ ಎಲ್ಲವನ್ನು ನೋಡಿ ಅಜ್ಜಿ ರೋಸಿ ಬೆಚ್ಚಿ ಹೋಗಿದೆ.
ಏನು ಮಾಡಲಿ, ನನ್ನಿಂದ ಇನ್ನೇನು ಸಾಧ್ಯ? ಹೇಗಾದರೂ ಮಾಡಿ ನನ್ನ ಮನೆಯನ್ನು ಆ ರಮೇಶಪ್ಪ ಎಂಬ ದುರುಳನಿಂದ ಉಳಿಸಿಕೊಳ್ಳಬೇಕು. ಆದರೆ ಈ ಅಧಿಕಾರಿಗಳು ನೀಡುವ ಕಿರುಕುಳ ನೋಡಿದರೆ ಅದೂ ಕನಸೇನೋ ಎನ್ನಿಸುತ್ತಿದ್ದೆ. ಈಗ ಏನೋ ಮಾಡುವುದು ಯಾರಿಗೆ ಕೇಳುವುದು ಎಂದು ಅದೇ ನೋವಿನ ಮನದಲ್ಲಿ ಅಜ್ಜಿ ಮತ್ತೆ ಮನೆಯತ್ತ ಹೆಜ್ಜೆ ಹಾಕುತ್ತಿದೆ.
ಆಗ ಜೋರಾಗಿ ಮಳೆ ಸುರಿಯಲಾರಂಭಿಸಿತು, ಓಹ್, ಈಗ ಮನೆಯಲ್ಲಿ ಅಡಿಕೆಯನ್ನು ಹಾಗೆಯೇ ಇಟ್ಟು ಬಂದಿದ್ದೆ. ಸರಿಯಾರಿ ಪ್ಲಾಸ್ಟಿಕ್ ಚೀಲವನ್ನು ಹೊಚ್ಚಲಿಲ್ಲ. ಎಲ್ಲವೂ ನಿರಲ್ಲಿ ನೆಂದರೆ ಗತಿಯೇನು? ನಾಳೆ ಸಾವುಕಾರನಿಗೆ ಏನು ಉತ್ತರ ಹೇಳೋದು ಎನ್ನುತ್ತಾ ಅಜ್ಜಿ ಬಿರುಸಾಗಿ ಮನೆಯೆಡೆ ಹೆಜ್ಜೆ ಹಾಕುತ್ತಿದೆ, ಕಣ್ಣಲ್ಲಿ ಮಾತ್ರ ನೀರು ಸುರಿಯುತ್ತಲೇ ಇದೆ..
ಕಥೆ ಮುಂದುವರೆಯುವುದು
ರಾಮಚಂದ್ರ ಸಾಗರ್
ಭಾಗ-3
ಈಗ ಅಜ್ಜಿ ರೋದಿಸುತ್ತಾ ಮನೆಯೆದುರು ಬಂದು ನಿಂತಿದೆ. ಮನೆ ಮೇಲ್ಬಾಗದಲ್ಲಿ ಹೊದಿಸಿದ ಅಡಿಕೆ, ತೆಂಗಿನ ಗರಿಗಳು ಅತ್ತಿತ್ತ ತೂರಾಡುತ್ತಿವೆ, ಬಾಗಿಲು ತೆರೆದು ಒಳಹೋಗಿ ನೋಡುತ್ತದೆ, ಒಳಗಡೆ ಒಣ ಹುಲ್ಲನ್ನು ಸೀಳಿಕೊಂಡು ನೀರು ಒಳಸುರಿಯುತ್ತಿದೆ. ಅಡಕೆ ಚೀಲ, ಸುಲಿದ ಅಡಿಕೆಯ ಬುಟ್ಟಿಯೆಲ್ಲವೂ ನೀರಿನಲ್ಲಿ ಅದ್ದ ಇಟ್ಟಂತಾಗಿದೆ.
ಮನೆಯಲ್ಲಿ ಎಲ್ಲಾ ನೋಡುತ್ತಾ ಅಜ್ಜಿಯ ಕಣ್ಣಲ್ಲಿ ಇನ್ನಷ್ಟು ನೋವು ಆವರಿಸಿತು, ಓ ತಾಯಿ ಚಾಮುಂಡೇಶ್ವರಿಯೇ, ಗ್ರಾಮದೇವತೆಯೇ ನಿನಗೆ ಈ ಬಡ ಜೀವದ ಮೇಲೆ ಕಿಂಚಿತ್ತು ಕರುಣೆ ಬೇಡವೇ? ಏಕೆ ಈ ಅಮಾಯಕ ಜೀವದ ಮೇಲೆ ಬಿಸಿಯಾದ ಕತ್ತಿಯಿಂದ ಬರೆಯೆಳೆಯುತ್ತೀಯ, ಇದೆಲ್ಲಾ ನೋಡುತ್ತಾ ಇರುವುದಕ್ಕೇನಾ ಈ ಕಣ್ಣುಗಳು ಇನ್ನೂ ಇರುವುದು. ತಾಯಿ ನೀನು ಕೇವಲ ಕಲ್ಲು ಮೂರ್ತಿಯೇ? ಇಲ್ಲವೇ ನಾನು ನಂಬಿದ ಜಗದೊಡೆತಿಯೇ? ನೀನು ನಿಜವಾಗಿಯೂ ಜಗದೊಡತಿಯೇ ಆಗಿದ್ದರೆ, ನಾನು ಹುಟ್ಟಿದಿನಿಂದಲೂ ಆರಾಧಿಸುತ್ತಾ ಬಂದ ದೈವಾ ನಿಜ ದೈವವು ನೀನೇ ಆಗಿದ್ದರೆ ಈ ನನ್ನ ಮನೆಯನ್ನು ಉಳಿಸಿಕೊಡು, ಭ್ರಷ್ಟರ ಕೈಯಿಂದ ಈ ಸೂರನ್ನು ಉಳಿಸು.
ಈ ಮನೆಯನ್ನು ಎಷ್ಟು ಕಷ್ಟ ಪಟ್ಟು ನಾನು ನನ್ನ ಗಂಡ ಕೂಲಿ ಮಾಡಿ ಕಟ್ಟಿಲ್ಲ. ಹಳೆ ನೆನಪುಗಳನ್ನು ನೆನದರೆ ಮನದಲ್ಲಿ ನೋವು ಆವರಿಸುತ್ತದೆ. ಮನೆಯಲ್ಲಿ ರಾತ್ರಿ ಮಲಗಿದಾಗ ತೆಂಗಿನ ಹೊರೆಯ ಹೊದಿಕೆ ಜಾರಿ ಹುಲ್ಲು ಕಟ್ಟು ಜಾರಿದಾಗ ಆಗಸದ ತಾರೆಗಳು, ಚಂದ್ರರನ್ನು ಮಕ್ಕಳಿಗೂ ತೋರಿಸಿ, ನೋಡಿ ಮಕ್ಕಳೇ ನಮ್ಮ ಮನೆಯನ್ನು ಆ ಚಂದ್ರ, ತಾರೆಯರೂ ನೋಡುತ್ತಿದ್ದಾರೆಂದು ನೋವಿನಲ್ಲೂ ನಲಿದ ಘಳಿಗೆಯನ್ನು ಮನ ನೆನೆದು ಹಾಗೆಯೇ ರೋದಿಸುತ್ತಾ ಮನೆಯ ಮುಂಬಾಗದ ಕೋಣೆಯಲ್ಲಿ ಅಜ್ಜಿ ಹಾಗೇ ಒರಗಿದೆ, ನೋವೇ ಅಜ್ಜಿಯನ್ನು ಬಿಗಿಯಾದ ಹಗ್ಗವಾಗಿ ಸುತ್ತಿ ಸುತ್ತಿ ಬಡಿಯುತ್ತಿದೆ. ಕಣ್ಣುಮುಚ್ಚಿದರೂ ಗೂಂಡಾ ಪ್ರವೃತ್ತಿಯ ಅಧಿಕಾರಿಗಳದೇ ಅಟ್ಟಹಾಸ. ಮೈ ನಡುಗುತ್ತಾ ಹಾಗೇ ಒರಗಿದೆ. ಇನ್ನೆಲ್ಲಿ ಅನ್ನ, ನೀರು.
ಒಮ್ಮೆಲೇ ಗುಡುಗು ಮಿಂಚುಗಳು ಬಿರುಸಾಗಿ ಬಡಿಯುತ್ತಿವೆ, ಮುಂಗಾರು ಜೋರಾಗಿ ಅಬ್ಬರಿಸುತ್ತಿದೆ. ಮಲೆನಾಡು ಮಳೆಯ ಅಬ್ಬರಕ್ಕೆ ಇಡೀ ಬಾನೇ ಸೀಳಿಕೊಂಡು ನೆಲಕ್ಕೆ ಹೊಡೆವಂತೆ ಭಾಸ. ಜೊತೆಗೆ ಮಾರುತಗಳ ವೇಗಕ್ಕೆ ಮನೆಯೊಳಗೆ ನುಗ್ಗುವ ನೀರು ಜಾಸ್ತಿಯಾಗುತ್ತಿದೆ. ಇತ್ತ ಮಕ್ಕಳಿಗಾಗಿ ಅಜ್ಜಿ ತನ್ನ ಕೈಲಿರುವ ಹಳೇ ಮೊಬೈಲ್ ಹಿಡಿದು ಕರೆಮಾಡುತ್ತಿದೆ, ಆದರೆ ಅತ್ತ ಕಡೆ ಮಕ್ಕಳು ಸ್ವೀಕರಿಸುತ್ತಿಲ್ಲ. ಪಾಪ ಅವರು ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಹೋಟೆಲ್ ನಲ್ಲಿ ಕ್ಲೀನಿಂಗ್ ಕೆಲಸದ ಮದ್ಯೆ ಫೋನ್ ಉಪಯೋಗಿಸುವಂತಿಲ್ಲ. ಎಲ್ಲವು ಮುಗಿದು ರಾತ್ರಿ ಕೋಣೆಗೆ ಹೋದಾಗ ನೋಡಿ ತಿರುಗಿ ಕರೆಮಾಡಬೇಕು. ಅಜ್ಜಿ ಕೈಲಿಡಿದ ಫೋನ್ ನೋಡುತ್ತಾ ಹೆದರಿಕೆಯಲ್ಲಿ ಕುಳಿತಿದೆ. ಕಳೆದ ಬಾರಿ ಮಗ ಮನೆಗೆ ಬಂದಾಗ ಬೆಂಗಳೂರಿನಿಂದ ಫೋನ್ ತಂದುಕೊಟ್ಟಿದ್ದ. ಏನೋ ತುರ್ತು ತೊಂದರೆ ಇದ್ದರೆ ಕರೆಮಾಡುವಂತೆ ಹೇಳಿ, ಪೋನ್ ಮಾಡುವುದನ್ನು ಕಲಿಸಿಹೋಗಿದ್ದ..
ಇತ್ತ ಹೊರಗಡೆ ಗಾಳಿ ಇನ್ನೂ ಜೋರಾಗಿ ಬೀಸುತ್ತಿದೆ, ಮನೆಯನ್ನು ಬೇರೆ ರಿಪೇರಿ ಮಾಡಿಸಿಲ್ಲ. ಏನೋ ಸರ್ಕಾರದ ಯೋಜನೆಯ ಅನುದಾನ ಬಂದರೇ ಅವರೇ ಸುಭದ್ರವಾದ ಮನೆಯನ್ನು ಕಟ್ಟುಕೊಡುತ್ತಾರೆ ಎನ್ನುವ ನಂಬಿಕೆಯಲ್ಲಿ ಪಾಪ ಅಜ್ಜಿ ಮನೆಗೆ ಮಾಡಿಸಬೇಕಾದ ಸಣ್ಣ ಪುಟ್ಟ ರಿಪೇರಿಯನ್ನು ಮಾಡಿಸಿಲ್ಲ. ಅದೇ ಹಣವಿದ್ದರೆ ಮುಂದೆ ಏನಕ್ಕಾದರೂ ಬರುತ್ತದೆಂದು ಸುಮ್ಮನಿದೆ. ಪಾಪ, ಏನು ಮಾಡೋದು, ಅದು ದುಡಿದ ಹಣವಲ್ಲವೇ? ಅಡಿಕೆ ಸುಲಿದು ಮೈ ಬೆವರಿಸಿ ಗಳಿಸಿದ ಹಣ. ಅದು ಸಮಾಜದಲ್ಲಿ ಭ್ರಷ್ಟಾಚಾರಿಗಳು ಗಳಿಸುವಂತ ನೀಚ ಮಾರ್ಗದ ಹಣವಲ್ಲ. ಹಾಗಾಗಿ ಅಜ್ಜಿ ಕೂಡಿಟ್ಟ ಬಿಡಿಗಾಸಿಗೆ ಲೆಕ್ಕಹಾಕುವುದು ಅನಿವಾರ್ಯ ತಾನೇ?
ಇತ್ತ ಮಳೆ ಇನ್ನೂ ಜೋರಾಗುತ್ತಿದೆ, ಆರ್ಭಟಕ್ಕೆ ಮನೆಯ ಮೇಲ್ಛಾವಣಿ ಸುಮಾರು ಭಾಗ ಹೋರಿ ಹೋಯ್ತು, ಈಗ ಅಜ್ಜಿ ಜೀವ ಉಳಿದರೆ ಸಾಕೆಂದು ಹೊರಗಡೆ ಓಡಿತು, ಒಂದೇ ಸಮನೆ ಹೆದರಿ ರಸ್ತೆಗೆ ಬಂದಿದ್ದರಿಂದ ಅತ್ತಲೇ ಮನೆಯೆಡೆಗೆ ಸಾಗಿ ಬರುತ್ತಿದ್ದ ಶಿವಣ್ಣರ ಬೈಕ್ಗೆ ಅಡ್ಡವಾಯಿತು, ಹೇಗೋ ಶಿವಣ್ಣ ಅಜ್ಜಿಯನ್ನು ಅಪಾಯದಿಂದ ಪಾರು ಮಾಡಿದರು. ಕೊನೆಗೆ ಪಕ್ಕದ ಮರ ಬುಡಕ್ಕೆ ಕರೆದೊಯ್ದರು, ಅಜ್ಜಿಯೊಂದಿಗೆ ಮಾತನಾಡುತ್ತಾ ಏನು ತುಸು ಮಳೆಗಾಲದ ಆರಂಭದಲ್ಲಿ ರಿಪೇರಿ ಮಾಡಿಸಿಕೊಳ್ಳಲು ಆಗಲಿಲ್ಲವೇ? ಏನು ಇನ್ನೂ ಗುಡಿಸಲಲ್ಲೇ ಇದ್ದೀಯ? ಸರ್ಕಾರದ ಯೋಜನೆಯೇ ಬಂದಿದೆ. ಉಪಯೋಗಿಸಿಕೋ ಅಂತಾ ನಿನಗೆ ಎಷ್ಟು ಬಾರಿ ಹೇಳಿಲ್ಲ, ಏನಾಗಿದೆ ಎಂದರು. ಅಜ್ಜಿ ಹಲವು ತಿಂಗಳಿಂದ ನಡೆದ ಘಟನೆಗಳನ್ನೆಲ್ಲಾ ಒಂದೇ ಉಸಿರಿನಲ್ಲಿ ಹೇಳುತ್ತಿದೆ..
ವಿಷಯ ಹೇಳಿ ಈಗ ಶಿವಣ್ಣನಿಗೂ ರೋಷ, ಅಯ್ಯೋ ನಾನು ಹುಟ್ಟಿದಾಗಿನಿಂದ ನೋಡುತ್ತಿರುವೆ ಈ ಜಾಗದಲ್ಲಿ ಇರುವುದು ನೀನೆ. ಯಾರು ಏನೇ ಹೇಳಲಿ, ನಾನೇ ನಗರಸಭೆಗೆ ಬರುತ್ತೇನೆ, ಎಲ್ಲವನ್ನು ವಿಚಾರಿಸುತ್ತೇನೆ ಎಂದರು. ಅಷ್ಟರಲ್ಲಿ ತನ್ನ ಮನೆಯ ಕೂಲಿಯಾಳುಗಳಿಗೆ ಫೋನ್ ಮಾಡಿ ಕರೆಸಿಕೊಂಡು ಅಜ್ಜಿಯ ಮನೆಯ ಮೇಲ್ಛಾವಣಿಗೆ ಹೊದಿಕೆ ಹೊದಿಸಿ ಬಿಗಿಗೊಳಿಸುವಂತೆ ಸೂಚಿಸಿದರು. ಅಲ್ಲಿವರೆಗೆ ಅಜ್ಜಿಯನ್ನು ಹತ್ತಿರದಲ್ಲೇ ಇರುವ ತಮ್ಮ ಮನೆಗೆ ಕರೆದೊಯ್ದರು. ವೆಂಕಮ್ಮಜ್ಜಿ ಆ ಭಾಗದಲ್ಲಿ ಎಲ್ಲರಿಗೂ ಒಂದು ಕಾಲದಲ್ಲಿ ಪರಿಚಿತ. ಆದರೆ ಈಗ ಅಕ್ಕ, ಪಕ್ಕದ ಮನೆಯವರು ಮನೆ ಮಾರಿ ಹೋಗಿದ್ದಾರೆ. ಎಲ್ಲರೂ ಹಣದಾಸೆಗೆ ಆ ಭಾಗದಲ್ಲಿ ಕಟ್ಟಲು ಉದ್ದೇಶಿಸಿರುವ ಬೃಹತ್ ಹೋಟೆಲ್ಗಾಗಿ ರಮೇಶಪ್ಪ ಮನೆಯನ್ನು ಎಲ್ಲರಿಂದ ಖರೀದಿಸಿದ್ದಾನೆ. ಅದೇ ಬೀದಿಯಲ್ಲಿ ಈಗ ವಾಸಕ್ಕೆ ಇರುವ ಒಂದೇ ಒಂದು ಮನೆಯೆಂದರೆ ಅದು ವೆಂಕಮ್ಮಜ್ಜಿಯದು ಮಾತ್ರ.
ಹಾಗಾಗಿ ವಿಧಿಯಿಲ್ಲದೇ ತುಸು ದೂರದಲ್ಲೇ ಇರುವ ತನ್ನ ಮನೆಗೆ ಶಿವಣ್ಣ ಕರೆದುಕೊಂಡು ಹೋದರು, ಅಲ್ಲಿಯೂ ಅಜ್ಜಿ ರೋದಿಸುತ್ತಿದೆ. ಅಳಬೇಡ, ನಿನ್ನ ಮನೆ ಸರಿಯಾಗುತ್ತದೆ, ನಿನ್ನ ಸಮಸ್ಯೆ ನಾನೇ ಪರಿಹರಿಸುವೆ, ಏನು ಆಗುವುದಿಲ್ಲ, ಯಾರೋ ನಿನಗೆ ಏನು ಗೊತ್ತಾಗಲ್ಲ ಅಂತಾ ಹೆದರಿಸಿದ್ದಾರೆ. ಆ ರಮೇಶಪ್ಪನ ದುಷ್ಕøತ್ಯದ ಬಗ್ಗೆ ಹಲವು ಬಾರಿ ನಾನು ಅನೇಕ ಕಚೇರಿಗಳ ಮೇಲಾಧಿಕಾರಿಗಳ ಗಮನಕ್ಕೂ ತಂದು ಆತನ ಬಗ್ಗೆ ಎಚ್ಚರಿಕೆವಹಿಸುವಂತೆ ಹೇಳಿರುವೆ. ಆದರೆ ಏನು ಮಾಡೋದು, ಸಾಮಾಜಿಕ ಕಾರ್ಯಕರ್ತ ಎನ್ನುವ ಸೋಗಿನಲ್ಲಿ ಆತ ಎಲ್ಲರಿಗೂ ಮೋಸಮಾಡುತ್ತಿದ್ದಾನೆ. ಬೇಕಾದಷ್ಟು ಹಣವನ್ನು ಹಲವು ಸಂಘ ಸಂಸ್ಥೆಗಳಿಗೂ ನೀಡುತ್ತಾನೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಸಾಧಿಸುತ್ತಾನೆ. ತನ್ನ ವಿರುದ್ಧ ಯಾರೇ ದನಿಯೆತ್ತಿದರೂ ಏನೋ ಮಾಡಿ ಅವರ ದನಿಯನ್ನು ಮಟ್ಟ ಹಾಕುತ್ತಾನೆ.. ಎಲ್ಲವೂ ಹಣದಿಂದಲೇ ಜಗವನ್ನು ಗೆಲ್ಲುತ್ತಾನೆ, ಮುಗ್ದರ ಎದೆಯ ಮೇಲೆ ನಿತ್ಯ ಒದೆಯುತ್ತಾನೆ.
ಇಷ್ಟರಲ್ಲಿ ಅಜ್ಜಿಗೆ ಅತ್ತ ಮಗ ಕರೆಮಾಡಿ ಮಾತನಾಡುತ್ತಾನೆ. ಅಜ್ಜಿ ನಡೆದ ಘಟನೆಯನ್ನು ವಿವರಿಸುತ್ತದೆ, ಆದರೆ ಆತನಿಗೆ ಊರಿಗೆ ಕೂಡಲೇ ಹೊರಟು ಬರುವಂತಿಲ್ಲ. ಹೋಟೆಲ್ನಲ್ಲಿ ಕೆಲಸ ನಿಲ್ಲಿಸಿ ಹೋಗಲು ಯಜಮಾನ ಬಿಡಲ್ಲ. ಆತನಿಗೂ ಒಂದೆಡೆ ಸಂಕಟ. ನೋವನ್ನೇ ಎದೆಯಲ್ಲಿ ಮಡುಗಟ್ಟಿಕೊಂಡು ಸಾಯುವ ಹಾದಿಯಾಗಿದೆ.
ಇತ್ತ ಮಾರನೇಯ ದಿವಸ ಅಜ್ಜಿಯನ್ನು ಕರೆದುಕೊಂಡು ಶಿವಣ್ಣ ಶರಧೀಪುರದ ನಗರಸಭೆಗೆ ಬರುತ್ತಾರೆ. ಇನ್ನೇನು ಈ ಅಧಿಕಾರಿಗಳನ್ನು ಮಾತನಾಡಿಸಿ ಉಪಯೋಗವಿಲ್ಲವೆಂದು ನೇರವಾಗಿ ಕಮೀಷನರ್ ಬಳಿ ಮಾತನಾಡಲು ಹೊರಡುತ್ತಾರೆ. ಶಿವಣ್ಣ ನಗರಸಭೆಗೆ ಬಾರದೇ ಅನೇಕ ದಿನಗಳಾಗಿದೆ, ನೊಡುತ್ತಾರೆ, ಕಮೀಷನರ್ ಚೇಂಬರ್ಗೆ ಸುತ್ತಲೂ ಕಪ್ಪು ಗ್ಲಾಸ್ನಿಂದ ಹೊದಿಸಲಾಗಿದೆ. ಒಳಗಡೆ ಏನು ನಡೆಯುತ್ತದೆ ಎಂದು ಕಾಣದಂತೆ ಮುಚ್ಚಲಾಗಿದೆ. ಲೇಡೀಸ್ ಬ್ಯೂಟಿ ಪಾರ್ಲರ್ಗೆ ಹೊದಿಸುವಂತೆ ಕಪ್ಪು ಬಣ್ಣದ ಗ್ಸಾಸ್ ನ ಹೊದಿಕೆಯಿದೆ, ಅದರ ಅಗತ್ಯವೇನೋ ಎನ್ನುತ್ತಾ ಶಿವಣ್ಣ ಚೀಟಿ ಬರೆದು ಅಟೆಂಡರ್ ಮೂಲಕ ಒಳಗಡೆ ಕಮೀಷನರ್ಗೆ ನೀಡಲು ಹೇಳುತ್ತಾನೆ..ಕೂಡಲೇ ಕಮೀಷನರ್ ಶಿವಣ್ಣನನ್ನು ಕರೆಯುತ್ತಾರೆ..
ಊರಿನಲ್ಲಿ ಶಿವಣ್ಣನ ಸಮಾಜಮುಖಿ ಕೆಲಸಕ್ಕೆ ಅಪಾರ ಪ್ರೀತಿ, ಹುಟ್ಟು ಹೋರಾಟಗಾರ. ಜನರ ಬಲವೂ ಇದೆ. ಹಾಗಾಗಿ ಅಧಿಕಾರಿಗಳಿಗೆ ಶಿವಣ್ಣ ಎಂದರೆ ಮೇಲ್ನೋಟಕ್ಕೆ ತೋರಿಕೆಯ ಪ್ರೀತಿಯಾದರೂ ಒಳಗಡೆ ಹೆದರಿಕೆಯಂತೂ ಇದೆ. ಶಿವಣ್ಣ ಒಳಗಡೆ ಹೋದವರೆ ಅಜ್ಜಿಗೆ ಯಾಕೆ ಫಾರಂ ನಂಬರ್3 ನೀಡುತ್ತಿಲ್ಲ, ಯಾಕೆ, ಏನು ಸಮಸ್ಯೆ ಎನ್ನುತ್ತಾ ಪ್ರಶ್ನಿಸುತ್ತಾರೆ. ಕೂಡಲೇ ಕಮೀಷನರ್ ಮತ್ತೆ ಮ್ಯಾನೇಜರ್ ಕರೆದು ಅಂದೇ ಸಮಸ್ಯೆ ಬಗೆಹರಿಸಲು ಹೇಳಿದ್ದರೂ ಏಕೆ ಬಗೆಹರಿಸಲಿಲ್ಲ ಎಂದು ರೇಗಾಡುತ್ತಾರೆ. ಆದರೆ ಶಿವಣ್ಣ ನೀವು ರೇಗಾಡಿ, ಬಿಡಿ ನಮಗೂ ಅದಕ್ಕೂ ಸಂಬಂಧವಿಲ್ಲ, ನಮಗೆ ಈ ಅಜ್ಜಿಯ ಕೆಲಸ ಇಂದೇ ಆಗಬೇಕು, ಅಲ್ಲಿಯವರೆಗೂ ನಾನಂತೂ ಇಲ್ಲಿಂದ ಕದಲುವುದಿಲ್ಲ, ನಿಮ್ಮೆದುರೇ ಕುತ್ತಿರುವೆ. ಬೇಗನೇ ಕೆಲಸಮಾಡಿಸಿ, ನಿಮ್ಮ ಕೆಲಸದ ವೇಗ ಎಷ್ಟಿದೆ ನಾನು ನೋಡುವೆ, ಒಂದು ಫಾರಂ ನಂಬರ್ 3 ನೀಡಲು ಎಷ್ಟು ಸಮಯವಾಗುತ್ತದೆ ನಾನು ತಿಳಿದುಕೊಳ್ಳಬೇಕು ತಾನೇ?
ಇತ್ತ ಸ್ವಲ್ಪ ಗಲಿಬಿಲಿಯಾದ ಕಮೀಷನರ್, ಒತ್ತಡದಲ್ಲಿ ಮತ್ತೆ ಆ ಸಿಬ್ಬಂದಿಗೆ ಫಾರಂ ನಂಬರ್ 3 ಬೇಗನೇ ನೀಡುವಂತೆ ಗದರುತ್ತಾರೆ. ಕೊನೆಗೂ ಆ ಕೇಸ್ ವರ್ಕರ್ ಬರುತ್ತಾನೆ, ಬಂದವನೇ ಅಜ್ಜಿಯ ಖಾತೆಯಾದ ಬಗ್ಗೆ ಎಲ್ಲಿಯೂ ನಮ್ಮ ಕಚೇರಿಯಲ್ಲಿ ಉಲ್ಲೇಖವಿಲ್ಲ. ನನಗೆ ಅಜ್ಜಿ ಯಾವುದೇ ದಾಖಲೆ ನೀಡಿಲ್ಲವೆನ್ನುತ್ತಾ, ಒಂದು ವೇಳೆ ಯಾರೇ ದಾಖಲೆ ನೀಡಿದರೂ ನಾವು ಎಂಡಾರ್ಸ್ಮೆಂಟ್ ನೀಡುತ್ತೇವೆ, ಅದೇನಾದ್ರೂ ಅಜ್ಜಿಯ ಬಳಿಯಿದೆಯೇ ಎನ್ನುತ್ತಾನೆ..
ಎಲ್ಲವೂ ಮೊದಲೇ ಅಂದಾಜಿಸಿದ್ದ ಶಿವಣ್ಣ ನುಡಿಯುತ್ತಾರೆ, ನೋಡಿ ಸರ್, ನೀವು ಹೀಗೆ ಹೇಳುತ್ತೀರಿ ಎನ್ನುವುದು ನನಗೆ ಮೊದಲೇ ಗೊತ್ತು. ಇಂತಹ ಪ್ರಕರಣ ನಾನೆಷ್ಟು ನೋಡಿಲ್ಲ. ಖಾತೆಯ ಲೆಕ್ಕ ಹುಡುಕುವು ನಿಮ್ಮ ಕೆಲಸ. ತೆರಿಗೆ ಹಣ ಕಟ್ಟಿಸಿಕೊಳ್ಳುವುದು ನಿಮ್ಮ ಕೆಲಸ. ಅದು ಬಿಟ್ಟು ಏನೋ ಮಾಡಲು ಹೋದರೆ ನಾನು ಅನಿವಾರ್ಯವಾಗಿ ನನ್ನ ಹಾದಿಯ ಹೋರಾಟ ಮಾಡಬೇಕಾಗುತ್ತದೆ. ನಾನು ನಿಮಗೆ ಇನ್ನೂ ಒಂದು ತಾಸು ಸಮಯ ಕೊಡುವೆ, ಇನ್ನೂ ಬೇಕೆಂದರೆ ಈ ದಿನವೇ ತೆಗೆದುಕೊಳ್ಳಿ ನನಗೆ ಫಾರಂ ನಂಬರ್ 3 ಈ ದಿನವೇ ಬೇಕು. ಇಲ್ಲದಿದ್ದರೆ ನಾನು ಮತ್ತೆ ಕೇಳುವುದಕ್ಕೆ ಬರುವುದಿಲ್ಲ, ಬೇರೆಯದೇ ದಾರಿಯನ್ನು ಕಾನೂನು ರೀತ್ಯ ನೋಡಿಕೊಳ್ಳುತ್ತೇನೆ, ಮನೆಗಳು ಮಂಜೂರಾದ ದಾಖಲೆಗಳ ಪಟ್ಟಿಯಿಲ್ಲವೇ ನಿಮ್ಮಲ್ಲಿ? ಇಲ್ಲದಿದ್ದರೆ ಹೇಳಿ, ಎಂದು ಗುಡುಗುತ್ತಾರೆ..
ಅಷ್ಟರದಲ್ಲಿ ಅದೇ ಸಮಯಕ್ಕೆ ನಗರಸಭೆಯ ಕೌನ್ಸಿಲರ್ ಶ್ರೀನಿವಾಸ್ ಶೆಣೈ ಬರುತ್ತಾರೆ. ಅಲ್ಲಿ ನಡೆಯುತ್ತಿರುವ ಘಟನೆಯ ವಿವರ ಅವರ ಗಮನಕ್ಕೂ ಬರುತ್ತದೆ, ಮೊದಲೇ ಶ್ರೀನಿವಾಸ್ ರವರು ಶರಧೀಪುರ ನಗರಸಭೆಯ ಮಾಜಿ ಅಧ್ಯಕ್ಷರು, ನಗರಸಭೆಯ ಕಾಯ್ದೆ ಕಾನೂನುಗಳನ್ನು ಚೆನ್ನಾಗಿ ಬಲ್ಲವರು, ಅವರೆದು ಯಾರೇ ಆಗಲಿ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ಕಷ್ಟ.
ವಿಧಿಯಿಲ್ಲದೇ ಕಮೀಷನರ್ ಖಾತೆಯ ಲೆಡ್ಜರ್ ಪುಸ್ತಕವನ್ನು ತರುವಂತೆ ಅಟೆಂಡರ್ಗೆ ಸೂಚಿಸುತ್ತಾರೆ. ಅವರೇ ಲೆಡ್ಜರ್ ಕೈಲಿಡಿದು ಅಕ್ಕಪಕ್ಕದ ಮನೆಯ ಖಾತೆಗಳನ್ನು ನೋಡುತ್ತಾ ಹೋಗುತ್ತಾರೆ. ಅಜ್ಜಿಯ ಬಳಿಯಿದ್ದ ಹಳೆ ಫಾರಂ ನಂಬರ್3 ಆಧಾರದಲ್ಲಿ ಪುಸ್ತಕ ತೆಗೆದು ನೋಡುತ್ತಾರೆ. ಆದರೆ ಆ ಲೆಡ್ಜರ್ ನಲ್ಲಿ ಆ ಪೇಜ್ ನಲ್ಲಿ ಅಜ್ಜಿಯ ಹೆಸರಿಗೆ ಯಾವುದೇ ಖಾತೆ ಇರುವುದೇ ಇಲ್ಲ. ಎಲ್ಲವೂ ಮೊದಲೇ ಅರಿತಿದ್ದ ಕೇಸ್ ವರ್ಕರ್ ಮತ್ತಷ್ಟು ಖುಷಿಯಿಂದ ನೊಡಿದಿರಾ ಸರ್, ನಾನು ಮೊದಲೇ ಹೇಳಿಲ್ಲವೇ, ಈ ಅಜ್ಜಿಯದು ನಕಲಿ ಖಾತೆ. ಇವರಿಗೆ 94ಸಿ ಯಲ್ಲಿ ಯಾವುದೇ ಖಾತೆಯು ಮಂಜೂರಾಗಿಲ್ಲ ಎಂದು ವ್ಯಂಗವಾಗಿ ನಗುತ್ತಾನೆ.
ಈ ದುಷ್ಟ ಕೇಸ್ ವರ್ಕರ್ ಮೊದಲೇ ಖಾತೆ ಪುಸ್ತಕದದಲ್ಲಿ ವೆಂಕಮ್ಮಜ್ಜಿಯ ಹೆಸರಿಗೆ ಇದ್ದ ಪುಟಗಳನ್ನು ಮೊದಲೇ ನಾಶಮಾಡಿರುತ್ತಾರೆ. ಅಂತಹುದೇ ಇನ್ನೊಂದು ಪುಸ್ತಕವನ್ನು ನಾನು ಬೇರೊಂದು ಮಾರ್ಗದಿಂದ ಖರೀದಿಸಿ ತಂದಿಟ್ಟುಕೊಂಡಿರುತ್ತಾನೆ. ಇದರಿಂದ ಆ ಪುಸ್ತಕಕ್ಕೆ ಅಗತ್ಯವಾದ ಪುಟಗಳನ್ನು ತೆಗೆದುಕೊಂಡು ಜೋಡಿಸಿ ಹೊಲೆಸಿಟ್ಟಿರುತ್ತಾನೆ. ಹೊಸ ಹಾಳೆಗಳಲ್ಲಿ ರಮೇಶಪ್ಪನಿಗೆ ಬೇಕಾದ ಸೋಮಪ್ಪ ಎನ್ನುವವರ ಹೆಸರಿಗೆ ಖಾತೆಯು ದಾಖಲಾಗಿರುತ್ತದೆ..ಜೊತೆಗೆ ಅಲ್ಲಿ ಕಮೀಷನರ್ ಸಹಿಯೂ ಇರುತ್ತದೆ, ಹಾಗಾಗಿ ಮೇಲ್ನೋಟಕ್ಕೆ ಯಾವುದೇ ಗೊಂದಲ ಕಾಡುವುದೇ ಇಲ್ಲ.
ಇತ್ತ ಶ್ರೀನಿವಾಸ್ ಅವರು ಆಯ್ತಪ್ಪಾ ಅದೂ ಒಂದೆಡೆ ಇರಲಿ, ಅಲ್ಲಿ ನಿನ್ನ ಕೈಲಿರುವ ಪುಸ್ತಕದಲ್ಲಿ ಖಾತೆ ಸಿಗದಿದ್ದರೇನಂತೆ, ಅತ್ತ ಮಂಜೂರಾತಿ ಪುಸ್ತಕ ಅಂತಾ ಒಂದು ಮಾಡಿದ್ದು ನೆನಪಿದೆ, 94ಸಿಯಲ್ಲಿ ಹಕ್ಕು ಪತ್ರ ನೀಡಿದವರ ಹೆಸರನ್ನು ಒಂದೆಡೆ ಬರೆದು ಇಟ್ಟಿದ್ದು ಇದೆ. ನಾವೇ ನಗರಸಭೆಯಿಂದ ಪಟ್ಟಿಮಾಡಿ ರಿಜಿಸ್ಟರ್ಗೆ ದಾಖಲಿಸಿ ಸರ್ಕಾರಕ್ಕೆ ಕಳುಹಿಸಿದ್ದೇವೆ. ಹೋಗಿ ರಿಜಿಸ್ಟರ್ ತೆಗೆದುಕೊಂಡು ಬರಲು ಹೇಳಿ ಎಂದು ಕಮೀಷನರ್ಗೆ ನುಡಿಯುತ್ತಾರೆ..
ಇತ್ತ ಕೇಸ್ ವರ್ಕರ್ ಕೊಂಚ ನಡುಗಿದಂತೆ ಕಾಣುತ್ತಾನೆ, ಆದರು ಏನೊಂದು ತೋರಿಸಿಕೊಳ್ಳದೇ ಮೌನಿಯಾಗಿ ನಗುತ್ತಾ ಸುಮ್ಮನಿರುತ್ತಾನೆ.
ಕೂಡಲೇ ಅಟೆಂಡರ್ ಮಂಜೂರಾತಿ ಪುಸ್ತಕದ ಚಾರ್ಜ್ ಹೊಂದಿದ ಸುಬ್ಬಮ್ಮನಿಗೆ ಪುಸ್ತಕ ತರುವಂತೆ ಹೇಳಿ ಕಳುಹಿಸುತ್ತಾರೆ. ಶ್ರೀನಿವಾಸ್ ಕೂಡ ಪುಸ್ತಕ ತರಿಸಿ ಎಂದು ಪಟ್ಟುಹಿಡಿದುಕೊಂಡು ಕೂತಿದ್ದಾರೆ. ಅಷ್ಟರಲ್ಲಿ ರಿಜಿಸ್ಟರ್ ಬರುತ್ತದೆ. ನೋಡುತ್ತಾ ಹೋಗುತ್ತಾರೆ. ಅಲ್ಲಿ ಅಕ್ಕಪಕ್ಕದ ಮನೆಯವರ ಹೆಸರು ಕಾಣುತ್ತದೆ. ನಂತರ ನೊಡುತ್ತಾ ಹೋದಂತೆ ಪುಸ್ತಕದಲ್ಲಿ ಹಲವರು ಫಲಾನುಭವಿಗಳ ಹೆಸರಿನ ಮೇಲೆ ವೈಟ್ನರ್ ಹಚ್ಚಿ ಮಸಿ ಎಳೆದು ಬೇರೆಯವರ ಹೆಸರು ಬರೆಯಲಾಗಿದೆ. ಈ ರೀತಿಯಲ್ಲಿ ಪುಸ್ತಕದಲ್ಲಿ ಹಲವು ಕಡೆ ಬದಲಾವಣೆ ಮಾಡಲಾಗಿದೆ.
ಇದನ್ನು ಎಲ್ಲರೂ ನೋಡುತ್ತಿದ್ದಾರೆ, ಈಗ ವಿಷಯದ ಅರಿವಾಗುತ್ತಿದ್ದಂತೆ ಶಿವಣ್ಣ ಕಮೀಷನರ್ರವರಲ್ಲಿ ಕೇಳುತ್ತಾರೆ, ಏನು ಸರ್, ನಿಮ್ಮ ಸರ್ಕಾರಿ ನಿಯಮದ ಪ್ರಕಾರ ಈ ರೀತಿಯಲ್ಲಿ ಫಲಾನುಭವಿಗಳ ಹೆಸರಿಗೆ ವೈಟ್ನರ್ನಿಂದ ಬಣ್ಣ ಹಚ್ಚಿ ಅಳಿಸಲು ಅವಕಾಶವಿದೆಯೇ?
ಇತ್ತ ಶ್ರೀನಿವಾಸ್ ಕೂಡ ದನಿಗೂಡಿಸುತ್ತಾರೆ. ನಾನು ಕೆಲವು ವರ್ಷಗಳ ಹಿಂದೆ ಈ ರಿಜಿಸ್ಟರ್ ನೋಡಿದ್ದೆ. ಆಗ ಈ ರೀತಿ ವೈಟ್ನರ್ನಿಂದ ಹೆಸರಿನ ಮೇಲೆ ಎಳೆದು ಬೇರೊಬ್ಬರ ಹೆಸರನ್ನು ಬರೆದಿರಲಿಲ್ಲ, ಒಂದು ವೇಳೆ ಈ ರೀತಿಯಾದರೆ ಇದು ಸರ್ಕಾರಿ ದಾಖಲೆಗಳ ನಾಶಮಾಡಿದಂತೆ, ವಿರೂಪಗೊಳಿಸಿದಂತೆ, ತಾವೂ ಕೂಡಲೇ ಇದು ಯಾರು ಮಾಡಿದ್ದು ಎಂದು ಪರಿಶೀಲಿಸಿ ಪೋಲಿಸ್ ಕಂಪ್ಲೇಂಟ್ ನೀಡಿ. ಮೂಲ ಫಲಾನುಭವಿ ಯಾರು ಎಂದು ಈಗ ತಿಳಿಯದಂತಾಗಿದೆ, ಇದೆಂತಹ ಮೋಸ, ಈ ರೀತಿ ದುಷ್ಟ ಕೆಲಸ ಹೇಗಾಯಿತು ಎಂದು ಆವೇಶದಿಂದ ಕೇಳುತ್ತಿದ್ದಾರೆ, ಜೊತೆಗೆ ಶಿವಣ್ಣ ಕೂಡ ಆಶ್ಚರ್ಯ ಚಕಿತರಾಗಿ ನೋಡುತ್ತಿದ್ದಾರೆ.
ಇತ್ತ ತಡಬಡಿಸುತ್ತಾ ಕೇಸ್ ವರ್ಕರ್ ಏನೋ ಆಲೋಚಿಸುತ್ತಾ ಇದ್ದಂತೆ, ಮತ್ತೆ ಶ್ರೀನಿವಾಸ್ ನುಡಿಯುತ್ತಾರೆ, ನೋಡಿ ಸರ್ ನೀವು ಈ ದಿನವೇ ಈ ವಿಚಾರವಾಗಿ ಪೋಲಿಸರಿಗೆ ದೂರು ನೀಡಿ, ಇಲ್ಲದೇ ಹೋದಲ್ಲಿ ನಾನೇ ಸಾರ್ವಜನಿಕನಾಗಿ ನನ್ನ ಗಮನಕ್ಕೂ ಬಂದಿದೆಯೆಂದು ನಿನ್ನ ಕಚೇರಿಯಲ್ಲಿ ಈ ರೀತಿ ನಡೆದಿದೆ ಎಂದು ಸೂಕ್ತ ಪ್ರಾಧಿಕಾರಕ್ಕೆ ದೂರು ನೀಡುವುದು ಅನಿವಾರ್ಯವಾಗುತ್ತದೆ, ಏನು ಮಾಡುತ್ತೀರಿ, ನೀವು ಮಾಡುತ್ತೀರೋ? ಇಲ್ಲ ನಾನೇ ಮಾಡಬೇಕೋ? ಎನ್ನುತ್ತಾರೆ. ಜೊತೆಗೆ ಶಿವಣ್ಣ ಕೂಡ ದನಿಗೂಡಿಸುತ್ತಾನೆ.
ಈಗ ಕೇಸ್ ವರ್ಕರ್ಗೆ ಮೆತ್ತನೆ ಮೈ ಬೆವರುತ್ತಿದೆ, ಒಂದೆಡೆ ಖಾತೆಯ ಪುಸ್ತಕದ ಹಾಳೆಗಳನ್ನು ಎತ್ತಿ ನಾಶಗೊಳಿಸಿ ಅಂತಹುದೇ ಇನ್ನೊಂದು ಪುಸ್ತಕದಿಂದ ಅದೇ ಸಂಖ್ಯೆ ಪುಟಗಳನ್ನು ಆಯ್ದು ಜೋಡಿಸಿ ಬೇರೆಯವರ ಹೆಸರಿಗೆ ಖಾತೆ ಬರೆದು ಆಗ ಇದ್ದ ಕಮಿಷನರ್ಬಳಿ ಹೋಗಿ ಸಹಿ ಬಿಟ್ಟು ಹೋಗಿದೆ ಎಂದು ಅವರಿಗೆ ಸುಳ್ಳು ಹೇಳಿ ಈತನೇ ಅವರ ಸಹಿ ಮಾಡಿಸಿದ್ದಾನೆ, ಆದರೆ ಇತ್ತ ಮಂಜೂರಾತಿ ಪುಸ್ತಕದಲ್ಲಿ ಹೆಸರು ತಿದ್ದುಪಡಿಮಾಡಿದ್ದು ವೈಟ್ನರ್ ಹಚ್ಚಿದ್ದು ಈಗ ಎಲ್ಲರಿಗೂ ತಿಳಿದಿದೆ. ಆ ಸುಬ್ಬಮ್ಮನಿಗೆ ಪುಸ್ತಕ ತರಬೇಡ ಎಂದು ಹೇಳೋಣವೆಂದರೆ ಇತ್ತ ಹೊರಹೋಗದಂತೆ ಕಮೀಷನರ್ ಅಲ್ಲಿಯೇ ನಿಲ್ಲಿಸಿಕೊಂಡಿದ್ದಾರೆ. ಹಾಗಾಗಿ ಮುಂದೆ ಏನು ಮಾಡಬೇಕು ಎಂದುಕೊಂಡಿದ್ದನೋ ಅದೆಲ್ಲವೂ ಗತಿಸಿಹೋಗಿದೆ..
ಈಗ ಮತ್ತೆ ಶ್ರೀನಿವಾಸ್ ನುಡಿಯುತ್ತಾರೆ, ನೋಡಿ, ಕಮೀಷನರ್ ಅವರೇ, ನಿಮ್ಮ ಕಚೇರಿಯ ರಿಜಿಸ್ಟರ್ ತಿದ್ದುಪಡಿಯಾಗಿದೆ, ಕೂಡಲೇ ಸರ್ಕಾರದಿಂದ ನಿಮ್ಮ ಕಚೇರಿಗೆ ಬಂದ ಮಂಜೂರಾತಿಯ ಪಟ್ಟಿ ಇದೆ, ಅದನ್ನು ಪರಿಶೀಲಿಸಿ ನೋಡಿ ಎನ್ನುತ್ತಾರೆ.
ಕಮಿಷನರ್ ಪಟ್ಟಿಯನ್ನು ತರಲು ಹೇಳುತ್ತಾರೆ, ಆದರೆ ಕಚೇರಿಯಲ್ಲಿ ಆ ಪಟ್ಟಿ ಯಾರ ಬಳಿಯೂ ಇಲ್ಲವೆನ್ನುತ್ತಾರೆ. ಕೂಡಲೇ ಕುಪಿತರಾದ ಶ್ರೀನಿವಾಸ್ ಏನು ಸರ್ಕಾರದ ಮಂಜೂರಾತಿ ಪಟ್ಟಿಯೂ ಇಲ್ಲವೇ, ಅದೂ ಕಳೆದು ಹೋಗಿದೆಯೇ? ಇಲ್ಲವೇ ನೀವೇನು ನಾಟಕವಾಡುತ್ತೀರೋ, ತುಸುವೂ ಜವಾಬ್ದಾರಿ ಬೇಡವೇ? ಇದೂ ಕೂಡ ಕ್ರಿಮಿನಲ್ ಅಪರಾದ. ಕೂಡಲೇ 24 ತಾಸಿನಲ್ಲಿ ಇವರ ಮೇಲೆ ಕ್ರಮವಹಿಸಿ ಇಲ್ಲದೇ ಹೋದಲ್ಲಿ ನಾನು ಮುಂದಿನ ಮಾಸಿಕ ಸಭೆಯಲ್ಲಿ ಎಲ್ಲವನ್ನು ಕೇಳುವೆ ನೆನಪಿರಲಿ ಎಂದು ಕೋಪದಿಂದ ಹೊರನಡೆಯುತ್ತಾರೆ..
ಇತ್ತ ಕಮೀಷನರ್ ಕೂಡ, ಈ ಶರಧೀಪುರ ನಗರಸಭೆಗೆ ಹೊಸದಾಗಿ ಬಂದಿದ್ದಾರೆ. ಅವರಿಗೆ ಯಾವುದೂ ಅರ್ಥವಾಗುತ್ತಿಲ್ಲ, ಕೂಡಲೇ ಮ್ಯಾನೇಜರ್ ಕರೆದು ತಮ್ಮ ಕೊಠಡಿಗೆ ಸತ್ತಲೂ ಲೇಡೀಸ್ ಬ್ಯೂಟಿ ಪಾರ್ಲರ್ ಹೊಚ್ಚುವಂತೆ ಹೊದಿಕೆಯಾಗಿ ಹೊತ್ತ ಬ್ಲಾಕ್ ಪೇಪರ್ ಕೋಟೆಡ್ ಗ್ಲಾಸ್ನ್ನು ತೆರೆದು ಬಿಳಿ ಗ್ಲಾಸ್ ಅಳವಡಿಸುವಂತೆ ಆದೇಶಿಸುತ್ತಾರೆ.
ಇತ್ತ ಶಿವಣ್ಣ ಮತ್ತೆ ಕೇಳುತ್ತಾರೆ, ಏನು ಸರ್ ಈಗ ಹೇಳಿ ವೆಂಕಮ್ಮಜ್ಜಿಯ ಖಾತೆಯ ಫಾರಂ ನಂಬರ್ 3 ಎಷ್ಟೊತ್ತಿಗೆ ದೊರೆಯುತ್ತದೆ?
ಕಮೀಷನರ್ ತುಸು ಸಮಯದ ನಂತರ ಏನೋ ಸಮಾಧಾನ ಮಾಡಿ ಶಿವಣ್ಣನಿಗೆ ಒಂದೆರಡು ದಿನ ಸಮಯ ಕೇಳಿ ಹೊರ ಕಳುಹಿಸುತ್ತಾರೆ. ಇತ್ತ ಹೊರಗಡೆ ಶಿವಣ್ಣ ಬರುವುದನ್ನೇ ಎದುರು ನೋಡುತ್ತಿದ್ದ ಆ ಕಂದಾಯಾಧಿಕರಿಯ ಆಪ್ತ ಇನ್ನೊಬ್ಬ ಆತನ ಬಹುಕೃತ ವಿಕೃತ ಕೆಲಸದ ಪೋಷಕ ಅವನ ಟೀಮ್ ಲೀಡರ್ ಶಿವಣ್ಣನೊಂದಿಗೆ ತುಸು ಮಾತನಾಡಬೇಕು ಎನ್ನುತ್ತಾನೆ..ಶಿವಣ್ಣನಿಗೆ ಎಲ್ಲವೂ ಅರಿವಾಗುತ್ತದೆ, ಆಗ ಶಿವಣ್ಣ ಟೀಮ್ ಲೀಡರ್ ಹಣದಾಸೆಗೆ ಬೆಂಡಾಗದೇ ನುಡಿಯುತ್ತಾನೆ, ಬೆಕ್ಕು ಹುಲಿಯಂತೇ ಇರುತ್ತದೆ, ಆದರೆ ಅದು ಹುಲಿಯಲ್ಲ, ಹುಲಿಯು ಹುಲಿಯೇ, ಬೆಕ್ಕು ಬೆಕ್ಕೇ!
ಎಂದು ಯಾವುದೇ ಆಮಿಷಕ್ಕೂ ಬೆಂಡಾಗದೇ ಶಿವಣ್ಣ ಸುಮ್ಮನೇ ಅಜ್ಜಿಯನ್ನು ತನ್ನ ಬೈಕ್ನಲ್ಲಿ ಕೂರಿಸಿಕೊಂಡು ಶರಧಿಪುರ ನಗರಸಭೆಯಿಂದ ಹೊರನಡೆಯುತ್ತಾನೆ.
ಇತ್ತ ಟೀಮ್ ಲೀಡರ್ ನುಡಿಯುತ್ತಾನೆ, ಆರು ತಿಂಗಳ ಹಿಂದೆ ಟ್ಯಾಂಕರ್ ನೀರು ಸರಬರಾಜು ನಕಲಿ ಬಿಲ್ಲಿಗೆ ಸಹಿ ಹಾಕಲು ನಿರಾಕರಿಸಿದ ರಮೇಶ್ ಎನ್ನುವ ಇಂಜೀನಿಯರ್ ಮೇಲೆ ಯಾವುದೋ ಮರಳು ಲಾರಿ ಹೊತ್ತಿಸಿ ಅಪಘಾತವಾದಂತೆ ಬಣ್ಣಿಸಿ ಕೊಲೆಗೈದಂತೆ ಈ ಶಿವಣ್ಣನನ್ನು ಮುಗಿಸುವುದು ಉತ್ತಮವೆಂದು ನಿರ್ಧರಿಸುತ್ತಾ..ಶಿವಣ್ಣನಿಗೆ ಮಹೂರ್ತ ಫಿಕ್ಸ್ ಮಾಡಲು ಇತ್ತ ದುಷ್ಟರೆಲ್ಲರೂ ಅಣಿಯಾಗುತ್ತಾರೆ..
ಭಾಗ-4
ಈಗ ಶರಧೀಪುರ ನಗರಸಭೆಯಲ್ಲಿನ ಸಿಬ್ಬಂದಿಗಳಿಗೆ ಈಗ ಶಿವಣ್ಣನೇ ವಿಲನ್ ಆಗಿದ್ದಾನೆ. ಒಂದೆಡೆ ಶಿವಣ್ಣನನ್ನು ಕೊಲೆ ಮಾಡಲು ಮಹೂರ್ತ ಫಿಕ್ಸ್ ಮಾಡಿ ಕುಳಿತಿದ್ದಾರೆ. ಆದರೆ ಆತ ಮಾತ್ರ ಇವರು ಅಂದುಕೊಂಡಂತೆ ಮರಳು ಲಾರಿ ಹತ್ತಿಸಿ ಬಲಿ ಹಾಕಲು ಆತ ಸಿಗುತ್ತಿಲ್ಲ. ಏನೋ ಊರ ದೇವತೆಯ ದಯೆಯೋ ಏನೋ. ಶಿವಣ್ಣ ಗದ್ದೆಯಲ್ಲಿ ಕೆಲಸಮಾಡುವಾಗ ಸಲಾಕೆಯಿಂದ ಕಾಲಿಗೆ ಗಾಯಮಾಡಿಕೊಂಡಿದ್ದಾನೆ, ಹಾಗಾಗಿ ಕಾಲಿನ ಗಾಯ ಮಾಯುವವರೆಗೆ ಬೈಕಿನಲ್ಲಿ ಓಡಾಟಮಾಡಲಾಗುತ್ತಿಲ್ಲ. ಹಾಗಾಗಿ ಆತನೇನಿದ್ದರೂ ಈಗ ಬಸ್ನಲ್ಲೇ ಓಡಾಡುತ್ತಿದ್ದಾನೆ. ಈಗ ಈತನ ಮೇಲೆ ಲಾರಿ ಹತ್ತಿಸಿ ಆಕ್ಸಿಡೆಂಟ್ ರೀತಿಯಲ್ಲಿ ಕೊಲ್ಲುವುದು ದುಷ್ಟರಿಗೆ ಈಗ ಕಷ್ಟವಾಗಿದೆ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲವೆಂದು ಗೋಗರೆಯುತ್ತಾ ಕೂತಿದ್ದಾರೆ.
ಇತ್ತ ನಗರಸಭೆಯಲ್ಲಿ ಗೌರಮ್ಮನ ಬುದ್ಧಿವಂತಿಕೆಯ ದರ್ಬಾರ್ ಈಗ ಶುರುವಾಗಿದೆ, ನಗರಸಭೆಯಲ್ಲಿ ಏನೇ ಕಂದಾಯ ವಿಭಾಗದ ದಾಖಲೆಗಳ ಸಮಸ್ಯೆ ಎದುರಾದರೆ ಈಕೆಯೇ ಪರಿಹಾರಕ್ಕೆ ದಿವ್ಯ ಔಷಧಿ. ಈಗ ಎಲ್ಲವೂ ಯೋಜಿಸಿ ಉಪಾಯ ಹೇಳಿಕೊಡುತ್ತಾಳೆ. ಇವಳ ಅಣತಿಯಂತೆ ಆ ಕೇಸ್ವರ್ಕರ್ಗೆ ರಜೆ ಹೋಗಲು ಸೂಚಿಸುತ್ತಾಳೆ, ಅದರಂತೆ ಆತನು ರಜೆ ಮೇಲೆ ತೆರಳುತ್ತಾನೆ.
ಇತ್ತ ಕಾಲು ನೋವು ಮಾಡಿಕೊಂಡ ಶಿವಣ್ಣ ಈಗ ನಗರಸಭೆಗೆ ಹೋಗುವುದು ಕಷ್ಟವಾಗಿದೆ. ಹಾಗಾಗಿ ಆತ ಅಂದುಕೊಂಡಂತೆ ಸರಿಯಾದ ಸಮಯದಲ್ಲಿ ಕಚೇರಿಗೆ ಭೇಟಿ ನೀಡಲು ಆಗಿಲ್ಲ. ಮನೆಯಲ್ಲಿಯೇ ಕುಳಿತು ನಗರಸಭೆಗೆ ಫೋನ್ ಮಾಡಿ ವೆಂಕಮ್ಮಜ್ಜಿಯ ಖಾತೆ ಬಗ್ಗೆ ವಿಚಾರಿಸುತ್ತಾನೆ. ಅತ್ತ ಕೇಸ್ ವರ್ಕರ್ ರಜೆ ಮೇಲೆ ಹೋಗಿದ್ದಾನೆ, ಆತನ ತಂದೆಗೆ ಹುಷಾರಿಲ್ಲವಂತೆ, ಆತ ರಜೆ ಮುಗಿಸಿ ಕೆಲಸಕ್ಕೆ ಬಂದೊಡನೆ ನಿಮ್ಮ ಕೆಲಸವಾಗುತ್ತದೆ ಎಂದು ಉತ್ತರ ಸಿಗುತ್ತದೆ.
ಹೇಗೋ ನೋವು ತಡೆದುಕೊಂಡೇ ಶಿವಣ್ಣ ಕೊನೆಗೂ ಒಂದು ದಿನ ಶರಧೀಪುರ ನಗರಸಭೆಗೆ ಬರುತ್ತಾನೆ. ಈಗ ಕಚೇರಿಯಲ್ಲಿ ಕಮೀಷನರ್ ಇಲ್ಲ. ಮ್ಯಾನೇಜರ್ ಬಳಿ ಕುಳಿತುಕೊಂಡು ಕೇಳುತ್ತಾರೆ. ಸ್ವಾಮಿ ನಾನು ವೆಂಕಮ್ಮಜ್ಜಿಯ ಖಾತೆಯ ದಾಖಲೆ ಕೇಳಿ ಹೋಗಿ ಸುಮಾರು ಹದಿನೈದು ದಿನವಾಯ್ತು, ಈಗ ಏನಾಗಿದೆ, ಕೆಲಸವಾಗಿದೆಯಾ ಎನ್ನುತ್ತಾನೆ. ಆಗ ಮ್ಯಾನೇಜರ್ ಇಲ್ಲ, ಕೇಸವರ್ಕರ್ ರಜೆ ಮೇಲೆ ಹೋಗಿದ್ದಾನೆ, ಆತನ ತಂದೆಗೆ ಹುಷಾರಿಲ್ಲ, ಆತ ಇನ್ನೂ ಕೆಲಸಕ್ಕೆ ಬಂದಿಲ್ಲ, ಹಾಗಾಗಿ ನಿಮ್ಮ ಕೆಲಸವಾಗಿಲ್ಲ, ಆತನೇ ಬರಬೇಕು ಎನ್ನುತ್ತಾರೆ. ಬೇಸರದಲ್ಲಿ ಜೊತೆಗೆ ಅಷ್ಟೇ ಕೋಪದಲ್ಲಿ ಶಿವಣ್ಣ ಕೇಳುತ್ತಾನೆ, ಏನ್ರಿ ನಿಮ್ಮ ಕಚೇರಿಯಲ್ಲಿ ಆತ ತಿಂಗಳುಗಟ್ಟಲೇ ರಜೆ ಹೋದರೆ ಅದರ ಚಾರ್ಜ್ ಬೇರೆಯವರಿಗೆ ನೀಡಿ ಹೋಗುವುದಿಲ್ಲವೇ? ಆತ ಬರುವವರೆಗೆ ಆತನ ಕೆಲಸವನ್ನು ಬೇರೆ ಯಾರು ಮಾಡುವುದಿಲ್ಲವೇ? ಇದಕ್ಕೆ ನಿಮ್ಮ ನಿಯಮವೇನು ಹೇಳುತ್ತದೆ? ನಮಗೆ ಸುಮ್ಮನೇ ಏನೇನೋ ಹೇಳಿ ಆಟ ಆಡಿಸಬೇಡಿ, ನೀವು ಹೀಗೆ ಮಾಡಿದರೆ ನಾನು ಇಂದೇ ನೇರವಾಗಿ ಮಲ್ಲಿಗೆಪುರಕ್ಕೆ ಹೋಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುವೆ, ಎಂದು ಗುಡುಗುತ್ತಾರೆ.
ಆಗ ಕೊಂಚ ಗಲಿಬಲಿಗೊಂಡ ಮ್ಯಾನೇಜರ್ ಉತ್ತರಿಸುತ್ತಾರೆ, ನೋಡಿ ನಮ್ಮಲ್ಲಿ ಅದೇ ಕೇಸ್ ವರ್ಕರ್ ಗೇ ಗೊತ್ತಾಗೋದು, ಆತನೇ ಬಹಳ ಬುದ್ಧಿವಂತ, ಬೇರೆಯವರಿಗೆ ಹುಡುಕುವುದು ಕಷ್ಟ ಎಂದು ಸಮರ್ಥಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಆಗ ಶಿವಣ್ಣ ಕೇಳುತ್ತಾರೆ, ಏನ್ರಿ ಹಾಗಾದರೆ ಒಂದು ವೇಳೆ ಆತ ನಿವೃತ್ತಿಯಾದರೆ ಇಲ್ಲವೇ ಬೇರೆಡೆಗೆ ವರ್ಗಾವಣೆಯಾದರೆ ಆತನ ಕೆಲಸ ಯಾರು ಮಾಡುತ್ತಾರೆ? ಆಗ ಏನು ನಿಮ್ಮ ಕಚೇರಿಯ ಬಾಗಿಲು ಹಾಕುತ್ತೀರ? ಏನಿದು ಆತನೇ ಬೇಕು ಎನ್ನುವುದಕ್ಕೆ ನಿಮಗೆ ತುಸುವೂ ಆಲೋಚನೆ ಬೇಡವೇ? ಸಾರ್ವಜನಿಕರಿಗೆ ಎಷ್ಟೆಲ್ಲಾ ತೊಂದರೆಯಾಗುತ್ತದೆ, ದಯವಿಟ್ಟು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಿ, ಆತನೇ ಬರಬೇಕು ಎನ್ನುವ ಧೋರಣೆಯನ್ನು ಕೈಬಿಟ್ಟು, ವಾಸ್ತವವತೆಯ ಜೊತೆಗೆ ವರ್ತಿಸಿ ಎನ್ನುತ್ತಾನೆ.
ಅಷ್ಟರಲ್ಲೇ ಪಕ್ಕದಲ್ಲೇ ನಿಂತಿದ್ದ ಇನ್ನೊಬ್ಬರು ವಯೋವೃದ್ಧ ವ್ಯಕ್ತಿಯು ಗೊಣಗುತ್ತಾರೆ, ಅಯ್ಯೋ ಸ್ವಾಮಿ, ಆ ಕೇಸ್ ವರ್ಕರ್ ನೌಕರಿಗೆ ಸೇರಿದ್ದೇ ಇದೇ ಊರಲ್ಲಿ, ಇಲ್ಲಿಯೇ 25 ವರ್ಷ ಸೇವೆ ಸಲ್ಲಿಸಿದ್ದಾನೆ. ಆತ ಎಷ್ಟೇ ಕಡೆ ವರ್ಗವಾದರೂ ಹೋಗಲ್ಲ, ಏನೇನೋ ಆಮಿಷದಲ್ಲಿ ಇದೇ ಊರಲ್ಲೇ ಇದ್ದಾನೆ, ಆತ ಜನರಿಗೆ ನೀಡುವ ತೊಂದರೆ ಒಂದೆರಡಲ್ಲ, ಆತನ ಮೇಲೆ ಎಷ್ಟೇ ದೂರು ನೀಡಿದರು ಆತ ಹೇಗೋ ಬಚಾವಾಗುತ್ತಾನೆ ಎನ್ನುತ್ತಾ ನೋವಿನ ದನಿಯಲ್ಲಿ ನುಡಿಯುತ್ತಾರೆ. ಅವರ ಮಾತು ಕೇಳಿದ ಶಿವಣ್ಣ ಕೂಡಲೇ ರೋಮಾಂಚಿತನಾಗಿ ಕೇಳುತ್ತಾನೆ. ಏನ್ರೀ ಮ್ಯಾನೇಜರ್ರವರೇ ಆ ಕೇಸ್ ವರ್ಕರ್ ಇಲ್ಲಿಯೇ 25 ವರ್ಷದಿಂದಲೇ ಇದ್ದಾನೇ? ಅದೂ ಇದೇ ಊರಿನವನೇ? ಎಂತಹ ದುರ್ದೈವ. ಇದೇ ಊರಿನವನಾದ್ರೆ ತಂದೆಗೆ ಹುಷಾರಿಲ್ಲ ಅಂತ ಬೇರೆ ಇನ್ಯಾವ ಊರಿಗೆ ರಜೆ ಮೇಲೆ ಹೋಗಿದ್ದಾನೆ? ನನಗೇನೋ ಅನುಮಾನ, ಇವರಿಗೆಲ್ಲಾ ವರ್ಗಾವಣೆ ಅಂತಾ ಸರಿಯಾದ ಸಮಯದಲ್ಲಿ ಆಗಿದ್ದರೆ ಯಾಕೆ ಈ ರೀತಿ ಭ್ರಷ್ಟಾಚಾರವಾಗುತ್ತೆ, ಇದೆಲ್ಲಾ ಜನ ಸಾಮಾನ್ಯರಾದ ನಮ್ಮ ಕರ್ಮ. ಏನೇ ಆಗಲಿ ನನಗೆ ಈಗ ವೆಂಕಮ್ಮಜ್ಜಿಯ ಮನೆಯ ಫಾರಂ ನಂಬರ್ 3 ನೀಡುತ್ತೀರೋ ಇಲ್ಲವೇ? ನಾನು ನೇರವಾಗಿ ಜಿಲ್ಲಾಧಿಕಾರಿಗಳ ಬಳಿ ಹೋಗಬೇಕೋ ಎಂದು ಕೇಳುತ್ತಾರೆ.
ಈಗ ಮತ್ತೆ ಧರ್ಮ ಸಂಕಟಕ್ಕೆ ಸಿಲುಕಿದ ಮ್ಯಾನೇಜರ್ ಏನೇನೋ ಹೇಳಿಕೊಂಡು ಒಂದೆರಡು ದಿವಸ ಸಮಯ ನೀಡುವಂತೆ ಗೋಗರೆಯುತ್ತಾರೆ. ಏನೂ ನುಡಿಯದೆ ವಿಧಿಯಿಲ್ಲದೇ ಶಿವಣ್ಣ ಹೊರನಡೆಯುತ್ತಾನೆ. ಜೊತೆಗೆ ಆ ವ್ಯಕ್ತಿಯು ಶಿವಣ್ಣನ ಹಿಂದೆಯೇ ಹೊರಬರುತ್ತಾನೆ. ಕುತೂಹಲಕ್ಕೆ ಆತನೊಂದಿಗೆ ಶಿವಣ್ಣ ಮಾತನಾಡುತ್ತಾ ಏನು ನಿಮ್ಮ ಸಮಸ್ಯೆ ಎಂದು ಕೇಳುತ್ತಾರೆ.
ಆ ವ್ಯಕ್ತಿ ಮೊದಲು ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ, ನನ್ನ ಹೆಸರು ಸಂಕರಪ್ಪ, ನಾನು ನಿವೃತ್ತ ಶಿಕ್ಷಕ, ಈಗ ನಾನು ಸಿರಗೆಪುರದಲ್ಲಿ ವಾಸವಿರುವೆ ಎಂದರು. ಕೂಡಲೇ ಶಿವಣ್ಣ ಸಹ ತನ್ನ ಪರಿಚಯ ಮಾಡಿಕೊಂಡರು. ನಾನು ಶಿವಣ್ಣ ಅಂತಾ, ಜ್ಞಾನಕ್ಕೆ ಅಂತಾ ಎಂ ಎ ವರೆಗೆ ಓದಿದೆ. ನಂತರ ನನಗೆ ಕೃಷಿಯೇ ಹಿತವೆನಿಸಿ ನಮ್ಮ ಕುಟುಂಬದ ಜಮೀನನ್ನು ನಾನೇ ವ್ಯವಸಾಯಮಾಡುವೆ, ಬಿಡುವಾದಾಗ ಸಮಾಜಸೇವೆಯನ್ನು ಮಾಡುವೆ ಎಂದು ಪರಿಚಯಿಸಿಕೊಂಡರು.
ನಂತರ ಸಂಕರಪ್ಪ ತಮ್ಮ ಅಹವಾಲನ್ನು ಶಿವಣ್ಣನ ಬಳಿ ಹೇಳುತ್ತಾ ಹೋದರು, ನಾನು ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ವರ್ಗಾವಣೆಯ ಮೇಲೆ ಒಮ್ಮೆ ಈ ಊರಿಗೂ ಬಂದಿದ್ದೆ. ಇಲ್ಲಿಯೂ ಅನೇಕ ವರ್ಷ ಕೆಲಸಮಾಡಿದ್ದೆ. ಇಲ್ಲಿಯ ವಾತಾವರಣ, ಸುಂದರ ಪ್ರಕೃತಿಯ ಹಿತಾಧಾರೆಗೆ ಮನಸೋತು ನಾನು ಮತ್ತು ಕುಟುಂಬದವರು ಇಲ್ಲಿಯೇ ನೆಲೆಸಬೇಕೆಂದು ನೀರ್ಮಾನಿಸಿದೆವು. ನಂತರ ಇದೇ ಊರಿನಲ್ಲಿ ನಿವೇಶನವನ್ನು ಖರೀದಿಸಿದೆವು. ನಂತರ ಅನೇಕ ಊರಿಗೆ ವರ್ಗಾವಣೆಯಾಯಿತು. ಈಗ ನಿವೃತ್ತಿಯ ನಂತರ ಮನೆಕಟ್ಟಿಕೊಳ್ಳಬೇಕೆಂದು ಈ ಊರಿಗೆ ಬಂದೆ, ನೇರವಾಗಿ ಲೇ ಔಟ್ ಬಳಿ ಹೋದೆ, ನಾನು ಖರೀದಿಸಿದ ನಿವೇಶದಲ್ಲಿ ಯಾರೋ ಮನೆ ಕಟ್ಟಿದ್ದರು, ಅವರಲ್ಲಿ ವಿಚಾರಿಸಿದೆ, ಅವರು ತಮ್ಮ ದಾಖಲೆ ಸರಿಯಿದೆ, ಎಂದರು. ಇದರಿಂದ ಹೌಹಾರಿದ ನಾನು ಒಮ್ಮೆ ಈ ನಗರಸಭೆಗೆ ಭೇಟಿ ನೀಡಿ ನನ್ನ ಅಹವಾಲನ್ನು ಹೇಳಿಕೊಂಡೆ. ಅವರು ಮೊದಲು ಸಹಕರಿಸುವುದಾಗಿ ಹೇಳಿದರು. ಹೀಗೆ ಸಾಗುತ್ತಾ ಒಂದು ತಿಂಗಳೇ ಕಳೆಯಿತು. ನಂತರ ಇದೇ ಕೇಸ್ ವರ್ಕರ್ ನಿಮ್ಮ ಖಾತೆಯ ಸಂಖ್ಯೆ ಇಲ್ಲಿ ಪುಸ್ತಕದಲ್ಲಿ ಇಲ್ಲ, ನಿಮ್ಮಲ್ಲಿರುವ ಖಾತೆಯ ನಕಲು ಸರಿಯಿಲ್ಲ, ಏನೇ ಆಗಲಿ ನಿಮ್ಮ ಲೇಔಟ್ ಓನರ್ನನ್ನು ಕೇಳಿ ಎನ್ನುತ್ತಾ ಸಮಯ ದೂಡಿದ ಎಂದು ರೋದನೆಯಲ್ಲಿ ನುಡಿದರು.
ವಿಷಯ ಕೇಳಿ ವ್ಯಥೆಯಲ್ಲಿ ಶಿವಣ್ಣ ಕೇಳಿದರು, ಆಗ ನೀವೇನು ಮಾಡಿದಿರಿ ಸಂಕರಪ್ಪ?
ಕೆಲವು ದಿನಗಳ ನಂತರ ವಿಧಿಯಿಲ್ಲದೇ ನಾನು ಮೇಲಾಧಿಕಾರಿಗಳಿಗೆಲ್ಲಾ ಪತ್ರ ವ್ಯವಹಾರ ಮಾಡಿದೆ ಶಿವಣ್ಣ, ಕೊನೆಗೆ ಮೇಲಾಧಿಕಾರಿಗಳ ಸೂಚನೆ ಮೇರೆಗೆ ನನಗೆ ಜಾಗ ತೋರಿಸುವುದಾಗಿ ನನ್ನೊಂದಿಗೆ ನಗರಸಭೆಯ ಅಧಿಕಾರಿಗಳು ಬಂದರು. ನಾನು ಮೊದಲೇ ಖರೀದಿಸಿದ ಜಾಗದ ಪಕ್ಕದ ಉತ್ತರದ ದಿಕ್ಕಿಗೆ ಇದೇ ನಿಮ್ಮ ನಿವೇಶನವೆಂದು ತೋರಿಸಿದರು. ಆದರೆ ಅವರು ತೋರಿಸಿದ ಜಾಗದಲ್ಲಿ ಮೊದಲು ಉದ್ಯಾನವನಕ್ಕೆ ಮೀಸಲಿಟ್ಟ ಜಾಗವೆಂದು ಓನರ್ ಹೇಳಿದ್ದು ನೆನಪಿದೆ, ಆಗ ನಾನು ಲೇ ಔಟ್ನ ನಕ್ಷೆಯನ್ನು ಇನ್ನೊಮ್ಮೆ ಪರಿಶೀಲಿಸಿದೆ, ಆ ಭಾಗದಲ್ಲಿ ಅನುಮೋದಿತ ನಕ್ಷೆಯಂತೆ ಉದ್ಯಾನವನಕ್ಕೆ ಜಾಗಬಿಟ್ಟಿದ್ದು ದಾಖಲೆಯಲ್ಲಿಯೂ ಇದೆ. ಈ ವಿಚಾರವನ್ನು ನಗರಸಭೆಯವರಿಗೆ ಕೇಳಿದರೆ ಲೇ ಔಟ್ ನಕ್ಷೆಯು ನಂತರ ಬದಲಾಗಿದೆ, ಇದೆಲ್ಲಾ ನಿಮಗೇಕೆ? ನೀವು ತೋರಿಸಿದ ಜಾಗದಲ್ಲಿ ಮನೆಕಟ್ಟಿಕೊಳ್ಳಿ, ನಿಮಗೆ ಲೇ ಔಟ್ ಓನರ್ ಪತ್ರ ಮಾಡಿಕೊಡುವಾಗ 30ಎ ಬದಲಾಗಿ 30 ಎಂದು ತಪ್ಪಾಗಿ ಟೈಪಿಸಿದ್ದಾರೆ, ಇದನ್ನು ಸರಿಪಡಿಸಿಕೊಳ್ಳಿ ಸಾಕು ಎಂದರು. ಆಗ ನಾನು ಬದಲಾದ ನಕ್ಷೆಯ ಪ್ರತಿಯನ್ನು ಕೇಳಿದೆ, ನಂತರ ನೀಡುತ್ತೇವೆ, ಕಚೇರಿಗೆ ಬಂದು ಶುಲ್ಕ ಪಾವತಿಸಿ ಪಡೆಯಿರಿ ಎಂದರು. ಬದಲಾದ ನಕ್ಷೆಗಾಗಿ ಹಲವಾರು ಬಾರಿ ಕಚೇರಿಗೆ ಅಲೆದೆ ಆದರೂ ಸಿಗಲೇ ಇಲ್ಲ, ಒಮ್ಮೆ ಅವರ ಹೆಸರು, ಇನ್ನೊಮ್ಮೆ ಇನ್ನೊಬ್ಬರ ಹೆಸರು ಹೀಗೆ ಸತಾಯಿಸುತ್ತಲೇ ಹೋದರು ಶಿವಣ್ಣ..
ಛೇ, ಎಂತಹ ದುಷ್ಟರು, ಒಂದೇ ಕಚೇರಿಯಲ್ಲಿ, ಒಬ್ಬರ ಮೇಲೆ ಒಬ್ಬರು ಹಾಕುತ್ತಾ ಜನರಿಗೆ ನೋವು ನೀಡುವುದೇ? ನಂತರ ಮತ್ತೇನು ಮಾಡಿದಿರಿ?
ಏನು ಮಾಡೋದು ಶಿವಣ್ಣ, ಮತ್ತೆ ಮುಂದೊಂದು ದಿನ ಕಚೇರಿಯಲ್ಲಿ ಕೇಸ್ ವರ್ಕರ್ ಗೌರಮ್ಮನನ್ನು ಭೇಟಿಮಾಡಿ ಉದ್ಯಾನವನ ಒತ್ತುವರಿಯಾಗಿದೆ, ನಾನು ಅಲ್ಲಿ ಮನೆ ಕಟ್ಟಲ್ಲ. ಕಟ್ಟಿದರೆ ಅದು ಪಾರ್ಕ್ ಕಾಯ್ದೆಯ ಉಲ್ಲಂಘನೆಯಾಗುತ್ತದೆ, ನೀವು ನಿಯಮಾನುಸಾರ ಲೇ ಔಟ್ ಓನರ್ನಿಂದ ಸಾರ್ವಜನಿಕ ಉದ್ದೇಶಕ್ಕೆ ಬಿಟ್ಟ ಜಾಗಗಳಾದ ಉದ್ಯಾನವನ, ರಸ್ತೆ, ಪಾರ್ಕಿಂಗ್ಗೆ ಮೀಸಲಾದ ಜಾಗಗಳನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಿಮ್ಮ ಕಚೇರಿಗೆ ಬರೆಸಿಕೊಂಡು ದಾಖಲಿಸಿ ಸಂರಕ್ಷಿಸಿಡಬೇಕಂತೆ, ನೀವು ಆ ರೀತಿ ಮಾಡಿದ್ದೀರ ಎಂದೆ. ಅದಕ್ಕೆ ಜೋರಾಗಿ ನಕ್ಕ ಆ ಗೌರಮ್ಮ ಈ ರಾಜ್ಯದಲ್ಲಿ ಇಲ್ಲಿಯವರೆಗೆ ಎಷ್ಟು ಜನ ಅಧಿಕಾರಿಗಳು ಪಾರ್ಕ್ ಕಾಯ್ದೆಯ ಉಲ್ಲಂಘನೆಯಾಗಿದೆಯೆಂದು ಜೈಲಿಗೆ ಹೋಗಿದ್ದಾರೆ, ಇದ್ದರೆ ತೋರಿಸು, ನಿನ್ನ ಕಾಲಿಗೆ ಬೀಳುವೆ, ಸುಮ್ಮನೇ ಏನೇನೋ ಹೇಳಿ ನಿನ್ನ ತಲೆ ಹಾಳುಮಾಡಿಕೊಳ್ಳುವುದಲ್ಲದೇ ನಮ್ಮ ತಲೆಯೂ ಹಾಳು ಮಾಡಬೇಡ, ಸುಮ್ಮನೇ ತೋರಿಸಿದ ಜಾಗದಲ್ಲಿ ಮನೆ ಕಟ್ಟಿಕೋ, ಇಲ್ಲವೇ ನಿತ್ಯವೂ ಇದೇ ರೀತಿ ಬಂದು ನಮಗೆ ತೊಂದರೆ ನೀಡಿದರೆ ನಿನ್ನ ಮೇಲೆ ಕಾನೂನು ಕ್ರಮ ಅನಿವಾರ್ಯವೆಂದು ಕೂಗಾಡಿದರು, ಅದನ್ನು ನೆನೆದರೆ ನನಗೆ ಭಯವಾಗುತ್ತದೆ ಶಿವಣ್ಣ,..
ಅಯ್ಯೋ ಎದೆಂತಹ ದೌರ್ಜನ್ಯ? ಅಮಾಯಕರಿಗೆ ನ್ಯಾಯ ಒದಗಿಸಬೇಕಾದವರೇ ಹೀಗೆ ಮಾಡುವುದೇ? ಬೇಲಿಯೇ ಎದ್ದು ಹೊಲ ಮೇಯ್ದಂತೆ, ನಂತರ ಏನು ಮಾಡಿದಿರಿ ಸಂಕರಪ್ಪ..
ಕೊನೆಗೆ ಇದರಿಂದ ಹೌಹಾರಿದ ನಾನು ಒಬ್ಬರು ವಕೀಲರನ್ನು ಭೇಟಿಮಾಡಿದೆ ಶಿವಣ್ಣ, ಅವರು ನನ್ನ ಬಳಿಯಿದ್ದ ನಕ್ಷೆಯನ್ನು ಕೂಲಂಕುಶವಾಗಿ ನೋಡಿದರು. ಅವರು ಹೇಳುತ್ತಾ ಹೋದರು, ಒಮ್ಮೆ ನಕ್ಷೆ ಅನುಮೋದನೆಯಾಗಿ ಜನರಿಗೆ ನಿವೇಶನಗಳನ್ನು ಲೇ ಔಟ್ ಮಾಲೀಕ ಮಾರಿದ ನಂತರ ನಕ್ಷೆಯನ್ನು ಮಾರ್ಪಾಟು ಮಾಡಲು ಬರುವುದಿಲ್ಲ, ಅವರು ಹೇಳುವುದೆಲ್ಲಾ ಸುಳ್ಳು, ಏನೇ ಆದರು ಅವರು ಬದಲಾಗಿದೆ ಎನ್ನುವ ನಕ್ಷೆಯನ್ನು ಯಾರು ಅನುಮೋದನೆ ನೀಡಿ ಅಂಗೀಕರಿಸಿದ್ದಾರೆ ಎನ್ನುವುದು ಮುಖ್ಯ. ಇದರಲ್ಲಿ ಏನೋ ಮೋಸವಾಗಿದೆ ಎನ್ನುವುದು ಅರ್ಥವಾಗುತ್ತಿದೆ. ಮೊದಲು ಆ ನಕ್ಷೆಯನ್ನು ಪಡೆಯಬೇಕೆಂದು ನುಡಿದರು. ಅವರೇ ಹೇಳಿದಂತೆ ಆಗ ನಾನು ಮಾಹಿತಿ ಹಕ್ಕು ಹಾಯ್ದೆಯಲ್ಲಿ ಬದಲಾದ ನಕ್ಷೆಗಾಗಿ ಅರ್ಜಿಹಾಕಿದೆ, ತಿಂಗಳು ಕಳೆಯಿತು ಆದರೂ ನೀಡಲಿಲ್ಲ, ಮೇಲ್ಮನವಿಗೆ ಹೋದೆ, ಅಲ್ಲಿಯೂ ಕೆಲಸವಾಗಲಿಲ್ಲ, ಬೆಂಗಳೂರಿಗೆ ಆಯೋಗಕ್ಕೂ ಹೋದೆ, ಕೊನೆಗೆ ಆಯೋಗದಲ್ಲಿ ಕಮೀಷನರ್ ಎದುರು ಇವರಿಗೆ ನೀಡಿರುವುದಾಗಿ ಸುಳ್ಳು ಹೇಳಿ ನೋಂದಾಯಿತ ಅಂಚೆಯ ಅಕ್ನಾಲೆಡ್ಜ್ಮೆಂಟ್ ತೋರಿಸಿದರು. ಆಗ ನಾನು ಹೇಳಿದೆ, ಸ್ವಾಮಿ ಇವರಿಂದ ನನಗೆ ಪೋಸ್ಟ್ ಅಂತೂ ಬಂದಿದ್ದು ಸತ್ಯ. ಅದನ್ನು ಒಡೆದು ಒಳ ನೋಡಿದರೆ ಅದರಲ್ಲಿ ಬೇರೆ ಏನೋ ಪತ್ರವಿತ್ತು, ಅದಕ್ಕೂ ನಾನು ಕೇಳಿದ ಮಾಹಿತೂ ಏನೂ ಸಂಬಂಧವಿರಲಿಲ್ಲ, ಎಂದೆ. ಕೂಡಲೇ ಕಮೀಷನರ್ ತಮ್ಮ ಎದುರೇ ನನಗೆ ನಕ್ಷೆಯ ಪ್ರತಿಯನ್ನು ನೀಡುವಂತೆ ಆದೇಶಿಸಿದರು. ಆಗ ಅಧಿಕಾರಿಗಳು ವಿಧಿಯಿಲ್ಲದೇ ನನಗೆ ನಕ್ಷೆಯನ್ನು ನೀಡಿದರು ಶಿವಣ್ಣ..
ಎಂತಹ ಮೋಸಗಾರರು ನೋಂದಾಯಿತ ಅಂಚೆಯ ಲಕೋಟೆಯಲ್ಲಿ ಏನೋ ತುಂಬಿ ಪೋಸ್ಟ್ ಮಾಡಿ ಅದರ ಅಕ್ನಾಲೆಡ್ಜ್ ಮೆಂಟ್ ತೋರಿಸಿ ಮೋಸಮಾಡುವುದೇ? ಎಂತಹ ಕ್ರಿಮಿನಲ್ಗಳು, ತೂಥ್..ಕೊನೆಗೆ ನಕ್ಷೆ ಪಡೆದು ಏನು ಮಾಡಿದಿರಿ ಸಂಕರಪ್ಪ..
ಕೊನೆಗೆ ಆ ನಕ್ಷೆಯನ್ನು ತಂದು ನಮ್ಮ ವಕೀಲರಿಗೆ ತೋರಿಸಿದೆ ಶಿವಣ್ಣ. ಅವರು ಮೊದಲಿನ ನಕ್ಷೆಗೂ ಹೊಸದಾಗಿ ಬದಲಾದ ನಕ್ಷೆಗೂ ಕೂಲಂಕುಶವಾಗಿ ಪರಿಶೀಲಿಸಿದರು. ಮೊದಲನೇ ಮೂಲ ನಕ್ಷೆಯಲ್ಲಿ ನಿವೇಶನಗಳ ಕ್ರಮ ಸಂಖ್ಯೆಯನ್ನು 1,2,3 ಎಂದು ನೀಡುತ್ತಾ ಹೋಗಿ ಒಟ್ಟು 120 ನಿವೇಶನಗಳಿವೆ. ಒಟ್ಟು ಶೇ.55 ಭಾಗದಲ್ಲಿ ವಸತಿ ಉದ್ದೇಶಕ್ಕೆ ನಿವೇಶನಗಳಿವೆ. ಇನ್ನುಳಿದ 45% ಭಾಗದಲ್ಲಿ ನಿಯಮದಂತೆ ಉದ್ಯಾನವನ, ಸಾರ್ವಜನಿಕ ಉದ್ದೇಶದ ಭೂಮಿ, ಪಾರ್ಕಿಂಗ್, ರಸ್ತೆ ಹೀಗೆ ವಿವಿಧ ಉದ್ದೇಶಕ್ಕೆ ಮೀಸಲಿಟ್ಟಿದ್ದು ಕಂಡಬಂದಿತು.
ನಂತರ ಎರಡನೇಯ ನಕ್ಷೆಯಲ್ಲಿ ನೋಡಿದಾಗ ನಾನು ಖರೀದಿಸಿದ ನಿವೇಶನ ಸಂಖ್ಯೆ 30ರ ಪಕ್ಕದಲ್ಲೇ ಇರುವ ಉದ್ಯಾನವನದ ಜಾಗಕ್ಕೆ ಹೊಂದಿಕೊಂಡಂತೆ ಹೊಸದಾಗಿ 30ಎ ಎಂದು ಒಂದು ಹೊಸದಾಗಿ ನಿವೇಶವನ್ನು ನಿರ್ಮಿಸಿದ್ದಾರೆ. ಹೀಗೆ ಉದ್ಯಾನವನದ ಭಾಗ ಮತ್ತು ಸಾರ್ವಜನಿಕ ಉದ್ದೇಶದ ಜಾಗದ ಭಾಗವನ್ನು ಒತ್ತುವರಿ ಮಾಡಿ 31ಎ.ಬಿ. ಎಂದು ಉಪ ಸಂಖ್ಯೆಗಳನ್ನು ನೀಡುತ್ತಾ ಹೋಗಿದ್ದಾರೆ. ಈಗ ಹೊಸ ನಕ್ಷೆಯಂತೆ ಲೆಕ್ಕ ಹಾಕಿದರೆ ಒಟ್ಟು ನಿವೇಶನಗಳು 150 ಆಗುತ್ತವೆ. ಆದರೆ ಮೊದಲನೇ ನಕ್ಷೆಯಲ್ಲಿ ಕೇವಲ 120 ನಿವೇಶನಗಳಿದ್ದವು. ಈಗ ಎಲ್ಲೆಡೆಯೂ ಮನೆಯನ್ನು ಕಟ್ಟಿದ್ದಾರೆ. ಉದ್ಯಾನವನ ಬಹು ಭಾಗ ಕಾಣೆಯಾಗಿದೆ, ನಾನು ಏನೇ ತಕರಾರು ಹೇಳಲು ಹೋದರೆ ಅಲ್ಲಿಯ ನಿವಾಸಿಗಳೆಲ್ಲಾ ನನ್ನೊಂದಿಗೆ ವಾಗ್ವಾದಕ್ಕೆ ಬರುತ್ತಾರೆ. ನಿಮ್ಮಿಂದ ನಮಗೂ ತೊಂದರೆ, ಸುಮ್ಮನೇ ನಿಮಗೆ ತೋರಿಸಿದ ಜಾಗದಲ್ಲಿ ಮನೆಕಟ್ಟಿಕೊಳ್ಳಿ, ನಿಮ್ಮ ಜಗಳದಲ್ಲಿ ನಮಗೂ ನೋವು ನೀಡಬೇಡಿ ಎಂದು ಗದರುತ್ತಾರೆ, ಜೊತೆಗೆ ಊರಲ್ಲಿ ಅನೇಕ ಜನ ಪ್ರಭಾವಿಗಳು ನನಗೆ ಬುದ್ಧಿ ಹೇಳಲು ಬರುತ್ತಾರೆ ನಾನು ಈಗ ಏನು ಮಾಡುವುದೋ, ನನಗೆ ನಾನು ಆ ನಿವೇಶನಕ್ಕೆ ನೀಡಿದ ಹಣ ಬಂದರೆ ಸಾಕು, ಆದರೆ ಯಾರಲ್ಲಿ ಕೇಳಲಿ, ಲೇ ಔಟ್ ಓನರ್ ಬೇರೆ ಎಲ್ಲೆಡೆ ತಡಕಾಡಿದರೂ ಸಿಗುತ್ತಿಲ್ಲ, ನನ್ನ ಹಣೆ ಬರಹಕ್ಕೆ ಯಾರನ್ನು ಶಪಿಸಲಿ, ಒಂದು ಅರಿಯದಾಗಿದೆ ಶಿವಣ್ಣ..
ಈ ವಿಷಯ ಕೇಳಿ ಶಿವಣ್ಣ ಆಶ್ಚರ್ಯ ಚಕಿತನಾಗಿ ಕೇಳುತ್ತಾನೆ, ಏನು ಆ ಲೇ ಔಟ್ನಲ್ಲಿ ಪಾರ್ಕೇ ಒತ್ತುವರಿಯಾಗಿ ಸೈಟ್ ಆಗಿದೆಯೇ? ಎನ್ನುತ್ತಾರೆ. ಆಗ ಅವರು ಪಾರ್ಕ್ ಒಂದೇ ಅಲ್ಲ, ಸಾರ್ವಜನಿಕ ಉದ್ದೇಶಕ್ಕೆ ಅಂತಾ ಬಿಟ್ಟ ಒಂದೇ ಒಂದು ಇಂಚು ಜಾಗವೂ ಇಲ್ಲ ಎನ್ನುತ್ತಾ ಬೇಸರದಲ್ಲಿ ನುಡಿಯುತ್ತಾರೆ. ನನಗೆ ಲೇ ಔಟ್ ಓನರ್ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟ ನಿವೇಶನದ ಸಂಖ್ಯೆ 30 ಎಂದೇ ಪತ್ರದಲ್ಲಿದೆ. ಅದೇ ರೀತಿ ಖಾತೆಯನ್ನು ನಗರಸಭೆಯಲ್ಲಿ ಮಾಡಿಸಿಕೊಂಡು ಫಾರ ನಂಬರ್ 3 ಈ ಹಿಂದೆ ಪಡೆದಿದ್ದೆ. ಆದರೆ ಈಗ ಅದು ನಗರಸಭೆಯ ಲೆಡ್ಜರ್ ಪುಸ್ತಕದಲ್ಲಿ 30ಎ ಎಂದಾಗಿದೆ, ಏನೋ ನನ್ನ ಕರ್ಮ, ನಾನು ಯಾವ ಜನ್ಮದಲ್ಲಿ ಯಾರಿಗೆ ಏನು ಮೋಸ ಮಾಡಿದ್ದೆನೋ ಏನೋ. ನನ್ನ ಜೀವನದಲ್ಲಿ ಕೂಡಿಟ್ಟ ಹಣವನ್ನೆಲ್ಲಾ ಧಾರೆಯೆರೆದು ಈ ನಿವೇಶನ ಖರೀದಿಸಿದ್ದೇ, ಆದರೆ ಈಗ ನಡೆಯುತ್ತಿರುವುದೆಲ್ಲ ನನ್ನ ದುರ್ದೈವದಾಟ..
ಆ ಲೇ ಔಟ್ ಓನರ್ ನನಗೆ ನಿವೇಶನ ಮಾರಿದ ನಂತರ ಇನ್ನೊಬ್ಬರಿಗೂ ಅದೇ 30ರ ಸಂಖ್ಯೆಯ ನಿವೇಶನವನ್ನು ನೋಂದಣಿ ಮಾಡಿಕೊಟ್ಟಿದ್ದಾನೆ. ಆ 30ರ ಸಂಖ್ಯೆಯ ನಿವೇಶನವನ್ನು ಖರೀದಿಸಿದವನು ಕೆಲವೇ ತಿಂಗಳಲ್ಲಿ ಇನ್ನೊಬ್ಬರಿಗೆ ಮಾರಿದ್ದಾರೆ, ಅವರು ಈಗ ಮನೆಕಟ್ಟಿಕೊಂಡು ವಾಸವಿರುವವರಿಗೆ ಮಾರಿದ್ದಾರೆ..ಈಗಾಗಲೇ ಮೂರ್ನಾಲ್ಕು ಜನರು 30ರ ನಿವೇಶವನ್ನು ಖರೀದಿಸಿ ಮಾರುತ್ತಾ ಹೋಗಿದ್ದು ಈಗ ಮನೆಕಟ್ಟಿಕೊಂಡು ವಾಸವಿರುವ ವ್ಯಕ್ತಿಗೆ ಈಗ ಇದೆಲ್ಲ ತಿಳಿದಿಲ್ಲ. ಈ ಮೋಸಕ್ಕೆ ಆತನು ಹೊಣೆಗಾರನಾಗುವುದಿಲ್ಲ, ಏನೇ ಆಗಲಿ ಕೋರ್ಟ್ ಹೋಗೋಣವೆಂದು ನಮ್ಮ ವಕೀಲರು ಹೇಳಿದ್ದಾರೆ. ಈಗ ಅನಿವಾರ್ಯವಾಗಿ ನಮ್ಮ ವಕೀಲರ ಸಲಹೆಯಂತೆ ಕೋರ್ಟ್ಗೆ ಹೋಗಬೇಕು. ಇದಕ್ಕೆ ಆ 30 ಸಂಖ್ಯೆಯ ನಿವೇಶನ ಖಾತೆ ಬದಲಾವಣೆ ಮಾಡಿದ ಕಡತದ ದೃಡೀಕೃತ ಪ್ರತಿಗಳು ಬೇಕಾಗಿವೆ ಅದಕ್ಕಾಗಿ ಮಾಹಿತಿ ಹಕ್ಕಿನಲ್ಲಿ ಅರ್ಜಿಹಾಕಿ ನಗರಸಭೆಗೆ ಮತ್ತೆ ಅಲೆದಾಡುತ್ತಿರುವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು..
ಈಗ ಶಿವಣ್ಣನಿಗೆ ಬಹು ದೊಡ್ಡ ಅನುಮಾನ ಕಾಡತೊಡಗಿತು, ಈ ಶರಧೀಪುರ ನಗರಸಭೆಯಲ್ಲಿ ಯಾವುದೋ ದೊಡ್ಡ ಅವ್ಯಹಾರವೇ ನಡೆಯುತ್ತಿದೆ, ಎನ್ನುವ ಅನುಮಾನ ಕಾಡುತ್ತದೆ. ಜೊತೆಗೆ "ಏನು ರಾಜ್ಯದಲ್ಲಿ ಪಾರ್ಕ್ ಒತ್ತುವರಿ ಮಾಡಿ ಯಾರು ಜೈಲಿಗೆ ಹೋಗಿದ್ದಾರೆ ತೋರಿಸು" ಎಂದು ಆ ಗೌರಮ್ಮ ಹೇಳಿದ ಮಾತು ಕೇಳಿ ಬಹಳ ಅಸಹ್ಯವೆನಿಸುತ್ತದೆ, ಇಲ್ಲಿ ಭೂ ಮಾಫಿಯಾ ಬಹಳ ಗಟ್ಟಿಯಾಗಿದೆ. ಇಲ್ಲಿ ಯಾವುದೇ ಕಾಯ್ದೆ ಕಾನೂನಿಗೆ ಬೆಲೆಯಿಲ್ಲ, ಇಲ್ಲಿದ್ದವರಿಗೆ ಯಾವುದೇ ಅಂಜಿಕೆಯಿಲ್ಲ, ಎನ್ನುವುದು ಖಾತ್ರಿಯಾಗುತ್ತದೆ, ಏನೇ ಆದರೂ ಇಂತಹ ದುಷ್ಟರಿಗೆ ಬುದ್ಧಿ ಕಲಿಸಲೇಬೇಕೆಂದು ಹಠವಿಡಿದು ಪಣತೊಟ್ಟು ಸಂಕ್ರಪ್ಪನವರಿಗೆ ನಾಳೆ ಮತ್ತೆ ನನಗೆ ತಾವು ಭೇಟಿಯಾಗಿ ತಮ್ಮೊಂದಿಗೆ ಇನ್ನಷ್ಟು ಮಾತನಾಡಬೇಕು, ನನಗೀಗ ಮಲ್ಲಿಗೇಪುರಕ್ಕೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ಹೊರಡುವುದಕ್ಕೆ ಸಮಯವಾಗುತ್ತದೆ, ನಾನು ಇಂದೇ ವೆಂಕಮ್ಮಜ್ಜಿಯ ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕು ಎನ್ನುತ್ತಾ ಅಲ್ಲಿಂದ ಶಿವಣ್ಣ ಹೊರಡುತ್ತಾನೆ..
ಭಾಗ-5
ಅಂದುಕೊಂಡಂತೆ ಶಿವಣ್ಣ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ವೆಂಕಮ್ಮಜ್ಜಿಯ ಪರವಾಗಿ ಅರ್ಜಿಯೊಂದನ್ನು ನೀಡಿ ಕೂಡಲೇ ಆಕೆಗೆ ಸೂಕ್ತ ನೆರವು ನೀಡುವಂತೆ ವಿನಂತಿಸುತ್ತಾರೆ. ವಿಷಯಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೂಡಲೇ ನಗರಸಭೆಗೆ ಕ್ರಮಕೈಗೊಂಡು ವರದಿಮಾಡುವಂತೆ ಆದೇಶಿಸುತ್ತಾರೆ ಹಾಗೂ ಲೋಪಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ಶಿವಣ್ಣನಿಗೆ ನೀಡುತ್ತಾರೆ.
ಇದರಿಂದ ಸಂತಸಗೊಂಡ ಶಿವಣ್ಣ ಇನ್ನೇನು ಜಿಲ್ಲಾಧಿಕಾರಿಗಳು ಹೇಳಿದ ಮೇಲೆ ಖಂಡಿತವಾಗಿಯೂ ಕೆಲಸವಾಗುತ್ತದೆ ಎನ್ನುವ ನಂಬಿಕೆಯಿಂದ ಹೊರಬರುತ್ತಾನೆ, ಹಾಗೂ ಮಲ್ಲಿಗೆಪುರದಲ್ಲಿ ತನ್ನ ಒಡನಾಡಿ ಅನೇಕ ಜನ ಸಮಾಜಮುಖಿ ಹೋರಾಟಗಾರರಿದ್ದು ಅವರನ್ನು ಭೇಟಿಯಾಗಲು ಹಂಬಲಿಸಿ ಅವರಿಗಾಗಿ ಕರೆಮಾಡುತ್ತಾನೆ. ಅವರಲ್ಲಿ ವಕೀಲರಾದ ಶ್ರೀಪತಿಯವರು ಸ್ಪಂದಿಸುತ್ತಾರೆ. ಈಗ ಇಬ್ಬರೂ ನಗರದ ಗಾಂಧೀ ಮಂದಿರದಲ್ಲಿ ಕುಳಿತು ತಮ್ಮ ವಿವಿಧ ಹೋರಾಟ ಭಾಗಗಳನ್ನು ಚರ್ಚಿಸುತ್ತಾ ತಾನು ಈ ದಿನ ಬಂದ ಕೆಲಸದ ಬಗ್ಗೆ ಶ್ರೀಪತಿಯವರಿಗೆ ಶಿವಣ್ಣ ಎಲ್ಲವನ್ನು ಹೇಳುತ್ತಾನೆ.
ವಿಷಯ ಕೇಳಿ ಆಶ್ಚರ್ಯ ಚಕಿತರಾದ ಶ್ರೀಪತಿಯವರು ಏನು ಶರಧಿಪುರದ ಲೇಔಟ್ಗಳಲ್ಲಿ ಪಾರ್ಕನ್ನೇ ಕಬಳಿಸಿದ್ದಾರ, ಪುಸ್ತಕಗಳಿಗೆ ವೈಟ್ನರ್ ಹಚ್ಚಿ ಫಲಾನುಭವಿಗಳ ಹೆಸರನ್ನೇ ತಿದ್ದಿದ್ದಾರ, ಹಾಗೂ ಜನರ ಖಾತೆಗಳೇ ಇಲ್ಲವೆನ್ನುತ್ತಾರ? ಅದೇನು? ಅವರಿಗೆ ಅಷ್ಟೊಂದು ಧೈರ್ಯ. ಆ ರೀತಿ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಅವರಿಗೆ ಹೆದರಿಕೆ ಎನ್ನುವುದೇ ಇಲ್ಲವೆನ್ನಿಸುತ್ತದೆ. ಏನೋ ಬಹುದೊಡ್ಡ ಮಾಫಿಯಾ ಕೆಲಸಮಾಡುತ್ತಿದೆ. ಇದು ಕೇವಲ ಅಧಿಕಾರಿಗಳಿಂದ ಆದ ಭ್ರಷ್ಟಾಚಾರ ಎನ್ನುವುದು ಅನುಮಾನ. ಇವರಿಗೆ ಯಾರೋ ರಕ್ಷಕರಾಗಿ ದುಷ್ಟ ಕೆಲಸಕ್ಕೆ ಪೋಷಕರಾಗಿ ನಿಂತಿದ್ದಾರೆ, ಸ್ವಲ್ಪ ಸರಿಯಾಗಿ ಕೂಲಂಕುಶವಾಗಿ ವಿಚಾರಿಸಿ ಶಿವಣ್ಣ ಎಂದರು.
ಈಗ ಶ್ರೀಪತಿಯವರ ಮಾತು ಕೇಳುತ್ತಿದ್ದಂತೆ ಶಿವಣ್ಣನಿಗೂ ಅವರ ಮಾತು ಸತ್ಯವೆನಿಸಿತು. ಇಲ್ಲವೆಂದರೆ ಶರಧಿಪುರದ ಅಧಿಕಾರಿಗಳು ಒಂದೇ ಕಚೇರಿಯಲ್ಲಿ 20 ರಿಂದ 30 ವರ್ಷಗಳವರೆಗೆ ಒಂದೇ ಕಡೆ ಹೇಗೆ ಸೇವೆ ಸಲ್ಲಿಸುತ್ತಾರೆ. ಇವರಿಗೆ ವರ್ಗಾವಣೆಯಾಗದೇ ಇರುವುದು ಕೂಡ ಅನುಮಾನವಲ್ಲವೇ ಎಂದು ಯೋಚಿಸುತ್ತಾ ಕುಳಿತರು. ಸಾಕಷ್ಟು ಸಮಯದ ಚರ್ಚೆಯ ನಂತರ ಇಬ್ಬರೂ ಒಂದು ತೀರ್ಮಾನಕ್ಕೆ ಬಂದರು. ಇದು ಬಹು ದೊಡ್ಡ ಹಗರಣವೆನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದಕ್ಕೆ ದೊಡ್ಡ ಪ್ರಮಾಣದ ತನಿಖೆಯಾಗಬೇಕು, ಮೊದಲು ಸಾಧ್ಯವಿರುವ ಅವಶ್ಯ ದಾಖಲೆಗಳನ್ನು ಸಂಗ್ರಹಿಸಿ ತನ್ನಿ ಆ ನಂತರ ಪ್ರಕರಣವನ್ನು ಯಾವ ಪ್ರಾಧಿಕಾರಕ್ಕೆ ಸಲ್ಲಿಸಿ ತನಿಖೆ ಒತ್ತಾಯಿಸಬಹುದೆಂದು ಚರ್ಚಿಸೋಣವೆಂದು ಶ್ರೀಪತಿಯವರು ನುಡಿದ ಮಾತಿಗೆ ಶಿವಣ್ಣ ಕೂಡ ಸಮ್ಮತಿಸಿ ಅವರೊಟ್ಟಿಗೆ ಒಂದು ಕಪ್ ಕಾಫೀ ಕುಡಿದು ಈಗ ನೇರವಾಗಿ ರಾತ್ರಿಯ ರೈಲಿನಲ್ಲಿ ಶರಧಿಪುರಕ್ಕೆ ಪ್ರಯಾಣಿಸಿದರು.
ಅವರಿಗೆ ಒಂದೆಡೆ ಸಂಕ್ರಪ್ಪ ಹೇಳಿದ ಲೇ ಔಟ್ ಕಥೆ, ಇನ್ನೊಂದೆಡೆ ವೆಂಕಮ್ಮಜ್ಜಿಯ ಖಾತೆಯೇ ನಗರಸಭೆಯಲ್ಲಿ ಮಾಯವಾಗಿರುವ ವ್ಯಥೆ ಬಿಡದೇ ಕಾಡುತ್ತಿದೆ. ಜೊತೆಗೆ ಊರಲ್ಲಿ ಇನ್ನೂ ಎಷ್ಟು ಪ್ರಕರಣಗಳಿವೆಯೋ ಅವೆಲ್ಲವನ್ನು ಶ್ರೀಪತಿಯವರು ಹೇಳಿದಂತೆ ಮೊದಲು ಸಂಗ್ರಹಿಸಬೇಕೆಂದು ಪಣತೊಟ್ಟರು. ಅದೇ ಧ್ಯಾನದಲ್ಲಿ ಮನೆ ಸೇರಿದರು.
ಇತ್ತ ನಗರಸಭೆಯಲ್ಲಿ ಶಿವಣ್ಣ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವುದು ಆಗಲೇ ಗಮನಕ್ಕೆ ಬಂದಿದೆ. ಅದಕ್ಕೆ ಹೇಗೆ ಉತ್ತರಿಸಬೇಕೆಂದು ಆಗಲೇ ಸಿದ್ಧವಾಗಿಸಿಕೊಂಡಿದ್ದಾರೆ. ಅವರಿಗೆ ಇದೇನು ಹೊಸತಲ್ಲ. ಇಂತಹ ಹಲವು ಪ್ರಕರಣಗಳಿಗೆ ಎಳ್ಳು ನೀರು ಬಿಟ್ಟು ಹಾಯಾಗಿದ್ದಾರೆ. ಹಾಗಾಗಿ ಒಂದಿನಿತು ಭಯವು ಕೂಡ ಅವರಿಗೆ ಕಾಡುತ್ತಿಲ್ಲ.
ಎರಡು ದಿನಗಳ ನಂತರ ಶಿವಣ್ಣನಿಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪತ್ರ ಬಂದಿದು. ನೀವು ನೀಡಿದ ದೂರಿನಂತೆ ಪ್ರಕರಣವನ್ನು ತನಿಖೆ ಮಾಡಲು ನಾವು ಒಬ್ಬರು ಅಧಿಕಾರಿಯನ್ನು ಶರಧಿಪುರ ನಗರಸಭೆಗೆ ಕಳುಹಿಸುತ್ತಿದ್ದೇವೆ. ನೀವು ಸಹಾ ಆ ಸಮಯದಲ್ಲಿ ಹಾಜರಿದ್ದು ನಿಮ್ಮ ನಿವೇದನೆಯನ್ನು ಸಲ್ಲಿಸಬಹುದೆಂದು ಪತ್ರ ಬರೆಯಲಾಗಿತ್ತು. ಪತ್ರದಲ್ಲಿ ಉಲ್ಲೇಖಿಸಿದ ದಿನಾಂಕದಂದು ನಿಗಧಿತ ಸಮಯದಲ್ಲೇ ಶಿವಣ್ಣ ತನ್ನ ಜೊತೆಗೆ ವೆಂಕಮ್ಮಜ್ಜಿಯನ್ನು ಹಾಗೂ ಅದೇ ಪ್ರದೇಶದ ಕೆಲವು ಹಿರಿಯ ನಾಗರೀಕರನ್ನು ಕರೆದುಕೊಂಡು ಹೋಗುತ್ತಾರೆ. ವಿಷಯ ತಿಳಿದು ತನ್ನ ಅಹವಾಲು ಹೇಳಿಕೊಳ್ಳುವುದಕ್ಕೆ ಸಂಕ್ರಪ್ಪ ಕೂಡ ಬರುತ್ತಾರೆ.
ತನಿಖಾಧಿಕಾರಿಯು ಬಂದವರೇ ತನಿಖೆಯನ್ನು ಆರಂಭಿಸುತ್ತಾರೆ. ಮೊದಲು ವೆಂಕಮ್ಮಜ್ಜಿಯ ಬಳಿ ಇರುವ ಕಾಗದ ಪತ್ರಗಳನ್ನು ಪರಿಶೀಲಿಸುತ್ತಾರೆ. ಕಚೇರಿಯ ಸಂಬಂಧಿಸಿದ ಖಾತೆಯ ಲೆಡ್ಜರ್ ಪುಸ್ತಕವನ್ನು ಪರಿಶೀಲಿಸುತ್ತಾರೆ. ವೆಂಕಮ್ಮಜ್ಜಿಯ ಹೆಸರಿಗೆ ಆ ಪುಸ್ತಕದಲ್ಲಿ ಖಾತೆಯು ಇರುವುದೇ ಇಲ್ಲ. ಬದಲಿಗೆ ಇನ್ನೊಬ್ಬರ ಹೆಸರು ಇರುತ್ತದೆ.
ತನಿಖಾಧಿಕಾರಿಯು ಈಗ ವೆಂಕಮ್ಮಜ್ಜಿಗೆ ಕೇಳುತ್ತಾರೆ, ನೀವು ಎಷ್ಟು ವರ್ಷದಿಂದ ಆ ಜಾಗದಲ್ಲಿ ಇದ್ದೀರ? ವೆಂಕಮ್ಮಜ್ಜಿಯು ಉತ್ತರಿಸುತ್ತಾಳೆ, ನಾನು ಸುಮಾರು ಐವತ್ತು ವರ್ಷದಿಂದ ಅಲ್ಲೇ ಇದ್ದೇವೆ. ನಮಗೆ ಇಪ್ಪತ್ತು ವರ್ಷಗಳ ಹಿಂದೆ 94ಸಿ ಯಲ್ಲಿ ಹಕ್ಕು ಪತ್ರವನ್ನು ನೀಡಿದ್ದರು. ನಂತರ ಅದರ ಆಧಾರದಲ್ಲಿ ನಗರಸಭೆಯಲ್ಲಿ ಖಾತೆಯನ್ನು ಮಾಡಿಸಿಕೊಂಡು ಪ್ರತೀ ವರ್ಷ ಕಂದಾಯವನ್ನು ಕಟ್ಟುತ್ತಾ ಬಂದಿದ್ದೇವೆ ಎನ್ನುತ್ತಾಳೆ. ಹಾಗಾದರೆ ಅದರ ಮೂಲ ದಾಖಲೆಗಳನ್ನು ನೀಡಿ ಎನ್ನುತ್ತಾರೆ. ಆಗ ವೆಂಕಮ್ಮಜ್ಜಿ ಇದ್ದ ವಿಚಾರವನ್ನು ಹೇಳುತ್ತಾಳೆ. ಆದರೆ ಆ ಕೇಸ್ ವರ್ಕರ್ ನನ್ನ ಬಳಿ ಈ ಅಜ್ಜಿ ಯಾವುದೇ ದಾಖಲೆ ನೀಡಿಲ್ಲ, ಸುಳ್ಳು ಹೇಳುತ್ತಿದ್ದಾರೆ ಎನ್ನುತ್ತಾನೆ.
ಆಗ ಅಜ್ಜಿ ನೀಡಿದ ಜೆರಾಕ್ಸ್ ಹಕ್ಕು ಪತ್ರವನ್ನು ಮಂಜುರಾತಿ ಪಟ್ಟಿಯೊಂದಿಗೆ ಪರಿಶೀಲಿಸಿ ಎನ್ನುತ್ತಾರೆ. ಆದರೆ ನಗರಸಭೆಯ ಅತೀ ಬುದ್ಧಿವಂತ ವಂಚಕ ಅಧಿಕಾರಿಗಳು ಮಂಜೂರಾತಿ ಪಟ್ಟಿಯನ್ನೇ ನಕಲಾಗಿ ತಯಾರಿಸಿಕೊಂಡಿರುತ್ತಾರೆ. ಮೂಲ ಮಂಜೂರಾತಿ ಪಟ್ಟಿಯನ್ನು ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಪತ್ರವನ್ನು ತಿದ್ದುಪಡಿ ಮಾಡಿರುತ್ತಾರೆ. ಹಾಗಾಗಿ ವೆಂಕಮ್ಮಜ್ಜಿಯ ಹೆಸರಿನ ಬದಲು ಬೇರೆಯವರ ಹೆಸರು ಆ ಜಾಗದಲ್ಲಿ ದಾಖಲಾಗಿರುತ್ತದೆ. ಇದನ್ನು ನೋಡಿದ ತನಿಖಾಧಿಕಾರಿಯು ಇನ್ನು ವೆಂಕಮ್ಮಜ್ಜಿ ನೀಡಿದ ರೇಶನ್ ಕಾರ್ಡ್, ಮನೆಯ ವಿದ್ಯುತ್ ಬಿಲ್ಲು ಯಾವುದನ್ನು ಪರಿಗಣಿಸದೇ ಸುಮ್ಮನಾಗುತ್ತಾರೆ.
ಇತ್ತ ನಕಲಿ ಖಾತೆಯನ್ನು ವಾಮಮಾರ್ಗದ ಮೂಲಕ ಸೃಷ್ಟಿ ಮಾಡಿಸಿಕೊಂಡ ರಮೇಶಪ್ಪ ತನಿಖಾಧಿಕಾರಿಯವರ ಬಳಿ ನುಡಿಯುತ್ತಾನೆ. ಈ ವೆಂಕಮ್ಮಜ್ಜಿಯು ಕೇವಲ ಕೆಲವೇ ವರ್ಷಗಳ ಹಿಂದೆ ಆ ಮನೆಗೆ ಬಾಡಿಗೆಗೆ ಬಂದಿದ್ದೇ ಹೊರತು ಇವರೇ ಆ ಮನೆಯ ಮಾಲಿಕರಲ್ಲ. ನಕಲಿ ದಾಖಲೆಯನ್ನು ವೆಂಕಮ್ಮಜ್ಜಿಯ ಮಕ್ಕಳು ಸೃಷ್ಟಿಮಾಡಿ ಯಾರದೋ ಆಸ್ತಿಯನ್ನು ಕಬಳಿಸುತ್ತಿದ್ದಾರೆ ಎಂದು ಆರೋಪಿಸುತ್ತಾನೆ.
ಈಗ ಶಿವಣ್ಣನ ಒತ್ತಾಯದ ಮೇರೆಗೆ ಇನ್ನೊಮ್ಮೆ ತನಿಖಾಧಿಕಾರಿ ವೆಂಕಮ್ಮಜ್ಜಿ ಬಳಿ ಇರುವ ದಾಖಲೆಗಳನ್ನು ನೋಡುತ್ತಾರೆ. ಅವೆಲ್ಲಾ ಹೆಚ್ಚೆಂದರೆ ಐದಾರು ವರ್ಷದ ಹಿಂದಿನವುಗಳು ಮಾತ್ರವೇ ಆಗಿರುತ್ತವೆ. ತನ್ನ ಹಳೆಯ ಸೋರುವ ಗುಡಿಸಲು ಮನೆಯಲ್ಲಿ ದಾಖಲೆಗಳನ್ನು ಅಷ್ಟೊಂದು ಭದ್ರವಾಗಿ ಇಟ್ಟುಕೊಳ್ಳುವುದು ಸಾಮಾನ್ಯವಾಗಿ ಆಕೆಗೂ ಕಷ್ಟ. ಹಾಗಾಗಿ ಲಭ್ಯವಿದ್ದ ಅರೆಬರೆ ದಾಖಲೆಯನ್ನೇ ನಿಡುತ್ತಾರೆ. ಆಗ ತನಿಖಾಧಿಕಾರಿ ಉತ್ತರಿಸುತ್ತಾರೆ. ಕೇವಲ ರೇಶನ್ ಕಾರ್ಡ್, ವಿದ್ಯುತ್ ಬಿಲ್ಲು ಇವುಗಳೇ ಆಸ್ತಿಯ ಹಕ್ಕುದಾರಿಕೆಯ ದಾಖಲೆಗಳಾಗುವುದಿಲ್ಲ. ಸರ್ಕಾರವು ನೀಡಿದ ಮಂಜೂರಾತಿ ಪತ್ರವೇ ಅಂತಿಮ. ಅದೂ ಅವರ ಬಳಿ ಇಲ್ಲ ಎನ್ನುತ್ತಾರೆ. ಇದೂ ಅನುಮಾನಾಸ್ಪದವಾಗಿದೆ. ಇನ್ನೊಂದೆಡೆ ಮಂಜೂರಾತಿ ಪಟ್ಟಿಯಲ್ಲೂ ಎಲ್ಲೂ ಕೂಡ ಇವರ ಹೆಸರು ಇಲ್ಲ. ಇದೆಲ್ಲವನ್ನು ನಾನು ನೋಡಿದರೆ ಇವರಿಗೆ ಸರ್ಕಾರದಿಂದ ಭೂಮಿ ಮಂಜೂರಾಗಿರುವುದಕ್ಕೆ ಯಾವುದೇ ಆಧಾರವಿಲ್ಲ ಎನ್ನುತ್ತಾರೆ.
ಆಗ ಶಿವಣ್ಣ ರಿಜಿಸ್ಟರ್ನಲ್ಲಿ ವೈಟ್ನರ್ ಹಚ್ಚಿರುವ ಬಗ್ಗೆ ಗಮನಕ್ಕೆ ತರುತ್ತಾರೆ. ಆಗ ಅದನ್ನು ಪರಿಶೀಲಿಸಿ ತನಿಖಾಧಿಕಾರಿ ನಗರಸಭೆಯ ಅಧಿಕಾರಿಗಳನ್ನು ಪ್ರಶ್ನಿಸುತ್ತಾರೆ. ಆಗ ಅಧಿಕಾರಿಗಳು ನಮ್ಮಲ್ಲಿ ನುರಿತ ಸಿಬ್ಬಂಧಿಗಳು ಇಲ್ಲ, ನಮ್ಮಲ್ಲಿ ಕೆಲಸಗಾರರ ಕೊರತೆ ಇದೆ. ಹಾಗಾಗಿ ಹಲವು ನಿಪುಣತೆಯಿಲ್ಲದ ಕೆಲವು ಡಿ ದರ್ಜೆ ಕೆಲಸಗಾರರನ್ನೇ ಉಪಯೋಗಿಸಿಕೊಂಡಿದ್ದೇವೆ. ಅವರು ರಿಜಿಸ್ಟರ್ ಬರೆಯುವಾಗ ತಪ್ಪುಮಾಡುತ್ತಾರೆ. ನಮಗೆ ಏನನ್ನು ಕೇಳದೇ, ಕಾನೂನಿನ ನಿಯಮದ ಅರಿವಿನ ಕೊರತೆಯಿಂದ ಸಾಮಾನ್ಯವಾಗಿ ವೈಟ್ನರ್ ಹಚ್ಚಿದ್ದಾರೆ. ಆದರೆ ಮಂಜೂರಾತಿ ಪಟ್ಟಿಯಂತೆ ರಿಜಿಸ್ಟರ್ ಇದೆ, ಅದರಲ್ಲಿ ಯಾವುದೇ ಲೋಪವಾಗಿಲ್ಲ ಎಂದು ತಮ್ಮ ಚಾಲಾಕಿತನ ತೋರುತ್ತಾರೆ.
ಇತ್ತ ಸತ್ಯ ಏನೆಂದು ಗೊತ್ತಿದ್ದರು ಸಾಬೀತು ಮಾಡಲು ಸಾಧ್ಯವಾಗದೇ ಶಿವಣ್ಣ ಒದ್ದಾಡುತ್ತಿದ್ದಾನೆ. ಇನ್ನೊಂದೆಡೆ ಆ ಭಾಗದ ಊರಿನ ಜನರೆಲ್ಲ ಅದು ವೆಂಕಮ್ಮಜಿಯ ಜಾಗ ಎಂದರೂ ದಾಖಲೆಯ ಕೊರತೆಯಿಂದ ಅವರಿಗೂ ಇನ್ನಷ್ಟು ಮುಜುಗರವಾಯಿತು. ಈಗ ವೆಂಕಮ್ಮಜ್ಜಿಗೆ ಕೊನೆಯಲ್ಲಿ ತನಿಖಾಧಿಕಾರಿಯು ಹೇಳುತ್ತಾರೆ. ನೋಡಿ, ನೀವು ನೀಡಿದ ದಾಖಲೆಗಳು ಸಮರ್ಪಕವಾಗಿಲ್ಲ, ನನ್ನ ವರದಿಯನ್ನು ನಾನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವೆ ಎಂದು ನಗರಸಭೆಯಿಂದ ಹೊರಡುತ್ತಾರೆ. ಇದೆಲ್ಲ ಗಮನಿಸುತ್ತಿದ್ದ ಸಂಕ್ರಪ್ಪನಿಗೆ ಈಗ ನನ್ನ ಜಾಗದ ಗತಿಯೇನು? ನಾನು ದೂರು ನೀಡಿದರೆ ನನ್ನ ಪಾಡು ಕೂಡ ಹೀಗೆ ಆಗುತ್ತೇನೋ ಎನ್ನುವ ಭಯ ಕಾಡತೊಡಗಿತು.
ಈಗ ಅಲ್ಲಿ ನೆರೆದಿದ್ದ ಎಲ್ಲರ ಬಾಯಲ್ಲೂ ಅಯ್ಯೋ ವೆಂಕಮ್ಮಜ್ಜಿಯ ದಾಖಲೆಯೇ ನಕಲಿ ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ. ಈಗ ವಿಷಯ ತಿಳಿದು ಮನೆ ತನ್ನ ಕೈಬಿಟ್ಟು ಹೋಯಿತು ಎನ್ನುತ್ತಾ ವೆಂಕಮ್ಮಜ್ಜಿಯು ಹಾಗೆಯೇ ನೆಲದ ಮೇಲೆ ಕುಸಿದು ಬೀಳುತ್ತಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಶಿವಣ್ಣ ಏನು ಮಾಡುವುದು ಎನ್ನುತ್ತಾ ಉಳಿದವರೊಂದಿಗೆ ಹೊರಬರುತ್ತಾನೆ.
ಈಗ ತನ್ನ ಒಡನಾಡಿಗಳೊಂದಿಗೆ ಶಿವಣ್ಣ ಚರ್ಚಿಸುತ್ತಾನೆ, ಅದೇಗೆ ಸರ್ಕಾರದ ಮಂಜೂರಾತಿಯಲ್ಲಿ ವೆಂಕಮ್ಮಜ್ಜಿಯ ಹೆಸರು ಬಿಟ್ಟುಹೋಯಿತು, ಒಂದು ವೇಳೆ ಬಿಟ್ಟು ಹೋಗಿದ್ದರೆ ಇವರ ಹೆಸರಿಗೆ ಹೇಗೆ ಖಾತೆಯಾಗುತ್ತಿತ್ತು? ಬೇರೆಯವರದೇ ಆಗಿದ್ದರೆ ಅವರೇಕೆ ಇಷ್ಟು ವರ್ಷಗಳವರೆಗೆ ಮೌನಿಯಾಗಿದ್ದರು? ಹೀಗೆ ಯೋಚಿಸುತ್ತಾ ಇದ್ದ ವಿಷಯವನ್ನು ಕೂಡಲೇ ತನ್ನ ಸ್ನೇಹಿತರು ಹಾಗೂ ವಕೀಲರಾದ ಶ್ರೀಪತಿಯವರಿಗೆ ಕರೆಮಾಡಿ ಹೇಳುತ್ತಾನೆ. ಅವರೂ ಸಹಾ ಇಂದು ತನಿಖಾಧಿಕಾರಿಯೆದುರು ನಡೆದ ಚರ್ಚೆಯನ್ನು ಕೇಳಿ ಹೌಹಾರುತ್ತಾರೆ. ಛೇ, ಐವತ್ತು ವರ್ಷದಿಂದ ಇದ್ದವರು ಎಂದ ಮೇಲೆ ಅವರೇ ನಿಜವಾದ ಫಲಾನುಭವಿಯಾಗುತ್ತಾರೆ. ಏನೇ ಆಗಲಿ ಶಿವಣ್ಣ ಅವರಲ್ಲಿ ರೇಶನ್ ಕಾರ್ಡ್, ವಿದ್ಯುತ್ ಬಿಲ್ಲು ಇನ್ನಿತರೆ ದಾಖಲೆಗಳನ್ನು ಸಂಗ್ರಹಿಸಿ ನಾವು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸೋಣ, ಜೊತೆಗೆ ಅಡ್ವರ್ಸ್ ಪೊಸೆಷನ್ ಕೂಡ ಕೈಮ್ ಮಾಡೋಣ, ಸರ್ಕಾರ ಮಂಜೂರು ಮಾಡಿದ ಭುಮಿಯನ್ನು ಉಪಯೋಗಿಸಿಕೊಳ್ಳದೇ ಅದರ ಮಾಲೀಕ ಇಷ್ಟು ವರ್ಷ ಎಲ್ಲಿ ಹೋಗಿದ್ದ? ಅಂದ ಮೇಲೆ ಆ ಜಾಗದ ಉಪಯುಕ್ತತೆಯನ್ನು ಆತ ಪಡೆದಿಲ್ಲ. ಅಗತ್ಯವಿದ್ದ ವೆಂಕಮ್ಮಜ್ಜಿಯೇ ಪಡೆದಿದ್ದಾಳೆ. ಆಕೆಗೆ ಅನ್ಯಾಯವಾಗುವುದು ಬೇಡ ಎಂದರು. ಈಗ ಶಿವಣ್ಣ ಇದೇ ಸರಿಯೆನಿಸಿ ನ್ಯಾಯಾಲಯಕ್ಕೆ ಮೊರೆ ಹೋಗುವುದು ಒಳಿತೆಂದು ತೀರ್ಮಾನಿಸಿ ವೆಂಕಮ್ಮಜ್ಜಿಯ ಮಕ್ಕಳಿಗೆ ಕೂಡಲೇ ಹೊರಟು ಬರುವಂತೆ ಸೂಚಿಸಿದ..
ಇತ್ತ ತನಿಖಾಧಿಕಾರಿ ನಗರಸಭೆಯಿಂದ ಹೊರಟ ನಂತರ ನಗರಸಭೆಯಲ್ಲಿ ಗೌರಮ್ಮನ ಅಧ್ಯಕ್ಷತೆಯಲ್ಲಿ ಒಂದು ರೀತಿಯಲ್ಲಿ ಖುಷಿಯ ಸಂಭ್ರಮಾಚರಣೆ ನಡೆಯುತ್ತದೆ. ಎಲ್ಲರೂ ಏನೋ ಗೆದ್ದಂತೆ ತೇಲಾಡುತ್ತಾರೆ. ನಕಲಿ ಮಂಜೂರಾತಿ ಪಟ್ಟಿಯನ್ನೇ ತೋರಿಸಿ ತನಿಖಾಧಿಕಾರಿಯನ್ನು ಸಾರ್ವಜನಿಕರನ್ನು ದಾರಿ ತಪ್ಪಿಸಿದ್ದಕ್ಕೆ ಇನ್ನು ಧೈರ್ಯದಿಂದ ಮೆರೆಯುತ್ತಿದ್ದಾರೆ. ಆದರೆ ಒಂದಲ್ಲ ಒಂದು ದಿನ ನಿಜವಾದ ಮಂಜೂರಾತಿ ಪಟ್ಟಿಯು ಸರ್ಕಾರದಿಂದ ಯಾರಾದರೂ ಪಡೆದರೆ ತಮಗೆ ಅನಾಹುತ ಎನ್ನುವುದನ್ನು ಅವರು ಸದ್ಯಕ್ಕೆ ಎಣಿಸುತ್ತಿಲ್ಲ..
ಈಗ ರಮೇಶಪ್ಪ ಕೂಡಲೇ ನಕಲಿ ಖಾತೆಯ ಫಾರಂ ನಂಬರ್ 3 ಪಡೆದು ವೆಂಕಮ್ಮಜ್ಜಿ ಇರುವ ಮನೆಯ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿಸುತ್ತಾನೆ. ಇತ್ತ ವೆಂಕಮ್ಮಜ್ಜಿ ಹುಷಾರಿಲ್ಲದೇ ಆಸ್ತಿ ಕೈ ತಪ್ಪಿತು ಎನ್ನುವ ನೋವಿನಲ್ಲಿ ಹಾಸಿಗೆ ಹಿಡಿದಿದೆ. ಇತ್ತ ಮಕ್ಕಳಿಗೂ ಏನೂ ಅರ್ಥವಾಗುತ್ತಿಲ್ಲ. ಅವರು ತನಿಖಾಧಿಕಾರಗಳ ವರದಿ ಬರುವವರೆಗೆ ಕಾಯೋಣವೆಂದು ಯಾರದೋ ಮಾತು ಕೇಳಿ ಸುಮ್ಮನಾಗಿದ್ದಾರೆ.
ಕೆಲವೇ ದಿನಗಳಲ್ಲಿ ಈಗ ರಮೇಶಪ್ಪ ಅದೇ ಆಸ್ತಿಯನ್ನು ಇನ್ನೊಬ್ಬರ ಹೆಸರಿಗೆ ವರ್ಗಾಯಿಸಿದ. ಒಂದೆರಡು ತಿಂಗಳಲ್ಲೇ ಆಸ್ತಿಯು ಎರಡು ಜನರ ಕೈ ಬದಲಾಯಿತು. ಈಗ ರಮೇಶಪ್ಪ ಎನ್ನುವ ಭೂಗಳ್ಳ ವೆಂಕಮ್ಮಜ್ಜಿಯನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸುತ್ತಾನೆ. ಮನೆಯ ಬಳಿ ಹೋಗಿ ಯಾರು ಇಲ್ಲದ ಘಳಿಗೆಯಲ್ಲಿ ಮನೆಯನ್ನು ದ್ವಂಸಮಾಡೋಣವೆಂದು ಯೋಜಿಸಿ ಜೆ.ಸಿಬಿಗಳೊಂದಿಗೆ ಸ್ಥಳಕ್ಕೆ ಹೋಗುತ್ತಾನೆ. ಆದರೆ ಸ್ಥಳೀಯರ ಪ್ರತಿರೋಧದ ನಡುವೆ ಹಾಗೆಯೇ ಬರಿಗೈಲಿ ಹಿಂತಿರುಗುತ್ತಾನೆ.
ಈಗ ವಿಚಾರ ಶಿವಣ್ಣನ ಗಮನಕ್ಕೆ ಬರುತ್ತದೆ, ಕೂಡಲೇ ಮತ್ತೆ ವಕೀಲರಾದ ಶ್ರೀಪತಿಯವರಿಗೆ ಕರೆಮಾಡಿ ಕರೆಸಿಕೊಳ್ಳುತ್ತಾನೆ. ಆಗಲೇ ಎಲ್ಲವೂ ಅಧ್ಯಯನ ಮಾಡಿದ್ದ ವಕೀಲರು ವೆಂಕಮ್ಮಜ್ಜಿಯ ಪರವಾಗಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಯಾರೂ ತೊಂದರೆ ನೀಡದಂತೆ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಈಗ ತಮ್ಮ ಮನೆ ಕೈತಪ್ಪಿಹೋಗುವುದು ಖಚಿತವೆನ್ನುವುದು ವೆಂಕಮ್ಮಜ್ಜಿಯ ಮಕ್ಕಳಿಗೆ ಒಂದೆಡೆ ಮನವರಿಕೆಯಾಗುತ್ತಿದೆ. ಅವರಿಗೆ ಮೋಸ ಮಾಡಿದ್ದು ರಮೇಶಪ್ಪ ಎನ್ನುವುದು ಅವರಿಗೆ ಮೊದಲೇ ಗಮನಕ್ಕೆ ಇತ್ತು. ತಾಯಿ ಆಸ್ತಿಯನ್ನು ಮಾರಲು ಒಪ್ಪದಿದ್ದಾಗ ಹಣದ ಆಮಿಷನ್ನು ಮಕ್ಕಳಿಗೆ ರಮೇಶಪ್ಪ ಒಡ್ಡಿದ್ದ. ಆದರೆ ಅವರು ತಮ್ಮ ತಂದೆ ಬದುಕಿ ಬಾಳಿದ್ದ ಮನೆಯ ಮೇಲಿದ್ದ ಮಮತೆಯಿಂದ ಮಾರಲು ಒಪ್ಪಿರಲಿಲ್ಲ.
ಈಗ ತಮಗೆ ಬಂದ ಅದೋಗತಿಗೆ ರಮೇಶಪ್ಪನ ಮೇಲೆ ಇವರಿಗೆ ಕೋಪ ನೆತ್ತಿಗೇರಿ ದ್ವೇಷವು ಮನದಲ್ಲಿ ಕುದಿಯುತ್ತಿದೆ. ಕೂಡಲೇ ಮತ್ತೆ ಶಿವಣ್ಣನನ್ನು ಕರೆದುಕೊಂಡು ನಗರಸಭೆಗೆ ಹೋಗುತ್ತಾರೆ. ಯಾರ ಹೆಸರಲ್ಲಿ ಜಾಗವಿದೆಯೋ ಅವರ ಬಳಿಯೂ ಹೋಗಿ ಕೇಳುತ್ತಾರೆ. ಅವರು ಇವರನ್ನೇ ಗದರಿಸಿ ಆ ಜಾಗ ನಮಗೇ ಮಂಜೂರಾಗಿದ್ದು ನಮ್ಮ ದಾಖಲೆ ಸರಿಯಿದೆ, ನೀವು ಕೂಡಲೇ ಸ್ಥಳ ಕಾಲಿ ಮಾಡಿ, ನಿಮ್ಮ ಜಾಗ ಬೇರೆ ಎಲ್ಲೋ ಇರಬೇಕು, ಬೇಕಾದರೆ ಹೇಳಿ ತುಸು ಹಣ ನೀಡುತ್ತೇವೆ ಎಂದು ಗದರಿಸಿ ಹೊರಕಳಿಸುತ್ತಾರೆ.
ಈಗ ತಮ್ಮ ಮನೆಯಿಂದಲೇ ತಾವೇ ಅನಾಥರಾಗಿ ಭೂಗಳ್ಳರಿಂದ ಆದ ಅವಮಾನಕ್ಕೆ ವೆಂಕಮ್ಮಜ್ಜಿಯ ಇಬ್ಬರೂ ಮಕ್ಕಳು ಕೋಪದಲ್ಲಿ ಕುದಿಯುತ್ತಾರೆ, ನಮ್ಮ ಆಸ್ತಿಯನ್ನು ಕಬಳಿಸಿ ನಮ್ಮನೇ ಕಳ್ಳರು ಎನ್ನುವವರನ್ನು ಹಾಗೆಯೇ ಬಿಡುವುದೇ? ಇಂತಹ ದುಷ್ಟರನ್ನು ಸಂಹರಿಸಲು ಯಾವುದೇ ತೊಂದರೆಯಾದರೂ ನಮಗೆ ಆಗಲಿ, ಇಂತಹ ದುಷ್ಟರನ್ನು ಬಿಡುವುದು ಬೇಡವೆಂದು ಅಣ್ಣ ತಮ್ಮ ಇಬ್ಬರೂ ಸೇಡಿಗಾಗಿ ಹಪಹಪಿಸಿ ಕಾಯುತ್ತಾ ಕುಳಿತಿದ್ದಾರೆ..
ಭಾಗ-6
ರಮೇಶಪ್ಪನು ವೆಂಕಮ್ಮಜ್ಜಿಯ ಇಬ್ಬರೂ ಮಕ್ಕಳಾದ ರಾಜು ಮತ್ತು ಕುಮಾರ ಇಬ್ಬರ ಮೇಲು ನಕಲಿ ಖಾತೆ ಮಾಡಿಸಿಕೊಂಡ ಚಂದ್ರಪ್ಪ ಎನ್ನುವವರಿಂದ ಸುಳ್ಳು ದೂರು ಕೊಡಿಸುತ್ತಾನೆ. ನಮ್ಮ ಮನೆಗೇ ಬಂದು ನಮ್ಮ ಮೇಲೇಯೆ ಹಲ್ಲೆಗೆ ಯತ್ನಿಸಿದರು, ಜೀವ ಬೆದರಿಕೆ ಕೂಡ ಹಾಕಿದರು ಎಂದು ಆರೋಪ ಹೊರಿಸಲಾಗಿರುತ್ತದೆ. ಇದರಿಂದಾಗಿ ಇಬ್ಬರನ್ನು ಪೋಲಿಸರು ವಿಚಾರಣೆಗೆ ಕರೆತರಲು ಹುಡುಕುತ್ತಿದ್ದಾರೆ, ವಿಷಯ ತಿಳಿಯುತ್ತಲೇ ಏನು ಮಾಡಬೇಕೆನ್ನುವುದು ಅರಿವಾಗದೇ ಇಬ್ಬರೂ ನೇರವಾಗಿ ಶಿವಣ್ಣನ ಬಳಿ ಹೋಗುತ್ತಾರೆ. ಶಿವಣ್ಣ ಪೋಲಿಸರಿಗೆ ವಿಚಾರಿಸುವೆ ಎಂದು ಅವರನ್ನು ಕರೆದುಕೊಂಡು ಸ್ಟೇಶನ್ಗೆ ಹೋಗುತ್ತಾನೆ. ಆದರೆ ಇತ್ತ ರಮೇಶಪ್ಪ ಪ್ರಕರಣವನ್ನು ಇನ್ನೂ ಗಂಭೀರಗೊಳಿಸಿ ಚಂದ್ರಪ್ಪನ ಮನೆಯವರ ಮೇಲೆ ಹಲ್ಲೆಯಾಗಿದೆ, ಮಗಳು ಕಣ್ಣಾರೆ ಕಂಡು ಭಯಭೀತಳಾಗಿದ್ದಾಳೆ, ಇದಕ್ಕೂ ಇವರೇ ಕಾರಣವೆಂದು ಇನ್ನೊಂದು ದೂರು ಕೊಡಿಸುತ್ತಾನೆ. ಈಗ ಪೋಲಿಸರು ವಿಧಿಯಿಲ್ಲದೇ ಇಬ್ಬರನ್ನು ದಸ್ತಗಿರಿ ಮಾಡುವುದು ಅನಿವಾರ್ಯವಾಗುತ್ತದೆ. ಎಲ್ಲವನ್ನೂ ಮೋಸದಿಂದ ರಮೇಶಪ್ಪ ಯೋಜಿಸಿ ದುಷ್ಕøತ್ಯಮಾಡಿರುವುದರಿಂದ ಏನೆಂದು ಪೋಲಿಸರಿಗೂ ಅರಿವಿದ್ದರೂ ಒಟ್ಟಾರೆ ರಮೇಶಪ್ಪನ ಕಪಟ ನಾಟಕ, ಆತನ ಹಣದಾಹ, ರಾಜಕೀಯ ಬೆಂಬಲಕ್ಕೆ ಅವರೂ ಅನಿವಾರ್ಯವಾಗಿ ರಾಜು ಮತ್ತು ಕುಮಾರ ಇಬ್ಬರನ್ನು ವಶಕ್ಕೆ ಪಡೆಯುತ್ತಾರೆ. ವಿಷಯ ತಿಳಿದು ವೆಂಕಮ್ಮಜ್ಜಿ ಕುಸಿದುಹೋಗುತ್ತಾಳೆ. ಇತ್ತ ಮನೆಯನ್ನು ಕಳೆದುಕೊಂಡ ನೋವಿನ ಜೊತೆಗೆ ಮಕ್ಕಳ ಬಾಳು ಹಾಳಾಗುವುದನ್ನು ಕಂಡು ಕಣ್ಣೀರಲ್ಲಿ ಮೋಸದ ಹಾದಿಯನ್ನು ತೊಳೆಯುತ್ತಾ ಎದೆ ಬಡಿದುಕೊಂಡು ಬಿದ್ದಿದ್ದಾಳೆ.
ಇತ್ತÀ ಏನು ತಪ್ಪು ಮಾಡದೇ ಇದ್ದರೂ ಅಣ್ಣ ತಮ್ಮ ಇಬ್ಬರೂ ಜೈಲು ಪಾಲಾದರು, ಎಲ್ಲವನ್ನು ನೋಡಿ ಕಂಗಾಲಾಗಿ ಶಿವಣ್ಣ ಇಬ್ಬರನ್ನೂ ಬೇಲ್ ಮೇಲೆ ಹೊರತರಲು ಒದ್ದಾಡುತ್ತಿದ್ದಾನೆ. ಮಾರನೇಯ ದಿವಸವೇ ಬೇಲ್ಗೆ ನ್ಯಾಯಾಲಯದಲ್ಲಿ ಪ್ರಾರ್ಥಿಸುತ್ತಾರೆ. ಆದರೆ ಇವರ ಮೇಲೆ ಮನೆಗೆ ನುಗ್ಗಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ, ಜೀವ ಬೆದರಿಕೆ, ಲೈಂಗಿಕ ಕಿರುಕುಳ ಹೀಗೆ ಅನೇಕ ಕಠಿಣ ಆರೋಪಗಳನ್ನು ಹೋರಿಸಿದ್ದರಿಂದ ಇಬ್ಬರಿಗೂ ಬೇಲ್ ದೊರೆಯುವುದಿಲ್ಲ. ಹೀಗೆ ಮತ್ತೆ ಮೇಲುಗಡೆಯ ನ್ಯಾಯಾಲಯದಲ್ಲಿ ಬೇಲ್ ಗಾಗಿ ಪ್ರಾರ್ಥಿಸುತ್ತಾರೆ. ಅಂತೂ ಒಂದು ವಾರದ ನಂತರ ಬೇಲ್ ಮೇಲೆ ಹೊರಬರುತ್ತಾರೆ.
ಅಷ್ಟು ಸಮಯದವರೆಗೆ ಏನು ತಪ್ಪು ಮಾಡದೇ ಕೇವಲ ಸುಳ್ಳು ದೂರಿನ ಮೇಲೆ ಅವರನ್ನು ರಮೇಶಪ್ಪ ವಾಮ ಮಾರ್ಗದ ಮೂಲಕ ಜೈಲುಪಾಲು ಮಾಡಿದ್ದಕ್ಕೆ ಈಗ ಇವರಿಗೆ ಇನ್ನಷ್ಟು ಕೋಪ ಬಂದು ಮನಸ್ಸು ಬಹಳ ಉಗ್ರವಾಗಿದೆ. ಜೊತೆಗೆ ತಮ್ಮ ತಾಯಿಗಾದ ನೋವಿಗೂ ಅವರಿಗೆ ರೋದನೆ ಮುಗಿಲು ಮುಟ್ಟಿದೆ, ದ್ವೇಷದ ಜ್ವಾಲೆ ಹೊತ್ತಿ ಉರಿಯುತ್ತಿದೆ. ಈಗ ಅಣ್ಣ ತಮ್ಮ ಇಬ್ಬರೂ ಜೈಲಿನಿಂದ ಹೊರಬಂದವರೇ ನೇರವಾಗಿ ಮನೆಗೆ ಬಂದರು. ತಾಯಿ ವೆಂಕಮ್ಮಜ್ಜಿ ಇವರನ್ನು ನೋಡಿ ಮತ್ತೆ ರೋದಿಸಲಾರಂಭಿಸಿದಳು.
ಈಗ ಏನು ಏತ್ತ ಯಾವುದೂ ಅರಿಯದೇ ವೆಂಕಮ್ಮಜ್ಜಿ ನುಡಿಯುತ್ತಿದ್ದಾಳೆ, ಮಕ್ಕಳೇ ಇನ್ನೇನು ಮಾಡೋದು? ನಮ್ಮ ಈ ಮನೆಯ ಋಣ ಮುಗಿದಿದೆ, ದೇವರು ನಮ್ಮ ಕೈಬಿಟ್ಟಿದ್ದಾನೆ, ಯಾರಿಗೂ ಗೊತ್ತಿಲ್ಲದ ಹಾಗೇ ಸುಮ್ಮನೇ ಜಾಗ ಮತ್ತು ಊರು ಬಿಟ್ಟು ಓಡಿ ಹೋಗೋಣ ಎನ್ನುತ್ತಾಳೆ. ಈಗ ಮಕ್ಕಳಿಗೆ ಏನು ಹೇಳುವುದೋ ಅರ್ಥವಾಗುತ್ತಿಲ್ಲ. ಆದರೂ ಧೈರ್ಯದಲ್ಲಿ ನುಡಿಯುತ್ತಾರೆ. ಏನೇ ಆಗಲಿ ಇದು ನಮ್ಮ ಜಾಗ, ಹೆದರಿ ಓಡಿ ಹೋಗುವುದು ಬೇಡ. ಏನು ಆಗುತ್ತದೋ ಆಗಲಿ, ಅವರು ಸುಳ್ಳು ದೂರು ನೀಡಿ ನಮಗೆ ಜೈಲಿಗೆ ಕಳುಹಿಸಿರಬಹುದು, ಆದರೆ ಒಂದಲ್ಲ ಒಂದು ದಿವಸ ಆ ರಮೇಶಪ್ಪನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ, ಸುಮ್ಮನಿರು ಎಂದು ಸಮಾಧಾನಿಸುತ್ತಾ ಇಬ್ಬರೂ ಮನೆಯಿಂದ ಊರ ಹೊರಗಿನ ಗುಡಿಯತ್ತಾ ನಡೆಯುತ್ತಾರೆ.
ಈಗಾಗಲೇ ಕತ್ತಲೆಯಾಗುತ್ತಾ ಬಂದಿದೆ, ಜನರು ಯಾರು ಇಲ್ಲ, ಎಲ್ಲವನ್ನು ಗಮನಿಸಿ ಇಬ್ಬರೂ ಗುಡಿಯ ಹೊರಭಾಗದಲ್ಲಿ ಕುಳಿತು ಮಾತನಾಡಿಕೊಳ್ಳುತ್ತಾರೆ. ಇನ್ನು ಜೀವನದಲ್ಲಿ ಯಾರಿಗೂ ಒಂದೇಟು ಹಾಕದ ನಮ್ಮ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ, ಜೀವ ಬೆದರಿಕೆ, ಹಲ್ಲೆ, ಮನೆ ನುಗ್ಗಿ ದರೋಡೆ ಮಾಡಲು ಹೋದರು ಇನ್ನಿತರೆ ಸುಳ್ಳು ದೂರುಗಳನ್ನು ಚಂದ್ರಪ್ಪನ ಕೈಲಿ ರಮೇಶಪ್ಪ ನೀಡಿಸಿದ್ದರಿಂದ ಇವರಿಗೇ ಈ ಸಮಾಜದ ಮೇಲೆ ಬಹಳ ಅಸೂಯೆ ಬಂದಿದೆ. ಮುಗ್ಧರ ಮನದ ಮೇಲೆ ಕಾದ ಸುತ್ತಿಕೆಯಿಂದ ಹೊಡೆದಂತಾಗಿದೆ.
ಏನೇ ಆಗಲಿ, ಈ ಹಣವಂತರಿಂದ ನಾವು ಬಚಾವಾಗುವುದು ಸುಳ್ಳು. ಇಷ್ಟೆಲ್ಲಾ ಅನ್ಯಾಯ ನಮ್ಮ ಮೇಲೆ ಮಾಡಿ, ನಮಗೇ ಜೈಲಿಗಟ್ಟಿದ್ದಾರೆ, ನಿಜವಾಗಿ ಜೈಲಿಗೆ ಹೋಗಬೇಕಾದವರು ಹೊರಗಿದ್ದು ನಮ್ಮನ್ನು ಒಳಗಟ್ಟಿ ಮಜಾ ನೋಡಿದ್ದಾರೆ. ಇಂತಹ ದುರುಳರನ್ನು ನಾವು ಸುಮ್ಮನೇ ಬಿಡುವುದರಲ್ಲಿ ಅರ್ಥವೇ ಇಲ್ಲ. ಇನ್ನು ಎಂದಿದ್ದರೂ ನಾವು ಈ ಊರಿನಲ್ಲಿ ನೆಮ್ಮದಿಯಿಂದ ಬದುಕವುದು ಅನುಮಾನವೆಂದು ನಿರ್ಧರಿಸುತ್ತಾರೆ. ಅಷ್ಟರಲ್ಲಿ ಇವರನ್ನು ಹುಡುಕಿಕೊಂಡು ಯಾರೋ ಕೂಗುತ್ತಾ ಓಡಿ ಬರುತ್ತಾರೆ. ಇವರನ್ನು ನೋಡಿದ ಅವರು ನುಡಿಯುತ್ತಾರೆ, ಅಲ್ಲಿ ನಿಮ್ಮ ತಾಯಿ ಎದೆ ನೋವಿನಿಂದ ಒದ್ದಾಡುತ್ತಿದ್ದಾಳೆ, ಬೇಗನೇ ಅವಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ನೀವು ಬೇಗನೇ ಹೋಗಿ ಎನ್ನುತ್ತಾರೆ.
ಈಗ ಅಣ್ಣ ತಮ್ಮ ಇಬ್ಬರೂ ಆಸ್ಪತ್ರೆ ಕಡೆಗೆ ಓಡುತ್ತಾರೆ. ಆಗಲೇ ವೆಂಕಮ್ಮಜ್ಜಿಯ ಉಸಿರು ಹಾರಿ ಹೋಗಿದೆ. ಇಬ್ಬರೂ ಮಕ್ಕಳು ಎದೆ ಬಡಿದುಕೊಂಡು ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ರೋದಿಸುತ್ತಿದ್ದಾರೆ. ಊರಿನ ಜನರೆಲ್ಲರಿಗೂ ಇವರಿಗೇ ಅನ್ಯಾಯವಾಗಿದೆ ಎಂದು ಗೊತ್ತಿದೆ. ಆದರೆ ಊರಿನ ಭೂ ಮಾಪಿಯಾದ ಡಾನ್ಗಳೆದುರು ಯಾರು ತುಟಿ ಬಿಚ್ಚದೇ ಮೌನವಾಗಿದ್ದಾರೆ. ಅಂತೂ ನೋವಿನಲ್ಲಿ ತಾಯಿಯ ದೇಹವನ್ನು ಮಕ್ಕಳು ತೆಗೆದುಕೊಂಡು ಹೊರಬರುತ್ತಾರೆ. ದಾರಿಯಲ್ಲಿ ಮತ್ತೆ ರಮೇಶಪ್ಪ ಇವರತ್ತಲೇ ನೋಡಿ ಅಪಹಾಸ್ಯದ ನಗುವನ್ನು ಬೀರುತ್ತಾನೆ. ಈಗ ಇಬ್ಬರಿಗೂ ಇನ್ನಷ್ಟು ಕೋಪ ಬರುತ್ತದೆ. ಆದರೂ ಮುಂದಿನ ಕಾರ್ಯಕ್ಕಾಗಿ ಮೌನಿಯಾಗುತ್ತಾ ಸಾಗುತ್ತಾರೆ.
ತಾಯಿಯ ದೇಹವು ಬೆಂಕಿಯಲ್ಲಿ ಮರೆಯಾಗುತ್ತಿದ್ದರೆ ಇತ್ತ ಇವರ ಮನದಲ್ಲಿ ದ್ವೇಷದ ಬೆಂಕಿಯು ದಗದಗಿಸಿ ಉರಿಯುತ್ತಿದೆ, ಸೇಡೇ ಮಳೆಯಾಗಿ ಸುರಿಯುತ್ತಿದೆ. ಅಂತೂ ತಾಯಿಯನ್ನು ಪರೋಕ್ಷವಾಗಿ ಕೊಂದವರ ಜೀವ ತೆಗೆದು ತನ್ನ ತಾಯಿಯ ಆತ್ಮಕ್ಕೆ ಶಾಂತಿ ಲಭಿಸುವಂತೆ ಮಾಡಬೇಕೆಂದು ಇಬ್ಬರೂ ಹಠತೊಟ್ಟಿದ್ದಾರೆ.
ಈಗ ಒಮ್ಮೆಲೆ ಗುಡುಗು ಸಹಿತ ವಿಪರೀತವಾದ ಮಳೆ ಸುರಿಯುತ್ತದೆ, ಆ ಮಳೆಯಲ್ಲಿ ಇವರ ತಾಯಿಯ ದೇಹದ ಬೂದಿಯು ಹರಿದು ಪಕ್ಕದ ನದಿಯಲ್ಲಿ ಲೀನವಾಗುತ್ತದೆ. ಈಗ ಅಣ್ಣ ತಮ್ಮ ಇಬ್ಬರೂ ಏನನ್ನೂ ತೋಚದೇ ಕಣ್ಣೀರಿಡುವಾಗ ಮತ್ತೆ ಶಿವಣ್ಣ ಧೈರ್ಯದ ಮಾತುಗಳನ್ನು ಹೇಳಿ ಸಮಾಧಾನಿಸಲು ಪ್ರಯತ್ನಿಸುತ್ತಾನೆ. ಆದರೆ ಅದು ಎಳ್ಳಷ್ಟು ಫಲ ನೀಡುವುದಿಲ್ಲ. ಈಗ ಇಬ್ಬರೂ ಮತ್ತೆ ನಿರ್ಜನ ಪ್ರದೇಶದಲ್ಲಿ ಕುಳಿತು ಮುಂದೇನು ಮಾಡುವುದು ಎಂದು ಯೋಚಿಸುತ್ತಾ ಇದ್ದಾರೆ.
ಈಗ ಅಣ್ಣ ರಾಜು ನುಡಿಯುತ್ತಾನೆ, ಈಗ ನಾವೇನಿದ್ದರೂ ಇಲ್ಲಿ ಮನೆ ಉಳಿಸಿಕೊಳ್ಳುವುದು ಸುಳ್ಳು. ಅದು ನಮ್ಮಿಂದ ಕನಸಿನ ಮಾತು. ನಾವು ಎಲ್ಲೋ ಯಾವುದೋ ಹೋಟೆಲ್ನಲ್ಲಿ ಕೆಲಸಮಾಡಿ ಹೊಟ್ಟೆಗೆ ಅನ್ನ ಕಾಣೋರು. ಈಗ ಆಗಿದ್ದು ಆಗಲಿ, ನಾವು ದೇಶದ ಯಾವುದೇ ಜಾಗವಾಗಲಿ ಬದುಕಿ ಬಾಳುತ್ತೇವೆ. ಮೊದಲು ನಮಗೆ ನೋವು ನೀಡಿದವರಿಗೆ ಖಂಡಿತವಾಗಿ ಬಿಡುವುದು ಬೇಡ. ಅವರಿಗೆ ಒಂದು ಅಂತ್ಯವನ್ನು ಹಾಡಲೇಬೇಕು. ಆ ರಮೇಶಪ್ಪನ ಕೊಲೆಮಾಡಿ, ನಮ್ಮ ತಾಯಿಯ ಆತ್ಮಕ್ಕೆ ಶಾಂತಿ ಲಭಿಸುವಂತೆ ಮಾಡೋಣ ಎನ್ನುತ್ತಾನೆ, ಅದಕ್ಕೆ ತಮ್ಮನೂ ದನಿಗೂಡಿಸುತ್ತಾನೆ. ಈಗ ಅಣ್ಣ ತಮ್ಮ ಇಬ್ಬರೂ ಪಣತೊಟ್ಟು ರಮೇಶಪ್ಪನ ಮನೆ ಕಡೆಗೆ ಹೊರಡುತ್ತಾರೆ..
ಭಾಗ-7
ನೇರವಾಗಿ ಇಬ್ಬರೂ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹಾದುಹೋಗುತ್ತಿರುವಾಗ ಅಲ್ಲೇ ರಸ್ತೆಯಲ್ಲಿ ರಮೇಶಪ್ಪ ಕಾರಿನಲ್ಲಿ ಹೋಗುತ್ತಿರುವುದು ಕಾಣುತ್ತದೆ. ಈಗ ಇಬ್ಬರೂ ಬೈಕ್ನಲ್ಲಿ ರಮೇಶಪ್ಪನ ಬೆನ್ನಟ್ಟಿ ನಡೆಯುತ್ತಾರೆ. ತುಸು ಸಮಯದ ನಂತರ ರಮೇಶಪ್ಪ ಊರಿನ ಹೊರಭಾಗದ ಹೋಟೆಲ್ ಒಳಹೋಗುತ್ತಾನೆ. ಈಗ ಅಣ್ಣ ತಮ್ಮ ಇಬ್ಬರೂ ಹೊರಗಡೆ ಏನು ಎನ್ನುತ್ತಾ ಕಾಯುತ್ತಾ ಮನದಲ್ಲಿ ಯೋಜಿಸಿದಂತೆ ಆಲೋಚಿಸುತ್ತಾ ಏನೇ ಆಗಲಿ ರಮೇಶಪ್ಪನ ಕತೆ ಇಂದೇ ಮುಗಿಸಬೇಕೆಂದು ನಿರ್ಧರಿಸುತ್ತಾರೆ.
ರಮೇಶಪ್ಪ ಹೋಟೆಲ್ ಒಳ ಹೋಗುತ್ತಿದ್ದಂತೆ ಇತ್ತ ಆತನನ್ನು ಭೇಟಿ ಮಾಡಲು ಆತನ ಸ್ನೇಹಿತ ಮಂಜಪ್ಪ ಕೂಡ ಒಳ ಹೋಗುತ್ತಾನೆ. ಅದೂ ಸಹಾ ಇವರಿಬ್ಬರ ಗಮನಕ್ಕೆ ಬರುತ್ತದೆ. ಈಗ ನಿಧಾನವಾಗಿ ಅಣ್ಣ ರಾಜು ಹೋಟೆಲ್ ಒಳಭಾಗಕ್ಕೆ ಹೋಗಿ ನೋಡುತ್ತಾನೆ. ಅಲ್ಲಿ ನಗರಸಭೆಯ ಹಲವು ಅಧಿಕಾರಿಗಳು ಮೊದಲೇ ಬಂದು ಸೇರಿದ್ದಾರೆ. ಎಲ್ಲರೂ ಒಂದೆಡೆ ಕುಳಿತು ಬಹುದೊಡ್ಡ ಪಾರ್ಟಿ ನಡೆಯುತ್ತಿದೆ. ಎಲ್ಲವೂ ರಮೇಶಪ್ಪನೇ ಏರ್ಪಡಿಸಿದ್ದು ಎನ್ನುವುದು ಅರಿವಾಗುತ್ತದೆ. ಈಗ ವಿಷಯವನ್ನು ಹೊರಗಡೆ ಬಂದು ಸಹೋದರ ಕುಮಾರನಿಗೆ ಹೇಳುತ್ತಾನೆ.
ವಿಷಯ ತಿಳಿದು ಇಬ್ಬರಿಗೂ ಈಗ ಮನಸ್ಸು ಇನ್ನಷ್ಟು ಕುದಿಯುತ್ತಿದೆ. ದ್ವೇಷದ ಮಳೆಯು ಸುರಿಯುತ್ತಿದೆ. ತಮ್ಮ ತಾಯಿಯ ಸಾವಿಗೆ ಕಾರಣರಾದ ಎಲ್ಲರೂ ಒಂದೆಡೆ ಸೇರಿದ್ದಾರೆ, ಎಲ್ಲಾ ದುಷ್ಟರನ್ನು ಒಂದೇ ಸಮಯದಲ್ಲೇ ಕೊಂದೇ ಹಾಕಬೇಕು ಎನ್ನುತ್ತಾ ಕೈಗಟ್ಟಿಹಿಡಿದು ಕುಳಿತಿದ್ದಾರೆ. ಒಮ್ಮೆ ಒಳಗೆ ಹೋಗಿ ಮೆತ್ತನೆ ಇಣುಕಿ ಬರುತ್ತಾ ಇತ್ತ ಮುಂದೇನು ಮಾಡಬೇಕು ಎನ್ನುತ್ತಾ ಇಬ್ಬರು ಹೆದ್ದಾರಿಯ ಪಕ್ಕದಲ್ಲೇ ಯಾರಿಗೂ ಅನುಮಾನ ಬರದಂತೆ ಹೊಂಚುಹಾಕಿ ಕುಳಿತಿದ್ದಾರೆ.
ರಾತ್ರಿ ಸಮಯ ಹತ್ತು ಗಂಟೆಯಾಯ್ತು, ಈಗ ಹೋಟೆಲ್ ಬಳಿ ಜನರು ಕಡಿಮೆಯಾಗುತ್ತಿದ್ದಾರೆ. ದಾರಿಯಲ್ಲಿ ಜನರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ, ಆದರೆ ಇತ್ತ ಹೋಟೆಲ್ ಒಳಗಡೆ ಕುಳಿತವರು ಹೊರಗಡೆ ಬರುತ್ತಲೇ ಇಲ್ಲ. ಈಗ ಮತ್ತೆ ರಾಜು ಹೋಟೆಲ್ ಒಳಗಡೆ ಇಣುಕಿ ನೋಡಿದ. ಆಗಲೇ ಕುಡಿದು ಮತ್ತೇರಿದವರು ರಮೇಶಪ್ಪನ ಜೊತೆಯಲ್ಲಿ ಜೋರಾಗಿ ಗಹಗಹಿಸಿ ನಗುತ್ತಾ ಸಿಗರೇಟ್ ಸೇದುತ್ತಾ ಇನ್ನೂ ಕುಡಿಯುತ್ತಲೇ ಇದ್ದಾರೆ. ತುಸು ಸಮಯದ ನಂತರ ಅವರ ಟೇಬಲ್ಗೆ ಊಟ ಬರುತ್ತದೆ. ನಂತರ ಎಲ್ಲರೂ ಊಟಕ್ಕೆ ಕುಳಿತಿದ್ದಾರೆ. ಈಗ ಇನ್ನೇನು ಹೆಚ್ಚೆಂದರೆ ಅರ್ಧ ಗಂಟೆಯಲ್ಲಿ ಎಲ್ಲರೂ ಹೊರಗಡೆ ಬಂದೇ ಬರುತ್ತಾರೆಂದು ಸಮಯ ಎಣಿಸುತ್ತಾ ಹೊರಗಡೆ ಇಬ್ಬರೂ ಕಾಯುತ್ತಿದ್ದಾರೆ.
ಈಗ ರಮೇಶಪ್ಪನ ಕಾರಿನ ಚಕ್ರದ ಕೆಳಗಡೆ ದೊಡ್ಡದಾದ ಕಲ್ಲುತಂದು ಇಡಲು ನಿರ್ಧರಿಸುತ್ತಾರೆ. ಆದರೆ ವಾಚ್ಮೆನ್ ಕಾರಿನ ಬಳಿಯೇ ಇದ್ದಾನೆ. ಆದ್ದರಿಂದ ಮಂಜು ಆತನ ಬಳಿ ಹೋಗಿ ಏನೋ ವಿಳಾಸವನ್ನು ಕೇಳುತ್ತಾನೆ, ಆ ವಾಚ್ಮೆನ್ ಹೊರಬಂದು ದಾರಿ ತೋರುತ್ತಿದ್ದಂತೆ ಇನ್ನೊಂದೆಡೆಯಿಂದ ರಾಜು ದೊಡ್ಡದಾದ ಕಲ್ಲನ್ನು ತಂದು ಚಕ್ರದ ಬುಡಕ್ಕೆ ಇಡುತ್ತಾನೆ. ಅಂತೂ ತುಸು ಯಶಸ್ಸು ಕಂಡಂತೆ ಸಂಭ್ರಮಿಸಿ ಕೂತಿದ್ದಾರೆ. ಈಗ ಒಳಗಡೆಯಿಂದ ಅವರೆಲ್ಲಾ ಹೊರಟ ಬಗ್ಗೆ ಮಾಹಿತಿ ತಿಳಿಯುತ್ತದೆ. ಸುಮಾರು ಎಂಟು ಜನರಿದ್ದಾರೆ. ಎಲ್ಲರ ಮೇಲು ಒಟ್ಟಿಗೆ ಮುಗಿಬೀಳಲು ಸಾಧ್ಯವಿಲ್ಲ. ಹೊಂಚುಹಾಕಿ ಒಬ್ಬೊಬ್ಬರನ್ನೇ ಮುಗಿಸಬೇಕೆಂದು ಹಟತೊಟ್ಟಿಯಾಗಿದೆ.
ಈಗ ಎಲ್ಲರೂ ಹೊರಗಡೆ ಬಂದು ಖುಷಿಯಲ್ಲಿ ಮಾತನಾಡುತ್ತಾ ನಿಂತಿದ್ದಾರೆ, ಈಗ ಮಂಜಪ್ಪ ಮೊದಲು ತನ್ನ ಕಾರಿನಲ್ಲಿ ಹೊರಡುತ್ತಾನೆ, ಅತ್ತ ನಗರಸಭೆಯ ಆರು ಜನ ಅಧಿಕಾರಿಗಳು ಮೂರು ಬೈಕ್ಗಳಲ್ಲಿ ಹೊರಡುತ್ತಾರೆ. ಇತ್ತ ರಮೇಶಪ್ಪ ತನ್ನ ಕಾರಿನ ಬಳಿ ಎಲ್ಲರನ್ನು ಕಳುಹಿಸಿ ನಿಧಾನವಾಗಿ ಬರುತ್ತಾನೆ. ಕಾರಿನ ಒಳಗಡೆ ಕುಳಿತು ಕಾರ್ ಸ್ಟಾರ್ಟ್ ಮಾಡುತ್ತಾನೆ, ಆದರೆ ಕಾರು ಮುಂದಕ್ಕೆ ಹೋಗುವುದಿಲ್ಲ. ಏನೋ ಎಂದು ಯೋಜಿಸುತ್ತಾ ಒಮ್ಮೆ ಕಾರಿನಿಂದ ಕೆಳಗಿಳಿದು ಕಾರಿನ ಹಿಂಭಾಗಕ್ಕೆ ಬರುತ್ತಾನೆ. ಇದೇ ಸಮಯಕ್ಕೆ ಕಾದಿದ್ದ ಅಣ್ಣ ತಮ್ಮ ಇಬ್ಬರೂ ಬಲವಾದ ರಾಡ್ನಿಂದ ರಮೇಶಪ್ಪನ ತಲೆಗೆ ಹೊಡೆಯುತ್ತಾರೆ. ಇವರು ಹೊಡೆದ ಹೊಡೆತಕ್ಕೆ ಆತನ ತಲೆ ಎರಡು ಭಾಗವಾಗಿ ಕಾರಿನ ಹಿಂಭಾಗದಲ್ಲಿ ರಮೇಶಪ್ಪ ಕುಸಿಯುತ್ತಾನೆ.
ಅದೇ ಸಮಯದಕ್ಕೆ ಜೋರಾದ ಸದ್ದು ಕೇಳಿ ವಾಚ್ಮೆನ್ ಓಡಿ ಬರುತ್ತಾರೆ. ಅಷ್ಟರಲ್ಲಿ ಅಣ್ಣ ತಮ್ಮ ಇಬ್ಬರೂ ಬೈಕ್ನಲ್ಲಿ ಪರಾರಿಯಾಗುತ್ತಾರೆ. ಆದರೆ ವಾಚ್ಮೆನ್ಗೆ ತನ್ನ ಬಳಿ ಸ್ವಲ್ಪ ಸಮಯದ ಹಿಂದೆ ವಿಳಾಸ ಕೇಳಿ ಹೋದವನೇ ಇರಬೇಕೆಂದು ಅನುಮಾನ ಬರುತ್ತದೆ. ವಿಷಯ ಕೂಡಲೇ ಎಲ್ಲೆಡೆ ಹಬ್ಬುತ್ತದೆ. ಕೂಡಲೇ ರಮೇಶಪ್ಪನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಆಗಲೇ ರಮೇಶಪ್ಪ ಮರಣಹೊಂದಿದ್ದಾನೆಂದು ಘೋಷಿಸುತ್ತಾರೆ. ಅಣ್ಣ ತಮ್ಮ ಇಬ್ಬರೂ ಆವೇಶದಲ್ಲಿ ಹೊಡೆದ ಹೊಡೆತಕ್ಕೆ ಆತ ಅಲ್ಲೇ ಅಸುನೀಗಿದ್ದಾನೆ. ಈಗ ಪೋಲಿಸರಿಗೂ ಆಶ್ಚರ್ಯವಾಗಿದೆ. ಇಂತಹ ಘಟನೆ ಊರಿನಲ್ಲಿ ಇದೇ ಮೊದಲು. ಇಂತಹ ಘಟನೆ ಎಂದೂ ನಡೆಯದ ಊರಿನಲ್ಲಿ ಇದೇನೆಂದು ಆಲೋಚಿಸುತ್ತಾ ಇದ್ದವರಿಗೆ ಕೂಡಲೇ ನೆನಪಾಗುವುದು ಅವರಿಗೆ ವೆಂಕಮ್ಮಜ್ಜಿಯ ಮಕ್ಕಳು. ಇವರ ಮೇಲೆ ರಮೇಶಪ್ಪ ಬೇರೆಯವರ ಮೂಲಕ ನಕಲಿ ದೂರು ಕೊಡಿಸಿ ಹಿಂಸೆ ನೀಡಿದ್ದಾನೆ ಎನ್ನುವುದು ಹಾಗೂ ತಮ್ಮ ಮನೆಯನ್ನು ಕಬಳಿಸಿದ್ದಾನೆನ್ನುವುದು ಚೆನ್ನಾಗಿ ಗೊತ್ತು. ಹಾಗಾಗಿ ಅವರೇ ಯಾಕೆ ಮಾಡಿರಬಾರದೆಂದು ಅವರನ್ನು ನೋಡಲು ಅವರ ಮನೆಗೆ ಹೋಗುತ್ತಾರೆ.
ಅಲ್ಲಿ ಅಣ್ಣ ತಮ್ಮ ಇಬ್ಬರೂ ಕಾಣಸಿಗುವುದಿಲ್ಲ. ತುಸು ದೂರ ಮುಂದೆ ಬಂದು ಶಿವಣ್ಣನಿಗೆ ಕೇಳುತ್ತಾರೆ. ಆತ ಅವರನ್ನು ನೋಡದೇ ಎರಡು ದಿವಸವಾಯ್ತು ಎನ್ನುತ್ತಾನೆ. ಈಗ ಪೋಲಿಸರಿಗೂ ಗೊಂದಲ. ಅವರು ಊರಿನಲ್ಲಿ ಇದ್ದಾರೋ ಇಲ್ಲವೋ, ಒಂದು ವೇಳೆ ಅವರೇ ಎಂದು ಹೇಗೆ ಹೇಳುವುದು, ಏನೇ ಆಗಲಿ ರಮೇಶಪ್ಪನಿಂದ ಮೋಸಹೋದವರು ಸಾಕಷ್ಟು ಜನರಿದ್ದಾರೆ. ಆದರೆ ಸದ್ಯಕ್ಕೆ ನೋವುಂಡವರು ವೆಂಕಮ್ಮಜ್ಜಿಯ ಮಕ್ಕಳೇ. ಹಾಗಾಗಿ ಅವರನ್ನೇ ಹುಡುಕುತ್ತಾ ಪೋಲಿಸರು ಹೊರಟಿದ್ದಾರೆ.
ಇತ್ತ ಅಣ್ಣ ತಮ್ಮ ಇಬ್ಬರು ತಮ್ಮ ಬೈಕ್ನಲ್ಲಿ ನೇರವಾಗಿ ಮುಂಬೈ ಮಾರ್ಗವಾಗಿ ಪ್ರಯಾಣಿಸುತ್ತಾರೆ. ಇನ್ನೆಂದು ಸದ್ಯಕ್ಕೆ ಈ ಕಡೆ ಊರಿಗೆ ಬರುವುದು ಬೇಡ. ಹಂತ ಹಂತವಾಗಿ ಅಮ್ಮನ ಸಾವಿಗೆ ಕಾರಣವಾದ ಎಲ್ಲರನ್ನು ಕೊಲ್ಲಲೇಬೇಕೆಂದು ಹಟವಿಡಿದು ಮೊದಲಿಗೆ ರಮೇಶಪ್ಪನಿಗೆ ಹೊಡೆದಿದ್ದಕ್ಕೆ ರೋಷದಲ್ಲಿ ಸಂಭ್ರಮಿಸುತ್ತಾ ಬೈಕ್ ಓಡಿಸುತ್ತಿದ್ದಾರೆ. ಈಗ ಒಂದೆಡೆ ತುಸು ಸಮಯ ನಿಲ್ಲುತ್ತಾರೆ. ಹೈವೇ ಪಕ್ಕದ ಹೋಟೆಲ್ ಒಂದರಲ್ಲಿ ಟೀ ಕುಡಿಯಲು ಹೋಗುತ್ತಾರೆ. ಅಲ್ಲಿ ಟಿ.ವಿಯಲ್ಲಿ ನ್ಯೂಸ್ ನೋಡಿದ ಕೆಲವರು ಮಾತನಾಡುತ್ತಿದ್ದಾರೆ, ಶರಧೀಪುರದಲ್ಲಿ ರಾಡ್ನಲ್ಲಿ ಹೊಡೆದು ಒಬ್ಬನ ಕೊಲೆಯಾಗಿದೆಯಂತೆ, ಅದೂ ಬಹಳ ಭೀಕರವಾಗಿ ನಡೆದಿದೆ, ಯಾವ ಕಾರಣಕ್ಕೆ ಯಾರು ಮಾಡಿದ್ದಾರೆನ್ನುವುದು ಎಲ್ಲರಿಗೂ ಗೊಂದಲ. ಇನ್ನೊಂದೆಡೆ ಭಯದ ಮಾತುಗಳು ಆಡುತ್ತಿದ್ದಾರೆ.
ಎಲ್ಲರ ಮಾತುಗಳನ್ನು ಕೇಳುತ್ತಾ ಇವರು ಟೀ ಕುಡಿಯುತ್ತಿದ್ದಾರೆ, ಈಗ ಹೈವೇಯಲ್ಲಿ ಪೋಲಿಸ್ ಜೀಪ್ ಹೋಗುವುದನ್ನು ನೋಡುತ್ತಾರೆ. ಈಗ ಇಬ್ಬರಿಗೂ ಭಯ ಕಾಡುತ್ತದೆ, ಒಂದು ವೇಳೆ ನಮಗೇ ಪೋಲಿಸರು ಬೆನ್ನಟ್ಟಿದ್ದಾರೇನೋ ಎನ್ನುವ ಆತಂಕ ಮನೆಮಾಡುತ್ತದೆ. ಈಗ ಇದೇ ದಾರಿಯಲ್ಲಿ ಪ್ರಯಾಣಿಸುವುದು ಕಷ್ಟವೆನ್ನುತ್ತಾ ಬೇರೆ ಮಾರ್ಗದಲ್ಲಿ ಸಂಚರಿಸಿ ರಾತ್ರಿ ಕಳೆಯಲು ಅಣಿಯಾಗುತ್ತಾರೆ, ಒಟ್ಟಾರೆ ಹೋಗುತ್ತಿದ್ದಾರೆ, ಎಲ್ಲಿಗೆ ಎನ್ನುವುದು ಅವರಿಗೂ ಗೊತ್ತಿಲ್ಲ. ಒಟ್ಟಾರೆ ಎಲ್ಲಾದರಾದರು ಅಡಗಿ ಕೂರಬೇಕು, ಸದ್ಯಕ್ಕೆ ತಪ್ಪಿಸಿಕೊಳ್ಳಬೇಕು, ಮತ್ತೆ ಯಾರಿಗೂ ಅರಿವಿಲ್ಲದೇ ಮುಂದೊಂದು ದಿನ ಊರಿಗೆ ಹೋಗಿ ಉಳಿದವರ ಮೇಲೆ ಮುಗಿ ಬೀಳಬೇಕೆಂದು ಯೋಚಿಸುತ್ತಿದ್ದಾರೆ.
ಬೈಕ್ನಲ್ಲಿ ತುಸು ಸಮಯದ ಸಾಗುತ್ತಿದ್ದಂತೆ ಪೆಟ್ರೋಲ್ ಖಾಲಿಯಾಗುತ್ತಿದ್ದೆ ಎನ್ನುವುದು ಅರಿವಾಗುತ್ತದೆ, ಕೂಡಲೇ ಹೈವೇಯಲ್ಲಿದ್ದ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ಗಾಗಿ ತಡಕಾಡುತ್ತಾರೆ. ಆಗಲೇ ಬಂಕ್ ಬಂದ್ ಮಾಡಿ ಮಲಗಿದ್ದವರ ಬಳಿ ಹೋಗಿ ಬೇಡಿಕೊಳ್ಳುತ್ತಾರೆ, ಆಗ ಬಂಕ್ನಲ್ಲಿ ಒಬ್ಬ ಎದ್ದು ಬಂದು ಪೆಟ್ರೋಲ್ ತುಂಬಿಸುತ್ತಾನೆ. ಈಗ ಟ್ಯಾಂಕ್ ಫುಲ್ ಮಾಡಿಕೊಂಡು ಇಬ್ಬರೂ ಮತ್ತೆ ಮುಂದೆ ಪ್ರಯಾಣಿಸುತ್ತಾರೆ. ಆದರೆ ಎಲ್ಲೆಡೆಯೂ ಬಿಗಿಯಾದ ಪೋಲಿಸ್ ಪಹರೆಯಿದೆ ಎನ್ನುವುದು ಅರಿವಾಗುತ್ತದೆ. ಮುಂದೆ ಚೆಕ್ ಪೋಸ್ಟ್ ಇದೆ, ಅಲ್ಲಿ ಎಲ್ಲರನ್ನು ತಪಾಸಣೆ ಮಾಡುತ್ತಿರುವುದು ಗಮನಕ್ಕೆ ಬರುತ್ತದೆ, ಈಗ ಬಂದ ದಾರಿಯಲ್ಲೇ ತುಸು ಹಿಂದಕ್ಕೆ ಬಂದು ಇನ್ನೊಂದು ಹಳ್ಳಿದಾರಿಯಲ್ಲಿ ಕ್ರಮಿಸುತ್ತಾ ಹೋಗುತ್ತಾರೆ.
ಅಂತೂ ಬಹಳ ಸಮಯವಾಗುತ್ತಿದೆ, ಮುಂಜಾನೆಯ ಸಮಯ ಹತ್ತಿರವಾಗುತ್ತಿದೆ, ಅಂತೂ ಯಾವುದೋ ಮಾರ್ಗದಲ್ಲಿ ಪುಣೆಯ ಹತ್ತಿರಕ್ಕೆ ಹೋಗುತ್ತಾರೆ, ಈಗ ಅವರು ಒಂದೆಡೆ ನಿಲ್ಲುತ್ತಾರೆ, ಇಲ್ಲಿಯೇ ಎಲ್ಲಿಯೋ ಕೆಲಸ ಹುಡುಕುವುದು ಒಳ್ಳೆಯದು, ನಮಗೇನಿದ್ದರೂ ಇಂತಹುದೇ ಎನ್ನುವುದಿಲ್ಲ, ಏನಾದರೂ ತೊಂದರೆ ಇಲ್ಲ ಎನ್ನುತ್ತಾ ಆಗಲೇ ತೆರೆಯುತ್ತಿದ್ದ ಹೋಟೆಲ್ ಬಳಿ ಹೋಗಿ ಕೆಲಸ ಕೇಳುತ್ತಾರೆ. ಅಂತೂ ಕೊನೆಗೊಂದು ಹೋಟೆಲ್ನಲ್ಲಿ ಕೆಲಸಪಡೆಯುತ್ತಾರೆ. ಅಂತೂ ತಾವು ತಂದಿದ್ದ ಬೈಕ್ನ್ನು ಒಂದೆಡೆ ಮುಚ್ಚಿಡುತ್ತಾರೆ. ಒಂದೆರಡು ದಿನದ ನಂತರ ಅದರ ನಂಬರ್ ಪ್ಲೇಟ್ ಬದಲಾಯಿಸುತ್ತಾರೆ. ಯಾರಿಗೂ ಅನುಮಾನ ಬರದಂತೆ ವರ್ತಿಸುತ್ತಾ ಹೋಟೆಲ್ನಲ್ಲಿ ಕೆಲಸಮಾಡುತ್ತಾ ದಿನದೂಡ ತೊಡಗುತ್ತಾರೆ. ಆದರೆ ತಮ್ಮ ಮನೆ ಮತ್ತು ತಾಯಿಯನ್ನು ಕಳೆದುಕೊಂಡ ನೋವು ಅವರನ್ನು ಬಿಡದೇ ಕಾಡುತ್ತಿದೆ. ಆದರೆ ಏನೇ ಆದರೂ ಒಬ್ಬನನ್ನಾದರೂ ಬಲಿ ಪಡೆದಿದ್ದೇವೆ, ಇನ್ನೂ ಉಳಿದವರನ್ನು ಬಿಡಬಾರದೂ ಎಂದು ಪಣತೊಟ್ಟು ದಿನವೂ ಆಲೋಚಿಸುವುದೇ ಅವರ ಬದುಕಾಗಿ ಹೋಗಿದೆ.
ಹೀಗೆ ದಿನಗಳು ಕಳೆಯುತ್ತಾ ಸುಮಾರು ಆರು ತಿಂಗಳು ಕಳೆಯುತ್ತದೆ, ಈಗ ಒಮ್ಮೆ ಊರಿಗೆ ಹೋಗಿ ಉಳಿದವರನ್ನು ಬೇಗನೇ ಮುಗಿಸಬೇಕೆಂದು ಸೇಡಿನಲ್ಲಿ ಸಹೋದರಿಬ್ಬರು ಮಾತನಾಡುತ್ತಿದ್ದಾರೆ. ತಾವು ದುಡಿದ ಹಣದಲ್ಲಿ ಇಲ್ಲಿ ಖುಷಿಯಾಗಿ ಇರಬಹುದು. ಆದರೆ ನಮ್ಮ ಗುರಿ ಏನಿದ್ದರೂ ಮೊದಲು ನಮಗೆ ತೊಂದರೆ ನೀಡಿದ ಎಲ್ಲರನ್ನು ಬಲಿ ಪಡೆಯಲೇಬೇಕು, ಆಗಲೇ ಮಾತ್ರವೇ ಬದುಕು ಸಾರ್ಥಕವೆಂದು ಪಣತೊಟ್ಟಿದ್ದಾರೆ. ಈಗ ಇದುವೇ ಅವರ ಬದುಕಾಗಿ ಹೋಗಿದೆ.
ಈಗ ಪುಣೆಯ ಹೋಟೆಲ್ನಲ್ಲಿ ಕೆಲಸಮಾಡುತ್ತಾ ಅವರಿಗೆ ಅನೇಕ ಜನರು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗುವವರ ಪರಿಚಯವೂ ಆಗಿದೆ, ಅವರ ಬಳಿ ಇವರು ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದಾರೆ, ಅವರ ಬಳಿ ಇರುವ ಮಾರಕ ವೆಪನ್ಗಳ ಬಗ್ಗೆಯೂ ಮಾಹಿತಿ ಕಲೆಹಾಕಿದ್ದಾರೆ. ಈಗ ಅವರಿಗೆ ತಾವು ಒಂದು ರಿವಾಲ್ವರ್ ಹೊಂದಬೇಕು, ಇದುವೇ ತಮಗೆ ಸೇಡು ತೀರಿಸಿಕೊಳ್ಳಲು ವರವಾಗುತ್ತದೆ ಎಂದೆಣಿಸಿ ತಾವು ದುಡಿದ ಹಣವನ್ನೆಲ್ಲಾ ಒಟ್ಟಾಗಿ ಒಬ್ಬನ ಬಳಿ ರಿವಾಲ್ವರ್ಗಾಗಿ ಬೇಡಿಕೆ ಇಡುತ್ತಾರೆ. ಅಂತೂ ಏನೋ ಒದ್ದಾಡಿ ರಿವಾಲ್ವರ್ ಖರೀದಿಸುತ್ತಾರೆ. ಯಾರಿಗೂ ಗೊತ್ತಾಗದಂತೆ ತಮ್ಮ ಬಟ್ಟೆಯ ಗಂಟಿನಲ್ಲಿ ಮುಚ್ಚಿಟ್ಟುಕೊಳ್ಳುತ್ತಾರೆ. ಈಗ ಊರಿನಲ್ಲಿ ಜಾತ್ರೆಯ ಸಮಯ ಹತ್ತಿರವಾಗುತ್ತಿದೆ. ಈಗ ಊರಿಗೆ ಬಂದುಹೋಗುವವರ ಸಂಖ್ಯೆ ಅಧಿಕವಾಗಿರುತ್ತದೆ, ಈ ಸಮಯದಲ್ಲಿ ಊರಿಗೆ ಮಾರು ವೇಷದಲ್ಲಿ ಹೋಗಬೇಕು, ಆಗ ಯಾರಿಗೂ ಅನುಮಾನ ಬರುವುದಿಲ್ಲ, ಪೋಲಿಸರಿಗೂ ಈ ಸಮಯದಲ್ಲಿ ತುಸು ಒತ್ತಡವಿರುತ್ತದೆ, ಅವರಿಗೆ ನಮ್ಮೆಡೆ ಗಮನ ನೀಡಲು ಕಷ್ಟ. ಇದುವೇ ಸಕಾಲವೆನ್ನುತ್ತಾ ಊರಿಗೆ ಹೊರಡಲು ಸಿದ್ದರಾಗುತ್ತಾರೆ.
ಭಾಗ-8
ಮನದಲ್ಲಿ ಒಂದೆಡೆ ಹತಾಶೆ ಇನ್ನೊಂದೆಡೆ ಕೋಪ. ಇದೇ ಒಳಗುದಿಯಲ್ಲಿ ಬೇಯುತ್ತಾ ಈ ಬಾರಿ ಊರ ಜಾತ್ರೆಯ ಸಮಯದಲ್ಲೇ ಹೊಂಚು ಹಾಕಿ ನಮ್ಮ ವೈರಿಗಳೆಲ್ಲರನ್ನು ಮುಗಿಸಿ ತಮ್ಮ ತಾಯಿಯ ಆತ್ಮಕ್ಕೆ ಶಾಂತಿ ಲಭಿಸುವಂತೆ ಮಾಡಲೇಬೇಕೆಂದು ಪಣತೊಟ್ಟು ಊರಿನೆಡೆಗೆ ಸಾಗುತ್ತಿದ್ದಾರೆ. ಪುಣೆಯಿಂದ ಬಸ್ ನಲ್ಲಿ ಬಂದರೆ ಯಾರಾದರೂ ಗೊತ್ತು ಹಿಡಿಯುತ್ತಾರೆಂದು ಮಾರುತಿ ಒಮಿನಿ ವಾಹನವೊಂದನ್ನು ಬಾಡಿಗೆಗೆ ಪಡೆದು ಮಾರುವೇಷದಲ್ಲಿ ಶರಧೀಪುರದ ಪಕ್ಕದ ಹೇಮಾವತಿ ನಗರಕ್ಕೆ ಆಗಮಿಸುತ್ತಾರೆ. ಇತ್ತ ಶರಧೀಪುರದಲ್ಲಿ ಜಾತ್ರೆಯು ಬಹಳ ವಿಜೃಂಭಣೆಯಿಂದ ಆರಂಭವಾಗಿದೆ. ಊರಿಗೆ ಬಂದುಹೋಗುವವರ ಸಂಖ್ಯೆಯು ಸಾಮಾನ್ಯವಾಗಿ ಹೆಚ್ಚಾಗಿದೆ.
ಈಗ ತಾವು ಬಾಡಿಗೆಗೆ ತಂದ ವಾಹನದಲ್ಲಿ ಮಾರುವೇಷದಲ್ಲಿ ರಾತ್ರಿಯ ಸಮಯದಲ್ಲಿ ಸಾವಕಾಶವಾಗಿ ಊರನ್ನು ಪ್ರವೇಶಿಸುತ್ತಾರೆ. ತಾವು ಯಾರನ್ನೆಲ್ಲಾ ಮುಗಿಸಬೇಕೋ ಅವರ ಮನೆಗಳ ಬಳಿ ಹೋಗುತ್ತಾರೆ. ಅವರ ಚಲವಲನಗಳನ್ನು ಗಮನಿಸುತ್ತಾರೆ. ಊರಿನ ಎಲ್ಲಾ ಬೀದಿಯಲ್ಲೂ ಸಾಕಷ್ಟು ಜನರು ಬಂದುಹೋಗುತ್ತಿದ್ದಾರೆ. ಈ ಸಮಯದಲ್ಲಿ ಅವರು ಮನೆಯಿಂದ ಹೊರಬಂದಾಗ ಇಲ್ಲವೇ ಊರಿನಲ್ಲಿ ಅವರು ಕಂಡಾಗ ಅವರ ಮೇಲೆ ಫೈರಿಂಗ್ ಮಾಡಿದರೆ ಒಂದು ವೇಳೆ ಬೇರೆಯವರಿಗೆ ತೊಂದರೆಯಾದರೆ ಇಲ್ಲವೇ ತಾವೇ ಸಿಕ್ಕಿಬಿದ್ದರೆ ತೊಂದರೆಯೆಂದು ಒಂದೆಡೆ ಇಬ್ಬರಿಗೂ ಭಯವಾಗುತ್ತದೆ.
ಹೀಗೆ ಆಲೋಚಿಸುತ್ತಾ ಈಗ ವಾಹನವನ್ನು ಊರಿನ ಹೊರಭಾಗಕ್ಕೆ ತೆಗೆದುಕೊಂಡು ಹೋಗುತ್ತಾರೆ. ಈಗ ಇಬ್ಬರೂ ಒಂದೆಡೆ ಕುಳಿತು ಚರ್ಚಿಸುತ್ತಿದ್ದಾರೆ. ಊರಲ್ಲಿ ಇಂತಹ ಸಮಯದಲ್ಲಿ ಪೋಲಿಸರಿಗೆ ಒತ್ತಡದ ಕೆಲಸ. ಅವರಿಗೆ ತುಸುವೂ ಬಿಡುವುರುವಿದಿಲ್ಲ. ಇಂತಹ ಸಮಯವನ್ನು ನಾವು ಉಪಯೋಗಿಸಿಕೊಳ್ಳಲೇಬೇಕು. ಈಗ ನಮ್ಮ ಗುರಿ ವಿಫಲವಾದರೆ ಮತ್ತೆ ಬೇರೆ ಸಮಯದಲ್ಲಿ ಕಷ್ಟವೆಂದು ಮತ್ತೊಮ್ಮೆ ಧರ್ಮಸಂಕಟದಲ್ಲಿ ಒದ್ದಾಡುತ್ತಿದ್ದಾರೆ.
ಈಗ ಅಣ್ಣ ಹೇಳುತ್ತಾನೆ, ಏನೇ ಆಗಲಿ ಆ ಕೇಸ್ ವರ್ಕರ್ ಮನೆಗೆ ನಾಳೆ ಬೆಳಿಗ್ಗೆ ಮುಂಜಾನೆಯ ಸಮಯದಲ್ಲಿ ಹೋಗೋಣ. ಹಾಲು ಇಲ್ಲವೇ ಪೇಪರ್ ಹಾಕುವವನ ನೆಪದಲ್ಲಿ ಆತನ ಮನೆ ಬಳಿ ಹೋಗಿ ಬಿಲ್ ನೀಡುವಂತೆ ಕೇಳೋಣ. ವಿಧಿಯಿಲ್ಲದೇ ಆತನೇ ಬರುತ್ತಾನೆ. ಆಗ ಆತನ ಮೇಲೆ ಫೈರಿಂಗ್ ಮಾಡಿ ಆ ಜಾಗದಿಂದ ಮರೆಯೋಗೋಣ, ಮುಂಜಾನೆ ಬೇರೆ ರಸ್ತೆ ಖಾಲಿ ಇರುತ್ತದೆ ಎನ್ನುತ್ತಾನೆ. ಇದೇ ಉತ್ತಮ ಮಾರ್ಗವೆಂದು ಈ ಮಾತಿಗೆ ತಮ್ಮನೂ ಸಮ್ಮತಿಸುತ್ತಾನೆ.
ಯೋಜಿಸಿದಂತೆ ಕಾರ್ಯೋನ್ಮುಖರಾಗಲು ಮನಸ್ಸು ಗಟ್ಟಿಗೊಳಿಸಿಕೊಂಡು ಇಬ್ಬರೂ ತಮ್ಮ ವಾಹನದಲ್ಲಿ ಈಗ ಪಕ್ಕದ ಹೇಮಾವತಿ ನಗರದದಲ್ಲಿ ತಾವು ತಂಗಿದ ಲಾಡ್ಜ್ ಕಡೆಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಆಶ್ಚರ್ಯವೊಂದು ಕಂಡಿತು. ಅವರು ಯಾರನ್ನೆಲ್ಲಾ ಮುಗಿಸಬೇಕೆಂದು ಹಠವಿಡಿದು ಕುಳಿತಿದ್ದರೋ ಅದರಲ್ಲಿ ಒಬ್ಬ ನಗರಸಭೆಯ ಕಂದಾಯ ಅಧಿಕಾರಿಯು ಅದೇ ನಗರಸಭೆಯ ಸ್ಟಾಂಡಿಂಗ್ ಕಮಿಟಿ ಛೇರ್ಮೆನ್ ಜೊತೆಗೆ ಕಾಣುತ್ತಾನೆ, ಈಗ ಸಹೋದರರಿಬ್ಬರೂ ಅವರನ್ನು ಹಿಂಬಾಲಿಸುತ್ತಾರೆ. ಇಬ್ಬರೂ ತಾವು ಉಳಿದುಕೊಂಡ ಲಾಡ್ಜ್ಗೇ ಬರುತ್ತಾರೆ. ಇವರಿಗೆ ತಾವು ಬಯಸಿದ್ದು ತಮ್ಮ ಬಳಿಯೇ ಒಲಿದು ಬಂದಂತಹ ಖುಷಿ. ಕುರಿಯೇ ಓಡೋಡಿ ಬಂದು ಕತ್ತು ಕೊಟ್ಟಂತೆ ಅನುಭೂತಿ.
ಈಗ ಅವರು ಅದೇ ಹೋಟೆಲ್ನ ರೂಂ ಒಂದರ ಒಳಗೆ ಹೋಗುತ್ತಾರೆ. ಮೆತ್ತನೇ ಹೊರಗಡೆ ನಿತ್ತು ಒಳಗಡೆ ಏನು ನಡೆಯುತ್ತಿರಬಹುದೆನ್ನುವುದನ್ನು ಕೇಳಿಸಿಕೊಳ್ಳುತ್ತಿದ್ದಾರೆ. ಈಗ ಇಬ್ಬರ ನಡುವೆ ಊರಿನಲ್ಲಿ ಏನೆಲ್ಲಾ ಆಸ್ತಿಗಳನ್ನು ವಾಮಮಾರ್ಗದಲ್ಲಿ ಕಬಳಿಸಲಾಗಿದೆಯೋ ಅದರ ವಿಷಯದ ಬಗ್ಗೆ ಚರ್ಚೆಯಾಗುತ್ತಿದೆ. ಈಗ ಸ್ಟಾಂಡಿಂಗ್ ಕಮಿಟಿ ಚೇರ್ಮೆನ್ ಶ್ರೀಕರ ಹೇಳುತ್ತಾನೆ. ನಾನೇ ಅನೇಕ ಜನ ಮುಗ್ಧರನ್ನು ಉಪ ನೋಂದಣಾಧಿಕಾರಿ ಕಚೇರಿಗೆ ಕಳುಹಿಸಿ, ಹಣದ ಆಮಿಷ ತೋರಿಸಿ, ಅವರೇ ಆಸ್ತಿಯ ಮಾಲಿಕರೆಂದು ಅವರಿಂದಲೇ ಥಂಬ್ ಇಂಪ್ರೆಶನ್ ಕೊಡಿಸಿದ್ದೇನೆ, ಅವರಿಂದಲೇ ಸೇಲ್ ಸರ್ಟಿಫಿಕೇಟ್ಗೆ ಸಹಿ ಹಾಕಿಸಿದ್ದೇನೆ, ಎಷ್ಟೋ ಸತ್ತವರ, ಊರು ಬಿಟ್ಟ ಫಲಾನುಭವಿಗಳ ಅನಾಥ ಆಶ್ರಯ ನಿವೇಶಗಳನ್ನು ಹೀಗೆ ಲೆಕ್ಕವಿಲ್ಲದಷ್ಟು ಮಾರಿಸಿದ್ದೇನೆ. ನೀವು ಕಛೇರಿಯಲ್ಲಿ ನನಗೆ ಎಲ್ಲಾ ರೀತಿಯ ಸಹಕಾರ ಮಾಡಿ ಖಾತೆ ಮಾಡಿ ಕೊಟ್ಟಿದ್ದೀರ. ಆದರೆ ನನಗೆ ಇದೇ ರೀತಿ ಆಶ್ರಯ ನಿವೇಶನ ಹಂಚಿಕೆಯಾಗಿ ಮನೆ ಕಟ್ಟಿಕೊಳ್ಳದೇ ಊರು ಬಿಟ್ಟವರ ಇನ್ನಷ್ಟು ವಿವರವನ್ನು ನೀವು ಕಛೇರಿಯಿಂದ ನೀಡಿ, ಅವರ ನಿವೇಶನಗಳನ್ನು ಮಾರಾಟ ಮಾಡಿಸೋಣ. ನಾನು ಹೇಳಿದಂತೆ ನೀವೆಲ್ಲರೂ ಕೇಳಿದ್ದೀರಿ, ಇದಕ್ಕೆ ನಿಮ್ಮ ಪಾಲಿನ ಹಣವೇನಿದೆಯೋ ಅದನ್ನು ನಾನು ಕೊಟ್ಟಿದ್ದೇನೆ. ಇನ್ನು ನಿಮಗೆ ಜಾತ್ರೆಯ ವಿಶೇಷವಾಗಿ ಇನ್ನಷ್ಟು ಹಣವನ್ನು ನೀಡುತ್ತೇನೆ ಎನ್ನುತ್ತಿದ್ದಾನೆ. ಈಗ ಅಧಿಕಾರಿ ಕೇಳುತ್ತಾನೆ, ಏನೇ ಅಂದರು ಛೇರ್ ಮೆನ್ರೆ ನೀವು ನಮಗೆ ನೀಡಿದ್ದು ಬಹಳ ಕಡಿಮೆ ಹಣ. ಕಡಿಮೆ ಎಂದರೂ ಒಂದು ನಿವೇಶನಕ್ಕೆ ಆರೇಳು ಲಕ್ಷವಿದೆ. ನೀವು ನೀಡಿದ್ದು ನಮಗೇ ಬರೀ ಎರಡು ಲಕ್ಷ ಮಾತ್ರ ಎಂದು ಬೇಸರದಲ್ಲಿ ಅಧಿಕಾರಿ ನುಡಿಯುತ್ತಾ ಇದರಲ್ಲೇ ನಾವೆಲ್ಲಾ ಉಳಿದ ಅಧಿಕಾರಿಗಳು ಪಾಲು ಮಾಡಿಕೊಳ್ಳಬೇಕು. ಇನ್ನು ಮುಂದೆ ನೀವು ಸ್ವಲ್ಪ ಜಾಸ್ತಿ ಹಣ ನೀಡಿ ಎಂದು ಡಿಮ್ಯಾಂಡ್ ಮಾಡುತ್ತಾನೆ.
ಕೂಡಲೇ ಶ್ರೀಕರ ನುಡಿಯುತ್ತಾನೆ. ನೀವೆಲ್ಲಾ ಹೇಳಿದಂತೆ ಜಾಸ್ತಿ ಹಣ ನೀಡಬೇಕೆಂದರೆ ನೀವು ದೊಡ್ಡ ಪ್ರಮಾಣದ ನಿವೇಶನವನ್ನೇ ಮಾರಿಸಬೇಕು. ಆದರೆ ಆಶ್ರಯ ನಿವೇಶನಕ್ಕೆ ಇರುವುದೇ ಆರೇಳು ಲಕ್ಷ ಬೆಲೆ. ಅದರಲ್ಲಿ ನಾನು ಪೋರ್ಜರಿ ಸಹಿ ಮಾಡಿಸಲು ಅದೇ ಹೆಸರಿನ ಇನ್ನೊಬ್ಬರನ್ನು ಹುಡುಕಬೇಕು. ಅವರ ಹೆಸರು, ಗುರುತಿನ ಚೀಟಿಗಳನ್ನು ಹೊಂದಾಣಿಕೆ ಮಾಡಿಸಿ ಅವರೇ ಫಲಾನುಭವಿಯೆಂದು ಹಕ್ಕುದಾರರೆಂದು ಬಿಂಬಿಸಬೇಕು. ಕೊನೆಗೆ ಅವರಿಗೆ ಸಾಕಷ್ಟು ಹಣವನ್ನು ಸಹಾ ನೀಡಲೇಬೇಕಲ್ಲವೇ? ಒಂದು ವೇಳೆ ಸರಿಯಾಗಿ ತನಿಖೆಯಾದರೆ ಅವರ ಮುಖಚರ್ಯೆ ಬೇರೆ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ಯಾಪ್ಟರ್ ಆಗಿ ಪತ್ರದ ಮೇಲಿರುತ್ತದೆ. ಯಾರೂ ಊರಲ್ಲಿ ಪ್ರಶ್ನಿಸದಂತೆ ನಾನು ರಾಜಕೀಯವಾಗಿ ತಾಕಥ್ ಉಳಿಸಿಕೊಳ್ಳಬೇಕು. ಯಾರು ಚಕಾರ ಎತ್ತದಂತೆ ನೋಡಿಕೊಳ್ಳಬೇಕು. ಇದೆಲ್ಲಾ ಮೇಂಟೇನ್ ಮಾಡೋದು ಸುಲಭದ ಮಾತಲ್ಲ. ಹಾಗಾಗಿ ಸದ್ಯಕ್ಕೆ ಸುಮ್ಮನಿರಿ. ಮುಂದಿನ ಬಾರಿ ಯಾವುದಾದರೂ ದೊಡ್ಡ ಜಾಗವನ್ನು ಮಾರಾಟ ಮಾಡೋಣ. ಆಗ ಎಲ್ಲರೂ ಸೇರಿ ಹಬ್ಬ ಮಾಡೋಣ ಎನ್ನುತ್ತಾನೆ. ಈಗ ಆತನ ಮಾತಿಗೆ ಕಂದಾಯ ಅಧಿಕಾರಿ ತಲೆಯಾಡಿಸಿ ಮೌನಿಯಾಗುತ್ತಾನೆ.
ಇತ್ತ ಇವರ ರೂಂನಲ್ಲಿ ನಡೆಯುತ್ತಿರುವ ಮಾತುಗಳನ್ನು ಒಂದೆಡೆ ಮರೆಯಲ್ಲಿ ಕಿವಿಯಿಟ್ಟು ಕೇಳುತ್ತಿದ್ದ ಸಹೋದರರಿಗೆ ಕೋಪ ಇನ್ನಷ್ಟು ಅಮಿತವಾಗಿ ಎದೆಯು ಏದುಸಿರು ಬಿಡುವಂತೆ ಮಾಡಿದೆ. ಅದೇ ಸಮಯದಲ್ಲಿ ಈಗ ಕಂದಾಯಾಧಿಕಾರಿಗೆ ಫೋನ್ ಬರುತ್ತದೆ, ಆತ ಮಾತನಾಡುತ್ತಾ, ಈಗ ಶ್ರೀಕರನ ಬಳಿ ಕೇಳುತ್ತಾನೆ, ನೋಡಿ ಸರ್, ಆ ಕಡೆಯಿಂದ ಅದೇ ಬೆಂಗಳೂರು ಪಾರ್ಟಿ ಫೋನ್ ಮಾಡಿದ್ದಾರೆ. ಅದೇ ವೆಂಕಮ್ಮನ ಜಾಗದ ವಿಷಯ ಕೇಳುತ್ತಿದ್ದಾರೆ. ಈಗ ಏನು ಮಾಡೋದು? ರಮೇಶಪ್ಪ ಏನೋ ಚಂದ್ರಪ್ಪನ ಹೆಸರಿಗೆ ಖಾತೆ ಮಾಡಿಸಿ ಕೊಲೆಯಾದ. ಈಗ ಚಂದ್ರಪ್ಪ ಮದಲಿನ ರೇಟ್ಗೆ ಆಸ್ತಿ ನೀಡಲು ಒಪ್ಪುತ್ತಿಲ್ಲ. ಏನು ಮಾಡೋದು ಎಂದು ಕೇಳುತ್ತಾನೆ. ಕೂಡಲೇ ಶ್ರೀಕರ ನುಡಿಯುತ್ತಾನೆ, ಏನು ಅಂಜಿಕೆ ಬೇಡ, ಇಂದೇ ನಮ್ಮ ಲೀಡರ್ ಬಳಿ ಮಾತನಾಡಿ ಆ ಸಮಸ್ಯೆ ಬಗೆ ಹರಿಸುವೆ. ಒಟ್ಟಾರೆ ಆ ಆಸ್ತಿ ವೆಂಕಮ್ಮನಿಂದ ನಮ್ಮ ಕೈಗೆ ಬಂದಿದೆ. ಇನ್ನು ಸಾಕುಬಿಡು. ಏನೇ ಇದ್ದರೂ ಚಂದ್ರಪ್ಪ ಸಹಾ ನಮ್ಮವನೇ ನಾಳೆಯೇ ಮಾತನಾಡಿಸುವೆ ಎನ್ನುತ್ತಾನೆ.
ಇತ್ತ ಹೊರಗಡೆ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಸಹೋದರರಿಬ್ಬರಿಗೂ ಇನ್ನಷ್ಟು ಆವೇಶ ಏರುತ್ತದೆ. ತಮ್ಮ ಆಸ್ತಿಯನ್ನು ಕಬಳಿಸಲು ಈ ಶ್ರೀಕರ ಬೇರೆ ಕೈಜೋಡಿಸಿದ್ದಾನಾ? ನಮ್ಮ ಮನೆ ಬಾಗಿಲಿಗೆ ವೋಟ್ ಹಾಕಿ ಎಂದು ಎಷ್ಟು ಬಾರಿ ಅಲೆದಿದ್ದ. ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಮಾಡಿ, ನಿಮ್ಮ ಆಶೀರ್ವಾದದಿಂದಲೇ ಗೆಲ್ಲುವೆ ಎಂದು ಆ ದಿನ ನಮ್ಮ ತಾಯಿಯ ಕಾಲಿಗೆ ಬಿದ್ದಿದ್ದ. ಈತ ಗೆದ್ದ ಮೇಲೆ ನಗರಸಭೆಯ ಛೇರ್ ಮೆನ್ ಆಗಿ ಮಾಡಿದ್ದು ಇಂತಹ ಹಲ್ಕಾ ಕೆಲಸಗಳೇ! ತೂಥ್, ದರಿದ್ರ ಮನದ ಜನ ಗೆದ್ದರೆ ಇನ್ನೇನು ಆದೀತು? ಆ ದಿನಗಳಲ್ಲಿ ಎಷ್ಟೊಂದು ನಯವಾಗಿ ನಾಜೂಕಿನಿಂದ ಮಾತನಾಡುತ್ತಿದ್ದ, ಎಲ್ಲಾದರೂ ರಸ್ತೆಯಲ್ಲಿ ಸಿಕ್ಕರೆ ನಿಮ್ಮದೇನೇ ಕೆಲಸವಿದ್ದರೂ ನನಗೊಂದು ಕರೆಮಾಡಿ, ನೀವಿದ್ದಲ್ಲೇ ಬರುವೆ ಎಂದು ಹೇಳಿ ವಂಚಿಸುವ ಗೋಮುಖ ವ್ಯಾಘ್ರ ಈತ ಎನ್ನುತ್ತಾ ಸಹೋದರರಿಬ್ಬರು ಸಿಟ್ಟಿನಿಂದ ಒಂದೆಡೆ ಸಿಡಿವ ಜ್ವಾಲಾಮುಖಿಯಾಗಿ ನಿಂತಿದ್ದಾರೆ.
ಈಗ ಅಣ್ಣ ರಾಜು ಹೇಳಿದ. ಮೆತ್ತನೆ ಇವರ ರೂಂ ಬಾಗಿಲು ಬಡಿಯೋಣ, ಒಳನುಗ್ಗಿ ಇಬ್ಬರ ಮೇಲು ಫೈರ್ ಮಾಡೋಣ, ಮುಂದೆ ಆಗಿದ್ದು ಆಗಲಿ ಎಂದು ಹೇಳುತ್ತಾನೆ. ತಮ್ಮನೂ ಸಮ್ಮತಿಸುತ್ತಾನೆ. ಈಗ ಅವರ ರೂಂ ಬಾಗಿಲು ಬಡಿಯಲು ಅಣಿಯಾಗುತ್ತಿದ್ದಾರೆ..
ಭಾಗ-9
ಅಷ್ಟರಲ್ಲಿ ಹೋಟೆಲ್ ಸರ್ವರ್ ಇವರಿದ್ದ ಕಡೆಗೆ ನಡೆದು ಬರುತ್ತಾನೆ. ಈಗ ಸಹೋದರಿಬ್ಬರು ಕೊಂಚ ಹಿಂದಕ್ಕೆ ಹೋಗಿ ಮರೆಯಾಗುತ್ತಾರೆ. ಆ ಸರ್ವರ್ ನೇರವಾಗಿ ಕಂದಾಯಾಧಿಕಾರಿ ಮತ್ತು ಛೇರ್ಮೆನ್ ಶ್ರೀಕರ ಇದ್ದ ರೂಂನೊಳಗೆ ಹೋಗುತ್ತಾನೆ. ಛೇ, ಈಗ ಏನು ಮಾಡುವುದು ಎಂದು ಸಹೋದರರು ಆಲೋಚಿಸುತ್ತಿರುವಾಗಲೇ ಇನ್ನೂ ನಾಲ್ಕು ಜನರು ಬರುತ್ತಾರೆ. ಅವರಲ್ಲಿ ಇನ್ನೊಬ್ಬನು ನಗರಸಭಾ ಸದಸ್ಯ ಮತ್ತು ಮೂರು ಜನ ನಗರಸಭೆಯ ಅಧಿಕಾರಿಗಳು ಇರುತ್ತಾರೆ.
ಈಗ ಸಹೋದರರಿಗೆ ಏನು ಮಾಡುವುದು? ಎನ್ನದೇ ಕಸಿವಿಸಿಗೊಂಡು ಸೀದಾ ತಮ್ಮ ರೂಂಗೆ ಹೊರಡುತ್ತಾರೆ. ರೂಂನಲ್ಲಿ ಕುಳಿತು ಮುಂದೇನು ಮಾಡುವುದೆಂದು ಚರ್ಚಿಸುತ್ತಿದ್ದಾರೆ. ಆ ರೂಂನೊಳಗೆ ಒಟ್ಟು ನಾಲ್ಕು ಜನರಿದ್ದಾರೆ. ಎಲ್ಲರೂ ನಮ್ಮ ಕಟುವೈರಿಗಲೇ. ಎಲ್ಲರೂ ನಮ್ಮ ಹೊಟ್ಟೆಯ ಮೇಲೆ ಹೊಡೆದವರೇ. ನಮ್ಮನ್ನು ಬೀದಿಗೆ ಬರುವಂತೆ ಮಾಡಿ ನಮ್ಮನ್ನು ಕ್ರಿಮಿನಲ್ಗಳಾಗುವಂತೆ ಪ್ರೇರೇಪಿಸಿದವರು ಇವರೇ. ನಮ್ಮ ತಾಯಿಯ ಸಾವಿಗೆ ಕಾರಣವಾಗಿ ನಮ್ಮಂತಹ ಅಮಾಯಕರ ಆಸ್ತಿಯನ್ನು ಕಬಳಿಸಿ ಗಹಗಹಿಸಿ ನಕ್ಕವರೇ. ನಮ್ಮಂತಹ ಬಡವರ ಆಸ್ತಿಯನ್ನು ಕಂಡ ಕಂಡವರ ಹೆಸರಿಗೆ ದಾಖಲಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರ ಆಸ್ತಿಯಲ್ಲಿ ವೈಭವೋಪೇತ ಜೀವನ ನಡೆಸುತ್ತಿರುವರ ರಕ್ಕಸರು.
ಇಂತಹ ರಕ್ಕಸರ ಅಂತ್ಯವನ್ನು ಮಾಡಿದರೆ ನಮಗೆ ಯಾವುದೇ ಪಾಪ ಕಾಡುವುದಿಲ್ಲ. ಮಾನವೀಯ ಗುಣಗಳನ್ನು ಕಳೆದುಕೊಂಡು ಅಧರ್ಮ ಹಾದಿಯಲ್ಲಿ, ದುಷ್ಟ ನಡೆಯಲ್ಲಿ ಸಾಗುವ ದುರುಳರ ಕೊಂದರೆ ಅದು ಪಾಪವಲ್ಲ, ಅದು ಪುಣ್ಯದ ಕಾರ್ಯ. ಎಲ್ಲಿ ಧರ್ಮ, ಸತ್ಯವನ್ನು ಯಾರು ಅಣಕಿಸಿ ವಾಮಮಾರ್ಗದಲ್ಲಿ ನಡೆಯುತ್ತಾರೋ? ಅವರೇ ರಕ್ಕಸರು. ಅಂತಹವರಿಗೆ ಭುವಿಯಲ್ಲಿ ಬದುಕುವ ಹಕ್ಕು ಇರುವುದಿಲ್ಲ. ಅಂತವರ ಅಂತ್ಯಹಾಡುವುದೇ ಧರ್ಮವನ್ನು ಎತ್ತಿಹಿಡಿಯುವ ಕೆಸಲವೆಂದು ಅಣ್ಣ ರಾಜು ನುಡಿಯುತ್ತಾನೆ. ಇದಕ್ಕೆ ತಮ್ಮ ಕುಮಾರನು ಸಮ್ಮತಿಸಿ ಮನಸ್ಸನ್ನು ಇನ್ನಷ್ಟು ಬಿಗಿಗೊಳಿಸಿಕೊಂಡು ಆಗಿದ್ದು ಆಗಲಿ, ಜೀವನದಲ್ಲಿ ಸುಖವೆನ್ನುವುದು ಈಗ ಏನೂ ಉಳಿದಿಲ್ಲ. ಎಲ್ಲವೂ ಮುಗಿದುಹೋಗಿ ನಮ್ಮದೇ ಊರಿಗೆ ನಾವು ವೇಶ ಮರೆಸಿಕೊಂಡು ಬರುವಂತಾಗಿದೆ. ಇದೆಂತಹಾ ದುರ್ಗತಿಯೆಂದು ಭಾವುಕರಾಗುತ್ತಾರೆ. ಇದಕ್ಕೆ ಕಾರಣರು ಈ ಭೂಗಳ್ಳರೇ! ಮನುಷ್ಯಗುಣ ಮೈಮರೆತು ಮಗ್ದರ ಮನದ ಮೇಲೆ ಅತ್ಯಾಚಾರ ನಡೆಸುವ ವಿಕೃತ ಪಿಶಾಚಿಗಳು! ಬಡವನ ಕತ್ತು ಮೋಸದ ನೇಣಿಗೆ ಏರಿಸುವ ಘಾತಕರು.
ಈಗ ಮೆತ್ತನೇ ಅವರ ಕೋಣೆಯತ್ತ ಹೋಗಿ ಕುಮಾರ ನೋಡುತ್ತಿದ್ದಾನೆ. ಅಮಲೇರಿಸಿಕೋಂಡು ಎಲ್ಲರೂ ತಾವು ಗಳಿಸಿದ ವಾಮಮಾರ್ಗದ ಆಸ್ತಿಯ ಪಾಲಿನ ಲೆಕ್ಕ ಹಾಕುತ್ತಿದ್ದಾರೆ. ಛೇರ್ಮೆನ್ ಶ್ರೀಕರನಿಗೆ ಒಬ್ಬ ಅಧಿಕಾರಿ ಹೇಳುತ್ತಾನೆ. ನಾವು ಒಟ್ಟಾಗಿ ಇಲ್ಲಿಯವರೆಗೆ ಆಕ್ರಮವಾಗಿ ಮಾರಿದ ಆಶ್ರಯ ನಿವೇಶ, 94ಸಿ ನಿವೇಶನಗಳೆಲ್ಲಾ ಸೇರಿ ಸುಮಾರು 150 ಕೋಟಿ ಮೌಲ್ಯದ್ದಾಗಿದೆ. ಆದರೆ ನೀವು ನಮಗೆ ನೀಡಿದ ಪಾಲಿನ ಹಣ ಶೇ.20 ರಷ್ಟು ಮಾತ್ರವೇ. ಆಶ್ರಯ ಮೂಲೆ ನಿವೇಶನಗಳ ವಿಲೇವಾರಿ ನಿಯಮದಂತೆ ನಾವು ಅವುಗಳನ್ನು ಸಾರ್ವಜನಿಕವಾಗಿ ಹರಾಜು ಹಾಕಬೇಕಿತ್ತು. ಆದರೆ ಅದಕ್ಕೂ ನಕಲಿ ಫಲಾನುಭವಿಗಳನ್ನು ಸೃಷ್ಟಿಮಾಡಿ ಮೂಲೆ ನಿವೇಶನಗಳನ್ನು ಮಾರಲಾಗಿದೆ. ಅವುಗಳು ಅನಿಯಮಿತ ಅಳತೆಯವು. ಸಾಕಷ್ಟು ಮೌಲ್ಯದ್ದು. ಇದರಲ್ಲೂ ನೀವು ನಮಗೆ ಸರಿಯಾಗಿ ಪಾಲು ನೀಡಿಲ್ಲ ಎನ್ನುತ್ತಾನೆ.
ಇದಕ್ಕೆ ಆಕ್ರೋಶಗೊಂಡು ಶ್ರೀಕರ ಗೊಣಗುತ್ತಾನೆ. ಲೇ, ಸರ್ಕಾರ ಹೇಳಿದಂತೆ ಮೂಲೆ ನಿವೇಶನಗಳನ್ನೆಲ್ಲಾ ನೀವು ಹರಾಜು ಹಾಕಿದರೆ ನೀವೆ ಮಣ್ಣು ತಿನ್ನುತ್ತಿದ್ದೀರಿ. ಆ ಹಣ ಸರ್ಕಾರಕ್ಕೆ ಹೋಗುತ್ತಿತ್ತು. ನಿಮಗೇನು ಸಿಗುತ್ತಿತ್ತು? ಈಗ ನನ್ನೊಂದಿಗೆ ಕೈಜೋಡಿಸಿದ್ದಕ್ಕೆ ನಿಮಗೂ ಕೋಟ್ಯಾಂತರೂ ರೂ ಹಣ ಸಿಕ್ಕಿದೆ. ಬೆಂಗಳೂರಿನಲ್ಲಿ ಸಾಕಷ್ಟು ಮೌಲ್ಯದ ಬಂಗಲೆ, ಸೈಟ್ ಖರೀದಿಸಿದ್ದೀರಿ. ಮುಂದೊಂದು ದಿನ ಇನ್ನೂ ಹೀಗೆಯೇ ಮುಂದುವರೆದರೆ ನೀವು ಇನ್ನಷ್ಟು ಗಳಿಸುತ್ತೀರಿ. ಬರೇ ಸರ್ಕಾರ ನೀಡುವ ಸಂಬಳ ನೋಡುತ್ತಾ ಹೋದರೆ ನಿಮಗೆ ಇದೆಲ್ಲ ಗಳಿಸಲು ಆಗುತ್ತಿತ್ತೇ? ಪಾಲು ಕಡಿಮೆ ನೀಡಿದ್ದೇನೆಂದು ಹೇಳಬೇಡಿ ಎಂದು ಶ್ರೀಕರ ಗುಡುಗುತ್ತಾನೆ.
ಅಷ್ಟರಲ್ಲಿ ಇನ್ನೊಬ್ಬ ಕೇಳುತ್ತಾನೆ, ನಾವು ಈ ರೀತಿ ಮೂಲೆ ನಿವೇಶನಗಳು ಹಂಚಿಕೆಯಾಗಿವೆ ಎಂದರೆ ನಾಳೆ ಯಾರಾದರೂ ತನಿಖೆಗೆ ಒಳಪಡಿಸಿದರೆ ಅದು ಸುಳ್ಳು ಹಂಚಿಕೆ ಎನ್ನುವುದು ಖಾತ್ರಿಯಾದರೆ ಏನು ಮಾಡುವುದು ಎಂದು ಪ್ರಶ್ನಿಸುತ್ತಾನೆ. ಶ್ರೀಕರ ಉತ್ತರಿಸುತ್ತಾನೆ, ನೋಡಲೇ, 120 ಮೂಲೆ ನಿವೇಶನಗಳಿಂದಲೇ 40 ಕೋಟಿ ವ್ಯವಹಾರವಾಗಿದೆ. ಇದರಲ್ಲಿ ನಿಮಗೆ 10 ಕೋಟಿ ಕೊಟ್ಟಿದ್ದೇನೆ. ಕಚೇರಿಯ ರಿಜಿಸ್ಟರ್ನಲ್ಲಿ ನೀನಂತೂ ನಾನು ಹೇಳಿದವರ ಹೆಸರನ್ನು ಫಲಾನುಭವಿಯೆಂದು ಬರೆದಿರುವೆಯಲ್ಲಾ ಸಾಕುಬಿಡು ಎನ್ನುತ್ತಾನೆ.
ಮತ್ತೆ ಇನ್ನೊಬ್ಬ ಕೇಳುತ್ತಾನೆ, ಆದರೆ ಅದೆಲ್ಲಾ ಮೀಟಿಂಗ್ ಅಪ್ರೂವಲ್ ಆಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ನಿಗಮದಿಂದ ಮಂಜೂರಾತಿ ಆಗಬೇಕು. ಯಾರಾದರೂ ಮಂಜೂರಾತಿ ಪಟ್ಟಿ ಕೇಳಿದರೆ ಏನು ಮಾಡೋದು? ಎಂದು ಪ್ರಶ್ನಿಸುತ್ತಾನೆ.
ಇತ್ತ ಶ್ರೀಕರ ಕೋಪದಿಂದ ಮತ್ತೆ ನುಡಿಯುತ್ತಾನೆ, ಮುಚ್ಕಂಡು ಸುಮ್ನಿರು. ಹೇಳಿದಂತೆ ಕೇಳು. ಈ ಊರಿನಲ್ಲಿ ಏನೇ ಸಮಸ್ಯೆ ಬರಲಿ. ಇಲ್ಲಿಯವರೆಗೆ ಏನಾಗಿದೆ? ಯಾವ ಕಾನೂನು ನಡೆದಿದೆ? ಎಷ್ಟು ಪಾರ್ಕ್ನಲ್ಲಿ ನಾನು ಮತ್ತು ನಮ್ಮ ಬಾಸ್ ಸೇರಿ ಆಕ್ರಮ ಮನೆ ಕಟ್ಟಿಸಿಲ್ಲ. ಎಷ್ಟು ನಗರಸಭೆಯ ಜಾಗವನ್ನು ಕಬಳಿಸಿಲ್ಲ. ಇಲ್ಲಿಯವರೆಗೆ ನಮ್ಮನ್ನು ಪ್ರಶ್ನಿಸುವ ಗಂಡಸು ಯಾವನಿದ್ದಾನೆ. ಈಗಲೂ ಇಲ್ಲ, ಮುಂದೆಯೂ ಈ ಊರಿನಲ್ಲಿ ಹುಟ್ಟಲ್ಲ! ಇಲ್ಲಿ ನಾವು ಹೇಳಿದ್ದೇ ಕಾನೂನು. ನೀವೆಲ್ಲಾ ಹೇಳಿದಂತೆ ಮುಚ್ಕಂಡು ನಾವು ಹೇಳಿದ ಕಡೆ ಸೈನ್ ಹಾಕಿ ಸಾಕು. ಏನಾದರೂ ತನಿಖೆ ಅಂತಾ ಬಂದರೆ ನಾನೇ ನೋಡ್ಕೋತೀನಿ. ಇಲ್ಲಿಯವರೆಗೆ ಅಂತಹ ಎಷ್ಟು ತನಿಖೆ ಬಂದಿಲ್ಲ. ನಿಮ್ಮಲ್ಲಿ ಯಾರಿಗೇನಾದರೂ ಎಳ್ಳಷ್ಟು ತೊಂದರೆ ಯಾಗಿದೆಯೇ? ಮೊದಲು ಬದುಕೋದು ನೋಡಿ ಎಂದು ಗದರುತ್ತಾನೆ. ಎಲ್ಲರೂ ಮೌನವಾಗಿ ತಲೆಯಾಡಿಸುತ್ತಾರೆ.
ಈಗ ತಾನು ಕೇಳಿಸಿಕೊಂಡ ಮಾತನ್ನು ಕುಮಾರ ಅಣ್ಣನಿಗೆ ಹೇಳುತ್ತಾನೆ. ಅಣ್ಣ ರಾಜುವಿಗೆ ಇನ್ನಷ್ಟು ರೋಶವುಕ್ಕಿ ಸೇಡಿನ ಜಲಧಿಯು ಎದೆಯಲ್ಲಿ ಅಬ್ಬರಿಸುತ್ತಿದೆ. ಇಂತಹ ದುಷ್ಟರ ನಿಗ್ರಹ ಮಾಡಿದರೆ ಮುಗ್ಧರ ಬದುಕು ಉಳಿಸಿದಂತೆ! ಇಂತಹವರನ್ನು ಬೇಗಲೇ ಸುಟ್ಟು ಹಾಕಬೇಕು ಎಂದು ಕುಮಾರನಿಗೆ ಮತ್ತೇನು ನಡೆಯುತ್ತಿದೆ ಎನ್ನುತ್ತಾನೆ.
ಕುಮಾರ ಉತ್ತರಿಸುತ್ತಾನೆ, ಎಲ್ಲರೂ ಕುಡಿದ ಅಮಲಿನಲ್ಲಿ ಅರ್ಧ ಮೈಮರೆತು ಅಶಕ್ತರಾಗಿದ್ದಾರೆ. ಇದೇ ಸಮಯದಲ್ಲಿ ನಾವು ಅವರ ಮೇಲೆ ದಾಳಿ ಮಾಡುವುದು ಉತ್ತಮ. ಒಂದೇ ಏಟಿಗೆ ಎಲ್ಲರ ಜೀವವೂ ಹಾರಿಹೋಗಲಿ ಎನ್ನುತ್ತಾನೆ. ಇದೇ ಸರಿಯಾದ ಮಾರ್ಗವೆಂದು ಇಬ್ಬರೂ ನಿರ್ಧರಿಸುತ್ತಾರೆ. ಆಗಲೇ ಹೊರಗಡೆ ರಾತ್ರಿಯಾಗಿ ಸಾಕಷ್ಟು ಕತ್ತಲು ಆವರಿಸಿ ರಾತ್ರಿ ಹತ್ತರ ಸಮಯವಾಗುತ್ತಾ ಬಂದಿದೆ.
ಈಗ ಸಹೋದರರಿಬ್ಬರೂ ಕೈಲಿ ರಿವಾಲ್ವರ್ ಹಿಡಿದು ನೇರವಾಗಿ ಅವರ ರೂಂ ಕಡೆಗೆ ಹೋಗುತ್ತಾರೆ. ಅದರಲ್ಲಿ ತಮ್ಮ ಕುಮಾರ ಹೋಟೆಲ್ ವಿದ್ಯುತ್ ಮೀಟರ್ ಬಳಿ ಹೋಗಿ ಫೀಸ್ನ್ನು ತೆಗೆಯುತ್ತಾನೆ. ಹೋಟೆಲ್ನಲ್ಲಿ ಕತ್ತಲು ಆವರಿಸುತ್ತದೆ. ಇದೇ ಸಮಯದಲ್ಲಿ ಅವರ ರೂಂ ಬಾಗಿಲು ಬಡಿಯುತ್ತಾರೆ. ಯಾರು? ಎಂದು ಒಳಗಡೆಯಿಂದ ಕೂಗುತ್ತಾರೆ. ರಾಜು ಉತ್ತರಿಸುತ್ತಾನೆ. ನಾನು ಹೋಟೆಲ್ ಸರ್ವರ್, ಕರೆಂಟ್ ಹೋಗಿದೆ, ಬರುವುದು ಎಂದೋ? ಅದಕ್ಕೆ ಮೊಂಬತ್ತಿ ತಂದಿರುವೆ ಎನ್ನುತ್ತಾನೆ. ಕೂಡಲೇ ಬಾಗಿಲು ತೆಗೆಯುತ್ತಾರೆ.
ರಾಜು ಕೈಲಿ ರಿವಾಲ್ವರ್ ಬಿಗಿಯಾಗಿ ಹಿಡಿದು ಕತ್ತಲೆ ಕೋಣೆಯೊಳಗೆ ಒಂದೇ ಸಮನೆ ಫೈರ್ ಮಾಡುತ್ತಾನೆ. ಒಳಗಡೆ ಇದ್ದವರಿಗೆ ಏನಾಗುತ್ತಿದೆ ಎನ್ನುವುದು ಅರಿವಾಗದೇ ಒಮ್ಮೆಲೆ ಹೊಮ್ಮಿದ ಶಬ್ಧಕ್ಕೆ ಬೆಚ್ಚಿಬಿದ್ದು ಕೂಗುತ್ತಿದ್ದಾರೆ. ರೂಂನೊಳಗೆ ರೋದನೆ ಮುಗಿಲು ಮುಟ್ಟಿದೆ. ರಿವಾಲ್ವರ್ನಿಂದ ಒಟ್ಟು ಆರು ಗುಂಡುಗಳು ಫೈರಿಂಗ್ ಆಗುತ್ತವೆ. ಅಷ್ಟರಲ್ಲಿ ರಿವಾಲ್ವರ್ ಖಾಲಿಯಾಗುತ್ತದೆ. ಮತ್ತೆ ಪುನಃ ಗುಂಡುಗಳನ್ನು ಲೋಡ್ ಮಾಡಿ ಫೈರ್ ಮಾಡಲು ಆಗ ಅವರಿಗೆ ಏಕೋ ಹೆದರಿಕೆಯಾಗಿ ಹಿಂದೇಟು ಹಾಕಿ ಹಿನ್ನಡೆಯುತ್ತಾರೆ. ಆದರೆ ಕತ್ತಲೆಯೊಳಗೆ ಯಾರಿಗೆ ಗುಂಡು ತಗುಲಿತೋ ಏನೋ? ಯಾರು ಸತ್ತರೋ? ಫೈರಿಂಗ್ ಮಾಡಿದವರಿಗೆ ಗೊಂದಲ. ಒಟ್ಟಾರೆ ದೊಡ್ಡ ಮಟ್ಟದ ಅನಾಹುವಾಗಿದೆಯೆನ್ನುವುದಂತೂ ಖಚಿತವಾಯಿತು. ಏನೋ ತುಸು ರೋಶದ ಮನಸ್ಸು ತಣಿದ ಸಂತಸ. ಅತ್ತ ಒಳಗಡೆ ಆರ್ತನಾದದ ನರಳಾಟ ನಡೆಯುತ್ತಿದ್ದರೆ ಇವರ ಮನಸ್ಸು ಸಂಭ್ರಮದ ಸಡಗರದಿಂದ ಸೇಡು ತೀರಿಸಿಕೊಂಡೆವು ಎನ್ನುವ ಅಹಂನಿಂದ ಬೀಗಿತು!
ಇತ್ತ ಜೋರಾದ ಶಬ್ಧಕ್ಕೆ ಅಕ್ಕಪಕ್ಕದವರೂ ಬೆಚ್ಚಿಬಿದ್ದಿದ್ದಾರೆ. ಆದರೆ ಕತ್ತಲೆಯಲ್ಲಿ ಏನಾಗಿದೆಯೋ? ಅದಕ್ಕೆ ಕರೆಂಟ್ ಹೋಗಿದೆಯೋ ಏನೋ? ಇಲ್ಲವೇ ಹೋಟೆಲ್ಗೆ ಏನೋ ಅನಾಹುತವಾಯಿತೋ? ಎಂದು ಒಳಗಿದ್ದವರು ಹೊರಗಡೆ ಓಡುತ್ತಿದ್ದಾರೆ. ಇದೇ ಸಮಯದಲ್ಲಿ ಸಹೋದರರಿಬ್ಬರೂ ಆ ಜಾಗದಿಂದ ಮರೆಯಾಗುತ್ತಾರೆ. ಕೂಡಲೇ ಹೋಟೆಲ್ ಸಿಬ್ಬಂದಿ ಕರೆಂಟ್ ಫೀಸ್ ಯಾರೋ ತೆಗೆದಿದ್ದಾರೆಂದು ಗಮನಿಸಿ ಸರಿಪಡಿಸಿ ಎಲ್ಲರೂ ಸೇರಿ ಘಟನೆ ನಡೆದ ಸ್ಥಳಕ್ಕೆ ಬರುತ್ತಾರೆ. ಇತ್ತ ಆರ್ತನಾದ ಜೋರಾಗಿ ಕೇಳಿ ಬರುವೆಡೆಗೆ ಎಲ್ಲರೂ ಓಡೋಡಿ ಬರುತ್ತಾರೆ. ರೂಂನೊಳಗೆ ರಕ್ತ ಚೆಲ್ಲಾಡಿದೆ. ಕೂಡಲೇ ಪೋಲಿಸರಿಗೆ ಕರೆಮಾಡುತ್ತಾರೆ. ಜೊತೆಗೆ ಅಂಬ್ಯೂಲೆನ್ಸ್ಗೂ ಕರೆಮಾಡುತ್ತಾರೆ.
ಪಕ್ಕದ ಶರಧೀಪುರದ ಜಾತ್ರೆಯ ಉಸ್ತುವಾರಿಗೆ ಹೆಚ್ಚಿನ ಸಿಬ್ಬಂದಿಗಳು ನಿಯೋಜನೆಯಾಗಿದ್ದರಿಂದಲೂ ರಸ್ತೆಯು ಟ್ರಾಫಿಕ್ನಿಂದ ತುಂಬಿರುವುದರಿಂದ ಸರಿಯಾದ ಸಮಯಕ್ಕೆ ಅಂಬ್ಯೂಲೆನ್ಸ್ ಮತ್ತು ಪೋಲಿಸರಿಗೆ ಹೋಟೆಲ್ಗೆ ಬರಲು ಕಷ್ಟವಾಗುತ್ತದೆ. ಇತ್ತ ಅಷ್ಟರಲ್ಲಿ ಸಹೋದರರಿಬ್ಬರೂ ಪರಾರಿಯಾಗಿ ಬಹುದೂರ ಹೋಗಿದ್ದಾರೆ. ಆದರೆ ಅವರಿಗೆ ಯಾರು ಸತ್ತಿದ್ದಾರೆ? ಯಾರಿಗೆ ಗುಂಡೇಟು ಬಿತ್ತಿದೆ? ಎನ್ನುವ ಕುತೂಹಲ.
ಪೋಲಿಸರು ಬಂದವರೇ ನೋಡಿ ಹೌಹಾರುತ್ತಾರೆ. ಇದು ಗುಂಡಿನ ದಾಳಿ ಎನ್ನುವುದು ಖಚಿತವಾಗುತ್ತಾದೆ. ಒಳಗಡೆ ಕರೆಂಟ್ ಬಂದೊಡನೆ ಅಕ್ಕಪಕ್ಕದವರು ಗುಂಡೇಟು ತಿಂದು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಕೆಲವರು ಹೆದರಿ ಪ್ರಜ್ಞೆ ತಪ್ಪಿದಂತಾಗಿದ್ದಾರೆ. ಕೂಡಲೇ ಪೋಲಿಸರು ಗಾಯಗೊಂಡ ಶ್ರೀಕರ ಮತ್ತು ಇನ್ನೆರಡು ಜನ ನಗರಸಭೆಯ ಸಿಬ್ಬಂಧಿಗಳನ್ನು ಅಂಬ್ಯೂಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಉಳಿದವರಿಗೆ ಏನು ಆಗಿಲ್ಲ. ಆದರೇ ಭಯದಲ್ಲಿ ಹೆದರಿ ಕುಡಿದಿದ್ದೆಲ್ಲಾ ಉಚ್ಚೆಹೊಯ್ದುಕೊಂಡು ನಡುಗುತ್ತಿದ್ದಾರೆ. ಈಗ ಜನರು, ಪೋಲಿಸರನ್ನು ಕಂಡು ತುಸು ಧೈರ್ಯಕಂಡುಕೊಂಡಿದ್ದಾರೆ.
ಈಗ ಪೋಲಿಸರು ಏನಾಯಿತು ಎಂದು ಕಂದಾಯಾಧಿಕಾರಿಯನ್ನು ಕೇಳುತ್ತಾರೆ? ಆತನಿಗೆ ಮಾತನಾಡಲು ಆಗುತ್ತಲೇ ಇಲ್ಲ. ಸಂಪೂರ್ಣ ಒದ್ದೆಯಾಗಿ ಗಬ್ಬು ವಾಸನೆ ಸೂಸುತ್ತಿದ್ದಾನೆ. ಇಲ್ಲಿ ವಿಚಾರಿಸಿ ಉಪಯೋಗವಿಲ್ಲವೆನ್ನುವುದು ಪೋಲಿಸರಿಗೆ ಅರಿವಾಗುತ್ತದೆ. ಎಲ್ಲರೂ ಮದ್ಯದ ಅಮಲಿನಲ್ಲಿ ಸಂಪೂರ್ಣ ಅಮಲೇರಿ ಮೊದಲೇ ನಿಯಂತ್ರಣ ತಪ್ಪಿದ್ದಾರೆ. ತಾವೇ ಜಗಳಮಾಡಿಕೊಂಡು ಹೊಡೆದಾಡಿಕೊಂಡರೋ? ಇಲ್ಲವೇ? ಹೊರಗಡೆಯಿಂದ ಯಾರದಾರೂ ದಾಳಿ ಮಾಡಿದರೋ ಎಂದರೆ ಅದಕ್ಕೂ ಸರಿಯಾಗಿ ಉತ್ತರಿಸಲು ಒಳಗಡೆ ಯಾರಿಂದಲೂ ಆಗುತ್ತಿಲ್ಲ.
ಕೊನೆಗೆ ಒಬ್ಬ ನುಡಿದ, ಕರೆಂಟ್ ಹೋಗಿ ಕತ್ತಲೆಯಾಗಿತ್ತು. ಆಗ ಮೊಂಬತ್ತಿ ಕೊಡುವೆ ಬಾಗಿಲು ತೆಗೆಯಿರಿ ಎಂದು ಯಾರೋ ಕರೆದರು. ನಾನು ಹೋಟೆಲ್ನವರೇ ಎಂದು ಹೋಗಿ ಬಾಗಿಲು ತೆಗೆದೆ. ನಂತರ ಹೀಗಾಗಿದೆ ಎಂದು ನಡುಗತೊಡಗಿದೆ. ಅಷ್ಟರಲ್ಲೇ ಪೋಲೀಸರು ಘಟನೆಯನ್ನು ಅವಲೋಕಿಸುತ್ತಾ ಕೂಡಲೇ ತಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸುತ್ತಾ ರೂಂನೊಳಗೆ ಇದ್ದ ಉಳಿದವರನ್ನು ತಮ್ಮ ವಶಕ್ಕೆ ಪಡೆದು ಅವರನ್ನು ಕರೆದುಕೊಂಡು ಹೋಗುತ್ತಾರೆ. ಜೊತೆಗೆ ಹೋಟೆಲ್ನವರನ್ನು ಕರೆದುಕೊಂಡು ಠಾಣೆಗೆ ಹೊರಡುತ್ತಾರೆ.
ವಿಷಯ ಎಲ್ಲೆಡೆ ಕಾಳ್ಗಿಚ್ಚಿನಂತೆ ಹಬ್ಬುತ್ತದೆ. ಹೇಮಾವತಿ ನಗರದ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ಗುಂಡೇಟು ನಡೆದಿದೆ. ಅದರಲ್ಲಿ ಹಲವರಿಗೆ ಗಂಭೀರವಾದ ಗಾಯಗಳಾಗಿವೆ. ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆಯೆಂದು ವರದಿಯಾಗುತ್ತಿದೆ. ಈಗ ಸಹೋದರರಿಗೆ ವಿಷಯ ತಿಳಿದುಕೊಳ್ಳುವ ಕುತೂಹಲ. ಕತ್ತಲೆಯಲ್ಲಿ ರೂಂನೊಳಗೆ ಗುಂಡು ಹಾರಿಸಿದ್ದಾರೆ. ಕತ್ತಲೆಗೆ ಗುಂಡುಹೊಡೆದಿದ್ದಾರೆ. ಒಳಗಡೆ ಯಾರಿಗೆ ಎಲ್ಲಿಗೆ ಬಿದ್ದಿದೆ ಗೊತ್ತಿಲ್ಲ. ಸೇಡಿನ ಜ್ವಾಲೆಯು ತಣಿವಾಗಲು ಕೆಲವರ ಸಾವಿನ ಸುದ್ಧಿಯಾದರೂ ಕೇಳಬೇಕೆಂದು ಅವರ ಮನಸ್ಸು ಹಪಹಪಿಸುತ್ತಿದೆ. ಈಗ ಇದೇ ಕುತೂಹಲದಲ್ಲಿ ಹೈವೇ ಪಕ್ಕದ ಡಾಬಾದ ಬಳಿ ತಮ್ಮ ಕಾರ್ನ್ನು ನಿಲ್ಲಿಸಿ ಚಹಾ ನೆಪದಲ್ಲಿ ಟಿ.ವಿ ನೋಡಲು ಕೂರುತ್ತಾರೆ.
ಅಲ್ಲಿ ಜನ ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾರೆ. ಕೊನೆಗೆ ಕುತೂಹಲಕ್ಕೆ ಇವರೇ ಕೇಳುತ್ತಾರೆ. ಯಾರಿಗೆ ಏನಾಗಿದೆ? ಯಾರು ಮಾಡಿದ್ದಂತೆ? ಎನ್ನುತ್ತಾರೆ. ಮೂರು ಜನರಿಗೆ ಗಂಭೀರಗಾಯವಾಗಿದೆಯೆಂತೆ, ಬದುಕುಳಿಯುವ ಸಾಧ್ಯತೆ ಕಡಿಮೆಯಂತೆ, ಪಕ್ಕದೂರಿನಲ್ಲಿ ಜಾತ್ರೆಯ ಸಮಯಬೇರೆ. ಏನಾಗುತ್ತದೋ? ಎಂದು ಜನ ಬೆದರಿದ್ದಾರೆ. ಈಗ ಟಿ.ವಿಯಲ್ಲಿ ನ್ಯೂಸ್ ಬರುತ್ತಿದೆ. ಛೇರ್ಮೆನ್ ಶ್ರೀಕರನ ಹೊಟ್ಟೆಗೆ ಎರಡು ಗುಂಡುಗಳು ಬಿದ್ದಿವೆ. ಒಂದು ಗುಂಡು ಒಬ್ಬ ಅಧಿಕಾರಿಯ ತೊಡೆಗೆ ಬಿದ್ದಿದೆ. ಇನ್ನೊಂದು ಗುಂಡು ಇನ್ನೊಬ್ಬನ ಕತ್ತಿನ ಭಾಗಕ್ಕೆ ಬಿದ್ದಿದೆ. ಇದರಲ್ಲಿ ಕತ್ತಿನ ಭಾಗಕ್ಕೆ ಗುಂಡೇಟು ಬಿದ್ದವನು ಮತ್ತು ಛೇರ್ಮೆನ್ ಶ್ರೀಕರನಿಗೆ ತುಂಬಾ ರಕ್ತಸ್ರಾವವಾಗಿದೆ. ತೀರ ಹತ್ತಿದಿಂದಲೇ ಫೈರ್ ಆಗಿರುವುದರಿಂದ ಬಹುದೊಡ್ಡ ಪ್ರಮಾಣದಲ್ಲಿ ಗಾಯವಾಗಿದೆ. ಬದುಕುಳಿಯುವುದು ಕಷ್ಟ. ಅವರನ್ನು ಕ್ರಿಟಿಕಲ್ ಯುನಿಟ್ನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಹೀಗೆ ಹಲವು ವಿಷಯಗಳು ಹರಿದಾಡುತ್ತಿವೆ.
ಇವರಿಗೆ ಮತ್ತೆ ನಿರಾಸೆ. ಛೇ, ಯಾರಿಗೂ ಸರಿಯಾದ ಭಾಗಕ್ಕೆ ಹಾನಿಯಾಗಿಲ್ಲ. ಒಂದು ವೇಳೆ ತಲೆಗೆ ಇಲ್ಲವೇ ಹೃದಯದ ಭಾಗಕ್ಕೆ ಏಟು ಬಿದ್ದಿದ್ದರೆ ಒಬ್ಬನಾದರೂ ಅಲ್ಲಿಯೇ ಸಾಯುತ್ತಿದ್ದ. ತಾವು ಹಾರಿಸಿದ ಆರು ಗುಂಡುಗಳಲ್ಲಿ ಕೇವಲ ನಾಲ್ಕು ಗುಂಡುಗಳು ಮಾತ್ರವೇ ಏಟು ನೀಡಿವೆ. ಉಳಿದವು ಹೋಟೆಲ್ನ ಗೋಡೆಗೆ ಬಿದ್ದಿವೆ ಎನ್ನುವುದು ಇವರಿಗೆ ಇನ್ನೊಂದೆಡೆ ನುಂಗಲಾರದ ನೋವಾಯಿತು. ಛೇ, ಎನ್ನುತ್ತಾ ಡಾಬಾಯಿಂದ ಹೊರನಡೆಯುತ್ತಾರೆ. ಅದೇ ಹೈವೇಯಲ್ಲಿ ಸಾಗುತ್ತಾ ಪೂನ ಕಡೆಗೆ ಪ್ರಯಾಣಿಸುತ್ತಿದ್ದಾರೆ. ಈಗ ಅಣ್ಣ ಹೇಳುತ್ತಾನೆ. ಕಳೆದ ಬಾರಿ ಇದೇ ರೀತಿ ಹೋಗುವಾಗ ನಾವು ಪೋಲಿಸರಿಗೆ ಸಿಕ್ಕು ಬೀಳುವ ಸಾಧ್ಯತೆ ಎದುರಾಗಿತ್ತು. ಮೊದಲೇ ಪೋಲಿಸರಿಗೆ ನಮ್ಮ ಮೇಲೆ ಅನುಮಾನವಿದೆ. ಈಗ ರಸ್ತೆ ಬದಲಿಸಿ ಬೇರೆ ಮಾರ್ಗದಲ್ಲಿ ಪ್ರಯಾಣಿಸೋಣ ಎನ್ನುತ್ತಾನೆ.
ಈಗ ಯೋಜಿಸಿದಂತೆ ಹಾಗೆಯೇ ಇನ್ನೊಂದು ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾರೆ. ಒಂದೆಡೆ ನಿರಾಸೆಯೋ? ಸಂಭ್ರಮವೋ? ಮನಕ್ಕಂತೂ ಅರ್ಥವಾಗುತ್ತಿಲ್ಲ. ಒಬ್ಬನಾದರೂ ಸತ್ತ ಎಂದು ಕೇಳಿದರಷ್ಟೇ ಮನಸ್ಸಿಗೆ ನೆಮ್ಮದಿ. ಆದರೆ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆದರೆ ಪರಿಸ್ಥಿತಿ ತುಂಬಾ ಕ್ರಿಟಿಕಲ್ ಆಗಿದೆ. ನಮ್ಮ ಪಾಲಿಗೆ ಒಳ್ಳೆಯ ಸುದ್ಧಿ ಬಂದೇ ಬರುತ್ತದೆ. ಆಗಿದ್ದು ಆಗಲಿ. ನಮ್ಮ ಕೈಲಾಗಿದ್ದು ನಾವು ಮಾಡಿಯಾಗಿದೆ. ಆದರೆ ಈ ರೀತಿಯ ಪ್ರಯತ್ನ ಮಾತ್ರ ನಿರಂತರವಾಗಿರಲಿ ಎಂದು ಶಪಥ ಮಾಡುತ್ತಾ ದಾರಿಯಲ್ಲಿ ಕ್ರಮಿಸುತ್ತಿದ್ದಾರೆ.
ಬೆಳಿಗ್ಗೆ ಸುಮಾರು ನಾಲ್ಕರ ಮುಂಜಾನೆ. ಇವರ ವಾಹನ ನಿಧಾನವಾಗಿ ಸಾಗುತ್ತಿದೆ. ಇವರಿಗೂ ಬಹಳ ಬಳಲಿಕೆಯಾಗಿದೆ. ಈಗ ಅಣ್ಣನ ಬದಲು ಡ್ರೈವಿಂಗ್ ಮಾಡಲು ತಮ್ಮ ಡ್ರೈವಿಂಗ್ ಸೀಟಿಗೆ ಕೂರಲು ಅಣಿಯಾಗುತ್ತಿದ್ದಾನೆ. ಕೂಡಲೇ ಎರಡು ಪೋಲಿಸ್ ಜೀಪ್ಗಳು ಒಮ್ಮೆಲೆ ಬಂದು ಇವರನ್ನು ಅಡ್ಡಗಟ್ಟಿದ್ದವು. ಜೀಪ್ನಿಂದ ಹೊರಬಂದ ಪೋಲಿಸ್ ಪಡೆಯು ಇವರನ್ನು ಸುತ್ತುವರೆಯಿತು. ಈಗ ಅಣ್ಣ, ತಮ್ಮ ಇಬ್ಬರೂ ಆಶ್ಚರ್ಯದಿಂದ ಗಲಿಬಿಲಿಗೊಂಡು ಏನೆಂದು ಎಣಿಸುವಷ್ಟರಲ್ಲಿ ಯಾವುದಕ್ಕೂ ಅವಕಾಶ ನೀಡದೇ ಪೋಲಿಸರು ಇಬ್ಬರನ್ನು ತಮ್ಮ ವಶಕ್ಕೆ ತೆಗೆದುಕೊಂಡರು..
ಭಾಗ-10
ಈಗ ಸಹೋದರರಿಬ್ಬರನ್ನು ವಶಕ್ಕೆ ಪಡೆದು ಪೋಲೀಸರು ಶರಧೀಪುರಕ್ಕೆ ಕರೆತರುತ್ತಾರೆ. ಪ್ರಾಥಮಿಕ ತನಿಖೆಯಲ್ಲಿ ಇವರೇ ಎರಡೂ ಘಟನೆಗಳಿಗೂ ಆರೊಪಿಗಳು ಎನ್ನುವುದು ಕಂಡುಬರುತ್ತದೆ. ಈಗ ವಿಷಯವು ಇಡೀ ಊರಿಗೆ ಹಬ್ಬುತ್ತದೆ. ಜಾತ್ರೆಯ ಸಂಭ್ರಮದಲ್ಲಿದ್ದ ನಗರಕ್ಕೆ ಈ ಪ್ರಕರಣವೇ ಭಯದ ಛಾಯೆಯನ್ನು ಆವರಿಸಿದೆ. ಎಲ್ಲರ ಮನೆಯಲ್ಲು ಶಾಂತವಾಗಿದ್ದ ನಗರದಲ್ಲಿ ಏನೋ ನಡೆಯಬಾರದ ಘಟನೆ ನಡೆದಿದೆ ಎನ್ನುವ ಬೇಸವಂತು ಜೊತೆಯಾಗಿದೆ. ಏನೇ ಆದರೂ ಅವರಿಗಾದ ಅನ್ಯಾಯಕ್ಕೆ ಸಿಡಿದೆದ್ದು ಈ ರೀತಿ ಮಾಡಿದ್ದಾರೆ. ದುಷ್ಟರ ನಿಗ್ರಹಕ್ಕೆ ಇದುವೇ ಸರಿಯಾದ ಮಾರ್ಗ. ಇದೇ ಹಾದಿಯಲ್ಲಿ ಇಂದು ಸಮಾಜವು ಸಿಡಿದೇಳುವುದು ಅನಿವಾರ್ಯ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಸಮಾಜದ ಎಲ್ಲರೂ ಸಿಡಿದೆದ್ದರೆ ಒಂದಲ್ಲ ಒಂದು ದಿನ ಭ್ರಷ್ಟಚಾರವು ನಿಗ್ರಹವಾಗಿ ಸಮಾಜ ಶುದ್ಧಿಯಾಗುತ್ತದೆ ಎಂದು ಹಲವು ಜನರು ಮಾತನಾಡಿಕೊಳ್ಳುತ್ತಾ ಇವರ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಕೆಲವರು ಇವರ ನಡೆಯನ್ನು ಖಂಡಿಸಿದ್ದಾರೆ. ಇದಕ್ಕೆ ದೇಶದ ಕಾನೂನಿದೆ, ಇವರು ತಮಗಾದ ಅನ್ಯಾಯವನ್ನು ಅಲ್ಲಿಯೇ ನ್ಯಾಯದ ಹಾದಿಯಲ್ಲಿ ಕೇಳಬೇಕಿತ್ತು. ಆದರೆ ಇವರೇ ತಮ್ಮ ಕೈಗೆ ಗನ್ ತೆಗೆದುಕೊಂಡು ಉಗ್ರರಾಗಿ ವರ್ತಿಸಿದ್ದು ಅಸಹನೀಯ. ಈ ರೀತಿಯ ಪ್ರವೃತ್ತಿಯನ್ನು ಇತರರೂ ಅನುಕರಣೆಮಾಡಿಕೊಂಡರೆ ಸಮಾಜದಲ್ಲಿ ಆಂತರಿಕ ಯುದ್ಧವೇ ನಡಯುತ್ತದೆ. ಹಿಂಸೆಯಿಂದ ಎಲ್ಲವೂ ಸಾಧ್ಯವಿಲ್ಲ. ಶಾಂತಿಯೇ ಮಾನವಕುಲದ ಅಡಿಪಾಯ. ವ್ಯತಿರಿಕ್ತ ನಡೆಗಳು ಸಮಾಜವನ್ನು ದಾರಿ ತಪ್ಪಿಸಿ ಇನ್ನಷ್ಟು ಜನರ ಮನಸ್ಸು ಉಗ್ರವಾಗುತ್ತದೆ. ಒಬ್ಬರು ತಪ್ಪು ಮಾಡಿದ್ದಾರೆಂದು ಅದಕ್ಕೆ ಪ್ರತಿಕಾರವಾಗಿ ನಾವೂ ತಪ್ಪು ಮಾಡಿದರೆ ಹಿತವೇನು? ಸಮಾಜದ ಸಚ್ಚರಿತ ಗುಣದ ಗತಿಯೇನು? ಈ ವಿಚಾರದಲ್ಲಿ ಸಹೋದರರಿಬ್ಬರೂ ದಾರಿ ತಪ್ಪಿದ್ದಾರೆಂಬುದು ಕೆಲವರ ಆಬಿಪ್ರಾಯ.
ಇತ್ತ ವಿಚಾರಣೆಯಲ್ಲಿ ಪೋಲೀಸರಿಗೂ ಸಾಕಷ್ಟು ಗೊಂದಲ. ಇವರನ್ನು ಎಷ್ಟೇ ವಿಚಾರಿಸಿದರೂ ತಮ್ಮ ಕೈಗೆ ಗನ್ ಹೇಗೆ ಬಂತು? ಯಾರು ಪೂರೈಸಿದರು? ಎನ್ನುವುದರ ಸುಳಿವನ್ನು ಎಳ್ಳಷ್ಟು ಬಿಟ್ಟುಕೊಡುತ್ತಿಲ್ಲ. ಆದರೆ ಎರಡೂ ಘಟನೆಗಳಿಗೂ ತಾವೇ ಕಾರಣವೆಂದು ಒಪ್ಪಿಕೊಳ್ಳುತ್ತಾರೆ. ಈಗ ಪೋಲೀಸರಿಗೆ ಈ ಪ್ರಕರಣವನ್ನು ಭೇದಿಸುವುದು ಕಠಿಣವಾಗಿದೆ. ಮೊದಲು ರಮೇಶಪ್ಪನ ಕೊಲೆ ಮಾಡಿದ ನಂತರ ಎಲ್ಲಿ ಅವಿತುಕೊಂಡಿದ್ದರು ಎಂಬುದನ್ನು ನುಡಿಯುತ್ತಿಲ್ಲ. ಇಲ್ಲಿಯವರೆಗೆ ಎಲ್ಲಿದ್ದಾರೆನ್ನುವುದನ್ನೂ ನುಡಿಯುತ್ತಿಲ್ಲ. ತಮ್ಮ ಜೀವವೇ ಹೋದರು ಏನು ಹೇಳುವುದಿಲ್ಲವೆಂದು ಸಹೋದರರಿಬ್ಬರೂ ಪಣತೊಟ್ಟಿದ್ದಾರೆ.
ಇನ್ನೊಂದೆಡೆ ಇವರನ್ನು ನ್ಯಾಯಲಾಯಕ್ಕೆ ಹಾಜರುಪಡಿಸವುದನ್ನು ಖಾತ್ರಿಪಡಿಸಿಕೊಂಡು ಇವರನ್ನು ನೋಡಲು ಶಿವಣ್ಣ ಬರುತ್ತಾನೆ. ಬಹಳ ಬಿಗಿಯಾದ ಭದ್ರತೆಯಲ್ಲಿ ಸಹೋದರರನ್ನು ನ್ಯಾಯಾಲಯಕ್ಕೆ ಕರೆತರುತ್ತಾರೆ. ಇವರನ್ನು ನೊಡಲು ಜನರ ನೂಕುನುಗ್ಗಲ. ಒಂದೆಡೆ ಇವರೇ ಹಲವರಿಗೆ ಹೀರೋಗಳಾಗಿ ಕಂಡರೆ ಆ ಸಮಯದಲ್ಲಿ ಆಶ್ಚರ್ಯವೇನು ಎನ್ನಿಸುತ್ತಿಲ್ಲ! ಈಗ ತುಸು ಸಾವಾಧಾನಿಸಿಕೊಂಡು ಜನರ ಮಧ್ಯೆಯಿಂದಲೇ ಶಿವಣ್ಣ ಎಲ್ಲವನ್ನು ಗಮನಿಸಿದ.
ನಂತರ ನ್ಯಾಯಾಲಯದ ಒಳಗಡೆ ಇವರನ್ನು ಪೋಲೀಸರು ಕರೆದುಕೊಂಡು ಹೋದರು. ಈಗ ಇವರ ಬಳಿ ಅಸಲಿ ವಿಷಯ ಏನೆಂದು ಕೇಳಬೇಕೆಂದು ಶಿವಣ್ಣನೂ ಕೋರ್ಟ್ ಒಳಗಡೆ ಹೋಗುತ್ತಾನೆ. ಶಿವಣ್ಣನನ್ನು ನೋಡಿ ಇಬ್ಬರೂ ಸಹೋದರರು ತಲೆ ಭಾಗಿಸಿ ಏನೋ ತಪ್ಪು ಮಾಡಿ ಬಂಧಿಯಾಗಿದ್ದೇವೆ ಎನ್ನುವ ಭಾವದಲ್ಲಿ ಗೋಚರಿಸುತ್ತಾರೆ. ಇವರ ಕಾವಲಿಗೆ ದೊಡ್ಡ ಶಸ್ತ್ರ ಸಜ್ಜಿತ ಪೋಲೀಸ್ ಪಡೆಯೇ ಇದೆ. ಸಹಜವಾಗಿ ಎಲ್ಲರಿಗೂ ಸಮಾಜಮುಖಿ ಚಿಂತಕನಾಗಿ ಪ್ರಿಯವಾದ ಶಿವಣ್ಣನ ಕೋರಿಕೆಯಂತೆ ಪೋಲೀಸರು ಆರೋಪಿ ಸಹೋದರರೊಂದಿಗೆ ಮಾತನಾಡಲು ಅವಕಾಶ ನೀಡುತ್ತಾರೆ.
ಶಿವಣ್ಣ ರಾಜು ಮತ್ತು ಕುಮಾರನಿಗೆ ಕೇಳುತ್ತಾನೆ. ಏನು ಇದೆಲ್ಲಾ ನೀವೇ ಮಾಡಿದ್ದೇ? ನೀವು ಹೀಗೆ ಮಾಡಿದ್ದೇ ಆದಲ್ಲಿ ಅದು ತಪ್ಪು. ನ್ಯಾಯದ ನಡೆಯಲ್ಲಿ ಸತ್ಯ ಪಥದಲ್ಲಿ ಕ್ರಮಿಸಿ ಗೆಲ್ಲಬೇಕು. ನೋವಿಗೆ ನೋವೇ ಪರಿಹಾರವಲ್ಲ. ದುಷ್ಟರ ನಿಗ್ರಹವನ್ನು ಬುದ್ಧಿವಂತಿಕೆಯಿಂದ ಕಾನೂನಿನಲ್ಲಿ ಪ್ರಶ್ನಿಸಬೇಕಿತ್ತು. ಆದರೆ ನೀವೀಗ ಅನ್ಯಥಾ ಮುಂಗೋಪದಲ್ಲಿ ನಿಮ್ಮ ಭವಿಷ್ಯವನ್ನು ಹಾಳುಮಾಡಿಕೊಂಡಿದ್ದೀರ. ಭ್ರಷ್ಟರ ಭವಿಷ್ಯವನ್ನು ಸೌಮ್ಯದ ಹೋರಾಟದ ಹಾದಿಯಲ್ಲಿ ನಿಗ್ರಹಿಸಿದ್ದರೆ ಅವರ ಭವಿಷ್ಯವು ಆಗ ನರಕವಾಗುತ್ತಿತ್ತು. ಈಗ ಅವರಿಗಾಗಬೇಕಾದ ಶಿಕ್ಷೆಯನ್ನು ನೀವು ಅನುಭವಿಸುವಂತಾಗಿದೆ. ಸಕ್ಷಮ ಪ್ರಾಧಿಕಾರದಲ್ಲಿ ಅವರ ಮೇಲೆ ಸರಿಯಾದ ದಾಖಲೆಗಳನ್ನು ಸಂಗ್ರಹಿಸಿ ದಾವೆ ಹೂಡಬೇಕಿತ್ತು. ಇದಕ್ಕೆ ನಾನು ಮತ್ತು ನನ್ನ ಪರಿವಾರದ ಚಿಂತಕರೆಲ್ಲರೂ ಸಹಕಾರ ನೀಡುತ್ತಿದ್ದೆವು. ಛೇ, ಏನೇ ಆಗಲಿ ನೀವು ತಪ್ಪು ಮಾಡಿದ್ದೀರಿ ಎಂದು ಶಿವಣ್ಣ ಬೇಸರದಲ್ಲಿ ನುಡಿಯುತ್ತಾನೆ.
ಈಗ ರಾಜು ಪ್ರಶ್ನಿಸುತ್ತಾನೆ. "ನೀವೇ ಈ ಹಿಂದೆ ನಮ್ಮ ಆಸ್ತಿ ಉಳಿವಿಗಾಗಿ ನಮ್ಮ ತಾಯಿಯೊಂದಿಗೆ ಸಾಕಷ್ಟು ಬಾರಿ ನಗರಸಭೆಗೆ ಹೋಗಿ ಬಂದಿದ್ದೀರಿ. ದೊಡ್ಡ ದೊಡ್ಡ ಅಧಿಕಾರಿಗಳನ್ನು ಭೇಟಿಮಾಡಿ ತನಿಖೆಯನ್ನು ಮಾಡಿಸಿದ್ದೀರಿ. ಆದರೆ ಫಲವೇನು? ತನಿಖಾ ವರದಿಯಲ್ಲಿ ಯಾವ ದುಷ್ಟನಿಗೆ ಶಿಕ್ಷೆಯಾಯಿತು? ಮೋಸಗಾರರು ಎಲ್ಲಿಯವರೆಗೆ ಬದುಕಿರುತ್ತಾರೋ ಅಲ್ಲಿಯವರೆಗೂ ಸತ್ಯ ಸತ್ತೇ ಇರುತ್ತದೆ! ಸಮಾಜವನ್ನು ದೇಶದ ಆಸ್ತಿಯನ್ನು ತಮ್ಮ ಚಪಲಕ್ಕೆ ದುರುಪಯೋಗಪಡಿಸಿಕೊಳ್ಳುವ ಇಂತಹ ಗೂಂಡಾಗಳಿಗೆ ನಾವು ಗುಂಡು ಹಾಕಿದ್ದೇ ಸರಿಯಾಗಿದೆ. ಈ ವಿಚಾರದಲ್ಲಿ ನಮಗೆ ಯಾವುದೇ ಪಶ್ಚತ್ತಾಪವೂ ಇಲ್ಲ. ನಮಗೆ ನಾವು ಮಾಡಿದ ಕೃತ್ಯಕ್ಕೆ ಹೆಮ್ಮೆಯಿದೆ. ಇನ್ನು ನಾವು ಮಾಡಬೇಕಾಗಿದ್ದು ಸಾಕಷ್ಟು ಇದೆ ಎಂದು ತುಸು ಕೋಪದಲ್ಲೇ ನುಡಿಯುತ್ತಾನೆ."
ಈ ಮಾತುಗಳನ್ನು ಕೇಳುತ್ತಾ ಶಿವಣ್ಣನು ಮೂಕಸ್ಮಿತನಾಗುತ್ತಾನೆ. ರಾಜು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ತಡಕಾಡುತ್ತಾನೆ. ಭ್ರಷ್ಟಾಚಾರದ ದೆವ್ವವೇ ಎದ್ದೆದ್ದು ಊರೆಲ್ಲಾ ಬೆಂಕಿ ಹಚ್ಚಿ ಕುಣಿವಾಗ ಏನು ಮಾಡಲು ಸಾಧ್ಯ? ವಿಧಿಯಿಲ್ಲದೇ ಏನೂ ಅರಿಯದಾ ಮುಗ್ಧರು ಇನ್ನೇನು ಮಾಡಿಯಾರು? ಏನು ತಪ್ಪುಮಾಡದೇ ಸುಳ್ಳು ದೂರು ದಾಖಲಿಸಿ ಅಂದು ಸಹೋದರಿಬ್ಬರನ್ನು ರಮೇಶಪ್ಪ ವಾಮಮಾರ್ಗದಲ್ಲಿ ದಂಡಿಸಿದ್ದೇ ಇದೆಲ್ಲಾ ಅನಾಹುತ ಕಾರಣವೆಂದು ಶಿವಣ್ಣ ಆಲೋಚಿಸುತ್ತಾ ಕೂತಿದ್ದಾನೆ. ಅಷ್ಟರಲ್ಲೇ ಅವರ ಸ್ನೇಹಿತರು, ವಕೀಲರಾದ ಶ್ರೀಪತಿಯವರು ಬರುತ್ತಾರೆ. ಶಿವಣ್ಣನ ಕೋರಿಕೆಯಂತೆ ಸಹೋದರರ ಪರವಾಗಿ ವಕಾಲತ್ತು ವಹಿಸಿ ಜಾಮೀನಿಗೆ ಪ್ರಾರ್ಥಿಸಿಕೊಳ್ಳುತ್ತಾರೆ. ಆದರೆ ಪೋಲಿಸರ ಕೋರಿಕೆಯಂತೆ ಇನ್ನೂ ಇವರಿಂದ ಸಾಕಷ್ಟು ಹೇಳಿಕೆಯನ್ನು ಪಡೆಯಬೇಕಿದೆ. ತನಿಖೆಗೆ ಆರೋಪಿಗಳ ಅಗತ್ಯವಿದೆ. ಅವರನ್ನು ಪೋಲೀಸ್ ಕಸ್ಟಡಿಗೆ ಕೊಡಿ ಎಂದು ಸರ್ಕಾರಿ ವಕೀಲರು ವಾದಿಸುತ್ತಾರೆ.
ಕೊನೆಗೆ ನ್ಯಾಯಾಲಯ ಆರೋಪಿಗಳನ್ನು 7 ದಿನಗಳವರಗೆ ಪೋಲಿಸ್ ಕಸ್ಟಡಿಗೆ ನೀಡುತ್ತದೆ. ಅವರನ್ನು ಇಂತಹ ಸಮಯದಲ್ಲಿ ಜಾಮೀನಿನ ಮೇಲೆ ಹೊರತುರುವುದು ಕಷ್ಟ ಎನ್ನುವುದು ಅರಿವಿದ್ದರೂ ಪ್ರಯತ್ನವಂತೂ ಮಾಡಿ ಶ್ರೀಪತಿಯವರು ತಮ್ಮ ವಾದ ಮಂಡಿಸಿದ್ದರು. ಈಗ ರಾಜು ಮತ್ತು ಕುಮಾರನನ್ನು ಪೋಲಿಸರು ಕರೆದುಕೊಂಡು ಹೋಗುತ್ತಿದ್ದಾರೆ. ಆಗ ಹೊರಗಡೆಯಿಂದ ಇವರತ್ತ ಮಂಜಪ್ಪ ನೋಡುತ್ತಿರುವುದನ್ನು ಗಮನಿಸಿದ ರಾಜು "ಲೇ ಮಂಜಪ್ಪ ಒಂದಲ್ಲ ಒಂದು ದಿನ ನಿನಗೂ ಹಬ್ಬ ಮಾಡ್ತೇವೆ, ನೋಡ್ತಾ ಇರು" ಎಂದು ಆವೇಶದಲ್ಲಿ ಗರ್ಜಿಸುತ್ತಾನೆ. ಇವರ ಮಾತನ್ನು ಕೇಳಿದ ಜನ ಸಮೂಹ ಇವರಂತು ತಮಗೆ ಮೋಸ ಮಾಡಿದ ಯಾರನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಒಟ್ಟಾರೆ ಸಹೋರರಿಬ್ಬರೂ ಭ್ರಷ್ಟರನ್ನು ಕೊನೆಗಾಣಿಸಲು ಪಣತೊಟ್ಟಿದ್ದಾರೆನ್ನುವುದು ಖಚಿತವಾಯಿತು. ರಾಜುವಿನ ಮಾತಿನಿಂದ ಬೆದರಿದ ಮಂಜಪ್ಪ ಭಯದಲ್ಲೇ ನಡುಗುತ್ತಾ ಜನರ ನಡುವಿನಿಂದ ಮೆತ್ತನೆ ಮರೆಯಾಗುತ್ತಿದ್ದಾನೆ. ಆಗ ಯಾರೋ ಒಬ್ಬ ನುಡಿಯುತ್ತಾನೆ. "ಈ ಮಂಜಪ್ಪನು ಕೂಡ ಊರಲ್ಲಿ ಸಾಕಷ್ಟು ಅವ್ಯವಹಾರಕ್ಕೆ ಕಾರಣೀಭೂತವಾದವನು, ಈತನೂ ಬೇಗ ನೆಗದ್ ಬೀಳಲಿ" ಎನ್ನುತ್ತಾನೆ.
ಇತ್ತ ಒಂದೆಡೆ ಮೌನವಾಗಿ ಎಲ್ಲವನ್ನು ಗಮನಿಸುತ್ತಿದ್ದ ಶಿವಣ್ಣ ಹತಾಶೆಯ ಮನದಲ್ಲಿ ಚಿಂತಿಸುತ್ತಿದ್ದಾನೆ. ಏನೂ ಅರಿಯದೇ ಇದ್ದ ಮುಗ್ಧರು ಇಂದು ಸಮಾಜದಲ್ಲಿ ಅತೀ ಉಗ್ರವಾಗಿ ನಡೆದುಕೊಂಡು ದಾರಿತಪ್ಪಿದ್ದಾರೆ. ಇದಕ್ಕೆಲ್ಲವೂ ಕಾರಣ ಭೂ ಮಾಫಿಯಾದ ಭಯೋತ್ಪಾದಕರು. ಇಂತಹವರನ್ನು ಸರಿಯಾಗಿ ಯಾರೂ ಶಿಕ್ಷಿಸದೇ ಹೋದಲ್ಲಿ ಇನ್ನಷ್ಟು ರಾಜು ಮತ್ತು ಕುಮಾರನಂತೆ ಮುಗ್ಧರು ಕ್ರಿಮಿನಲ್ಗಳಾಗಿ ಉದ್ಭವವಾಗುತ್ತಾರೆ. ಛೇ, ವಿಧಿಯೇ ನೀನೆಷ್ಟು ಉಗ್ರ! ಹಣದಾಸೆಗೆ ಮಾನವಕುಲ ತನ್ನ ಅಡಿಪಾಯವನ್ನೇ ಬಿರುಕು ಬೀಳುವಂತೆ ಮಾಡಿಕೊಂಡಿದೆ. ಮುಂದೊಂದು ದಿನ ಇಡೀ ಮನುಕುಲವೇ ಕಳಚಿ ಬೀಳುತ್ತದೆ. ಆಗ ಉಳಿವುದಾದರೂ ಏನು? ಒಬ್ಬನು ಮಾಡಿದ ಅನ್ಯಾಯಕ್ಕೆ ಇನ್ನೊಬ್ಬರು ಕತ್ತಿ ಹಿಡಿದು ಬಡಿದಾಡುವುದೇ ಉತ್ತರವೇ? ಹೀಗೆ ಶಿವಣ್ಣನ ಮನದ ಚಿಂತನಾ ಲಹರಿ ಮುಂದುವರೆದಿದೆ.
ಈಗ ಈ ಪ್ರಕರಣದ ತನಿಖೆಯನ್ನು ನಡೆಸುವುದಕ್ಕೆ ಪೋಲೀಸರಿಗೂ ಬಹಳ ತ್ರಾಸದಾಯಕವಾಗಿದೆ. ಕಾರಣ ಸಹೋದರರಿಬ್ಬರೂ ಯಾವುದೇ ಕಾರಣಕ್ಕೂ ತಾವು ಇಷ್ಟು ಸಮಯದವರೆಗೆ ಎಲ್ಲಿ ತಲೆಮರೆಸಿಕೊಂಡಿದ್ದೆವು, ಯಾರು ಸಹಕಾರ ನೀಡಿದರು ಎಂಬುದನ್ನು ತುಸುವೂ ಹೇಳುತ್ತಿಲ್ಲ. ಯಾವುದೇ ಮಾರ್ಗಕ್ಕೂ ಹೆದರದೇ ಬಂಡತನದಿಂದ ವರ್ತಿಸುತ್ತಿದ್ದಾರೆ. ತಮ್ಮ ಜೀವವೇ ಹೋಗಲಿ ನಾವಂತೂ ಏನನ್ನು ಹೇಳುವುದಿಲ್ಲವೆಂದು ಹೇಳುತ್ತಿದ್ದಾರೆ. ಅದೇ ರೀತಿಯೇ ನಡೆದುಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಹಿರಿಯ ಅಧಿಕಾರಿಯೊಬ್ಬರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಇವರು ಅನೇಕ ಕುಖ್ಯಾತ ಪ್ರಕರಣಗಳನ್ನು ಭೇದಿಸಿದ ದಕ್ಷ ನಿಪುಣ ಅಧಿಕಾರಿ. ಅವರು ಶರಧೀಪುರಕ್ಕೆ ಆಗಮಿಸಿ ಸ್ಥಳೀಯ ಪೋಲಿಸರೊಂದಿಗೆ ಚರ್ಚಿಸುತ್ತಾರೆ. ರಾಜು ಮತ್ತು ಕುಮಾರನಿಂದ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಪರಿಶೀಲಿಸುತ್ತಾ ರಿವಾಲ್ವರ್ನ್ನು ಪರಿಶೀಲಿಸುತ್ತಾರೆ. ಆ ರಿವಾಲ್ವರ್ ನೋಡಿ "ಓಹ್, ಈ ರೀತಿಯ ರಿವಾಲ್ವರ್ಗಳನ್ನು ಅಪಾರ ಪ್ರಮಾಣದಲ್ಲಿ ಒಮ್ಮೆ ನಕ್ಸಲರನ್ನು ಹತ್ಯೆಮಾಡಿದ್ದಾಗ ನಾವು ವಶಕ್ಕೆ ಪಡೆದಿದ್ದೆವು, ಇವೆಲ್ಲಾ ಜರ್ಮನ್ ಮೇಡ್ ರಿವಾಲ್ವರ್ಗಳೇ" ಎಂದು ಇನ್ನೊಮ್ಮೆ ಪರಿಶೀಲಿಸುತ್ತಾ ನುಡಿಯುತ್ತಾರೆ. ನಂತರ ಪಕ್ಕದಲ್ಲಿದ್ದ ಶರಧೀಪುರದ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅವರಲ್ಲಿ ವಿಚಾರಿಸುತ್ತಾರೆ. ಆ ಹುಡುಗರ ಹಿನ್ನೆಲೆ ಏನು? ಅವರು ಈ ಹಿಂದೆ ಯಾವುದಾದರೂ ಕ್ರಿಮಿನಲ್ ಪ್ರಕರಣಗಳಲ್ಲಿದ್ದವರೇ? ಪ್ರಶ್ನಿಸುತ್ತಾರೆ. ಸರ್ಕಲ್ ಇನ್ಸ್ಪೆಕ್ಟರ್ ಉತ್ತರಿಸುತ್ತಾರೆ "ಇಲ್ಲ ಸರ್, ಯಾವುದೇ ತರಹದ ಆರೋಪಗಳು ಅವರ ಮೇಲೆ ಇಲ್ಲ. ಅವರು ಹೆಚ್ಚಿಗೆ ಏನೂ ಓದಿಲ್ಲ. ಈ ಹಿಂದೆ ಬೆಂಗಳೂರಿನಲ್ಲಿ ಹೋಟೆಲ್ ಕೆಲಸದಲ್ಲಿದ್ದರೆಂದು ತಿಳಿದು ಬಂದಿದೆ. ಆದರೆ ರಮೇಶಪ್ಪನ ಕೊಲೆ ಮಾಡಿದ ನಂತರ ತಲೆಮರೆಸಿಕೊಂಡರು. ಮೊನ್ನೆ ಅವರನ್ನು ನಾವು ಸೆರೆ ಹಿಡಿದು ತಂದು ವಿಚಾರಿಸಿದಾಗ ಇವರೇ ರಮೇಶಪ್ಪನ ಕೊಲೆ ಮತ್ತು ಹೋಟೆಲ್ ನಡೆದ ಶೂಟೌಟ್ನಲ್ಲಿ ಭಾಗಿಯಾದವರೆಂದು ಒಪ್ಪಿಕೊಂಡು, ಇದಕ್ಕೆ ಆ ನಗರಸಭೆಯ ಭ್ರಷ್ಟ ಅಧಿಕಾರಿಗಳು ಮತ್ತು ಛೇರ್ ಮೆನ್ ಶ್ರೀಕರ ಮಾಡಿದ ಮೋಸಕ್ಕೆ ಪ್ರತೀಕಾರವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ರಿವಾಲ್ವರ್ ಯಾರು ನೀಡಿದರು, ಇಲ್ಲಿವರೆಗೆ ಎಲ್ಲಿದ್ದೆವು, ಯಾರೆಲ್ಲಾ ತಮ್ಮ ಸಹಕಾರಕ್ಕೆ ಇದ್ದಾರೆನ್ನುವುದು ಜೀವಹೋದರೂ ಹೇಳುವುದಿಲ್ಲವೆಂದು ಹೇಳುತ್ತಾರೆ. ಯಾವುದಕ್ಕೂ ಅಂಜುತ್ತಿಲ್ಲ ಎಂದು ಮೌನವಾಗುತ್ತಾರೆ."
ಈ ವಿಚಾರವನ್ನು ಕೇಳಿದ ತನಿಖಾಧಿಕಾರಿಯವರು ಆಯ್ತು ನಾನೀಗ ಅವರನ್ನು ನೋಡಬೇಕೆಂದು ಸರ್ಕಲ್ ಇನ್ಸ್ಪೆಕ್ಟರ್ ಜೊತೆಗೆ ಹೊರಡುತ್ತಾರೆ. ಈಗ ತನಿಖಾಧಿಕಾರಿ ಬಂದವರೇ ಸಹೋದರರಿಬ್ಬರನ್ನೂ ನೋಡುತ್ತಾರೆ. ಇವರನ್ನು ಹಿಂದೆ ಎಲ್ಲಿ ನೋಡಿದ ಬಗ್ಗೆಯೂ ಗುರುತಿಲ್ಲ. ಈಗ ತಾವೇ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಇಬ್ಬರೂ ಯಾವುದೇ ಮಾಹಿತಿಯನ್ನು ನೀಡದೇ ನಮ್ಮ ಈ ಸ್ಥಿತಿಗೆ ಭೂ ಮಾಫಿಯಾದ ಭಯೋತ್ಪಾದಕರು ನಮಗೆ ಮಾಡಿದ ಮೋಸವೇ ಕಾರಣವೆಂದು ನುಡಿಯುತ್ತಾರೆ.
ಈಗ ಹೊರಬಂದ ತನಿಖಾಧಿಕಾರಿಯವರು ಸರ್ಕಲ್ ಇನ್ಸ್ಪೆಕ್ಟರ್ರವರಿಗೆ ಗುಪ್ತಚರ ದಳದ ಮಾಹಿತಿ ಏನು ಬಂದಿದೆ? ಪುನಃ ಅವರ ನೆರವಿನಿಂದ ಇವರಿಗೆ ನನ್ನ ಅನುಮಾನದ ಪ್ರಕಾರ ನಕ್ಸಲ್ ನಂಟೇನಾದರೂ ಇದ್ದಿರಬಹುದೇ? ಎಂದುದನ್ನು ಖಚಿತಪಡಿಸಿಕೊಳ್ಳಿ ಎನ್ನುತ್ತಾರೆ.
ಸರ್ಕಲ್ ಇನ್ಸ್ಪೆಕ್ಟರ್ ಉತ್ತರಿಸುತ್ತಾರೆ. ಅದೂ ಮಾಡುತ್ತಿದ್ದೇವೆ. ಗುಪ್ತಚರ ಮಾಹಿತಿಯಂತೆ ಇವರಿಗೆ ಯಾರು ಸಹಾಯಮಾಡಿದ್ದಾರೆ ಎನ್ನುವುದು ಎಲ್ಲಿಯೂ ಗೊತ್ತಾಗುತ್ತಿಲ್ಲ. ಈಗ ನೀವು ಆದೇಶಿಸಿದಂತೆ ಇವರಿಗೆ ನಕ್ಸಲರ ಜೊತೆಗೆ ಯಾವುದಾದರೂ ಸಂಬಂಧವಿದೆಯೇ? ಎನ್ನುವುದನ್ನು ಪರಿಶೀಲಿಸುವಂತೆಯೂ ಹೇಳುತ್ತೇನೆ. ಆದರೆ ನಮ್ಮ ಭಾಗದಲ್ಲಿ ಯಾವುದೇ ನಕ್ಸಲ್ ಚಟುವಟಿಕೆ ಇಲ್ಲ. ಅಂತಹ ಯಾವುದೇ ಪ್ರಕರಣಗಳು ನಮ್ಮ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯಲ್ಲೂ ವರದಿಯಾಗಿಲ್ಲ ಎನ್ನುತ್ತಾರೆ.
ಈಗ ತನಿಖಾಧಿಕಾರಿ ಮತ್ತೆ ಸರ್ಕಲ್ ಇನ್ಸ್ಪೆಕ್ಟರ್ಗೆ ಕೇಳುತ್ತಾರೆ. ಯಾವುದಾದರೂ ದರೋಡೆಕೋರರ ತಂಡವೇನಾದರೂ ನಿಮಲ್ಲಿ ಸಕ್ರಿಯವಾಗಿದೆಯೇ? ಅವರೊಂದಿಗೆ ಇವರ ನಂಟೇನಾದರೂ ಇರಬಹುದೇ? ಪ್ರಶ್ನಿಸುತ್ತಾರೆ.
ಸರ್ಕಲ್ ಇನ್ಸ್ಪೆಕ್ಟರ್ ಉತ್ತರಿಸುತ್ತಾರೆ. ನಮ್ಮ ವ್ಯಾಪ್ತಿಯಲ್ಲಿ ಅಂತಹ ಯಾವುದೇ ಪ್ರಕರಣವಿಲ್ಲ. ನಮ್ಮ ಜಿಲ್ಲೆಯಲ್ಲೂ ಇಂತಹ ಸಾಧ್ಯತೆ ಇಲ್ಲ. ಇವರಿಗೆ ಯಾರು ಸಹಾಯಕರಾಗಿದ್ದಾರೆ ಎನ್ನುವುದು ನನಗೂ ಬಿಡಿಸಲಾರದ ಗಂಟಾಗಿದೆ. ಒಟ್ಟಾರೆ ಈ ಜಿಲ್ಲೆಯ ಜನರು ಬಹಳ ಶಾಂತಿ ಪ್ರಿಯರು. ನಮ್ಮಲ್ಲಿ ರಮೇಶಪ್ಪನ ಕೊಲೆ ಪ್ರಕರಣವೇ ಕಳೆದ ಹತ್ತು ವರ್ಷದಿಂದೀಚೆಗೆ ದಾಖಲಾದ ಮೊದಲ ಕೊಲೆ ಪ್ರಕರಣ. ಹೀಗೆ ಹೇಳುತ್ತಾ ಹೋಗುತ್ತಿದ್ದಂತೆ ತನಿಖಾಧಿಕಾರಿಯವರಿಗೂ ಈ ಪ್ರಕರಣವು ಕಬ್ಬಿಣದ ಕಡಲೆಯಂತಾಗಿ ಭಾಸವಾಗುತ್ತದೆ. ಈಗ ಯಾವುದೋ ಯೋಚನಾ ಲಹರಿಯಲ್ಲಿ ಅಲ್ಲಿಂದ ಹೊರನಡೆಯುತ್ತಾರೆ.
ಭಾಗ-11
ಕೆಲವು ದಿನಗಳ ನಂತರ ತನಿಖಾಧಿಕಾರಿಯು ಮಾಹಿತಿಯನ್ನು ಅರಸುತ್ತಾ ರಾಜು ಮತ್ತು ಕುಮಾರನ ಮೇಲೆ ದಯೆ ಹೊಂದಿದ ಶಿವಣ್ಣನನ್ನು ವಿಚಾರಣೆಮಾಡುತ್ತಾರೆ. ಶಿವಣ್ಣ ತನಗೆ ತಿಳಿದ ವಿಚಾರವನ್ನು ಹೇಳುತ್ತಾ ಹೋಗುತ್ತಾನೆ. ಆ ಹುಡುಗರು ಅಮಾಯಕರು. ಒಟ್ಟಾರೆ ಭೂ ಮಾಫಿಯಾದ ಜ್ವಾಲೆಗೆ ಇವರ ಆಸ್ತಿ ಬಲಿಯಾಗುತ್ತದೆ. ನಂತರ ಇದರ ಪರಿಣಾಮವೇ ಇವರ ತಾಯಿಯ ಸಾವಾಗುತ್ತದೆ. ಇದೆಲ್ಲದರಿಂದ ಕುಪಿತರಾಗಿ ಸೇಡಿನ ಕಿಚ್ಚಿನಲ್ಲಿ ಹೀಗೆ ಕ್ರಿಮಿನಲ್ಗಳಾಗಿದ್ದಾರೆ. ನಾನು ಇವರನ್ನು ಬಹಳ ಚಿಕ್ಕಂದಿನಿಂದಲೂ ನೋಡಿದವನೇ ತುಂಬಾ ಒಳ್ಳೆಯವರು. ಎಲ್ಲವೂ ವಿಧಿಯಾಟ ಎನ್ನುತ್ತಾನೆ.
ಆಗ ತನಿಖಾಧಿಕಾರಿ ಕೇಳುತ್ತಾರೆ, ನಿಮಗೇನಾದರೂ ಇವರು ರಮೇಶಪ್ಪನ ಕೊಲೆಮಾಡಿದ ನಂತರ ಎಂದಾದರೂ ಸಂಪರ್ಕಿಸಿದ್ದರೇ? ಇಲ್ಲವೇ ನಿಮಗೇನಾದರೂ ಇವರು ಇಷ್ಟು ದಿವಸಗಳವರೆಗೆ ಎಲ್ಲಿದ್ದರು ಎಂಬ ಬಗ್ಗೆ ಏನಾದರೂ ಮಾಹಿತಿಯಿದೆಯೆ? ನೀವು ಇವರ ಕುಟುಂಬಕ್ಕೆ ಸಾಕಷ್ಟು ಸಹಾಯಮಾಡಿದ್ದೀರಿ. ಇವರ ಕಷ್ಟ ಸುಖಕ್ಕೆ ಆಗಿದ್ದೀರಿ. ಇವರ ಆಸ್ತಿಯ ಉಳಿವಿಗಾಗಿ ಹೋರಾಡಿದ್ದೀರಿ ಎನ್ನುವ ಮಾತಿದೆ. ಆ ಋಣಕ್ಕಾದರೂ ನಿಮ್ಮಿಂದ ಅವರಲ್ಲಿ ಮಾಹಿತಿ ಕಲೆಹಾಕಲು ಸಾಧ್ಯವಿಲ್ಲವೇ? ಎನ್ನುತ್ತಾರೆ.
ಶಿವಣ್ಣ ತುಸು ನಕ್ಕು ನುಡಿಯುತ್ತಾನೆ. ಸ್ವಾಮಿ, ನನಗೂ ಇವರು ಮಾಡಿದ ಕೃತ್ಯದಿಂದ ಬೇಸತ್ತು ಜರ್ಜರಿತನಾಗಿದ್ದೇನೆ. ನಾನು ಮೊನ್ನೆಯ ದಿವಸ ಇವರನ್ನು ಕೋರ್ಟ್ ಆವರಣದಲ್ಲೇ ಮೊದಲ ಬಾರಿಗೆ ನೋಡಿದ್ದು. ಇಷ್ಟು ಸಮಯ ಎಲ್ಲಿದ್ದರು ಎಂಬ ಸಣ್ಣ ಸುಳಿವೂ ನನಗೂ ಸಿಕ್ಕಿಲ್ಲ. ಒಟ್ಟಾರೆ ಇವರಿಗೆ ಅನ್ಯಾಯವಾಗಿದೆ ಎನ್ನುವ ನೋವಿದೆ. ಅದರಲ್ಲಿ ಹೀಗೆಲ್ಲಾ ಮಾಡಿದ್ದಾರೆ ಎನ್ನುವುದಷ್ಟೇ ನನ್ನ ತಿಳುವಳಿಕೆಗೆ ನಿಲುಕಿದ್ದು, ಇಷ್ಟು ಬಿಟ್ಟರೆ ನನಗೇನು ಗೊತ್ತಿಲ್ಲ ಎನ್ನುತ್ತಾನೆ.
ನಂತರ ತನಿಖಾಧಿಕಾರಿಯವರು ಏನೇ ನಿಮ್ಮ ಗಮನಕ್ಕೆ ಬಂದರೆ ನಮ್ಮ ಗಮನಕ್ಕೂ ಕೂಡಲೇ ತರಬೇಕೆಂದು ಶಿವಣ್ಣನಿಗೆ ತಾಕೀತು ಹೊರಡಲು ಸೂಚಿಸುತ್ತಾರೆ. ಅತ್ತ ಶಿವಣ್ಣ ಹೊರಡುತ್ತಿದ್ದಂತೆ ಈತನ ಮೇಲು ಗುಪ್ತಚರ ಮಾಹಿತಿ ಸಂಗ್ರಹಿಸುವಂತೆ ಸೂಚಿಸುತ್ತಾರೆ.
ಮತ್ತೆ ತನಿಖಾಧಿಕಾರಿ ರಾಜು ಮತ್ತು ಕುಮಾರನ ಸ್ನೇಹಿತರು, ಬಂಧು ಬಳಗ ಅಂತಾ ಯಾರಿದ್ದರೋ ಅವರೆಲ್ಲರನ್ನು ವಿಚಾರಿಸುತ್ತಾ ಹೋಗುತ್ತಾರೆ. ಅವರ ಮೇಲು ನಿಗಾ ಇಡುವಂತೆ ಇಲಾಖೆಗೆ ಸೂಚಿಸುತ್ತಾರೆ. ಕೊನೆಗೆ ಯಾರದೋ ಸಹಾಯದಿಂದ ಅವರು ಬೆಂಗಳೂರಿನಲ್ಲಿದ್ದ ಹೋಟೆಲ್ನ್ನು ಪತ್ತೆ ಹಚ್ಚುತ್ತಾರೆ. ಆ ಹೋಟೆಲ್ಗೆ ಹೋಗಿ ರಾಜು ಮತ್ತು ಕುಮಾರನ ಬಗ್ಗೆ ಕೇಳುತ್ತಾರೆ. ಅಲ್ಲಿಯ ಹೋಟೆಲ್ ಮಾಲಿಕ, ಅಲ್ಲಿಯ ಕೆಲಸಗಾರರು ಇವರ ಬಗ್ಗೆ ಉತ್ತಮವಾಗಿ ನುಡಿಯುತ್ತಾರೆ. ಅನೇಕ ವರ್ಷಗಳವರೆಗೆ ಕೆಲಸಕ್ಕಿದ್ದ ಇವರು ಬಹಳ ಪ್ರಾಮಾಣಿಕರು. ಒಮ್ಮೆ ಒಬ್ಬ ಗ್ರಾಹಕ ತನ್ನ ಅಪಾರ ಮೊತ್ತದ ಹಣದ ಸೂಟ್ ಕೇಸ್ವೊಂದನ್ನು ಬಿಟ್ಟು ಹೋಗಿದ್ದ. ಅದನ್ನು ಪ್ರಾಮಾಣಿಕವಾಗಿ ಆತನಿಗೆ ತಲುಪಿಸುವಲ್ಲಿ ಇವರು ನೆರವಾದವರು. ಯಾರ ಹಣಕ್ಕೂ ಆಸೆ ಪಡೆದವರು. ನಾವು ಕೊಟ್ಟ ಹಣವನ್ನು ಪ್ರೀತಿಯಿಂದ ಪಡೆದು ದುಡಿಯುತ್ತಿದ್ದರು. ಅಂತಹ ಕೆಲಸಗಾರರು ತೀರ ಅಪರೂಪವೆಂದು ಹೋಟೆಲ್ ಮಾಲಿಕ ನುಡಿಯುತ್ತಾ ಜೊತೆಗೆ ಅವರ ಸದ್ಯದ ಪರಿಸ್ಥಿತಿಗೆ ದುಃಖಿಸುತ್ತಾರೆ.
ಇದೆಲ್ಲವನ್ನು ಕೇಳಿ ಮತ್ತೆ ತನಿಖಾಧಿಕಾರಿಗೆ ಗೊಂದಲ. ಛೇ, ಏನೇ ಆಗಲಿ ಒಂದು ಸಣ್ಣ ಸುಳಿವೂ ಸಿಗುತ್ತಿಲ್ಲ. ಇವರು ಕೆಲಸ ಮಾಡಿದ ಜಾಗ, ಸ್ನೇಹಿತರು, ಬಂಧುಗಳು ಎಲ್ಲರೂ ಇವರನ್ನು ಸಜ್ಜನರೆನ್ನುತ್ತಾರೆ. ಒಂದೇ ಒಂದು ಸಣ್ಣ ಕೆಟ್ಟ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಇವರುಗಳು ತಮಗೊದಗಿದ ಪರಿಸ್ಥಿತಿಯಿಂದಾಗಿ ಕ್ರಿಮಿನಲ್ ಗಳಾಗಿದ್ದಾರೆನ್ನುವುದು ಅವರಿಗೂ ಖಾತ್ರಿಯಾಗುತ್ತದೆ. ಆದರೆ ಅವರು ತಮ್ಮ ಕೆಲಸವನ್ನು ನಿರ್ವಹಿಸಬೇಕಾದ ಅನಿವಾರ್ಯತೆಯಿದೆ. ರಮೇಶಪ್ಪನ ಕೊಲೆಯಾದ ನಂತರ ಎಲ್ಲಿದ್ದರು? ಎಲ್ಲಿ ಆರು ತಿಂಗಳು ತಲೆ ಮರೆಸಿಕೊಂಡಿದ್ದರು? ಯಾರು ಇವರಿಗೆ ಗನ್ ನೀಡಿದರು? ಇವೇ ಪ್ರಶ್ನೆಗಳು ಮತ್ತೆ ಮತ್ತೆ ಕಾಡುತ್ತಿವೆ. ಉತ್ತರ ಮಾತ್ರ ಒಂದಿನಿತೂ ಸಿಗುತ್ತಿಲ್ಲ!
ರಾಜ್ಯದ ವಿವಿದೆಡೆ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿ ಬಂಧಿತರಾದವರ ವಿಚಾರಣೆಯನ್ನು ಮಾಡಿದರೆ ಏನಾದರೂ ಮಾಹಿತಿ ಸಿಗಬಹುದೆಂದು ಈ ಹಿಂದೆ ಒಮ್ಮೆ ವೆಪನ್ಗಳನ್ನು ನಕ್ಸಲರಿಗೆ ಪೂರೈಸುವಾಗ ಸಿಕ್ಕಿಬಿದ್ದಿದ್ದ ಆರೋಪಿಗಳನ್ನು ವಿಚಾರಣೆ ಮಾಡಲು ತನಿಖಾಧಿಕಾರಿ ರಾಜು ಮತ್ತು ಕುಮಾರನನ್ನು ಕರೆದುಕೊಂಡು ಪಕ್ಕದ ರಾಜ್ಯದ ನಗರವೊಂದಕ್ಕೆ ಹೋಗುತ್ತಾರೆ. ಅಲ್ಲಿಯ ಅಧಿಕಾರಿಗಳ ಸಹಕಾರದಿಂದ ಸಾದ್ಯವಾದುದೆಲ್ಲವನ್ನು ಪ್ರಯತ್ನಿಸುತ್ತಾರೆ. ಆದರೆ ಅಲ್ಲಿಯೂ ರಾಜು ಮತ್ತು ಕುಮಾರರನ್ನು ಯಾರು ಗುರ್ತಿಸುವುದಿಲ್ಲ.
ಆದರೆ ವೆಪನ್ಗಳನ್ನು ಸರಬರಾಜು ಮಾಡುವವರು ಮಾತ್ರ ಯಾರೊ ಕನ್ನಡ ಮಾತನಾಡುತ್ತಿದ್ದ ಒಬ್ಬನಿಗೆ ಎರಡು ರಿವಾಲ್ವರ್ ಕೊಟ್ಟಿದ್ದೆ ಎಂದು ತಮ್ಮ ಹೇಳಿಕೆ ನೀಡಿದ್ದನ್ನು ಅವರ ಮೇಲಿನ ದೋಷರೋಪಣ ಪಟ್ಟಿಯನ್ನು ನೋಡುವಾಗ ಗಮನಿಸುತ್ತಾರೆ. ಆಗ ಮತ್ತೆ ಕುತೂಹಲದಿಂದ ತನಿಖಾಧಿಕಾರಿಯವರು ಇನ್ನೊಮ್ಮೆ ಅವರನ್ನು ವಿಚಾರಣೆಮಾಡಲು ಸಿದ್ಧವಾಗುತ್ತಾರೆ. ಸಂಜೆಯ ಸಮಯ ಮತ್ತೆ ಅವರನ್ನು ವಿಚಾರಿಸುತ್ತಾರೆ. ನೋಡಿ ನೀವು ಈ ಹಿಂದೆ ನೀಡಿದ ನಿಮ್ಮದೇ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಎರಡು ಜನ ಕನ್ನಡ ಮಾತನಾಡುವವರಿಗೆ ರಿವಾಲ್ವರ್ ನೀಡಿದ್ದೆವು ಎಂದಿದೆ. ಈಗ ಇನ್ನೊಮ್ಮೆ ಇವರನ್ನು ನೋಡಿ ಹೇಳಿ. ಅವರು ಇವರೇನಾ ಇಲ್ಲವೇ ಬೇರೇನಾ? ನೀವು ಸುಳ್ಳು ಹೇಳಿದರೆ ಮತ್ತೆ ನಿಮಗೇ ಇನ್ನಷ್ಟು ತೊಂದರೆ ಎಂದು ಎಚ್ಚರಿಸುತ್ತಾರೆ. ಆಗ ರಾಜು ಮತ್ತು ಕುಮಾರನನ್ನು ನೋಡಿದ ಅವರು "ಇವರಂತೂ ಖಂಡಿತಾ ಅಲ್ಲ". ನಾವು ವೆಪನ್ಗಳನ್ನು ಅವರಿಗೆ ಆಗಾಗ್ಗೆ ನೀಡುತ್ತಿದ್ದೆವು ಎನ್ನುತ್ತಾರೆ.
ಈಗ ತನಿಖಾಧಿಕಾರಿ ಮತ್ತೆ ಕೇಳುತ್ತಾರೆ. ನೋಡಿ ಈ ರಿವಾಲ್ವರ್ ನೀವು ಸಪ್ಲೇ ಮಾಡುತ್ತಿದ್ದವುಗಳೇ ಅಲ್ಲವೇ? ಎನ್ನುತ್ತಾರೆ. ಅದನ್ನು ನೋಡಿ ಒಪ್ಪಿಕೊಂಡ ಅವರು ಇದೇ ಮಾದರಿಯ ರಿವಾಲ್ವರ್ಗಳನ್ನು ನಾವಷ್ಟೇ ಅಲ್ಲ, ನಮ್ಮಂತೆಯೇ ಪೂರೈಕೆ ಮಾಡುವವರು ಸಾಕಷ್ಟು ಜನರಿದ್ದಾರೆ. ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಈಗ ಬಂದ ದಾರಿಗೆ ಸುಂಕವಿಲ್ಲವೆಂದು ತನಿಖಾಧಿಕಾರಿ ರಾಜು ಮತ್ತು ಕುಮಾರನನ್ನು ಕರೆದುಕೊಂಡು ಶರಧೀಪುರಕ್ಕೆ ಹಿಂತಿರುಗುತ್ತಾರೆ.
ಇತ್ತ ಶರಧೀಪುರದಲ್ಲಿ ಊರಿನೆಲ್ಲೆಡೆ ಗುಸುಗುಸು ಮಾತು ಜನರಿಂದ ಜನರಿಗೆ ಹರಡುತ್ತಿದೆ. ರಾಜು ಮತ್ತು ಕುಮಾರ ಇಬ್ಬರಿಗೂ ನಕ್ಸಲರ ಸಂಪರ್ಕವಿದೆಯಂತೆ. ಇಬ್ಬರೂ ನಕ್ಸಲರ ಸಹಕಾರದಿಂದಲೇ ತನ್ನ ಸೇಡನ್ನು ತೀರಿಸಿಕೊಂಡಿದ್ದಾರೆಂದು, ಇನ್ನು ಮುಂದೆಯೂ ಇದೇ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಏನೇ ಆಗಲಿ, ಅವರಂತೂ ತಮಗಾದ ಅನ್ಯಾಯಕ್ಕೆ ಸರಿಯಾರಿ ಸೇಡು ತೀರಿಸಿಕೊಳ್ಳುತ್ತಾರೆ. ಒಟ್ಟಾರೆ ಅವರಿಗೆ ಮೋಸಮಾಡಿದವರೆಲ್ಲವರೂ ಒಂದಲ್ಲ ಒಂದು ದಿನ ಇವರಿಂದಲೇ ಹತರಾಗುವುದು ನಿಶ್ಚಿತ, ಇವರು ಹೊರಬಂದೊಡನೆ ಭ್ರಷ್ಟರ ಬೇಟೆ ಮಾಡಿಯೇ ತೀರುತ್ತಾರೆ ಎನ್ನುತ್ತಿದ್ದಾರೆ.
ಇದೇ ವಿಷಯ ಎಲ್ಲೆಡೆಯೂ ಹಬ್ಬುತ್ತಾ ಇವರು ಜನರ ಕಣ್ಣಿಗೆ ನಕ್ಸಲರಾಗೇ ಕಾಣುತ್ತಿದ್ದಾರೆ. ಕೆಲವರಿಗೆ ಇವರೇ ಹೀರೋಗಳಾಗಿ ಕಂಡರಿಗೆ ಇನ್ನುಳಿದವರಿಗೆ ಊರಿಗೆ ಏನೋ ಅಘಾತವನ್ನುಂಟು ಮಾಡಿದ್ದಾರೆ, ದಾರಿ ತಪ್ಪಿದ್ದಾರೆ ಎನ್ನುವ ಭಾವ. ಇದು ಊರಿಂದ ಊರಿಗೆ ಹಬ್ಬುತ್ತಾ ಈ ವಿಷಯ ಕೆಲವು ನಕ್ಸಲ್ ಸಂಘಟನೆಗಳಿಗೂ ತಲುಪುತ್ತದೆ. ಈ ರಾಜು ಮತ್ತು ಕುಮಾರ ಎಂದರೆ ಯಾರು ಎನ್ನುವುದು? ಅವರಿಗೂ ಖಚಿತಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹಲವು ಸಂಘಟನೆಯವರು ಮಾರುವೇಷದಲ್ಲಿ ಶರಧೀಪುರಕ್ಕೆ ಬಂದು ಇವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಇನ್ನೊಂದೆಡೆ ವಿಷಯ ಅರಿತ ಭೂ ಮಾಫಿಯಾದ ಮರಿ ಡಾನ್ ಮಂಜಪ್ಪ ಭಯದಲ್ಲೇ ಜೀವನ ಸಾಗಿಸುತ್ತಿದ್ದಾನೆ. ಏನೋ ಎಂತೋ? ಒಂದು ದಿನ ರಾಜು ಮತ್ತು ಕುಮಾರ ನನ್ನನ್ನು ಮಾತ್ರ ಖಂಡಿತವಾಗಿಯೂ ಬಿಡುವುದಿಲ್ಲ. ಇವರು ನಕ್ಸಲ್ ಸಂಪರ್ಕವಿದೆ ಎನ್ನುವ ಮಾತಿನಿಂದ ಬೆದರಿ ತರಗುಟ್ಟಿಹೋಗಿದ್ದಾನೆ. ಈಗ ಏನೇ ಆಗಲಿ ಮೊದಲು ಇವರನ್ನು ಮುಗಿಸಲೇಬೇಕು. ಇಲ್ಲದಿದ್ದರೆ ತನ್ನ ಸಾವು ಖಚಿತವೆಂದು ನಿರ್ಧರಿಸಿದ್ದಾನೆ. ತನ್ನ ಸಹವರ್ತಿಗಳ ಸಹಕಾರದಿಂದ ಇವರನ್ನು ಮುಗಿಸಲು ಮುಂಬೈ ಭೂಗತ ಲೋಕದ ಶಾರ್ಪ್ ಶೂಟರ್ ಗಳಿಗೆ ಡೀಲ್ ನೀಡುತ್ತಾನೆ. ಎಷ್ಟೇ ಆಗಲಿ ಭೂ ಮಾಫಿಯಾದವರಿಗೆ ಇದೆಲ್ಲಾ ಸಹಜವೇ. ಅವರಿಗೆ ಅನ್ಯರ ಆಸ್ತಿ ಕಬಳಿಸಲು ಜನರನ್ನು ಕೊಲ್ಲಿಸುವುದು, ಬೆದರಿಸುವುದು ಅವರ ಪರಮ ಉದ್ಯೋಗ. ಇದಕ್ಕೆಲ್ಲಾ ಭೂಗತ ಲೋಕದ ನಂಟು, ಸಹಕಾರ ಇದ್ದೇ ಇರುತ್ತದೆ.
ಈಗ ಮಂಜಪ್ಪ ಅಪಾರ ಮೊತ್ತದ ಹಣಕ್ಕೆ ರಾಜು ಮತ್ತು ಕುಮಾರನನ್ನು ಮುಗಿಸಲು ಡೀಲ್ ನೀಡಿದ್ದಾನೆ. ಆದಷ್ಟು ಬೇಗ ಅವರು ಸಾಯಲಿ, ಆಗ ತಾನು ಹಾಯಾಗಿ ಬದುಕಬಹುದು. ಇಲ್ಲದೇ ಹೋದಲ್ಲಿ ತಾನು ದಿನವೂ ಭಯದಲ್ಲಿ ಕಾಲ ಕಳೆಯಬೇಕು. "ಒಂದು ವೇಳೆ ಈಗ ಜೈಲಿನಲ್ಲಿರುವ ಸಹೋದರರು ಹೊರಬಂದರೆ ಇಲ್ಲವೇ ಅವರ ಸಂಘಟನೆಯವರು ನನ್ನ ಮೇಲೆ ಮುಗಿಬಿದ್ದು ಕೊಂದರೆ" ಹೀಗೆ ದಿನ ಎಣಿಸುವುದೇ ಈಗ ಮಂಜಪ್ಪನ ಕೆಲಸವಾಗಿದೆ.
ಶೂಟೌಟ್ನಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ನಗರಸಭೆಯ ಒಬ್ಬ ಅಧಿಕಾರಿ ಮತ್ತು ಶ್ರೀಕರ ಚಿಕಿತ್ಸೆ ಫಲಕಾರಿಯಾಗಿ ಸಾವನ್ನಪ್ಪುತ್ತಾರೆ. ಈ ವಿಷಯದಿಂದ ಇನ್ನಷ್ಟು ಜನ ಭ್ರಷ್ಟರು ಭಯ ಭೀತರಾಗಿ ನಡುಗುತ್ತಿದ್ದಾರೆ. ಇತ್ತ ಮಂಜಪ್ಪ ಹಾಕಿದ ಪ್ಲಾನ್ ಸಕ್ಸಸ್ ಆಗಲಿ ಎಂದು ಎಲ್ಲರೂ ಬೇಡುತ್ತಾ ರಾಜು ಮತ್ತು ಕುಮಾರನನ್ನು ಕೊಲ್ಲಲು ಡೀಲ್ ನೀಡಿ ಕುಳಿತಿದ್ದಾರೆ.
ಕೆಲವು ದಿನಗಳ ನಂತರ ಮತ್ತೆ ರಾಜು ಮತ್ತು ಕುಮಾರನನ್ನು ವಿಚಾರಣೆಗೆ ಕೋರ್ಟ್ಗೆ ಪೋಲಿಸರು ಕರೆತರುತ್ತಿದ್ದಾರೆನ್ನುವುದು ಮಂಜಪ್ಪ ತಿಳಿದುಕೊಳ್ಳುತ್ತಾನೆ. ಆ ದಿನವನ್ನು ತನ್ನ ಸಹವರ್ತಿಗೆ ಹೇಳುತ್ತಾನೆ. ಆ ದಿನವೇ ಅವರನ್ನು ಪೋಲಿಸರು ಹೊರಗಡೆ ಕರೆತಂದಾಗ ಅವರ ಮೇಲ್ ಫೈರಿಂಗ್ ಮಾಡಲು ಭೂಗತ ಪಾತಕಿಗಳು ನಿರ್ಧರಿಸಿ ಹೊಂಚು ಹಾಕುತ್ತಾರೆ. ಆಗಲೇ ಶರಧೀಪುರಕ್ಕೆ ಬಂದು ತಾವು ಕಾರ್ಯಾಚರಣೆ ನಡೆಸಬೇಕಾದ ಪ್ರದೇಶವನ್ನು ಗಮನಿಸಿದ್ದಾರೆ. ಜೈಲಿನಿಂದ ಕೋರ್ಟ್ ಎಷ್ಟು ದೂರದಲ್ಲಿದೆ? ಬರುವಾಗ ಪೋಲಿಸರು ಅವರನ್ನು ಹೇಗೆ ಕರೆದುಕೊಂಡು ಬರುತ್ತಾರೆ? ಇವರ ಮೇಲೆ ದಾರಿಯಲ್ಲಿ ಅಟ್ಯಾಕ್ ಮಾಡಬೇಕೋ? ಇಲ್ಲವೇ ಇವರನ್ನು ಪೋಲಿಸ್ ವಾಹನದಿಂದ ಇಳಿಸುವಾಗ ಫೈರಿಂಗ್ ಮಾಡಬೇಕೋ? ಎಲ್ಲವನ್ನು ಒಂದೆಡೆ ಗಮನಿಸಿದ್ದಾರೆ. ಅಂತೂ ಇಂತಹ ಪ್ರಕರಣಗಳು ಅವರಿಗೆ ಹೊಸತೇನು ಅಲ್ಲ. ಒಂದಲ್ಲ ಒಂದು ರೀತಿಯಲ್ಲಿ ರಾಜು ಮತ್ತು ಕುಮಾರನನ್ನು ಕೊಲ್ಲಲು ಅಣಿಯಾಗಿದ್ದಾರೆ.
ಅಂದುಕೊಂಡ ದಿನವೇ ಆಯಾಕಟ್ಟಿನ ಜಾಗದಲ್ಲಿ ಶಾರ್ಪ್ ಶೂಟರ್ಗಳು ಬಂದು ಜಮಾವಣೆಯಾಗಿದ್ದಾರೆ. ಇತ್ತ ಪೋಲಿಸರು ರಾಜು ಮತ್ತು ಕುಮಾರನನ್ನು ವ್ಯಾನ್ನಲ್ಲಿ ಕೂರಿಸಿಕೊಂಡು ಹೊರಡುತ್ತಾರೆ. ಈಗ ಅವರೇ ಮಾತನಾಡಿಕೊಳ್ಳುತ್ತಾರೆ. ಈಗ ರಸ್ತೆ ಮಧ್ಯೆ ವ್ಯಾನ್ ಅಡ್ಡಗಟ್ಟುವುದು ಬೇಡ. ಪೋಲಿಸರ ಬಳಿಯೂ ಸಾಕಷ್ಟು ಶಸ್ತ್ರಾಸ್ತ್ರಗಳಿವೆ. ಇವರನ್ನು ನ್ಯಾಯಾಲಯದ ಮುಂದೆ ವ್ಯಾನ್ನಿಂದ ಕೆಳಗಿಳಿಸುವಾಗ ಫೈರಿಂಗ್ ಮಾಡುವುದು ಉತ್ತಮವೆಂದು ನಿರ್ಧರಿಸುತ್ತಾರೆ. ಅಂತೂ ವ್ಯಾನ್ ಕೋರ್ಟ್ ನತ್ತ ಬಂದು ನಿಲ್ಲುತ್ತದೆ. ಪೋಲಿಸರು ರಾಜು ಮತ್ತು ಕುಮಾರನನ್ನು ಕೆಳಗಿಳಿಸುತ್ತಿದ್ದಂತೆ ಅತ್ತಕಡೆಯಿಂದ ಮರೆಯಲ್ಲಿ ಕುಳಿತು ಶಾರ್ಪ್ ಶೂಟರ್ಗಳು ಫೈರ್ ಮಾಡುತ್ತಾ ಗುಂಡಿನ ಮಳೆಗರೆಯ್ಯುತ್ತಾರೆ. ಈಗ ಗುಂಡಿನ ಶಬ್ಧ ಮತ್ತು ಹೊಗೆಗೆ ಜನರು ಬೆದರಿ ಚೆಲ್ಲಾಪಿಲ್ಲಿಯಾಗಿ ಓಡುತ್ತಿದ್ದಾರೆ. ಪೋಲೀಸರು ಏನೆಂದು ಗಮನಿಸಲು ಆಗುತ್ತಿಲ್ಲ. ಕೂಡಲೇ ರಾಜು ಮತ್ತು ಕುಮಾರ ವ್ಯಾನ್ ಒಳಗೇ ಓಡಿ ಹೋಗಿ ಮರೆಯಾಗುತ್ತಾರೆ. ಶೂಟರ್ಗಳ ಗುರಿತಪ್ಪಿತು. ಇತ್ತ ಪೋಲಿಸರು ಫೈರಿಂಗ್ ಮಾಡಲು ಶುರುಮಾಡಿದರು. ಆದರೆ ಇನ್ನೊಂದು ಬದಿಯಿಂದ ಮುನ್ನುಗ್ಗಿದ ಎರಡು ಜನ ಶಾರ್ಪ್ ಶೂಟರ್ಗಳು ಪೋಲಿಸರ ಗಮನತಪ್ಪಿಸಿ ನೇರವಾಗಿ ವ್ಯಾನ್ ಒಳಗಡೆಯೇ ಫೈರಿಂಗ್ ಮಾಡಿದರು. ಆಗ ವ್ಯಾನ್ ಎದುರು ಹೊರಗಡೆಯಿದ್ದ ಒಬ್ಬ ಪೋಲಿಸ್ ಪೇದೆ ಗುಂಡು ತಗುಲಿ ಸ್ಥಳದಲ್ಲೇ ಕುಸಿದು ಬಿದ್ದರು. ಒಳಗಡೆ ತೂರಿಹೋದ ಗುಂಡುಗಳು ಯಾರಿಗೂ ತಗುಲಲಿಲ್ಲ. ಇನ್ನೊಂದೆಡೆ ವ್ಯಾನ್ ಬದಿಯಲ್ಲಿ ಕುಳಿತಿದ್ದ ಪೋಲಿಸರು ಸಹಾ ಒಂದೇ ಸಮನೇ ಫೈರ್ ಮಾಡುತ್ತಿದ್ದರು. ಇನ್ನೊಂದೆಡೆ ಈ ವ್ಯಾನ್ಗೆ ಎಸ್ಕಾರ್ಟ್ ಆಗಿ ಕೋರ್ಟ್ಗೆ ಬರುತ್ತಿದ್ದ ಸರ್ಕಲ್ ಇನ್ಸಪೆಕ್ಟರ್ ಮತ್ತವರ ತಂಡವೂ ಸಹಾ ಕಾರ್ಯ ಪ್ರವೃತ್ತರಾಗುತ್ತಾರೆ. ಅಂತೂ ಪೋಲಿಸರು ಮತ್ತು ಭೂಗತ ಪಾತಕಿಗಳ ನಡುವಣ ಫೈರಿಂಗ್ನಲ್ಲಿ ಒಬ್ಬ ಪಾತಕಿ ಗಾಯಗೊಂಡು ನೆಲಕ್ಕೆ ಉರುಳುತ್ತಾನೆ. ಉಳಿದವರು ಓಡಿ ಹೋಗುತ್ತಾರೆ. ಕೂಡಲೇ ಉಳಿದ ಪೋಲಿಸರು ಕಾರ್ಯಾಚರಣೆಗಿಳಿದು ಅವರನ್ನು ಬಂಧಿಸಲು ಇನ್ನೊಂದೆಡೆ ಅಣಿಯಾಗಿ ಊರಿನಿಂದ ಹೊರಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ಕಾಯುತ್ತಿದ್ದಾರೆ.
ಇತ್ತ ಸ್ಥಳವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಪೋಲೀಸರು ಆ ಗಾಯಗೊಂಡ ಪಾತಕಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆತನ ಮುಖದ ಮೇಲಿನ ಬಟ್ಟೆಯನ್ನು ಸರಿಸಿ ನೋಡುತ್ತಾರೆ. ಗುರುತು ಪತ್ತೆಯಿಲ್ಲ. ಕೂಡಲೇ ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಈಗ ಊರಿನಲ್ಲಿ ಇನ್ನಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗುತ್ತದೆ. ವೈರ್ಲೆಸ್ ಮೂಲಕ ಎಲ್ಲೆಡೆ ಸುದ್ಧಿ ತಲುಪಿಸಿದ ಶರಧೀಪುರ ಠಾಣೆಯ ಪೋಲಿಸರು ಆಯಾಕಟ್ಟಿನ ಜಾಗದಲ್ಲಿ ಶೂಟೌಟ್ ನಡೆಸಿದವರನ್ನು ಬಂಧಿಸಲು ಅಣಿಯಾಗಿ ತಡಕಾಡುತ್ತಿದ್ದಾರೆ. ಆದರೆ ಎಷ್ಟೇ ತಡಕಾಡಿ ಪ್ರಯತ್ನಿಸಿದರೂ ಒಬ್ಬರನ್ನು ಹಿಡಿಯಲಾಗಲಿಲ್ಲ. ಈಗ ಗಾಯಗೊಂಡು ಸೆರೆಸಿಕ್ಕವನಿಂದಲೇ ಎಲ್ಲ ವಿಷಯವನ್ನು ತಿಳಿದುಕೊಳ್ಳಬೇಕು.
ಈ ವಿಷಯ ತನಿಖಾಧಿಕಾರಿಯವರಿಗೂ ತಲುಪಿ ತಮ್ಮ ಅನುಭವದ ಆಧಾರದಲ್ಲಿ ಕೂಡಲೇ ಅವರು ಮಾರ್ಗದರ್ಶನ ನೀಡುತ್ತಾರೆ. ಆಸ್ಪತ್ರೆಯಲ್ಲಿ ಗಾಯಗೊಂಡು ಸೆರೆಸಿಕ್ಕವನಿಗೆ ವಿಚಾರಿಸುತ್ತಾರೆ. ಆತನೂ ಎಷ್ಟೇ ಪ್ರಯತ್ನಿಸಿದರೂ ಏನು ನುಡಿಯುವುದಿಲ್ಲ. ಆದರೆ ಆತನನ್ನು ತಪಾಸಣೆಮಾಡಿದಾಗ ಸಿಕ್ಕ ದಾಖಲೆ ಮತ್ತು ಮೊಬೈಲ್ ಕರೆಗಳಿಂದ ಎಲ್ಲವನ್ನು ತಪಾಸಣೆಗೈಯುತ್ತಿದ್ದಾರೆ. ಈತನ ಮೊಬೈಲ್ ಬಂದ ಕಾಲ್ಗಳು ಬಹುತೇಕ ಮುಂಬೈಯಿಂದಲೇ ಬಂದಿವೆ. ಇನ್ನುಳಿದ ಮೊಬೈಲ್ಗಳಿಗೆ ಬಂದ ಕರೆಗಳ ಸಂಖ್ಯೆಗಳು ಸ್ವಿಚ್ ಆಫ್ ಆಗಿವೆ. ಕೂಡಲೇ ಮುಂಬೈ ಭೂಗತ ಜಗದ ನಂಟು ಇರುವುದು ಖಾತ್ರಿಯಗುತ್ತಿದ್ದಂತೆ ಅಲ್ಲಿಯ ಪೋಲಿಸರ ಸಹಕಾರದಿಂದ ಶೂಟೌಟ್ನಲ್ಲಿ ಭಾಗಿಯಾದವರ ಸೆರೆಹಿಡಿಯಲು ಹವಣಿಸುತ್ತಿದ್ದಾರೆ.
ಇನ್ನೂ ಕೆಲವು ದಿನಗಳ ನಂತರ ತನಿಖೆಯಲ್ಲಿ ಪೋಲಿಸರು ಒಂದಂತೂ ಖಚಿತಪಡಿಸಿಕೊಳ್ಳುತ್ತಾರೆ. ಇದು ರಾಜು ಮತ್ತು ಕುಮಾರನನ್ನು ಕೊಲ್ಲಲು ಯಾರೋ ಶರಧೀಪುರದವರೇ ಈ ಕೆಲಸಕ್ಕೆ ಕೈಹಾಕಿದ್ದಾರೆನ್ನುವುದು ನಿಜ ಎನ್ನುವುದು ಕಂಡುಕೊಳ್ಳುತ್ತಾರೆ. ಈಗ ರಾಜು ಮತ್ತು ಕುಮಾರನನ್ನು ವಿಚಾರಣೆಗೊಳಪಡಿಸುತ್ತಾರೆ. ಅವರು ಯಾರ ಮೇಲು ಅನುಮಾನ ವ್ಯಕ್ತಪಡಿಸದೇ ಮೌನಿಯಾಗುತ್ತಾರೆ. ಕಾರಣ ತಾವು ಯಾರ ಮೇಲೆ ಅನುಮಾನ ವ್ಯಕ್ತಪಡಿಸುತ್ತೇವೋ ಅವರೇ ತಮ್ಮ ವೈರಿಗಳು ಎನ್ನುವುದು ಪೋಲಿಸರಿಗೂ ಗೊತ್ತಾಗಬಾರದು ಎನ್ನುವುದು ಅವರ ನಂಬಿಕೆ.
ಭಾಗ-12
ಕೆಲ ದಿನಗಳ ನಂತರ ಸೆರೆಸಿಕ್ಕ ಶಾರ್ಪ್ ಶೂಟರ್ ಆಸ್ಪತ್ರೆಯಲ್ಲಿ ಗುಣಮುಖನಾಗುತ್ತಾನೆ. ಅವನನ್ನು ತಮ್ಮ ವಶಕ್ಕೆ ಪಡೆದು ಪೋಲಿಸರು ವಿಚಾರಣೆ ಕೈಗೊಳ್ಳುತ್ತಾರೆ. ಆತ ಎಷ್ಟೇ ಪ್ರಯತ್ನಿಸಿದರೂ ಉತ್ತರಿಸದೇ ಪೋಲಿಸರಿಗೆ ಅಸಹಾಕಾರ ನೀಡುತ್ತಿದ್ದಾನೆ. ಆತನಿಗೆ ಪ್ರಶ್ನಿಸಿದಾಗಲೆಲ್ಲಾ ಆತ ತನ್ನ ಜೀವವೇ ಹೋದರೂ ಸರಿ ಏನನ್ನು ನಿಮಗೆ ಹೇಳುವುದಿಲ್ಲವೆಂದು ನಿರ್ಭಯವಾಗಿ ನುಡಿದು ಬಿಟ್ಟಿದ್ದಾನೆ. ಇದರಿಂದ ಕೆರಳಿದ ತನಿಖಾಧಿಕಾರಿ ಕೆಂಡಾಮಂಡಲವಾಗಿ ಸಿಡಿದೇಳುತ್ತಾರೆ. ಎಷ್ಟೇ ದಿನಗಳು ಕಳೆದರೂ ಒಂದು ಸಣ್ಣ ಕುರುಹು ಈ ಪ್ರಕರಣದಲ್ಲಿ ಪ್ರಗತಿ ಸಾಧಿಸದೇ ಇದ್ದುದ್ದು ಮುಜುಗರದ ಜೊತೆಗೆ ಅವರಿಗೆ ಬೇಸರವೂ ಕಾಡುತ್ತಿದೆ. ಅಂತೂ ತಾವು ಯೋಜಿಸಿದಂತೆ ಆತನನ್ನು ಊರಿನ ಹೊರ ವಲಯವೊಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಆತನಿಗೆ ಹೇಳುತ್ತಾರೆ. "ನೋಡು, ನಿನಗಿದು ಕಡೆಯ ಅವಕಾಶ. ಈಗ ನೀನು ಸತ್ಯ ಹೇಳಿದರೆ ಉಳಿಯುತ್ತೀಯ. ಇಲ್ಲದೇ ಹೋದರೆ ಎನ್ಕೌಂಟರ್ ಹೆಸರಲ್ಲಿ ಕೊಲೆಯಾಗುತ್ತೀಯ, ಏನು ಮಾಡುತ್ತೀಯ?" ಎಂದು ಗದರುತ್ತಾರೆ. ಆಗ ಆತ "ನಾನು ಸತ್ತರೂ ಸರಿ ಏನು ಹೇಳುವುದಿಲ್ಲ" ಎನ್ನುತ್ತಾನೆ.
ಆಗ ಕುಪಿತಗೊಂಡು ತನಿಖಾಧಿಕಾರಿಯವರು ಸರ್ಕಲ್ ಇನ್ಸ್ಪೆಕ್ಟರ್ಗೆ ಹೇಳುತ್ತಾರೆ. "ಇನ್ನು ಇವನನ್ನು ನಾವು ಇಟ್ಟುಕೊಂಡು ಏನು ಉಪಯೋಗ? ಇವನನ್ನು ಈಗಲೇ ಶೂಟ್ ಮಾಡಿ ಕೊಲ್ಲೋಣ". ಈತ ತಪ್ಪಿಸಿಕೊಳ್ಳುವುದಕ್ಕಾಗಿ ನಮ್ಮ ಮೇಲೆ ಹಲ್ಲೆಗೆ ಮುಂದಾದ. ವಿಧಿಯಿಲ್ಲದೇ ಆತ್ಮರಕ್ಷಣೆಗೆ ಫೈರ್ ಮಾಡಿದ್ದು ಎಂದರಾಯ್ತು ಎಂದು ಸರ್ಕಲ್ ಇನ್ಸ್ ಪೆಕ್ಟರ್ಗೆ ಹೇಳುತ್ತಾರೆ.
ಇವರ ಸಂಭಾಷಣೆಯನ್ನು ಆಲಿಸುತ್ತಾ ಆತ ಕೊಂಚ ಬೆದರಿದಂತೆ ಕಂಡ. ಕೂಡಲೇ ತನಿಖಾಧಿಕಾರಿ ತಮ್ಮ ರಿವಾಲ್ವರ್ನಿಂದ ಇವನತ್ತ ಗುರಿಯಿಟ್ಟು ಫೈರ್ ಮಾಡಿದರು. ರಿವಾಲ್ವರ್ನಿಂದ ತೂರಿಹೋದ ಗುಂಡು ಆತನ ಪಕ್ಕದಲ್ಲೇ ಮಿಂಚಿನಂತೆ ಹಾದು ಹೋಯ್ತು. ಛೇ, ಗುರಿ ತಪ್ಪಿತು! ಈ ಬಾರಿ ನಿನಗೆ ಖಂಡಿತಾ ಉಳಿಗಾಲವಿಲ್ಲ ಎನ್ನುತ್ತಾ ಮತ್ತೆ ಆತನೆಡೆಗೆ ಗುರಿಯಿಟ್ಟು ಫೈರ್ ಮಾಡಲು ತಯಾರಾಗಿದ್ದಾರೆ. ಈಗ ಜೀವ ಭಯದಲ್ಲಿ ಬೆದರಿದ ಆತ ಜೋರಾಗಿ ಕಿರುಚಿಕೊಂಡು "ತಪ್ಪಾಯ್ತು ಎಲ್ಲವನ್ನೂ ಹೇಳುತ್ತೇನೆ, ನನಗೇನು ಮಾಡಬೇಡಿ" ಎಂದು ಪ್ರಾಣ ಭಿಕ್ಷೆಗಾಗಿ ರೋಧಿಸಲಾರಂಭಿಸಿದ. ಇದೇ ಬಯಸಿದ್ದ ತನಿಖಾಧಿಕಾರಿ ಅಂತೂ ತಾವಂದುಕೊಂಡ ಉಪಾಯದ ಮಾರ್ಗದಲ್ಲಿ ಗೆಲುವು ಸಾಧಿಸಿದರು.
ಈಗ ಆತನನ್ನು ಒಂದೆಡೆ ಕೂರಿಸಿಕೊಂಡು ತನಿಖಾಧಿಕಾರಿ ಆತನೆಡೆಗೆ ರಿವಾಲ್ವರ್ ತಿರುಗಿಸುತ್ತಾ "ಈಗ ಹೇಳು, ನೀನು ಎಲ್ಲಿಯವನು? ಎಲ್ಲಿಂದ ಬಂದೆ? ಯಾವುದಕ್ಕಾಗಿ ಇಲ್ಲಿ ಗುಂಡು ಹಾರಿಸಿದೆ?" ಎಂದು ಪ್ರಶ್ನಿಸಿದರು. ಆತ ನಡುಗುತ್ತಲೇ ಉತ್ತರಿಸಿದ. ತಾನು ಮುಂಬೈ ಭೂಗತ ಲೋಕದ ಡಾನ್ ಡಿ ಕಂಪನಿಯ ಶಾರ್ಪ್ ಶೂಟರ್. ನಾನು ರಾಜು ಮತ್ತು ಕುಮಾರನನ್ನು ಕೊಲ್ಲುವುದಕ್ಕಾಗಿ ನನ್ನ ಸಹಚರರೊಂದಿಗೆ ಬಂದಿದ್ದೆ ಎಂದ.
ತನಿಖಾಧಿಕಾರಿ ಡಿ ಕಂಪನಿಯ ಹೆಸರು ಕೇಳುತ್ತಿದ್ದಂತೆ ಒಮ್ಮೆಲೆ ಆಶ್ಚರ್ಯ ಚಕಿತರಾಗುತ್ತಾರೆ. ಆಯ್ತು ಮುಂದೆ ಹೇಳು, ನೀನು ಎಷ್ಟು ಜನರೊಂದಿಗೆ ಇಲ್ಲಿಗೆ ಬಂದಿದ್ದೆ? ನಿನ್ನನ್ನು ಇಲ್ಲಿಗೆ ಕರೆಸಿಕೊಂಡವರು ಯಾರು? ಎಂದು ಪ್ರಶ್ನಿಸುತ್ತಾರೆ. ಆತ ಉತ್ತರಿಸುತ್ತಾನೆ. ನಾವು ಒಟ್ಟು ಐದು ಜನರು ಬಂದಿದ್ದೆವು. ನಮ್ಮನ್ನು ಇಲ್ಲಿಗೆ ಕಳುಹಿಸಿದ್ದು ನಮ್ಮ ಕಂಪನಿಯವರು. ಅವರು ಒಪ್ಪಿಸಿದ ಕೆಲಸ ನಾವು ಮಾಡಬೇಕಷ್ಟೇ. ಯಾರು ಕಂಪನಿಗೆ ಡೀಲ್ ನೀಡಿದ್ದಾರೆನ್ನುವುದು ನಮಗೆ ಗೊತ್ತಿರುವುದಿಲ್ಲ. ರಾಜು ಮತ್ತು ಕುಮಾರನ ಫೋಟೋವನ್ನು ನಮಗೆ ಒಂದು ತಿಂಗಳು ಮೊದಲೇ ನೀಡಿದ್ದರು. ನಾವು ಶೂಟೌಟ್ ನಡೆಸುವುದಕ್ಕಿಂದ ಹದಿನೈದು ದಿವಸ ಮೊದಲೆ ಊರಿಗೆ ಬಂದು ಎಲ್ಲವನ್ನು ನೋಡಿಕೊಂಡು ಹೋಗಿದ್ದೆವು ಎಂದ.
ಆಗ ನೀನು ಶರಧೀಪುರದಲ್ಲಿ ಯಾರನ್ನು ಭೇಟಿ ಮಾಡಿದ್ದೆ? ನಿನಗೆ ಯಾರು ಆಶ್ರಯ ನೀಡಿದ್ದರು? ಎಂದು ತನಿಖಾಧಿಕಾರಿ ಪ್ರಶ್ನಿಸುತ್ತಾರೆ. ಆಗ ಆತ ನುಡಿಯುತ್ತಾನೆ. ನಾವು ಎಲ್ಲಿಯೂ ಉಳಿದುಕೊಳ್ಳಲಿಲ್ಲ. ಯಾರನ್ನೂ ಭೇಟಿ ಮಾಡಲಿಲ್ಲ. ಪಕ್ಕದ ಊರಿನ ಲಾಡ್ಜ್ನಲ್ಲಿ ಉಳಿದುಕೊಂಡು ರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಊರಿನ ರಸ್ತೆಗಳು ಖಾಲಿ ಇರುವಾಗ ನಮ್ಮ ವಾಹನದಲ್ಲಿ ಸಾಗುತ್ತಾ ಶರಧೀಪುರದ ಎಲ್ಲಾ ಮಾರ್ಗಗಳನ್ನು ಪರಿಚಯಮಾಡಿಕೊಂಡೆವು. ನಂತರ ಹಗಲು ವೇಳೆಯಲ್ಲಿ ಯಾವುದು ಜನಜಂಗುಳಿಯಿಂದ ಕೂಡಿದ ಪ್ರದೇಶ, ಯಾವುದು ಜನರು ವಿರಳವಾಗಿರುವ ರಸ್ತೆ, ಯಾವುದು ಹಲ್ಲೆಗೆ ಉತ್ತಮ ಸ್ಥಳ ಎನ್ನುವುದನ್ನು ಮನಗಂಡೆವು ಎಂದು ಉತ್ತರಿಸುತ್ತಾನೆ.
ಈಗ ಆತನ ಮೊಬೈಲ್ ಹಿಡಿದುಕೊಂಡು ನೀನು ಯಾರಿಗೆ ಕರೆಮಾಡಿದ್ದೆ? ಇದು ಯಾರ ನಂಬರ್? ನೀನು ಶೂಟೌಟ್ ನಡೆಸಿದ ದಿನ ಒಂದೇ ನಂಬರ್ನಿಂದ ಹತ್ತಾರು ಕಾಲ್ ಬಂದಿದೆ. ಯಾರು ಎತ್ತ ಎಂದು ವಿಚಾರಿಸುತ್ತಾರೆ. ಆಗ ಆತ ಉತ್ತರಿಸುತ್ತಾನೆ. ಅವರು ನಮ್ಮ ಟೀಮ್ ಲೀಡರ್. ಆತನು ಅದೇ ದಿನ ಕೆಲಸ ಮುಗಿಸಬೇಕು. ಯಾವುದೇ ಕಾರಣಕ್ಕೂ ಗುರಿ ತಪ್ಪಬಾರದೆಂದು ಪದೇ ಪದೇ ತಾಕಿತು ಮಾಡಿದ್ದನೆಂದು ನುಡಿದ.
ಆ ದಿನವೇ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಅವರನ್ನು ನೀನು ಈಗ ಸಂಪರ್ಕಿಸಬೇಕೆಂದರೆ ಏನು ಮಾಡುವೆ? ಎಂದು ಪ್ರಶ್ನಿಸುತ್ತಾರೆ. ಆಗ ಆತ ಉತ್ತರಿಸುತ್ತಾನೆ. ನಾವು ಒಂದೊಂದು ಕೆಲಸಕ್ಕೆ ಎಲ್ಲರೂ ಹೊಸ ಸಿಮ್ಗಳನ್ನು ಬಳಸುತ್ತೇವೆ. ಎಲ್ಲವನ್ನು ಕಂಪನಿಯೆ ಪೂರೈಸುತ್ತದೆ. ಕೆಲಸ ಮುಗಿದ ನಂತರ ಫೋನ್ ಮತ್ತು ಸಿಮ್ಕಾರ್ಡ್ ಎರಡನ್ನು ನಾಶ ಮಾಡುತ್ತೇವೆ. ಇದು ನಮ್ಮ ಕಂಪನಿಯ ಆದೇಶ. ಹಾಗಾಗಿ ಮತ್ತೆ ಅದೇ ಮೊಬೈಲ್ನಿಂದ ಸಂಪರ್ಕಿಸಲು ಸಾಧ್ಯವಿಲ್ಲ. ಅವನನ್ನು ಸಂಪರ್ಕಿಸಲು ನಾನೇ ಮುಂಬೈಗೆ ಹೋಗಬೇಕಷ್ಟೆ ಎನ್ನುತ್ತಾನೆ.
ಈಗ ತನಿಖಾಧಿಕಾರಿ ಆತನನ್ನು ಕರೆದುಕೊಂಡು ಮುಂಬೈಗೆ ಹೊರಡಲು ಸಿದ್ಧವಾಗುತ್ತಾರೆ. ಅಲ್ಲಿಯ ಪೋಲಿಸರ ಗಮನಕ್ಕೆ ಇದ್ದ ವಿಚಾರವನ್ನು ಮೊದಲೆ ತಿಳಿಸಿ ಆತನನ್ನು ಕರೆದುಕೊಂಡು ಮುಂಬೈ ತಲುಪುತ್ತಾರೆ. ಮುಂಬೈ ಪೋಲಿಸರಿಗೂ ಅನೇಕ ಪ್ರಕರಣಗಳಲ್ಲಿ ಬೇಕಾಗಿದ್ದ ಈತ ಕೊನೆಗು ಸೆರೆ ಸಿಕ್ಕಿದ್ದು ಅವರಿಗು ನೆಮ್ಮದಿಯ ನಿಟ್ಟುಸಿರು.
ಈಗ ಮುಂಬೈ ಪೋಲಿಸರೇ ಆತ ಹೇಳಿದ ಮಾಹಿತಿಗಳ ಆಧಾರದಲ್ಲಿ ವ್ಯೂಹವನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳುತ್ತಾರೆ. ಪೋಲಿಸರು ಕಾರ್ಯಾಚರಣೆ ನಡೆಸಿ ಭೂಗತ ಪಾತಕಿಗಳನ್ನು ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ಅವರ ನಡುವಣ ಪೈರಿಂಗ್ನಲ್ಲಿ ಎರಡು ಜನ ಪಾತಕಿಗಳು ಸಾಯುತ್ತಾರೆ. ಕೊನೆಗೆ ಎರಡು ಜನರನ್ನು ವಶಕ್ಕೆ ಪಡೆಯುತ್ತಾರೆ. ಪ್ರಕರಣ ಪ್ರಮುಖ ಆರೋಪಿಯು ಇದರಲ್ಲಿ ಸೆರೆ ಸಿಗುತ್ತಾನೆ. ಈಗ ಆತನಿಗೆ ಕಾರ್ಯಾಚರಣೆ ಮುಗಿಸಿ ಕರೆತರುವ ಮಾರ್ಗ ಮಧ್ಯೆಯಲ್ಲಿಯೇ ಶರಧೀಪುರದಲ್ಲಿ ನಡೆಸಿದ ಶೂಟೌಟ್ ಬಗ್ಗೆ ಮಾಹಿತಿ ಕೇಳುತ್ತಾರೆ. ಆತ ತನಗೇನು ಸಂಬಂಧವಿಲ್ಲವೆನ್ನುತ್ತಾನೆ. ಆಗ ಪೋಲೀಸರು "ನಿಜ ಹೇಳದೇ ಹೋದರೆ ಉಳಿದವರಂತೆ ಇಲ್ಲಿಯೇ ನಿನ್ನನ್ನು ಮುಗಿಸಿ ಮುಂದಕ್ಕೆ ಹೋಗುತ್ತೇವೆ" ಎನ್ನುತ್ತಾರೆ. ಆಗ ನಿಜ ಹೇಳಿದರೆ ಕೊನೆಗೆ ಕೋರ್ಟ್ನಲ್ಲಿ ತನ್ನ ವಿಚಾರಣೆಗಾದರೂ ತೋರಿಸಲಿಕ್ಕೆ ಬದುಕುಳಿಸುತ್ತಾರೆಂದು ಆತ ನಿಜ ಹೇಳುವುದಾಗಿ ತನಗೆ ಡೀಲ್ ಒಪ್ಪಿಸಿದವರ ವಿವರ ನೀಡುವುದಾಗಿ ಹೇಳುತ್ತಾನೆ.
ಕೊನೆಗೆ ಆತ ಹೇಳಿದ ಜಾಗಕ್ಕೆ ಪೋಲೀಸರು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಆತ ತನಗೆ ಡೀಲ್ ಒಪ್ಪಿಸಿದವರು ವಿವರ ನೀಡುತ್ತಾ ತನ್ನ ಖಾತೆಗೆ 50 ಲಕ್ಷ ಜಮೆ ನೀಡಿದ ಹಣದ ಮಾಹಿತಿಯನ್ನು ಬಹಿರಂಗಪಡಿಸುತ್ತಾನೆ. ಅದು ಶರಧಿಪುರದ ಬ್ಯಾಂಕ್ನಿಂದಲೆ ಜಮೆಯಾದ ಹಣವೆನ್ನುವುದು ಖಾತ್ರಿಯಾಗುತ್ತದೆ. ಆ ಮೊತ್ತವನ್ನು ಬ್ಯಾಂಕ್ನಲ್ಲಿ ಆ ದಿನ ಯಾರು ಜಮೆ ಮಾಡಿದ್ದರು ಎನ್ನುವುದನ್ನು ವಿಚಾರಿಸುವಂತೆ ಕೂಡಲೆ ಶರಧೀಪುರದ ಠಾಣೆಗೆ ಫೋನ್ ಮಾಡಿ ತನಿಖಾಧಿಕಾರಿ ಆದೇಶಿಸುತ್ತಾರೆ.
ಇತ್ತ ಬ್ಯಾಂಕ್ಗೆ ಬಂದ ಸಬ್ ಇನ್ಸ್ಪೆಕ್ಟರ್ ಹಣ ಜಮೆ ಮಾಡಿದವರ ಬಗ್ಗೆ ವಿವರ ಕೇಳುತ್ತಾರೆ. ಬ್ಯಾಂಕ್ನವರು ಆ ದಿನ ಜಮೆ ಮಾಡಿದ ಚಲನ್ ತೆಗೆದು ಪರಿಶೀಲಿಸುತ್ತಾರೆ. ಅದರಲ್ಲಿ ನೀಡಿದ ಮೊಬೈಲ್ ನಂಬರ್ ಕೂಡ ಚಾಲನೆಯಲ್ಲಿ ಇಲ್ಲ. ಇನ್ನೂ ವಿಳಾಸ ಕೂಡ ಸರಿಯಾಗಿ ಬರೆದಿಲ್ಲ. ಯಾರೆಂದು ಗೊತ್ತಾಗುತ್ತಿಲ್ಲ. ಆಗ ಆ ದಿನ ಕ್ಯಾಶ್ ಕೌಂಟರ್ನಲ್ಲಿದ್ದ ಕ್ಲರ್ಕ್ ಕರೆದು ಕೇಳುತ್ತಾರೆ. ಆತ ಹೇಳುತ್ತಾನೆ. ಯಾರೋ ಮುಂಬೈನವರೆಂದು ಆ ದಿನ ನನ್ನ ಬಳಿ ಬಂದರು. ಕಾರ್ನಲ್ಲಿ ಊರಿಗೆ ಹೋಗುತ್ತಿದ್ದೇವೆ. ಹಣ ತೆಗೆದುಕೊಂಡು ಹೋಗಲು ಭಯವಾಗುತ್ತಿದೆ. ನನ್ನ ಖಾತೆಗೆ ಜಮೆ ಮಾಡಿ ಎಂದು ಬೇಡಿಕೊಂಡರು. ಅದಕ್ಕೇ ನಾನೇ ಸಹಕರಿಸಿ ಅವರ ಹಣವನ್ನು ಖಾತೆಗೆ ಜಮೆಮಾಡಿದೆ. ಅವರನ್ನು ನಾನು ನೋಡಿದರೆ ಗುರುತಿಸಬಲ್ಲೆ. ಅವರು ಸುಮಾರು ಹದಿನೈದು ನಿಮಿಷ ಕೌಂಟರ್ ಬಳಿಯೆ ಇದ್ದರು. ಹಣವನ್ನು ಎಣಿಸಿ ಜಮೆ ಮಾಡಿ ಚಲನ್ ಕೊಡುವಾಗಲೆ ಅವರು ಮರೆಯಾಗಿದ್ದರು. ನಾನು ಅವರು ಬಿಟ್ಟು ಹೊದ ಚಲನ್ನ ಸ್ವೀಕೃತಿ ಭಾಗವನ್ನು ಹಾಗೇ ಇಟ್ಟಿರುವೆ ಎಂದು ತೋರಿಸುತ್ತಾರೆ.
ಒಟ್ಟಾರೆ ಮೋಸ ಮಾಡಲೆಂದೆ ವ್ಯವಸ್ಥಿತವಾಗಿ ಯೋಜಿಸಿ ವಂಚನೆ ಮಾಡಿದ್ದಾರೆನ್ನುವುದು ಈಗ ಪೋಲಿಸರಿಗು ಖಾತ್ರಿಯಾಯಿತು. ಈಗ ಪೋಲಿಸರು ಬ್ಯಾಂಕ್ನಿಂದ ಆ ದಿನಾಂಕದ ಸಿ.ಸಿ ಟಿ.ವಿಯ ಫೂಟೇಜ್ ಪಡೆದು ಯಾರೆಲ್ಲಾ ಆ ದಿನ ಆ ಸಮಯದಲ್ಲಿ ಬ್ಯಾಂಕ್ನಲ್ಲಿದ್ದರು ಎನ್ನುವುದನ್ನು ನೋಡುತ್ತಾ ಹೋಗುತ್ತಾರೆ. ಬೆಳಿಗ್ಗೆ 11.03 ನಿಮಿಷಕ್ಕೆ ಹಣವನ್ನು ಜಮೆ ಮಾಡಲಾಗಿದೆ. ಆಗ ಕ್ಯಾಶ್ ಕೌಂಟರ್ ಬಳಿ ಇದ್ದವನನ್ನು ಗಮನಿಸುತ್ತಾರೆ. ಈಗ ವೀಡಿಯೋದಲ್ಲಿ ಆ ದಿನ ಹಣ ಜಮೆ ಮಾಡಿದವನನ್ನು ಬ್ಯಾಂಕ್ ಸಿಬ್ಬಂದಿ ಗುರುತಿಸುತ್ತಾರೆ. ಕೂಡಲೇ ಆತನ ಚಿತ್ರವನ್ನು ಸ್ಟಿಲ್ ಮಾಡಿ ನೋಡುತ್ತಾರೆ. ಆದರೆ ಆತನನ್ನು ನೋಡಿದ ನೆನಪು ಯಾರಿಗೂ ಇಲ್ಲ. ಕೂಡಲೇ ಆತನ ಚಿತ್ರವನ್ನು ಮುಂಬೈಯಲ್ಲಿದ್ದ ತನಿಖಾಧಿಕಾರಿಗೆ ಕಳುಹಿಸುತ್ತಾರೆ. ಮುಂಬೈ ಪೋಲಿಸರನ್ನು ವಿಚಾರಿಸಲಾಗಿ ಆತನು ಮುಂಬೈಯಲ್ಲಿನ ಭೂಗತ ಲೋಕದ ಅದೇ ಡಿ ಕಂಪನಿಯ ಇನ್ನೊಬ್ಬ ಪಾತಕಿಯೆನ್ನುವುದು ತಿಳಿದು ಬರುತ್ತದೆ. ಕೊನೆಗೆ ಆತನನ್ನು ಸೆರೆ ಹಿಡಿದರೆ ಮಾಹಿತಿ ಲಭಿಸುತ್ತದೆಂದು ಮತ್ತೆ ಅದೇ ದಿನ ರಾತ್ರಿ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸುತ್ತಾರೆ.
ಆತ ತನಗೆ ಹಣ ನೀಡಿದ್ದು ಮಂಜಪ್ಪ ಎನ್ನುವುದನ್ನು ಹೇಳಿ ಆತನ ಮತ್ತು ಮಂಜಪ್ಪನ ನಡುವಣ ಆದ ಒಪ್ಪಂದವನ್ನು ಹೇಳುತ್ತಾನೆ. ಮೊದಲು ಮುಂಗಡವಾಗಿ 50 ಲಕ್ಷ ನೀಡಿದ್ದರು. ಕೆಲಸ ಮುಗಿದ ಮೇಲೆ ಇನ್ನೂ 50 ಲಕ್ಷ ನೀಡುವುದಾಗಿ ಹೇಳಿದ್ದರು ಎಂದ. ಈಗ ವಿಷಯ ಖಚಿತಪಡಿಸಿಕೊಂಡು ತನಿಖಾಧಿಕಾರಿಯವರು ತಮಗೆ ಮುಂದಿನ ತನಿಖೆಗೆ ಅಗತ್ಯವಿರುವ ಎಲ್ಲರನ್ನು ಕರೆದುಕೊಂಡು ಶರಧೀಪುರಕ್ಕೆ ಬರುತ್ತಾರೆ.
ಇತ್ತ ಮಂಜಪ್ಪನನ್ನು ಪೋಲಿಸರು ವಶಕ್ಕೆ ಪಡೆಯುತ್ತಾರೆ. ಆತನಿಗೆ ತನಿಖಾಧಿಕಾರಿ ಹೇಳುತ್ತಾರೆ. ನೋಡು ಇದ್ದ ಸತ್ಯವನ್ನು ನೀನು ಒಪ್ಪಿಕೊಂಡರೆ ಉತ್ತಮ. ನಿನ್ನ ಜೀವ ಉಳಿಯುತ್ತದೆ. ಇಲ್ಲದೇ ಹೋದರೆ ನಿನ್ನ ಜೀವಕ್ಕೆ ಸದ್ಯದಲ್ಲೇ ದೊಡ್ಡ ಗಂಡಾಂತರವಿದೆಯೆಂದು, ನಿನ್ನ ಮೇಲೆ ಮುಂಬೈ ಡಿ ಕಂಪನಿಗೆ ಸಿಟ್ಟು ಬಂದಿದೆಯೆಂದು ಸುಳ್ಳು ಹೇಳುತ್ತಾರೆ. ಆಗ ಜೀವ ಭಯಕ್ಕೆ ಹೆದರಿ ವಿಚಾರಣೆಯಲ್ಲಿ ಎಲ್ಲವನ್ನು ಮಂಜಪ್ಪ ಬಾಯಿಬಿಡುತ್ತಾನೆ. ತಪ್ಪೊಪ್ಪಿಕೊಂಡು ತನಗೆ ಸಹಕರಿಸಿದ ಭ್ರಷ್ಟಾಚಾರದಲ್ಲಿ ಪಾಲುದಾರರಾದ ಎಲ್ಲರ ಮಾಹಿತಿ ನೀಡುತ್ತಾನೆ. ಮಂಜಪ್ಪನ ಹೇಳಿಕೆಯಂತೆ ನಗರಸಭೆಯ ಸಿಬ್ಬಂದಿಯನ್ನು ಆರೋಪಿಗಳೆಂದು ಪರಿಗಣಿಸಿ ವಿಚಾರಣೆಗಾಗಿ ಪೋಲೀಸರು ವಶಕ್ಕೆ ಪಡೆಯುತ್ತಾರೆ.
ಈಗ ತನಿಖಾಧಿಕಾರಿ ತಮ್ಮ ಬುದ್ಧಿವಂತಿಕೆಯನ್ನು ಮತ್ತೆ ಮೆರೆಯುತ್ತಾ ಹೋಗುತ್ತಾರೆ. ಇವರಿಗೆಲ್ಲಾ ಜೀವ ಭಯವಿದೆಯೆಂದರೆ ಎಲ್ಲಾ ತಪ್ಪೊಪ್ಪಿಕೊಂಡು ಸತ್ಯ ಹೇಳುತ್ತಾರೆ. ಇಲ್ಲದೇ ಹೋದರೆ ಇವರಿಗೆ ಸರಿಯಾಗಿ ಸತ್ಯ ಹೇಳಿಸುವುದು ತಮ್ಮಿಂದ ಕಷ್ಟವೆಂದು ಅರ್ಥೈಸಿಕೊಂಡಿದ್ದಾರೆ. ಈಗ ಕಂದಾಯಾಧಿಕಾರಿಯನ್ನು ರಾತ್ರಿ ಸುಮಾರು ಹನ್ನೊಂದರ ಸಮಯಕ್ಕೆ ವಿಚಾರಣೆಗೆಂದು ತಮ್ಮೆದುರು ಕೂರಿಸಿಕೊಳ್ಳುತ್ತಾರೆ. ಆತ ಹೋಟೆಲ್ನಲ್ಲಿ ನಡೆದ ಶೂಟೌಟ್ ಶಾಕ್ನಿಂದ ಇನ್ನೂ ಹೊರಬಂದಿಲ್ಲ. ಈಗ ಆತನಿಗೆ ತನಿಖಾಧಿಕಾರಿ ಹೇಳುತ್ತಾರೆ. "ನೋಡು ನಿನ್ನನ್ನು ಕೊಲ್ಲಲು ಮುಂಬೈನ ಡಿ ಕಂಪನಿಯವರು ಊರಿಗೆ ಬಂದಿದ್ದರು. ಅವರನ್ನು ನಾವು ಸೆರೆ ಹಿಡಿದಿದ್ದೇವೆ" ಎನ್ನುತ್ತಾರೆ. ಆಗ ಜೀವಭಯದಲ್ಲಿ ಡಿ ಕಂಪನಿಯ ಹೆಸರು ಕೇಳುತ್ತಲೇ ಬೆಚ್ಚಿಬಿದ್ದ ಆತ "ಏಕೆ? ನನಗೂ ಅವರಿಗೂ ಏನು ಸಂಬಂಧ? ದಯವಿಟ್ಟು ನನಗೂ ನನ್ನ ಕುಟುಂಬಕ್ಕೂ ರಕ್ಷಣೆ ನೀಡಿ" ಎನ್ನುತ್ತಾ ಅಂಗಲಾಚುತ್ತಾನೆ. ಆಗ ತನಿಖಾಧಿಕಾರಿ ನುಡಿಯುತ್ತಾರೆ. ನೀನು ಏನೋ ಮಾಡಲು ಹೋಗಿದ್ದೀಯ. ಅವರೊಂದಿಗೆ ನಿನ್ನದೇನಾದರು ವ್ಯವಹಾರವಿತ್ತೇ? ನೀನು 50 ಲಕ್ಷ ಕೊಡಲಿಲ್ಲ ಅಂತಾ ನಿನ್ನ ಕೊಲ್ಲುವುದಕ್ಕೆ ಬಂದಿದ್ದರಂತೆ. ನಮ್ಮವರು ಅವರನ್ನು ಸರಿಯಾದ ಸಮಯದಲ್ಲಿ ಸೆರೆ ಹಿಡಿದಿದ್ದಾರೆ. ಇಲ್ಲದೇ ಹೋಗಿದ್ದರೆ ನಿನ್ನೆ ರಾತ್ರಿಯೆ ನಿನಗೆ ಕೊನೆಯ ದಿನವಾಗುತ್ತಿತ್ತು ಎಂದು ಸುಳ್ಳು ಹೇಳುತ್ತಾರೆ.
ಈ ಮಾತು ಕೇಳಿ ಬೆಚ್ಚಿ ಬಿದ್ದು ಇದ್ದ ಬದ್ದ ಎಲ್ಲ ಸತ್ಯವನ್ನೂ ಕಂದಾಯಾಧಿಕಾರಿ ಹೇಳುತ್ತಾ ಹೋಗುತ್ತಿದ್ದಾನೆ. ರಾಜು ಮತ್ತು ಕುಮಾರನನ್ನು ಕೊಲ್ಲಿಸಲು ಮಂಜಪ್ಪನೆ ಒಂದು ಕೋಟಿಗೆ ಡೀಲ್ ನೀಡಿದ್ದು. ಮೊದಲೆ ನಾವೆಲ್ಲ ಸೇರಿ 50 ಲಕ್ಷ ನೀಡಿದ್ದೆವು. ನಾನು ಕೂಡ ಆತನಿಗೆ ಸಹಕರಿಸಿದ್ದೆ. ಕಾರಣ ರಾಜು ಮತ್ತು ಕುಮಾರನಿಗೆ ಮೋಸ ಮಾಡಿದವರಲ್ಲಿ ನಾನು ಒಬ್ಬ. ಹಾಗಾಗಿ ಅವರು ಒಂದಲ್ಲ ಒಂದು ದಿನ ನನಗು ಮುಳುವಾಗುತ್ತಾರೆನ್ನುವ ಭಯವಿತ್ತು. ಅವರಿಗೆ ನಕ್ಸಲ್ ನಂಟಿದೆ ಎನ್ನುವ ಮಾತು ಊರಿನ ತುಂಬಾ ಹರಿದಾಡುತ್ತಿದೆ. ನೀವು ತನಿಖೆಯಲ್ಲಿ ಅದನ್ನು ಕಂಡುಹಿಡಿದಿದ್ದೇರೆಂದು ಊರೆಲ್ಲಾ ಮಾತಾಡಿಕೊಳ್ಳುತ್ತಿದೆ ಎಂದ.
ಈಗ ತನಿಖಾಧಿಕಾರಿ ಮನದಲ್ಲಿ ಆಲೋಚಿಸುತ್ತಿದ್ದಾರೆ. "ನಾವು ಕೇವಲ ಇವರನ್ನು ವಿಚಾರಣೆಗೆ ಕರೆದುಕೊಂಡಿದ್ದು ಹೋಗಿದ್ದಕ್ಕೆ ಊರಲ್ಲಿ ರಾಜು ಮತ್ತು ಕುಮಾರನ ಬಗ್ಗೆ ಹೇಗೆ ಇಲ್ಲ ಸಲ್ಲದ ಮಾತುಗಳು ಹೊರಬೀಳುತ್ತಿವೆ. ಹ್ಮ್, ಜನರ ಬಾಯಿಯಿಂದಲೇ ಕೆಲವೊಮ್ಮೆ ಹಲವರು ಅಪರಾಧಿಗಳ ರೀತಿ ಕಾಣುತ್ತಾರೆ" ಎಂದು ತುಸು ನಕ್ಕು ಮೌನಿಯಾಗಿ ಕಂದಾಯಾಧಿಕಾರಿಯತ್ತ ನೋಡುತ್ತಾ ಆತನ ಮಾತನ್ನು ರೆಕಾರ್ಡ್ ಮಾಡಿಸುತ್ತಿದ್ದಾರೆ.
ಇತ್ತ ಕಂದಾಯಾಧಿಕಾರಿ ನುಡಿದ. ಒಂದಲ್ಲ ಒಂದು ದಿನ ಸಹೋದರರಿಬ್ಬರೂ ಹೊರ ಬಂದೇ ಬರುತ್ತಾರೆ. ಇಲ್ಲವೇ ಜೈಲಿನಿಂದ ತಪ್ಪಿಸಿಕೊಂಡಾದರು ಹೊರಬಂದು ನನಗೆ ತೊಂದರೆ ಕೊಡುತ್ತಾರೆಂದು ಹೆದರಿದ್ದೆ. ಅವರಿಗೆ ನಕ್ಸಲರ ನಂಟು ಬೇರೆಯಿದೆ. ಅದಕ್ಕೆ ಅವರನ್ನು ಕೊಲೆ ಮಾಡಿಸಲು ನಾನೂ ಸೇರಿದಂತೆ ಉಳಿದವರೆಲ್ಲ ಕೈಹಾಕಿದ್ದೆವು ಎನ್ನುತ್ತಾನೆ. ಆದರೆ ಆ ದಿನ ರಾಜು ಮತ್ತು ಕುಮಾರ ಕೊಲೆಯಾಗದ ಕಾರಣ ನಾವು ಉಳಿದ 50 ಲಕ್ಷ ಹಣ ಡಿ ಕಂಪನಿಗೆ ಕೊಟ್ಟಿರಲಿಲ್ಲ. ಒಮ್ಮೆ ಒಬ್ಬ ಫೋನ್ ಮಾಡಿ ಕೇಳಿದ್ದ. ನಾನು ಕೊಟ್ಟಿರಲಿಲ್ಲ. ಅದಕ್ಕೆ ಅವರಿಗೆ ನಮ್ಮ ಮೇಲೆ ಸಿಟ್ಟಿರಬಹುದೇನೊ? ಎಂದು ರೋದಿಸುತ್ತಾನೆ.
ಕೂಡಲೆ ಆ ನಂಬರ್ ಕೊಡು ಎನ್ನುತ್ತಾರೆ. ಆ ನಂಬರ್ ನೆನಪಿಲ್ಲ. ಅದನ್ನು ಸೇವ್ ಮಾಡಿಕೊಳ್ಳಲಿಲ್ಲ. ಎಲ್ಲವನ್ನು ಮಂಜಪ್ಪನೆ ಸಂಪರ್ಕಿಸುತ್ತಿದ್ದ ಎನ್ನುತ್ತಾನೆ. ಈಗ ತನಿಖಾಧಿಕಾರಿ ಕೇಳುತ್ತಾರೆ. ನಾವು ನಿನ್ನ ಜೀವಕ್ಕೆ ರಕ್ಷಣೆ ನೀಡಿ ನಿನ್ನನ್ನು ಕಾಪಾಡುತ್ತೇವೆ. ನೀನು ಹೇಳಿದಂತೆ ಕೇಳುತ್ತೀಯ ತಾನೆ? ಎನ್ನುತ್ತಾರೆ. ಒಂದೇ ಉಸಿರಿಗೆ ಕಂದಾಯಾಧಿಕಾರಿ ಹ್ಮೂಂ ಎಂದು ತನಿಖಾಧಿಕಾರಿಗೆ ಕೈ ಮುಗಿದು ಬೇಡಿಕೊಳ್ಳುತ್ತಿದ್ದಾನೆ.
ಇದೇ ಘಳಿಗೆಗೆ ಕಾಯುತ್ತಿದ್ದ ತನಿಖಾಧಿಕಾರಿ ಈಗ ಏನೊ ಗೆದ್ದ ಸಂತಸದಲ್ಲಿ ರಾತ್ರಿ ಹನ್ನೆರಡು ಗಂಟೆ ಕಳೆದು ಹೋದರೂ ಕಂದಾಯಾಧಿಕಾರಿ ಹೇಳುವ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಉತ್ಸಾಹದಲ್ಲೆ ಕುಳಿತಿದ್ದಾರೆ.
ಈಗ ಕಂದಾಯಾಧಿಕಾರಿಗೆ ಕೇಳುತ್ತಾರೆ. ನಿನಗೂ ಮತ್ತು ಮಂಜಪ್ಪನಿಗು ಹೇಗೆ ಸ್ನೇಹ? ಕಂದಾಯಾಧಿಕಾರಿ ಹೇಳುತ್ತಾನೆ. "ನಾವು ಕಚೇರಿಯಲ್ಲಿ ನಡೆಸುವ ಹಲವು ಹಗರಣಗಳಿಗೆ ಈ ಮಂಜಪ್ಪ, ಮೊನ್ನೆ ಆಸ್ಪತ್ರೆಯಲ್ಲಿ ತೀರಿಕೊಂಡ ಚೇರ್ ಮೆನ್ ಶ್ರೀಕರ ಮತ್ತವನ ಬಾಸ್ ಅಪ್ಪಣ್ಣ ಹಾಗೂ ಈ ಹಿಂದೆ ಕೊಲೆಯಾದ ರಮೇಶಪ್ಪ ಸಹಕಾರ ನೀಡುತ್ತಿದ್ದರು" ಎಂದ.
ಸಹಕಾರ ಎಂದರೆ ಹೇಗೆ? ಹಗರಣ ಎಂದರೆ ಏನು? ಏನೆಲ್ಲಾ ಮಾಡುತ್ತಿದ್ದೀರಿ? ಎಂದು ತನಿಖಾಧಿಕಾರಿ ಪ್ರಶ್ನಿಸುತ್ತಾರೆ. ಆಗ ಕಂದಾಯಾಧಿಕಾರಿ ನುಡಿಯುತ್ತಾನೆ. "ನಾವು ಹಲವು ದಾಖಲೆಗಳನ್ನು ತಿದ್ದುಪಡಿ ಮಾಡುತ್ತಿದ್ದೆವು. ಹಲವು ಸರ್ಕಾರಿ ನಿಯಮಗಳನ್ನು ಉಲ್ಲಂಘನೆಮಾಡಿ ಮೋಸಮಾಡುತ್ತಿದ್ದೆವು. ಇದಕ್ಕೆ ರಾಜಕೀಯ ಸಹಕಾರವನ್ನು ಶ್ರೀಕರ ಮತ್ತವನ ಬಾಸ್ ನೀಡಿದರೆ ರಮೇಶಪ್ಪ ಮತ್ತು ಮಂಜಪ್ಪ ಸಹ ರೌಡಿಗಳನ್ನು ಸಾಕಿಕೊಂಡು ಅಮಾಯಕರಿಗೆ ಬೆದರಿಸಿ ಅವರ ಆಸ್ತಿಯನ್ನು ಕಬಳಿಸುತ್ತಿದ್ದರು. ಆಗ ನಾವು ಇದೇ ಸಮಯ ಉಪಯೋಗಿಸಿಕೊಂಡು ಯಾರದೋ ಖಾತೆಗೆ ನಕಲಿ ದಾಖಲೆಯನ್ನು ಸೃಷ್ಟಿಸಿ ಬೇರೆಯವರಿಗೆ ಮಾಡಿಕೊಡುತ್ತಿದ್ದೆವು. ಇದೇ ರೀತಿಯಲ್ಲಿ ವೆಂಕಮ್ಮಜ್ಜಿಯ ಮನೆಯನ್ನು ಮೋಸದಿಂದ ಬೇರೆಯವರ ಹೆಸರಿಗೆ ಖಾತೆಮಾಡಿಕೊಟ್ಟೆವು. ಇದೇ ನಾವು ಮಾಡಿದ ದೊಡ್ಡ ತಪ್ಪಾಯಿತು." ಇಲ್ಲಿಯವರೆಗೆ ಸಾವಿರಾರು ಇಂತಹ ಮೋಸಮಾಡಿದರೂ ಒಂದರಲ್ಲೂ ಯಾರಿಂದಲೂ ಇಷ್ಟೊಂದು ಪ್ರತಿರೋಧ ಒದಗಿ ಬರಲಿಲ್ಲ. ಹಲವು ವೇಳೆ ಕೆಲವರು ಕೆರಳಿ ನಮ್ಮ ಮೇಲೆ ಮುಗಿಬಿದ್ದದ್ದೂ ಇದೆ. ಆಗ ಅವರನ್ನು ಇದೇ ರೀತಿ ಭೂಗತ ಪಾತಕಿಗಳಿಗೆ ಡೀಲ್ ನೀಡಿ ಕೊಲ್ಲಿಸಿದ್ದೇವೆ ಎಂದ.
ಓಹ್, ಹಾಗಾದರೆ ಇವರು ಈ ಹಿಂದೆಯೇ ಇಂತಹ ಹಲವು ಕೃತ್ಯಗಳನ್ನು ಎಸಗಿದ್ದಾರೆ. ಮತ್ತೆ ಈ ಊರಿನಲ್ಲಿ ಯಾವುದೇ ಕೊಲೆ ಪ್ರಕರಣ ದಾಖಲಾಗಿಲ್ಲ. ರಮೇಶಪ್ಪನದೆ ಮೊದಲು ಎಂದು ಹೇಳಿದ್ದೀರಲ್ಲ ಎಂದು ಸರ್ಕಲ್ ಇನ್ಸ್ಪೆಕ್ಟರ್ ಕಡೆಗೆ ತನಿಖಾಧಿಕಾರಿ ನೋಡುತ್ತಾರೆ. ಆಗ ಮತ್ತೆ ಕಂದಾಯಾಧಿಕಾರಿಯನ್ನು ಪ್ರಶ್ನಿಸಲಾಗಿ ಆತ ನುಡಿಯುತ್ತಾನೆ. ನಮಗೆ ಪ್ರತಿರೋಧ ತೋರಿದವರನ್ನು ನಾವು ಅವರು ಬೇರೆ ಊರಿಗೆ ಹೋದಾಗ ಅಲ್ಲಿ ಅಪಘಾತವಾಗುವಂತೆ ಮಾಡಿ ಕೊಲ್ಲಿಸಿದ್ದೇವೆ. ಬೇಕಂತಲೆ ಅಪಘಾತಮಾಡಿಸಿದ್ದೇವೆ. ಇಲ್ಲವೆ ಹೊರ ಊರಿನಲ್ಲಿ ಅನುಮಾನ ಬರದಂತೆ ಕೊಂದು ಹಾಕಲಾಗಿದೆ. ಇಲ್ಲಿ ಊರಿನಲ್ಲಿ ಅವರ ವಾರಸುದಾರರು ಅಪಘಾತವಾಗಿ ಮೃತಪಟ್ಟಿದ್ದಾರೆಂದೆ ನಂಬಿದ್ದಾರೆ. ಇನ್ನೂ ಕೆಲವು ಕುಟುಂಬದವರು ಕೊಲೆಯಾದವರು ಎಲ್ಲೊ ಕಾಣೆಯಾಗಿದ್ದಾರೆಂದು ನಂಬಿದ್ದಾರೆ ಎನ್ನುತ್ತಾನೆ.
ಆಗ ಮದ್ಯೆ ಪ್ರವೇಶಿಸಿದ ತನಿಖಾಧಿಕಾರಿ ಈ ಊರಿನಲ್ಲಿ ಕಾಣೆಯಾದವರ ಪಟ್ಟಿ ಕೊಡಿ ಎಂದು ಸರ್ಕಲ್ ಇನ್ಸ್ಪೆಕ್ಟರ್ಗೆ ಕೇಳುತ್ತಾರೆ. ಆಗ ಆ ಪಟ್ಟಿಯಲ್ಲಿ ಯಾರು ಈ ಭೂ ಭಯೋತ್ಪಾದಕರ ದಾಹಕ್ಕೆ ಬಲಿಯಾಗಿದ್ದಾರೆಂದು ಕಂದಾಯಾಧಿಕಾರಿಯಿಂದ ಕೇಳಿ ದಾಖಲಿಸಿಕೊಂಡರು. ಒಟ್ಟಾರೆ ಇಲ್ಲಿಯವರೆಗೆ ಇವರು ಈ ರೀತಿ ಕೊಂದವರ ಸಂಖ್ಯೆ 68 ಆಗಿದೆ. ಆದರೆ ಎಲ್ಲಿಯೂ ಇವರು ಸಿಕ್ಕಿ ಹಾಕಿಕೊಂಡಿಲ್ಲ. ಎಲ್ಲವನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಿ ಮುಗಿಸಿದ್ದಾರೆ. ಎಂತಹ ವಂಚಕರೆನ್ನುತ್ತಾ ತನಿಖಾಧಿಕಾರಿಯು ಹೌಹಾರಿ ಒಂದೆಡೆ ಕುಳಿತುಕೊಂಡರು. ಏನೋ ಆಲೋಚಿಸತೊಡಗಿದರು. ಒಂದು ಕಪ್ ಟೀ ತರುವಂತೆ ಸಿಬ್ಬಂದಿಗೆ ಸೂಚಿಸಿದರು. ರಾತ್ರಿ ಸುಮಾರು ಒಂದು ಗಂಟೆಯಾಗಿದೆ. ಟೀ ಕುಡಿದು ಸಾವರಿಸಿಕೊಳ್ಳುತ್ತಾ ಹೊರ ನೋಡಿದರು. ಒಂದೇ ಸಮನೆ ಮಳೆ ಸುರಿಯುತ್ತಾ ಬಿರುಗಾಳಿಯು ಜೋರಾಗಿ ಬೀಸುತ್ತಿದೆ.
ಈಗ ಮತ್ತೆ ಕಂದಾಯಾಧಿಕಾರಿಗೆ ಕೇಳಿದರು. ನೀವು ಇಷ್ಟೆಲ್ಲಾ ಅನ್ಯಾಯ, ಕೊಲೆ, ಸುಲಿಗೆ ಮಾಡಿದರು ನಿಮಗೆ ಏನು ಪಾಪ ಪ್ರಜ್ಞೆ ಕಾಡಲಿಲ್ಲವೇ? ಪಾಪ ಕೊಲೆಯಾದವರ ಕುಟುಂಬದ ಪಾಡೇನೊ? ನಿಮಗೆ ಕರುಣೆಯೆನ್ನುವ ಸಣ್ಣ ಅನುಕಂಪವೂ ಕಾಡಲಿಲ್ಲವೆ? ಎಂದು ಉದ್ಗರಿಸಿದರು!
ತನಿಖಾಧಿಕಾರಿ ಸರ್ಕಲ್ ಇನ್ಸ್ಪೆಕ್ಟರ್ಗೆ ನುಡಿದರು. ನೋಡಿ, ಇದು ಸುಲಭದಲ್ಲಿ ನಿಲುಕುವಷ್ಟು ಸಣ್ಣ ಪ್ರಕರಣವಲ್ಲ. ಈ ದಿನ ರಾತ್ರಿಯ ಕಪ್ಪು ಮರೆಯಾಗಿ ಬೆಳಕು ಮೂಡಿದರೂ ಚಿಂತೆಯಿಲ್ಲ. ನಾನಂತೂ ನಿದ್ರಿಸುವುದಿಲ್ಲ. ಈತ ಹೇಳುವುದೆಲ್ಲಾ ಕೂಡಲೆ ಬಿಡುವು ನೀಡದೆ ರೆಕಾರ್ಡ್ ಮಾಡೋಣ ಎನ್ನುತ್ತಾರೆ. ಅವರು ಆಯ್ತೆಂದು ಅವರ ಆದೇಶದಂತೆ ಸನ್ನದ್ದರಾಗಿದ್ದಾರೆ.
ಇತ್ತ ಎಲ್ಲ ಹೇಳಿಕೆಯನ್ನು ದಾಖಲಿಸುತ್ತಾ ತನಿಖಾಧಿಕಾರಿ ವೀಡಿಯೊ ಮಾಡಿಸುತ್ತಿದ್ದಾರೆ. ಇತ್ತ ಅವಸರದಲ್ಲೆ ಒಂದೇ ಉಸಿರಿನಲ್ಲಿ ಕಂದಾಯಾಧಿಕಾರಿ ತನ್ನ ಪ್ರಮಾದಗಳನ್ನು ಹೇಳುತ್ತಾ ಹೋಗುತ್ತಿದ್ದಾನೆ. ಆತನ ಬಾಯಿಯಿಂದ ಬರುತ್ತಿರುವ ಒಂದೊಂದು ಮಾತುಗಳನ್ನು ಕೇಳಿ ತನಿಖಾಧಿಕಾರಿಗೂ ಆಶ್ಚರ್ಯ. ಇಷ್ಟೆಲ್ಲ ವಾಮಮಾರ್ಗದಲ್ಲಿ ಸರ್ಕಾರಿ ಕಚೇರಿಯಲ್ಲಿ ಮೋಸ ಮಾಡಲು ಸಾಧ್ಯವೇ? ಸರ್ಕಾರದ ಸೇವೆಯಲ್ಲಿ ಇಂತಹ ಅಯೋಗ್ಯರು, ಕ್ರಿಮಿನಲ್ಗಳು ತುಂಬಿದ್ದರೆ ದೇಶದ ಗತಿಯೇನೆಂದು ದಂಗಾಗಿ ಬೆರಗಾಗಿದ್ದಾರೆ!
ಭಾಗ-13
ತನಿಖಾಧಿಕಾರಿಯವರು ಹೇಳಿಕೆಗಳನ್ನು ಪಡೆಯುತ್ತಾ ಹೋದಂತೆ ಅವರಿಗೆ ಒಂದೆಡೆ ಇಷ್ಟೊಂದು ಕ್ರೌರ್ಯದಲ್ಲಿ ಸಮಾಜದಲ್ಲಿ ಅನ್ಯಾಯಗಳು ನಡೆಯುತ್ತಿದ್ದರು ಅದನ್ನು ನಿಯಂತ್ರಿಸಲು ಆಗಲೇ ಇಲ್ಲ. ಕೊನೆಗೆ ರಾಜು ಮತ್ತು ಕುಮಾರ ತಮಗಾದ ನೋವಿಗೆ ಸಿಡಿದೆದ್ದುರ ಪರಿಣಾಮವಾಗಿ ಇವರ ಅಸಲಿತನ ಕಳಚಿ ಬಿದ್ದಿದೆ ಎನ್ನುವುದು ಅರಿವಾಗಿದೆ.
ಈಗ ತನಿಖಾಧಿಕಾರಿ ಕೇಳುತ್ತಾರೆ, ನೀವು ಈ ರೀತಿಯಲ್ಲಿ ಸುಮಾರು 68 ಜನರನ್ನು ಕೊಲೆ ಮಾಡಿದ್ದಾಗಿ ಈಗಾಗಲೇ ತಪ್ಪೊಪ್ಪಿಕೊಂಡಿದ್ದೀರಿ. ಇದರಲ್ಲಿ ಮೊದಲನೆಯ ಕೊಲೆ ಯಾವುದು? ಹೇಗೆ ನಡೆಯಿತು ಎನ್ನುವುದರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಕೊಲೆಯ ಘಟನೆಗಳನ್ನು ನನಗೆ ನಿಖರವಾಗಿ ಹೇಳಬೇಕು. ಜಾಗ್ರತೆಯಿಂದ ನಿಜವನ್ನು ನುಡಿಯಬೇಕು ಎಂದು ಕಂದಾಯಾಧಿಕಾರಿ ಕಡೆಗೆ ಪ್ರಶ್ನಿಸುತ್ತಾರೆ.
ಇದಕ್ಕೆ ಪ್ರತ್ಯುತ್ತರವಾಗಿ ಆತ ನುಡಿಯುತ್ತಾ ಹೋಗುತ್ತಾನೆ. ಇದಕ್ಕೆ ಮೂಲ ಕಾರಣ ನಮ್ಮ ಕಚೇರಿಯ ಗೌರಮ್ಮ. ಆಕೆಯೇ ಭೂ ಹಗರಣದ ಮೂಲ ಕತೃ. ಈಕೆ ಕಚೇರಿ ದಾಖಲೆಗಳನ್ನು ತಿದ್ದುಪಡಿಮಾಡಿ ಮೋಸ ಮಾಡುವುದರಲ್ಲಿ ಎತ್ತಿದ ಕೈ. ಈಕೆಯಿಂದಲೇ ನಾವು ಹೇಗೆ ಮೋಸ ಮಾಡಬೇಕೆನ್ನುವುದು ಕಲಿಯುತ್ತಾ ಹೋದೆವು. ಅಕ್ಕಪಕ್ಕದ ಸರ್ವೆ ನಂಬರ್ಗಳ ಸರ್ಕಾರಿ ಭೂಮಿಯನ್ನು ಕಬಳಿಸಲು ಖಾಸಗೀಯವರ ಖಾತೆಯಲ್ಲಿ 3 ಇದ್ದುದ್ದನ್ನು 8 ಎಂದು, 1 ಇದ್ದುದ್ದನ್ನು 4,7 ಎಂದು ತಿದ್ದುಪಡಿ ಮಾಡಿಸುತ್ತಿದ್ದಳು ಸರ್. ಇದರಿಂದ ಖಾಸಗಿ ಮಾಲಿಕರ ಆಸ್ತಿಯು ಸಹಜವಾಗಿ ಜಾಸ್ತಿಯಾಗುತ್ತಿತ್ತು. ಇತ್ತ ಸರ್ಕಾರಿ ಭೂಮಿಯನ್ನು ಕಬಳಿಸಿದರೆ ನಾವೇ ಕೇಳಬೇಕು. ಆದರೆ ನಾವೇ ತಪ್ಪು ಮಾಡಿದಾಗ ನಮ್ಮನ್ನು ಕೇಳುವವರು ಯಾರು ಇರುತ್ತಿರಲಿಲ್ಲ. ಅದುವೆ ನಮಗೊಂದು ಪ್ಲಸ್ ಪಾಯಿಂಟ್ ಆಗಿತ್ತು ಸರ್.
ಏನಿದು? ನಿಮ್ಮದೇ ಕೈ ಬರಹದಲ್ಲಿ ಬರೆದರೆ ಇಲ್ಲವೆ ತಿದ್ದುಪಡಿ ಮಾಡಿದರೆ ಸಿಕ್ಕಿ ಬೀಳುತ್ತೇವೆನ್ನುವ ಭಯವು ನಿಮಗಿಲ್ಲವೆ?
ನಾವು ಅದಕ್ಕಾಗಿ ಬೇರೆಯವರನ್ನೆ ಇಟ್ಟುಕೊಂಡಿದ್ದೇವೆ ಸರ್. ಅವರು ಒಂಥರಾ ಹ್ಯಾಂಡ್ ರೈಟಿಂಗ್ ಎಕ್ಸ್ಪರ್ಟ್ ಇದ್ದಂತೆ. ಅವರಿಗೆ ನಾವು ನೀಡಿದ ದಾಖಲೆಯನ್ನು ಬಹಳ ನಾಜೂಕಿನಿಂದ ತಿದ್ದುಪಡಿ ಮಾಡಿಕೊಡುತ್ತಾರೆ. ಮೂಲ ಕೈ ಬರಹದ ವ್ಯತ್ಯಾಸ ಗೊತ್ತಾಗದಂತೆ ತಿದ್ದುಪಡಿ ಮಾಡುತ್ತಾರೆ ಸರ್. ಇದೇ ಛಾಳಿಯಾಗಿಸಿಕೊಂಡು ನಿತ್ಯ ಮೋಸ ಮಾಡುತ್ತಾ ಹೋದೆವು. ಸಾಮಾನ್ಯವಾಗಿ ಸರ್ಕಾರದ ಜಾಗವಾದ್ದರಿಂದ ನಾವು ಆಡಿದ್ದೇ ಆಟವಾಯಿತು. ಇದೇ ದಂದೆ ಮಾಡಿಕೊಂಡು ಸಾಕಷ್ಟು ಜನರಿಗೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲು ನಾವು ಕಾರಣವಾದೆವು. ಇದರಿಂದ ನಮಗೆ ಸಾಕಷ್ಟು ಹಣವು ಹರಿದು ಬಂದಿತು. ನಮಗೆ ಸರ್ಕಾರದ ಸಂಬಳ ಇದರ ಮುಂದೆ ಏನು ಅನ್ನಿಸಲೆ ಇಲ್ಲ. ಹೀಗೆ ಮಾಡುತ್ತಿರುವಾಗ ಒಂದು ದಿವಸ ಜಯಪ್ಪ ಎನ್ನುವವರ ಖಾಸಗಿ ಜಾಗವನ್ನು ತಿದ್ದುಪಡಿ ಮಾಡಿಬಿಟ್ಟೆವು. ಇದು ನಮಗು ಸರಿಯಾಗಿ ಗೊತ್ತಾಗಲೆ ಇಲ್ಲ. ಆ ಖಾಸಗಿ ಜಾಗದ ಮಾಲಿಕನಾದ ಜಯಪ್ಪ ನಗರಸಭೆಗೆ ತನ್ನ ಜಾಗವನ್ನು ಯಾರೊ ಒತ್ತುವರಿ ಮಾಡಿ ಮನೆ ಕಟ್ಟುತ್ತಿದ್ದಾರೆಂದು ತಕರಾರು ಸಲ್ಲಿಸಿದಾಗಲೆ ನಮಗೆ ನಾವು ಸರ್ಕಾರಿ ಜಾಗದ ಬದಲಾಗಿ ಖಾಸಗಿ ಜಾಗಕ್ಕೆ ಕೈ ಹಾಕಿದ್ದು ಗಮನಕ್ಕೆ ಬಂತು. ಆದರೆ ಅಷ್ಟರಲ್ಲಿ ಅದು ನಮ್ಮ ಕೈ ಮೀರಿ ಹೋಗಿತ್ತು. ಆ ಸ್ವತ್ತನ್ನು ಕ್ರಯಕ್ಕೆ ಪಡೆದು ಇನ್ನೊಬ್ಬ ಆಗಲೆ ಮನೆ ಕಟ್ಟುವುದಕ್ಕೆ ತಯಾರಿ ನಡೆಸಿದ್ದ. ಇನ್ನೊಂದೆಡೆ ಇತ್ತ ನಿಜವಾದ ಮಾಲಿಕನಾದ ಜಯಪ್ಪ ತನ್ನ ಆಸ್ತಿ ಮಾಲಿಕತ್ವದ ದಾಖಲೆಗಳನ್ನು ಹಿಡಿದು ಇನ್ನೊಂದೆಡೆ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ತಯಾರಿ ನಡೆಸಿದ. ಆಗ ನಮಗೆಲ್ಲಾ ಬಹಳ ಹೆದರಿಕೆ ಶುರುವಾಯಿತು. ಏನು ಮಾಡುವುದೊ? ಎನ್ನುವ ಭಯ ಕಾಡಲಾರಂಭಿಸಿತು. ನಮಗೆ ಸದಾ ಬೆನ್ನುಲುಬಾಗಿದ್ದ ಸ್ಟಾಂಡಿಂಗ್ ಕಮಿಟಿ ಚೇರ್ಮೆನ್ ಶ್ರೀಕರ ಮತ್ತವನ ಬಾಸ್ ಗಮನಕ್ಕೆ ಇದ್ದ ವಿಷಯ ಹೋಯಿತು. ಆಗ ಅವರು ಆಸ್ತಿಯ ಮಾಲಿಕನಾದ ಜಯಪ್ಪನನ್ನು ಕರೆದು ರಾಜಿಗೆ ಪ್ರಯತ್ನಿಸಿದರು. ಆತ ಏನೇ ಅಂದರೂ ಒಪ್ಪಲಿಲ್ಲ. ಕೊನೆಗೆ ಬೆದರಿಕೆ ಹಾಕಿದರು. ಆದರೂ ಜಗ್ಗಲಿಲ್ಲ. ಆಗ ರಮೇಶಪ್ಪನಿಗೆ ಬಹಳ ಕೋಪ ಬಂದಿತು. ಆತ ನುಡಿದಂತೆ, ವಿಧಿಯಿಲ್ಲದೆ ಆ ಜಯಪ್ಪನನ್ನು ಕೊಲೆ ಮಾಡಿಸುವುದೆ ನಮಗಿರುವ ಪರಿಹಾರವೆಂದು ಹಾಗೆಯೆ ಮಾಡಿದೆವು.
ಹಾಗೆಯೆ ಎಂದರೆ ಹೇಗೆ?
ರಮೇಶಪ್ಪನ ಬಳಿ ಸಾಕಷ್ಟು ಲಾರಿಗಳಿದ್ದವು. ಆತ ಟಿಂಬರ್ ವ್ಯವಹಾರವನ್ನು ಮಾಡುವುದರಿಂದ ಸಹಜವಾಗಿ ಲಾರಿಗಳನ್ನು ಇಟ್ಟುಕೊಂಡಿದ್ದ. ಈತನೆ ಒಂದು ದಿನ ಲಾರಿ ಹತ್ತಿಸಿ ಪಕ್ಕದ ಊರಿನ ಬೈ ಪಾಸ್ನಲ್ಲಿ ಜಯಪ್ಪ ಬೈಕ್ನಲ್ಲಿ ಬರುವಾಗ ಕೊಲೆ ಮಾಡಿಸಿದ. ನಂತರ ಅದು ನೋಡಿದವರಿಗೆ ಅಪಘಾತ ಎನ್ನುವಂತೆ ಕಂಡುಬಂದಿತು. ಬೈಕ್ನಿಂದ ಜಾರಿ ಲಾರಿಯ ಚಕ್ರಕ್ಕೆ ಆತನೇ ಬಿದ್ದನೆಂದು ತಮ್ಮದೇ ಹಿಂಬಾಲಕರಿಂದ ಶ್ರೀಕರನು ಹೇಳಿಸಿದ. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೆ ದಾಖಲಿಸಿದ ಪೋಲಿಸರಿಗು ಇದು ಕೊಲೆ ಎನ್ನುವುದು ಕೊಂಚವು ಅನುಮಾನಕ್ಕೆ ಬರಲೇ ಇಲ್ಲ. ಜಯಪ್ಪನ ಕೊಲೆಯ ನಂತರ ನಾವೆಲ್ಲ ನಿಟ್ಟುಸಿರು ಬಿಟ್ಟೆವು. ಇದೇ ನಾವೆಲ್ಲ ಒಟ್ಟಾಗಿ ಮಾಡಿದ ಮೊದಲ ಕೊಲೆ. ಆಗ ನನಗೆ ಬಹಳ ಹೆದರಿಕೆಯಾಗಿತ್ತು. ಆದರೆ ದಿನ ಕಳೆದಂತೆ ಅದು ಯಾವುದೂ ನನಗೆ ಕೆಟ್ಟದ್ದು, ಭಯ ನೀಡುವಂತದ್ದು ಎನ್ನಿಸಲೇ ಇಲ್ಲ. ನಮಗೆ ದಿನವೂ ಬಂದು ಸೇರುತ್ತಿದ್ದ ಹಣದ ಮುಂದೆ ಯಾರ ಸಾವು, ನೋವು ನಮಗೆ ಕನಿಕರವೆನಿಸಿ ಕಾಡಲೇ ಇಲ್ಲ.
ಓಹ್! ಕೊಲೆ ಮಾಡುವುದಕ್ಕೆ ಅಪಘಾತ ಎನ್ನುವ ಕಾರಣವನ್ನು ದುರುಪಯೋಗಪಡಿಸಿಕೊಂಡಿದ್ದೀರ? ಛೇ! ಇನ್ನು ಇದೇ ರೀತಿಯಲ್ಲೆ ಉಳಿದ 67 ಕೊಲೆಗಳನ್ನು ಮಾಡಿದ್ದೀರ?
ಹೆಚ್ಚು ಕಡಿಮೆ ಅಪಘಾತದ ರೀತಿಯಲ್ಲೇ ಇಲ್ಲವೇ ಆತ್ಮಹತ್ಯೆಯ ರೀತಿಯಲ್ಲಿಯೆ ಬಿಂಬಿಸಿ ಕೊಲೆ ಮಾಡಿದ್ದೇವೆ. ಇಲ್ಲಿಯವರೆಗೆ ಯಾವುದೂ ಯಾರಿಗೂ ಅನುಮಾನವಾಗಿ ಕಾಡಿಯೇ ಇಲ್ಲ. ಅಷ್ಟೊಂದು ವ್ಯವಸ್ತಿತವಾಗಿ ಶ್ರೀಕರ, ರಮೇಶಪ್ಪ ಕೊಲೆ ಮಾಡುತ್ತಿದ್ದರು. ಹಾಗಾಗಿ ಯಾರ ಗಮನಕ್ಕೂ ಇಲ್ಲಿಯವರೆಗೆ ಬಂದಿಲ್ಲ. ಸಣ್ಣ ಸುಳಿವೂ ಕಾಡುತ್ತಿರಲಿಲ್ಲ. ಜಯಪ್ಪನ ಅಂತ್ಯವಾದ ನಂತರ ಕಚೇರಿಯಲ್ಲಿ ಗೌರಮ್ಮನ ಅಟ್ಟಹಾಸ ಇನ್ನಷ್ಟು ಗಟ್ಟಿಯಾಯಿತು. ಆಕೆಯೆ ಇನ್ನಷ್ಟು ಉಪಾಯಗಳನ್ನು ಹೇಳಿಕೊಡಲಾರಂಭಿಸಿದಳು. ನಾವು ಅದರಂತೆಯೆ ನಡೆದುಕೊಂಡು ಹೋದೆವು ಸರ್.
ಅಂದರೆ ನಿಮಗೆ ಊರಲ್ಲಿ ಎಲ್ಲಿಯೂ ಇಲ್ಲಿಯವರೆಗೆ ಯಾರು ಪ್ರಶ್ನಿಸಲೆ ಇಲ್ಲವೇ?
ಕೇಳಿದ್ದಾರೆ, ಪ್ರಶ್ನಿಸಿದ್ದಾರೆ, ಪ್ರತಿಭಟಿಸಿದ್ದಾರೆ ಸರ್. ಇದರಲ್ಲಿ ಹಲವು ಕೌನ್ಸಿಲರ್ಗಳು, ಕೆಲವು ಹೋರಾಟಗಾರರು, ರಿಪೋರ್ಟರ್ಗಳು ಇದ್ದರು. ತಮ್ಮ ವಾರ್ಡ್ನಲ್ಲಿ ಒತ್ತುವರಿಯಾಗಿದೆ. ಇಲ್ಲವೇ ಸರ್ಕಾರಿ ಭೂಮಿ ಕಬಳಿಕೆಯಾಗುತ್ತಿದೆ ಎಂದು ಹಲವು ಬಾರಿ ಪ್ರತಿಭಟಿಸಿದ್ದು ಇದೆ. ಆದರೆ ಅದಕ್ಕೆ ಶ್ರೀಕರ ಮತ್ತವನ ಬಾಸ್ ತಮ್ಮ ರಾಜಕೀಯ ಪ್ರಭಾವ ಬಳಸಿ ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ಸರ್. ಇಲ್ಲವೇ ಕೇಳಿದವರು ಸ್ವಲ್ಪ ದೊಡ್ಡ ವ್ಯಕ್ತಿಯಾಗಿದ್ದರೆ ಆತನಿಗು ಸಹಕಾರ ಮಾಡಿ ಅನಧಿಕೃತ ಕೆಲಸಗಳನ್ನು ಮಾಡಿಕೊಟ್ಟು ಅವನಿಗೂ ತೃಪ್ತಿಪಡಿಸಿದ್ದೆವು. ಹಾಗಾಗಿ ನಮ್ಮನ್ನು ಪ್ರಶ್ನಿಸುವವರೆ ಇಲ್ಲದಂತೆ ಮಾಡಿಕೊಂಡಿದ್ದೇವೆ. ಕೆಲವರು ಪ್ರಮಾಣಿಕರೆಂದು ಬಂದರು ಅವರನ್ನು ಗೌರಮ್ಮನೇ ಹೂಡಿದ ಉಪಾಯದಂತೆ ದಾರಿ ತಪ್ಪಿಸುತ್ತಿದ್ದೆವು. ಆತನಿಗೆ ನೀನು ಮುಂದಿನ ಚುನಾವಣೆಗೆ ನಿಲ್ಲಬೇಕೆಂದರೆ ಹಣ ಸಾಕಷ್ಟು ಬೇಕಾಗುತ್ತದೆ. ಇಲ್ಲವೆ ಈಗಾಗಲೇ ನೀನು ಮಾಡಿದ ಖರ್ಚಿಗೆ ಏನು ಮಾಡುವೆ? ನೀನು ಸಾಚಾನಂತೆ ಹೋದರೆ ನಿನಗೇನು ಲಾಭ? ಹೀಗೆ ನೂರಾರು ಪ್ರಶ್ನೆಗಳನ್ನು ಅವರಿಗೆ ಆಪ್ತರೆನಿಸಿದವರ ಮೂಲಕ ಕೇಳಿಸುತ್ತಿದ್ದೆವು. ಆಗ ಅವನಿಗೂ ತಾವು ಏನಾದರು ಮಾಡಿಕೊಳ್ಳಬೇಕು ಎನ್ನಿಸುವಂತೆ ದಾರಿತಪ್ಪಿಸುತ್ತಿದ್ದೆವು. ಇಲ್ಲವೇ ಆತನ ಸಂಬಂಧಿಗಳನ್ನು ದಾರಿ ತಪ್ಪಿಸಿ ಅವರಿಗೆ ನಕಲಿ ಖಾತೆ ಮಾಡಿಕೊಟ್ಟು ಇದರ ಮೇಲೆಯೇ ಆ ಕೌನ್ಸಿಲರ್ಗೂ ಬ್ಲಾಕ್ ಮೇಲೆ ಮಾಡುತ್ತಿದ್ದೆವು ಸರ್.
ಅಂದರೆ ಅವರಿಗೆ ಹೇಗೆ ಸಹಕಾರ ನೀಡಿ ವಂಚನೆಗೆ ದಾರಿ ಮಾಡಿಕೊಡುತ್ತಿದ್ದಿರಿ?
ನಮ್ಮೂರಲ್ಲಿ ಈ ಹಿಂದೆ ಆಶ್ರಯ ನಿವೇಶನ, 94ಸಿ, ನಗರಸಭೆ, ಸರ್ಕಾರಿ ಭೂ ಹಂಚಿಕೆಯ ಅನೇಕ ಖಾತೆಗಳಿವೆ. ಅದರಲ್ಲಿ ಹಲವರು ಖಾತೆ ಮಾಡಿಸಿಕೊಂಡೇ ಇಲ್ಲ. ಇನ್ನೂ ಖಾತೆ ಮಾಡಿಸಿಕೊಂಡ ಹಲವರು ಸರ್ಕಾರದಿಂದ ಮಂಜೂರಾದ ಭೂಮಿಯಲ್ಲಿ ಮನೆಯನ್ನೇ ಕಟ್ಟಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡು ನಾವು ಯಾರು ಆ ಜಾಗದಲ್ಲಿ ಇಲ್ಲವೋ ಅವರ ನಿವೇಶನವನ್ನು ನಕಲಿ ದಾಖಲೆ ಮೂಲಕ ಇನ್ನೊಬ್ಬರ ಹೆಸರಿಗೆ ಮಾಡುತ್ತಿದ್ದೆವು ಸರ್.
ಓಹ್! ನಕಲಿ ದಾಖಲೆ ನೀವೆ ತಯಾರಿಸಿದ್ದೀರ? ಅದು ಹೇಗೆ?
ಫಲಾನುಭವಿಯ ಪಟ್ಟಿಯಲ್ಲಿ ರಂಗಪ್ಪ ಎನ್ನುವ ಹೆಸರಿದ್ದರೆ ಅದೇ ಹೆಸರಿನ ಇನ್ನೊಬ್ಬರನ್ನು ಹುಡುಕಿ ಎನ್ನುತ್ತಿದ್ದೆವು. ಅವರ ಕುಟುಂಬದ, ಇಲ್ಲವೇ ಸ್ನೇಹಿತರಲ್ಲೊ, ಯಾರಲ್ಲೊ ಅದೇ ಹೆಸರಿನ ವ್ಯಕ್ತಿ ಇದ್ದರೆ ಸಾಕು. ಅವರೇ ನಿಜವಾದ ಫಲಾನುಭವಿಯೆಂದು ಆತನಿಗೆ ನಿವೇಶನದಲ್ಲಿ ಅತಿಕ್ರಮಿಸಿ ಮನೆ ಕಟ್ಟಲು ಹೇಳುತ್ತಿದ್ದೆವು. ನಂತರ ಇವನೇ ಅವನೆಂದು ಬಿಂಬಿಸುತ್ತಿದ್ದೆವು ಸರ್. ಆಧುನಿಕ ತಂತ್ರಜ್ಞಾನದ ಸ್ಕ್ಯಾನರ್ ಗಳನ್ನು ಬಳಸಿ ಪತ್ರದ ಸಹಿಯನ್ನು ಪೋರ್ಜರಿ ಮಾಡುತ್ತಿದ್ದೆವು. ಇದಕ್ಕೆಲ್ಲಾ ನುರಿತ ಪರಿಣಿತರನ್ನೇ ಬಳಸಿಕೊಂಡಿದ್ದೆವು. ಸಹಜವಾಗಿ ಸಹಿಯನ್ನು ಸ್ಕ್ಯಾನ್ ಮಾಡಿದರೆ ಅದು ನಿಜವಾದ ಸಹಿಯಂದೇ ಮುಂದೊಂದು ದಿನವೂ ಪ್ರೂವ್ ಆಗುತ್ತದೆಂದು ಬಲ್ಲವರು ನಮಗೆ ಹೇಳಿದ್ದರು ಸರ್. ನಮಗೆ ಮೋಸಮಾಡಲು ಇನ್ನೊಂದು ಸಹಕಾರಿಯಾದ ದೋಷವೆಂದರೆÉ ನಮ್ಮ ಕಚೇರಿಯಲ್ಲಿ ದಾಖಲಾದ ಫಲಾನುಭವಿಯ ಹೆಸರುಗಳ ಖಾತೆಯ ವಿವರದ ಮೀಟಿಂಗ್ ನಡಾವಳಿಯಲ್ಲಿ ಚೆಕ್ ಬಂದಿಯೇ ಇಲ್ಲ. ಬರೀ ಹೆಸರು ಮಾತ್ರವೇ ಇದೆ. ಯಾವ ಸ್ಥಳ, ವಿಳಾಸ ಏನು ಇಲ್ಲ. ಇದೇ ನಮ್ಮ ವಾಮಮಾರ್ಗಕ್ಕೆ ದಾರಿಯಾಗಿದೆ. ಆ ದಿನ ಚೆಕ್ ಬಂದಿ, ವಿಳಾಸವನ್ನು ಸರಿಯಾಗಿ ನಮೂದಿಸಿದ್ದರೆ ನಮಗೆ ಬರೀ ಹೆಸರಿನ ಆಧಾರದಲ್ಲಿ ದುರುಪಯೋಗಪಡಿಸಿಕೊಂಡು ನಕಲಿ ಖಾತೆ ಮಾಡಲು ಆಗುತ್ತಿರಲಿಲ್ಲ. ಆ ದಿನದ ಮೀಟಿಂಗ್ನ ನಡಾವಳಿಯನ್ನು ಬರೆದಿದ್ದು ಆ ಗೌರಮ್ಮನೇ ಸರ್.
ಏನ್ರಿ ಇದು. ಕೇಳುತ್ತಿದ್ದರೆ ನನಗೇ ಭಯವಾಗುತ್ತಿದೆ. ಏನದು ಮಾತೆದ್ದಿದರೆ ಎಲ್ಲವೂ ಗೌರಮ್ಮನೇ ಕಾರಣ ಎನ್ನುತ್ತೀರ. ಆಕೆ ಅಷ್ಟೊಂದು ಪ್ರಭಾವಶಾಲಿಯೆ? ಆಕೆ ನಿಮ್ಮ ಕಚೇರಿಯಲ್ಲಿ ಏನು ಕೆಲಸ ಮಾಡುತ್ತಾಳೆ?
ಆಕೆ ಒಬ್ಬಳು ಸಾಮಾನ್ಯ ಗುಮಾಸ್ತೆ. ಆದರೆ ನಗರಸಭೆಯ ಎಲ್ಲಾ ವ್ಯವಹಾರವೂ ಈಕೆಯ ಮೂಲಕವೆ ನಡೆಯಬೇಕು. ಈಕೆ ಇದೇ ಊರಿನವಳು. ಇಲ್ಲಿಯೆ ಕೆಲಸಕ್ಕೆ ಸೇರಿದ್ದು. ಈಗ ಸುಮಾರು 25 ವರ್ಷವಾಗಿದೆ. ಇಲ್ಲಿಯೇ ಇದ್ದಾಳೆ. ಮೊದಲೇ ಹಣವೆಂದರೆ ಯಾವುದಕ್ಕೂ ಸೈ ಎನ್ನುವ ಈಕೆ ಬಹಳ ಚಾಲಾಕಿ. ಎಂತಹವರನ್ನು ಅಯ್ಯೋ ಎನ್ನಿಸಿಬಿಡುತ್ತಾಳೆ. ಯಾವುದಕ್ಕೂ ಹೆದರಲ್ಲ. ಎಲ್ಲಾ ರಾಜಕೀಯ ಪ್ರಭಾವವು ಈಕೆಯ ಸಹಾಯಕ್ಕಿದೆ. ನಾನು ಮೊದಲೇ ಹೇಳಿದಂತೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮೋಸದ ದಂದೆಗೆ ಕೈಜೋಡಿಸುವಂತೆ ಮಾಡಿ ಈಕೆಯ ಮೂಲಕ ನಗರಸಭೆಯಲ್ಲಿ ಖಾತೆ ದಾಖಲಾಗುವಂತೆ ಮಾಡಲಾಗುತ್ತದೆ. ಈಕೆಗೆ ಎಲ್ಲರ ವಿಚಾರವು ಗೊತ್ತು. ಹಾಗಾಗಿ ಯಾರು ಈಕೆಯ ವಿರುದ್ಧ ಮಾತನಾಡುವುದಿಲ್ಲ. ಈಕೆಗೆ ಯಾರು ಏನೇ ಅಂದರು ಎಲ್ಲರೂ ಈಕೆಯ ಸಪೋರ್ಟ್ಗೆ ಬರುತ್ತಾರೆ. ಈಕೆಯೆ ನೌಕರರ ಸಂಘದ ಮುಖ್ಯಸ್ಥೆ. ಈಕೆ ಮನಸ್ಸು ಮಾಡಿದರೆ ಯಾರ ವಿರುದ್ಧ ಬೇಕಾದರು ಯಾರನ್ನಾದರೂ ಎತ್ತಿ ಕಟ್ಟುತ್ತಾಳೆ. ಕಚೇರಿಯಲ್ಲಿ ಈಕೆಯ ಮಾತು ಕೇಳಲಿಲ್ಲವೆಂದರೆ ಅವರಿಗೆ ಉಳಿಗಾಲವಿಲ್ಲ. ಇದಕ್ಕೆ ಒಂದು ಘಟನೆಯ ನಿದರ್ಶನವೂ ಇದೆ. ಇದು ಸುಮಾರು ಹತ್ತು ವರ್ಷಗಳ ಹಿಂದಿನ ಮಾತಿದು. ಆ ದಿನಗಳಲ್ಲಿ ಬೀದಿ ನಾಯಿಗಳನ್ನು ವಿಷ ಹಾಕಿ ಕೊಲ್ಲುತ್ತಿದ್ದೆವು. ಈಗಿನಂತೆ ನಿಯಂತ್ರಣವಿರಲಿಲ್ಲ. ಆಗಿನ ಕಾಲದಲ್ಲಿ ಒಂದು ದಿನ ಅನಧಿಕೃತ ಕಡತಕ್ಕೆ ಸಹಿ ಹಾಕಲು ಕಚೇರಿಯ ಅಧಿಕಾರಿ ಒಬ್ಬರು ನಿರಾಕರಿಸಿ ತಿರಸ್ಕರಿಸಿದ್ದರು. ಇದರಿಂದ ಗೌರಮ್ಮ ಬಹಳ ಕೋಪಗೊಂಡಿದ್ದಳು. ಸಮಯಕ್ಕೆ ಹೊಂಚು ಹಾಕಿಸಿ ಕೆಲವರನ್ನು ಪ್ರೇರೇಪಿಸಿ, ಉದ್ರೇಕಿಸಿ ಕೆಲವು ನೌಕರರನ್ನು ಎತ್ತಿಕಟ್ಟಿ ಕಚೇರಿಯ ಶೌಚಾಲಯದಲ್ಲಿ ಉಸಿರಗಟ್ಟಿಸಿ ಆ ಅಧಿಕಾರಿಯನ್ನು ಕೊಲೆಮಾಡಿಸಿದ್ದಳು. ನಂತರ ಅದೇ ದಿನ ಬೀದಿ ನಾಯಿಗಳನ್ನು ನಗರಸಭೆಯಿಂದ ಸಾಗಿಸುವಾಗ ಅವರ ಹೆಣವನ್ನು ನಾಯಿಗಳ ಮಧ್ಯೆ ಸಾಗಿಸಲಾಯಿತು. ಸಾಮಾನ್ಯವಾಗಿ ಸತ್ತ ನಾಯಿಗಳನ್ನು ಹೂತು ಹಾಕುತ್ತಿದ್ದೆವು. ಆದರೆ ಆ ದಿನ ಮಾತ್ರ ನಾಯಿಗಳನ್ನು ಸುಟ್ಟು ಹಾಕಿದರು. ಕಾರಣ ಅದರಲ್ಲಿ ಆ ಅಧಿಕಾರಿ ಹೆಣವೂ ಸುಟ್ಟು ಹೋಗಲಿ ಎನ್ನುವುದಾಗಿತ್ತು! ನಂತರ ಆ ಅಧಿಕಾರಿ ಊರಿಗೆ ಹೋದವನು ಬರಲೇ ಇಲ್ಲ ಎಂದು ಹಾಗು ಕಚೇರಿಯಲ್ಲಿ ಸಾಕಷ್ಟು ಅವ್ಯವಹಾರ ಮಾಡಿ ತಲೆಮರೆಸಿಕೊಂಡಿದ್ದಾನೆಂದು ಅಪಪ್ರಚಾರಪಡಿಸಲಾಯಿತು. ಹೀಗೆ ಗೌರಮ್ಮನ ಎದುರು ಹಾಕಿಕೊಂಡು ಬಾಳುವುದು ಅಸಾಧ್ಯ. ಆಕೆಗೆ ಎಲ್ಲರ ವೀಕ್ನೆಸ್ ಕೂಡ ಗೊತ್ತಿದೆ. ಅದೇ ಉಪಯೋಗಿಸಿ ಬೇರೆಯವರ ಮೂಲಕ ಬ್ಲಾಕ್ ಮೇಲ್ ಮಾಡಿಸುತ್ತಾಳೆ. ಈಕೆಯ ಅಟ್ಟಹಾಸಕ್ಕೆ ಬೆದರಿ ಒಂದಲ್ಲ ಒಂದು ಕಡತಕ್ಕೆ ಸಹಿ ಹಾಕಿ ಎಲ್ಲರೂ ಜೀವಂತ ಶವವಾಗಿ ಬದುಕುತ್ತಿದ್ದಾರೆ ಸರ್. ಅದರಲ್ಲಿ ನಾನೂ ಕೂಡ.
"ಒಂದೇ ಕಚೇರಿಯಲ್ಲಿ ಭ್ರಷ್ಟಾಚಾರಿ 25 ವರ್ಷ ಇದ್ದರೆ ಇನ್ನೇನು ಆಗುತ್ತೆ? ಕೊಲೆಯೂ ಆಗುತ್ತೆ. ಬೀದಿ ಹೆಣವೂ ಆಗಬೇಕಾಗುತ್ತದೆ" ಎಂದು ಬೇಸರಿಸುತ್ತಲೇ ತನಿಖಾಧಿಕಾರಿಯವರು ಸರ್ಕಲ್ ಇನ್ಸ್ಪೆಕ್ಟರ್ ರವರಿಗೆ ಆದೇಶಿಸುತ್ತಾರೆ. ನಾಳೆಯೆ ಈ ಕಂದಾಯಾಧಿಕಾರಿ ಹೇಳಿಕೆಯ ಮೇಲೆ ಆ ಗೌರಮ್ಮನ ಮೇಲೆ ದೂರು ದಾಖಲಿಸಿ ಎನ್ನುತ್ತಾರೆ.
ಇತ್ತ ಹೊರಗಡೆ ಸುರಿಯುತ್ತಿರುವ ಮಳೆಯಂತೂ ಇನ್ನು ಬಿರುಸಾಗಿ ಸುರಿಯುತ್ತಿದೆ. ಠಾಣೆಯ ಮೇಲ್ಛಾವಣಿಯ ಹಂಚಿನ ಸಂದಿಯಿಂದ ಒಂದೆರಡು ಹನಿ ನೀರು ಒಳ ಜಿನುಗಿದವು. ಗುಡುಗು, ಮಿಂಚು, ಗಾಳಿ ಬಹಳ ಜೋರಾಗಿದೆ. ಕಿಟಕಿಯಿಂದ ಹೊರಗಡೆ ನೋಡುತ್ತಾ ತನಿಖಾಧಿಕಾರಿಯವರು ನಗರಸಭೆಯ ಕಂದಾಯಾಧಿಕಾರಿಯನ್ನು ಪ್ರಶ್ನಿಸುತ್ತಾರೆ. ಆ ಶ್ರೀಕರನ ಬಾಸ್ ಎಂದರೆ ಯಾರು? ಆತ ಏನು ಮಾಡುತ್ತಾನೆ?
ಇತ್ತ ಕಂದಾಯಾಧಿಕಾರಿ ಉತ್ತರಿಸದೇ ಮೌನಿಯಾಗುತ್ತಾನೆ. ಮತ್ತೆ ತನಿಖಾಧಿಕಾರಿ ಕೇಳುತ್ತಾರೆ. ಉತ್ತರ ಕಂದಾಯಾಧಿಕಾರಿಯಿಂದ ಬರುವುದೇ ಇಲ್ಲ. ಆಗ ಸರ್ಕಲ್ ಇನ್ಸ್ಪೆಕ್ಟರ್ ಕಡೆಗೆ ನೋಡುತ್ತಾರೆ. ವಿಚಾರ ಅರಿತ ಅವರು ತನಿಖಾಧಿಕಾರಿಯವರ ಕಿವಿಯಲ್ಲಿ ಮೆತ್ತನೆ ನುಡಿಯುತ್ತಾರೆ.
ಈಗ ತನಿಖಾಧಿಕಾರಿ ರೋಶದಲ್ಲಿ ಗುಡುಗುತ್ತಾರೆ. ಯಾರೇ ಆದರೂ ನಮಗೇನು? ನಾವು ನಮ್ಮ ಕೆಲಸ ಮಾಡಬೇಕು. ಆತ ಸಮಾಜ ಸೇವಕ, ಪಾಲಕ ಎನ್ನುವ ಎಂತಹ ಮೋಸದ ಮುಖವಾಡ ಹಾಕಿ ಕುಳಿತರು ನೀವು ಈ ಕಂದಾಯಾಧಿಕಾರಿ ಹೇಳಿಕೆಯ ಆಧಾರದಲ್ಲಿ 68 ಜನರ ಸಾವಿಗೆ ಕಾರಣರಾದ ಎಲ್ಲರ ಮೇಲು ಬೆಳಿಗ್ಗೆ 10 ಗಂಟೆಯೊಳಗೆ ಎಫ್.ಐ.ಆರ್ ದಾಖಲಿಸಿ ಅವರನ್ನು ವಿಚಾರಣೆಗೆ ಕಸ್ಟಡಿಗೆ ತೆಗೆದುಕೊಳ್ಳಿ ಎಂದು ಗದರುತ್ತಾರೆ. ಇದನ್ನು ಕೇಳಿ ಠಾಣೆಯಲ್ಲೂ ಒಂದು ಸಂಚಲನವಾಗುತ್ತದೆ. ಕಂದಾಯಾಧಿಕಾರಿ ಈ ಮಾತು ಕೇಳುತ್ತಲೆ ಪ್ರಜ್ಞೆತಪ್ಪಿದಂತಾಗುತ್ತಾನೆ..
ಭಾಗ-14
ತುಸು ಸಮಯದ ನಂತರ ಮತ್ತೆ ವಿಚಾರಣೆ ಶುರುವಾಗುತ್ತದೆ. ತನಿಖಾಧಿಕಾರಿ ಮತ್ತೆ ಕಂದಾಯಾಧಿಕಾರಿಯನ್ನು ಪ್ರಶ್ನಿಸುತ್ತಾರೆ. ಮುಂದೆ ಮತ್ತೆ ಯಾವಾಗ ಕೊಲೆ ಮಾಡಿದ್ದು? ಯಾರನ್ನು?
ಕಂದಾಯಾಧಿಕಾರಿ ನುಡಿಯುತ್ತಾನೆ. ಸೀನಪ್ಪ ಎನ್ನುವವರನ್ನು ಕೊಂದಿದ್ದು. ಅವರ ಖಾತೆಯು ನಗರಸಭೆಯಲ್ಲಿ ಸುಮಾರು 100 ವರ್ಷಗಳ ಹಿಂದಿನಿಂದಲೇ ನಮ್ಮ ಕಚೇರಿ ದಾಖಲೆಯಲ್ಲಿತ್ತು. ಈ ಆಸ್ತಿಗೆ ಯಾವುದೇ ರೀತಿಯ ಮೂಲ ದಾಖಲೆಗಳು ಅಂದರೆ ಆಸ್ತಿ ಮಾಲಿಕತ್ವದ ಹಕ್ಕನ್ನು ರುಜುವಾತು ಪಡಿಸುವ ಯಾವುದೆ ದಾಖಲೆಗಳು ಇರಲಿಲ್ಲ. ಇಂತಹ ಸಂದರ್ಭದಲ್ಲಿ ನಗರಸಭೆಯ ಖಾತೆಯೆ ದಾಖಲೆಯಂತೆ ನಿರ್ವಹಿಸಲಾಗುತ್ತದೆ. ಮೂಲ ಹುಡುಕುತ್ತಾ ಹೋದರೆ ಏನು ಅಸ್ತಿತ್ವವು ಕಂಡು ಬರುವುದಿಲ್ಲ. ಯಾರಿಂದ ಯಾರಿಗೆ ಬಂದಿದ್ದು ಇಲ್ಲವೇ ನೂರಾರು ವರ್ಷಗಳ ಹಿಂದೆಯೇ ಆಗ ಆಳ್ವಿಕೆ ಮಾಡುತ್ತಿದ್ದ ರಾಜರು ಬಳುವಳಿಯಾಗಿ ನೀಡಿದ್ದೆ? ಇಲ್ಲವೇ ಸರ್ಕಾರವೇ ಮಂಜೂರಾತಿ ನೀಡಿದ್ದೇ? ಎನ್ನುವುದೇ ತಿಳಿದು ಬರುವುದಿಲ್ಲ. ಇದು ನಮ್ಮ ಪಂಚಾಯತಿ ಹುಟ್ಟುವುದಕ್ಕಿಂತಲು ಮೊದಲಿನಿಂದಲೇ ಇರುವಂತಹ ಆಸ್ತಿ. ಇಂತಹ ಖಾತೆಗಳು ಎಲ್ಲ ಊರಲ್ಲೂ ಇರುತ್ತವೆ. ಊರಿದ್ದರೆ ತಾನೆ ಪಂಚಾಯತ್ ಆಗುವುದು. ಹಾಗಾಗಿ ಸಾಮಾನ್ಯವಾಗಿ ಪಂಚಾಯತ್ ರಚನೆಯಾದಾಗ ಸಾಮಾನ್ಯವಾಗಿ ಇಂತಹ ಖಾತೆಗಳನ್ನು ಮೊದಲು ಪುಸ್ತಕದಲ್ಲಿ ದಾಖಲು ಮಾಡಿ ಅಂತಹ ಭೂ ಮಾಲಿಕರಿಂದ ಆಸ್ತಿ ತೆರಿಗೆಯನ್ನು ವಸೂಲು ಮಾಡಿಕೊಂಡು ಊರನ್ನು ನಿರ್ವಹಣೆಮಾಡುತ್ತಾ ಬರುವುದು ರೂಢಿಯಾಗಿತ್ತು. ನಂತರದಲ್ಲಿ ಹಿಂದು ಕೂಡು ಕುಟುಂಬ ಪದ್ದತಿಗಳು ವಿಭಜನೆಯಾಗುತ್ತಾ ಹೋದಂತೆ ಕುಟುಂಬದಲ್ಲಿ ವಾರಸುದಾರರು ಬದಲಾಗುತ್ತಾ ಹೋಗುತ್ತಾರೆ. ಅಜ್ಜನ ಆಸ್ತಿಯು ಮರಿ ಮೊಮ್ಮೊಕ್ಕಳು ಅನುಭವಿಸುತ್ತಾ ಹಾಗೆಯೇ ಉಳಿದಿರುತ್ತದೆ. ಇಂಹವುಗಳಿಗೆ ಖಾತೆ ಬದಲಾಯಿಸುವಾಗ ಆಸ್ತಿಯು ಯಾರ ಹೆಸರಲ್ಲಿ ಖಾತೆಯಾಗಿತ್ತೊ ಅವರು ತೀರಿ ಹೋದ ನಂತರ ಅವರ ಮಕ್ಕಳಿಗೆ ಖಾತೆ ಮಾಡುತ್ತಾ ಹೋಗುವುದು ರೂಢಿಯಾಗಿದೆ. ಆದರೆ ಈ ಸೀನಪ್ಪನ ಪ್ರಕರಣದಲ್ಲಿಯೂ ಸಹಾ ಹಾಗೆಯೆ ಆಗಿದೆ. ಆದರೆ ಅವರ ಕುಟುಂಬದ ಸದಸ್ಯರೆಲ್ಲ ಸುಮಾರಷ್ಟು ಜನರು ದೇಶ ಬಿಟ್ಟು ಉದ್ಯೋಗವನ್ನು ಅರಸುತ್ತಾ ಬೇರೆಡೆಗೆ ಹೋಗಿದ್ದಾರೆ. ಸಹಜವಾಗಿ ಸೀನಪ್ಪ ಒಬ್ಬರೆ ಊರಲ್ಲಿ ಉಳಿದಿದ್ದಾರೆ. ಊರ ದೇವರ ಗುಡಿಯ ಅರ್ಚಕರಾಗಿ ಸೇವೆಸಲ್ಲಿಸುತ್ತಿದ್ದರು. ಇವರಿಗು ಸಾಕಷ್ಟು ವಯಸ್ಸಾಗುತ್ತ ಬಂದಿತು. ಇವರ ಮಕ್ಕಳು ಸಹ ವಿದ್ಯಾಭ್ಯಾಸ ಮುಗಿಸಿ ಅಮೇರಿಕಾದಲ್ಲಿ ಕೆಲಸಕ್ಕಾಗಿ ಹೋಗಿದ್ದಾರೆ. ಇಲ್ಲಿ ಊರಲ್ಲಿ ವಯೋವೃದ್ಧ ಸೀನಪ್ಪ ದಂಪತಿಗಳು ಮಾತ್ರವೆ ವಾಸವಾಗಿದ್ದರು. ಈ ಆಸ್ತಿಯು ಊರಿನ ಮುಖ್ಯ ಹೆದ್ದಾರಿಯಲ್ಲಿ ಬರುತ್ತಿದೆ. ಇದರ ಮೇಲೆ ಬೆಂಗಳೂರಿನ ಹೋಟೆಲ್ ಉದ್ಯಮಿಯೊಬ್ಬರ ಕಣ್ಣು ಬೀಳುತ್ತದೆ. ನಮ್ಮೂರು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದರಿಂದ ಇಲ್ಲಿ ಹೋಟೆಲ್ ವ್ಯವಹಾರಕ್ಕೆ ಭೂಮಿಯ ಬೇಡಿಕೆ ಸಾಕಷ್ಟಿದೆ. ಈ ವಿಷಯ ರಮೇಶಪ್ಪನ ಮೂಲಕ ನಮಗೆ ಡೀಲ್ ಬಂದಿತು. ನಾವೆಲ್ಲ ಸೇರಿ ಸೀನಪ್ಪನಿಗೆ ಆಸ್ತಿಯನ್ನು ಮಾರುವಂತೆಯು ಇದರಿಂದ ನಿನಗೆ ಅಪಾರವಾದ ಮೊತ್ತ ಬರುತ್ತದೆಂದು ಹೇಳಿದೆವು. ಆದರೆ ಆತ ಕೇಳಲಿಲ್ಲ. ಇದು ನಮಗೆ ಹಿಂದೆ ಪರಂಪರಾಗತವಾಗಿ ಬಂದ ಜಾಗ. ಇದರಲ್ಲಿಯೇ ನಾವು ಬದುಕಬೇಕು. ಈ ಆಸ್ತಿ ಮಾರಿದರೆ ನನ್ನ ಹಿರಿಯರಿಗೆ ನಾನು ಮೋಸಮಾಡಿದಂತೆ ಎಂದು ಆಸ್ತಿ ಮಾರಲು ನಿರಾಕರಿಸಿದ. ಎಷ್ಟೇ ಆಮಿಷವೊಡ್ಡಿದರು ಆತ ಬಗ್ಗಲೇ ಇಲ್ಲ. ಆತನಿಗೆ ಸುಮಾರು 70 ವರ್ಷವಿರಬಹುದು. ಆತನ ಹಠದಿಂದ ರಮೇಶಪ್ಪ ಬಹಳ ಕುಪಿತವಾದ. ಇದೆಲ್ಲವನ್ನು ಅರಿತು ಕುಳಿತಿದ್ದ ನಾವು ಕಚೇರಿ ರೆಕಾರ್ಡ್ ರೂಂ ಕೇಸ್ ವರ್ಕರ್ಗೆ ಹೇಳಿ ಮೂಲ ಹಿಂದಿನ ವರ್ಷಗಳ ಖಾತೆಯ ಪುಸ್ತಕದಿಂದ ಆ ಖಾತೆಯನ್ನು ತೆಗೆದು ಹಾಕಲು ಹೇಳಿದೆವು ಸರ್.
ಮೂಲ ಖಾತೆಯನ್ನೇ ತೆಗೆಯುವುದು ಅಂದರೆ ಹೇಗೆ?
ಹಳೆಯ ಪುಸ್ತಕದಲ್ಲಿನ ಖಾತೆಯಿರುವ ಪುಟವನ್ನು ಹರಿದು ಹಾಕುವುದು. ನಂತರ ಅದೇ ರೀತಿಯ ಇನ್ನಷ್ಟು ಖಾಲಿ ಮಾಸಿದ ಹಳೆಯ ಪುಸ್ತಕಗಳು ನಮ್ಮ ಬಳಿ ಸಾಕಷ್ಟು ಇವೆ. ಯಾವ ಪುಟವನ್ನು ಹರಿದು ಹಾಕಿದ್ದೇವೊ ಅದೇ ಪುಟವನ್ನು ಇನ್ನೊಂದು ಪುಸ್ತಕದಿಂದ ತಂದು ಜೋಡಿಸಿ ಪುಸ್ತಕಕ್ಕೆ ಹೊಲಿಗೆ ಹಾಕಿಸುತ್ತೇವೆ. ಅಲ್ಲಿ ರಮೇಶಪ್ಪ ಸೂಚಿಸುವ ಹೆಸರನ್ನು ಹ್ಯಾಂಡ್ ವ್ರೈಟಿಂಗ್ ನಿಪುಣರಿಂದ ಬರೆಸುತ್ತೇವೆ. ಕೊನೆಗೆ ನಕಲಿ ಸಹಿಯನ್ನು ಅವರೇ ಹಾಕುತ್ತಾರೆ. ಇಲ್ಲಿಗೆ ಮೂಲ ಖಾತೆ ಪುಸ್ತಕವನ್ನು ಸರಿಪಡಿಸಿಕೊಂಡಂತಾಗುತ್ತದೆ. ನಂತರ ನಾವು ಹೊಸ ಖಾತೆ ಪುಸ್ತಕಗಳನ್ನು ಸಹಾ ಇದೇ ರೀತಿ ತಿದ್ದುಪಡಿಮಾಡುತ್ತಾ ಹೋಗುತ್ತೇವೆ. ಇದೆಲ್ಲವು ರೆಕಾರ್ಡ್ ರೂಂ ಕೇಸ್ ವರ್ಕರ್ ನೋಡಿಕೊಳ್ಳುತ್ತಾನೆ. ನಂತರ ಕೆಲವು ದಿನಗಳಲ್ಲಿ ಆ ಖಾತೆಯೆ ಇಲ್ಲದಂತೆ ಮಾಡಿದೆವು. ಕೊನೆಗೊಂದು ದಿವಸ ಸೀನಪ್ಪ ಯಾವುದೋ ಊರಿಗೆ ಹೋಗುತ್ತಿದ್ದಾನೆ ಎನ್ನುವುದು ನಮಗೆ ಗಮನಕ್ಕೆ ಬಂದಿತು. ಆಗ ಊರಲ್ಲಿ ಬೇರೆ ಜೋರಾಗಿ ಮಳೆ ಸುರಿಯುತ್ತಿತ್ತು. ಇದೇ ಸಮಯವನ್ನು ಉಪಯೋಗಿಸಿಕೊಂಡು ಊರೆಲ್ಲ ಮಲಗಿದಾಗ ನಾವು ಸೀನಪ್ಪನ ಮನೆಯನ್ನು ರಾತ್ರಿ ಸಮಯದಲ್ಲಿ ಜೆ.ಸಿ.ಬಿಯಲ್ಲಿ ಉರುಳಿಸಿದೆವು ಸರ್.
ಏನು ಹಳೆಯ ರೆಕಾರ್ಡ್ ಇಷ್ಟು ಸುಲಭವಾಗಿ ತಿದ್ದುಪಡಿಮಾಡಿ ಮನೆಯನ್ನು ಕೆಡವಿ ಹಾಕಿದ್ದೀರ? ಇದೆಲ್ಲವನ್ನು ಮಾಡುವಷ್ಟು ಧೈರ್ಯ ಆ ರೆಕಾರ್ಡ್ ರೂಂ ನೋಡಿಕೊಳ್ಳುವ ಗುಮಾಸ್ತನಿಗೆ ಇದೆಯೆ? ನಂತರ ಏನಾಯ್ತು?
ಹೌದು ಸರ್, ಆ ರೆಕಾರ್ಡ್ ರೂಂ ಗುಮಾಸ್ತ ಸಹಾ ಗೌರಮ್ಮನಂತೆಯೆ ಬಹಳ ಭಯಂಕರವಾದಿ. ತಿದ್ದುಪಡಿಮಾಡುವುದಕ್ಕೆ ಎಕ್ಸಪರ್ಟ್ಗಳನ್ನು ಈತ ಮುದ್ರಾಸ್ನಿಂದ ಸಂಪರ್ಕಿಸುತ್ತಾನೆ. ಅವರು ವಿವಿಧ ರೀತಿಯ ಕೆಮಿಕಲ್ಗಳನ್ನು ಹಾಕಿ ಪುಸ್ತಕಗಳಲ್ಲಿ ಬರೆದ ಶಾಯಿಯನ್ನು ಕರಗಿಸುತ್ತಾರೆ. ನಂತರ ನಮಗೆ ಬೇಕಾದಂತೆ ಅದೇ ಜಾಗದಲ್ಲಿ ಬರೆದುಕೊಡುತ್ತಾರೆ. ಟೈಟಲ್ ಡೀಡ್ ಇಲ್ಲದೆ ಇರುವಂತಹ ಆಸ್ತಿಗಳಿಗೆ ಈ ರೀತಿಯಲ್ಲಿ ಮೋಸ ಮಾಡುವುದಕ್ಕೆ ರೆಕಾರ್ಡ್ ರೂಂ ಗುಮಾಸ್ತನೇ ರಾಜನಿದ್ದಂತೆ. ಈತನನ್ನು ಚೆನ್ನಾಗಿ ನೋಡಿಕೊಂಡರೆ ಸಾಕು. ಕೆಲವೇ ದಿನಗಳಲ್ಲಿ ನಾವು ಹೇಳಿದ ಕೆಲಸ ಆದಂತೆಯೇ ಸರ್.
ನಿಮ್ಮಲ್ಲಿ ಕೆಲಸಗಾರರು ಎನ್ನುವುದಕ್ಕಿಂತ ಕ್ರಿಮಿನಲ್ಗಳು ಇದ್ದಾರೆ ಎಂದರೆ ತಪ್ಪಿಲ್ಲ. ಲಜ್ಜೆಗೆಟ್ಟ ನಿಮ್ಮ ಬದುಕನ್ನು ಕಂಡರೆ ಅದೆಂತಹ ಅಸಹ್ಯ! ಸೀನಪ್ಪನ ಮನೆ ಕೆಡವಿದ ನಂತರ ಏನಾಯ್ತು?
ರಾತ್ರಿ ಅತಿಯಾದ ಮಳೆಗೆ ಮನೆ ಬಿದ್ದು ಹೋಗಿದೆಯೆಂದು ಇದನ್ನು ಬೇಗನೆ ತೆರುವುಗೊಳಿಸಬೇಕು. ಇಲ್ಲದೆ ಹೋದರೆ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗುತ್ತದೆಂದು ಜನರಲ್ಲಿ ಬಿಂಬಿಸಿದೆವು. ಅದು ನಿಜವೂ ಆಗಿತ್ತು. ಮನೆ ಕುಸಿದು ಅಕ್ಕ ಪಕ್ಕದ ಮನೆಗಳಿಗೆ ತೊಡಕಾಗುವ ಸಂಭವವಿದ್ದುದ್ದರಿಂದ ಜನರು ಸಮ್ಮತಿಸಿದರು. ಅಕ್ಕಪಕ್ಕದವರಿಂದ ಅರ್ಜಿಯನ್ನು ಪಡೆದು ಕೂಡಲೆ ಮನೆಯನ್ನು ತೆರವುಗೊಳಿಸಿ ಖಾಲಿ ಜಾಗವನ್ನು ಮಾಡಿದೆವು. ಕೆಲವು ದಿನಗಳ ನಂತರ ಊರಿಗೆ ಬಂದ ಸೀನಪ್ಪ ಮನೆ ಮಳೆಗೆ ಬಿದ್ದಿದೆಯೆಂದೆ ರೋಧಿಸುತ್ತಾ ರಸ್ತೆಯಲ್ಲಿ ನಿಂತು ಕಣ್ಣೀರಲ್ಲಿ ನಡುಗುತ್ತ ತನ್ನ ಹಿರಿಯರು ಬಾಳಿ ಬದುಕಿದ ಮನೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಜನರೆಲ್ಲ ಸಂತೈಸಿದರು ಆತ ಮಾತ್ರ ತುಸುವು ಸಮಾಧಾನಹೊಂದಲೇ ಇಲ್ಲ. ಇನ್ನು ಆತನ ವಯೋವೃದ್ಧ ಹೆಂಡತಿಯ ನೋವಿನ ಪಾಡನ್ನು ನೋಡಲಾಗುತ್ತಿರಲಿಲ್ಲ. ಕೊನೆಗೆ ವಿಧಿಯಿಲ್ಲದೇ ಆ ವಯೋವೃದ್ಧ ದಂಪತಿಗಳು ದೇವರಿಗೆ ಪೂಜಿಸುತ್ತ ಊರ ಗುಡಿಯಲ್ಲಿಯೆ ವಾಸವಾದರು. ಕೆಲವು ದಿನಗಳ ನಂತರ ಬೆಂಗಳೂರಿನ ಭೂ ಮಾಫಿಯಾದವರು ಸೀನಪ್ಪನ ಜಾಗದಲ್ಲಿ ಇಟ್ಟಿಗೆ, ಮರಳು, ಸ್ಟೀಲ್, ಕಲ್ಲುಗಳನ್ನು ಸಂಗ್ರಹಿಸಲು ಶುರುಮಾಡಿದರು. ಇದನ್ನು ಕೇಳಿ ಸೀನಪ್ಪ ಓಡೋಡಿ ಬಂದು ವಿಚಾರಿಸಿದ. ಖಾಲಿ ಜಾಗವಲ್ಲವೆ ಅದಕ್ಕೆ ಮಟೀರಿಯಲ್ ಸಂಗ್ರಹಣೆಗೆ ಉಪಯೋಗಿಸಿದ್ದೇವೆ. ಕೆಲವು ದಿನಗಳ ನಂತರ ಖಾಲಿಮಾಡಿಕೊಡುತ್ತೇವೆ. ಅಲ್ಲಿಯವರೆಗೆ ನಿಮಗೆ ನೆಲದ ಬಾಡಿಗೆಯನ್ನು ನೀಡುತ್ತೇವೆ ಎಂದರು. ಮೊದಲೆ ಹಣದ ತೊಂದರೆಯಲ್ಲಿದ್ದ ಸೀನಪ್ಪ ಒಪ್ಪಿದ. ನಿವೇಶನದ ಸುತ್ತಲೂ ಬೃಹತ್ ಬೇಲಿಯನ್ನು ಹಾಕಿಕೊಂಡು ಅವರು ಒಳಗಿನಿಂದಲೆ ಹೋಟೆಲ್ ಕಟ್ಟಡ ಆರಂಭಿಸಿದರು. ಇದು ಸೀನಪ್ಪನಿಗೆ ಗಮನಕ್ಕೆ ಬೇಗ ಬರಲೇ ಇಲ್ಲ ಸರ್. ಕೊನೆಗೊಂದು ದಿನ ಆತನಿಗೆ ವಿಚಾರವನ್ನು ಯಾರೋ ಸರಿಯಾಗಿ ಹೇಳಿಬಿಟ್ಟರು. ಆಗ ತನ್ನ ಜಾಗದ ಬಳಿ ಹೋಗಿ ಸೀನಪ್ಪ ಜೋರಾಗಿ ಕೂಗಾಡುತ್ತಾ ಜನರನ್ನು ಸೇರಿಸಿದ ಸರ್.
ಆಗ ಏನಾಯ್ತು?
ನಾವು ಮೊದಲೇ ಯೋಜಿಸಿದಂತೆ ನಟಿಸಲಾರಂಭಿಸಿದೆವು. ಸೀನಪ್ಪನಿಂದ ಜಾಗದ ಹಕ್ಕು ಮಾಲಿಕತ್ವ ನಿರೂಪಿಸುವ ದಾಖಲೆಗಳನ್ನು ಕೇಳಿದೆವು. ಆದರೆ ಅದೆಲ್ಲವನ್ನು ನಾವೆ ಮನೆಯನ್ನು ಕೆಡವಿಹಾಕುವ ಮೂಲಕ ನಾಶಮಾಡಿದ್ದೇವೆ. ತಂದುಕೊಡು ಅಂದರೆ ಆತ ತಂದುಕೊಡಲು ಸಾಧ್ಯವಿಲ್ಲವೆನ್ನುವುದು ಗೊತ್ತಿದ್ದೇ ನಾವು ಆತನಿಗೆ ಕೇಳಿದೆವು! ಆತ ಅಸಹಾಯಕನಾಗಿ ಅದು ತನ್ನ ಬಳಿ ಇಲ್ಲ ಎಂದ. ಮಧ್ಯೆ ಪ್ರವೇಶಿಸಿದ ಗೌರಮ್ಮ ಕುಟುಕಿದಳು. "ಅಯ್ಯೋ ಮನೆ ನಿಮ್ಮದಾದ ಮೇಲೆ ಒಂದು ಕಂದಾಯ ಕಟ್ಟಿದ ರಶೀದಿಯು ಇಲ್ಲವೇ" ಎಂದು ಉದ್ಗರಿಸಿದಳು. ಅಷ್ಟರಲ್ಲಿ ರಮೇಶಪ್ಪನ ಸಹಚರನೊಬ್ಬ ನುಡಿದ "ಇವರ ಕುಟುಂಬದವರು ಅಮೇರಿಕಾದಿಂದ ಹಿಂದೆ ಊರಿಗೆ ಬಂದಾಗ ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಯಾರಿಗೊ ಆಸ್ತಿ ಮಾರಿದ್ದಾರೆಂದು ಮಾತಿದೆ" ಎಂದ. ಇದನ್ನು ಹೇಳುತ್ತಿದ್ದಂತೆ ಅತ್ತಕಡೆಯಿಂದ ಹೋಟೆಲ್ ಕಟ್ಟಿಸುತ್ತಿದ್ದ ಬೆಂಗಳೂರಿನ ಭೂ ಮಾಪಿಯಾದ ಕಿಂಗ್ ನಗರಸಭೆಯಲ್ಲಿ ಒಳಬಂದ. ತನ್ನ ಕೈಲಿದ್ದ ದಾಖಲೆಗಳನ್ನು ತೋರಿಸಿದ. ಹಲವು ವರ್ಷಗಳ ಹಿಂದೆಯೇ ಇದು ನಮ್ಮದೇ ಸ್ವತ್ತು ಎನ್ನುತ್ತಾ ವಾದಿಸಿದ. ಎಲ್ಲವು ನಮ್ಮ ರೆಕಾರ್ಡ್ ರೂಂ ಗುಮಾಸ್ತನೆ ಮಾಡಿಕೊಟ್ಟ ನಕಲಿ ದಾಖಲೆಯೆನ್ನುವುದು ನಮಗೆ ಮಾತ್ರವೇ ಗೊತ್ತಿತ್ತು. ಇದನ್ನು ಕೇಳುತ್ತಿದ್ದಂತೆ ಸೀನಪ್ಪ ಪ್ರಜ್ಞೆ ತಪ್ಪಿಬಿದ್ದ.
ಎಂತಹ ನೀಚ ಕೆಲಸ. ಮುಂದೆ ಏನಾಯ್ತು?
ಕೆಲವು ದಿನಗಳ ನಂತರ ಸೀನಪ್ಪನ ಪರವಾಗಿ ಹಲವರು ವಿಚಾರಿಸುತ್ತಾ ನಮ್ಮ ಕಚೇರಿಗೆ ಬಂದರು. ಇನ್ನು ಸೀನಪ್ಪ ಬದುಕಿದ್ದರೆ ಕಷ್ಟ ಎನ್ನುವುದು ನಮಗೆ ಅರಿವಾಯ್ತು. ಅದಕ್ಕೆ ಮತ್ತೆ ನಮ್ಮ ನಿಪುಣ ಚಾಲಾಕಿಯಾದ ರೆಕಾರ್ಡ್ ರೂಂ ಕೇಸ್ ವರ್ಕರ್ ಒಂದು ದಿನ ದೇವಸ್ಥಾನಕ್ಕೆ ಬಹಳ ದೊಡ್ಡ ದೈವ ಭಕ್ತನಂತೆ ಹೋದ. ಅಲ್ಲಿ ಬಹಳ ಬುದ್ಧಿವಂತಿಕೆ ಮೆರೆದ. ಪ್ರಸಾದಕ್ಕೆಂದು ತೆಗೆದುಕೊಂಡು ಹೋದ ಹಣ್ಣುಗಳಲ್ಲಿ ವಿಷವನ್ನು ಚೆನ್ನಾಗಿ ಬೆರೆಸಿದ್ದ. ಪೂಜೆ ಮುಗಿದ ನಂತರ ಆ ಪ್ರಸಾದವನ್ನು ಸೀನಪ್ಪನಿಗೆ ನೀಡಿದ. ಅದನ್ನು ತಿಂದ ಆ ವಯೋವೃದ್ಧ ದಂಪತಿಗಳು ತೀರಿಹೋದರು. ಕೊನೆಗೆ ಹೋಟೆಲ್ ಕಟ್ಟಡವನ್ನು ಬೇಗನೆ ಕಟ್ಟಿ ಮುಗಿಸಿದರು. ಅದನ್ನು ಪ್ರಶ್ನಿಸಲು ಯಾರೆಲ್ಲಾ ಮುಂದಾಗಿದ್ದರೊ ಅವರನ್ನೆಲ್ಲ ರಮೇಶಪ್ಪ ಮತ್ತು ಶ್ರೀಕರ ತಮ್ಮ ಪ್ರಭಾವದಿಂದ ತಣ್ಣಗಾಗಿಸಿದರು ಸರ್.
ಅಂದರೆ ನಿಮ್ಮಲ್ಲಿ ಹಣಕ್ಕೆ ಯಾರನ್ನು ಬೇಕಾದರು ಕನಿಕರವಿಲ್ಲದೆ ಕೊಲ್ಲುತ್ತೀರಿ ಅಲ್ಲವೇ?
ನಿಜ ಸರ್. ಗೌರಮ್ಮನ ಅಣತಿಯಂತೆ ರೆಕಾರ್ಡ್ ರೂಂ ಗುಮಾಸ್ತನು ಕಾರ್ಯ ನಿರ್ವಹಿಸುತ್ತಾನೆ.
ಅಂದರೆ ನೀವು ಸರ್ಕಾರ ಹೇಳಿದಂತೆ ಮಾಡದೇ ಆ ಗೌರಮ್ಮ ಹೇಳಿದಂತೆ ಮಾಡುತ್ತೇವೆ ಎನ್ನುತ್ತೀರಲ್ಲ. ನಿಮಗೆ ಕ್ಷಮೆಯೆನ್ನುವುದು ಈ ಭೂಮಿಯಲ್ಲಿ ಅಲ್ಲ. ಎಲ್ಲಿಯೂ ಸಿಗುವುದಿಲ್ಲ! ನೀವು ಮಾಡಿದ ಪಾಪದ ಕಾರ್ಯಕ್ಕೆ ಕೊನೆಯೆ ಇಲ್ಲ. ಆಕಾಶಕ್ಕೆ ಏಣಿ ಹಾಕುವಷ್ಟಿವೆ! ನಿಮ್ಮ ಒನ್ನೊಂದು ಮಾತುಗಳು, ಕೃತ್ಯಗಳು ಅಸಹ್ಯದ ಸಲಾಕೆಯಿಂದ ಸತ್ಯದ ನೆತ್ತಿಗೆ ಹೊಡೆದಂತಿವೆ. ತೂಥ್. ಇನ್ನೂ ಏನೇನು ಮಾಡುತ್ತಾನೆ. ನಿಮ್ಮ ರೆಕಾರ್ಡ್ ರೂಂ ಗುಮಾಸ್ತ?
ಅವನ ಬಳಿಯಲ್ಲಿಯೆ ಎಲ್ಲಾ ಸರ್ಕಾರಿ ಮಂಜೂರಾತಿಗಳ ಪಟ್ಟಿಯಿರುವುದು. ಆತ ಆ ಪಟ್ಟಿಯನ್ನೇ ತಿದ್ದುಪಡಿಮಾಡಿ ಬದಲಾಯಿಸಿದ್ದಾನೆ. ನಿಜವಾದ ಫಲಾನುಭವಿಗಳನ್ನು ಮರೆಮಾಚಿದ್ದಾನೆ. ಊರು ಬಿಟ್ಟವರು, ಸತ್ತುಹೋದವರ ಹೆಸರನ್ನು ಅಳಿಸಿ ದುಡ್ಡು ಕೊಟ್ಟವರ ಹೆಸರನ್ನು ತನ್ನ ಚಾಲಾಕಿತನದಿಂದ ಹಾಕಿಸಿದ್ದಾನೆ. ಈತನಿಗೆ ಹಕ್ಕು ಮಾಹಿತಿ ಕಾಯ್ದೆಯಲ್ಲಿ ಫಲಾನುಭವಿಗಳ ಪಟ್ಟಿಯನ್ನು ಯಾರು ಕೇಳಿದರು ಕೊಡುವುದಿಲ್ಲ. ಈತನಿಗೆ ಯಾವುದೇ ಅಧಿಕಾರಿಯೆಂದರೂ ಹೆದರಿಕೆಯಿಲ್ಲ. ಮೇಲಾಧಿಕಾರಿಗಳಿಗೆ ಕಂಪ್ಲೇಂಟ್ ನೀಡುತ್ತೇವೆಂದು ಯಾರಾದರೂ ಹೇಳಿದರೆ ಈತ ಕೂಡಲೇ "ನಿಮಗೆ ಅವರ ನಂಬರ್ ಕೊಡುತ್ತೇನೆ ತುಸು ತಾಳಿ" ಎನ್ನುತ್ತಾನೆ. ಈತನ ಮೇಲೆ ಯಾರೇ ಏನೇ ಅಂದರು ಅವರನ್ನು ಊರಲ್ಲಿ ಬದುಕದಂತೆ ಮಾಡುತ್ತಾನೆ. ತನ್ನ ಮೇಲಾಧಿಕಾರಿಗಳಿಗೂ ಸಾಕಷ್ಟು ಹಣ ಮಾಡಿಕೊಟ್ಟಿದ್ದಾನೆ. ಈತನು ಇದೇ ಊರಿನವನೇನು ಅಲ್ಲ. ಆದರೆ ಈತನಿಗೆ ಈ ರೀತಿ ತಿದ್ದುಪಡಿಮಾಡುವ ನಿಪುಣ ತಂತ್ರಜ್ಞರ ಸಂಪರ್ಕವಿದೆ. ಹಾಗಾಗಿ ನಮಗೆಲ್ಲ ಇವನೇ ಹೀರೋ ಇದ್ದಂತೆ ಸರ್.
ಹೂಂ, ನಿಮಗೆ ಇವನು ಹೀರೋ. ಆ ಗೌರಮ್ಮ ಹೀರೋಯಿನ್ ಅಲ್ಲವೇ? ದೇಶಕ್ಕಾಗಿ ಹೋರಾಡಿ ಅಮರದಾದವರು ಇಂದೇನಾದರು ಬದುಕಿದ್ದರೆ ನಿಮ್ಮ ಅಸಹ್ಯದ ಮಾರ್ಗದ ಕಥೆಯನ್ನು ಕೇಳಿದ್ದರೆ ಯಾವುದಕ್ಕಾಗಿ ಬ್ರಿಟೀಷರನ್ನು ದೇಶದಿಂದ ಹೊರಹಾಕಿದ್ದು ಬಡಬಡಾಯಿಸುತ್ತಿದ್ದರು! ಎದೆಬಡಿದುಕೊಂಡು ಸಾಯುತ್ತಿದ್ದರು! ಎಂತಹ ಹಲ್ಕ ಕೆಲಸಮಾಡಿದ್ದೀರಿ. "ಸರ್ಕಾರಿ ಸೇವೆಯೆನ್ನುವ ಪರಿಶುದ್ಧ ಎಳನೀರಿಗೆ ನಿಮ್ಮ ಅಸಹ್ಯ ಮನದ ಚೆರಂಡಿ ನೀರನ್ನು ಚೆಲ್ಲಿ ಇಡೀ ವ್ಯವಸ್ಥೆಯನ್ನು ಕೊಲೆಮಾಡಿದ್ದೀರಿ. ನಿಮಗೆ ಬದುಕುವ ಅರ್ಹತೆಯೇ ಇಲ್ಲ". ಇನ್ನು ನಿಮ್ಮ ಹೀರೋ ಏನೇನು ಮಾಡುತ್ತಾನೆ ಮುಂದುವರೆಸು..
ಆತನಿಗೆ ಸಾಕಷ್ಟು ಹಣ ನೀಡಿದರೆ ಯಾರ ಹೆಸರು ಬೇಕಾದರೂ ಫಲಾನುಭವಿಯ ಪಟ್ಟಿಯಲ್ಲಿ ಇದೆಯೆಂದು ಬರೆದುಕೊಡುತ್ತಾನೆ. ಪಟ್ಟಿಯಲ್ಲಿಯೂ ಕಾಣುವಂತೆ ಮೋಸಮಾಡುತ್ತಾನೆ.
ಹಣ ಎಂದರೆ ಎಷ್ಟು ಕೊಡಬೇಕು?
ಆಸ್ತಿಯ ಮಾರುಕಟ್ಟೆಯ ಬೆಲೆಯ ಶೇ.25 ಕೊಡಬೇಕು ಸರ್. ಆಗ ಎಲ್ಲ ರೀತಿಯ ರೆಕಾರ್ಡ್ ಮಾಡಿಕೊಡುತ್ತಾನೆ. ಸಣ್ಣ ಪುಟ್ಟ ಪ್ರಕರಣವಾದರೂ ಕನಿಷ್ಟ ಒಂದು ಲಕ್ಷವಾದರು ಕೊಡಲೇಬೇಕು. ಇಲ್ಲದೇ ಹೋದರೆ ನಿಮ್ಮ ಹೆಸರು ಫಲಾನುಭವಿಯ ಪಟ್ಟಿಯಲ್ಲಿ ಇಲ್ಲದಂತೆ ಮಾಡುತ್ತಾನೆ ಸರ್.
ಏಯ್, ಅದೇನು ನಿಮ್ಮಲ್ಲಿದ್ದ ಪಟ್ಟಿಯನ್ನು ತಿದ್ದಿದರೆ ಆಗುತ್ತಾ? ನಿಮ್ಮ ಮೇಲಾಧಿಕಾರಿಗಳ ಕಚೇರಿಯಲ್ಲಿಯೂ ಅದರ ಒಂದು ಪ್ರತಿ ಇರುತ್ತದೆ. ಅಷ್ಟೂ ಕಾಮನ್ ಸೆನ್ಸ್ ಇಲ್ಲವೇ? ಜನರನ್ನೇನು ಅಷ್ಟೊಂದು ಅವಿವೇಕಿಗಳು ಎಂದುಕೊಂಡಿದ್ದೀರ? ಯಾರು ಸರಿಯಾಗಿ ವಿಚಾರಿಸಿಲ್ಲ ಇರಬೇಕು.
ಇಲ್ಲ ಸರ್. ಎಲ್ಲಿಯೂ ಸಿಗದಂತೆ ಈತ ಮಾಡಿದ್ದಾನೆ. ಅಲ್ಲಿಂದಲೂ ಆ ಮೂಲ ದಾಖಲೆಗಳನ್ನು ಮಾಯಾ ಮಾಡಿಸಿದ್ದಾನೆ. ಒಬ್ಬ ಅಟೆಂಡರ್ಗೆ ಸಾಕಷ್ಟು ಹಣದ ಆಮಿಷವೊಡ್ಡಿ ಮೇಲಿನ ಕಚೇರಿಯಲ್ಲಿದ್ದ ಮೂಲ ದಾಖಲೆಗಳನ್ನು ಕದ್ದಿದ್ದಾನೆ. ಹಾಗಾಗಿ ಈತನೇ ಊರಿನ ಶೇ25% ನಿವೇಶನಗಳಿಗೆ ಬ್ರಹ್ಮ. ಈತ ಬರೆದಿದ್ದೇ ವಿಧಿ. ನೀವು ಎಲ್ಲಿ ಯಾವ ರೀತಿ ವಿಚಾರಿಸಿದರು ಒಂದು ಸಣ್ಣ ಸುಳಿವೂ ಫಲಾನುಭವಿಯ ಪಟ್ಟಿಯ ಬಗ್ಗೆ ಸಿಗದಂತೆ ಮಾಡಿದ್ದಾನೆ. ಮೇಲಾಧಿಕಾರಿಗಳೇ ಈ ಕಚೇರಿಯಿಂದ ಫಲಾನುಭವಿಯ ಪಟ್ಟಿಯನ್ನು ಕೇಳಿ ಪಡೆಯುವಂತೆ ಮಾಡಿದ್ದಾನೆ! ಈತನ ಬಳಿಯಿರುವ ನಕಲಿ ದಾಖಲೆಯನ್ನೇ ಅವರು ಒಪ್ಪಿ ಇದುವೆ ನಿಜವೆಂದು ಇಟ್ಟುಕೊಂಡಿದ್ದಾರೆ. ಅಂತಹ ಅನಿವಾರ್ಯತೆಯನ್ನು ಅವರಿಗೂ ತಂದಿದ್ದಾನೆ ಸರ್.
ಓಹ್, ಇವನು ಸಾಮಾನ್ಯದವನಲ್ಲ. ಇವನು ಮುಂದೊಂದು ದಿನ ಸಾಯದಂತೆಯೂ ಉಪಾಯ ಹುಡುಕಿಕೊಂಡರೆ ಆಶ್ಚರ್ಯವಿಲ್ಲ! ಇಷ್ಟೆಲ್ಲ ಕೊಳ್ಳೆ ಹೊಡೆದು ಏನು ಮಾಡುತ್ತಾನೆ?
ಸರ್ ಇವನು ದೇಶದ ವಿವಿಧ ಕಡೆ ಆಸ್ತಿಮಾಡಿಕೊಂಡಿದ್ದಾನೆ. ಬೆಂಗಳೂರು, ಪಣಜಿ, ದೆಹಲಿ, ಊಟಿಯಲ್ಲಿ ವೈಭವದ ಬಂಗಲೆಗಳಿವೆ. ಅಲ್ಲಿ ಈತನ ಮೋಜು ಮಸ್ತಿಗೆ ಹರೆಯದ ತರುಣಿಯರನ್ನು ಕರೆಸಿಕೊಳ್ಳುತ್ತಾನೆ. ಈತನಿಗೆ ವಿದೇಶಿ ಹೆಣ್ಣು, ಹೆಂಡ ಎಂದರೆ ಬಹಳ ಪ್ರಿಯ. ಅದಕ್ಕಾಗಿ ವಿದೇಶಗಳಿಗೂ ಹೋಗಿ ಮಜಾಮಾಡಿ ಬರುತ್ತಾನೆ.
ತೂಥ್, ಬೇವರ್ಸಿಗಳಾ. ಇದೆಂತಹ ಬದುಕು. ಸರ್ಕಾರದ ಆಸ್ತಿ ಕಬಳಿಸಿ ಈ ರೀತಿ ಕಚಡ ಕೆಲಸಮಾಡುತ್ತೀರ. ಮನುಜ ರೂಪದಲ್ಲಿರುವ ರಾಕ್ಷಸರು ಅಂದರೆ ಅದು ನೀವೆ. "ರಾಕ್ಷಸರಿಗೆ ನಿಮ್ಮನ್ನು ಹೋಲಿಕೆ ಮಾಡಿದರೆ ಅದು ರಾಕ್ಷಸರಿಗೆ ಅವಮಾನ ಮಾಡಿದಂತೆ! ನೀವು ರಾಕ್ಷಸರಿಗಿಂತಲೂ ತುಸುವು ಮೇಲೆಯೇ. ಅವರಿಗಾದರು ತುಸುವು ಕರುಣೆ ಇರುತ್ತದೆ." ಇನ್ನೂ ಏನೇನು ಮಾಡುತ್ತಾ ಮತ್ತೆ ಮುಂದೆ ಯಾರನ್ನು ಕೊಲೆ ಮಾಡಿದ್ದು ಹೇಳು?
ಒಂದು ದಿನ ಒಬ್ಬಳು ಹೆಂಗಸು ಕಚೇರಿಗೆ ಬಂದಳು. ಆಕೆಯ ಗಂಡ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದ. ಆತ ಪಾಕಿಸ್ತಾನದ ಶೆಲ್ ದಾಳಿಗೆ ತೀರಿಹೋಗಿ ಒಂದು ತಿಂಗಳು ಆಗಿತ್ತು. ಆಕೆಗೆ ಒಂದು ವರ್ಷದ ಮಗುವಿತ್ತು. ಆಕೆಯು ಇನ್ನೂ ಪ್ರಾಯದಲ್ಲಿ ಚಿಕ್ಕವಳು. ಮದುವೆಯಾಗಿ ಎರಡು ವರ್ಷವಾಗಿತ್ತಷ್ಟೇ. ಅವಳಿಗೆ ದುಡಿಮೆಗೆ ಅಂತಾ ಇದ್ದುದ್ದು ತನ್ನ ಗಂಡನ ದುಡಿಮೆಯ ಹಣ. ವಾಸಕ್ಕೆಂದು ಇದ್ದುದ್ದು ಆಕೆಯು ವಾಸವಿರುವ ಗಂಡನ ಮನೆ. ಗಂಡನ ಅಕಾಲಿಕ ಸಾವಿನಿಂದ ಆಕೆಯ ಬಾಳು ಸುಟ್ಟ ಹೂವಂತೆ ಬೂಧಿಯಾಗಿತ್ತು. ಅದೇ ನೋವಲ್ಲಿ ನಡುಗುತ್ತಾ ಆಕೆ ತನ್ನ ಗಂಡನ ಮನೆಯನ್ನು ತನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿಕೊಳ್ಳಲು ಆಕೆ ನಗರಸಭೆಗೆ ಬಂದಳು. ಆಗ ಆಕೆಯ ಸೌಂದರ್ಯದ ಮೇಲೆ ನಮ್ಮ ಕಚೇರಿಯ ರೆಕಾರ್ಡ್ ರೂಂ ಕೇಸ್ ವರ್ಕರ್ ಕಣ್ಣು ಬಿತ್ತು. ಅವಳನ್ನು ಏನಾದರೂ ಮಾಡಿ ಅನುಭವಿಸಬೇಕೆಂದು ಪಣತೊಟ್ಟ. ಅವಳಿಗೆ ಕೆಲಸಮಾಡಿ ಕೊಡದೇ ಸತಾಯಿಸುತ್ತಾ ದೆವ್ವವಾಗಿ ಕಾಡಿದ. ಕೊನೆಗೆ ನಿನ್ನ ಖಾತೆ ಪುಸ್ತಕದಲ್ಲಿ ಕಾಣುತ್ತಿಲ್ಲ. ರೆಕಾರ್ಡ್ ರೂಂನಲ್ಲಿ ಹುಡುಕಿಸು ಎಂದು ಗೌರಮ್ಮ ಹೇಳಿದಳು. ನಂತರ ಆಕೆ ರೆಕಾರ್ಡ್ ರೂಂ ಗುಮಾಸ್ತನ ಬಳಿ ಬಂದಳು. ಈತ ಒಂದೆರಡು ದಿನ ಬಿಟ್ಟು ಬಾ..ಹಾಗೇ..ಹೀಗೆ ಎನ್ನುತ್ತಾ ಅಲೆದಾಡಿಸಿ, ಅವಳ ಜೀವ ಹಿಂಡಿ ಕಿರುಕುಳ ನೀಡುತ್ತಾ ಕೊನೆಗೆ ನಿನ್ನ ಖಾತೆ ಕಾಣುತ್ತಿಲ್ಲ. ಏನೂ ಮಾಡೋದೊ ಎನೋ ಎಂದು ಹೆದರಿಸಿದ. ನಿನ್ನ ಗಂಡನ ಖಾತೆಯ ಬಗ್ಗೆ ಆತನಿಗೆ ಸರಿಯಾಗಿ ತಿಳುವಳಿಕೆಯಿರಲಿಲ್ಲವೇನೊ. ಇಲ್ಲ ನಿನಗೆ ಆತ ಸುಳ್ಳು ಹೇಳಿದ್ದನೊ ಏನೊ? ಎಲ್ಲಾ ಸರಿಯಾಗಿ ಕಂಡುಹಿಡಿಯಬೇಕೆಂದರೆ ಸುಮಾರಷ್ಟು ಮೇಲಾಧಿಕಾರಿಗಳ ಕಚೇರಿಗಳಿಗೂ ನಾನು ಹೋಗಬೇಕು. ಆತನಿಗೆ ನಿಜವಾಗಿಯೂ ಭೂಮಿ ಮಂಜೂರಾಗಿತ್ತೇ ಎನ್ನುವುದು ಅನುಮಾನವಾಗಿದೆ. ಈ ವಿಷಯ ಬೇರೆ ಯಾರಿಗಾದರು ತಿಳಿದರೆ ಕಷ್ಟ. ನನಗೆ ತಿಳಿದಂತೆ ನೀನು ವಾಸವಿರುವುದು ಬೇರೆಯವರ ಜಾಗದಲ್ಲಿ. ನಿನ್ನ ಗಂಡ ಅಲ್ಲಿ ಕಣ್ತಪ್ಪಿನಿಂದ ಮನೆ ಕಟ್ಟಿದ್ದಾನೆ. ಅದರ ನಿಜವಾದ ಮಾಲೀಕರು ಬೇರೆ ಊರಲ್ಲಿ ಇದ್ದಾರೆ. ಅವರು ಮುಂದೊಂದು ದಿನ ಬಂದರೆ ಏನು ಮಾಡುವುದೋ ಏನೋ? ಎಂದು ಆಕೆಯನ್ನು ಹೆದರಿಸಿದ. ಮೊದಲೇ ನೊಂದು ನೋವಲ್ಲಿ ಬೆಂದು ಜರ್ಜರಿತಳಾದವಳಿಗೆ ಇನ್ನಷ್ಟು ನೋವು ನೀಡಿದ. ಏನೇ ಆಗಲಿ, ನಿನಗೆ ನಾನು ಹೇಗಾದರು ಮಾಡಿ ಸಹಾಯ ಮಾಡುವೆ. ಆ ಮನೆ ನಿನಗೆ ಸೇರುವಂತೆ ಮಾಡುತ್ತೇನೆ. ನೀನು ನಾನು ಹೇಳಿದಂತೆ ಕೇಳಬೇಕೆಂದು ನುಡಿದ. ಆಕೆ ಆಯ್ತು ಎಂದಳು. ಹಾಗಾದರೆ ಒಮ್ಮೆ ನೀನಿರುವ ಮನೆಯನ್ನು ನಾನು ಬಂದು ಚೆಕ್ಬಂದಿಯಂತೆ ಇದೆಯೇ ಎನ್ನುವುದನ್ನು ಪರಿಶೀಲಿಸಲು ನೋಡಲು ಬರುತ್ತೇನೆ ಎಂದ. ಆಕೆಯು ಈತನಿಗಾಗಿ ಕಾಯುತ್ತಾ ಅತ್ತಕಡೆ ಕುಳಿತಿದ್ದಾಳೆ. ಆಕೆಗೆ ಮನದಲ್ಲಿ ತನ್ನ ಎಳೆ ಮಗು ಮತ್ತು ತನ್ನ ಬಾಳಿಗೆ ಆಸರೆಯಾಗಿ ಮನೆ ಉಳಿಯಲಿ ಎನ್ನುವ ಜೀವದ ಆಸೆಯಿತ್ತು ಸರ್. ಆಕೆಯ ಕಣ್ಣಲ್ಲಿ ಅದೇ ಬಯಕೆಯಲ್ಲಿ ಕಂಬನಿಯು ಜಿನುಗುತ್ತಿತ್ತು..
ಆಗ ಏಯಾಯ್ತು?
ಈ ರೆಕಾರ್ಡ್ ರೂಂ ಕೇಸ್ ವರ್ಕರ್ ಆ ದಿನವೇ ರಾತ್ರಿ ಸಮಯಕ್ಕೆ ಆಕೆಯ ಮನೆಗೆ ಹೋದ. ಈತನನ್ನು ಆಕೆ "ಅಣ್ಣಾ" ಬನ್ನಿ ಎಂದಳು.. ಈತ ನಗುತ್ತಾ ಒಳ ನಡೆದವನೆ ಅಯ್ಯೋ 'ಅಣ್ಣಾ" ಎನ್ನ ಬೇಡ. ಪ್ರೀತಿಯಿಂದ ಮಾವ ಎಂದು ಕರೆ ಎಂದ. ಈತನ ಮಾತಿನಿಂದ ಆಕೆಯು ಗಲಿಬಲಿಗೊಂಡು ವಿಚಲಿತಳಾಗಿ ಕೋಪಗೊಂಡಳು. ಆಗ ಈತನ ವಿಚಿತ್ರ ವರ್ತನೆ ಆಕೆಗೆ ಅರ್ಥವಾಗುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಆಕೆ ಕೂಡಲೇ ನುಡಿದಳು, ಇದೆಲ್ಲಾ ಸರಿಯಿರುವುದಿಲ್ಲ ಎಚ್ಚರಿಕೆ ಎಂದಳು. ಆಗ ಆತ ಬೆದರಿಕೆಯ ವಾಮಮಾರ್ಗದ ಭಯವೊಡ್ಡುವ ಮಾತುಗಳನ್ನು ನುಡಿದ. ನಿನಗೆ ಮನೆ ಬೇಕೋ ಬೇಡವೋ? ಎಂದು ಗದರಿದ. ನಾನು ಮನಸ್ಸು ಮಾಡಿದರೆ ನಿನ್ನ ಮನೆ ನಿನಗೆ ಸಿಗಲ್ಲ ಹುಷಾರ್ ಎನ್ನುತ್ತಾ ಆಕೆಯ ಮೈಮೇಲಿನ ಬಟ್ಟೆಗೆ ಕೈಹಾಕಿದ. ಆಕೆಯ ಮಗುವು ಒಂದೆಡೆ ತೊಟ್ಟಿಲಲ್ಲಿ ರೋಧಿಸುತ್ತಿದೆ. ಅದರ ದನಿಗೆ ಆಕೆಗೆ ತನ್ನ ಗಂಡನ ನೆನಪಾಗುತ್ತಿದೆ. ಆಗ ಆಕೆಗೆ ಸಹಕರಿಸಲು ಮನಸ್ಸು ಒಪ್ಪುತ್ತಿಲ್ಲ. ಆಗ ಮತ್ತೆ ಗದರಿದ. ನೋಡು ನಿನ್ನ ಮಗು ನೀನು ಎಲ್ಲಿ ಹೋಗುತ್ತೀರಿ? ಮನೆ ಬೇಕೋ? ಬೇಡವೋ? ಹೇಳು. ಬೇಡ ಎಂದರೆ ಕೂಡಲೇ ಹೊರಹೋಗುವೆ ಎಂದ. ಆಕೆ ಹೆದರಿ ಮೌನವಾಗಿ ಸಮ್ಮತಿಸಿದಳು. ಊರ ಹೊರಗಿನ ಆ ಮನೆಯಲ್ಲಿ ಅಂತೂ ತಾನಂದುಕೊಂಡಂತೆ ಆಕೆಯನ್ನು ಬೆತ್ತಲೆಗೊಳಿಸಿ ತನಗೆ ಮನಬಂದಂತೆ ಸುಖಿಸಿದ. ತಾನು ಜೊತೆಯಲ್ಲಿಟ್ಟುಕೊಂಡಿದ್ದ ವಿದೇಶಿ ಮದ್ಯವನ್ನು ಸವಿಯುತ್ತಾ ಸ್ವರ್ಗನೋಡಿದ. ಸ್ವಲ್ಪ ಸಮಯದ ನಂತರ ಫೋನ್ ಮಾಡಿ ನನ್ನನ್ನು ಕರೆಸಿಕೊಂಡ. ನಾನು ಆತನ ನಂತರ ಆಕೆಯನ್ನು ವಿದೇಶಿ ಮದ್ಯವನ್ನು ಹೀರುತ್ತಾ ಸುಖಿಸಿದೆ..
ಅಯ್ಯೋ ಬೇವರ್ಸಿಗಳಾ. ನಿಮಗೆ ಅಕ್ಕ, ತಂಗಿ, ಅಮ್ಮ ಅನ್ನುವ ಸಂಬಂಧಗಳು ಇಲ್ಲವೇನ್ರೋ? ಸಹಾಯಕ್ಕೆ ಬೇಡಿ ಬಂದ ವಿಧವೆಯನ್ನು ಹೀಗೆಲ್ಲಾ ದುರುಪಯೋಗಪಡಿಸಿಕೊಂಡ್ರಾ? ಆಕೆಯನ್ನು ಸುಳ್ಳು ಹೇಳಿ, ಬೆದರಿಸಿ ಮುಗ್ಧೆಯ ಮೇಲೆ ಪೈಶಾಚಿಕವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದೀರಲ್ಲ? ನಿಮ್ಮಂತವರು ಸರ್ಕಾರಿ ಸೇವೆಯಲ್ಲಿರಲು ಅರ್ಹರೇ? ಸರ್ಕಾರಿ ಸೇವೆಯಲ್ಲಿ ಅಲ್ಲ ಈ ಭೂಮಿ ಮೇಲೆ ಇರಲು ನಾಲಾಯಕ್ಕು. ನನಗೆ ಬರುತ್ತಿರುವ ಕೋಪಕ್ಕೆ ನಿಮ್ಮನ್ನು ಇಲ್ಲಿಯೇ ಗುಂಡಿಟ್ಟುಕೊಲ್ಲಬೇಕು. ಏನೇ ನಿಮಗೆ ಮಾಡಿದರು ಕಡಿಮೆಯೇ! ನಿಮಗೆ ಎಂತಹ ಘನಘೋರ ಶಿಕ್ಷೆಯನ್ನು ನೀಡಿದರು ಅದು ಕಡಿಮೆಯೇ! ನಿಮ್ಮ ಪಾಪದ ಕೃತ್ಯಕ್ಕೆ ದೇವರಿಂದಲೂ ಶಿಕ್ಷೆಯ ಪ್ರಮಾಣ ಅಳೆಯಲು ಅಸಾಧ್ಯ.! ಇನ್ನು ನನ್ನಿಂದ ಹೇಗೆ ಸಾಧ್ಯ?
ಇತ್ತ ತುಸು ಆವೇಶದಲ್ಲಿ ತನಿಖಾಧಿಕಾರಿ ಇನ್ಸ್ಪೆಕ್ಟರ್ ಕಡೆಗೆ ನೋಡಿದರು. ಅವರ ಕಣ್ಣು ಕೋಪದಲ್ಲಿ ಕೆಂಪಾಗಿದೆ. ಅದನ್ನು ಕಂಡು ಇನ್ಸ್ಪೆಕ್ಟರ್ ತುಸು ಹೆದರಿದರು. ಕೂಡಲೇ "ಆ ರೆಕಾರ್ಡ್ ರೂಂ ಕೇಸ್ ವರ್ಕರ್ನನ್ನು ಎಳೆದುಕೊಂಡು ಬನ್ನಿ" ಎಂದು ಆದೇಶಿಸಿದರು. ತಕ್ಷಣವೇ ಇನ್ಸ್ಪೆಕ್ಟರ್ ಜೀಪ್ ಹತ್ತಿ ಹೊರಟರು. ಇತ್ತ ಠಾಣೆಯಲ್ಲಿ ವಿಚಾರಣೆಯನ್ನು ಮುಂದುರೆಸಿದ್ದಾರೆ. ಈಗ ಕಂದಾಯಾಧಿಕಾರಿಯತ್ತ ನೋಡುತ್ತಾ ಕೈಲಿ ರಿವಾಲ್ವರ್ ಹಿಡಿದು ನುಡಿದರು. ನೀವು ಮಾಡಿದ ಪಾಪದ ಕೃತ್ಯದ ಮುಂದೆ ನಾನು ಜೀವನದಲ್ಲಿ ಇಲ್ಲಿಯವರೆಗೆ ಕಂಡ ಉಗ್ರ ಹಿಂಸೆಗಳ ಕ್ರೈಂಗಳೆಲ್ಲ ನಶ್ವರ! ಒಟ್ಟಾರೆ ನೀವೆಲ್ಲಾ ಸಮಾಜದ ಉನ್ನತಿಗೆ ದುಡಿಯಬೇಕಾದವರು ಮಾಡಿದ್ದು ಮಾತ್ರ ಎಣಿಸಲಾಗದ ಅನೈತಿಕ ಕೃತ್ಯಗಳ ಸರಮಾಲೆ. ನಿಮ್ಮಂತಹ ದುಷ್ಟರು ಜಗದಿಂದ ಬೇಗನೇ ತೊಲಗಬೇಕೆಂದು ಆವೇಶದಲ್ಲಿ ನುಡಿದು ಅತ್ತ ಇನ್ಸ್ಪೆಕ್ಟರ್ಗಾಗಿ ಕಾಯುತ್ತಿದ್ದಾರೆ.
ಕಂದಾಯಾಧಿಕಾರಿಗೆ ಮತ್ತೆ ಪ್ರಶ್ನಿಸಿದರು. ಮುಂದೆ ಮತ್ತೆ ವಿಧವೆಯ ಗತಿಯೇನಾಯ್ತು?
ಕಂದಾಯಾಧಿಕಾರಿಯು ಮೌನವಾಗಿಯೇ ಇದ್ದ. ಮತ್ತೆ ಪ್ರಶ್ನೆಗೆ ಉತ್ತರಿಸಲೇ ಇಲ್ಲ. ಅಷ್ಟರಲ್ಲಿ ಕೋಪದಿಂದ ತನಿಖಾಧಿಕಾರಿ ಅವನತ್ತ ಹೋಗಿ ಆತನ ತಲೆಯೆತ್ತಿ ಹಿಡಿದು ಕೇಳಿದರು "ಹೇಳಲೇ ಹೇಳು, ಇಲ್ಲದೇ ಹೋದಲ್ಲಿ ಒದ್ದು ಬಾಯಿ ಬಿಡಿಸಬೇಕಾ?" ಎಂದು ಕೈಲಿ ಲಾಟಿ ಹಿಡಿದು ನಿತ್ತರು. ಈಗ ಕಂದಾಯಾಧಿಕಾರಿ ನುಡಿದ. ಆಕೆಗೆ ಕೊನೆಗೂ ಮನೆಯನ್ನು ಖಾತೆ ಬದಲಾಯಿಸಿ ಕೊಡಲಿಲ್ಲ. ಆಕೆಯ ಗಂಡನ ಮನೆಯನ್ನು ಬೇರೆಯವರ ಹೆಸರಿಗೆ ಫೋರ್ಜರಿ ಖಾತೆ ಮಾಡಿದೆವು. ಆಕೆಯು ಇದೇ ನೋವಿನಲ್ಲಿ ಹುಚ್ಚಿಯಾಗಿ ರಸ್ತೆಯಲ್ಲಿ ಅಲೆಯುತ್ತಿದ್ದಾಳೆ ಎಂದ.
ಅಷ್ಟರಲ್ಲಿ ಪೋಲಿಸ್ ಪೇದೆಯೊಬ್ಬರು ನುಡಿದರು. ಅದೇ ಸರ್, ನಿನ್ನೆ ನೀವು ಗಾರ್ಡನ್ ಕಡೆಯಿಂದ ವಾಕ್ ಮಾಡುತ್ತಾ ಬರುವಾಗ ಕಂಡ ಒಬ್ಬಳು ಭಿಕ್ಷುಕಿಯನ್ನು ಭಿಕ್ಷುಕರ ನಿರಾಶ್ರಿತರ ಶಿಭಿರಕ್ಕೆ ಕಳುಹಿಸಿ ಎಂದಿರಲ್ಲಾ ಅವಳೇ ಸರ್ ಆಕೆ ಎಂದರು.
ವಿಷಯ ಕೇಳುತ್ತಿದ್ದಂತೆಯೇ ತನಿಖಾಧಿಕಾರಿ ಭಾವುಕವಾಗಿ ಒಂದೆಡೆ ಕುಳಿತರು. ನಂತರ ಠಾಣೆಯ ಬಾಗಿಲಿನಿಂದ ತುಸು ಹೊರಗಡೆ ನಡೆದು ಬಂದರು. ಭೀಕರವಾದ ಮಳೆ ಸುರಿಯುತ್ತಿದೆ. ಗುಡುಗು, ಮಿಂಚು ಜೊತೆಗೆ ಅಷ್ಟೇ ಭೀಕರವಾಗಿ ಗಾಳಿಯು ಮುಂದುವರೆದಿದೆ. ಒಂಥರಾ ಪ್ರವಾಹದ ರುದ್ರ ನರ್ತನದ ಅನುಭವ. ಸುಮಾರು ಆರೇಳು ತಾಸಿನಿಂದ ಸುರಿಯುತ್ತಿರುವ ಮಳೆ ಮಾತ್ರ ತುಸುವೂ ಕಡಿಮೆಯಾದಂತೆ ಕಾಣುತ್ತಿಲ್ಲ. ಭೀಕರತೆಯನ್ನು ನೋಡಿ ಜೊತೆಗೆ ಮನಕ್ಕೆ ಎಷ್ಟೇ ಸಾಂತ್ವಾನ ಹೇಳಿದರು ಮನ ಕೇಳುತ್ತಿಲ್ಲ. ಈಗ ಠಾಣೆಯ ದೇಹಳಿಯ ಬಳಿ ನಿಂತು ಬಾಗಿಲಿಗೆ ಒರಗಿ ಕಂದಾಯಾಧಿಕಾರಿಯತ್ತ ನೋಡುತ್ತಾ ಕೋಪದಲ್ಲಿ "ಪಾಪ, ನಮ್ಮ, ನಿಮ್ಮೆಲ್ಲರನ್ನು ಹಗಲು ರಾತ್ರಿಯೆನ್ನದೇ ಜೀವ ಪಣಕ್ಕಿಟ್ಟು ಕಾಯುತ್ತಿದ್ದ ದೇಶದ ಸೈನಿಕನು ದೇಶದ ಹೊರಗಿನ ಪಾಕಿಸ್ತಾನಕ್ಕೆ ಬಲಿಯಾದ. ಆದರೆ ದೇಶದೊಳಗಿನ ನಿಮ್ಮಂತಹ ಪಾಕಿಸ್ತಾನವು ಆ ಸೈನಿಕನ ಹೆಂಡತಿಯ ಮಾನ, ಆಸ್ತಿಯನ್ನು ಬಲಿ ಪಡೆಯಿತು" ಎಂದು ಉದ್ಗರಿಸಿದರು.
ಈಗ ಕಂದಾಯಾಧಿಕಾರಿ ಎದುರು ಮತ್ತೆ ಕುಳಿತು ಕೇಳಿದರು. ಹೂಂ ಮುಂದೆ ಹೇಳು. ಮತ್ತೆ ನಂತರ ನೀವೆಲ್ಲಾ ಮಾಡಿದ ಪುಣ್ಯದ ಕಾರ್ಯ ಯಾವುದು?
ಆತ ನುಡಿಯುತ್ತಾ ಹೋದ. ಅಷ್ಟರಲ್ಲಿ ತಮ್ಮ ಕೈಲಿದ್ದ ಕಾಣೆಯಾದವರ ಪಟ್ಟಿಯನ್ನು ನೋಡುತ್ತಾ ಹೋದರು. ಈಗಾಗಲೇ ಆತನು ತಪ್ಪೊಪ್ಪಿಕೊಂಡಂತೆ 7 ಪ್ರಕರಣಗಳು ಮಾತ್ರವೇ ಮುಗಿದಿದೆ. ಆದರೆ ಇನ್ನೂ 61 ಪ್ರಕರಣಗಳ ಕಥೆ ಈತನಿಂದ ಕೇಳಿಸಬೇಕು. ಇದೆಲ್ಲಾ ಕೇಳಿಸಲು ಕಡಿಮೆಯೆಂದರೂ ಇನ್ನೂ ಹತ್ತಾರು ದಿನಬೇಕೇನೊ ಎಂದು ಆಲೋಚಿಸುತ್ತಿದ್ದಾರೆ.
ಇತ್ತ ಕಂದಾಯಾಧಿಕಾರಿ ನುಡಿದ. ಒಮ್ಮೆ ಮನೆಯನ್ನು ಅನಧಿಕೃತವಾಗಿ ಕಟ್ಟಿದ್ದೀರಿ ಅದನ್ನು ಕಾನೂನು ರೀತ್ಯ ಒಡೆಯಬೇಕಾಗುತ್ತದೆ ಎಂದು ಒಬ್ಬರಿಗೆ ಬೆದರಿಕೆ ಹಾಕಿದೆವು ಸರ್. ಅದಕ್ಕೆ ಹೆದರಿ ಗಂಡ-ಹೆಂಡತಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡರು ಸರ್.
ಛೇ, ಅವರು ಅನಧಿಕೃತವಾಗಿ ಕಟ್ಟುವವರೆಗೆ ನೀವು ಏನು ಮಾಡುತ್ತಿದ್ದೀರಿ? ಅವಾಗ ಹೊಟ್ಟೆಗೆ ಏನು ಸಗಣಿ ತಿನ್ನುತ್ತಿದ್ದೀರ? ಎಲ್ಲಾ ಮುಗಿದ ನಂತರ ಅವರಿಗೆ ಹೋಗಿ ಏನೆಂದು ಬೆದರಿಕೆ ಹಾಕಿದ್ರಿ? ನೀವು ನಿಮ್ಮ ಕೆಲಸವನ್ನು ಮಾಡುವಾಗ ಮಾಡದೇ ಇದ್ದುದ್ದು ನಿಮ್ಮ ತಪ್ಪಲ್ಲವೇ?
ಅದು ನಮ್ಮದೇ ತಪ್ಪು ಸರ್. ಜನರು ಮೊದಲು ಕಟ್ಟಡ ಪರವಾನಗಿ ಪಡೆದ ನಂತರ ಸಹಜವಾಗಿ ತುಸು ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ ಮನೆ ಕಟ್ಟುತ್ತಾರೆ. ನಾವು ಅವರು ಉಲ್ಲಂಘನೆ ಮಾಡಲಿ ಎಂದು ಕಾಯುತ್ತಾ ಇರುತ್ತೇವೆ. ಅದೇ ನಮಗೆ ಬಂಡವಾಳ. ನಾವು ಮೊದಲು ಕಟ್ಟಡ ಮುಗಿಯುವವರೆಗೆ ಏನನ್ನು ಹೇಳುವುದಿಲ್ಲ. ಇದೆಲ್ಲ ನಾವುಗಳು ಮಾಡಿಕೊಂಡ ಪ್ಲಾನ್. ಕಟ್ಟಡ ಪೂರ್ಣಗೊಂಡು ಇನ್ನೇನು ಗೃಹ ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ನಾವು ಹೋಗುತ್ತೇವೆ. ಆಗ ನಮ್ಮ ಆಟ ಶುರುವಾಗುತ್ತದೆ. ಅವರಿಗೆ ನಾವು ಪ್ಲಾನ್ ಉಲ್ಲಂಘಿಸಿ ಕಟ್ಟಡ ಕಟ್ಟಿದ್ದೀರಿ. ಉಲ್ಲಂಘನೆಯ ಭಾಗವನ್ನು ಒಡೆಯಬೇಕೆಂದು ನೋಟೀಸ್ ನೀಡುತ್ತೇವೆ. ಮೊದಲೇ ಸಾಲಮಾಡಿ ಮನೆ ಕಟ್ಟುವವರೇ ಜಾಸ್ತಿ ಜನ. ಮನೆಕಟ್ಟಿ ಆಗಲೇ ಸಾಕಷ್ಟು ನೋವುಂಡವರಿಗೆ ಭಯ ಸಹಜವಾಗಿ ಕಾಡುತ್ತದೆ. ಕಟ್ಟಿದ ಮನೆಯನ್ನು ಯಾರು ತಾನೇ ಒಡೆಯುತ್ತಾರೆ. ಆಗ ಅವರ ಭಯವನ್ನೇ ದೌರ್ಬಲ್ಯ ಮಾಡಿಕೊಂಡು ನಾವು ಜನರಿಗೆ ಮೋಸಮಾಡುತ್ತೇವೆ. ಅವರಿಂದ ಸಾಕಷ್ಟು ಹಣವನ್ನು ಪೀಡಿಸಿ ಕೀಳುತ್ತೇವೆ. ಅವರು ಅಳುತ್ತಲೇ ಗೃಹ ಪ್ರವೇಶಮಾಡುವಂತೆ ಮಾಡುತ್ತೇವೆ. ನಮಗೆ ಹಣದ ಅಗತ್ಯ ಬಿದ್ದಾಗ ಅಂತಹ ಮನೆಯ ಮಾಲೀಕರಿಗೆ ಆಗಾಗ್ಗೆ ನಿತ್ಯವೂ ಬ್ಲಾಕ್ ಮೇಲ್ ಮಾಡುತ್ತೇವೆ. ಅವರು ಸಹಜವಾಗಿ ಹೆದರಿ ಪ್ರತಿ ವರ್ಷವೂ ನಮಗೆ ಹಣ ನೀಡುವಂತೆ ಮಾಡಿಕೊಂಡಿದ್ದೇವೆ ಸರ್. ಆದರೆ ಪುರಸಭೆ ಕಾಯ್ದೆ ಸೆಕ್ಷನ್ 107ರ ಪ್ರಕಾರ ದಂಡ ಕಟ್ಟಿಸಿಕೊಂಡು ಅಂತಹ ಅನಧಿಕೃತ ಕಟ್ಟಡವನ್ನು ಒಡೆಯದೇ ಬಿಡಲು ಅವಕಾಶವಿದೆ. ಆದರೆ ನಾವು ಅದನ್ನು ಎಲ್ಲಿಯೂ ಹೇಳದೇ ಸೆಕ್ಷನ್ 187ನ್ನು ತೋರಿಸಿ ಹೆದರಿಸುತ್ತೇವೆ. ಜನರ ಭಯವೇ ನಮ್ಮ ಬಂಡವಾಳ.
ಓಹ್, ಇದೊಂತರ ಭೂಗತ ಡಾನ್ಗಳು ಮಾಡುವ ಹಪ್ತಾ ವಸೂಲಿ ಇದ್ದಂತಿದೆ. ಕಾಯ್ದೆಯನ್ನು ನಿಮಗೆ ಬೇಕಾದಂತೆ ಬಳಸಿ ಜನರಿಗೆ ದೌರ್ಜನ್ಯ ನಡೆಸುವುದು ನಿಮ್ಮ ಛಾಳಿಯಾಗಿದೆ ತಾನೆ. ಏನೇ ಆಗಲಿ ಮೂರು ಬಿಟ್ಟವರಿಗೆ ಏನು ಹೇಳಿದರೇನು ಪ್ರಯೋಜನ ಅಲ್ಲವೇ?
ಈಗ ರೆಕಾರ್ಡ್ ರೂಂ ಕೇಸ್ ವರ್ಕರ್ನನ್ನು ಕರೆತರಲು ಹೋದ ಇನ್ಸ್ಪೆಕ್ಟರ್ ಠಾಣೆಗೆ ಬರಿಗೈಲಿ ಹಿಂತಿರುಗುತ್ತಾರೆ. ಆತ ಊರಲ್ಲಿ ಇಲ್ಲವೆಂದು ಬೆಂಗಳೂರಿಗೆ ಹೋಗಿದ್ದಾನೆಂದು ತಿಳಿದುಬಂದಿರುವುದಾಗಿ ನುಡಿಯುತ್ತಾರೆ.
ತನಿಖಾಧಿಕಾರಿಯವರು ಕಂದಾಯಾಧಿಕಾರಿಗೆ ಸೂಚಿಸುತ್ತಾರೆ. ನಿನ್ನ ಮೊಬೈಲ್ನಿಂದ ಆತನಿಗೆ ಕರೆಮಾಡು ಎನ್ನುತ್ತಾರೆ. ಆತ ನಡುಗುತ್ತಲೇ ಮೊಬೈಲ್ನಿಂದ ಡಯಲ್ ಮಾಡುತ್ತಾನೆ. ಅತ್ತ ರೆಕಾರ್ಡ್ ರೂಂ ಕೇಸ್ ವರ್ಕರ್ ಇಷ್ಟು ರಾತ್ರಿಯಲ್ಲಿ ಏನಾಯ್ತೋ ಎಂದು ಫೋನ್ ರಿಸೀವ್ ಮಾಡುತ್ತಾನೆ. ಆತನಿಗೆ ಕಂದಾಯಾಧಿಕಾರಿಯು ಪೋಲಿಸ್ ಕಸ್ಟಡಿಯಲ್ಲಿರುವ ಮಾಹಿತಿ ಗೊತ್ತಿಲ್ಲ. ಹಾಗಾಗಿ ಮುಕ್ತವಾಗಿ ಮಾತನಾಡುತ್ತಾನೆ. ಏನ್ ಸರ್ ಇಷ್ಟೊತ್ತಲ್ಲಿ ಕರೆ ಮಾಡಿದ್ರಿ? ರಾಜು ಮತ್ತು ಕುಮಾರ ಏನಾದ್ರೂ ಜೈಲ್ ನಿಂದ ಎಸ್ಕೇಪ್ ಆದ್ರಾ? ಯಾಕೆ ನಿದ್ರೆ ಬಂದಿಲ್ವೇ? ಎನ್ನುತ್ತಾನೆ. ಇತ್ತ ಕಂದಾಯಾಧಿಕಾರಿ ಪೋಲಿಸರು ಹೇಳಿಕೊಟ್ಟಂತೆ ಹೇಳುತ್ತಾನೆ. ಇಲ್ಲ ಯಾಕೋ ಬೇಸರ ಹಾಗಾಗಿ ನಿದ್ರೆ ಬಂದಿಲ್ಲ. ನೀನು ಎಲ್ಲಿರುವೆ ಎನ್ನುತ್ತಾನೆ. ಆಗ ಅತ್ತಕಡೆಯಿಂದ ಆತ ಉತ್ತರಿಸುತ್ತಾನೆ. ಇಲ್ಲೇ ಆಶ್ರಯ ಕಾಲೋನಿಯಲ್ಲಿ ಅದೇ ರ.....ಳ ಮನೆಯಲ್ಲಿರುವೆ. ಏನು ನೀವು ಬರುತ್ತೀರ ಏನು? ಆಗಲೇ ಬೆಳಿಗ್ಗೆಯಾಗುತ್ತಿದೆ. ಏನು ಸಮಾಚಾರ? ಎನ್ನುತ್ತಾನೆ. ಇತ್ತ ಮತ್ತೆ ಕಂದಾಯಾಧಿಕಾರಿ ನುಡಿಯುತ್ತಾನೆ. ಆಯ್ತು ನಾನು ಬರುತ್ತೇನೆ ಎನ್ನುತ್ತಾನೆ. ಕೂಡಲೇ ಪೋಲಿಸರು ಫೋನ್ ಕಟ್ ಮಾಡಿಸುತ್ತಾರೆ.
ಈಗ ತನಿಖಾಧಿಕಾರಿ ಕೇಳುತ್ತಾರೆ. ಯಾರು ರ.....? ಏನು ಆಕೆಯು ನಿಮ್ಮ ಟೀಮ್ನವಳಾ?
ಇಲ್ಲ ಸರ್. ಆಕೆಯು ಆಶ್ರಯ ನಿವೇಶನಕ್ಕೆ ಅರ್ಜಿ ಹಾಕಿದ್ದಳು. ಆಕೆಯು ವಿಧವೆ. ಆಕೆಯನ್ನು ಆಮಿಷವೊಡ್ಡಿ ನಾವೆಲ್ಲ ನಮ್ಮ ಕಾಮದಾಹಕ್ಕೆ ಬಲಿ ತೆಗೆದುಕೊಂಡೆವು. ಆಕೆಗೆ ಮನೆ ಮಂಜೂರಾತಿ ಮಾಡಿಕೊಟ್ಟು ಆಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ ಸರ್. ಇದೇ ರೀತಿ ಹಲವು ಜನ ಹೆಂಗಸರಿಗೂ ಮೋಸಮಾಡಿದ್ದೇವೆ ಸರ್.
ತೂಥ್. ನಿಮ್ಮ ಹಲ್ಕಾ ಜನ್ಮಕ್ಕೆ ಬೆಂಕಿ ಹಾಕ. ನಿಮ್ಮನ್ನು ಇಲ್ಲಿಯೇ ಈಗಲೇ ಬೆಂಕಿ ಹಾಕಿ ಜೀವಂತ ಸುಡಬೇಕೆನ್ನುವಷ್ಟು ಕೋಪ ಬರುತ್ತಿದೆ. ಏನು ಮಾಡೋದು. ಕಾನೂನು ಕೈಗೆ ತೆಗೆದುಕೊಳ್ಳದೇ ನಿಮ್ಮ ನಿಜವಾದ ಮುಖ ಸಮಾಜಕ್ಕೆ ತೋರಿಸಬೇಕು. ಇದು ನಾಡಿನಾದ್ಯಾಂತ ಕ್ರಾಂತಿಯಾಗಬೇಕು. ಜನರು ಬುದ್ಧಿವಂತರಾಗಬೇಕು. ಆಗ ನಿಮ್ಮಂತವರ ಆಟ ನಡೆಯುವುದಿಲ್ಲ. ಏನೇ ಆಗಲಿ ನೀವು ಹೀಗೆ ಕಂಡ ಕಂಡ ಹೆಂಗಸರ ಮನೆಗೆ ನುಗ್ಗಿದರೆ ಅಕ್ಕಪಕ್ಕ ಯಾರಿಗೂ ಅನುಮಾನ ಬರುವುದಿಲ್ಲವೇ?
ಇಲ್ಲ ಸರ್. ಮನೆಗಳು ಜನನಿಬಿಡವಾಗಿಲ್ಲ. ಅಲ್ಲೊಂದು ಇಲ್ಲೊಂದು ಮನೆಯನ್ನು ಅಲ್ಲಿ ನಿರ್ಮಿಸಲಾಗಿದೆ. ಇಡೀ ಆಶ್ರಯ ಲೇ-ಔಟ್ ಖಾಲಿಯಿದೆ. ಹಾಗಾಗಿ ಅಲ್ಲಿಯೇ ಹೋಗುತ್ತೇವೆ. ಇಲ್ಲದಿದ್ದರೆ ಆ ಹೆಂಗಸರನ್ನು ನಮಗೆ ಬೇಕಾದ ಸ್ಥಳಕ್ಕೆ ಕರೆಸಿಕೊಂಡು ನಮ್ಮ ದಾಹ ತೀರಿಸಿಕೊಳ್ಳುತ್ತೇವೆ. ಅದೂ ಮಾಡಿದ್ದೇವೆ.
ಓಹ್. ನೀವು ಏನು ಬೇಕಾದರೂ ಮಾಡಬಲ್ಲ ರಕ್ಕಸರ ಅವತಾರ. ನಿಮ್ಮನ್ನು ಏನೆಂದು ಪ್ರಶ್ನಿಸಿದರು ಒಂದೊಂದೇ ಹಿಂಸೆಯ ಕರಾಳ ಮುಖವಾಡ ಹೊರಹೊಮ್ಮುತ್ತಿದೆ. ಇಲ್ಲಿಯವರೆಗೂ ನಿಮ್ಮ ಆಟಕ್ಕೆ ಕೊನೆ ಬಿದ್ದಿಲ್ಲ. ಆದರೆ ನಾನು ಮಾತ್ರ ಖಂಡಿತಾ ಕೊನೆ ಹೇಳಿಸುತ್ತೇನೆ ನೆನಪಿರಲಿ. ಇನ್ನು ಮೇಲೆ ನಿಮ್ಮ ಆಟ ನಡೆಯುವುದಿಲ್ಲ. ಇಡೀ ಜಗತ್ತೇ ನಿಮಗೆ ನೀಡುವ ಶಿಕ್ಷೆಯನ್ನು ಕಂಡು ಬೆಚ್ಚಿಬೀಳಬೇಕು ಹಾಗೆ ಮಾಡುತ್ತೇನೆ! ತುಸು ಕೋಪದಲ್ಲೇ ತನಿಖಾಧಿಕಾರಿ ನುಡಿಯುತ್ತಿದ್ದಾರೆ...
ಮುಂದುವರೆಯುವುದು..
ರಾಮಚಂದ್ರ ಸಾಗರ್
ಭಾಗ-15
ಇತ್ತ ಪೋಲಿಸ್ ಇನ್ಸ್ಪೆಕ್ಟರ್ ತನಿಖಾಧಿಕಾರಿಯ ಆದೇಶದಂತೆ ಮಾರುವೇಶದಲ್ಲಿ ಹೋಗಿ ರೆಕಾರ್ಡ್ ರೂಂ ಗುಮಾಸ್ತನನ್ನು ವಶಕ್ಕೆ ಪಡೆದುಕೊಂಡು ಆತನ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ನೇರವಾಗಿ ತನಿಖಾಧಿಕಾರಿ ಸೂಚಿಸಿದ ಸ್ಥಳಕ್ಕೆ ಕರೆದೊಯ್ಯತ್ತಾರೆ. ಇನ್ನೊಂದೆಡೆ ನಿರಂತರ ವಿಚಾರಣೆಯಿಂದ ಕಂದಾಯಾಧಿಕಾರಿ ನಿತ್ರಾಣವಾಗಿ ಏನೇ ಕೇಳಿದರೂ ಉತ್ತರಿಸದೆ ತಡವರಿಸುತ್ತಿದ್ದಾನೆ. ಪರಿಸ್ಥಿತಿ ಅರಿತ ತನಿಖಾಧಿಕಾರಿ ತಮ್ಮ ವಿಚಾರಣೆಯನ್ನು ಅಲ್ಲಿಗೆ ನಿಲ್ಲಿಸುತ್ತಾರೆ. ಗಡಿಯಾರದಲ್ಲಿ ಮುಂಜಾವಿನ ನಾಲ್ಕರ ಸಮಯವಾಗಿದೆ.
ಆ ಕಡೆ ಇನ್ಸ್ಪೆಕ್ಟರ್ರವರಿಂದ ಮೆಸೇಜ್ ಬರುವುದನ್ನೇ ಕಾಯುತ್ತಿದ್ದ ತನಿಖಾಧಿಕಾರಿ ಮೆಸೇಜ್ ತಲುಪಿದೊಡನೆ ಕೂಡಲೇ ದಾವಂತದಲ್ಲಿ ಹೊರನಡೆಯುತ್ತಾರೆ. ಹೋಗುವಾಗ ಕಂದಾಯಾಧಿಕಾರಿಯ ಬಗ್ಗೆ ನಿಗಾ ವಹಿಸುವಂತೆ ಮತ್ತೆ ಪುನಃ ಆತನ ಹೇಳಿಕೆಯನ್ನು ಇನ್ನೊಮ್ಮೆ ಓದುವಂತೆ ಸರ್ಕಲ್ ಇನ್ಸ್ ಪೆಕ್ಟರ್ ಅವರಿಗೆ ಆದೇಶಿಸುತ್ತಾರೆ.
ಈಗ ನೇರವಾಗಿ ಊರಿನ ಹೊರವಲದ ಹಳೇ ಕಟ್ಟಡದ ಒಂದು ಕೋಣೆಯಲ್ಲಿ ರೆಕಾರ್ಡ್ ರೂಂ ಗುಮಾಸ್ತನನನು ಕಣ್ಣಿಗೆ ಬಟ್ಟೆ ಕಟ್ಟಿ ಹಾಗೇ ಕೂರಿಸಿದ್ದಾರೆ. ಆತನಿಗೆ ತಾನು ಎಲ್ಲಿದ್ದೇನೆ? ಯಾರು ತನ್ನನ್ನು ಕರೆತಂದಿದ್ದಾರೆ? ಎನ್ನುವ ಸಣ್ಣ ಸುಳಿವೂ ಸಹಾ ಗೊತ್ತಿಲ್ಲ. ಎಲ್ಲವನ್ನೂ ಯೋಜಿಸಿ ಬಹಳ ಬುದ್ಧಿವಂತಿಕೆಯಿಂದ ತನಿಖಾಧಿಕಾರಿ ಆತನನ್ನು ಸೆರೆ ಹಿಡಿದು ಎಳೆದು ತಂದಿದ್ದಾರೆ.
ರೆಕಾರ್ಡ್ ರೂಂ ಗುಮಾಸ್ತ ಮಾಡಿದ ಅನ್ಯಾಯ, ಆಕ್ರಮಗಳನ್ನು ನೆನೆಯುತ್ತಾ ಆ ಭೀಕರ ಕ್ರೌರ್ಯದ ವ್ಯಕ್ತಿಯ ಬಗ್ಗೆ ಕುತೂಹಲದಿಂದ ಆತನನ್ನು ನೋಡುತ್ತಾರೆ. ನೋಡಲು ಬಹಳ ಸಭ್ಯನಂತೆ ಕಾಣುವ ಮುಖಭಾವ. ಮುಖದಲ್ಲಿ ಏನಿದೆ? ಮನದಲ್ಲಿ ತಾನೇ ಎಲ್ಲಾ ಅಡಗಿರುವುದು! ನೋಡುವುದಕ್ಕೆ ಹೊರ ಜಗತ್ತಿಗೆ ಹೇಗೆ ಕಂಡರೇನು? ಮಾಡುವುದೆಲ್ಲವು ಈತ ರಾಕ್ಷಸರು ನಾಚುವಂತಹ ಹೇಯ ಕೃತ್ಯ.
ದುಷ್ಟ ರೆಕಾರ್ಡ್ ರೂಂ ಗುಮಾಸ್ತನ ಬಳಿ ತನಿಖಾಧಿಕಾರಿ ಬಂದು ನುಡಿಯುತ್ತಾರೆ. ಏಯ್, ನೀನೀಗ ಯಾರ ವಶದಲ್ಲಿದ್ದೀಯ ಗೊತ್ತಾ? ಎಂದು ಪ್ರಶ್ನಿಸುತ್ತಾರೆ. ಆತ ಬೆದರಿ, ಭಯದಲ್ಲಿ ನಡುಗುತ್ತಾ ಉತ್ತರಿಸುತ್ತಾನೆ. ಗೊತ್ತಿಲ್ಲ, ನೀವು ಯಾರು? ನಿಮಗೆ ನನ್ನಿಂದ ಏನಾಗಬೇಕು? ಎಂದು ಕೇಳುತ್ತಾನೆ. ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ತನಿಖಾಧಿಕಾರಿ ಮತ್ತೆ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸುತ್ತಾರೆ. ಏಯ್, ನಾವು ನಕ್ಸಲರು. ರಮೇಶ ಮತ್ತು ಕುಮಾರನನ್ನು ನೀನು ಕೊಲ್ಲಲು ಸುಪಾರಿಕೊಟ್ಟಿದ್ದು ನಮಗೆ ತಿಳಿಯಿತು. ಅವರು ನಮ್ಮ ಸಂಘಟನೆಯವರು. ಅವರಿಗೆ ಸಣ್ಣ ತೊಂದರೆಯಾದರು ನಾವು ಬಿಡುವುದಿಲ್ಲ. ಅಂತಹದಲ್ಲಿ ನೀನು ಅವರನ್ನು ಕೊಲ್ಲಿಸಲು ಹೋಗಿದ್ದೀಯ. ನಾವು ನಿನ್ನನ್ನು ಕೊಲ್ಲಲು ಇಲ್ಲಿಗೆ ಎಳೆದುಕೊಂಡು ಬಂದಿದ್ದೇವೆ. ನಿನ್ನನ್ನು ಈಗ ಕೆಲವೇ ಕ್ಷಣದಲ್ಲಿ ಕೊಲ್ಲುತ್ತೇವೆ. ನೀನು ಕಚೇರಿಯಲ್ಲಿದ್ದುಕೊಂಡು ಊರಲ್ಲಿ ಏನೆಲ್ಲಾ ಮೋಸ ಮಾಡಿದ್ದೀಯ ಎನ್ನುವುದು ನಮಗೆ ಗೊತ್ತಾಗಿದೆ. ನೀನು ಎಷ್ಟು ಜನರ ಕಣ್ಣಲ್ಲಿ ರಕ್ತವು ಸುರಿಯುವಂತೆ ಮಾಡಿದ್ದೀಯ. ಎಷ್ಟು ಜನರ ಮನೆ ಮುರಿದ್ದೀಯ. ನಿನ್ನ ಪ್ರತಿಯೊಂದು ಅಪರಾದದ ಪಟ್ಟಿಯೂ ನಮ್ಮ ಬಳಿ ಇದೆ. ಈಗ ನಿನ್ನ ಕೊನೆಯಾಸೆಯನ್ನು ನಾವು ಕೇಳುವುದಿಲ್ಲ. ನಿನ್ನಂತಹ ನೀಚನನ್ನು ಕೊಲ್ಲುವುದರ ಮೂಲಕ ಭ್ರಷ್ಟರನ್ನು ಕೊನೆ ಹೇಳುವುದೇ ನಮ್ಮ ಸಂಘಟನೆಯ ಗುರಿಯೆಂದು ಗದರುತ್ತಾರೆ.
ಈಗ ರೆಕಾರ್ಡ್ ರೂಂ ಗುಮಾಸ್ತನಿಗೆ ತನ್ನನ್ನು ನಕ್ಸಲರು ಅಪಹರಿಸಿದ್ದಾರೆ ಎನ್ನುವುದು ಖಚಿತವಾಗುತ್ತದೆ. ಇನ್ನು ತನ್ನ ಜೀವ ಹೋದಂತೆಯೇ ಎಂದು ಬೆದರಿಹೋಗುತ್ತಾನೆ. ಮೊದಲೇ ಊರಿನಲ್ಲಿ ರಮೇಶ ಮತ್ತು ಕುಮಾರನಿಗೆ ನಕ್ಸಲರ ಸಂಪರ್ಕವಿದೆಯೆನ್ನುವ ಗಾಳಿ ಸುದ್ಧಿಯಂತು ಹರಡಿ ಈತನ ಕಿವಿಗು ಬಿದ್ದಿತು. ಈಗ ಒಂದೇ ಸಮನೆ ಅಳುತ್ತಾ ಪ್ರಾಣ ಭಿಕ್ಷೆಯನ್ನು ಬೇಡುತ್ತಿದ್ದಾನೆ. ಈಗ ತನಿಖಾಧಿಕಾರಿ ನುಡಿಯುತ್ತಾರೆ. ಅದೆಲ್ಲ ಈಗ ಮುಗಿದು ಹೋಗಿದೆ. ನೀನು ನಮ್ಮ ಸಂಘಟನೆಯ ಸದಸ್ಯರನ್ನು ಕೊಲ್ಲಲು ಹವಣಿಸಿದವನು. ನಿನಗೆ ಕ್ಷಮೆಯೇ ಇಲ್ಲ. ಈಗ ನಮ್ಮ ತಂಡದ ನಾಯಕರು ಬರುತ್ತಿದ್ದಾರೆ. ಅವರು ಬಂದೊಡನೆ ನಿನ್ನ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ ಎಂದು ಜೋರಾಗಿ ನಗುತ್ತಾರೆ. ಜೊತೆಯಲ್ಲಿ ಅಲ್ಲಿದ್ದ ಉಳಿದ ಪೋಲಿಸರು ನಗುತ್ತಾರೆ.
ಈಗ ಭಯದ ಮಡಿಲಲ್ಲಿ ರೆಕಾರ್ಡ್ ರೂಂ ಗುಮಾಸ್ತ ನರಳಿ ನರಳಿ ಒದ್ದಾಡುತ್ತಿದ್ದಾನೆ. ಇಷ್ಟು ದಿವಸ ಇನ್ನೊಬ್ಬರ ಜೀವ, ಬದುಕಿನ ಜೊತೆ ಆಟವಾಡಿ ಮಜಾ ತೆಗೆದುಕೊಂಡವನಿಗೆ ಈಗ ತನಗೆ ನೋವು ಬಂದಿದ್ದು ಮೊದಲೇನೊ? ಎನ್ನಿಸುತ್ತಿದೆ. ಎಷ್ಟೋ ಜನರು ಈತನೆದುರು ಕಣ್ಣೀರು ಹಾಕಿದರು ಗಹಗಹಿಸಿ ನಕ್ಕು ತನ್ನ ಕಾಲಲ್ಲಿ ಅವರನ್ನು ಒದ್ದು ಮುಂದೆ ಹೋದವನಿಗೆ, ಬಡವರ ಹೊಟ್ಟೆಗೆ ತನ್ನ ಹಣದಾಹದ ಕಾಲಿನಿಂದ ಕಚ ಕಚ ತುಳಿದವನಿಗೆ ಈಗ ಸಂಕಟವೇ ಮಳೆಯಾಗಿ ಸುರಿಯುತ್ತಿದೆ. ತಾನು ಜೀವನದಲ್ಲಿ ಇಲ್ಲಿಯವರೆಗೆ ಗಳಿಸಿದ ಹಣವೆಷ್ಟಿದ್ದರೇನು? ಈಗ ಎಲ್ಲವನ್ನು ಬಿಟ್ಟು ಹೋಗುತ್ತಿದ್ದೇನೆ ಎನ್ನುವ ನೋವು ಕಾಡುತ್ತಿದೆ.
ಸನಿಹದಲ್ಲಿ ಒಂದೇ ಸಮನೆ ಫೈರಿಂಗ್ ಆಗುತ್ತಿರುವ ಅತೀವ ಸದ್ದು ಕೇಳುತ್ತದೆ. ರೆಕಾರ್ಡ್ ರೂಂ ಗುಮಾಸ್ತನು ಬಿಚ್ಚಿ ಬೀಳುತ್ತಾನೆ. ತನ್ನತ್ತಲೇ ಗುಂಡುಗಳು ತೂರಿಬಂದಂತೆ ಕನಸು ಕಾಣುತ್ತಾ ಹಾಗೆಯೇ ಪ್ರಜ್ಞೆತಪ್ಪಿ ಹೋಗುತ್ತಾನೆ.
ಕೆಲ ಸಮಯದ ನಂತರ ಆತನ ಮುಖಕ್ಕೆ ನೀರನ್ನು ಎರಚುತ್ತಿದ್ದಾರೆ. ಒಮ್ಮೆಲೆ ಮೈ ನಡುಗಿ ತನ್ನ ಕಣ್ಣುಜ್ಜಿಕೊಂಡು ಹೊರ ಜಗತ್ತನ್ನು ನೋಡುತ್ತಾನೆ. ಈಗ ಆತ ಪೋಲಿಸ್ ಠಾಣೆಯಲ್ಲಿದ್ದಾನೆ. ಈಗ ಮೊದಲೇ ಯೋಜಿಸಿದಂತೆ ತನಿಖಾಧಿಕಾರಿಯ ಅಣತಿಯಂತೆ ಪೋಲಿಸ್ ಪೇದೆಯೊಬ್ಬರು ನುಡಿಯುತ್ತಾರೆ. ನಿನ್ನನ್ನು ನಕ್ಸಲರು ರಾತ್ರಿ ಅಪಹರಿಸಿದ್ದರು. ಲಭಿಸಿದ ಮಾಹಿತಿಯಂತೆ ನಿನ್ನನ್ನು ಅವರಿಂದ ಬಿಡಿಸಿಕೊಂಡು ಬಂದಿದ್ದೇವೆ. ಒಂದೆರಡು ನಿಮಿಷ ವ್ಯಯವಾಗಿದ್ದರು ನಿನ್ನ ಜೀವ ಹಾರಿಹೋಗುತ್ತಿತ್ತು. ಏನೋ ನಮ್ಮ ಸಾಹೇಬರ ಸಾಹಸ ಮೆಚ್ಚಬೇಕೆಂದು ಪೋಲಿಸ್ ಪೇದೆ ತನಿಖಾಧಿಕಾರಿಯವರ ಸಾಹಸವನ್ನು ಆತನೆದುರು ಕಥೆ ಕಟ್ಟಿ ಹೇಳುತ್ತಾ ಆತನಿಗೆ ಸಂತೈಸುತ್ತಿದ್ದಾನೆ.
ಜೀವವೇ ಹೋಯಿತೆಂದು ನರಳಿ ನರಕ ನೋಡಿ ಬಂದವನಿಗೆ ಈಗ ಏನೊಂದು ಹೊಳೆಯುತ್ತಿಲ್ಲ. ಹೃದಯವೇ ಸ್ತಬ್ಧವಾದವನಂತೆ ಗರಬಡಿದು ಕುಳಿತಿದ್ದಾನೆ. ಇದೇ ಸಮಯಕ್ಕೆ ಕಾದಿದ್ದ ತನಿಖಾಧಿಕಾರಿ ಮಧ್ಯೆ ಪ್ರವೇಶಿಸುತ್ತಾರೆ. ರೆಕಾರ್ಡ್ ರೂಂ ಗುಮಾಸ್ತನೆದುರು ಕೂತು ಆತನಿಗೆ ಕೇಳುತ್ತಾರೆ. ನಿನಗೂ ಅವರಿಗೂ ಏಕೆ ವೈರತ್ವ. ಎಲ್ಲವನ್ನು ಮುಚ್ಚುಮರೆಯಿಲ್ಲದೆ ನಮ್ಮ ಬಳಿ ಹೇಳು. ನಿನಗೆ ರಕ್ಷಣೆ ನೀಡುತ್ತೇವೆ. ಇಲ್ಲದೇ ಹೋದಲ್ಲಿ ನಿನ್ನ ಜೀವಕ್ಕೆ ಅಪಾಯ. ಏನು ಮಾಡುವೆ? ಎನ್ನುತ್ತಾರೆ.
ಈಗ ಕಣ್ಣಲ್ಲಿ ನೀರುನ್ನು ಸುರಿಸುತ್ತಾ ರೆಕಾರ್ಡ್ ರೂಂ ಗುಮಾಸ್ತ ತನಿಖಾಧಿಕಾರಿಯ ಕಾಲಿಗೆ ಬಿದ್ದು ನುಡಿಯುತ್ತಾನೆ "ನಕ್ಸಲರು ನನಗೆ ಹೇಳಿದರು. ನಾನು ರಮೇಶ ಮತ್ತು ಕುಮಾರನನ್ನು ಕೊಲ್ಲಿಸಲು ಹೋಗಿದ್ದು ಅವರಿಗೆ ತಿಳಿದಿದೆ. ಇನ್ನೂ ನಾನು ಊರಲ್ಲಿ ಜನರಿಗೆ ಮಾಡಿದ ಮೋಸಕ್ಕೂ ಪ್ರತೀಕಾರವಾಗಿ ನನ್ನನ್ನು ಕೊಂದು ಹಾಕುತ್ತಿದ್ದೇವೆ" ಎಂದಿದ್ದಷ್ಟೇ ನನಗೆ ನೆನಪಿದೆ. ಮುಂದೆ ಒಂದೇ ಸಮನೆ ಗುಂಡಿನ ಸದ್ದುಗಳ ಮಳೆಯಾಯ್ತು. ಭಯದಲ್ಲಿ ಪ್ರಜ್ಞೆ ತಪ್ಪಿಹೋದೆ. ನಂತರ ನಾನು ಎಚ್ಚರವಾದಾಗ ಪೋಲಿಸ್ ಠಾಣೆಯಲ್ಲಿದ್ದೆ. ಎಲ್ಲವೂ ನಿಮ್ಮದೇ ಸಾಹಸದ ಋಣ. ನೀವು ಧೈರ್ಯಮಾಡಿ ನನ್ನ ಜೀವ ಉಳಿಸಿದ್ದೀರಿ. ನೀವು ಹೇಳಿದಂತೆ ನಾನು ಕೇಳುತ್ತೇನೆ. ಒಟ್ಟಾರೆ ನನ್ನ ಜೀವ ಉಳಿಯಬೇಕು. ನಾನು ಬದುಕಬೇಕು ಎಂದು ಕಣ್ಣೀರು ಸುರಿಸುತ್ತಾ ಪೋಲೀಸರಲ್ಲಿ ಬೇಡಿಕೊಂಡ.
ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ತನಿಖಾಧಿಕಾರಿ ಅಂತು ತಾವಂದುಕೊಂಡ ಮಾರ್ಗದಲ್ಲಿ ಯಶಸ್ಸುಗಳಿಗೆ ಮೆಲುನಕ್ಕು ಏನೋ ಗೆದ್ದಂತೆ ಸಂಭ್ರಮಿಸುತ್ತಾರೆ. ಕಾರಣ ಈ ಹಂತದಲ್ಲಿ ಏನೇ ಇದ್ದರೂ ಈತ ಎಲ್ಲವನ್ನು ಮುಚ್ಚುಮರೆಯಿಲ್ಲದೆ ನುಡಿಯುತ್ತಾನೆ ಎನ್ನುವುದು ಅವರ ನಂಬಿಕೆ. ಈಗ ಆತನಿಗೆ ಪ್ರಶ್ನಿಸುತ್ತಾರೆ. ನಿನಗೂ ಅವರಿಗೂ ವೈರತ್ವಕ್ಕೆ ಮುಖ್ಯ ಕಾರಣ. ನೀನು ರಮೇಶ ಮತ್ತು ಕುಮಾರನನ್ನು ಕೊಲೆಮಾಡಿಸಲು ಸುಪಾರಿ ಕೊಟ್ಟಿದ್ದು ಮತ್ತು ಕಚೇರಿಯಲ್ಲಿ ಅವ್ಯವಹಾರ ನಡೆಸಿದ್ದು ಅನ್ನುವುದು ನಿಜವೇ? ಪ್ರಶ್ನಿಸುತ್ತಾರೆ.
ಒಂದೇ ಸಮನೆ ಬಿಡುವು ನೀಡದೆ ರೆಕಾರ್ಡ್ ರೂಂ ಗುಮಾಸ್ತನು ನುಡಿಯುತ್ತಿದ್ದಾನೆ. ಹೌದು ಸರ್, ಹೌದು. ನಾನು ಮತ್ತೆ ನನ್ನ ಕಚೇರಿಯ ಇತರ ಸಿಬ್ಬಂದಿಗಳು, ಮಂಜಪ್ಪ ಎಲ್ಲರೂ ಸೇರಿ ಕೊಲೆ ಸುಪಾರಿ ನೀಡಿದ್ದೆವು. ಅವರು ಹೇಳಿದಂತೆ ನಾನು ಕಚೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದೇನೆ. ಅಮಾಯಕರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡಿದ್ದೇನೆ. ನನಗೆ ನೀವು ಏನು ಬೇಕಾದರೂ ಶಿಕ್ಷೆ ಕೊಡಿ. ನನ್ನನ್ನು ಸಾಯುವವರೆಗೆ ಜೈಲಿಗೆ ಹಾಕಿ. ಆದರೆ ನನ್ನ ಜೀವವನ್ನು ಅವರಿಂದ ಉಳಿಸಿ ಸರ್..
ನಿನ್ನ ಜೀವವನ್ನು ಉಳಿಸಿಯೇ ಇಲ್ಲಿಗೆ ಕರೆತಂದಿದ್ದು. ಇನ್ನು ಮುಂದೆಯೂ ನಿನಗೆ ರಕ್ಷಣೆ ನೀಡುತ್ತೇವೆ. ನೀನು ಹೆದರಬೇಡ. ನಿನ್ನ ಜೊತೆಗೆ ಕಚೇರಿಯ ಇತರ ಸಿಬ್ಬಂದಿಗಳು ಇದ್ದಾರೆ ಎಂದೆಯೆಲ್ಲಾ ಅವರೆಲ್ಲಾ ಯಾರು?
ಕಂದಾಯಾಧಿಕಾರಿ, ರೆವೆನ್ನೂ ಇನ್ಸ್ಪೆಕ್ಟರ್, ಖಾತೆ ದಾಖಲಿಸುವ ಗುಮಾಸ್ತೆ ಗೌರಮ್ಮ ಸೇರಿದಂತೆ ಇನ್ನೂ ಎರಡು ಜನ ಕೇಸ್ ವರ್ಕರ್ ಗಳು ಸೇರಿದ್ದಾರೆ ಸರ್. ಎಲ್ಲರೂ ಒಟ್ಟಾಗಿಯೇ ಹವಣಿಸಿ ಜನರಿಗೆ ಮೋಸಮಾಡುತ್ತಿದ್ದೆವು. ಇದಕ್ಕೆ ನಾನೊಬ್ಬನೇ ಕಾರಣನಲ್ಲ.
ಓಹ್, ಈಗ ಜೀವ ಭಿಕ್ಷೆ ಬೇಡುವಾಗ ಜನರಿಗೆ ಮಾಡಿದ ದ್ರೋಹಕ್ಕೆ ನೀನೊಬ್ಬನೇ ಕಾರಣನಲ್ಲ. ಇತರರೂ ಇದ್ದಾರೆ ಎನ್ನುವೆ. ಆದರೆ ಮೇಲ್ನೋಟಕ್ಕೆ ನಿನ್ನದೇ ದೊಡ್ಡ ಪ್ರಮಾದ ಇದ್ದಂತೆ ಕಾಣುತ್ತದೆ. ಏನು ಹೇಳುವೆ?
ಇರಬಹುದು ಸರ್.
ಏನು ಇರಬಹುದು ಎಂದರೆ? ನಮಗೆ ಅಂದಾಜಿಸಲು ಬಿಡಲು ನಾವೇನು ನೀನು ಮಾಡಿದ್ದ ಹಲ್ಕಾ ಕೆಲಸಗಳನ್ನು ಸ್ಕೇಲ್ ಹಿಡಿದು ಅಳತೆಮಾಡಲು ಬರುತ್ತದೇನು? ಏನು ಮಾಡಿದ್ದೆ? ಏಕೆ? ನಿನ್ನ ಮೇಲೆ ರಮೇಶ ಮತ್ತು ಕುಮಾರರು ಸಹಾ ಕೊಲ್ಲುವುದಕ್ಕೆ ಯೋಜಿಸಿದ್ದರು ಎನ್ನುವುದು ನಮಗೆ ತನಿಖೆಯಲ್ಲಿ ಸಾಬೀತಾಗಿದೆ. ಅವರ ಹೇಳಿಕೆಯಂತೆ ರಮೇಶಪ್ಪನ ಎನ್ನುವ ಬ್ರೋಕರ್ ಮೂಲಕ ಅವರ ಆಸ್ತಿಯನ್ನು ಮೋಸದ ಮಾರ್ಗದಲ್ಲಿ ಬೇರೆಯವರ ಹೆಸರಿಗೆ ಖಾತೆ ದಾಖಲಿಸಿದೆಯಂತೆ ನಿಜವೇ?
ಹೌದು ಸರ್. ರೆಕಾರ್ಡ್ ರೂಂನಲ್ಲಿನ ಅವರ ಆಸ್ತಿಯ ಮೂಲ ದಾಖಲೆಯನ್ನೆಲ್ಲಾ ತಿದ್ದುಪಡಿಮಾಡಿದ್ದೆ. ಅವರ ತಾಯಿ ವೆಂಕಮ್ಮಜ್ಜಿಯ ಹೆಸರಿನ ಖಾತೆಯ ಪುಟವನ್ನು ಹರಿದುಹಾಕಿ ಅದೇ ಜಾಗಕ್ಕೆ ಅದೇ ಕ್ರಮ ಸಂಖ್ಯೆಯ ಇನ್ನೊಂದು ಪುಟವನ್ನು ಸೇರಿಸಿ ಇಡೀ ಖಾತೆಯ ಲೆಡ್ಜರ್ ಪುಸ್ತಕವನ್ನು ಪುನಃ ಬೈಂಡ್ ಮಾಡಿಸಿ ಜೋಡಿಸಿದ್ದೆ ಸರ್.
ಓಹೋ! ಅದೇನು? ಅಷ್ಟು ಸುಲಭವಾ?
ಹೌದು ಸರ್. ಅದಕ್ಕಾಗಿಯೆಂದೇ ನಿಪುಣ ತಂತ್ರಜ್ಞರನ್ನು ಇಟ್ಟುಕೊಂಡಿದ್ದೇವೆ.
ನಿಮ್ಮ ಲೆಕ್ಕದಲ್ಲಿ ಅವರು ನಿಪುಣ ತಂತ್ರಜ್ಞರು. ನಮ್ಮ ಲೆಕ್ಕದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳು. ಅವರ ವಿವರವನ್ನು ನೀಡು.
ಅವರನ್ನು ಮದ್ರಾಸ್ನಿಂದ ಕೆಲಸವಿದ್ದಾಗ ಕರೆಸುವೆ ಸರ್. ನನಗೆ ಅವರು ಬಹಳ ಪರಿಚಿತ. ಅವರದು ಹಳೇ ಮದ್ರಾಸ್ ಪೋರ್ಟ್ ರೋಡ್ನಲ್ಲಿ ಅವರ ಅಂಗಡಿಯಿದೆ.
ಏನು ಅಂಗಡಿಯಿದೆಯೇ! ಏನಂತಾ ಇದೆ?
ಮುದ್ರಣ ಮತ್ತು ಲೇಖನ ಸಾಮಾಗ್ರಿಗಳ ಅಂಗಡಿ ಸರ್. ಒಮ್ಮೆ ನಮ್ಮ ಕಚೇರಿಯ ಲೇಖನ ಸಾಮಾಗ್ರಿಗಳ ಟೆಂಡರ್ ಅವರ ಅಂಗಡಿ ಲಭಿಸಿತು. ಒಮ್ಮೆ ಮದ್ರಾಸ್ಗೆ ಹೋದಾಗ ಅವರ ಅಂಗಡಿಗೆ ಹೊಗಿದ್ದೆ. ಅವರ ಮುದ್ರಣಾಲಯವನ್ನು ನೋಡುತ್ತಾ ಅವರೊಂದಿಗೆ ಮಾತನಾಡುತ್ತಿದ್ದೆ. ಆಗ ಮುದ್ರಣದ ಯಂತ್ರದಿಂದ ಹಾರಿದ ಮಸಿ ನನ್ನ ಬಟ್ಟೆಗೆ ಬಿತ್ತು. ಆಗ ಪಕ್ಕದಲ್ಲೇ ಇದ್ದ ಕೆಮಿಕಲ್ನಿಂದ ಅವರು ಆ ಕಲೆಯನ್ನು ಹೋಗಲಾಡಿಸಿದರು. ನಾನು ಆಗ ಅವರಿಗೆ ಕೇಳಿದೆ. ಈ ಕೆಮಿಕಲ್ನಿಂದ ಎಲ್ಲಾ ರೀತಿಯ ಕಲೆಗಳನ್ನು ತೆಗೆಯಬಹುದೇ? ಎಂದೆ. ಆಗ ಅವರು ಎಲ್ಲಾ ಅಲ್ಲ. ಪೆನ್ಗೆ ಮತ್ತು ಮುದ್ರಣಕ್ಕೆ ಬಳಸುವ ಮಸಿಯನ್ನು ತೆಗೆಯಬಹುದಷ್ಟೇ ಎಂದರು. ಪಕ್ಕದಲ್ಲಿದ್ದ ಹಾಳೆಯಲ್ಲಿ ಗೀಚಿದ್ದ ಬರಹಗಳನ್ನು ಅಳಿಸಿ ಹಾಕಿ ತೋರಿಸಿದರು. ಆಗ ನಾನು ಆಶ್ಚರ್ಯದಿಂದ ಕೇಳಿದೆ. ವೈಟ್ನರ್ ಬದಲು ಇದನ್ನೇ ಬಳಸಬಹುದಲ್ಲವೆ ಎಂದೆ. ಅವರು ನಗುತ್ತಾ ಇದು ಅದಕ್ಕಿಂತಲೂ ಮಿಗಿಲು. ವೈಟ್ನರ್ ಆದರೆ ಹಚ್ಚಿದ್ದು ತಿಳಿಯುತ್ತದೆ. ಆದರೆ ಇದು ತಿಳಿಯುವುದೇ ಇಲ್ಲ ಎಂದು ನಕ್ಕರು. ಆಗ ಅವರಿಂದ ಬರುವಾಗ ಆ ಕೆಮಿಕಲ್ ತೆಗೆದುಕೊಂಡು ಬಂದೆ. ಕಚೇರಿಯಲ್ಲಿ ಒಂದೆರಡು ಕಡತದಲ್ಲಿ ಬಳಸಿ ನೋಡಿದೆ. ಅವರು ಹೇಳಿದ್ದು ಸತ್ಯವಾಯಿತು. ಇದೇ ಕೆಮಿಕಲ್ ಬಳಸಿ ಮೂಲ ಬರಹವನ್ನು ಅಳಿಸಿ ಕಡತಗಳನ್ನು ತಿದ್ದುತ್ತಾ ಹೋದೆ ಸರ್.
ಓಹ್! ಹಾಗಾದರೆ ನಿನಗೆ ಸಂಜೀವಿನಿಯೋ ಇಲ್ಲವೆ ಅಮೃತವೋ? ಅಲ್ಲಿಂದಲೆ ಸಿಕ್ಕಿದೆಯಲ್ಲವೆ?
ಹೌದು ಸರ್. ಆ ದಿನ ನನ್ನ ಬಟ್ಟೆಗೆ ಅವರ ಮುದ್ರಣಾಲಯದಲ್ಲಿ ಮಸಿ ಹಾರದಿದ್ದರೆ ನನಗೆ ಅದು ದೊರಕುತ್ತಿರಲಿಲ್ಲ.
ನೀನು ಮಾಡಿದ ಹಲ್ಕಾ ಕೆಲಸಕ್ಕೆ ಆಸ್ಪದ ಸಿಗುತ್ತಿರಲಿಲ್ಲ ಎನ್ನು..
ನಿಜ ಸರ್.
ನಂತರ ಮತ್ತೇನು ಮಾಡಿದೆ?
ಸಹಜವಾಗಿ ಹರಿದುಹೋದ ಹಳೆಯ ಪುಸ್ತಕಗಳನ್ನು ಅವರ ಮುದ್ರಣಾಲಯದಲ್ಲೇ ಹೊಲಿಗೆ ಹಾಕಿಸಿ ಬೈಂಡ್ ಮಾಡಿಸುತ್ತಿದ್ದೆವು. ಅಂತಹ ಸಮಯದಲ್ಲಿ ನಾನು ಬೇಕಾದ ಪುಟವನ್ನು ತೆಗೆದು ಹಾಕಿ ಬೇರೆಯ ಪುಟವನ್ನು ಸೇರಿಸಿ ಬೈಂಡ್ ಮಾಡಿಸುತ್ತಿದ್ದೆ.
ಏನು ಅರ್ಥವಾಗಲಿಲ್ಲ. ಸರಿಯಾಗಿ ಹೇಳು?
ನಾನು ಯಾರದಾದರು ಖಾತೆಯನ್ನು ತಿದ್ದುಪಡಿ ಮಾಡುವುದಿದ್ದರೆ ಇಡೀ ಹಾಳೆಯನ್ನು ತಿದ್ದುವುದು ಕಷ್ಟ. ಎಷ್ಟೇ ಆದರೂ ಮೇಲ್ನೋಟಕ್ಕೆ ಕಂಡುಬರುವುದು ಸಹಜ. ಅದಕ್ಕಾಗಿಯೇ ರೆಕಾರ್ಡ್ ರೂಂನಲ್ಲಿ ಹಳೆಯ ಕಾಲದಿಂದ ಸ್ಟಾಕ್ ಇದ್ದಂತಹ ಖಾಲಿ ಲೆಡ್ಜರ್ ಪುಸ್ತಕಗಳನ್ನು ಬಳಸಿಕೊಳ್ಳುತ್ತಿದ್ದೆ. ಉದಾಹರಣೆಗೆ ಯಾರದಾದರು ಖಾತೆ ಪುಟ ಸಂಖ್ಯೆ ಹತ್ತರಲ್ಲಿ ಇದ್ದರೆ ಅದಕ್ಕೆ ಅನುಗುಣವಾಗಿ ಖಾಲಿ ಇರುವ ಲೆಡ್ಜರ್ ಪುಸ್ತಕದ ಅದೇ ಪುಟಸಂಖ್ಯೆಯ ಹಾಳೆಯನ್ನು ಬಳಿಸಿಕೊಳ್ಳುತ್ತಿದ್ದೆ. ಅದರಲ್ಲಿ ಹೊಸಬರ ಖಾತೆಯನ್ನು ಬರೆಸುತ್ತಿದ್ದೆ. ಇದಕ್ಕಾಗಿ ಹ್ಯಾಂಡ್ ವ್ರೈಟಿಂಗ್ ಸ್ಪೆಶಲಿಸ್ಟ್ಗಳನ್ನು ಇಟ್ಟುಕೊಂಡಿದ್ದೇವೆ ಸರ್. ಅವರು ಬಹಳ ನಾಜೂಕಿನಿಂದ ಅನುಮಾನ ಮೂಡದಂತೆ ಬರೆದುಕೊಡುತ್ತಾರೆ. ಇದೆಲ್ಲಾ ಮುಗಿದ ನಂತರ ಪುಸ್ತಕವನ್ನು ಅದೇ ಮುದ್ರಣಾಲದಯಲ್ಲಿ ಬೈಂಡ್ ಮಾಡಿಸುತ್ತಿದ್ದೆ.
ಪರವಾಗಿಲ್ಲ. ಅಂತೂ ನಿನ್ನಂತಹವನು ಊರಿಗೆ ಒಬ್ಬನಿದ್ದರೂ ಸಾಕು. ದೇಶಕ್ಕೆ ಬೇರೆಯ ದೇಶದವರು ಕನ್ನ ಹಾಕುವುದು ಬೇಡ. ಹಾಗೇ ದೇಶ ನಾಶವಾಗಿ ಬಿಡುತ್ತೆ. ನಿಮ್ಮ ಬೇವರ್ಸಿ ಬದುಕಿಗೆ ನಾಚಿಕೆ ಇಲ್ಲವೇ?
ಏನು ಮಾಡೋದು ಸರ್. ಇದಕ್ಕೆಲ್ಲಾ ನಾನೊಬ್ಬನೇ ಕಾರಣನಲ್ಲ. ಮೊದಲೇ ನುಡಿದಂತೆ ಹಲವರು ಇದ್ದಾರೆ. ರಾಜಕೀಯ ಒತ್ತಡವೂ ಇದೆ. ಹಾಗಾಗಲಿ ಈ ಮಾರ್ಗವನ್ನು ಕಂಡುಕೊಂಡೆವು.
ಲೇ, ನಿನ್ನ ತಲೆಯೆಲ್ಲಿ ಏನಿದೆ? ಒಮ್ಮೆ ನೀನೇ ಮದ್ರಾಸ್ಗೆ ಹೋದಾಗ ಬಟ್ಟೆಗೆ ಮಸಿ ತಗುಲಿದಾಗ ಅಚಾನಕ್ ಆಗಿ ಕಂಡುಕೊಂಡ ಮಾರ್ಗವೆನ್ನುವೆ. ಈಗ ನೋಡಿದರೆ ರಾಜಕೀಯದ ಹೆಸರೂ ಹೇಳುತ್ತೀಯ. ಸರಿಯಾಗಿ ಹೇಳು. ಹುಚ್ಚನಂತೆ ಹೇಳಿಕೆ ನೀಡಬೇಡ.
ಇಲ್ಲ ಸರ್. ಎಲ್ಲವೂ ಮೋಸಮಾಡುವುದಕ್ಕೆ ನಾನೇ ದುರ್ಬಳಕೆ ಮಾಡಿಕೊಂಡಿದ್ದು. ಮೋಸದ ಮಾರ್ಗ ತಿಳಿದ ನಂತರ ಹಣದಾಸೆಯನ್ನು ತೋರಿಸಿ ಎಲ್ಲರನ್ನು ಬಲೆಗೆ ಹಾಕಿಕೊಂಡೆ. ಯಾರೇ ಮೋಸವಾಗಿದೆಯೆಂದರು ದಾಖಲೆಗಳನ್ನು ನಾನು ಮೊದಲೆ ಯೋಜಿಸಿ ನಾಶಮಾಡುತ್ತಿದ್ದಂತೆ ಯಾರಿಗೂ ಅನುಮಾನ ಬಂದಿಲ್ಲ. ಹಾಗಾಗಿ ಯಾರೇ ತನಿಖೆಗೆ ಬಂದರು ಗೊತ್ತಾಗುವುದಿಲ್ಲ. ಕೆಲವರಿಗೆ ಚೂರು ಅನುಮಾನ ಬಂದರೆ ಅವರಿಗೆ ರಮೇಶಪ್ಪ, ಮಂಜಪ್ಪ, ಶ್ರೀಕರ ಇವರ ಬಳಿಯಿರುವ ಗೂಂಡಾಗಳಿಂದ ಬೆದರಿಸಿ ಬಾಯಿ ಮುಚ್ಚಿಸುತ್ತಿದ್ದರು. ಹಾಗಾಗಿ ನನಗೆ ಎಲ್ಲಿಯೂ ತೊಂದರೆ ಆಗಲಿಲ್ಲ..
ಈಗ ಬ್ರೋಕರ್ ಮಂಜಪ್ಪ ನೀಡಿದ ಹೇಳಿಕೆಗು, ಕಂದಾಯಾಧಿಕಾರಿ ನೀಡಿದ ಹೇಳಿಕೆಗು ಹಾಗೂ ರೆಕಾರ್ಡ್ ರೂಂ ಗುಮಾಸ್ತ ನುಡಿಯುತ್ತಿರುವ ಹೇಳಿಕೆಗೂ ಹೋಲಿಕೆಯಾಗುತ್ತಿರುವುದರಿಂದ ನಿಜವಾಗಿಯು ತನಿಖೆಯಲ್ಲಿ ಪ್ರಗತಿ ಸಾಧಿಸಿದ್ದೇನೆ ಎನ್ನುವುದು ತನಿಖಾಧಿಕಾರಿಗೆ ಖಾತ್ರಿಯಾಯಿತು. ಈಗ ಗಡಿಯಾರದ ಕಡೆಗೆ ನೋಡುತ್ತಾರೆ. ಬೆಳಿಗ್ಗೆ 5.30ರ ಸಮಯ. ಠಾಣೆಯ ಇನ್ನೊಂದು ಕೊಠಡಿಯಲ್ಲಿ ಕಂದಾಯಾಧಿಕಾರಿ ಇರುವುದು ಈ ಗುಮಾಸ್ತನಿಗೆ ತಿಳಿದಿಲ್ಲ. ತಿಳಿದರೆ ಕಂದಾಯಾಧಿಕಾರಿ ಠಾಣೆಯಿಂದಲೇ ತನಗೆ ಫೋನ್ ಮಾಡಿದ್ದು ಎನ್ನುವುದು ಗೊತ್ತಾಗಿ ಬಿಡುತ್ತದೆ. ಹಾಗಾಗಿ ಪೋಲಿಸರು ಎಲ್ಲವನ್ನು ಬುದ್ಧಿವಂತಿಕೆಯಿಂದ ಮುಚ್ಚಿಟ್ಟಿದ್ದಾರೆ.
ಈಗ ಸರ್ಕಲ್ ಇನ್ಸ್ಪೆಕ್ಟರ್ ಕುಳಿತುಕೊಳ್ಳುವ ಜಾಗಕ್ಕೆ ತನಿಖಾಧಿಕಾರಿ ಬರುತ್ತಾರೆ. ಅಲ್ಲಿ ಪೋಲಿಸರಿಗೆ ಆದೇಶಿಸುತ್ತಾರೆ. ಠಾಣೆಯಲ್ಲಿ ನಡೆಯುತ್ತಿರುವ ವಿಚಾರಣೆ ಹೊರಗಡೆ ಯಾರಿಗೂ ಗೊತ್ತಾಗಬಾರದು. ನಾವು ಈ ಮೂವರನ್ನು ಸಂಪೂರ್ಣ ವಿಚಾರಣೆಮಾಡುವುದಕ್ಕೆ ಕಡಿಮೆಯೆಂದರೂ ಒಂದೆರಡು ದಿನ ಬೇಕು. ಇದು ಮುಗಿದ ನಂತರವೆ ನಮಗೆ ಈ ಪ್ರಕರಣದಲ್ಲಿ ಭಾಗಿಯಾದವರ ಸಂಪೂರ್ಣ ವಿವರ ತಿಳಿಯುತ್ತದೆ. ಅಲ್ಲಿಯವರೆಗೂ ನಾವು ಇವರನ್ನು ಕಸ್ಟಡಿ ತೆಗೆದುಕೊಂಡಿದ್ದು ಹೊರ ಜಗತ್ತಿಗೆ ಸದ್ಯಕ್ಕೆ ತಿಳಿಯುವುದು ಬೇಡ. ಇವರನ್ನು ಸದ್ಯಕ್ಕೆ ನಾವು ನ್ಯಾಯಾಲಯಕ್ಕೆ ಹಾಜರುಪಡಿಸುವುದಂತೂ ಖಂಡಿತಾ ಬೇಡ. ಎಲ್ಲವನ್ನು ಗೌಪ್ಯವಾಗಿ ಇಡೋಣ. ಎಲ್ಲಾ ಆರೋಪಿಗಳನ್ನು ಒಟ್ಟಿಗೆ ಎಫ್.ಐ.ಆರ್ ಹಾಕಿ ನ್ಯಾಯಾಲಯಕ್ಕೆ ಒಂದೇ ಬಾರಿಗೆ ಹಾಜರುಪಡಿಸೋಣ. ಇಲ್ಲದೇ ಹೋದಲ್ಲಿ ಒಬ್ಬೊಬ್ಬರ ಮೇಲೆ ಒನ್ನೊಂದು ಆರೋಪ ಹೋರಿಸಿದರೆ ಸುಲಭವಾಗಿ ನುಣುಚಿಕೊಳ್ಳುತ್ತಾರೆ. ಒಮ್ಮೊಮ್ಮೆ ಅನಿವಾರ್ಯವಾಗಿ ನಿಯಮ ಉಲ್ಲಂಘಿಸಬೇಕಾಗುತ್ತದೆ. ಕೆಲವು ದುಷ್ಟು ಸಂಹಾರದಲ್ಲಿ ಇದೆಲ್ಲವೂ ಸಹಜ. ನಾವು ಮಾಡುತ್ತಿರುವುದು ಸಮಾಜದ ಒಳಿತಿಗಾಗಿ. ಹಾಗಾಗಿ ನೊಂದುಕೊಳ್ಳುವುದು ಬೇಡ. ಆಗಿದ್ದನ್ನು ಎದುರಿಸಲೇಬೆಕು. ಈಗ ಇವರನ್ನು ಎಲ್ಲಿ ಬಚ್ಚಿಡೋಣವೆಂದು ಪ್ರಶ್ನಿಸುತ್ತಾರೆ.
ಸರ್ಕಲ್ ಇನ್ಸ್ಪೆಕ್ಟರ್ ಸಲಹೆ ಕೊಡುತ್ತಾರೆ. ಹೊಸ ಜೈಲು ಉದ್ಘಾಟನೆಯಾದ ನಂತರ ಹಳೇ ಜೈಲಿನ ಕಟ್ಟಡ ಖಾಲಿಯಿದೆ. ಅಲ್ಲಿಗೆ ಇವರನ್ನು ಶಿಫ್ಟ್ ಮಾಡಿದರೆ ಯಾರಿಗೂ ಅನುಮಾನ ಬರುವುದಿಲ್ಲ. ಅಲ್ಲಿಗೆ ಯಾರೂ ಹೊಗುವುದಿಲ್ಲ ಎಂದು ಸಲಹೆ ನೀಡುತ್ತಾರೆ. ಅದರಂತೆ ಮೂರು ಜನರನ್ನು ಕಣ್ಣಿಗೆ ಬಟ್ಟೆ ಕಟ್ಟಿ ಬೆಳಗಾಗುವುದರೊಳಗಾಗಿ ಶಿಫ್ಟ್ ಮಾಡುತ್ತಾರೆ. ಒಂದೇ ಸಮನೆ ರಾತ್ರಿಯಿಡಿ ಸುರಿಯುತ್ತಿದ್ದ ಬಿರುಮಳೆಯು ಹಾಗೇ ಮುಂದುವರೆದಿದೆ. ಅದೇ ಮಳೆಗಾಳಿಯಲ್ಲಿಯೆ ತಾವಂದುಕೊಂಡ ಕಾರ್ಯವನ್ನು ಜಾಗೃತಿಯಿಂದ ಮುಗಿಸಿದರು. ಆಗ ಸಮಯ ಮುಂಜಾನೆ ಆರು ಗಂಟೆ.
ಈಗ ತನಿಖಾಧಿಕಾರಿ ಸರ್ಕಲ್ ಇನ್ಸ್ಪೆಕ್ಟರ್ರೊಂದಿಗೆ ಗುಪ್ತವಾಗಿ ತುಸು ಸಮಾಲೋಚಿಸಿ ನಂತರ ಏನು ಮಾಡಬೇಕೆನ್ನುವುದನ್ನು ಆಲೋಚಿಸುತ್ತಾ ಕೂತಿದ್ದಾರೆ. ರಾತ್ರಿಯಿಡಿ ಬಿಡುವಿಲ್ಲದೇ ವಿಚಾರಣೆ ನಡೆಸಿದರು ಕೊಂಚವೂ ದಣಿದಂತೆ ಕಾಣದೇ ಮುಂದೇನು ಮಾಡಬೇಕೆನ್ನುತ್ತಾ ಅತ್ತಿತ್ತ ಓಡಾಡುತ್ತಿದ್ದಾರೆ. ಇತ್ತ ಸರ್ಕಲ್ ಇನ್ಸ್ಪೆಕ್ಟರ್ ರಿಫ್ರೆಶ್ ಆಗಿ ಬರುವುದಕ್ಕೆ ಹೊರಡುತ್ತಾರೆ. ಆದರೆ ತನಿಖಾಧಿಕಾರಿ ಮಾತ್ರ ಕೊಂಚವೂ ವಿರಮಿಸದೆ ಠಾಣೆಯಲ್ಲೆ ಕುಳಿತು ಕಾರ್ಯನಿರ್ವಹಿಸುತ್ತಾ ಮೂರು ಜನ ನೀಡಿದ ಹೇಳಿಕೆಯನ್ನು ಓದುತ್ತಿದ್ದಾರೆ. ಈಗಿನ ಪ್ರಕರಣಕ್ಕೆ ನಂಟಾದ ಒಟ್ಟು 68 ಕೊಲೆ ಪ್ರಕರಣಗಳನ್ನು ಭೇದಿಸಬೇಕು. ಅದರಲ್ಲಿ ಭಾಗಿಯಾದ ಎಲ್ಲರನ್ನು ಒಟ್ಟಾಗಿಸಿ ಒಂದೇ ಎಫ್.ಐ.ಆರ್ ದಾಖಲಿಸಬೇಕೆನ್ನುವುದು ಇವರ ಉದ್ದೇಶವಾಗಿದೆ. ಅದೇ ಹಠದಲ್ಲಿ ಕ್ಷಣಕ್ಷಣವೂ ಒಂದೊಂದು ನಾಜೂಕನ್ನು ಬಳಸುತ್ತಿದ್ದಾರೆ.
ನಂತರ ಸಮಯವು 6.30ಕ್ಕೆ ಕೂಡಲೇ ಸರ್ಕಲ್ ಇನ್ಸ್ಪೆಕ್ಟರ್ ಠಾಣೆಗೆ ಬರುತ್ತಾರೆ. ಗಮನಿಸಿದ ತನಿಖಾಧಿಕಾರಿ ಅವರನ್ನು ಕರೆದುಕೊಂಡು ನೇರವಾಗಿ ಮೂರು ಜನರಿದ್ದ ಹಳೆಜೈಲು ಕಟ್ಟಡಕ್ಕೆ ಹೋಗುತ್ತಾರೆ. ಈಗ ಸರ್ಕಲ್ ಇನ್ಸ್ಪೆಕ್ಟರ್ಗೆ ನುಡಿಯುತ್ತಾರೆ. ನಾನು ಈ ಪ್ರಕರಣದ ವಿಚಾರಣೆ ಮುಗಿಯುವವರೆ ಇಲ್ಲಿಯೇ ಇರುವೆ. ನೀವು ಸಹಕರಿಸಿ ಎನ್ನುತ್ತಾರೆ. ಸರ್ಕಲ್ ಇನ್ಸ್ಪೆಕ್ಟರ್ ಹೂಂ ಎನ್ನುತ್ತಾರೆ. ಈಗ ಮುಂಜಾನೆ 6.45ರ ಸಮಯ. ಜೈಲಿನಲ್ಲಿ ಮೂರು ಜನರನ್ನು ಪ್ರತ್ಯೇಕವಾಗಿ ಒಂದೊಂದು ಕೊಠಡಿಯಲ್ಲಿ ಬೇರೆಯಾಗಿ ಸೆರೆಯಾಗಿಸಿದ್ದಾರೆ. ಈಗ ತನಿಖಾಧಿಕಾರಿ ರೆಕಾರ್ಡ್ ರೂಂ ಗುಮಾಸ್ತನ ವಿಚಾರಣೆಗೆ ಕೂರುತ್ತಾರೆ.
ಆತನ ಕಣ್ಣಿನ ಬಟ್ಟೆಯನ್ನು ಬಿಚ್ಚಿಸುತ್ತಾರೆ. ಈಗ ಆತನಿಗೆ ತಾನೆಲ್ಲಿದ್ದೇನೆ ಎಂದು ತಿಳಿದುಕೊಳ್ಳುವ ತವಕ. ಆದರೆ ಯಾವುದಕ್ಕೂ ಅಸ್ಪದ ದೊರಕುತ್ತಿಲ್ಲ. ಈಗ ಈತನ ವಿಚಾರಣೆಯನ್ನು ಶುರುಮಾಡುತ್ತಾರೆ. ಆತನ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಲು ಪೇದೆಗಳು ಸಿದ್ಧವಾಗಿದ್ದಾರೆ. ತನಿಖಾಧಿಕಾರಿ ಆತನಿಗೆ ಪ್ರಶ್ನಿಸುತ್ತಾರೆ.
ನೀನು ನಕಲಿ ದಾಖಲೆಗಳನ್ನು ಸೃಷ್ಟಿಸಿದಾಗ ಜನರು ಜಗಳಕ್ಕೆ ಬಂದರೆ, ಇಲ್ಲವೇ ಮೋಸವಾಗಿದೆಯೆಂದು ದೂರು ನೀಡಿದರೆ ಏನು ಮಾಡಿದ್ದೆ? ನಿನಗೆ ಯಾರಿಂದಲೂ ತೊಂದರೆಯಾಗುತ್ತದೆಂದು ಅನ್ನಿಸಲಿಲ್ಲವೆ?
ಸಾಕಷ್ಟು ಬಾರಿ ನೀವು ಹೇಳಿದಂತೆ ಆಗಿದೆ ಸರ್. ಆದರೆ ನಾವೆಲ್ಲಾ ಒಟ್ಟಾಗಿ ಎದುರಿಸಿದ್ದೇವೆ. ಹಾಗಾಗಿ ಏನು ತೊಂದರೆ ಅನ್ನಿಸಲೇ ಇಲ್ಲ.
ಒಟ್ಟಾಗಿ ಎದುರಿಸಿದ್ದೇವೆ ಅಂದರೆ ಏನು?
ಅಂದರೆ ಜನರನ್ನು ಕೆಲವೊಮ್ಮೆ ರೌಡಿಗಳಿಂದ ಬೆದರಿಸಿದ್ದೇವೆ. ಇನ್ನೂ ಹಲವೊಮ್ಮೆ ಕೆಲವರನ್ನು ರಮೇಶಪ್ಪ, ಮಂಜಪ್ಪ, ಶ್ರೀಕರ ಮಾಡಿದ ಉಪಯಾದಂತೆ ಕೊಲೆಯಾಗಿದ್ದಾರೆ. ಹಾಗಾಗಿ ನಮಗೆ ತೊಂದರೆ ಆಗಿಲ್ಲ ಸರ್.
ಕೊಲೆ ಮಾಡಿದ್ದೀರ? ಒಟ್ಟು ಎಷ್ಟು ಜನರನ್ನು ಕೊಂದಿದ್ದೀರಿ?
ಸರಿಯಾಗಿ ನೆನಪಿಲ್ಲ ಸರ್. ಒಟ್ಟಾರೆ ನಮ್ಮನ್ನು ಪ್ರಶ್ನಿಸಿದವರನ್ನು ಸುಮ್ಮನೆ ಬಿಟ್ಟಿಲ್ಲ. 60 ರಿಂದ 70 ಜನರನ್ನು ಅಪಘಾತದ ರೀತಿಯಲ್ಲಿ ಕೊಂದಿದ್ದೇವೆ ಸರ್. ಅವರು ಬೇರೆಯ ಊರಿಗೆ ಹೋದಾಗ ಅಲ್ಲಿಯೇ ಅವರಿಗೆ ಅಪಘಾತವಾದಂತೆ ಬಿಂಬಿಸಿದ್ದೇವೆ. ರಮೇಶಪ್ಪನ ಲಾರಿಗಳನ್ನು ಅವರ ವಾಹನದ ಮೇಲೆ ಹತ್ತಿಸಿದ್ದೇವೆ. ಇಲ್ಲವೇ ಕೊಲೆಮಾಡಿ ರೈಲು ಹಳಿ ಮೇಲೆ ರೈಲು ಬರುವ ಸಮಯದಲ್ಲಿ ಹಾಕಿಸಿದ್ದೇವೆ. ಇನ್ನೂ ಹಲವು ದುರ್ಮಾರ್ಗಗಳನ್ನು ಅನುಸರಿಸಿದ್ದೇವೆ ಸರ್.
ಇಷ್ಟೆಲ್ಲಾ ಕೊಲೆಗಳನ್ನು ಮಾಡಿದ್ದ ನಿಮಗೆ ಮುಂದೊಂದು ದಿವಸ ಸಿಕ್ಕಿ ಬೀಳಬಹುದು ಎನ್ನುವ ಹೆದರಿಕೆ ಇರಲಿಲ್ಲವೇ?
ಇಲ್ಲ ಸರ್. ಮೊದಲು ಭಯವಾಗುತ್ತಿತ್ತು. ನಂತರ ಅದು ಅಭ್ಯಾಸವಾಗಿ ಹೋಯ್ತು.
ತೂಥ್. ಕೊಲೆ ಮಾಡುವುದು ಅಭ್ಯಾಸವಾಯ್ತ? ಸರ್ಕಾರಿ ನೌಕರರಾಗಿ ಎಂತಹ ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಂಡಿದ್ದೀರಿ ಅಲ್ಲವೇ?
ಕೊಲೆ ಆಯ್ತು, ಅತ್ಯಾಚಾರ ಎಷ್ಟು ಮಾಡಿದ್ದೀರ?
ಇಲ್ಲ ಸರ್. ಅಂತಹುದು ಏನು ಇಲ್ಲ.
ಸುಳ್ಳು ಹೇಳಿದರೆ ಗೊತ್ತಲ್ಲ. ನಿಜ ಹೇಳಿ ತಪ್ಪೊಪ್ಪಿಕೊಂಡರೆ ಸರಿ. ಇಲ್ಲದಿದ್ದರೆ ಮತ್ತೆ ಮುಂದಿನ ತೊಂದರೆಗೆ ನೀನೆ ಹೊಣೆಯಾಗುತ್ತೀಯ ನೆನಪಿರಲಿ. ನಕ್ಸಲರಲ್ಲಿ ನಿನ್ನೆ ಒಬ್ಬನನ್ನು ನಾವು ಸೆರೆಹಿಡಿದಿದ್ದೇವೆ. ಆತ ಹೇಳುವಂತೆ ನೀನು ಹಲವು ಜನ ಮಹಿಳೆಯರಿಗೆ ತೊಂದರೆ ನೀಡಿದ್ದೀಯಂತೆ. ಬ್ಲಾಕ್ ಮೇಲ್ ಮಾಡಿ ಅವರನ್ನು ನಿನ್ನ ಕಾಮದಾಹಕ್ಕೆ ಬಳಸಿಕೊಂಡಿದ್ದೀಯ ಎಂದು ನುಡಿಯುತ್ತಾನೆ. ಅದೂ ಇರಲಿ, ನಿನ್ನನ್ನು ನಕ್ಸಲರು ಅಪಹರಿಸಿದಾಗ ನೀನು ಎಲ್ಲಿದ್ದೆ?
ತಪ್ಪಾಯ್ತು ಸರ್. ಎಲ್ಲ ನಿಜ ಹೇಳುವೆ. ಹೌದು ಆತ ಹೇಳಿದ್ದು ಸತ್ಯ. ನಾನು ಸೇರಿದಂತೆ ಎಲ್ಲರೂ ನಮ್ಮ ಕಾಮದಾಹಕ್ಕೆ ಅನೇಕ ಜನ ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡಿ ಅವರನ್ನು ನಮಗೆ ಬೇಕಾದಂತೆ ಬಳಸಿಕೊಂಡಿದ್ದೇವೆ. ನಾವು ಮಾಡಬಾರದ ತಪ್ಪುಗಳನ್ನು ಮಾಡಿದ್ದೇವೆ. ನಿನ್ನೆ ನಾನಿದ್ದ ಮನೆಯು ಸಹಾ ನನ್ನಿಂದ ಮೋಸ ಹೋದ ವಿಧವೆಯೊಬ್ಬಳದು.
ಲೋ ಅಯೋಗ್ಯ. ನನಗೆ ಎಲ್ಲವೂ ತಿಳಿಯುತ್ತದೆ. ನೀನು ಗೊತ್ತಿಲ್ಲ ಎಂದು ಹೇಳಿ ನನಗೆ ದಾರಿ ತಪ್ಪಿಸಬೇಡ ಹುಷಾರ್. ನಿನ್ನಿಂದ ಮೋಸಹೋದವರ ವಿವರ ಹೇಳು.
ಸುಮಾರಷ್ಟು ಜನರಿದ್ದಾರೆ ಸರ್. ಎಲ್ಲಿಂದ ಆರಂಭಿಸಬೇಕು ಎನ್ನುವುದು ನೆನಪಾಗುತ್ತಿಲ್ಲ.
ಓಹ್, ಅಷ್ಟೊಂದು ಭಯಾನಕವಾದ ಕರಾಳ ಮುಖ ನಿಮ್ಮದು. ಇರಲಿ ಕೊನೆಯಿಂದಲೇ ಆರಂಭಿಸು. ಇತ್ತೀಚೆಗೆ ಯಾರಿಗೆ ಮೊಸಮಾಡಿದ್ದೆ?
ಒಬ್ಬಳು ಹುಡುಗಿಗೆ ಮೋಸಮಾಡಿದ್ವಿ ಸರ್. ಆಕೆಯ ಇಡೀ ಕುಟುಂಬವು ರಸ್ತೆ ಅಪಘಾತದಲ್ಲಿ ಮೃತರಾದರು. ಈಕೆ ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಳು. ಕೊನೆಗೊಂದು ದಿವಸ ಈಕೆ ತನ್ನ ತಂದೆಯ ಹೆಸರಿನಲ್ಲಿದ್ದ ಮನೆಯನ್ನು ತನಗೆ ಖಾತೆ ವರ್ಗಾಯಿಸುವಂತೆ ಕೋರಿ ಅರ್ಜಿಯನ್ನು ನೀಡಿದಳು. ಆಗ ನಮ್ಮ ಕಂದಾಯ ನಿರೀಕ್ಷಕ ಆಕೆಯ ಅರ್ಜಿಯನ್ನು ಪರಿಶೀಲಿಸಿದ. ಅದು 94ಸಿ ಯೋಜನೆಯಡಿ ಮಂಜೂರಾದ್ದಾಗಿತ್ತು. ಅದರಲ್ಲಿ ಅವಳ ತಂದೆ ಹೊಸದಾಗಿ ಮನೆಯನ್ನು ಕಟ್ಟಿದ್ದರು. ಎಲ್ಲವನ್ನು ಅರಿತ ಆತ ಮನೆಯ ಮೂಲ ಪತ್ರ, ಟೈಟಲ್ ಡೀಡ್ ತೆಗೆದುಕೊಂಡು ಬಾ ಎಂದ. ಆಕೆ ಅದನ್ನು ತೆಗೆದುಕೊಂಡು ಬಂದುಕೊಟ್ಟಳು. ನಂತರ ಈ ಹಿಂದೆ ನಿಮ್ಮ ತಂದೆಗೆ ಸರ್ಕಾರ 94ಸಿಯಡಿ ಭೂಮಿ ಮಂಜೂರಾಗಿದೆಯೆಂದು ನೀಡಿದ ಸರ್ಕಾರಿ ನೋಟಿಸ್, ನಂತರ ಬ್ಯಾಂಕ್ಗೆ ನೆಲಕಿಮ್ಮತ್ತು ತುಂಬಿದ ಚಲನ್ ತೆಗೆದುಕೊಂಡು ಬಾ ಎಂದ. ಆಕೆಗೆ ಏನೆಂದು ಅರ್ಥವಾಗಲಿಲ್ಲ. ಆಕೆಯ ಪರವಾಗಿ ಒಬ್ಬರು ನಿವೃತ್ತ ಶಿಕ್ಷಕರು ಬಂದು ಆತನಿಗೆ ಪ್ರಶ್ನಿಸಿದರು. ನಿಮ್ಮಲ್ಲಿ ಈಗ ಇರುವ ಖಾತೆಯನ್ನು ಬದಲಾಯಿಸುವುದಕ್ಕೆ ಮೂಲ ದಾಖಲೆಗಳು ನಿಮಗೆ ಯಾವ ಕಾನೂನಿನ ಅನ್ವಯ ಬೇಕು? ಇಷ್ಟಕ್ಕೂ ನೀವೀಗ ಖಾತೆಯನ್ನು ಹೊಸದಾಗಿ ಮಾಡುತ್ತಿಲ್ಲ. ಈಗ ಇರುವ ಖಾತೆಯನ್ನು ಅವರ ಮಗಳಿಗೆ ವರ್ಗಾವಣೆ ಮಾಡುತ್ತಿದ್ದೀರಿ ಅಷ್ಟೇ. ನೀವು ಹೀಗೆ ಸತಾಯಿಸಿದರೆ ನಿಮ್ಮ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ಎಚ್ಚರಿಸಿದರು. ಆದರೆ ಕಂದಾಯ ನಿರೀಕ್ಷಕ ಯಾವುದಕ್ಕೂ ಬಗ್ಗದೇ ಬೇಕಾದರೆ ನಿಮಗೆ ಮೇಲಾಧಿಕಾರಿಗಳ ನಂಬರ್ ನಾನೇ ಕೊಡುವೆ ಕರೆ ಮಾಡಿ ಎಂದ. ಅತ್ತಕಡೆಯಿಂದಲೂ ಅದೇ ಉತ್ತರ ಬಂತು. ನೋಟೀಸ್ ಮತ್ತು ಚಲನ್, ಮೂಲ ಪತ್ರ ಬೇಕೇಬೇಕು. ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಅವರು ಪತ್ರವನ್ನು ಆಕೆಯಿಂದ ಬರೆಸಿದರು. ಆಗ ಎಲ್ಲವನ್ನು ಗಮನಿಸುತ್ತಿದ್ದ ಗೌರಮ್ಮ ಮೆತ್ತನೇ ಆ ಹುಡುಗಿಯನ್ನು ತನ್ನತ್ತ ಕರೆದಳು. ನೀನು ಹೀಗೆಲ್ಲಾ ಮಾಡಿದರೆ ಆಗುವುದಿಲ್ಲ. ಒಂದು ವೇಳೆ ರೆಕಾರ್ಡ್ ರೂಂ ಗುಮಾಸ್ತರ ಬಳಿ ವಿಚಾರಿಸು, ನಿನ್ನ ಕೆಲಸವಾಗುತ್ತದೆ ಎಂದಳು. ಆಗ ಆ ಹುಡುಗಿ ನನ್ನ ಬಳಿ ಬಂದಳು ಸರ್.
ಆಗ ನೀನೇನು ಮಾಡಿದೆ?
ಅವಳಿಗೆ ನಿನ್ನ ದಾಖಲೆಗಳನ್ನೆಲ್ಲ ಹುಡುಕಿ ಹೇಳುವೆ. ನಿನ್ನ ತಂದೆ ನನಗೆ ಬಹಳ ಆಪ್ತರು. ನಿಜವಾಗಿಯೂ ನಿನ್ನ ಕೆಲಸವಾದಂತೆ ಎಂದುಕೋ. ನನಗೀಗ ಬಿಡುವಿಲ್ಲದಷ್ಟು ಕೆಲಸ. ಹಾಗಾಗಿ ನಿನ್ನ ತಂದೆಯವರ 94ಸಿ ಕಡತವನ್ನು ಹುಡುಕಿ ನೋಡಲು ಸಾಕಷ್ಟು ಸಮಯಬೇಕು. ಇವೆಲ್ಲಾ ಸುಮಾರು 20ವರ್ಷಗಳಷ್ಟು ಹಿಂದಿನ ಪ್ರಕರಣಗಳು. ನಿನ್ನ ಮೊಬೈಲ್ ನಂಬರ್ ನನಗೆ ನೀಡು. ಸಿಕ್ಕಿದೊಡನೆ ನಿನಗೆ ಹೇಳುವೆ ಎಂದೆ.
ನಂತರ ಏನಾಯ್ತು?
ಆಕೆಯೇ ನನಗೆ ಕರೆಮಾಡಲಿ ಎಂದು ಕಾಯುತ್ತಿದ್ದೆ. ಅಂತೂ ಒಂದು ದಿನ ಆಕೆಯೇ ಕರೆಮಾಡಿದಳು. ಮೊದಲೇ ಯೋಜಿಸಿದಂತೆ ನುಡಿದೆ. ಎಷ್ಟೇ ಹುಡುಕಿದರೂ ಸಿಗುತ್ತಿಲ್ಲ. ಆದರೂ ಇನ್ನೊಮ್ಮೆ ನೊಡುವೆ ಎಂದೆ. ಜೊತೆಗೆ ಬಿಡುವಾದಾಗ ಆಕೆಯೊಂದಿಗೆ ಮೊಬೈಲ್ನಲ್ಲಿ ಚಾಟ್ ಮಾಡಲು ಶುರುಮಾಡಿದೆ. ಆಕೆಗೆ ಇಷ್ಟವಿಲ್ಲದಿದ್ದರೂ ನನ್ನೊಂದಿಗೆ ಚಾಟ್ ಮಾಡುತ್ತಿದ್ದಳೇನೊ.
ಮುಂದೇನಾಯ್ತು?
ಹೀಗೆ ಸಾಗುತ್ತಾ ಸುಮಾರು ಒಂದು ತಿಂಗಳಾಯ್ತು. ಆಕೆಗೆ ಒಂದೆಡೆ ಭಯ ಕಾಡತೊಡಗಿತು. ಆಕೆ ಮತ್ತೆ ನನಗೆ ಫೋನ್ ಮಾಡಿ ಅಂಗಲಾಚತೊಡಗಿದಳು. ನನಗೂ ಅದೇ ಬೇಕಿತ್ತು. ಆಗ ನಾನು ಸಮಾಧಾನಿಸುವಂತೆ ನಟಿಸುತ್ತಾ ಹೇಳಿದೆ. ಕಡತ ನಮ್ಮಲ್ಲಿ ಇಲ್ಲದಿದ್ದರೆ ಏನಂತೆ. ಮೇಲಾಧಿಕಾರಿಗಳ ಕಚೇರಿಯಲ್ಲಿ ಅದರ ಪ್ರತಿ ದಾಖಲೆ ಸಿಗುತ್ತದೆ. ನೀನು ಅಲ್ಲಿ ಹೋಗಿ ವಿಚಾರಿಸು ಎಂದೆ. ಆಗ ಆಕೆ ಒಂದು ದಿವಸ ಮಲ್ಲಿಗೆಪುರದ ಮೇಲಾಧಿಕಾರಿಗಳ ಕಚೇರಿಗೆ ಹೋಗಿ ಬಂದಳು. ಆದರೆ ಆಕೆಯ ಕೆಲಸ ಆಗಲಿಲ್ಲ. ಅಲ್ಲಿಯೂ ನಾನು ಹೇಳಿದಂತೆಯೆ ಕೇಳುವವರೇ ಇದ್ದಾರೆ. ಹಾಗಾಗಿ ಆಕೆಯ ಕೆಲಸವಾಗಲಿಲ್ಲ. ಸಪ್ಪೆ ಮೋರೆಯಲ್ಲಿ ಮರುದಿನ ನನ್ನ ಬಳಿ ಬಂದಳು ಸರ್.
ಆಗ ನೀನೇನು ಮಾಡಿದೆ?
ಆಕೆಯೇ ನುಡಿದಳು ಸರ್. ಕೆಲಸ ಆಗಬೇಕೆಂದರೆ ನೀವೇ ಬಂದರೆ ಉತ್ತಮವೇನೊ. ಅವರು ಕೇಳುವ ಪ್ರಶ್ನೆಗಳಿಗೆ ನನ್ನಿಂದ ಉತ್ತರಿಸಲು ಆಗುತ್ತಿಲ್ಲ. ನಿಮ್ಮನ್ನೇ ಕರೆದುಕೊಂಡು ಬನ್ನಿ ಎಂದು ಆ ಕಚೇರಿಯಲ್ಲಿ ಸಲಹೆ ನೀಡಿದರು ಎಂದು ನನ್ನನ್ನು ಆಕೆ ಅಂಗಲಾಚುತ್ತಾ ದಯವಿಟ್ಟು ನನ್ನೊಂದಿಗೆ ಬಂದು ಸಹಕರಿಸಿ ಎಂದಳು.
ನಂತರ ಏನಾಯ್ತು?
ಎಲ್ಲವೂ ನಾನು ಬಯಸಿದಂತೆಯೇ ಆಯ್ತು. ಆಕೆಗೆ ನಿಮ್ಮಪ್ಪನ ಸ್ನೇಹಕ್ಕಾದರೂ ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ಹೇಳುತ್ತಾ ಆಕೆಯ ಜೊತೆಯಲ್ಲಿ ಮರುದಿವಸ ಮತ್ತೆ ಮಲ್ಲಿಗೆಪುರಕ್ಕೆ ಹೋದೆ. ಆ ಕಚೇರಿಯಲ್ಲಿನ ಗುಮಾಸ್ತ ಎಲ್ಲವೂ ನನ್ನ ಅಣತಿಯಂತೆಯೆ ನಾಟಕವಾಡಿದ. ಬಹಳ ಕೆಲಸವಿದೆ. ಮೇಲಾಧಿಕಾರಿಗಳ ಕಟ್ಟಪ್ಪಣೆ. ದಯವಿಟ್ಟು ಸಂಜೆ ನೋಡುವೆ ಎಂದ. ಅಂತೂ ಇಂತೂ ಸಂಜೆಯ ನಂತರ ಆತ ರೆಕಾರ್ಡ್ಗಳನ್ನು ತಡಕಾಡಿದಂತೆ ನಟಿಸಿದ. ಆತನಲ್ಲಿ ದಾಖಲೆ ಇದ್ದರೆ ತಾನೇ ಹುಡುಕಿಕೊಡುವುದು? ಇದು ಆತನಿಗೂ ಗೊತ್ತು. ನನಗೂ ಗೊತ್ತು. ಆದರೆ ಆಕೆಯನ್ನು ಯಾಮಾರಿಸಲು ನಾವು ನಟನೆಮಾಡಿದೆವು. ಸಂಜೆಯ ಸಮಯದಿಂದ ಹುಡುಕಾಡಿದಂತೆ ನಟಿಸಿ ರಾತ್ರಿ 7.30ರವರೆಗೂ ಹುಡುಕಾಟದ ನಾಟಕ ಮುಂದುವರೆಯಿತು. ಆಕೆ ಮಾತ್ರ ಏನೋ ಸಿಗಬಹುದೇನೋ ಎಂದು ಆಸೆಯಿಂದ ಕಣ್ಣಗಲಿಸಿ ನೋಡುತ್ತಾ ದೇವರಲ್ಲಿ ಬೇಡುತ್ತಿದ್ದಳು. ಆಕೆಯ ಉಸಿರು, ಕನಸು ಎಲ್ಲವೂ ತನ್ನ ತಂದೆಯ ಮನೆಯನ್ನು ಉಳಿಸಿಕೊಳ್ಳುವುದಾಗಿತ್ತು. ಆಸ್ತಿಯ ಮೇಲಿನ ಆಸೆಯೆನ್ನುವುದಕ್ಕಿಂತ ತಂದೆಯ ಮೇಲಿನ ಗೌರವವಾಗಿತ್ತು. ಆದರೆ ನನಗೆ ಆಕೆಯ ದೇಹದ ಉಬ್ಬುತಗ್ಗುಗಳೇ ಕಣ್ಣಿಗೆ ಕಾಡುತ್ತಿದ್ದವು. ಎಷ್ಟೊತ್ತಿಗೆ ಇವಳನ್ನು ಅನುಭವಿಸುತ್ತೇನೊ ಎನ್ನುತ್ತಾ ಮನ ಚಡಪಡಿಸುತ್ತಿತ್ತು.
ಅಂತೂ ನಿನ್ನ ದರಿದ್ರದ ಕಣ್ಣು ಆಕೆಯ ದೇಹದ ಮೇಲೆ ಬಿತ್ತು. ಆಗ ಮುಂದೇನು ಮಾಡಿದೆ?
ಮುಂದೆ ರಾತ್ರಿ ಜಾರುತ್ತಾ ಇನ್ನೇನು ನನ್ನಿಂದ ಈಗ ಸಾಧ್ಯವಿಲ್ಲ. ಇನ್ನೂ ಹೆಚ್ಚು ಸಮಯ ಹುಡುಕುವುದಕ್ಕೆ ಕಷ್ಟವಾಗುತ್ತದೆ. ದಿನವಿಡೀ ಬಹಳ ದಣಿದಿದ್ದೇನೆ. ಮುಂದೊಂದು ದಿನ ಬನ್ನಿ. ನಾಳೆ ನಾನು ಬೇರೆ ಇನ್ನೊಂದು ಕಚೇರಿಗೆ ಕೆಲಸದ ಮೇಲೆ ಹೋಗಬೇಕೆಂದು ಆ ಕೇಸ್ ವರ್ಕರ್ ಸುಳ್ಳು ನುಡಿದ. ಎಲ್ಲವೂ ನನ್ನದೇ ಆಟವಾಗಿತ್ತು. ಈಗ ನಾನು ಬೇಕೆಂತಲೇ ಆತನಲ್ಲಿ ಬೇಡಿಕೊಂಡೆ. ಅಯ್ಯೋ, ಹಾಗಾದರೆ ನಮ್ಮ ಈ ಹುಡುಗಿಯ ಆಸೆಯ ಗತಿಯೇನು? ಏನಾದರೂ ಮಾಡಿ ಸಹಕರಿಸಿ ಇನ್ನೊಂದು ಸ್ವಲ್ಪ ಸಮಯ ನೋಡಿ ಎಂದೆ. ಆತ ತುಂಬಾ ದಣಿವಾಗಿದೆ. ಮಧ್ಯಾಹ್ನವೂ ಊಟ ಮಾಡಿಲ್ಲದೇ ಕೆಲಸಮಾಡುತ್ತಿರುವೆ. ಸಹಕರಿಸಿ ಎಂದು ಬೇಡಿಕೊಂಡಂತೆ ನಟಿಸಿದ. ಆಗ ಆಕೆ ಕಣ್ಣಲ್ಲಿ ನೀರು ಹಾಕುತ್ತಾ ಇರಲಿ ಬಿಡಿ. ಈ ಪಾಪಿಗೆ ತಂದೆ, ತಾಯಿಯೊಂದಿಗೆ ಬಾಳ್ವೆ ಮಾಡುವ ಯೋಗವೂ ಉಳಿಯಲಿಲ್ಲ. ನಾನು ಕಂಡ ಕನಸುಗಳು ಈಡೇರಲಿಲ್ಲ. ಇನ್ನೂ ಅವರು ಪ್ರೀತಿಯಿಂದ ಕಳೆದ ವರ್ಷವಷ್ಟೇ ಕಟ್ಟಿಸಿದ್ದ ಮನೆಯನ್ನು ನನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳುವ ಯೋಗ್ಯತೆಯೂ ಒಲಿಯುತ್ತಿಲ್ಲ. ಏನೋ ನನ್ನ ಹಣೆಬರಹ. ಆ ದೇವರಿಗೆ ನಾನು ಅದೇಕೆ ಅಷ್ಟು ಕೆಟ್ಟವಳಾಗಿ ಕಾಣುತ್ತಿದ್ದೇನೊ ಎಂದು ಕಂಬನಿ ಸುರಿಸತೊಡಗಿದಳು.. ಅಷ್ಟರಲ್ಲಿ ಯಾರೋ ಆಕೆಗೆ ಕರೆಮಾಡಿದರು. ಮಾತನಾಡುತ್ತಲೇ ಫೋನ್ ಸ್ವಿಚ್ ಆಫ್ ಆಯಿತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಆಕೆಗೆ ಜೊತೆಯಾಗಿದ್ದು ಮೊಬೈಲ್ನಲ್ಲಿನ ಸಂದೇಶಗಳು, ಗೇಮ್ಸ್ಗಳು. ಹಾಗಾಗಿ ಬ್ಯಾಟರಿ ಖಾಲಿಯಾಗಿ ಮೊಬೈಲ್ ಸ್ವಿಚ್ ಆಫ್ ಆಯಿತು. ನಾನು ಮೊಬೈಲ್ ಬೇಕೇ? ಎಂದೆ. ಆಕೆ ಇರಲಿ ತೊಂದರೆ ಇಲ್ಲ ಎಂದಳು.
ಅಯ್ಯೋ ಬೇವರ್ಸಿಗಳಾ ಸುಳ್ಳು ಹೇಳಿ, ವಂಚನೆಯಿಂದ ನಟಿಸಿ ಆಕೆಯ ಮುಗ್ಧ ಮನದ ಮೇಲೆ ಮೋಸದ ಮಳೆ ಸುರಿಸಿಬಿಟ್ರ? ಮುಂದೇನು ಮಾಡಿದೆ?
ಇತ್ತ ರಾತ್ರಿ ಜಾರುತ್ತಾ ಹೋಯ್ತು. ಆ ಕೇಸ್ ವರ್ಕರ್ಗೆ ಊಟಹಾಕಿಸೋಣ ಎಂದೆ. ಆಕೆಯೂ ಸಮ್ಮತಿಸಿದಳು. ಕೊನೆಗೆ ರಾತ್ರಿ ಸುಮಾರು 8.30ರ ವೇಳೆಗೆ ಮೂರು ಜನ ಹೋಟೆಲ್ನಲ್ಲಿ ಊಟಕ್ಕೆ ಕುಳಿತೆವು. ಆತನಿಗೆ ನಮ್ಮಿಂದ ತಡವಾಗಿದ್ದಕ್ಕೆ ಕ್ಷಮಿಸಿ ಎಂದಳು. ಆತ ನಗುತ್ತಾ ಹಾಗೇನು ಇಲ್ಲ. ನಿಮ್ಮಂತಹವರ ಸೇವೆಯೇ ನನ್ನ ಸೌಭಾಗ್ಯ. ನನಗೂ ನಿನ್ನಂತೆಯೇ ಮಗಳಿದ್ದಾಳೆ. ನೀನು ಏನು ಮಾಡೋದು? ಎಲ್ಲಿರೋದು? ಎನ್ನುತ್ತಾ ವಿಚಾರಿಸತೊಡಗಿದ. ಮಗಳು ಎಂದೊಡನೆ ಆಕೆಯೂ ಅಕ್ಕರೆಯಿಂದ ತನ್ನ ವಿಚಾರವನ್ನು ಮುಕ್ತವಾಗಿ ಹೇಳುತ್ತಾ ಹೋದಳು. ಒಟ್ಟಾರೆ ಆತ ಮಾತ್ರ ಆಕೆಯನ್ನು ಹೌದಾ ಮಗಳೇ ಎಂದು ಕೇಳುತ್ತಾ ಹೋದ.
ಓಹ್, ಅಂತೂ ಇಂತೂ ಅಪ್ಪ, ಮಗಳ ಸೆಂಟಿಮೆಂಟ್ ಹಾಕಿ ಆಕೆಯನ್ನು ಮೂರ್ಖಳನ್ನಾಗಿಸಿ ಏನು ಮಾಡಿದ್ರಿ?
ನಂತರ ಊಟ ಮುಗಿಯುವ ಹೊತ್ತಿಗೆ ಸುಮಾರು 9.30ರ ಸಮಯ ಆಗುತ್ತಾ ಹೋಯ್ತು. ಬೇಕಂತಲೇ ಊಟ ನಿಧಾನವಾಗಿ ಮುಗಿಸಿದೆವು. ಊಟವನ್ನು ಮಾಡಿ ಹೋಟೆಲ್ನಿಂದ ಹೊರಬರುತ್ತಿದ್ದಂತೆ ಆತ ನುಡಿದ. ನೋಡು ಮಗಳೇ ನಾನು ನಿನಗಾಗಿ ಒಂದು ಸಹಾಯ ಮಾಡುವೆ. ನಾನು ನಾಳೆ ಬೆಳಿಗ್ಗೆ ಏಳಕ್ಕೆ ಕಚೇರಿಗೆ ಹೋಗಿ ಕಡತಗಳನ್ನು ಹುಡುಕುವೆ. ನಂತರ 9.30ಕ್ಕೆ ಬೇರೆ ಕಚೇರಿಗೆ ಮೇಲಾಧಿಕಾರಿಗಳು ಸೂಚಿಸಿದ ಕೆಲಸಕ್ಕೆ ಹೋಗಬೇಕು. ಆದರೆ ನನಗೆ ವಿವರಗಳು ಕೇಳಿದರೆ ಹೇಳಲು ಆ ಸಮಯದಲ್ಲಿ ನೀವು ಇದ್ದರೆ ಉತ್ತಮ. ಒಂದೇ ಹೆಸರಿನ ಹತ್ತಾರು ಕಡತಗಳಿರುತ್ತವೆ. ನೀವು ಬೆಳಿಗ್ಗೆ ಏಳಕ್ಕೆ ಬರಲು ಸಾಧ್ಯವೇ? ಎಂದ.
ಆಗ ಏನಾಯ್ತು?
ನಾನು ಅವಳಿಗೆ ಹೇಳಿದೆ. ನಾವು ಹೋಗಿ ಶರಧೀಪುರ ತಲುಪುವುದಕ್ಕೆ ಮಧ್ಯೆ ರಾತ್ರಿಯಾಗುತ್ತದೆ. ಇನ್ನೂ ಬೆಳಿಗ್ಗೆ ಅಷ್ಟು ಬೇಗನೇ ಬರಲು ಯಾವುದೇ ಬಸ್ ಇಲ್ಲ. ಏನು ಮಾಡೋದು ಎಂದು ಆಲೋಚಿಸತೊಡಗಿದೆ. ಕೂಡಲೇ ಆ ಕೇಸ್ ವರ್ಕರ್ ಅದಕ್ಕೇಕೆ ನೀವು ಕೆಲವೇ ಗಂಟೆಗಳಿಗೆ ಶರಧೀಪುರಕ್ಕೆ ಹೋಗಿ ಹಿಂತಿರುಗಬೇಕು. ನನ್ನ ಮನೆಗೆ ಬನ್ನಿ. ಎಷ್ಟೇ ಆಗಲಿ ಇನ್ನೊಬ್ಬಳು ಮಗಳು ಮನೆಗೆ ಬಂದಂತೆ ಅಲ್ಲವೇ ಎಂದ. ಮೊದಲೇ ತಂದೆ ಕಳೆದುಕೊಂಡು ನೊಂದಿದ್ದ ಆಕೆಗೆ ಈತನ ಮಮತೆಯ ನುಡಿಗಳು ಕಣ್ಣಾಲಿಗಳನ್ನು ತಣಿಸಿದವು. ಅಂತೂ ಆತನ ಆಮಂತ್ರಣಕ್ಕೆ ಒಪ್ಪಿ ಆತನ ಮನೆಗೆ ಹೊಗುವುದಕ್ಕೆ ಆಕೆಯು ಸಮ್ಮತಿಸಿದಳು. ಆದರೆ ನಾವು ನಮ್ಮ ಮೋಜು, ಮಸ್ತಿಗೆ ಅಂತಾ ಒಂದು ಮನೆಯನ್ನು ಮಲ್ಲಿಗೆಪುರದ ಹೊರಭಾಗದಲ್ಲಿ ಇಟ್ಟುಕೊಂಡಿದ್ದೇವೆ. ಆಕೆಯನ್ನು ಅದೇ ಆತನ ಮನೆಯೆಂದು ಅಲ್ಲಿಗೆ ಕರೆದುಕೊಂಡು ಹೋದೆವು. ಆಕೆಯನ್ನು ಆತ್ಮೀಯವಾಗಿ ಸ್ವಾಗತಿಸಿ ಆತ ಕರೆದೊಯ್ದ. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಮನೆಯಲ್ಲಿ ಯಾರೂ ಇಲ್ಲ. ನಾವೇ ಮೂರು ಜನ ಎನ್ನುವುದು ಆಕೆಗೆ ಖಾತ್ರಿಯಾಗಿ ಕೇಳಿದಳು. ಎಲ್ಲಿ ನಿಮ್ಮ ಮಗಳು, ಮನೆಯವರು ಕಾಣುತ್ತಿಲ್ಲವಲ್ಲ ಎಂದಳು. ಆತ ನಗುತ್ತಾ ಅವರು ದೇವಸ್ತಾನಕ್ಕೆ ಹೋಗಿದ್ದಾರೆ. ಅಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇನ್ನೇನು ಬರುತ್ತಾರೆ. ಒಳಗೆ ಹೋಗಿ ರೆಸ್ಟ್ ಮಾಡು ಎಂದ.
ಅಯ್ಯೋ ಬೇವರ್ಸಿಗಳಾ! ಆಕೆಯನ್ನು ನಿಮ್ಮ ನರಕದ ಬಂಧಿಖಾನೆಯಲ್ಲಿ ಕೊನೆಗೂ ನೂಕಿ ಏನು ಮಾಡಿದ್ರಿ?
ಆಕೆಯು ರೂಂ ಒಳಗೆ ಹೋಗುತ್ತಿದ್ದಂತೆ ನಾವು ಅದೇ ಸಮಯದಲ್ಲಿ ಆ ರೂಂಗೆ ಇದ್ದ ಇನ್ನೊಂದು ಬಾಗಿಲು ಮೂಲಕ ಒಳ ಪ್ರವೇಶಿಸಿದೆವು. ಆಕೆಯನ್ನು ಬಿಗಿಯಾಡಿ ಹಿಡಿದು ನಮ್ಮ ಕಾಮದಾಹಕ್ಕೆ ಹಪಹಪಿಸತೊಡಗಿದೆವು. ಆಕೆ ನಮ್ಮ ವರ್ತನೆಯಿಂದ ಆಶ್ಚರ್ಯಗೊಂಡು ಎದೆಬಡಿದುಕೊಂಡು ತಬ್ಬಿಬ್ಬಾದಳು. ಕೂಡಲೇ ನಾನು ಬಿಗಿಯಾಗಿ ಆಕೆಯ ಬಾಯಿಯನ್ನು ಹಿಡಿದು ಹೇಳಿದೆ. ನೀನು ನಾವು ಹೇಳಿದಂತೆ ಕೇಳದಿದ್ದರೆ ನಿನ್ನ ತಂದೆಯ ಮನೆಯನ್ನು ನೀನು ಮರೆಯುವುದೇ ಲೇಸೆಂದೆ. ಇನ್ನೊಂದೆಡೆ ಆತ ಆಕೆಯ ಬಟ್ಟೆಯನ್ನು ಮುಗಿಬಿದ್ದು ಕಳಚುತ್ತಾ ಹೋದ. ಆಕೆಯನ್ನು ನಾನು ಬಳಸುತ್ತಾ ಆಕೆಯನ್ನು ಐಷಾರಾಮಿ ಹಾಸಿಗೆಯ ಮೇಲೆ ನೂಕಿದೆವು. ಆಕೆಯ ದೇಹವನ್ನು ನಾನು ಮುತ್ತಿಕ್ಕುತ್ತಾ ಖುಷಿಯಲ್ಲಿ ಕಾಮೋತ್ಸವದಲ್ಲಿ ನಲಿಯುತ್ತಿದ್ದರೆ ಆಕೆಯ ಕಣ್ಣಲ್ಲಿ ನೀರು ಒಂದೇ ಸಮನೇ ಜಾರುತ್ತಿತ್ತು.
ಎಂತಾ ಕಚಡಾ ಬೇವರ್ಸಿಗಳು. ನಿಮ್ಮನ್ನು ಜೀವಂತ ಸುಟ್ಟರೂ ಕ್ಷಮೆಯಿಲ್ಲ. ಯಾವ ಬಾಯಲ್ಲಿ ಮಗಳೇ ಎಂದಿರೂ ಅದೇ ಬಾಯಲ್ಲಿ ಆಕೆಯನ್ನು ಕಾಮದ ದಾಹಕ್ಕೆ ಬಡಬಡಾಯಿಸಿದಿರಾ? ತೂಥ್. ಮುಂದೆ ಆಕೆಗೆ ಮನೆ ಖಾತೆಯಾದರೂ ಬದಲಾವಣೆ ಮಾಡಿಕೊಟ್ಟಿಯೊ ಇಲ್ಲವೊ?
ಆಕೆಯನ್ನು ಎರಡು ಮೂರು ದಿನ ಅದೇ ಮನೆಯಲ್ಲಿಟ್ಟುಕೊಂಡು ಮಜಾ ಮಾಡಿದೆವು. ಕೊನೆಗೆ ಆಕೆ ಎಷ್ಟೇ ಅತ್ತು ಕರೆದರು ತಮ್ಮ ದಾಹಕ್ಕೆ ಗೊಂಬೆಯಂತೆ ಆಕೆಯನ್ನು ಬಳಸಿಕೊಂಡೆವು. ಆಕೆಯ ಕಣ್ಣೀರು ಕೋಣೆ ತುಂಬಾ ಹರಿಯಿತು. ಅದೇ ಕಣ್ಣೀರನ್ನು ಕಾಲಿನಲ್ಲಿ ತುಳಿದು ಮದ್ಯಪಾನ ಮಾಡುತ್ತಾ ಒತ್ತಾಯಪೂರ್ವಕವಾಗಿ ಆಕೆಯ ಬಾಯಿಗೂ ತುರುಕಿದೆವು. ಸಿಗರೇಟ್ ಹೊಗೆಯಲ್ಲಿ ರೂಂ ತುಂಬಿ ಆಕೆ ಉಸಿರಾಡದಂತೆ ತಡವರಿಸಿದರೂ ನಾವು ಆಕೆಯನ್ನು ಒಂದು ಕೈಲಿ ಬಿಗಿಹಿಡಿದು ಸಂಭ್ರಮಿಸುತ್ತಿದ್ದೆವು.
ಇದೂ ಸಂಭ್ರಮವೇ? ನಿಮ್ಮಂತಹ ನೀಚರ ಕೈಯಲ್ಲೇ ನರಕವಿದೆ ಎನ್ನುವುದನ್ನು ನಿರೂಪಿಸಿದ್ರಿ. ನಿಮಗೆ ನೇಣು ಹಾಕಿದ್ರೂ ಸಾಕಾಗಲ್ಲ. ಅಂತೂ ಏನು ಅರಿಯದ ಮುಗ್ಧೆಯನ್ನು ನಿರಂತರ ಮೂರು ದಿನ ಅತ್ಯಚಾರ ನಡೆಸಿ ಮೋಸಮಾಡಿದ ನಿಮಗೆ ಏನೆನ್ನಬೇಕು. ಆಕೆಯನ್ನು ಏನು ಮಾಡಿದ್ರಿ? ಈಗ ಆಕೆಯಲ್ಲಿದ್ದಾಳೆ?
ಮೂರನೇ ದಿನ ಇನ್ನೂ ಅನೇಕ ಜನ ನಮ್ಮ ಸ್ನೇಹಿತರು ಬಂದು ಆಕೆಯನ್ನು ತಮ್ಮ ಕಾಮದಾಹಕ್ಕೆ ಬಳಸಿಕೊಂಡರು. ನೀರು, ಆಹಾರವಿಲ್ಲದೆ ಆಕೆಯು ನೋವು ತಡೆಯಾರಲಾಗದೆ ತೀರಿ ಹೋದಳು. ಕೊನೆಗೆ ಆಕೆಯ ಹೆಣವನ್ನು ರಾತ್ರಿ ರೈಲ್ವೇ ಹಳಿಯ ಮೇಲೆ ಇಟ್ಟು ಬಂದೆವು. ಮಾರನೇಯ ದಿವಸ ಆಕೆಯ ದೇಹವು ಛಿದ್ರವಾಗಿತ್ತು. ಎಲ್ಲಿಡೆಯೂ ತಂದೆ, ತಾಯಿಯ ಅಗಲಿಕೆಯಿಂದ ಮಗಳು ನೊಂದು ಆತ್ಮಹತ್ಯೆಮಾಡಿಕೊಂಡಿದ್ದಾಳೆಂದು ಸುದ್ಧಿ ಹಬ್ಬಿಸಿದೆವು ಸರ್.
ಒಂದು ಭಯಾನಕ ಗ್ಯಾಂಗ್ ರೇಪನ್ನು ಆತ್ಮಹತ್ಯೆಯೆಂದು ಬಿಂಬಿಸುವ ನೀನು ಅದೆಂತಹಾ ಮಹಾನ್ ಕ್ರಿಮಿನಲ್. ನಿನ್ನಂತವನು ಊರಿಗೊಬ್ಬ ಇದ್ದರೆ ಸಾಕು. ನಮ್ಮ ದೇಶದ ಮೇಲೆ ಪರಕೀಯರು ಬಂದು ಬಾಂಬ್ ಹಾಕುವುದು ಬೇಡ. ಹಾಗೆಯೆ ದೇಶವೇ ಬೂಧಿಯಾಗುತ್ತದೆ. ಸಂಸ್ಕಾರ ಮರೆತ ನಾಯಿಗಳಾ? ಪ್ರಾಣಗಳಿಗಾದರೂ ಒಂದು ಅಕ್ಕರೆ, ಮಮತೆ ಇದೆ. ನಿಮಗೂ ಅದೂ ಇಲ್ಲವಲ್ರೊ! ಕಾಡು ಮೃಗಗಳು ತುಸು ನಿಧಾನವಾಗಿ ಕಚ್ಚಿ ತಿನ್ನುತ್ತವೆ. ಆದರೆ ನೀವು ಹಸಿವಿಲ್ಲದಿದ್ದರೂ ಕಚ್ಚಿ ಮನ ಮನಗಳ ಕೊಲ್ಲುವ ರಾಕ್ಷಸರು. ಛೇ, ರಾಕ್ಷಸರು ಎನ್ನಲು ಮನಸು ಒಪ್ಪಲ್ಲ. ನಿಮಗೆ ರಾಕ್ಷಸರು ಎಂದರೆ ಅವರಿಗೂ ಅವಮಾನ!
ಭಾಗ-16
ಕೊನೆಗೆ ಆಕೆಯ ಮನೆಯನ್ನು ಏನು ಮಾಡಿದೆ?
ಆಕೆಯ ಮನೆಯನ್ನು ನಕಲಿ ಪತ್ರದ ಮೂಲಕ ಇನ್ನೊಬ್ಬರಿಗೆ ವರ್ಗಾಯಿಸಿದೆ.
ಆಕೆ ಹಲವು ವೇಳೆ ಕಚೇರಿಗೆ ಬಂದಾಗ ಆಕೆಗೆ ಅರಿವಿಲ್ಲದಂತೆ ಏನೋ ಸುಳ್ಳು ಹೇಳಿ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಇಟ್ಟುಕೊಂಡಿದ್ದೆ. ಅವುಗಳನ್ನೇ ದುರುಪಯೋಗಪಡಿಸಿಕೊಂಡು ಆಕೆಯಿಂದ ಪತ್ರವನ್ನು ಬೇರೆಯವರ ಹೆಸರಿಗೆ ಬರೆಸಿದೆ. ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಈಕೆಯ ಬದಲು ಬೇರೊಬ್ಬಳನ್ನು ಕೂರಿಸಿ ತಂಬ್ ಇಂಪ್ರೆಷನ್ ಕೊಡಿಸಿ ಬೇರೆಯವರ ಹೆಸರಿಗೆ ಆಕೆಯ ಆಸ್ತಿಯನ್ನು ವÀiÁರಾಟ ಮಾಡಿಸಿದೆ.
ಅಂದರೆ ಇದೆಲ್ಲಾ ಆಕೆ ಬದುಕಿದ್ದಾಗಲೇ ಮಾಡಿದ್ದೀಯ?
ಹೌದು ಸರ್. ಇದೆಲ್ಲಾ ಆಕೆ ಬದುಕಿದ್ದಾಗಲೇ ಮಾಡಿದ್ದೆ. ಆದರೆ ಆಕೆಗೆ ತುಸುವು ಅನುಮಾನ ಬರದಂತೆ ನೋಡಿಕೊಂಡೆ.
ಅಂದರೆ ಅವಳ ಮುಗ್ಧತೆಯನ್ನು ನಿನ್ನ ಮೋಸಕ್ಕೆ ಬಳಸಿಕೊಂಡೆ. ನಿನ್ನ ನಂಬಿ ಸಹಿ ಹಾಕಿದ್ದಕ್ಕೆ ಆಕೆಯ ಮನೆಯನ್ನು ಇನ್ನೊಬ್ಬರ ಹೆಸರಿಗೆ ಮೋಸದಿಂದ ಮಾರಾಟ ಮಾಡಿದೆ. ಹೌದು ಇದೆಲ್ಲಾ ಸರಿ ಆದರೆ ಈಕೆಯ ಬದಲು ಬೇರೊಬ್ಬಳನ್ನು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕೂರಿಸಿ ಇವಳೇ ಅವಳೆಂದು ಮೋಸ ಮಾಡಿದರೆ ನಾಳೆ ಯಾರಿಗಾದರೂ ಗೊತ್ತಾದರೆ ತೊಂದರೆಯಾಗುವುದಿಲ್ಲವೆ? ನಿಜವಾಗಿಯು ತೊಂದರೆಯಾಗುತ್ತದೆ. ನೀವು ಆಕೆಗೂ ಏನು ಹೇಳಿ ಈ ರೀತಿ ಮೋಸಕ್ಕೆ ಪ್ರೇರೇಪಿಸಿದ್ದೀರಿ?
ಸಾಮಾನ್ಯವಾಗಿ ಹಣದ ತೊಂದರೆಯಲ್ಲಿರುವ ಅಸಹಾಯಕರನ್ನು ಈ ರೀತಿ ಬಳಸಿಕೊಳ್ಳುತ್ತೇವೆ. ಅವರು ವಿಧಿಯಿಲ್ಲದೇ ಒಪ್ಪುತ್ತಾರೆ. ಇಲ್ಲಿ ಒಬ್ಬಳಿಗೆ ಆಕೆಗೆ ಮಂಜೂರಾದ ಆಶ್ರಯ ಮನೆಯನ್ನು ನೋಂದಣಿ ಮಾಡಿಸಿಕೊಡುವುದಾಗಿ ಆಕೆಗೆ ಸುಳ್ಳು ಹೇಳಿ ಮಂಕುಬೂದಿ ಎರಚಿದೆ. ಹಾಗಾಗಿ ಪಾಪ ಆಕೆಗೂ ಗೊತ್ತಾಗಿಲ್ಲ.
ಅಯ್ಯೋ ದೇವರೇ ಅವಳ ಹೆಸರಿಗೆ ಮಂಜೂರಾದ ಮನೆಯನ್ನು ನೋಂದಣಿ ಮಾಡಿಸಿ ಕೊಡುವುದಾಗಿ ಸುಳ್ಳು ಹೇಳಿ ಆಕೆಯ ಕೈಯಲ್ಲಿ ಈ ಹುಡುಗಿಯ ಮನೆಯನ್ನು ಮಾರಿಸಿದ್ದೀಯ! ನೀನು ಎಂತಹÀ ಕಚಡ. ನಿಮಗೆ ಮಾನ ಮರ್ಯಾದೆ ಎನ್ನುವುದು ಹತ್ತಿರವೂ ಸುಳಿಯುವುದಿಲ್ಲ. ಇನ್ನು ಕರುಣೆ ವಿವೇಕಗಳು ಸತ್ತು ಓಡಿ ಹೋಗಿವೆ ಬಿಡು. ರಕ್ಕಸರನ್ನು ಮೀರಿಸುವ ವಿಕೃತಿ ನಿನ್ನದು. ನಿನ್ನನ್ನು ಕಂಡರೆ ರಕ್ಕಸರೂ ನಾಚಿಯಾರು. ತೂಥ್!
ನಂತರ ಮುಂದೆ ಮತ್ತೆ ಇನ್ನೇನು ಮಾಡುತ್ತಾ ಹೋದೆ?
94ಸಿ ಹಕ್ಕುಪತ್ರಗಳನ್ನು ನಕಲಿಯಾಗಿ ಸೃಷ್ಟಿಮಾಡಿ ಅವುಗಳ ಆಧಾರದ ಮೇಲೆ ಖಾತೆ ಮಾಡುತ್ತಿದ್ದೆವು. ಇದಕ್ಕೆ ನಕಲಿ ಪತ್ರಗಳು ಮತ್ತು ನಿಜವಾದ ಪತ್ರಗಳು ಯಾವುವು ಎನ್ನುವುದು ಯಾರಿಗೂ ಗೊತ್ತಾಗದ ರೀತಿಯಲ್ಲಿ ನಕಲಿ ಪತ್ರಗಳನ್ನು ನಾವೇ ತಯಾರಿಸುತ್ತಿದ್ದೆವು. ಜನರಿಗೆ ನಕಲಿ ಪತ್ರವನ್ನು ನೋಟರಿ ಮಾಡಿಸಿಕೊಂಡು ಬಾ ಎಂದು ಹೇಳುತ್ತಿದ್ದೆವು. ಅವರು ನೋಟರಿ ಮಾಡಿಸಿಕೊಂಡು ಬಂದ ಪತ್ರ ಮತ್ತು ಅರ್ಜಿಯನ್ನು ತೆಗೆದುಕೊಂಡು ಖಾತೆಯನ್ನು ದಾಖಲು ಮಾಡುತ್ತಿದ್ದೆವು. ಯಾರಾದರೂ ಕೇಳಿದರೆ ನೋಟರಿಯಾಗಿಸಿ ನೀಡಿದ ಪತ್ರವನ್ನು ತೋರಿಸುತ್ತಿದ್ದೆವು. ಇದೇ ರೀತಿ ಸಾವಿರಾರು ಖಾತೆಗಳನ್ನು ಮಾಡಿದ್ದೇವೆ. ಯಾರದೋ ಹೆಸರಿಗೆ ಇನ್ಯಾರದೋ ಹೆಸರನ್ನು ತಂದು ಸೇರಿಸಿದ್ದೇವೆ.
ಹೌದು ಇದೆಲ್ಲಾ ತನಿಖೆಯಾದರೆ ನಿಮಗೆ ತೊಂದರೆಯಾಗುವುದಿಲ್ಲವೆ?
ಇಲ್ಲಿಯವರೆಗೂ ಯಾರೂ ಕೇಳದಂತೆ ನೋಡಿಕೊಂಡಿದ್ದೇವೆ ಸರ್. ಯಾರಾದರೂ 94ಸಿ ಪ್ರಕರಣದ ಬಗ್ಗೆ ವಿಚಾರಿಸಲು ಬಂದರೆ ಅವರನ್ನು ಬದುಕೇ ಬೇಡ ಎನ್ನುವಂತೆ ಮಾಡಿದ್ದೇವೆ. ಅದಕ್ಕೇ ಯಾರು ನಮ್ಮ ತಂಟೆಗೆ ಬಂದಿಲ್ಲ. ಯಾವುದಾದರೂ ಊರಲ್ಲಿ ಯಾವುದಾದರೂ ಖಾಲಿ ಜಾಗವಿದ್ದರೆ ಸಾಕು ಅದಕ್ಕೆ ನಾವೇ ಪತ್ರ ತಯಾರಿಸಿ ಅದನ್ನು ಜೆರಾಕ್ಸ್ ಮಾಡಿಸಿ ಅದರ ಆಧಾರದ ಮೇಲೆ ಖಾತೆ ಮಾಡುತ್ತಿದ್ದೆವು. ಇನ್ನು ಕೆಲವು ವೇಳೆ ಯಾರಾದರೂ ಬಡವರು, ನಿರ್ಗತಿಕರು, ಅಸಹಾಯಕರು ಬಂದರೆ ಅವರ ಪರಿಸ್ಥಿತಿಯನ್ನು ಅವಲೋಕಿಸಿ ಮೂಲ ಪತ್ರವನ್ನು ತೆಗೆದುಕೊಂಡು ಬಾ ಎನ್ನುತ್ತಿದ್ದೆವು. ಸಾಮಾನ್ಯವಾಗಿ ಇಪ್ಪತ್ತೈದು ಮೂವತ್ತು ವರ್ಷ ಹಿಂದಿನ ಮಂಜೂರಾತಿ ಪತ್ರಗಳನ್ನು ಕೆಲವರು ಸರಿಯಾಗಿ ಇಟ್ಟುಕೊಳ್ಳುವುದಿಲ್ಲ. ಇದೇ ನಮಗೆ ವರದಾನ. ಕೆಲವರ ಮನೆಗಳು ಅತಿ ಮಳೆಯಿಂದ ಬಿದ್ದಾಗ ಅವರ ಗುಡಿಸಲು ಮನೆಗಳು ತೇಲಿ ಹೋಗುತ್ತಿದ್ದವು. ಇನ್ನು ಮನೆಯ ಕಾಗದಪತ್ರಗಳು ಎಲ್ಲಿ ಉಳಿಯುತ್ತವೆ? ಇಂತಹ ಸಂದರ್ಭವನ್ನು ಹೊಂಚುಹಾಕಿ ಕಾಯುತ್ತಿದ್ದ ನಾವು ನಮ್ಮ ವಾಮ ಮಾರ್ಗವನ್ನು ಝಳಪಿಸಿ ಅಂಥವರಿಗೆ ಸಾಕಷ್ಟು ತೊಂದರೆ ನೀಡಿ ಮೂಲ ಮಂಜೂರಾತಿ ಇಲ್ಲವೆಂದು ಹೆದರಿಸಿ ಅವರ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡುವಂತೆ ಒತ್ತಾಯ ಪಡಿಸಿ, ಅವರಲ್ಲಿ ಅಸಹಾಯಕತೆಯನ್ನು ಸೃಷ್ಟಿಸಿ ಬೆದರಿಕೆ ಹಾಕುತ್ತಿದ್ದೆವು. ಹಲವರು ಮೂಲ ಮಂಜೂರಾತಿ ಪತ್ರವನ್ನು ಕೆಲವು ಖಾಸಗಿ ಫೈನಾನ್ಸ್ಗಳಲ್ಲಿ ಸಾಲಕ್ಕೆ ಒತ್ತೆಯಿಡುತ್ತಿದ್ದರು. ಇವರಿಗೆ ಹತ್ತು ಸಾವಿರ ಸಾಲ ನೀಡಿದರೆ ಬ್ಲಾಂಕ್ ಚೆಕ್ ಒಂದು ಲಕ್ಷಕ್ಕೆ ಪಡೆಯುತ್ತಿದ್ದರು. ಎಷ್ಟೇ ಸಾಲದ ಹಣ ಕಟ್ಟಿದರೂ ತೀರದಂತೆ ನೋಡಿಕೊಳ್ಳುತ್ತಿದ್ದೆವು. ಕೊನೆಗೊಂದು ದಿನ ರೋಶಿ ಶರಣಾಗುವಂತೆ ಮಾಡುತ್ತಿದ್ದೆವು. ಕೊನೆಗೊಂದು ದಿನ ಅವರ ಮನೆಯು ಹರಾಜಾಗುತ್ತಿತ್ತು. ಅದೂ ಗಪ್ ಚುಪ್ ಹರಾಜಿನಲ್ಲಿ ಯಾರಿಗೂ ಗೊತ್ತಾಗದಂತೆ ನೋಡಿಕೊಂಡು ಯಾರಿಗೆ ಬೇಕೋ ಅವರಿಗೆ ಮನೆಯನ್ನು ಸಿಗುವಂತೆ ಮಾಡುತ್ತಿದ್ದೆವು. ಪತ್ರದ ಶರತ್ತಿನಂತೆ 15 ವರ್ಷ ಪರಭಾರೆ ಮಾಡದಂತೆ ಇದ್ದ ಶರತ್ತನ್ನು ಈ ಮೂಲಕ ಕೆಲವು ಫೈನಾನ್ಸ್ಗಳನ್ನು ಬಳಸಿಕೊಂಡು ಮುರಿಯುತ್ತಿದ್ದೆವು.
ನಿಮ್ಮ ಆಕ್ರಮಣಗಳು ಪಟ್ಟಿ ಮಾಡುತ್ತಾ ಹೋದರೆ ಉದ್ದಕ್ಕೂ ಬೆಳೆಯುತ್ತ ಬಾನನ್ನು ಮುಟ್ಟುತ್ತದೆ, ಸೀಳುತ್ತದೆ. ಕ್ಷಣ ಕ್ಷಣವೂ ಭಯ ತರಿಸುವಂತಿದೆ. ಇಂದಿನ ಸಮಾಜದಲ್ಲಿ ನಿಮ್ಮಂತವರ ಅಟ್ಟಹಾಸದಿಂದ ಮುಗ್ದರ ಜೀವನ ಸುಟ್ಟು ಕರಕಲಾಗುತ್ತಿದೆ. ಭ್ರಷ್ಟಾಚಾರದ ರುದ್ರನರ್ತನ ಹೀಗೆ ಮುಂದುವರೆದರೆ ದೇಶದ ಅಭಿವೃದ್ಧಿಯ ಗತಿಯೇನು? ಜನ ಸಮಾನ್ಯರಿಗೆ ಫಲ ದೊರಕಿಸಬೇಕೆನ್ನುವ ಸರ್ಕಾರದ ಯೋಜನೆಯ ಹಾದಿಯೆತ್ತ? ಎಲ್ಲವೂ ತಿಂದು ತೇಗುವ ನಿಮ್ಮಂತಹ ಬೇವರ್ಸಿಗಳಿಂದ ಜನ ಪ್ರತಿನಿಧಿಗಳಿಗೂ ಅವಮಾನ. ದೇಶಕ್ಕೆ ಪ್ರಗತಿಯ ದಿಕ್ಕನ್ನೇ ಬದಲಿಸುವ ನಿಮ್ಮಂತವರನ್ನು ಜೀವಂತ ಸುಟ್ಟರೂ ಕಡಿಮೆಯೇ!
ಇತ್ತ ಸರ್ಕಲ್ ಇನ್ಸ್ಪೆಕ್ಟರ್ ರವರನ್ನು ನೋಡುತ್ತಾ ತನಿಖಾಧಿಕಾರಿ ನುಡಿದರು. ಅದೇನೇ ಇರಲಿ ರಾಜು ಮತ್ತು ಕುಮಾರನ ಮೇಲೆ ಶೂಟೌಟ್ ಪ್ರಕರಣದಿಂದ ಹಿಡಿದು 68 ಜನರ ಸಾವಿಗೆ ಕಾರಣವಾದ ಇವರ ಮೇಲೆ ಒಟ್ಟಾಗಿ ಪ್ರಕರಣ ದಾಖಲಿಸಬೇಕು. ಇಲ್ಲದೇ ಹೋದರೆ ಪ್ರಕರಣ ಮುಚ್ಚಿ ಹೋಗುತ್ತದೆ. ಇದರಲ್ಲಿ ಬಹಳ ಜಾಗ್ರತೆಯಿಂದ ಕೆಲಸಮಾಡಬೇಕು. ನೊಂದವರ ಬಾಳಿಗೆ ನ್ಯಾಯ ಎನ್ನುವುದು ಇಲ್ಲಿ ನಾವು ಎಷ್ಟೇ ಪ್ರಯತ್ನಿಸಿದರು ಇಲ್ಲಿ ಸುಳ್ಳೆನಿಸಬಹುದು. ಆದರೆ ನಮ್ಮ ನಿಷ್ಟೆಯ ನಡೆಯಿಂದ ತುಸು ಅವರ ಆತ್ಮಕ್ಕೆ ಶಾಂತಿಯಾದರೂ ಲಭಿಸಲಿ ಬಿಗಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ..ಇನ್ನು ಮುಂದೆ ಇಂತಹ ವಿಕೃತ ಕಾರ್ಯ ಯಾರಿಂದಲೂ ಆಗದಂತೆ ಇದು ಮುನ್ನೆಚ್ಚರಿಕೆಯಾಗಲಿ. ಇಂತಹ ಅಸಹ್ಯದ ಭ್ರಷ್ಟರು ಇದ್ದಾರೆನ್ನುವುದು ಇವರ ತನಿಖೆಯಿಂದಲೇ ತಿಳಿದಿದ್ದು. ಏನೇ ಆಗಲಿ ಮೋಸ, ವಂಚನೆ, ಕೊಲೆ, ಸುಲಿಗೆಗಳು, ಅತ್ಯಾಚಾರಗಳು ಇಲ್ಲಿ ಇವರಿಗೆ ವೃತ್ತಿಯಾಗಿದೆ. ಸರ್ಕಾರ ನೀಡಿದ ಗೌರವದ ಸ್ಥಾನಮಾನದ ವೃತ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ವಿಕೃತರ ಬೆಂಕಿ ಜ್ವಾಲೆಗೆ ಪರಿಶುದ್ಧ ಸಮಾಜ ಬಲಿಯಾಗುತ್ತಿದೆ. ಇದಕ್ಕೆ ಸರಿಯಾಗಿ ಅಂಕುಶ ಹಾಕಬೇಕು. ಎಲ್ಲವೂ ನಿಮ್ಮ ಕೈಲಿದೆ. ಈ ರಾತ್ರಿಯೇ ಇವರೆಲ್ಲರ ಮೇಲೆ ಎಫ್.ಐ.ಆರ್ ದಾಖಲಿಸಿ. ನಾಳೆಯೇ ಎಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸೋಣ ಎಂದರು.
ಈಗ ಸಮಯ ಸಂಜೆಯಾಗುತ್ತಾ ಹೊರಗಡೆ ಬೆಳಕು ಕರಗಿ ಕತ್ತಲು ಆವರಿಸುತ್ತಿದೆ. ಹಗಲು ರಾತ್ರಿಯೆನ್ನದೇ ಎರಡು ದಿನಗಳ ನಿರಂತರ ವಿಚಾರಣೆಯಿಂದ ತನಿಖಾಧಿಕಾರಿಯ ಬಳಲಿದ್ದಾರೆ. ಆದರು ಸಹಾ ದಕ್ಷತೆಯಿಂದÀ ಹಾಗೆಯೇ ಕಾರ್ಯೋನ್ಮುಖವಾಗಿದ್ದಾರೆ.
ಹೊರಗಡೆ ಸುರಿಯುತ್ತಿದ್ದ ಬಿರುಮಳೆಯು ಹಾಗೇ ಮುಂದುವರೆದಿದೆ. ಗುಡುಗು, ಮಿಂಚು, ಗಾಳಿಯ ಆರ್ಭಟ ಯಥೇಚ್ಛವಾಗಿ ಕೆಲವೊಮ್ಮೆ ವಿಚಾರಣೆಗೂ ಅಡಚಣೆಯಾಗಿದ್ದನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ತುಸು ದಣಿವಾರಿಸಿಕೊಳ್ಳಲು ಚಹಾ ಕುಡಿಯುತ್ತಾ ಒಂದೆಡೆ ಕುಳಿತಿದ್ದಾರೆ. ನಾಳೆ ಏನೆಲ್ಲಾ ಮಾಡಬೇಕು ಎನ್ನುವುದರ ಚಿತ್ರಣ ಅವರ ತಲೆಯಲ್ಲಿ ಆಲೋಚನೆಗಳ ಬಿರುಮಳೆನ್ನೇ ಸೃಷ್ಟಿಸಿದೆ.
ಕೆಲ ಸಮಯದ ನಂತರ ಅವರಿಗೆ ಮೇಲಾಧಿಕಾರಿಗಳಿಂದ ತುರ್ತು ಕರೆ ಬರುತ್ತದೆ. ಬೆಂಗಳೂರಿಗೆ ಪಾಕಿಸ್ತಾನದಿಂದ ಉಗ್ರಗಾಮಿಗಳು ನುಸುಳಿ ಬಂದಿದ್ದಾರೆಂದು ಕಳೆದ ಬಾರಿಯಂತೆ ಕಾರ್ಯಾಚರಣೆಗೆ ಸಿದ್ಧವಾಗುವಂತೆ ಆದೇಶಿಸಿ ಕೂಡಲೇ ಬೆಂಗಳೂರಿಗೆ ಬರುವಂತೆ ನುಡಿಯುತ್ತಾರೆ.
ಈಗ ತನಿಖಾಧಿಕಾರಿ ಮೇಲಾಧಿಕಾರಿಗಳ ಸಂದೇಶವನ್ನು ಸಾವರಿಕೊಳ್ಳಲಾಗದೇ ಒಂದೆಡೆ ಕೂರುತ್ತಾರೆ. ಅವರಿಗೆ ಬೆಂಗಳೂರಿಗೆ ಹೊರಡುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ. ಆದರೆ ಏನು ಮಾಡುವುದು? ದೇಶದ ಸುರಕ್ಷತೆಯ ದೃಷ್ಟಿಯಲ್ಲಿ ಕರೆನೀಡಿದಾಗ ಇಲ್ಲವೆನ್ನುವುದು ಅಸಾಧ್ಯ. ಈಗ ಏನೇ ಆಗಲಿ ಒಮ್ಮೆ ಇದ್ದ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದು ಯಥೋಚಿತವೆಂದು ಮತ್ತೆ ಕರೆಮಾಡುತ್ತಾರೆ. ಶರಧೀಪುರದಲ್ಲೇ ಮುಂದುವರೆಸುವಂತೆ ಮನವಿಮಾಡುತ್ತಾರೆ. ಆದರೆ ಅತ್ತ ಮೇಲಾಧಿಕಾರಿಗಳು ಏನನ್ನು ಕೇಳುವ ವ್ಯವಧಾನದಲ್ಲಿಲ್ಲ. ಕೂಡಲೇ ಹೊರಟು ಬನ್ನಿ. ಏನಾದ್ರೂ ಆದರೆ ಯಾರು ಹೊಣೆ? ಅಲ್ಲಿ ನಡೆಯುತ್ತಿರುವ ತನಿಖೆ ನಿಧಾನವಾದರೆ ತೊಂದರೆ ಇಲ್ಲ. ಆದರೆ ಇಲ್ಲಿ ಕೊಂಚ ಎಡವಿದರೆ ಏನಾಗುತ್ತದೆ ಎನ್ನುವ ಅರಿವು ನಿಮಗೆ ಖಂಡಿತಾ ಇದೆ ಎಂದುಕೊಳ್ಳುತ್ತೇನೆ. ಕೂಡಲೇ ಹೊರಡಿ. ನನಗೆ ಫೋನ್ನಲ್ಲಿ ಮಾತನಾಡಲು ಈಗ ಸಮಯವಿಲ್ಲ. ಹೈ ಅಲರ್ಟ್ ಘೋಷಿಸಿಯಾಗಿದೆ. ಬಹುದೊಡ್ಡ ಗಂಡಾಂತರವಂತೂ ಕಾದಿದೆ. ಸ್ಟಾರ್ಟ್ ಇಮ್ಮಿಡಿಯೇಟ್ ಎಂದು ಹೇಳಿ ಫೋನ್ ಇಟ್ಟರು.
ಈಗ ಕೂಡಲೇ ವಾಹನವನ್ನು ತೆಗೆದುಕೊಂಡು ಬರಲು ಡ್ರೈವರ್ಗೆ ಕರೆಮಾಡುತ್ತಾರೆ. ಆತ ಬರುವ ಐದು ನಿಮಿಷಗಳ ನಡುವೆಯೇ ಸರ್ಕಲ್ ಇನ್ಸ್ಪೆಕ್ಟರ್ಗೆ ತಾವು ನೀಡಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನುಡಿಯುತ್ತಾರೆ. ಅವರು ಆಯ್ತು ಸರ್. ನೀವು ಹೇಳಿದಂತೆ ಅವರೆಲ್ಲರ ಮೇಲು ಪ್ರಕರಣ ದಾಖಲಿಸಿ ನಾಳೆಯೇ ಎಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವೆ ಎನ್ನುತ್ತಾರೆ.
ಅಷ್ಟರಲ್ಲಿ ವಾಹನ ಬರುತ್ತದೆ. ಬೇಸರದಲ್ಲಿ ಹೆಜ್ಜೆಯಿಡುತ್ತಾ ನುಡಿಯುತ್ತಾರೆ. "ಅಲ್ಲಿ ಪಾಕಿಸ್ತಾನದಿಂದ ಉಗ್ರಗಾಮಿಗಳು ಬಂದಿದ್ದಾರೆ. ಅವರೂ ಜನರನ್ನು ಕೊಲ್ಲುತ್ತಾರೆ. ಹಿಂಸೆಯ ಅಟ್ಟಹಾಸವನ್ನು ಮೆರೆಯುತ್ತಾರೆ. ಇಲ್ಲಿಯೂ ಭೂ ಉಗ್ರಗಾಮಿಗಳಿದ್ದಾರೆ. ಇವರು ನಿತ್ಯ ಜನರನ್ನು ಹಿಂಸಿಸಿ ಕೊಲ್ಲುತ್ತಾರೆ. ಇವರಿಂದ ನೊಂದವರು ಬಾಳಿನುದ್ದಕ್ಕೂ ಬದುಕಿದ್ದೂ ನಿತ್ಯವೂ ನೋವಿನ ಅಭಿಷೇಕವನ್ನು ಮಾಡಿಕೊಳ್ಳುತ್ತಾರೆ. ಅತ್ಯಾಚಾರದ ಬೆಂಕಿಯಲ್ಲಿ ಕಣ್ಣೀರು ಸುರಿಸುತ್ತಾ ಹಲವರು ಕಾಲ ಕಳೆಯುತ್ತಿದ್ದಾರೆ. ಹಂತ ಹಂತವಾಗಿ ನಿತ್ಯವೂ ಕೊಲ್ಲುವ, ಮುಗ್ಧರ ಮನದ ಮೇಲೆ ಅನೈತಿಕ ಸಲಾಕೆಯಿಂದ ಹೊಡೆಯುವ, ನಂಬಿದವರ ನಂಬಿಕೆಯನ್ನು ಕೊಂದು ಗಹ ಗಹಿಸಿ ನಗುವ, ಹಣವೇ ಜೀವನವೆಂದುಕೊಂಡ ಇವರು ಪಾಕಿಸ್ತಾನದ ಉಗ್ರಗಾಮಿಗಳಿಗಿಂತಲೂ ವಿಕೃತರು. ಅವರಾದರೆ ಒಂದೇ ಏಟಿಗೆ ಕೊಲ್ಲುತ್ತಾರೆ. ಅವರು ಹೊರಗಿನ ಶತ್ರುಗಳು. ಇವರು ಒಳಗಿದ್ದೇ ದೇಶದ ಕಾನೂನನ್ನು ವಾಮಮಾರ್ಗದಲ್ಲಿ ಬಳಸಿಕೊಂಡು ವಿಕೃತಿಯ ಅಟ್ಟಹಾಸ ಮೆರೆವ ಒಳಗಿನ ಪಾಕಿಸ್ತಾನ. ಇವರು ಇನ್ನೂ ವಿಕೃತರು. ಇಂತವರಿಗೆ ಅಂತ್ಯ ಹಾಡಲೇಬೇಕು" ಎನ್ನುತ್ತಾ ವಾಹನದಲ್ಲಿ ಕುಳಿತು ಗಹನವಾಗಿ ಆಲೋಚಿಸುತ್ತಾ ಮತ್ತೆ ಸರ್ಕಲ್ ಇನ್ಸ್ಪೆಕ್ಟರ್ಗೆ "ನಾನು ಹೇಳಿದ್ದನ್ನು ಮರೆಯಬೇಡಿ, ಜಾಗ್ರತೆ" ಎಂದು ಹೇಳಿ ಬೇಸರದಲ್ಲಿ ಬೆಂಗಳೂರಿನತ್ತ ಹೊರಡುತ್ತಾರೆ..
ಭಾಗ-17
ಇತ್ತ ಶರಧೀಪುರದಲ್ಲಿ ತನಿಖಾಧಿಕಾರಿ ನಗರವನ್ನು ಬಿಟ್ಟು ಕೆಲ ಸಮಯದ ನಂತರ ಶೂಟೌಟ್ ಪ್ರಕರಣವೊಂದು ವರದಿಯಾಗುತ್ತದೆ. ನಗರದ ಪೆಟ್ರೋಲ್ ಬ್ಯಾಂಕ್ ಬಳಿ ಯಾರೋ ಶೂಟೌಟ್ ನಡೆಸಿದ್ದಾರೆಂದು ಸುದ್ದಿಯನ್ನು ಬೆನ್ನತ್ತಿ ಕೂಡಲೇ ಸರ್ಕಲ್ ಇನ್ಸ್ಪೆಕ್ಟರ್ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆಗೆ ಅತ್ತ ಧಾವಿಸುತ್ತಾರೆ. ಈ ದಿಡೀರ್ ಘಟನೆಯಿಂದ ಅವರಿಗೆ ಅಂದೇ ಎಫ್.ಐ.ಆರ್ ದಾಖಲಿಸಿ ತನಿಖಾಧಿಕಾರಿ ಸೂಚಿಸಿದಂತೆ ಭ್ರಷ್ಟರನ್ನೆಲ್ಲಾ ತಮ್ಮ ವಶಕ್ಕೆ ಪಡೆಯುವುದಕ್ಕೆ ತೊಡಕಾಗುತ್ತದೆ. ಘಟನೆ ನಡೆದ ಸ್ಥಳವನ್ನು ಸಂಪೂರ್ಣ ಪರಿಶೀಲಿಸಿ ಅಲ್ಲಿದ್ದವರನ್ನು ವಿಚಾರಿಸಿ ಊರಲ್ಲಿ ಮತ್ತೇನು ಗಂಡಾಂತರ ಕಾದಿದಿಯೋ ಎನ್ನುತ್ತಾ ರಕ್ಷಣೆಯನ್ನು ಇನ್ನಷ್ಟು ಬಿಗಿಗೊಳಿಸಿ ರಾತ್ರಿಯಿಡೀ ಊರನ್ನು ಗಸ್ತು ತಿರುಗುತ್ತಲೇ ಇದ್ದಾರೆ. ಬೆಳಿಗ್ಗೆಯಾದರೂ ಏನೊಂದು ಸುಳಿವಿಲ್ಲ. ರಾಜ್ಯದ ಎಲ್ಲ ಠಾಣೆಗಳಿಗೂ ಮೆಸೇಜ್ ರವಾನಿಸಿ ಮುಂದೇನೋ ಎಂದು ಕಾದು ಶರಧೀಪುರದಲ್ಲಿ ಅನುಮಾನಾಸ್ಪದ ಸ್ಥಳಗಳನ್ನು ತಪಶೀಲು ಮಾಡುತ್ತಿದ್ದಾರೆ. ಮತ್ತೆ ಮುಂಬೈ ಪಾತಕಿಗಳೇನಾದರು ಬಂದಿರಬಹುದೇ? ಅವರನ್ನು ಈ ಬಾರಿ ಯಾರು ಕರೆಸಿರಬಹುದು? ಆದರೆ ಈ ಬಾರಿ ಶೂಟೌಟ್ ನಡೆಸಿದವರು ಯಾರ ಮೇಲು ಗುಂಡು ಹಾರಿಸಿಲ್ಲ. ಕೇವಲ ಗಾಳಿಯಲ್ಲಿ ಗುಂಡು ಹಾರಿಸಿ ನಿಮ್ಮ ಊರಿಗೆ ಬಾರಿ ಗಂಡಾಂತರವಿದೆಯೆಂದು ಜೋರಾಗಿ ಕೂಗಾಡಿ ಹೋಗಿದ್ದಾರೆಂದು ಕಂಡವರು ನುಡಿದಿದ್ದಾರೆ. ಇದು ಇನ್ನಷ್ಟು ಬೆದರಿಕೆಗೆ ಕಾರಣವಾಗಿದೆ.
ಏನೇ ಆಗಲಿ ಗುಂಡು ಹಾರಿಸಿ ಬೆದರಿಕೆಯೊಡ್ಡಿದ್ದಾರೆಂದರೆ ಅಷ್ಟು ಸುಲಭವಾಗಿ ನಿರ್ಲಕ್ಷಿಸುವ ವಿಚಾರವಲ್ಲ. ಸದ್ಯ ಊರಿನ ಪರಿಸ್ಥಿತಿಯೂ ಸರಿಯಿಲ್ಲ. ಬಹಳ ಎಚ್ಚರಿಕೆಯಿಂದ ಇರಬೇಕೆಂದು ಪರಿತಪಿಸುತ್ತಿದ್ದಾರೆ. ಹೀಗೆ ಇದೇ ಒತ್ತಡದಲ್ಲಿ ಸಮಯ ಕಳೆಯುತ್ತಾ ಬೆಳಿಗ್ಗೆ ಹತ್ತರ ಸಮಯವಾಗುತ್ತದೆ. ಅಷ್ಟರಲ್ಲಿ ಬೆಂಗಳೂರು ತಲುಪಿದ ತನಿಖಾಧಿಕಾರಿಯವರು ಫೋನ್ ಮಾಡುತ್ತಾರೆ. ಸರ್ಕಲ್ ಇನ್ಸ್ ಪೆಕ್ಟರ್ ಗೆ ಅರಿವಾಗುತ್ತದೆ. ಅತ್ತಕಡೆಯಿಂದ ಏನು ಕೇಳುತ್ತಾರೆನ್ನುವುದು ಅವರಿಗೆ ಗೊತ್ತಿದೆ. ಇಷ್ಟು ದಿವಸ ಅವರು ಹಗಲಿರುಳು ಒದ್ದಾಡಿದ್ದು, ಹಾಕಿದ್ದ ಶ್ರಮವು ವ್ಯಯವಾಗಬಾರದೆನ್ನುವುದು ಇವರಿಗೂ ಅರಿವಿದೆ. ಆದರೆ ನಿನ್ನೆ ನಡೆದ ಘಟನೆಯಿಂದ ಎಲ್ಲವೂ ಹಾಳಾಗಿದೆ. ವಿಧಿಯಿಲ್ಲದೇ ಇದ್ದ ವಿಚಾರವನ್ನು ತಿಳಿಸುತ್ತಾರೆ. ಅತ್ತ ಬಹಳ ಬೇಸರದಲ್ಲಿ ತಾವಂದುಕೊಂಡಂತೆ ಆಗಲಿಲ್ಲ. ಭ್ರಷ್ಟರ ಮೇಲೆ ಇನ್ನೂ ಎಫ್.ಐ.ಆರ್ ದಾಖಲು ಆಗಲಿಲ್ಲ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದು ಇಂದು ಸಾಧ್ಯವಿಲ್ಲ ಎನ್ನುವುದನ್ನರಿತ ಅವರು ನುಡಿಯುತ್ತಾರೆ. "ಏನೇ ಆಗಲಿ ಆದಷ್ಟು ಬೇಗನೇ ಅಂದುಕೊಂಡ ಕೆಲಸವನ್ನು ಮುಗಿಸಿರಿ. ಇಲ್ಲದೇ ಹೋದರೇ ನಾನು ಅಷ್ಟು ದಿವಸ ಪರಿತಪಿಸಿದ್ದು ಬೂದಿಯಾದಂತೆ. ಅಲ್ಲಿಯ ಒಂದೊಂದು ಪ್ರಕರಣವನ್ನು ಕೇಳಿದರೂ ನನ್ನ ಕಣ್ಣಲ್ಲಿ ನೀರು ಬರುತ್ತದೆ. ಎಷ್ಟು ಕುಟುಂಬಗಳು ಭೂ ಮಾಫಿಯಾದ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ನೊಂದವರ ಪರವಾಗಿ ನನ್ನದೊಂದು ಮನವಿ ದಯವಿಟ್ಟು ಬೇಗನೇ ಎಫ್.ಐ.ಆರ್ ದಾಖಲಿಸಿ" ಎಂದು ಭಾವುಕರಾಗಿ ತನಿಖಾಧಿಕಾರಿ ನುಡಿಯುತ್ತಾರೆ. ಎಲ್ಲವನ್ನು ಅರಿತ ಸರ್ಕಲ್ ಇನ್ಸ್ ಪೆಕ್ಟರ್ ಅಷ್ಟೇ ನೋವಿನಲ್ಲಿ ನುಡಿಯುತ್ತಾರೆ "ಸರ್, ಈ ಮಾತನ್ನು ನಾನು ಖಂಡಿತವಾಗಿಯೂ ಉಳಿಸಿಕೊಳ್ಳುತ್ತೇನೆ. ಈ ದಿನವೇ ಎಂತಹ ಒತ್ತಡವಿದ್ದರೂ ಮಾಡಿ ಮುಗಿಸುತ್ತೇನೆ. ಇದು ನಾನು ನಿಮಗೆ ನೀಡುವ ಮಾತಿದು" ಎನ್ನುತ್ತಾರೆ. ಅತ್ತ ಏನೋ ತುಸು ಸಾವಾಧಾನದಲ್ಲಿ ತನಿಖಾಧಿಯಾರಿಯು ನಿಟ್ಟುಸಿರು ಬಿಡುತ್ತಾರೆ. ಪುನಃ ಕುತೂಹಲಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಕೇಳುತ್ತಾರೆ. ಏನು ಸರ್, ಅಲ್ಲಿ ಉಗ್ರಗಾಮಿಗಳು ನುಸುಳಿದ್ದಾರಲ್ಲ. ಏನಾದರೂ ಮಾಹಿತಿ ಸಿಕ್ತಾ ಎನ್ನುತ್ತಾರೆ. ಅತ್ತ ನಗುತ್ತಾ ತನಿಖಾಧಿಕಾರಿ ನುಡಿಯುತ್ತಾರೆ. ಹೂಂ, ಮಾಹಿತಿ ಅನ್ನುವುದಕ್ಕಿಂತ ನಾವು ಎಷ್ಟು ಜಾಗರೂಕವಾಗಿರುತ್ತೇವೆ ಎನ್ನುವುದು ಮುಖ್ಯ ಎಂದು ಫೋನ್ ಇಡುತ್ತಾರೆ.
ಇತ್ತ ಸರ್ಕಲ್ ಇನ್ಸ್ ಪೆಕ್ಟರ್ಗೆ ಠಾಣೆಯಿಂದ ಫೋನ್ ಬರುತ್ತದೆ. "ಸರ್, ಮೇಲಾಧಿಕಾರಿಗಳಿಂದ ಫ್ಯಾಕ್ಸ್ ಮೂಲಕ ನಿಮ್ಮ ವರ್ಗಾವಣೆ ಆದೇಶ ಬಂದಿದೆ" ಈಗ ಬೇಸರದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಠಾಣೆಗೆ ಹೋಗಿ ವರ್ಗಾವಣೆಯ ಆದೇಶವನ್ನು ಓದುತ್ತಿದ್ದಾರೆ. ಅಷ್ಟರಲ್ಲಿ ಮೇಲಾಧಿಕಾರಿಗಳಿಂದ ದೂರವಾಣಿ ಕರೆಯೂ ಬರುತ್ತದೆ. ಅವರು ಊರಲ್ಲಿ ನಡೆದ ವಿಚಾರವನ್ನು ತಿಳಿಸುತ್ತಾರೆ. ಆದರೂ ಮೇಲಾಧಿಕಾರಿಗಳು ಅದೆಲ್ಲಾ ನಮಗೂ ಅರಿವಿದೆ. ಕೂಡಲೇ ನೀವು ಮುಂದೆ ಹೋಗುವ ಊರಿನಲ್ಲಿ ಮಾಡಬೇಕಾದುದು ಸಾಕಷ್ಟು ಇದೆ. ಕೂಡಲೇ ಹೊರಡಿ ನಿಮ್ಮ ಜಾಗಕ್ಕೆ ನಿಯೋಜಿಸಲ್ಪಟ್ಟವರು ಇನ್ನೇನು ಬೇಗನೇ ಬರುತ್ತಾರೆ ಎನ್ನುತ್ತಾರೆ.
ಇತ್ತ ಸರ್ಕಲ್ ಇನ್ಸ್ ಪೆಕ್ಟರ್ರವರಿಗೆ ನಡೆಯುತ್ತಿರುವುದು ಏನೆಂದು ಅರಿವಾಗುತ್ತಿಲ್ಲ. ಒಂದೆಡೆ ಭ್ರಷ್ಟರ ಮೇಲೆ ಎಫ್.ಐ.ಆರ್ ದಾಖಲಿಸುವುದಕ್ಕೂ ಆಗುತ್ತಿಲ್ಲ. ಮೇಲಿಂದ ಮೇಲೆ ದೂರವಾಣಿ ಕರೆಗಳು. ಭ್ರಷ್ಟರ ಹೇಳಿಕೆಗಳನ್ನು ಸರಿಯಾಗಿ ಪಟ್ಟಿಮಾಡದೇ ಏನೋ ಪ್ರಕರಣ ದಾಖಲಿಸಿದರೆ ಇನ್ನೇನಾಗುತ್ತೋ ಏನೋ ಎನ್ನುತ್ತಾ ಆಲೋಚಿಸುತ್ತಿದ್ದಾರೆ. ಎಲ್ಲಿಂದ ಆರಂಭಿಸಬೇಕೆಂದು ತೋಚುತ್ತಿಲ್ಲ. ಎಲ್ಲಾ ಗೊಂದಲದ ಗೂಡಾಗಿದೆ. ಪದೇ ಪದೇ ಬರುತ್ತಿರುವ ಫೋನ್ ಕರೆಗಳು ಇನ್ನಷ್ಟು ಖಿನ್ನತೆಗೆ ನೂಕುತ್ತಿವೆ. ಕೂಡಲೇ ಸಂಬಂದಿಸಿದ ಪೇದೆಯನ್ನು ಕರೆದು ಎಲ್ಲರ ಹೇಳಿಕೆಗಳನ್ನು ಮತ್ತು ವೀಡಿಯೋ ಚಿತ್ರೀಕರಣವನ್ನು ಸರಿಯಾಗಿಟ್ಟುಕೊಳ್ಳಿ. ನನಗೆ ಮೇಲಿಂದ ಮೇಲೆ ಕರೆ ಬರುತ್ತಿದೆ. ಇನ್ನೇನು ಕೆಲವೇ ಸಮಯದಲ್ಲಿ ನಾನು ಹೊರಡಬೇಕು ಎನ್ನುತ್ತಾರೆ. ಅಷ್ಟರಲ್ಲಿ ಆ ಠಾಣೆಗೆ ವರ್ಗಾವಣೆಯಾದ ಹೊಸ ಸರ್ಕಲ್ ಇನ್ಸ್ ಪೆಕ್ಟರ್ ಬರುತ್ತಾರೆ. ವಿಧಿಯಿಲ್ಲದೇ ಅವರಿಗೆ ಚಾರ್ಜ್ ಕೊಟ್ಟು ಹೊರಡಲು ಅಣಿಯಾಗುತ್ತಾರೆ. ಏನೇ ಆಗಲಿ ಎಂದು ಬೆಂಗಳೂರಿನಲ್ಲಿರುವ ತನಿಖಾಧಿಕಾರಿಗೆ ವಿಷಯ ತಿಳಿಸಲು ಕರೆಮಾಡುತ್ತಾರೆ. ವಿಷಯ ಕೇಳುತ್ತಲೇ ಅವರು ಅತ್ತ ಆಶ್ಚರ್ಯ ಚಕಿತರಾಗುತ್ತಾರೆ. ಕೇವಲ 24 ಗಂಟೆಯಲ್ಲಿ ನಾವಿಬ್ಬರೂ ಆ ಊರಿನಿಂದ ಹೊರಹೋಗುವಂತಾಗಿದೆ. ಏನಿರಬಹದು? ಏಕೆ? ಒಂದಡೆ ಅವರಲ್ಲಿ ನೋವು ಮಡುಗಟ್ಟಿದ ಭಾಸ. ಆದರು ಹೊಸದಾಗಿ ಬಂದವರಿಗೆ ಪ್ರಕರಣವನ್ನು ತುಸು ವಿವರಿಸಿ ಎನ್ನುತ್ತಾರೆ. ಆಯ್ತು ಸರ್ ಎಂದು ಸರ್ಕಲ್ ಇನ್ಸ್ ಪೆಕ್ಟರ್ ತಮ್ಮ ಕೈಲಾದ ಪ್ರಯತ್ನವನ್ನು ಮಾಡಿ ತಮ್ಮ ಹೊಸ ಜಾಗಕ್ಕೆ ಕರ್ತವ್ಯ ನಿಯೋಜನೆಗೆ ಹೊರಡುತ್ತಾರೆ.
ಅವರ ಮನದಲ್ಲಿ ನೂರೊಂದು ಆಲೋಚನೆಗಳು. ಹಿಂದಿನ ರಾತ್ರಿ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಉಗ್ರಗಾಮಿಗಳು ನುಸುಳಿದ್ದಾರೆ. ಅವರನ್ನು ಹಿಡಿಯಲು ಕಾರ್ಯಾಚರಣೆಗೆ ತನಿಖಾಧಿಕಾರಿಯವರನ್ನು ಮೇಲಾಧಿಕಾರಿಗಳು ನಿಯೋಜಿಸುತ್ತಾರೆ. ಇನ್ನೇನು ಎಲ್ಲರ ಹೇಳಿಕೆಗಳನ್ನು ನಾನು ಇನ್ನೊಮ್ಮೆ ರಾತ್ರಿಯಿಡೀ ಕುಳಿತು ಅವಲೋಕಿಸಿ ಪ್ರಕರಣಗಳನ್ನು ದಾಖಲಿಸಬೇಕು ಎನ್ನುವಷ್ಟರಲ್ಲಿ ಊರಿನಲ್ಲಿ ಶೂಟೌಟ್ ಪ್ರಕರಣವು ವರದಿಯಾಗುತ್ತದೆ. ಅತ್ತ ಅವರಿಗಾಗಿ ರಾತ್ರಿಯಿಡೀ ತಡಕಾಡಿದರೂ ಏನೊಂದು ಸುಳಿವು ಸಿಗುವುದಿಲ್ಲ. ಬೆಳಿಗ್ಗೆ ನೋಡಿದರೆ ಆಗಲೇ ವರ್ಗಾವಣೆಯ ಆದೇಶ ಬಂದಿದೆ. ಏನೋ ಅನುಮಾನದ ಜೊತೆಗೆ ಭ್ರಷ್ಟರ ಮೇಲೆ ತಾವಂದುಕೊಂಡಂತೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಆಗಲಿಲ್ಲವೆನ್ನುವ ಭಾರವಾದ ನೋವಿನ ಮನದಲ್ಲಿ ಹೊಸ ಊರಿಗೆ ಪ್ರಯಾಣ ಬೆಳೆಸಿದ್ದಾರೆ.
ಸುಮಾರು ಒಂದು ವಾರದ ಸಮಯದ ನಂತರ ಬೆಂಗಳೂರಿಗೆ ಯಾವುದೇ ಉಗ್ರಗಾಮಿಗಳು ಪಾಕಿಸ್ತಾನದಿಂದ ಬಂದಿಲ್ಲ. ಅದೆಲ್ಲವೂ ಯಾರೋ ಹಬ್ಬಿಸಿದ ವದಂತಿ ಎನ್ನುವುದು ಖಚಿತವಾಗುತ್ತದೆ. ಆಗ ತನಿಖಾಧಿಕಾರಿ ಪುನಃ ಶರಧೀಪುರಕ್ಕೆ ನಿಯೋಜಿಸುವಂತೆ ಮೇಲಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಆಗ ಮೇಲಾಧಿಕಾರಿಗಳು ಉತ್ತರಿಸುತ್ತಾರೆ. ಈಗ ಅದು ಅಂತಹ ದೊಡ್ಡ ಸಮಸ್ಯೆ ಅಲ್ಲ. ಅದರ ಬಗ್ಗೆ ಮುಂದೆ ನೋಡಿದರಾಯ್ತು. ನಿಮ್ಮನ್ನು ನಕ್ಸಲ್ ನಿಗ್ರಹ ತಂಡಕ್ಕೆ ನಿಯೋಜಿಸಿ ಸರ್ಕಾರ ಆದೇಶಿಸಿದೆ. ನಕ್ಸಲರ ಅಟ್ಟಹಾಸ ಮಿತಿ ಮೀರಿದೆ. ಬೇಗನೇ ಹೊರಡಿ ಎನ್ನುತ್ತಾರೆ. ಎಷ್ಟೇ ಮನವಿ ಮಾಡಿಕೊಂಡರು ಅವರ ಮನದ ಇಂಗಿತಕ್ಕೆ ಫಲ ದೊರೆಯುವುದಿಲ್ಲ. ಈಗೇನಿದ್ದರೂ ಹತಾಶೆಯೇ ಅವರ ಮನದಲ್ಲಿ ಸುಳಿದಾಡತೊಡಗಿದೆ. ಒಂದೆಡೆ ಅಲ್ಲಿಯೇ ಇದ್ದ ಸರ್ಕಲ್ ಇನ್ಸ್ ಪೆಕ್ಟರ್ ಕೂಡ ತಾವು ಊರು ಬಿಟ್ಟ ಕೆಲವೇ ಸಮಯದಲ್ಲೇ ವರ್ಗಾವಣೆಯಾಗುತ್ತಾರೆ. ಅವರ ಸ್ಥಳಕ್ಕೆ ಇನ್ನೊಬ್ಬರೂ ಕೂಡಲೇ ಹೊರಟು ಬರುತ್ತಾರೆ. ಗುಂಡಿನ ದಾಳಿ ನಡೆದು ಅವರಿಗೆ ರಾತ್ರಿಯಿಡೀ ಕೆಲಸಮಾಡದಂತೆ ಆಗಿದೆ. ಆದರೆ ಯಾರೆಂದು ಸಣ್ಣ ಕುರುಹು ಸಿಕ್ಕಿಲ್ಲ. ಇದೆಲ್ಲಾ ಅವಲೋಕಿಸುತ್ತಾ ಅವರಿಗೆ ಕಣ್ಣೆದುರೆ ಭ್ರಷ್ಟರ ದೆವ್ವವೇ ಗೆದ್ದು ಸತ್ಯದ ಕತ್ತು ಹಿಸುಕಿದಂತೆ ಭಾಸ..!
ಕೆಲವು ದಿನಗಳ ನಂತರ ಶರಧಿಪುರದ ಠಾಣೆಗೆ ತನಿಖಾಧಿಕಾರಿ ಕರೆಮಾಡುತ್ತಾರೆ. ಅಲ್ಲಿನ ಸರ್ಕಲ್ ಇನ್ಸ್ ಪೆಕ್ಟರ್ಗೆ ತಮ್ಮನ್ನು ಪರಿಚಯಿಸಿಕೊಂಡು ಇದ್ದ ವಿಚಾರವನ್ನು ಅವರಿಗೆ ಹೇಳುತ್ತಾರೆ. ತಾವು ಯೋಜಿಸಿದ್ದನ್ನು ಅವರ ಗಮನಕ್ಕೆ ತಂದು ಕೂಡಲೇ ಕ್ರಮವಹಿಸಿ ಎನ್ನುತ್ತಾರೆ. ಅವರು ತಾವು ಠಾಣೆಗೆ ಬಂದು ಇಷ್ಟು ದಿವಸವಾದರೂ ಆ ಬಗ್ಗೆ ಯಾರು ತಮಗೆ ಹೇಳಿಲ್ಲ. ಕೂಡಲೇ ವಿಚಾರಿಸುವೆ ಎನ್ನುತ್ತಾರೆ. ಈಗ ತನಿಖಾಧಿಕಾರಿಯವರಿಗೆ ಎಲ್ಲೋ ಉದ್ದೇಶಪೂರ್ವಕವಾಗಿಯೇ ತಮ್ಮ ತನಿಖೆಯನ್ನು ದಾರಿತಪ್ಪಿಸಲಾಗಿದೆ. ಭೂ ಮಾಫಿಯಾದ ಉಗ್ರಗಾಮಿಗಳಿಗೆ ಯಾರೋ ರಕ್ಷೆಯಾಗಿ ನಿಂತಿದ್ದಾರೆನ್ನುವುದು ಅವರಿಗೆ ಅರಿವಾಗುವುದಕ್ಕೆ ಈಗ ಸಮಯವೇ ಹಿಡಿಯುವುದಿಲ್ಲ. ಕೂಡಲೇ ಶರಧಿಪುರ ಠಾಣೆಯ ಪೇದೆಯೊಬ್ಬರನ್ನು ಸಂಪರ್ಕಿಸುತ್ತಾರೆ. ಆತ ಇವರ ನಂಬಿಕೆಗೆ ಹತ್ತಿರವಾದನು. ಆತನಲ್ಲಿ ಊರಿನಲ್ಲಿ ಏನು ನಡೆಯುತ್ತಿದೆ? ಊರು ಹೇಗಿದೆ? ಎಂದು ಕೇಳುತ್ತಾ ಮಾಹಿತಿಯನ್ನು ಕಲೆಹಾಕುತ್ತಾರೆ. ಅವರ ಆಲೋಚನೆಯಂತೆಯೇ ನಡೆದಿದೆ. ರಾಜಕೀಯ ಪ್ರೇರಿತವಾಗಿ ತಮ್ಮನ್ನು ವರ್ಗಾಯಿಸಲಾಗಿದೆ ಎನ್ನುವುದು ಅರಿವಾಗುತ್ತದೆ. ಏನೇ ಆದರೂ ಪ್ರಯತ್ನ ಬಿಡಬಾರದು ಮತ್ತೆ ಆ ಸರ್ಕಲ್ ಇನ್ಸ್ಪೆಕ್ಟರ್ಗೆ ಕರೆಮಾಡಿ ವಿಚಾರಿಸುತ್ತಲೇ ಇರಬೇಕೆಂದು ಪಣತೊಡುತ್ತಾರೆ.
ಸುಮಾರು ಒಂದು ತಿಂಗಳ ನಂತರ ಅವರಿಗೆ ರಾತ್ರಿ ಹನ್ನೊಂದರ ಸಮಯದಲ್ಲಿ ಅವರಿಗೆ ಕರೆ ಬರುತ್ತದೆ. ಈ ಸಮಯದಲ್ಲಿ ಎನೋ ತುರ್ತು ಕರೆಯೆಂದು ನೋಡುತ್ತಾರೆ. ಆಶ್ಚರ್ಯ, ಅತ್ತ ಶರಧೀಪುರದಿಂದ ಪೋಲಿಸ್ ಠಾಣೆಯ ಅದೇ ಪೇದೆ ಕರೆಮಾಡುತ್ತಿದ್ದಾರೆ. ಏನೋ ದೊಡ್ಡ ವಿಚಾರದ ಸುಳಿವೇ ಇರಬೇಕೆಂದು ಫೋನ್ ತೆಗೆದುಕೊಳ್ಳುತ್ತಾರೆ. ಆತ ಮಾಹಿತಿ ನೀಡುತ್ತಾನೆ. "ಸರ್, ಈ ದಿನ ರಾತ್ರಿ ಜೈಲಿಗೆ ಯಾರೋ ಶಸ್ತ್ರ ಸಜ್ಜಿತರ ತಂಡವೊಂದು ದಾಳಿಮಾಡಿ ಕುಮಾರು ಮತ್ತು ರಾಜು ಅವರನ್ನು ಹೊತ್ತೊಯ್ದರಂತೆ" ಎನ್ನುತ್ತಾನೆ. ಘಟನೆಯನ್ನು ವಿವರಿಸುತ್ತಾ ರಾತ್ರಿ ಪಾಳೆಯದ ಕೆಲಸಕ್ಕೆ ಹಾಜರಾಗುವವರಿಗೆ ಒಳಬರಲು ಜೈಲಿನ ಮುಖ್ಯ ದ್ವಾರ ತೆರೆದಾಗ ಗುಂಪೊಂದು ಗುಂಡು ಹಾರಿಸಿ ಹೊರಗಿದ್ದ ಸಿಬ್ಬಂದಿಗಳನ್ನು ಒತ್ತೆಯಾಗಿಸಿಕೊಂಡು ಒಳನುಗ್ಗಿದರು. ಜೈಲಿನೊಳಗೆ ಕುಮಾರ ಮತ್ತು ರಾಜು ಅವರನ್ನು ಎಳೆದುಕೊಂಡು ನಮ್ಮ ಎರಡು ಜನ ಸಿಬ್ಬಂದಿಗಳನ್ನು ಒತ್ತೆಯಾಗಿಸಿಕೊಂಡು ಕೆಲವೇ ನಿಮಿಷದಲ್ಲಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ನಾವೆಲ್ಲಾ ಬಹಳ ಭಯ, ಗೊಂದಲಮಯವಾಗಿದ್ದೇವೆ. ಈ ಸಮಯದಲ್ಲಿ ನೀವಿದ್ದರೆ ಅದೇನೋ ಖಂಡಿತಾ ನಾವು ಸಮಸ್ಯೆಯನ್ನು ಛೇದಿಸುತ್ತಿದ್ದೆವು. ಏನು ಮಾಡೋದು ಸರ್. ಈಗ ನೀವು ಇಲ್ಲ. ನಮ್ಮ ಹಳೇ ಸಾಹೇಬ್ರು ಇಲ್ಲ. ಹೊಸ ಸಾಹೇಬ್ರಿಗೆ ಇನ್ನೂ ನಮ್ಮೂರಿನ ಬಗ್ಗೆ ಅಷ್ಟೊಂದು ತಿಳುವಳಿಕೆ ಇಲ್ಲ ಎನ್ನುತ್ತಾನೆ. ಮನದಲ್ಲಿ ಏನೇ ಇದ್ದರೂ ತನಿಖಾಧಿಕಾರಿ ಉತ್ತರಿಸುತ್ತಾರೆ. ಏನೇ ಆಗಲಿ, ಹೊಸಬರಾದರೇನು? ಅವರು ತಮ್ಮ ಕೆಲಸಮಾಡುತ್ತಾರೆ. ಅಂಜಿಕೆ ಬೇಡ. ಎಲ್ಲರೂ ಅವರಿಗೆ ಸಹಕರಿಸಿ ಎನ್ನುತ್ತಾರೆ.
ಈಗ ತನಿಖಾಧಿಕಾರಿಯವರ ಮನದಲ್ಲಿ ಒಂದೇ ಆಲೋಚನೆ ರಾಜು ಮತ್ತು ಕುಮಾರನನ್ನು ದುಷ್ಟರಿಂದ ರಕ್ಷಿಸುವುದು ಹೇಗೆ?
ಏನೇ ಆಗಲಿ ಎಂದು ತಮ್ಮ ಸಹೋದ್ಯೋಗಿಯೊಬ್ಬರಿಗೆ ಕರೆಮಾಡಲು ಫೋನ್ ತೆಗೆದುಕೊಳ್ಳುತ್ತಾರೆ. ಅತ್ತ ಗಡಿಯಾರದಲ್ಲಿ ಸಮಯ ಸುಮಾರು ಹನ್ನೆರಡರ ಸನಿಹದಲ್ಲಿದೆ. ಪೋಲಿಸರಿಗೆ ಸಮಯದ ಹಂಗೆಲ್ಲಿ? ಮಿತಿಯೆಲ್ಲಿ? ಕಾಯಕವೇ ದೇವರೆನ್ನುತ್ತಾ ಏನಾದರೂ ಉಪಯೋಗವಾಗಬಹುದೆಂದು ಹಂಬಲದಲ್ಲಿ ಕರೆಮಾಡುತ್ತಾರೆ. ಅವರು ಫೋನ್ ಎತ್ತುತ್ತಲೇ ಇದ್ದ ವಿಚಾರವನ್ನೆಲ್ಲಾ ಒಂದೇ ಉಸಿರಿಗೆ ಹೇಳಿ ಮುಗಿಸುತ್ತಾರೆ. ಅತ್ತ ಅವರೂ ನುಡಿಯುತ್ತಾರೆ. ನೋಡಿ, ನಾನು ನಿಮ್ಮಂತೆಯೇ ದಶಕದಿಂದ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದೇನೆ. ಹಲವು ಬಾರಿ ನಿಮ್ಮಂತೆಯೇ ನನಗೂ ಆಗಿದೆ. ಆದರೆ ಎಲ್ಲವೂ ನಾವಂದುಕೊಂಡಂತೆ ಆಗಬೇಕಲ್ಲ? ನಿಷ್ಠೆಯಿಂದ ಕೆಲಸಮಾಡೋದು ನಮ್ಮ ಧರ್ಮ ಎನ್ನುತ್ತಾ ಬೇಸರಿಕೊಳ್ಳುತ್ತಾ "ನಿಮ್ಮ ಅನುಮಾನದಂತೆ ಈ ಪ್ರಕರಣದಲ್ಲಿ ಭ್ರಷ್ಟರೇ ರಾಜು ಮತ್ತು ಕುಮಾರರನ್ನು ಕೊಲ್ಲಿಸಲು ಅಪಹರಿಸಿದ್ದಾರೆ" ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎನ್ನುವುದು ನನ್ನ ಅನಿಸಿಕೆ ಎನ್ನುತ್ತಾರೆ. ಮುಂದುವರೆದು ಈಗ ಅಲ್ಲಿರುವ ಪರಿಸ್ಥಿತಿ ಹೇಗಿದೆಯೋ ಏನೋ? ಏನೇ ಆಗಲಿ ಇನ್ನೊಬ್ಬರ ತನಿಖೆಯಲ್ಲಿ ನಾವು ಮೂಗು ತೂರಿಸುವುದು ಬೇಡ. ನೀವು ಈಗ ನಿಮಗೆ ಸರ್ಕಾರ ವಹಿಸಿರುವ ಕೆಲಸದ ಕಡೆ ಗಮನ ಕೊಡಿ. ಎಷ್ಟು ಚಿಂತಿಸಿದರೂ ಅಷ್ಟೇ. ನಾವಂದುಕೊಂಡಂತೇ ಆಗುವುದು ಸಾಧ್ಯವೇ? ಕೆಲವೊಮ್ಮೆ ಆಗುತ್ತದೆ. ಇನ್ನೂ ಕೆಲವೊಮ್ಮೆ ಆಗುವುದಿಲ್ಲ. ಈಗೇನಿದ್ದರೂ ಈ ಘಟನೆಯ ಬಗ್ಗೆ ಅಲ್ಲಿಯ ಪೋಲೀಸರೇ ತನಿಖೆಮಾಡುತ್ತಾರೆ. ನೀವು ಅತಿಯಾಗಿ ಭಾವುಕರಾಗಬೇಡಿ ಎಂದು ಸಲಹೆ ನೀಡುತ್ತಾರೆ.
ಅವರು ಹೇಳುವುದೆಲ್ಲಾ ನಿಜ. ಆದರೆ ಅಷ್ಟೊಂದು ದಿನ ಕಷ್ಟ ಪಟ್ಟು ನಡೆಸಿದ ತನಿಖೆ ಎಲ್ಲಿ ಉಪಯೋಗರಹಿತವಾಗುತ್ತದೋ ಎನ್ನುವ ಭಯ. ಇನ್ನು ಕೇವಲ ಒಂದು ದಿವಸ ಆ ಊರಿನಲ್ಲಿ ಕೆಲಸ ಮಾಡಲು ನನಗೆ ಅವಕಾಶ ದೊರೆತಲ್ಲಿ ತಪ್ಪದೇ ಎಲ್ಲಾ ಭ್ರಷ್ಟರ ಮೇಲು ಎಫ್.ಐ.ಆರ್ ದಾಖಲಿಸಿ ಎಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಅನುವಾಗುತ್ತಿತ್ತು. ಆದರೆ ಏನು ಮಾಡುವುದು ಆ ಒಂದೇ ಒಂದು ದಿನವೇ ನನ್ನ ಬದುಕಲ್ಲಿ ಮರೆಯಲಾಗದ ಕಹಿ ಘಳಿಗೆಯಾಗಿದೆ. ಕ್ಷಣ ಕ್ಷಣವೂ ನನ್ನಿಂದ ಆ ಕೆಲಸ ಆಗಲಿಲ್ಲ ಎನ್ನುವ ಪದವು ಚೂರಿಯಾಗಿ ಮನಸ್ಸಿಗೆ ಚುಚ್ಚುತ್ತಿದೆ. ವಿಧಿಯಾಟವೋ? ಇಲ್ಲ ಭ್ರಷ್ಟರ ಆಟದ ಮುಂದುವರೆದ ಭಾಗವೋ? ಇಲ್ಲ ನೊಂದವರ ಕಣ್ಣೀರಿಗೆ ಬೆಲೆಯೇ ಇಲ್ಲವೆಂದು ದೇವರೂ ನನಗೆ ನುಡಿದನೆ!
ಹೀಗೆ ಸಮಯ ಕಳೆಯುತ್ತಾ ಮೂರು ತಿಂಗಳು ಕಳೆಯುತ್ತದೆ. ರಾಜು ಮತ್ತು ಕುಮಾರನ ಅಪಹರಣದ ಘಟನೆಯಿಂದ ಹಿಡಿದು ತಾವು ನಡೆಸಿದ ತನಿಖೆಯವರೆಗೆ ಯಾವುದೇ ಪ್ರಕರಣ ದಾಖಲಾಗದೇ ಉಳಿಯುತ್ತದೆ. ಕೊನೆಗೊಂದು ಅವರಿಗೆ ನಿಜವಾದ ವಿಷಯ ತಿಳಿಯುತ್ತದೆ. ಹೊಸ ಇನ್ಸ್ ಪೆಕ್ಟರ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ತಾವು ತನಿಖೆ ನಡೆಸಿ ಸಂಗ್ರಹಿಸಿದ ದಾಖಲೆಗಳು ಹಲವು ನಾಶವಾಗಿವೆ. ಜೊತೆಗೆ ಹೊಸಬರಿಗೆ ಅದರ ಉಸಾಬರಿಗೆ ಹೋಗುವ ಆಸಕ್ತಿಯೇ ಇಲ್ಲವೆನ್ನುವುದು ತಿಳಿಯುತ್ತದೆ. ಆಸಕ್ತಿಯೆನ್ನುವುದಕ್ಕಿಂತ ಆ ಬಗ್ಗೆ ಕಾರ್ಯೋನ್ಮುಖವಾಗದಂತೆ ರಾಜಕೀಯ ಪ್ರಭಾವದ ವಾಸನೆಯೂ ಇದೆಯೆನ್ನುವುದು ಅರಿವಾಗುತ್ತದೆ. ಭ್ರಷ್ಟ ರಕ್ಕಸರ ಲೋಕದಲ್ಲಿ ಮುಗ್ದನೊಬ್ಬನ ಸಂದೇಶದ ಹಾಡಿಗೆ ಸ್ವರಮೇಳವು ಹೊಮ್ಮುವುದೇ? ಹಾಗೆ ಈ ದುಷ್ಟರ ಅಟ್ಟಹಾಸದಲ್ಲಿ ಸತ್ಯವಂತೂ ಸತ್ತಂತೆ ಎಂದು ಇನ್ನು ಶರಧೀಪುರದ ವಿಚಾರದಲ್ಲಿ ತಾವು ತಲೆಕೆಡಿಸಿಕೊಂಡು ಪ್ರಯೋಜನವಿಲ್ಲ. ಅಷ್ಟು ದಿವಸಗಳ ಕಾಲ ತಾವು ಮಾಡಿದ್ದೆಲ್ಲ ಒಂದು ನಿಶ್ಪ್ರಯೋಜಕ ಯಾತ್ರೆ, ಛೇ!
ಈಗ ಅವರಿಗೆ ತುರ್ತು ಕರೆಯೊಂದು ಬರುತ್ತದೆ. "ನಕ್ಸಲರು ನಗರಕ್ಕೆ ನುಗ್ಗಿ ದರೋಡೆ ಮಾಡಲು ಬರುತ್ತಿದ್ದಾರೆ ಎನ್ನುವುದು". ಕೂಡಲೇ ತಮ್ಮ ತಂಡವನ್ನು ತೆಗೆದುಕೊಂಡು ಕಾರ್ಯಾಚರಣೆಗೆ ಹೊರಡಲು ಸನ್ನದ್ದರಾಗುತ್ತಾರೆ. ಜೀಪ್ನಲ್ಲಿ ಅವರ ಹಿಂಬದಿಯಲ್ಲಿ ಕುಳಿತಿದ್ದ ಅಧಿಕಾರಿಯೊಬ್ಬರು ನುಡಿದರು "ಕಳೆದ ಬಾರಿ ತಪ್ಪಿಸಿಕೊಂಡಿದ್ದರು, ಈ ಬಾರಿ ಯಾರನ್ನು ಬಿಡಬಾರದು. ಊರಿನಲ್ಲಿ ಕೊಲೆ ಸುಲಿಗೆ ಮಾಡಿ ಇಲ್ಲಿ ಕಾಡಿನಲ್ಲಿ ವೇಷ ಮರೆಸಿಕೊಂಡು ಬಾಳುತ್ತಾರೆ. ಇವರನ್ನು ಮುಗಿಸಿಯೇ ತೀರಬೇಕು ಎಂದು ಗರ್ಜಿಸುತ್ತಾರೆ". ಈಗ ಅವರೊಂದಿಗೆ ಹೇಗೆ ಕಾರ್ಯಾಚರಣೆಯನ್ನು ನಡೆಸಬೇಕೆಂದು ಯೋಜಿಸುತ್ತಾ ಎಲ್ಲರೂ ಊರಿನ ಹೊರ ವಲಯದ ಬಂಡೆಗಳ ನಡುವೆ ಅವಿತು ಕೂತಿದ್ದಾರೆ..
ಭಾಗ-18
ಕಾಡಿನ ಸಂಪರ್ಕದ ಕವಲು ದಾರಿಯನ್ನು ಗಮನಿಸುತ್ತಾ ಮೂರು ದಿಕ್ಕುಗಳಲ್ಲಿ ನೂರು ಮೀಟರ್ ವ್ಯಾಪ್ತಿಯೊಳಗೆ ಮೂರು ತಂಡಗಳಾಗಿ ಪೋಲಿಸರನ್ನು ನಿಯೋಜಿಸಿದ ಕಮಾಂಡರ್ ಅತ್ತಕಡೆಯಿಂದ ಬರುವ ಸಂದೇಶಕ್ಕಾಗಿ ಕಾಯುತ್ತಿದ್ದಾರೆ. ಕೊನೆಗೆ ಅವರು ಅಂದುಕೊಂಡಂತೆ ಮಾಹಿತಿ ಲಭಿಸಿತು. ಈಗ ಎಲ್ಲರೂ ಚುರುಕಾಗಿ ಮೈಯೆಲ್ಲಾ ಕಣ್ಣಾಗಿ ಗನ್ ಗುರಿಯಿಟ್ಟು ನೋಡುತ್ತಿದ್ದಾರೆ. ಅಷ್ಟರಲ್ಲಿ ಇಳಿಸಂಜೆಯ ಹೊತ್ತಲ್ಲಿ ಅಂದಾಜು 12 ರಿಂದ 15 ಜನರ ಗುಂಪೊಂದು ಕೈಲಿ ಗನ್ ಹಿಡಿದು ನಡೆದು ಬರುತ್ತಿದೆ. ಕವಲು ದಾರಿಯ ಕಾಡಿದ ಅಂಚಿನಲ್ಲೇ ಅತ್ತಿದ್ದಿಂತ ಗಮನಿಸುತ್ತಲೇ ಹೆಜ್ಜೆಹಾಕುತ್ತಿದ್ದಾರೆ. ಈಗ ಅವರ ಮೇಲೆ ಫೈರ್ ಮಾಡುವುದಕ್ಕಿಂತ ಮೊದಲು ಅವರನ್ನು ಸೆರೆ ಹಿಡಿಯಲು ಪ್ರಯತ್ನಿಸಬೇಕೆಂದು ಕಮಾಂಡರ್ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. ಅದರಂತೆ ಮುಂದೆ ಸಾಗಿ ಅವರು ಕಾಡಿನ ಮೇಲ್ಭಾಗದ ರಸ್ತೆ ತಿರುವು ಪಡೆದು ಮೇಲ್ಭಾಗಕ್ಕೆ ಬಂದು ಪೋಲಿಸರು ಕಾದು ಕುಳಿತ ನೂರು ಮೀಟರ್ ವ್ಯಾಪ್ತಿಯೊಳಗೆ ಆ ಗುಂಪು ಮಧ್ಯಬಾಗದ ರಸ್ತೆಯಲ್ಲಿ ಪ್ರವೇಶಿಸುತ್ತಿದ್ದಂತೆ ಮೈಕ್ನಲ್ಲಿ ಕಮಾಂಡರ್ ಅನೌನ್ಸ್ಮೆಂಟ್ ಮಾಡುತ್ತಾರೆ. "ನೋಡಿ ಕೂಡಲೇ ಎಲ್ಲರೂ ಗನ್ ಕೆಳಗಿಟ್ಟು ಶರಣಾಗಿ, ನಿಮ್ಮನ್ನು ಎಲ್ಲ ಬದಿಯಿಂದಲೂ ಪೋಲಿಸರು ಸುತ್ತುವರಿದಿದ್ದಾರೆ, ಎಚ್ಚರಿಕೆ" ಎಂದು ಹೇಳುತ್ತಾರೆ. ಆದರೆ ಅವರ್ಯಾರು ಶರಣಾಗತಿಗೆ ಒಪ್ಪದೇ ಒಮ್ಮೆಲೇ ಆತ ಘಟನೆಯಿಂದ ಬೆರಗಾಗಿ ತಾವೀಗ ಪೋಲಿಸರಿಂದ ತಪ್ಪಿಸಿಕೊಳ್ಳಬೇಕೆಂದು ಯಾವ ಕಡೆಯಿಂದ ಧ್ವನಿ ಬಂತೋ ಆ ಕಡೆಗೆ ಗ್ರೇನೇಡ್ ಗಳನ್ನು ಎಸೆಯುತ್ತಾರೆ. ಇತ್ತ ಪೋಲೀಸರಿಗೂ ಅವರ ಬಳಿ ಗ್ರೇನೇಡ್ ಗಳಿವೆ ಎನ್ನುವ ಮಾಹಿತಿ ಇರುವುದಿಲ್ಲ. ಈಗ ಗ್ರೇನೇಡ್ ದಾಳಿಗೆ ಮೊದಲ ಸಾಲಿನಲ್ಲಿದ್ದ ಕೆಲವು ಪೋಲಿಸರಿಗೆ ಏನೋ ಅನಾಹುತವಂತೂ ಆಗಿದೆ ಎನ್ನುವುದು ಖಚಿತವಾಯಿತು. ಈಗ ಎಲ್ಲ ಕಡೆಯಿಂದಲೂ ಪೋಲೀಸರು ಫೈರ್ ಮಾಡುತ್ತಾರೆ. ತೀವ್ರತರವಾದ ಗುಂಡಿನ ದಾಳಿ ನಡೆಯುತ್ತದೆ. ಕಾಡಿನಲ್ಲಿ ಇಳಿ ಓಡಿಹೋಗುವುದಕ್ಕೆ ಬಿಡಬಾರದೆಂದು ಮೇಲ್ಭಾಗದಲ್ಲಿ ಕುಳಿತ ಪೋಲಿಸರು ಬಂಡೆ ಮೇಲೆ ನಿಂತು ಫೈರ್ ಮಾಡುತ್ತಾರೆ. ಹಲವರು ಸ್ಥಳದಲ್ಲೇ ಸತ್ತರು. ಇನ್ನೂ ಕೆಲವರು ಗ್ರೇನೇಡ್ ಎಸೆಯುತ್ತಲೇ ಗಾಯಗೊಂಡು ಕೆಳಗೆ ಬಿದ್ದರೆ ಇನ್ನೂ ಕೆಲವರು ಒದ್ದಾಡುತ್ತಲೇ ಕಾಡಿನೊಳಗೆ ಓಡಿಹೋದರು.
ಈಗ ಘಟನೆ ಸ್ಥಳಕ್ಕೆ ಗುಂಡಿನ ದಾಳಿ ನಿಂತ ನಂತರ ನಿಧಾನವಾಗಿ ಪೋಲೀಸರು ಸುತ್ತುವರಿದಿದ್ದಾರೆ. ಈಗ ಕಾಡಿನ ಒಳಭಾಗದಲ್ಲೂ ಶೋಧಕ್ಕೆ ತಂಡವೊಂದು ನಕ್ಸಲರನ್ನು ಬೆನ್ನಟ್ಟಿ ಹೊರಟಿದೆ. ಸ್ಥಳದಲ್ಲೇ ಎಂಟು ಜನ ನಕ್ಸಲರು ಸತ್ತು ಹೋಗಿದ್ದಾರೆ. ಎರಡು ಜನರು ತೀವ್ರವಾಗಿ ಗಾಯಗೊಂಡು ಬಿದ್ದಿದ್ದಾರೆ. ಇತ್ತ ಮೊದಲ ಸಾಲಿನಲ್ಲಿದ್ದ ಪೋಲಿಸರಲ್ಲಿ ಗ್ರೇನೇಡ್ ದಾಳಿಗೆ ಮೂರು ಜನರು ಆಹುತಿಯಾಗಿದ್ದಾರೆ. ಒಟ್ಟಾರೆ ಎಲ್ಲೆಡೆಯೂ ರಕ್ತದ ಹೊಳೆಯು ಹರಿದಿದೆ. ಪೋಲೀಸರಿಗೆ ತಮ್ಮ ಸಹೋದ್ಯೋಗಿಗಳು ತೀರಿಕೊಂಡರೆಂದು ನೋವು ಮಡುಗಟ್ಟಿದೆ. ಇದೇ ಆವೇಶದಲ್ಲಿ ಗಾಯಗೊಂಡು ಬಿದ್ದಿದ್ದ ಆ ಎರಡು ಜನರನ್ನು ಗುಂಡಿಟ್ಟು ಕೊಲ್ಲಲು ಮುಂದಾಗುತ್ತಾರೆ. ಆಗ ಕಮಾಂಡರ್ ನುಡಿಯುತ್ತಾರೆ. ಇವರನ್ನು ಉಳಿಸಿಕೊಂಡರೆ ತನಿಖೆಗೆ ಸಹಕಾರಿಯಾಗುತ್ತದೆ. ಕೂಡಲೇ ಇವರನ್ನು ಆಸ್ಪತ್ರೆಗೆ ಸಾಗಿಸಿ ಎನ್ನುತ್ತಾರೆ.
ಈಗ ಬೇಸರದಲ್ಲಿ ಕಮಾಂಡರ್ ಇನ್ನೊಬ್ಬರು ಅಧಿಕಾರಿಗೆ ಕೇಳುತ್ತಾರೆ. ಅವರ ಬಳಿ ಏನೇನು ಶಸ್ತ್ರಾಸ್ತ್ರಗಳಿವೆ ಎನ್ನುವುದು ಅಂದಾಜಿಸಲು ವಿಫಲವಾಗಿದ್ದೇವೆ. ಅವಳಿ ಬಳಿ ಗ್ರೇನೇಡ್ ಇದೇ ಎಂದು ಗೊತ್ತಿದ್ದರೆ ಅವರಿಗೆ ಶರಣಾಗತಿಗೆ ಅವಕಾಶ ನೀಡುತ್ತಿರಲಿಲ್ಲ. ಎಲ್ಲವೂ ಗುಪ್ತಚರ ಮಾಹಿತಿಯ ವೈಫಲ್ಯವಾಗಿದೆ ಎನ್ನುತ್ತಾರೆ. ಆಗ ಆ ಅಧಿಕಾರಿ ಉತ್ತರಿಸುತ್ತಾರೆ. ಇದೇ ಮೊದಲ ಬಾರಿ ಅವರು ಗ್ರೇನೇಡ್ ಬಳಸಿದ್ದು. ಹಿಂದೆ ಯಾವತ್ತೂ ಈ ರೀತಿ ನಡೆದಿಲ್ಲ. ನನಗೆ ಅವರ ಬಗ್ಗೆ ಮಾಹಿತಿ ನೀಡುವವರು ಸಹಾ ಈ ಬಗ್ಗೆ ತಿಳಿಸಿಲ್ಲ. ಗ್ರೇನೇಡ್ ಅವರಿಗೆ ಹೊಸದಾಗಿ ಪೂರೈಕೆಯಾಗಿದೆ ಸರ್. ಏನೇ ಆಗಲಿ ನಾವು ಅವರಿಗೆ ಶರಣಾಗತಿಗೆ ಅವಕಾಶ ನೀಡಿ ಅನೌನ್ಸ್ ಮೆಂಟ್ ಮಾಡಬಾರದಿತ್ತು ಸರ್ ಎನ್ನುತ್ತಾರೆ. ಅದೇ ಅವರಿಗೆ ವರವಾಗಿ ಹೋಯಿತು. ಆಗ ಅವರು ಗ್ರೇನೇಡ್ ಎಸೆದು ಪರಾರಿಯಾಗಲು ಯತ್ನಿಸಿದರು. ಆದರೆ ಅವರನ್ನು ಆಗಲೇ ನಾವು ಮೂರು ದಿಕ್ಕಿನಿಂದ ಸುತ್ತುವರೆದಿದ್ದರಿಂದ ಅದು ಕಷ್ಟವಾಯಿತು. ಆದರೂ ಕನಿಷ್ಟವೆಂದರೂ ಐದಾರು ಜನರು ತಪ್ಪಿಸಿಕೊಂಡರು. ನಾವು ಸುಮ್ಮನೇ ಫೈರ್ ಮಾಡಿದ್ದರೆ ಎಲ್ಲರೂ ಸ್ಥಳದಲ್ಲೇ ಸಾಯುತ್ತಿದ್ದರು ಎಂದು ಬೇಸರದಲ್ಲಿ ನುಡಿದರು.
ಈಗ ಕಮಾಂಡರ್ ನುಡಿಯುತ್ತಾರೆ. ನೀವು ಹೇಳುವುದೇನೋ ಸರಿ. ಆದರೆ ಫೈರ್ ಮಾಡಿ ಕೊಲ್ಲುವುದು ಮೊದಲ ಆಧ್ಯತೆಯಲ್ಲ. ಮೊದಲು ಅವಕಾಶ ನಿಯಮದ ಪ್ರಕಾರ ನೀಡಲೇಬೇಕು. ಅದು ನಿಮಗೂ ಗೊತ್ತಿದೆ. ಹಾಗಾಗಿ ಅವಕಾಶ ನೀಡಿದೆ. ಒಂದು ವೇಳೆ ಅವರು ಒಪ್ಪದೇ ಇದ್ದಲ್ಲಿ ನಮ್ಮೊಂದಿಗೆ ಗುಂಡಿನ ದಾಳಿ ನಡೆಸಿದ್ದಲ್ಲಿ ನಾವು ಅವರ ಮೇಲೆ ಫೈರ್ ಮಾಡಿದ್ದರೆ ಸರಿಯಾಗುತ್ತಿತ್ತು. ಆದರೆ ಹೀಗಾಗುತ್ತದೆ ಅಂತಾ ನನಗೂ ಗೊತ್ತಾಗಲಿಲ್ಲ. ಛೇ, ನಮ್ಮವರು ಮೂರು ಜನ ಪೋಲಿಸರು ಗ್ರೇನೇಡ್ ದಾಳಿಗೆ ಬಲಿಯಾಗಿದ್ದಾರೆ. ಇದೂ ಅತೀ ಬೇಸರದ ಸಂಗತಿಯೆಂದು ಭಾವುಕರಾಗುತ್ತಾರೆ.
ಇನ್ನು ಮುಂದಿನ ಕಾರ್ಯಕ್ಕೆ ಸಿದ್ಧವಾಗುವಂತೆ ಸಿಬ್ಬಂದಿಗಳಿಗೆ ಆದೇಶಿಸಿ ಘಟನೆಯ ವಿವರಗಳನ್ನು ಮೇಲಾಧಿಕಾರಿಗಳಿಗೆ ತಲುಪಿಸುತ್ತಾರೆ. ಸ್ವಲ್ಪ ಸಮಯದ ನಂತರ ಇವರಿಗೆ ಮಾಹಿತಿ ಲಭಿಸುತ್ತದೆ ಕಾಡಿನಲ್ಲಿ ಗಾಯಗೊಂಡು ಓಡಿ ಹೋಗುತ್ತಿದ್ದ ಇನ್ನೂ ಎರಡು ಜನರನ್ನು ಶೂಟ್ ಮಾಡಿ ಕೊಲ್ಲಲಾಗಿದೆ ಎನ್ನುವುದು.
ಇತ್ತ ಗಾಯಗೊಂಡವರ ಮಾಹಿತಿಯು ಲಭಿಸುತ್ತದೆ. ಅದರಲ್ಲಿ ಒಬ್ಬ ಸಂಘಟನೆಯ ಮುಖ್ಯಸ್ಥ. ಸಂಘಟನೆಯನ್ನು ಕಟ್ಟುವುದರಲ್ಲಿ ಈತನದು ಬಹು ಮುಖ್ಯ ಪಾತ್ರ. ಈತ ಸೆರೆ ಸಿಕ್ಕಿದ್ದು ಹಲವು ರಾಜ್ಯಗಳಿಗೆ ನಿಟ್ಟುಸಿರು ಬಿಡುವಂತಾಗಿದೆ. ಈತನಿಗಾಗಿ ಹಲವು ವರ್ಷಗಳಿಂದ ಪರಿತಪಿಸಿದ್ದ ಇಲಾಖೆಗೂ ಒಂದು ಸಾಧನೆ ಎನ್ನುವಂತಾಗಿದೆ. ಆದರೆ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಈತ ಬದುಕುಳಿದು ಚೇತರಿಸಿಕೊಂಡರೆ ಮಾತ್ರ ತನಿಖೆಗೆ ಏನಾದರೂ ಮಾಹಿತಿ ಲಭಿಸುತ್ತದೆ. ಅದನ್ನೇ ಕಾಯುತ್ತಾ ಕುಳಿತಿದ್ದಾರೆ.
ಇನ್ನೊಂದೆಡೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಪೋಲಿಸರು ಕುಟುಂಬದ ರೋದನೆ ಹೇಳತೀರದು. ಗನ್ ಹಿಡಿದು ಕಾರ್ಯಾಚರಣೆಗೆ ಹೊರಟರೆ ಮನೆಗೆ ಹಿಂತಿರುಗುತ್ತಾರೆನ್ನುವುದು ಅನುಮಾನ. ಅಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಎಲ್ಲವೂ ವಿಧಿಯಾಟ ಎಂದುಕೊಂಡೇ ನಿತ್ಯ ಕೆಲಸಮಾಡಬೇಕು.
ಕೆಲವು ದಿನಗಳ ನಂತರ ಗಾಯಗೊಂಡು ಸೆರೆಸಿಕ್ಕ ನಕ್ಸಲರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಾರೆ. ಅವರನ್ನು ವಿಚಾರಿಸಲು ನಕ್ಸಲ್ ನಿಗ್ರಹ ಪಡೆಯ ಕಮಾಂಡರ್ ಹೋಗುತ್ತಾರೆ. ಅಲ್ಲಿ ಅವರಿಗೆ ಏನೇ ಕೇಳಿದರೂ ಉತ್ತರಿಸುವುದಿಲ್ಲ. ಎಲ್ಲಕ್ಕೂ ಮೌನವಾಗೇ ಉಳಿಯುತ್ತಾರೆ. ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಬೇಸರದಲ್ಲಿ ಕಮಾಂಡರ್ ಅಲ್ಲಿಂದ ಹಿಂತಿರುಗುತ್ತಾರೆ. ಏನೇ ಆಗಲಿ ಅವರು ಸಂಪೂರ್ಣ ಗುಣಮುಖರಾಗಿ ನಮ್ಮ ಕಸ್ಟಡಿ ತೆಗೆದುಕೊಂಡ ನಂತರ ಬೇರೆಯದೇ ಮಾರ್ಗದಲ್ಲಿ ಬಾಯಿ ಬಿಡಿಸಬೇಕು ಇಲ್ಲದೇ ಹೋದರೆ ಇವರು ಏನು ನುಡಿಯುವುದಿಲ್ಲವೆನ್ನುವುದು ಅರಿವಾಗುತ್ತದೆ. ಈಗ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದು ವಿಚಾರಿಸುತ್ತಾರೆ. ಅಲ್ಲಿ ಹೊರಹೊಮ್ಮಿದ ಮಾಹಿತಿಯಂತೆ ಇವರನ್ನು ಬಹಳ ಬುದ್ಧಿವಂತಿಕೆಯಿಂದ ವಿಚಾರಿಸಬೇಕೆಂದು ಅದಕ್ಕಾಗಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾರೆ. ಜೊತೆಗೆ ಕಾಡಿನೊಳಗೆ ನಕ್ಸಲರು ಇನ್ನೆಷ್ಟು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎನ್ನುವ ಬಗ್ಗೆ ಗುಪ್ತಚರ ಮಾಹಿತಿಯನ್ನು ಸರಿಯಾಗಿ ಕಲೆಹಾಕಲು ಯೋಜಿಸುತ್ತಾರೆ. ನಂತರವೇ ಕಾರ್ಯಾಚರಣೆ ನಡೆಸುವುದು ಸೂಕ್ತವೆಂದು ತೀರ್ಮಾನಿಸುತ್ತಾರೆ.
ಕೆಲ ದಿನಗಳ ನಂತರ ಗಾಯಗೊಂಡ ನಕ್ಸಲರು ಸಂಪೂರ್ಣ ಗುಣಮುಖರಾಗಿದ್ದಾರೆಂದು ವೈದ್ಯರು ಹೇಳಿದ ನಂತರ ಅವರನ್ನು ಪೋಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ವಶಕ್ಕೆ ಪಡೆಯುತ್ತಾರೆ.
ಎರಡು ಜನ ನಕ್ಸಲರ ಊರು ಮನೆ ಅವರ ಕುಟುಂಬದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿರುತ್ತಾರೆ. ಅವರು ಮಾಡಿದ ಅಪರಾಧಗಳ ಪಟ್ಟಿಯನ್ನು ಸಿದ್ಧಪಡಿಸಿಟ್ಟು ಕೊಂಡಿರುತ್ತಾರೆ. ಅವರ ಮೇಲೆ ಯಾವ ಯಾವ ಪೊಲೀಸ್ ಠಾಣೆಗಳಲ್ಲಿ ಎಷ್ಟು ದೂರುಗಳಿವೆ ಎನ್ನುವುದರ ಮಾಹಿತಿಯನ್ನು ಕಲೆ ಹಾಕಿರುತ್ತಾರೆ. ಇವುಗಳನ್ನು ಆಧಾರವಾಗಿಟ್ಟುಕೊಂಡು ಅವರನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಕಮಾಂಡರ್ ಎಷ್ಟೇ ಪ್ರಯತ್ನಿಸಿದರು ಎರಡು ಜನ ನಕ್ಸಲರು ಯಾವುದೇ ಪ್ರಶ್ನೆಗೆ ಉತ್ತರವನ್ನು ನೀಡುವುದಿಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿ ನಮ್ಮ ಜೀವವೇ ಹೋದರು ನಾವು ಹೆದರುವುದಿಲ್ಲ. ನೀವು ನಮ್ಮ ವಿಚಾರಣೆ ನಡೆಸುವುದು ವ್ಯರ್ಥ ಎಂದು ಗರ್ಜಿಸುತ್ತಾರೆ.
ಈಗ ಇವರ ಮನಸ್ಥಿತಿಯನ್ನು ಅರಿತ ಕಮಾಂಡರ್ ಇವರಿಗೆ ಈ ಮಾರ್ಗದಲ್ಲಿ ವಿಚಾರಣೆ ನಡೆಸಿದರೆ ಉತ್ತರಿಸುವುದಿಲ್ಲ ಎನ್ನುವುದು ಅರಿವಾಗುತ್ತದೆ. ಕೂಡಲೇ ಬೇರೊಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಇವರ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಕರೆಸಿಕೊಳ್ಳುತ್ತಾರೆ. ಇವರ ಎದುರಲ್ಲೇ ಅವರನ್ನು ಪ್ರಶ್ನಿಸುತ್ತಾರೆ. ತಮ್ಮ ಕುಟುಂಬದ ಸದಸ್ಯರು ಒದ್ದಾಡುವುದನ್ನು ನೋಡಲಾಗದೆ ಇಬ್ಬರು ನಕ್ಸಲರು ಪರಿತಪಿಸುತ್ತಾರೆ. ಮಾಹಿತಿಯನ್ನು ಕಲೆ ಹಾಕುವುದಕ್ಕೆ ಪೊಲೀಸರಿಗೆ ಇದು ಅನಿವಾರ್ಯವಾಗಿರುತ್ತದೆ. ಇದೇ ರೀತಿ ನಿತ್ಯ ತನಿಖೆಗಾಗಿ ವಿಚಾರಣೆಯನ್ನು ಕುಟುಂಬದ ಸದಸ್ಯರು ಎದುರಿಸುವುದಕ್ಕೆ ಪೊಲೀಸ್ ಠಾಣೆಗೆ ಬಂದಾಗ ಇವರನ್ನು ನೋಡಿ ಅವರು ನರಳುತ್ತಾರೆ. ಬಾಳಿ ಬದುಕಬೇಕಾದವರು ಹೇಗಾದರಲ್ಲಾ ಎಂದು ತಂದೆ-ತಾಯಿಗಳು ಬಹಳ ನೊಂದುಕೊಳ್ಳುತ್ತಾರೆ. ಇವರೆದುರು ನಿತ್ಯ ಇದೆಲ್ಲ ಬಿಟ್ಟು ಸುಮ್ಮನಿರಿ. ದೇಶದ ಕಾನೂನು ನೀಡುವ ಶಿಕ್ಷೆಯನ್ನು ಅನುಭವಿಸಿ. ನೀವೆ ತಪ್ಪೊಪ್ಪಿಕೊಂಡರೆ ಶಿಕ್ಷೆ ಕಡಿಮೆಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಹಾಗೇ ಮಾಡಿ ಎಂದು ಇವರೆದು ಕಣ್ಣೀರು ಹಾಕಿದ್ದಾರೆ. ಇದೆಲ್ಲಾ ಕಂಡು ಅವರಿಗೂ ಅವರ ತಂದೆ-ತಾಯಿಯ ಕಣ್ಣಲ್ಲಿ ನೀರು ಬರುವುದನ್ನು ದಿನನಿತ್ಯ ನೋಡಿ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ.
ಇದೆಲ್ಲವನ್ನು ಕಂಡು ತಮ್ಮ ಕುಟುಂಬದ ಸದಸ್ಯರಿಗೆ ತಮ್ಮಿಂದ ಪದೇ ಪದೇ ನೋವಾಗುವುದು ಬೇಡ ತಾವೇ ಪೊಲೀಸರಿಗೆ ವಿಚಾರಣೆಗೆ ಸಹಕರಿಸಿದರೆ ಉತ್ತಮವೆಂದು ತೀರ್ಮಾನಿಸುತ್ತಾರೆ. ಇದ್ದ ವಿಚಾರವನ್ನು ಪೊಲೀಸರ ಗಮನಕ್ಕೆ ತರುತ್ತಾರೆ. ಕಮಾಂಡರ್ಗೆ ಈ ವಿಷಯವನ್ನು ಕೇಳಿ ತುಂಬಾ ಖುಷಿಯಾಗುತ್ತದೆ. ಅಂತೂ ತಾವು ಅಂದುಕೊಂಡಂತೆ ಹೆಣದ ಉಪಾಯದಂತೆ ಅವರು ಗೆದ್ದಿದ್ದಾರೆ. ಅವರ ಕುಟುಂಬದ ಸದಸ್ಯರನ್ನು ಪದೇ ಪದೇ ಠಾಣೆಗೆ ಕರೆದು ವಿಚಾರಣೆ ನಡೆಸದೆ ಇದ್ದಲ್ಲಿ ಅವರು ಒಪ್ಪುತ್ತಿರಲಿಲ್ಲ. ಈಗ ಹೂಡಿದ ತಂತ್ರದಿಂದ ಒಪ್ಪಿದ್ದಾರೆ. ಏನೇ ಆಗಲಿ. ಆಗುತ್ತಿರುವುದಿಲ್ಲ ತನಿಖೆಯಲ್ಲಿ ಪ್ರಗತಿ ಸಾಧಿಸಲು ಎಂದುಕೊಂಡು ವಿಚಾರಣೆಗೆ ಕೂರುತ್ತಾರೆ.
ಅದರಲ್ಲಿ ಒಬ್ಬನಿಗೆ ಪ್ರಶ್ನಿಸುತ್ತಾರೆ. ನೀನು ನಿಮ್ಮ ತಂದೆ ಹೇಳಿದಂತೆ ಇಂಜಿನಿಯರಿಂಗ್ ಓದಿದವನಂತೆ?
ಹೌದು ಸರ್(ಒಂದು ಕ್ಷಣ ಮೌನವಾಗಿ ಭಾವುಕನಾಗಿ ಕಣ್ಣಲ್ಲಿ ನೀರು ಜಿನುಗುತ್ತದೆ)
ಅಷ್ಟೊಂದು ವ್ಯಾಸಂಗ ಮಾಡಿದ ನೀನು ದುಡಿದು ತಿನ್ನುವುದು ಬಿಟ್ಟು ಸಮಾಜದ ಒಳಿತು ಬಯಸಬೇಕಾದವನು ಇಂತಹ ಹೀನ ಕೃತ್ಯಕ್ಕೆ ಏಕೆ ಕೈಹಾಕಿದೆ? ಕೈಯಲ್ಲಿ ಗನ್ ಹಿಡಿದು ಸುಲಿಗೆ ಮಾಡುವುದು ಶೋಭೆಯೇ? ದೇಶದಲ್ಲಿ ಯುವ ವಿದ್ಯಾವಂತರೇ ಅಡ್ಡದಾರಿಗೆ ಇಳಿದರೆ ದೇಶದ ಗತಿಯೇನು? ನಿನಗೆ ಜವಾಬ್ದಾರಿ ಇಲ್ಲವೇ?
(ಆತ ತುಸುಹೊತ್ತು ಮಾತನಾಡುವುದಿಲ್ಲ ನಂತರ ಆವೇಶದಲ್ಲಿ ನುಡಿಯುತ್ತಾ ಹೋಗುತ್ತಾನೆ)
ನನಗೂ ಜವಾಬ್ದಾರಿಯ ಬದುಕಿತ್ತು. ನಾನು ಬಾಳಿನಲ್ಲಿ ನೂರಾರು ಕನಸುಗಳನ್ನು ಹೊತ್ತು ಓದುತ್ತಿದ್ದೆ. ಯುನಿವರ್ಸಿಟಿಯಲ್ಲಿ ನಾನು ಇಂಜಿನಿಯರಿಂಗ್ನಲ್ಲಿ ಮೊದಲ ರ್ಯಾಂಕ್ ಪಡೆದು ಎಂಟು ಚಿನ್ನದ ಪದಕಗಳನ್ನು ಗಳಿಸಿದೆ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಆಗಬೇಕೆಂದು ದೇಶದ ಅಭಿವೃದ್ಧಿಗೆ ಕಾರಣವಾಗಬೇಕೆಂದು ಬಯಸಿದ್ದೆ. ಹಗಲು ರಾತ್ರಿಯು ಬಿಡದೇ ಅದೇ ಸುಂದರ ಕನುಸ ಕಾಣುತ್ತಿದ್ದೆ. ಆದರೆ ಭ್ರಷ್ಟರು ನನ್ನ ಕುಟುಂಬವನ್ನು ನೆಮ್ಮದಿಯಿಂದ ಬದುಕಲು ಬಿಡಲಿಲ್ಲ. ದೆವ್ವದಂತೆ ಕಾಡಿದರು. ಎಲ್ಲವೂ ಅವರಿಂದಲೇ ಆಗಿದ್ದು.
ಅಂದರೆ ನಿನ್ನ ಅರ್ಥದಲ್ಲಿ ನೀನು ಮುಗ್ಧ. ಭ್ರಷ್ಟರ ಅಟ್ಟಹಾಸದಿಂದ ನೀನು ಈ ರೀತಿ ಅಡ್ಡದಾರಿಗೆ ಇಳಿದೆ ಎನ್ನುವುದೇ?
ಹೌದು ಸರ್. ನಾನು ಬಹಳ ಪ್ರಾಮಾಣಿಕ ನನ್ನ ಕುಟುಂಬದವರು ಬಹಳ ಮುಗ್ಧರು. ನನ್ನ ತಂದೆಯ ಹೆಸರಿನಲ್ಲಿ ಐದು ಎಕರೆ ಜಮೀನು ಇದೆ. ಅದು ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿದೆ. ನಮ್ಮ ಕುಟುಂಬಕ್ಕೆ ಜೀವನಾಧಾರವಾಗಿದ್ದ ಆಸ್ತಿಯದು. ನನ್ನ ಕುಟುಂಬದ ನಿರ್ವಹಣೆ, ನನ್ನ ಹಾಗೂ ನನ್ನ ತಂಗಿಯ ಓದು ಎಲ್ಲವನ್ನೂ ಅದರಿಂದ ಬರುವ ಉತ್ಪನ್ನದಿಂದಲೇ ಸಾಗುತ್ತಿತು.್ತ ಹೀಗೆ ಬದುಕು ಸಾಗುವಾಗ ಒಂದು ದಿವಸ ಜಮೀನಿನ ಮೇಲೆ ಕೆಲವು ಭೂ ಮಾಫಿಯಾದವರು ಕಣ್ಣು ಬಿತ್ತು. ಅವರು ಭೂಮಿಯನ್ನು ಮಾರುವಂತೆ ನಮ್ಮ ತಂzಗೆÉ ಹಲವು ಬಾರಿ ಬೆದರಿಕೆ ಹಾಕಿದರು. ಅವರು ಖಂಡತುಂಡವಾಗಿ ನಿರಾಕರಿಸಿದರು. ಕೊನೆಗೆ ಅವರ ಬೆದರಿಕೆಗೆ ಜಗ್ಗದೆ ಪೊಲೀಸರಿಗೆ ದೂರು ನೀಡಿದರು. ಆದರೆ ಅವರು ಪದೇ ಪದೇ ಕಿರುಕುಳ ನೀಡುವುದನ್ನು ನಿಲ್ಲಿಸಲಿಲ್ಲ. ಗದ್ದೆಯಲ್ಲಿ ಬೆಳೆದ ಬೆಳೆಗಳನ್ನು ಬೇಕಂತಲೇ ನಾಶಮಾಡಿದರು. ಕೈಗೆ ಬಂದ ಬೆಳೆ ದಕ್ಕಲಿಲ್ಲ ಎಂದು ನನ್ನ ತಂದೆ ಬಹಳ ದುಃಖದಲ್ಲಿ ಕೊರಗಿದರು. ನಾವು ದುಡಿದು ತಿನ್ನುವುದು ಕಷ್ಟವಾಯಿತು. ಮಾಡಿದ ಸಾಲ ತೀರಿಸಲಾರದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದೇ ಸಂದರ್ಭದಲ್ಲಿ ದುಷ್ಟರು ನಮ್ಮ ಮನೆಯ ಬಳಿ ಬಂದು ನಮ್ಮನ್ನು ಹಂಗಿಸುತ್ತಿದ್ದರು. ಇದರಿಂದ ನಾನು ರೋಷದಲ್ಲಿ ಒಬ್ಬನನ್ನು ಒಂದು ದಿನ ಹೊಡೆದು ಹಲ್ಲೆ ಮಾಡಿದೆ. ನನ್ನ ಕೈಲಿ ತೆಂಗಿನ ಕಾಯಿ ಸುಲಿಯಲು ಉಪಯೋಗಿಸುತ್ತಿದ್ದ ಕತ್ತಿಯಿಂದ ಆತನ ತಲೆಗೆ ಬಲವಾಗಿ ಹೊಡೆದು ಬಿಟ್ಟೆ. ಹಾಗಾಗಿ ಆತ ಸ್ಥಳದಲ್ಲೇ ಸತ್ತು ಹೋದ. ಅವರು ಪ್ರತಿನಿತ್ಯ ನೀಡುವ ಕಿರುಕುಳಕ್ಕೆ ಬೇಸತ್ತು ನಾನು ಆ ರೀತಿ ಮಾಡಿದೆ. ಆದರೆ ನಾನು ಕಾನೂನು ಪ್ರಕಾರ ಅಪರಾಧಿಯಾದೆ. ಚೆನ್ನಾಗಿ ಓದಿದ ನಾನು ಸಾವಿರಾರು ಕನಸುಗಳನ್ನು ಕಂಡಿದ್ದು ಎಲ್ಲವೂ ಸುಟ್ಟು ಬೂದಿಯಾಯಿತು. ನಿತ್ಯ ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಓಡಾಡುವುದೇ ಬದುಕಾಯಿತು. ಮತ್ತೆ ಮತ್ತೆ ನನ್ನ ಕುಟುಂಬದ ಮೇಲೆ ಭ್ರಷ್ಟರು ಬೇಕಂತಲೇ ಹಲ್ಲೆ ನಡೆಸುತ್ತಿದ್ದರು. ಕಾಲೇಜಿನಿಂದ ಬರುತ್ತಿದ್ದ ನನ್ನ ತಂಗಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದರು. ಕೊನೆಗೆ ಆಕೆಯ ದೇಹವನ್ನು ಬೆತ್ತಲೆಯಾಗಿ ನಮ್ಮ ಮನೆ ಮುಂದೆ ಬಿಸಾಕಿ ಹೋದರು. ನಾವು ಎಷ್ಟೇ ಬಡಿದಾಡಿದರು ಆ ದುಷ್ಟರಿಗೆ ಏನು ಆಗಲಿಲ್ಲ. ನನಗೆ ಅವರೊಂದಿಗೆ ಹೋರಾಡುವುದಕ್ಕೆ ಒಬ್ಬನಿಂದ ಸಾಧ್ಯವಿರಲಿಲ್ಲ. ಹಾಗಾಗಿ ನಕ್ಸಲರೊಂದಿಗೆ ಸೇರಿಕೊಂಡು ಅವರ ಮೇಲೆ ಸೇಡು ತೀರಿಸಿಕೊಂಡೆ. ಆ ಎಲ್ಲಾ ಕೊಲೆ ಪ್ರಕರಣಗಳು ನನ್ನ ಮೇಲೆ ಬಾಕಿ ಉಳಿದಿರುವುದರಿಂದ ನಾನು ಕಾಡಿನಲ್ಲಿ ನಕ್ಸಲರೊಂದಿಗೆ ಸಕ್ರಿಯನಾಗಿ ತಲೆಮರೆಸಿಕೊಂಡಿರುವೆ. ನನ್ನ ಸ್ಥಿತಿಗೆ ಕಾರಣ ದೇಶದಲ್ಲಿನ ಭ್ರಷ್ಟಾಚಾರ. ನಾನಿಲ್ಲಿ ಹಣಕ್ಕಾಗಿ ಕಾಡಿನಲ್ಲಿ ಗನ್ ಹಿಡಿದುಕೊಂಡು ಕೂತಿಲ್ಲ. ನನ್ನಂಥವರು ಯಾರಾದರೂ ಇದ್ದರೆ ಅವರನ್ನು ಖಂಡಿತವಾಗಿಯೂ ರಕ್ಷಿಸುತ್ತೇನೆ. ಭ್ರಷ್ಟರನ್ನು ಎಳೆದು ತಂದು ಗುಂಡಿಟ್ಟು ಕೊಲ್ಲುತ್ತೇವೆ. ಇದೇ ಹಾದಿಯಲ್ಲಿ ನಾನು ಹಾಗೂ ನನ್ನ ಸಂಘಟನೆ ಸಾಗುತ್ತಿದೆ. ಭ್ರಷ್ಟರಿಗೆ ಇದೇ ಮಾರ್ಗದಲ್ಲಿ ಶಿಕ್ಷೆ ನೀಡಬೇಕು. ಅವರಿಗೆ ನಿಮ್ಮ ಕಾನೂನು ಎಲ್ಲಿ ಶಿಕ್ಷೆ ನೀಡುತ್ತದೆ? ಅದೇನಿದ್ದರೂ ನಮ್ಮಂತಹ ಬಡವರ ಮೇಲೆ ಅಟ್ಟಹಾಸ ಮೆರೆಯುತ್ತದೆ ಅಷ್ಟೇ!
ಈಗ ಕಮಾಂಡರ್ ತಲೆಯಲ್ಲಿ ಶರಧಿಪುರದ ನೆನಪಾಗುತ್ತದೆ. ಅಲ್ಲಿನ ಭ್ರಷ್ಟ ಅಧಿಕಾರಿಗಳ ಮೇಲೆ ತಾವು ವಿಚಾರಣೆಯನ್ನು ನಡೆಸಿ ಕಾನೂನಿನ ಕ್ರಮ ಕೈಗೊಳ್ಳಲು ಎಷ್ಟೇ ಹವಣಿಸಿದರು ಹೇಗೆ ಭ್ರಷ್ಟರು ಬಚಾವಾದರು ಎನ್ನುವ ನೋವು ಕಾಡತೊಡಗುತ್ತದೆ. ಅದೇ ನೆನಪಿನಲ್ಲಿ ಅವರು ಒಮ್ಮೆ ಭಾವುಕರಾಗುತ್ತಾರೆ.
ಈಗ ಮತ್ತೆ ಆತನನ್ನು ಪ್ರಶ್ನಿಸುತ್ತಾರೆ ನಿನ್ನ ಜೊತೆ ಕಾಡಿನಲ್ಲಿ ಎಷ್ಟು ಜನರಿದ್ದಾರೆ?
ಎಷ್ಟು ಜನರಿದ್ದಾರೆ ಎನ್ನುವುದಕ್ಕಿಂತ ನನ್ನಂತಹ ನೊಂದವರು ಇದ್ದಾರೆ ಎಂದು ಹೇಳುತ್ತೇನೆ ಅಷ್ಟೇ. ಅಂಕಿಸಂಖ್ಯೆಗಳನ್ನು ನಾನು ಜೀವ ಹೋದರು ಹೇಳುವುದಿಲ್ಲ.
ಅವರೆಲ್ಲರೂ ಎಲ್ಲಿಂದ ಬಂದವರು?
ಅದನ್ನೂ ಹೇಳುವುದಿಲ್ಲ. ಹೇಳಿದರೆ ಅವರ ಮನೆಯವರಿಗೂ ಕರೆದು ವಿಚಾರಣೆ ನಡೆಸಿ ಹಿಂಸೆ ನೀಡುತ್ತೀರಿ. ಅದು ನನಗೆ ಚೆನ್ನಾಗಿ ತಿಳಿದಿದೆ.
ನಿಮ್ಮ ಬಳಿ ಏನೆಲ್ಲ ಶಸ್ತ್ರಾಸ್ತ್ರಗಳಿವೆ? ಅವುಗಳನ್ನು ಪೂರೈಸುವವರು ಯಾರು? ಇವುಗಳಿಗೆ ಹಣಕಾಸಿನ ನೆರವು ಇಲ್ಲವೇ ಮೂಲ ಎಲ್ಲಿಂದ ಬರುತ್ತದೆ?
ಈ ಮಾಹಿತಿಯನ್ನು ನಾನು ನೀಡುವುದಿಲ್ಲ. ಒಟ್ಟಾರೆ ನಾವು ಮಾಡುತ್ತಿರುವ ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಮನದವರು ನೀಡುತ್ತಾರೆ. ಇಲ್ಲವೇ ನನ್ನಂತಹ ನೊಂದವರು ಸಹಾಯದ ಹಸ್ತ ಚಾಚುತ್ತಾರಷ್ಟೆ.
ಕಳೆದ ತಿಂಗಳು ತೋಟದ ಮನೆಯಲ್ಲಿ ದಾಳಿಮಾಡಿ ಹಣ ಒಡವೆಗಳನ್ನು ದೋಚಿದ್ದು ನೀವಲ್ಲವೇ?
ನಾವು ಎಂದಿಗೂ ಆ ರೀತಿ ದರೋಡೆ ಮಾಡಿಲ್ಲ. ಯಾರೋ ಕಳ್ಳರು ಮಾಡಿ ನಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾg.É ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮದೇನಿದ್ದರೂ ಭ್ರಷ್ಟರ ವಿರುದ್ಧ ಕಾರ್ಯಾಚರಣೆ ಮಾತ್ರ. ಹಣ ಬೇಕಿದ್ದರೆ ಕೆಲವರಲ್ಲಿ ಬೇಡಿ ಪಡೆದಿದ್ದೇವೆ. ಆದರೆ ಅದರ ಮಾಹಿತಿಯನ್ನು ತಿಳಿಸುವುದಿಲ್ಲ. ಯಾರಿಗೂ ಹಣಕ್ಕಾಗಿ ಪೀಡಿಸಿಲ್ಲ, ಹೆದರಿಸಿಲ್ಲ, ಅದಕ್ಕಾಗಿ ಕೊಂದಿಲ್ಲ.
ಮಾತು ಮಾತಿಗೂ ನೀನು ಭ್ರಷ್ಟರ ವಿರುದ್ಧ ಕಾರ್ಯಾಚರಣೆ ಎನ್ನುತ್ತೀಯಲ್ಲ. ನಿನಗೆ ಆ ಹಕ್ಕನ್ನು ನೀಡಿದವರು ಯಾರು? ಅದಕ್ಕೆ ಅಂತ ಈ ದೇಶದ ಕಾನೂನಿದೆ. ಅದರಡಿ ಕರ್ತವ್ಯ ನಿರ್ವಹಿಸುವ ವ್ಯವಸ್ಥೆಗಳಿವೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಅಪರಾದ. ವಿದ್ಯಾವಂತನಾಗಿ ಸಮಾಜಕ್ಕೆ ಬುದ್ಧಿ ಹೇಳಬೇಕಾದ ನೀನೆ ದಾರಿ ತಪ್ಪಿರುವೆ. ಏನೋ ಆವೇಶದಲ್ಲಿ ಆದ ಘಟನೆಗೆ ಕಾನೂನಿನಡಿ ಇದ್ದ ಅವಕಾಶವನ್ನು ಬಳಸಿಕೊಂಡಿದ್ದರೆ ನಿನ್ನ ಶಿಕ್ಷೆ ಕಡಿಮೆಯಾಗುತ್ತಿತ್ತು. ನಂತರ ನೀನು ಸಹಜವಾಗಿ ಸುಂದರ ಬದುಕು ನಡೆಸಬಹುದಿತ್ತು. ಆದರೆ ನೀನು ಎಲ್ಲವನ್ನೂ ಹಾಳು ಮಾಡಿಕೊಂಡಿರುವೆ. ನೆನಪಿರಲಿ, ಈಗ ನಿಮ್ಮ ಸಂಘಟನೆ ಮಾಡಲು ಉದ್ದೇಶಿಸಿರುವ ಕಾರ್ಯಾಚರಣೆಯ ವಿವರಗಳನ್ನು ಹೇಳು. ಇಲ್ಲದೇ ಹೋದಲ್ಲಿ ಮುಂದೆ ಆಗುವ ಪರಿಣಾಮಕ್ಕೆ ನೀನೇ ಹೊಣೆಯಾಗುತ್ತೀಯ.
ಏನೇ ಆದರೂ ತೊಂದರೆ ಇಲ್ಲ ಸರ್. ನಿಮ್ಮ ಕೆಲಸವನ್ನು ನೀವು ಮಾಡಿ ನಾವು ಕಾನೂನನ್ನು ಕೈಗೆ ತೆಗೆದುಕೊಂಡಿದ್ದರಿಂದ ಹಲವು ಭ್ರಷ್ಟರಿಗೆ ಹೆದರಿಕೆ ಇದೆ. ಇಲ್ಲದೇ ಹೋಗಿದ್ದರೆ ಅವರು ಇನ್ನಷ್ಟು ಬಲಶಾಲಿಗಳಾಗುತ್ತಿದ್ದರು. ಕಂಡಕಂಡವರ ಮೇಲೆ ಅತ್ಯಾಚಾರ, ಸುಲಿಗೆ, ದರೋಡೆ ಮಾಡುತ್ತಿದ್ದರು.
ಇವೆಲ್ಲಾ ನಿನ್ನ ಕಲ್ಪನೆ. ಭ್ರಷ್ಟರಿಗೆ ಶಿಕ್ಷಿಸಲು ಕಾನೂನು ಇದೆ. ಎಷ್ಟು ಜನ ಭ್ರಷ್ಟರಿಗೆ ಅತ್ಯಾಚಾರಿಗಳಿಗೆ ನಿತ್ಯ ಶಿಕ್ಷೆಯಾಗುತ್ತಿದೆ. ಅದರ ಅರಿವು ನನಗಿದೆ. ನಿನಗೆ ಇದೆಯೇ? ಸುಮ್ಮನೆ ಸಮಾಜದಲ್ಲಿ ಏನೋ ಬದಲಾವಣೆ ಮಾಡುತ್ತೇವೆ ಎನ್ನುವ ಹುಚ್ಚು ಸಾಹಸಕ್ಕೆ ಕೈ ಹಾಕುವುದು ಸರಿಯಲ.್ಲ ದೇಶದ ಕಾನೂನನ್ನು ಗೌರವಿಸಬೇಕು. ನಿನ್ನ ಸಹಚರರ ಬಗ್ಗೆ ಮಾಹಿತಿ ನೀಡಿ ಅವರನ್ನು ಶರಣಾಗುವಂತೆ ಮಾಡು. ಅವರನ್ನು ಸರಿದಾರಿಗೆ ತರಲು ಸಹಕರಿಸು. ಕೇವಲ ಗನ್ ಹಿಡಿದು ಬೆದರಿಸುವುದು ಹೋರಾಟವಲ್ಲ. ಶಾಂತಿಯ ಹಾದಿಯಲ್ಲಿ ಗಾಂಧಿಯವರು ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದು ನಿನಗೆ ತಿಳಿದಿಲ್ಲವೆ? ಒಂದು ವೇಳೆ ಅವರು ಗನ್ ಹಿಡಿದಿದ್ದರೆ ಸಾಧ್ಯವಾಗುತ್ತಿತ್ತೆ? ಆಲೋಚನೆಗಳು ದೇಶದ ಒಳಿತಿಗಾಗಿ ಇರಬೇಕು. ಹಿಂಸೆಯನ್ನೇ ಅಮಲೇರಿಸಿಕೊಂಡು ನೀನು ದಾರಿ ತಪ್ಪಿದ್ದೀಯ.
ನೀವು ಏನೇ ಅಂದರು ನಾನು ಬದಲಾಗುವುದಿಲ್ಲ. ನಾನು ಜೀವದ ಉಸಿರಿನ ಕೊನೆಯವರೆಗೂ ಇದೇ ಹಾದಿಯಲ್ಲಿ ಹೋರಾಡುತ್ತೇನೆ. ನೀವು ನಿಮ್ಮ ಕಾನೂನಿನ ಪ್ರಕಾರ ಭ್ರಷ್ಟರಿಗೆ ಶಿಕ್ಷೆ ಕೊಡಿಸಿ ಸರ್.
ಹಾಗಾದರೆ ನೀನು ಬದಲಾಗುವುದಿಲ್ಲ.
ನಾನು ಖಂಡಿತವಾಗಿಯೂ ಬದಲಾಗುವುದಿಲ್ಲ. ನೀವು ನಿಮ್ಮ ಸಮಯವನ್ನು ವ್ಯಯ ಮಾಡಿಕೊಳ್ಳಬೇಡಿ. ನೀವು ಎಷ್ಟೇ ವಿಚಾರಿಸಿದರು ನಾನು ಯಾವ ಮಾಹಿತಿಯನ್ನೂ ನೀಡುವುದಿಲ್ಲ.
ನಿನ್ನ ಹಣೆಬರಹಕ್ಕೆ ಏನು ಮಾಡಲಾಗುವುದಿಲ್ಲ. ನೀನು ಸಮ್ಮತಿಸಿದರೆ ನಿನಗೆ ಕಾನೂನಿನಡಿ ಕಡಿಮೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇನೆ. ಸರ್ಕಾರದೊಂದಿಗೆ ಮಾತನಾಡುತ್ತೇನೆ. ನೀನು ಮುಖ್ಯವಾಹಿನಿಗೆ ನಿನ್ನ ಸಂಗಡಿಗರನ್ನು ಶರಣಾಗುವಂತೆ ಮಾಡು. ಕಾಡಿನಲ್ಲಿ ಅವಿತುಕೊಂಡು ಕೊಲೆ ಸುಲಿಗೆ ಮಾಡುವುದಕ್ಕಿಂತ ಸುಂದರ ಸಮಾಜದಲ್ಲಿ ಇದ್ದುಕೊಂಡು ಭ್ರಷ್ಟರ ವಿರುದ್ಧ ಶಾಂತಿಯುತವಾಗಿ ಹೋರಾಡಲು ಸಾವಿರಾರು ಮಾರ್ಗಗಳಿವೆ. ಅನೇಕ ಜನ ಸಮಾಜಮುಖಿ ಹೋರಾಟಗಾರರಿದ್ದಾರೆ. ಅಣ್ಣಾ ಹಜಾರೆಯವರನ್ನು ನೆನಪು ಮಾಡಿಕೊ. ಶಾಂತಿಯಿಂದ ದೇಶದಲ್ಲಿ ಕ್ರಾಂತಿ ಮಾಡಬೇಕು. ಶುದ್ಧ ಸಮಾಜಕ್ಕೆ ನೀನು ಮತ್ತು ನಿನ್ನ ಸಂಗಡಿಗರು ಕಾರಣರಾಗಿ.
ಅದು ನನ್ನಿಂದ ಸಾಧ್ಯವಿಲ್ಲ. ದಯವಿಟ್ಟು ನಿಮ್ಮ ಸಮಯವನ್ನು ವ್ಯಯ ಮಾಡಿಕೊಳ್ಳಬೇಡಿ ಸರ್. ಕ್ಷಮಿಸಿ.
ಈಗ ಮನದಲ್ಲಿ ಕಮಾಂಡರ್ ಆಲೋಚಿಸುತ್ತಾರೆ ಈತನಿಗೆ ಎಷ್ಟೇ ತಿಳುವಳಿಕೆ ಹೇಳಿದರು ಸರಿದಾರಿಗೆ ತರುವುದು ಕಷ್ಟ. ಏನೇ ಆಗಲಿ ಮುಂದೊಂದು ದಿನ ಪ್ರಯತ್ನಿಸೋಣವೆಂದು ಸುಮ್ಮನಾಗುತ್ತಾರೆ.
ಈಗ ಇನ್ನೊಬ್ಬ ನಕ್ಸಲನನ್ನು ವಿಚಾರಣೆಗೆ ಕರೆಯುತ್ತಾರೆ. ಆತನನ್ನು ಕೇಳುತ್ತಾರೆ ನೀವು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಅಲ್ಲವೇ? ಮಕ್ಕಳಿಗೆ ವಿದ್ಯೆ ಹೇಳಬೇಕಾದವರು, ದೇಶದ ಪ್ರಗತಿಗೆ ಕಾರಣವಾಗಬೇಕಾದವರು, ದೇಶದ ಭವಿಷ್ಯ ಸುಂದರವಾಗಿಸಬೇಕಾದ ನೀವೇ ಈ ರೀತಿ ಕೈಲಿ ಗನ್ ಹಿಡಿದು ಕಂಡ ಕಂಡವರ ತಲೆ ಹೊಡೆಯುವುದು ಸರಿಯೇ? ನಿಮಗೆ ಸರ್ಕಾರ ಕೈತುಂಬಾ ಸಂಬಳ ನೀಡುತ್ತದೆ. ಸಮಾಜದಲ್ಲಿ ಸಾಕಷ್ಟು ಗೌರವವಿದೆ, ಏಕೆ ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರಿ?
ನೀವು ಹೇಳುವುದೆಲ್ಲ ಸರಿ ಸರ್. ನಾನು ದೇಶದ ಭವಿಷ್ಯಕ್ಕಾಗಿ ನನ್ನ ವೃತ್ತಿಯನ್ನು ಬಹಳ ಪ್ರೀತಿಯಿಂದ ಗೌರವದಿಂದ ನಿರ್ವಹಿಸುತ್ತಿದ್ದೆ. ವಿದ್ಯಾರ್ಥಿಗಳಿಗೆ ದೇಶದ ಇತಿಹಾಸವನ್ನು ಬೋಧಿಸುತ್ತಾ ನೀತಿ ಶಾಸ್ತ್ರವನ್ನು ಪಾಠ ಮಾಡುತ್ತಿದ್ದೆ. ಗಾಂಧಿಯವರು ಕಂಡ ರಾಮರಾಜ್ಯದ ಕನಸನ್ನು ನಿತ್ಯವೂ ಕಾಣುತ್ತಿದ್ದೆ. ಆದರೆ ವಿಧಿಯಾಟದ ಮುಂದೆ ಎಲ್ಲವೂ ಸತ್ತುಹೋಯಿತು! ಪ್ರಭಾವಿ ರಾಜಕಾರಣಿಗಳ ಅಟ್ಟಹಾಸಕ್ಕೆ ನನ್ನ ಬದುಕು ಬಲಿಯಾಯಿತು. ನನಗೆ ನನ್ನ ನಿಯತ್ತೇ ಉರುಳಾಯಿತು.
ನೇರವಾಗಿ ವಿಷಯಕ್ಕೆ ಬನ್ನಿ. ನಿಮ್ಮ ದ್ವಂದದ ನುಡಿ ಅರ್ಥವಾಗದು.
ಸರ್ ನೇರವಾಗಿ ಹೇಳುತ್ತೇನೆ. ನಾನು ಕೆಲಸ ಮಾಡುವ ಕಾಲೇಜಿನಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಮಗ ಕಾಲೇಜಿಗೆ ಬರುತ್ತಿದ್ದ. ಆತ ಓದುವುದಕ್ಕಲ್ಲ. ಕೇವಲ ಶೋಕಿಗೆ ಕಾಲೇಜಿಗೆ ಬರುತ್ತಿದ್ದ. ಆತ ಹಲವು ದುಶ್ಚಟಗಳ ದಾಸನಾಗಿದ್ದ. ಮಾದಕ ಪದಾರ್ಥಗಳನ್ನು ತಂದು ಕಾಲೇಜು ವಿದ್ಯಾರ್ಥಿಗಳಿಗೆ ನೀಡುತ್ತಿದ್ದ. ಹಲವರನ್ನು ದಾರಿತಪ್ಪಿಸುತ್ತಿದ್ದ. ಇದನ್ನು ಕಂಡು ನಾನು ಆತನಿಗೆ ಸರಿದಾರಿಗೆ ತರಲು ಹಲವುವೇಳೆ ಬುದ್ಧಿ ಹೇಳಿದೆ. ಆದರೆ ಆತ ಕೇಳಲಿಲ್ಲ. ಆತನ ದುಶ್ಚಟಗಳ ಬಂಧಿಯಲ್ಲಿ ದಿನದಿಂದ ದಿನಕ್ಕೆ ಅನೇಕ ಜನ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದರು. ಇದನ್ನು ಸಹಿಸಲಾಗದೆ ನಾನು ವಿಷಯವನ್ನು ಮ್ಯಾನೇಜ್ಮೆಂಟ್ ಗಮನಕ್ಕೆ ತಂದೆ. ಅವರು ಇದೆಲ್ಲ ನಿಮಗ್ಯಾಕೆ? ನಿಮ್ಮ ಕೆಲಸ ಏನಿದ್ದರೂ ಪಾಠ ಮಾಡುವುದು. ಅದನ್ನು ಮಾತ್ರ ಮಾಡಿ ಮನೆಗೆ ಹೋಗಿ. ಆತನ ತಂದೆ ಈ ಕಾಲೇಜಿಗೆ ಸಾಕಷ್ಟು ಹಣವನ್ನು ಹೂಡಿಕೆಮಾಡಿದ್ದಾರೆ. ಅದರ ಅರಿವು ನಿಮಗಿರಲಿ. ಎಲ್ಲರನ್ನೂ ಎಲ್ಲವನ್ನೂ ತಿದ್ದುವುದು ಬೇಡ. ಬರೀ ಪಾಠ ಮಾಡಿ ಮನೆಗೆ ಹೋಗಿ ಸಾಕು ಎಂದರು. ಆಗ ನಾನೇ ಏನಾದರೂ ಮಾಡಬೇಕೆಂದುಕೊಂಡು ಇದ್ದ ವಿಚಾರವನ್ನು ಪೊಲೀಸರಿಗೆ ತಿಳಿಸಿದೆ. ಪೊಲೀಸರು ಆತನನ್ನು ತಮ್ಮ ಕಸ್ಟಡಿಗೆ ಪಡೆದು ವಿಚಾರಿಸಿದರು. ವಿಷಯ ಇಡೀ ಊರಿಗೆ ತಲುಪಿತು. ಇದರಿಂದ ಕೆರಳಿದ ಆತನ ತಂದೆ ಕಾಲೇಜಿನ ಮ್ಯಾನೇಜ್ಮೆಂಟ್ ಬಳಿ ಬಂದು ಕೂಗಾಡಿದರು. ಮೊದಲೇ ಊರಿನ ದೊಡ್ಡ ಪ್ರಭಾವಿ ವ್ಯಕ್ತಿ. ಆತನಿಗೆ ಹೆದರಿ ನಮ್ಮ ಮ್ಯಾನೇಜ್ಮೆಂಟ್ ನನ್ನನ್ನು ಕೆಲಸದಿಂದ ತೆಗೆದು ಮನೆಗೆ ಕಳುಹಿಸಿತು. ಆತನ ಮಗನನ್ನು ಪೊಲೀಸರು ಅರೆಸ್ಟ್ ಮಾಡಿದರು ಎನ್ನುವ ಕೋಪದಿಂದ ಪ್ರಭಾವಿ ರಾಜಕಾರಣಿ ನನ್ನ ಮೇಲೆ ದಿನದಿಂದ ದಿನಕ್ಕೆ ದ್ವೇಷ ಸಾಧಿಸತೊಡಗಿದನು. ನನಗೂ ನನ್ನ ಕುಟುಂಬಕ್ಕೂ ನೀಡಬಾರದ ಕಿರುಕುಳ ನೀಡಲಾರಂಭಿಸಿದ. ನಾನು ಎಲ್ಲಿ ಹೋದರು ನನಗೆ ಕೆಲಸ ದೊರೆಯದಂತೆ ಮಾಡಿದ. ನನ್ನನ್ನು ಬೀದಿಗೆ ಹಾಕಿದ.
ಆಗ ನೀನೇನು ಮಾಡಿದೆ?
ಒಂದು ದಿನ ನಾನು ಬೇಸರದಲ್ಲಿ ರಸ್ತೆಯಲ್ಲಿ ನಡೆದು ಬರುತ್ತಿದ್ದೆ. ಜೀವನದಲ್ಲಿ ಕಂಗೆಟ್ಟು ಹೋಗಿ ಬಹಳ ಆಯಾಸಗೊಂಡಿದ್ದೆ. ಆಗ ಒಂದು ಕಾರ್ ಬಂದು ನನ್ನ ಪಕ್ಕ ನಿಂತಿತು. ನೋಡಿದೆ ಅದೇ ಪ್ರಭಾವಿ ರಾಜಕಾರಣಿ. ಅವರು ತಮ್ಮ ಕಾರಿನಿಂದ ಕೆಳಗಿಳಿದು ನಿಂತರು. ನನ್ನನ್ನು ನೋಡಿ ಗಹಗಹಿಸಿ ನಕ್ಕು ನೋಡು ನನ್ನ ಮಗನನ್ನು ಪೋಲೀಸರಿಗೆ ಹಿಡಿದು ಕೊಟ್ಟು ನನ್ನ ಮಾನ ಕಳೆದೆ ಅಲ್ಲವೇ? ಈಗ ನೋಡು, ನೀನು ಕೆಲಸವಿಲ್ಲದೆ ಬೀದಿ ಸುತ್ತುವಂತೆ ಮಾಡಿದ್ದೇನೆ. ಇನ್ನು ಮುಂದೆ ಜೀವನದಲ್ಲಿ ಇನ್ನಷ್ಟು ನೀನು ನೋಡುವುದಿದೆ. ಇಲ್ಲಿಗೆ ನಾನು ನಿನ್ನನ್ನು ಬಿಡುವುದಿಲ್ಲ ಎಂದು ಜೋರಾದ ಧ್ವನಿಯಲ್ಲಿ ನುಡಿದು ನನ್ನನ್ನು ಕೆಣಕಿ ನಗಲಾರಂಭಿಸಿದ. ನನಗೆ ಮೊದಲೇ ಪಡಬಾರದ ನೋವುಂಡು ರೋಸಿ ಹೋಗಿದ್ದೆ. ಒಮ್ಮೆಲೆ ಹೊಮ್ಮಿದ ಆವೇಶದಲ್ಲಿ ನಾನು ರಸ್ತೆ ಪಕ್ಕದಲ್ಲೇ ಇದ್ದ ಕಲ್ಲನ್ನು ಎತ್ತಿ ಆತನ ತಲೆಗೆ ಬಲವಾಗಿ ಬಡಿದೆ. ಆತ ಕೂಡಲೇ ರಸ್ತೆಯ ಮೇಲೆ ಬಿದ್ದ. ಆತನ ಡ್ರೈವರ್ ಓಡಿಬಂದು ಬಿಡಿಸಿಕೊಳ್ಳಲು ನೋಡಿದ. ಆದರೆ ನಾನು ಆತನನ್ನು ಪಕ್ಕಕ್ಕೆ ತಳ್ಳಿ ಇನ್ನೊಮ್ಮೆ ಆತನ ತಲೆಗೆ ಕಲ್ಲಿನಿಂದ ಜೋರಾಗಿ ಬಡಿದೆ. ಆತ ಸ್ಥಳದಲ್ಲೇ ಸತ್ತು ಹೋದ. ನಾನು ಜೈಲುಪಾಲಾದೆ..! ನಂತರ ವಿಷಯ ತಿಳಿದು ಆತನ ಮಗ ನನ್ನ ಮನೆಗೆ ನುಗ್ಗಿ ಹೆಂಡತಿ ಮಕ್ಕಳನ್ನು ನಿರ್ದಯವಾಗಿ ಕೊಂದು ಹಾಕಿದನಂತೆ. ನನ್ನ ಮುದ್ದಾದ ಮಕ್ಕಳು, ನೂರಾರು ಕನಸು ಕಂಡಿದ್ದ ಹೆಂಡತಿ ಎಲ್ಲರೂ ಆ ದುರುಳನ ಅಟ್ಟಹಾಸಕ್ಕೆ ಬಲಿಯಾದರು. ಆತನನ್ನು ಮುಗಿಸಲು ನಾನು ಎಷ್ಟೇ ಪ್ರಯತ್ನಿಸಿದರು ಆಗಲೇ ಇಲ್ಲ. ಆತ ಕೊಲೆ ಮಾಡಿ ಎಲ್ಲಿ ಅವಿತುಕೊಂಡನೋ? ಪೋಲಿಸರು ಎಷ್ಟು ಹುಡುಕಾಡಿದರೂ ಆತ ಸಿಗಲೇ ಇಲ್ಲ. ಆತನಿಗೆ ಶಿಕ್ಷೆ ಆಗುವುದು ಅನುಮಾನವೆನ್ನುವುದು ನನಗೆ ನಿಶ್ಚಯವಾಯಿತು. ಅನೇಕ ವರ್ಷಗಳ ಕಾನೂನು ಹೋರಾಟವನ್ನು ನಡೆಸಿದೆ. ಹೇಳಬಾರದ ನೋವಿನಲ್ಲಿ ನರಳಿದೆ. ರಾತ್ರಿಯಿಡೀ ನಿದ್ರೆಯಿಲ್ಲದೇ ಆತನ ಸಾವಿಗಾಗಿ ಎದುರುನೋಡಿದೆ. ಆಗಲೇ ಆತನ ಮುಗಿಸಲು ನನಗೆ ಸಹಕಾರಿಯಾಗಿದ್ದು ಇದೇ ಸಂಘಟನೆ. ಇದರ ಸಂಪರ್ಕದಿಂದ ಪೋಲಿಸರ ಕೈಗೂ ಸಿಗದೇ ಅಡಗಿ ಕುಳಿತಿದ್ದ ಆತನನ್ನು ಎಳೆದು ತಂದು ನನ್ನೆದುರು ನಿಲ್ಲಿಸಿದರು. ನಾನೇ ಆತನಿಗೆ ನನ್ನ ಕೈಯ್ಯಾರೆ ಕೊನೆ ಹಾಡಿದೆ. ಆತನಿಗೆ ಜೀವದ ಭಯ ಏನೆನ್ನುವುದು ಅರಿವು ಮಾಡಿಸಿ ಕೊನೆ ಹೇಳಿದೆ. ಆ ಮೂಲಕ ನನ್ನ ಸೇಡನ್ನು ತೀರಿಸಿಕೊಂಡೆ. ಈಗ ನನ್ನಂತಹ ನೊಂದವರಿಗೆ ನಾನು ಅದೇ ಹಾದಿಯಲ್ಲಿ ಸಹಾಯ ಮಾಡುತ್ತಾ ಸಂಘಟನೆಯಲ್ಲಿ ಸಕ್ರಿಯನಾಗಿದ್ದೇನೆ. ಇದಕ್ಕೆ ಕಾರಣ ನಾನಲ್ಲ. ಹಣದ ಮದದಲ್ಲಿ ಮೆರೆವ ದುಷ್ಟರ ಅಟ್ಟಹಾಸ. ಅವರಿಗೆ ಸರಿಯಾಗಿ ಶಿಕ್ಷೆಯಾಗಿದ್ದರೆ ನಾನೇಕೆ ದಾರಿ ತಪ್ಪುತ್ತಿದ್ದೆ? ಸಮಾಜದಲ್ಲಿ ಹಣದ ಮದದಲ್ಲಿ ಮರೆವ ದುಷ್ಟರು, ದುರುಳರು ಮಾಡುವ ತಪ್ಪುಗಳೇ ನಮ್ಮಂತವರ ಉದಯಕ್ಕೆ ಕಾರಣವೇ ಹೋರತು ನಮ್ಮ ದುಡುಕುತನವಲ್ಲ. ಇಲ್ಲವೇ ಕಾನೂನು ಕೈಗೆ ತೆಗೆದುಕೊಂಡಿದ್ದೇವೆ ಎನ್ನುವ ನಿಮ್ಮ ಮಾತಲ್ಲ.
ಭಾಗ-19
ನೋಡಿ ಕಾನೂನನ್ನು ಕೈಗೆ ತೆಗೆದುಕೊಂಡು ನಿಮ್ಮನ್ನು ನೀವೇ ಸಮರ್ಥನೆ ಮಾಡಿಕೊಳ್ಳಬೇಡಿ. ನೀವು ಹೇಳಿದಂತೆ ಜಗತ್ತಿನಲ್ಲಿ ನಡೆಯುತ್ತಿಲ್ಲ. ಭ್ರಷ್ಟಾಚಾರ, ಮೋಸ, ವಂಚನೆ ಎಲ್ಲೆಡೆಯೂ ಇದೆ. ಅದನ್ನು ಎದುರಿಸಲು ಮಾರ್ಗಗಳು ಹಲವು ಇವೆ. ದೇಶದ ಭವಿಷ್ಯ ರೂಪಿಸಬೇಕಾದ ಶಿಕ್ಷಕರಾದ ನೀವೇ ದಾರಿ ತಪ್ಪಿದ್ದೀರಿ. ನೀವು ತಿಳಿದುಕೊಂಡಂತೆ ನೀವು ಸಮಾಜದ ರಕ್ಷಕರಲ್ಲ. ಹಿಂಸೆಯ ಅಟ್ಟಹಾಸವನ್ನು ಮೆರೆಯುವವರು. ಕೈಗೆ ಗನ್ ಹಿಡಿದು ಎದುರಿಗಿದ್ದವರನ್ನು ಕೊಂದ ಮಾತ್ರಕ್ಕೆ ಸಮಾಜ ಸುದ್ದಿಯಾಗುವುದಿಲ್ಲ. ನಮ್ಮ ದೇಶದ ಕಾನೂನು ಬಹಳ ಸದೃಢವಾಗಿದೆ. ಯಾವುದೇ ಒಬ್ಬ ಅಮಾಯಕನಿಗೆ ಶಿಕ್ಷೆ ಆಗಬಾರದೆಂದು ನಿಯಮಗಳನ್ನು ರೂಪಿಸಿದ್ದಾರೆ. ಸಮಗ್ರವಾಗಿ ವಿಚಾರಣೆ ನಡೆಯುತ್ತದೆ. ಆತನಿಗೂ ಪ್ರಕರಣದ ಬಗ್ಗೆ ಮಾತನಾಡಲು ಅವಕಾಶವಿರುತ್ತದೆ. ಎಲ್ಲವನ್ನು ಪಾಲಿಸಿಯೇ ಆತನದ್ದು ತಪ್ಪಿದ್ದರೆ ಶಿಕ್ಷೆ ನೀಡುತ್ತಾರೆ. ಅದೇ ನಿಮ್ಮಲ್ಲಿ ಯಾವ ವಿಚಾರಣೆ ಇದೆ? ಯಾವ ಇತಿ-ಮಿತಿ ನಿಯಮಗಳಿವೆ? ಯಾರೋ ಹೇಳಿದರು ಎಂದು ಎಳೆದುತಂದು ಗುಂಡಿಟ್ಟು ಕೊಲ್ಲುವುದೇ? ಕಾಡಿನಲ್ಲಿ ಅವಿತು ಕುಳಿತ ನಿಮಗೆ ನಗರದಲ್ಲಿ ಇಂಥವರೇ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಮೋಸ, ವಂಚನೆಗೆ ಕಾರಣೀಭೂತರಾಗಿದ್ದಾರೆ ಎನ್ನುವುದು ಹೇಗೆ ತಿಳಿಯುತ್ತದೆ? ಯಾರೋ ಹೇಳಿದರಂತೆ ಅವರ ಮಾತಿನ ಮೇಲೆ ನಂಬಿಕೆ ಇಟ್ಟು ಯಾರನ್ನು ಎಳೆದುತಂದು ಇಲ್ಲವೇ ಅವರ ಮನೆಗೆ ನುಗ್ಗಿ ಗುಂಡಿಟ್ಟು ಕೊಲ್ಲುವುದು ಯಾವ ನ್ಯಾಯ? ನೀವು ಇಲ್ಲಿಯವರೆಗೆ ಕೊಂದವರೆಲ್ಲರೂ ಭ್ರಷ್ಟರೇ? ಖಂಡಿತವಾಗಿಯೂ ಅಲ್ಲ. ಅನೇಕ ಜನ ಮುಗ್ಧರನ್ನು ಕೊಂದಿದ್ದೀರಿ. ಅವರ ಮನೆಯನ್ನು ಸ್ಮಶಾಣ ಮಾಡಿದ್ದೀರಿ.
ಅದು ಸಾಧ್ಯವೇ ಇಲ್ಲ ಸರ್. ನಾವು ಕಾಡಿನಲ್ಲಿ ಇರಬಹುದು. ಆದರೆ ನಮಗೆ ಸರಿಯಾದ ಮಾಹಿತಿಯನ್ನು ನೀಡುವವರು ನಗರದಲ್ಲೂ ಇದ್ದಾರೆ. ಅವರು ಭ್ರಷ್ಟಾಚಾರ ನಡೆಸಿದವರ ಸಮಗ್ರ ಮಾಹಿತಿಯನ್ನು ಕಲೆಹಾಕಿ ನಮಗೆ ನೀಡುತ್ತಾರೆ. ನಾವು ಅವುಗಳನ್ನು ಇನ್ನೊಮ್ಮೆ ಪರಿಶೀಲಿಸುತ್ತೇವೆ. ನಂತರವೇ ಭ್ರಷ್ಟರÀ ಮೇಲೆ ದಾಳಿ ಮಾಡುತ್ತೇವೆ. ಹಲವು ವೇಳೆ ಮೋಸ ಮಾಡಿದವರಿಗೆ ಸರಿದಾರಿಗೆ ಬನ್ನಿ ಎಂದು ತಿಳುವಳಿಕೆಯನ್ನು ಹೇಳುತ್ತೇವೆ. ಅವರಿಗೂ ಅವಕಾಶವನ್ನು ನೀಡುತ್ತೇವೆ. ಒಮ್ಮೆಲೆ ಯಾರಿಗೂ ತೊಂದರೆ ನೀಡುವುದಿಲ್ಲ. ಕೊನೆಗೂ ಸರಿಯಾಗದಿದ್ದರೆ ನಾವು ಅನಿವಾರ್ಯವಾಗಿ ಕಾರ್ಯಾಚರಣೆ ನಡೆಸುತ್ತೇವೆ. ಇದು ಆಗ ಅನಿವಾರ್ಯವಾಗುತ್ತದೆ. ಸಮಾಜವನ್ನು ರಕ್ಷಿಸುವುದಕ್ಕಾಗಿ ದೇಶವನ್ನು ಉಳಿಸುವುದಕ್ಕಾಗಿ ನಾವು ಅಂತಹ ಬೇಟೆಯಾಡುತ್ತೇವೆ. ನಾವು ಎಂದಿಗೂ ಇಲ್ಲಿಯವರೆಗೆ ಒಬ್ಬನೇ ಒಬ್ಬ ಮುಗ್ಧನನ್ನು ಹಿಂಸಿಸಿಲ್ಲ. ಒಂದೇ ಒಂದು ಮುಗ್ಧ ಕುಟುಂಬಕ್ಕೆ ನೋವು ನೀಡಿಲ್ಲ ಸರ್. ನಿಮ್ಮ ಕಲ್ಪನೆ ತಪ್ಪು.
ನೀವು ತಿಳಿದುಕೊಂಡಿದ್ದು ಸುಳ್ಳು. ನೀವು ಭ್ರಷ್ಟರು ಎಂದು ಹೇಗೆ ತೀರ್ಮಾನಿಸುತ್ತೀರಿ? ಅದಕ್ಕೆ ಏನು ಮಾನದಂಡ?
ನಮ್ಮ ಚಳುವಳಿಗೆ ಬೆಂಗಾವಲು ನೀಡುವ ಅನೇಕ ಜನ ನೊಂದವರು ಪಟ್ಟಣಗಳಲ್ಲಿ ಇದ್ದಾರೆ. ಅವರು ಅನೇಕ ಸರ್ಕಾರಿ ಕಚೇರಿಗಳಲ್ಲಿ ಹಕ್ಕು ಮಾಹಿತಿ ಕಾಯ್ದೆಯಡಿ ದಾಖಲೆಗಳನ್ನು ಪಡೆದು ಪರಿಶೀಲಿಸುತ್ತಾರೆ. ಅದೇ ಅಂತಿಮವಲ್ಲ. ಆ ನಂತರ ಪರಿಣಿತರ ಮಾಹಿತಿಯನ್ನು ನಾವು ಇನ್ನೊಮ್ಮೆ ಪಡೆಯುತ್ತೇವೆ. ನಾವು ನಮ್ಮ ಸಂಘಟನೆಗಾಗಿ ಕಾನೂನು ತಜ್ಞರನ್ನು ನೇಮಿಸಿಕೊಂಡಿದ್ದೇವೆ. ಅವರ ಬಳಿಯೂ ಸಮಗ್ರವಾಗಿ ಸಲಹೆಯನ್ನು ಕೇಳುತ್ತೇವೆ. ಇನ್ನೂ ಹೆಚ್ಚುವರಿಯಾಗಿ ಅನೇಕ ಪತ್ರಿಕೆಗಳಲ್ಲಿ ಭ್ರಷ್ಟಾಚಾರದ ಬಗ್ಗೆ ವರದಿಯಾಗುತ್ತವೆ. ಅದನ್ನು ಸಹಾ ಗಮನಿಸುತ್ತೇವೆ. ಇವೆಲ್ಲವುಗಳ ಆಧಾರದಲ್ಲಿ ಭ್ರಷ್ಟರ ಮೇಲೆ ದಾಳಿ ಮಾಡುತ್ತೇವೆ.
ಕಳೆದ ತಿಂಗಳು ನಿಮ್ಮ ಸಂಘಟನೆಯು ಒಬ್ಬ ಸರ್ಕಾರಿ ಇಂಜಿನಿಯರ್ನನ್ನು ಕೊಲೆ ಮಾಡಿದೆ ಎನ್ನುವುದು ನನಗೆ ಗೊತ್ತು. ಅದರ ಹೊಣೆಯನ್ನು ನಿಮ್ಮ ಸಂಘಟನೆಯೆ ಹೊತ್ತುಕೊಂಡು ಹೇಳಿಕೆಯನ್ನು ಸಹಾ ನೀಡಿದೆ. ಆದರೆ ಆತನ ಬಗ್ಗೆ ನಿಮಗೆಷ್ಟು ಗೊತ್ತು? ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕೊಲೆ ಮಾಡಿದ್ದೀರಿ. ದೇಶಕ್ಕೆ ಆತನ ಅಮೂಲ್ಯ ಸೇವೆ ತಪ್ಪಿಹೋಯಿತು. ನಿಮ್ಮ ಅವಿವೇಕಿತನಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ?
ಅಯ್ಯೋ, ಅವನಂತಹ ಕಡುಭ್ರಷ್ಟ ಇನ್ನೊಬ್ಬನಿಲ್ಲ. ಆತನ ಭ್ರಷ್ಟ ಆಡಳಿತದ ಬಗ್ಗೆ ಪ್ರತಿವಾರ ಪೇಪರ್ನಲ್ಲಿ ಬರುತ್ತಿತ್ತು. ಆತ ಕೋಟಿಗಟ್ಟಲೆ ಹಣ ಕೊಳ್ಳೆಹೊಡೆದಿದ್ದ. ಕಳೆದ 20 ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಅನೇಕ ಅನಧಿಕೃತ ಬಡಾವಣೆಗಳು ಉದಯವಾಗಲು ಈತನೇ ಕಾರಣವಾಗಿದ್ದ. ನಾನು ಕೇಳಿದಂತೆ ಆತನಿಗೆ ಊರಿನ ಎಲ್ಲಾ ಬಡಾವಣೆಗಳಲ್ಲಿ ಅನಾಮಧೇಯ ಹೆಸರುಗಳಲ್ಲಿ ಕನಿಷ್ಟವೆಂದರೂ ಎರಡರಿಂದ ಮೂರು ನಿವೇಶನಗಳನ್ನು ಮಾಡಿಟ್ಟುಕೊಂಡಿದ್ದಾನೆ. ಅದಕ್ಕೆ ನಾವು ಪೂರಕ ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಒಂದು ಕಡತವನ್ನು ನಮ್ಮ ಸಂಘಟನೆಯ ಪರಿಣಿತರು ಪರಿಶೀಲಿಸಿದ್ದರು. ಆತ ಒಬ್ಬ ಭೂ ಮಾಲಿಕಲಿಗೆ ಅನುಕೂಲ ಮಾಡಿಕೊಡಲು 10 ಎಕರೆಯ ಒಂದು ಭೂಭಾಗವನ್ನು ಸುಮಾರು 10 ಭಾಗಗಳಾಗಿ ಒಂದು ಎಕರೆಗೆ ಸೀಮಿತಗೊಳಿಸಿ ಏಕ ನಿವೇಶನಗಳಾಗಿ ಅನುಮೋದನೆಯನ್ನು ನೀಡಿದ್ದ. ಇದರಿಂದ ಸರ್ಕಾರಕ್ಕೆ ಬಿಡಬೇಕಾದ ಉದ್ಯಾನವನ, ಸಾರ್ವಜನಿಕ ಉದ್ದೇಶದ ಜಾಗ, ರಸ್ತೆ, ಚರಂಡಿ ಎಲ್ಲವೂ ವಿನಾಯಿತಿ ನೀಡಿ ಭೂಮಾಲೀಕರಿಗೆ ಅನುಕೂಲ ಮಾಡಿಕೊಟ್ಟಿದ್ದ. ಅದೇ ಒಂದು ವೇಳೆ 10 ಎಕರೆಯನ್ನು ಒಟ್ಟಾರೆ ಲೇ ಔಟ್ ಮಾಡಿ ಅನುಮೋದನೆ ನೀಡಿದ್ದರೆ ಶೇಕಡ 45ರಷ್ಟು ಭೂಮಿ ಸರ್ಕಾರದ ಪಾಲಾಗುತ್ತಿತ್ತು. ಇದನ್ನು ತಪ್ಪಿಸಿ ರಿಯಲ್ ಎಸ್ಟೇಟ್ನವರಿಗೆ ಅನುಕೂಲಮಾಡಿಕೊಟ್ಟು ಸರ್ಕಾರಕ್ಕೆ ಮೋಸಮಾಡಿದ್ದಾನೆ. ಆ ಉದ್ಯಮಿಯಿಂದ ಅಪಾರ ಪ್ರಮಾಣದ ಹಣವನ್ನು ಕಬಳಿಸಿದ್ದಾನೆ. ಇದೇ ರೀತಿ ಕಳೆದ 20 ವರ್ಷಗಳಿಂದ ಅನಾಚಾರ ಮಾಡಿಕೊಂಡು ಬಂದಿದ್ದಾನೆ. ಇಡೀ ಊರಿನ ತುಂಬಾ ಈತನ ಅನಾಚಾರದಿಂದ ಅನಧಿಕೃತ ಲೇ ಔಟ್ ಗಳೇ ತುಂಬಿವೆ. ಯಾರಾದರು ಜಾರಿ ಬಿದ್ದರೆ ಅದೂ ಸಹಾ ಅನಧಿಕೃತ ಭೂಭಾಗವೆನ್ನುವಂತೆ ಮಾಡಿದ್ದಾನೆ. ಒಂದು ಶಾಲೆ, ಆಸ್ಪತ್ರೆ ನಿರ್ಮಿಸಲು ಜಾಗವಿಲ್ಲವಾಗಿದೆ. ಉದ್ಯಾನವಂತೂ ಊರಲ್ಲಿ ಮಾಯವಾಗಿಸಿದ್ದಾನೆ. ಎಲ್ಲಕ್ಕೂ ಪಾರ್ಕ್ ವಿನಾಯ್ತಿ ಎಂಬ ನಿಯಮವನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಊರಲ್ಲಿ ಉದ್ಯಾನವಿಲ್ಲದೇ ಊರು ಕೇವಲ ಕಾಂಕ್ರೀಟ್ ಕಟ್ಟಡದ ಗೂಡಾಗಿದೆ. ಜನರಿಗೆ ಸರಿಯಾದ ವಾತಾವರಣವಿಲ್ಲದೇ ಆರೋಗ್ಯದ ಮೇಲೆ ದುಷ್ಪರಿಣಾಮವಾಗಿದೆ. ಪಕ್ಷಿಗಳು ಊರಿಂದ ಮರೆಯಾಗಿವೆ. ಇಂತವನಿಗೆ ನಿಮ್ಮ ಕಾನೂನು ಏನು ಶಿಕ್ಷೆ ನೀಡಿದೆ? ಆತನಿಗೆ ಕಿಂಚಿತ್ತೂ ಕಾನೂನಿನ ಭಯವಿಲ್ಲ. ಇನ್ನೂ ಊರಿಗೆ ಈತ ನಾಶಕನಾಗಿಯೇ ಉಳಿಯಬಾರದೆಂದು ನಾವೇ ಶಿಕ್ಷಿಸಿದ್ದೇವೆ. ಹಾಗಾಗಿ ನಮ್ಮ ನಡೆ ಸರಿಯಾಗಿದೆ. ನಮ್ಮ ಕೆಲಸದ ಬಗ್ಗೆ ನಮಗೆ ಹೆಮ್ಮೆಯಿದೆ.
ನಿಮ್ಮ ನಡೆ ಇಲ್ಲಿ ತಪ್ಪಾಗಿದೆ. ಯಾರೋ ಮಾಡಿದ ತಪ್ಪಿಗೆ ಯಾರನ್ನೋ ಕೊಂದಿದ್ದೀರಿ. ನಿಮ್ಮಿಂದ ಕೊಲೆಯಾದಾತ ಕೆಲಸಕ್ಕೆ ಸೇರಿ ಕೇವಲ ಎರಡು ವರ್ಷವಾಗಿದೆ. ಆತ ಉತ್ತಮ ಅಧಿಕಾರಿ. ಆತನನ್ನು ಸಹಿಸಲಾರದ ಇನ್ನೊಬ್ಬ ದುಷ್ಟ ಇಂಜಿನೀಯರ್ ಊರಿನ ಭೂ ಮಾಫಿಯಾದ ದುಷ್ಟರೊಂದಿಗೆ ಸೇರಿಕೊಂಡು ಈತನ ಮೇಲೆ ಅಪಪ್ರಚಾರವನ್ನು ಮಾಡಿಸಿದ್ದಾನೆ. ಎಲ್ಲೆಡೆಯೂ ಹಾಗೆಯೇ ಬಿಂಬಿಸಿದ್ದಾರೆ. ನೀವು ಅದನ್ನೇ ನಂಬಿದ್ದೀರಿ. ಕಳೆದ ಬಾರಿ ಈ ಪ್ರಕರಣದ ವಿಚಾರದಲ್ಲಿ ಆತನ ಮನೆಗೆ ಹೋಗಿದ್ದೆ. ಆತನಿಗೆ ಮದುವೆಯಾಗಿ ಕೇವಲ ಒಂದು ವರ್ಷ. ನೀವು ಹೇಳಿದ ಭ್ರಷ್ಟ ಇಂಜಿನಿಯರ್ನೇ ಈತನ ಮೇಲೆ ನಿತ್ಯ ಹಗೆ ಸಾಧಿಸುತ್ತಿದ್ದನು. ಈತನಿಗೆ ಏನಾದು ಮಾಡಿ ತೊಂದರೆ ಕೊಡಬೇಕೆಂದು ಸದಾ ಹಪಹಪಿಸುತ್ತಿದ್ದ. ಆತನೇ ಹೂಡಿದ ತಂತ್ರಕ್ಕೆ ನೀವು ಮೋಸಹೋಗಿದ್ದೀರಿ. ನಿಮ್ಮವರು ಅನೇಕ ಜನರು ಪಟ್ಟಣದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದೀರಿ ತಾನೇ? ಅವರೇ ನಿಮಗೆ ತಪ್ಪು ಮಾಹಿತಿ ನೀಡಿ ನಿಮ್ಮ ಕೈಲಿ ಪ್ರಾಮಾಣಿಕನ ಕೊಲೆಮಾಡಿಸಿದ್ದಾರೆ. ನೀವು ಕೊಲೆ ಮಾಡಿದ್ದು ಮಾತ್ರ ಮುಗ್ಧನನ್ನು ಬಿಟ್ಟಿದ್ದು ಭ್ರಷ್ಟನನ್ನು. ಅದಕ್ಕೆ ಹೇಳುವುದು ಎಲ್ಲವನ್ನೂ ಪರಿಶೀಲಿಸಿ ಪರಾಮರ್ಶಿಸಲು ದೇಶದ ಕಾನೂನಿನ ವ್ಯವಸ್ಥೆಯಿದೆ. ಅದನ್ನು ಬಿಟ್ಟು ಮನಬಂದಂತೆ ಮೂರ್ಖತೆಯಿಂದ ವರ್ತಿಸಿದರೆ ಮುಗ್ಧ ಕುಟುಂಬಗಳು ಬಲಿಯಾಗುತ್ತವೆ. ನಿಮ್ಮ ಬೇಜವಾಬ್ದಾರಿಯ ಹುಚ್ಚುತನದಿಂದ ಇಂತಹ ಎಷ್ಟು ಜನ ಮುಗ್ಧ ಕುಟುಂಬಗಳು ಬೀದಿಗೆ ಬಿದ್ದಿವೆ? ಇದರ ಅರಿವು ನಿಮಗೆಲ್ಲಿ? ಹಿಂದೆ ನಿಮಗೆ ಅನ್ಯಾಯವಾದಾಗ ನಿಮ್ಮ ಕುಟುಂಬ ಬೀದಿಗೆ ಬಿದ್ದಿತ್ತು ಅಲ್ಲವೇ? ಅದಕ್ಕೂ ಇದಕ್ಕೂ ಯಾವುದೇ ವ್ಯತ್ಯಾಸವಿಲ್ಲ! ಹೌದು, ಯಾರನ್ನಾದರೂ ಶಿಕ್ಷಿಸುವ ಮುನ್ನ ಒಂದು ಅವಕಾಶ ನೀಡುತ್ತೇವೆ. ಆತನ ಪರಿವರ್ತನೆಗೆ ಸಮಯ ನೀಡುತ್ತೇವೆ ಎನ್ನುತ್ತೀರಿಲ್ಲ. ಈತನ ವಿಚಾರದಲ್ಲಿ ಏಕೆ ಅದನ್ನು ಪಾಲಿಸಲಿಲ್ಲ?
ನೀವು ಹೇಳುವುದೆಲ್ಲ ಸುಳ್ಳು ಸರ್. ಆತನ ಫೋಟೋ ಪೇಪರ್ನಲ್ಲಿ ಬಂದಿತ್ತು. ನಾನು ಬಹಳ ನಿಖರವಾಗಿ ನೋಡಿದ್ದೇನೆ. ಸಾಕಷ್ಟು ಬಾರಿ ಓದಿದ್ದೇನೆ. ಆತ ಕಡು ಭ್ರಷ್ಟನೆಂದು ಆ ಪತ್ರಿಕೆಯಲ್ಲಿ ಬರೆದಿದ್ದನ್ನು ಐದಾರು ಬಾರಿ ಓದಿದ್ದೇನೆ.
ಹಾಗಾದರೆ ನಿಮ್ಮ ಪ್ರಕಾರ ಪತ್ರಿಕೆಯಲ್ಲಿ ಬಂದಿದ್ದು ಎಲ್ಲವೂ ಸತ್ಯವೇ? ನೀವು ತಿಳಿದಂತೆ ಅದು ನಿಜವಲ್ಲ. ನಾನು ಈ ಹಿಂದೆ ಅದೇ ಊರಿನಲ್ಲಿ ತನಿಖೆಯೊಂದಕ್ಕೆ ಹೋಗಿದ್ದೆ. ಆಗ ಅದೇ ಕಚೇರಿಯ ಹಲವರನ್ನು ಕ್ರಿಮಿನಲ್ ಪ್ರಕರಣವೊಂದರಲ್ಲಿ ವಿಚಾರಣೆ ನಡೆಸಿದ್ದೆ. ನನಗೆ ಎಲ್ಲವೂ ಗೊತ್ತು. ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿಯಾಗಿದ್ದಾರೆ. ನಿಮ್ಮ ಹುಚ್ಚುತನಕ್ಕೆ ಒಂದು ಮುಗ್ಧ ಕುಟುಂಬವು ಬೀದಿಗೆ ಬಿತ್ತು. ಆತನ ಹೆಂಡತಿಯ ನೋವು ನಿಮ್ಮನ್ನು ಸುಮ್ಮನೇ ಬಿಡುವುದೇ?
ಅದು ಸರಿ ಯಾವ ಯಾವ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು ಹೇಳಿ?
ಶರಧಿಪುರ ವಾರಪತ್ರಿಕೆ ಎನ್ನುವ ಪತ್ರಿಕೆಯಲ್ಲಿ. ಅದರಲ್ಲಿ ಮಾತ್ರ ಪ್ರತೀವಾರವು ತಪ್ಪದೇ ಈ ಇಂಜಿನೀಯರ್ ಬಗ್ಗೆ ಬರೆಯುತ್ತಿದ್ದರು. ಆ ಪತ್ರಿಕೆಯ ಸಂಪಾದಕೀಯ ಬಹಳ ಚೆನ್ನಾಗಿರುತ್ತಿತ್ತು. ಇನ್ನು ಭ್ರಷ್ಟರ ಬಗ್ಗೆ ಸರ್ಕಾರಿ ಕಚೇರಿಯಲ್ಲಿ ನಡೆಯುವ ಮೋಸದ ಬಗ್ಗೆ ಆ ಪತ್ರಿಕೆಯಲ್ಲಿ ಬಹಳ ಅದ್ಭುತವಾಗಿ ಮೂಡಿಬರುತ್ತಿತ್ತು. ಅವರ ಧೈರ್ಯವನ್ನು ಮೆಚ್ಚಬೇಕು. ನಾನು ಅವರ ಅಭಿಮಾನಿಯಾಗಿದ್ದೇನೆ. ಇದ್ದರೆ ಅಂತಹ ಪತ್ರಕರ್ತ ಇರಬೇಕು. ಸುಮ್ಮನೇ ಏನೇನೋ ಬರೆದರೆ ಅದು ಪತ್ರಿಕೆಯೇ?
ಅಯ್ಯೋ ನಿಮ್ಮ ಮೂರ್ಖತನಕ್ಕೆ ಇದಕ್ಕಿಂತಹ ಉತ್ತಮ ಉದಾಹರಣೆ ಬೇಕೆ? ಎಲ್ಲವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ನಾನು ಈ ಹಿಂದೆ ಅದೇ ಊರಿನಲ್ಲಿ ಈ ಮೊದಲೇ ಹೇಳಿದಂತೆ ತನಿಖೆ ನಡೆಸುವಾಗ ಈ ಪತ್ರಕರ್ತನ ಹೆಸರು ಕೇಳಿಬಂದಿತ್ತು. ಈತ ಬರೆದ ಸುದ್ದಿಗಳನ್ನು ನಾನೂ ಕೂಡ ಓದಿದ್ದೆ. ಏನೋ ಬಹಳ ನಿಷ್ಠಾವಂತನೆಂದುಕೊಂಡಿದ್ದೆ. ಆದರೆ ಆತನ ನಿಜವಾದ ಮುಖವಾಡ ನಂತರ ತಿಳಿಯಿತು. ಅತನು ಒಬ್ಬ ರೋಲ್ ಕಾಲ್ ಪತ್ರಕರ್ತ. ತನ್ನ ಹೆಸರಿನಲ್ಲಿ ಸರ್ಕಾರಕ್ಕೆ ಮೋಸ ಮಾಡಿ ಅನೇಕ ಭೂ ಮಂಜೂರಾತಿಗಳನ್ನು ಮಾಡಿಸಿಕೊಂಡಿದ್ದಾನೆ. ಆತನ ಹೆಸರಿನಲ್ಲಿ ಒಂದು ಆಶ್ರಯ ಮನೆ, ಪತ್ರಕರ್ತನೆಂದು ಸರ್ಕಾರದಿಂದ ಇನ್ನೊಂದು ನಿವೇಶನವನ್ನು ಪಡೆದಿದ್ದಾನೆ. ತನ್ನ ತಂದೆಯ ಹೆಸರಿನಲ್ಲೂ ಸರ್ಕಾರದ ಮಂಜೂರಾತಿಯಿದೆ. ಆತನಿಗೆ ಇಷ್ಟೆಲ್ಲಾ ಆಸ್ತಿಯಿದ್ದರೂ ಸರ್ಕಾರದ ಬಿ.ಪಿ.ಎಲ್ ಕಾರ್ಡ್ ಪಡೆದು ತನ್ನ ಹೆಂಡತಿಯ ಹೆಸರಿನಲ್ಲಿ ಮತ್ತೆ ಆಶ್ರಯ ನಿವೇಶನಕ್ಕಾಗಿ ಅರ್ಜಿಹಾಕಿದ್ದಾನೆ. ಆತನೊಬ್ಬ ರೋಲ್ಕಾಲ್ ಪತ್ರಕರ್ತ ಎಂಬುದು ಊರಿನಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ. ಭ್ರಷ್ಟಾಚಾರ ಎನ್ನುವುದು ಕೇವಲ ಸರ್ಕಾರಿ ಕಚೇರಿಗಳಿಗೆ ಮಿತಿಯಲ್ಲ. ಅದು ಎಲ್ಲ ವ್ಯವಸ್ಥೆಗಳನ್ನು ಒಪ್ಪಿಕೊಂಡಿದೆ, ಆವರಿಸಿದೆ. ಬಾನು ಮತ್ತು ಕಡಲಿಗೆ ಒಂದು ಕೊನೆ ಇರಬಹುದು. ಆದರೆ ಭ್ರಷ್ಟಾಚಾರಕ್ಕೆ ಯಾವ ಕ್ಷೇತ್ರ ಎನ್ನುವ ಹಂಗಿಲ್ಲ ಎಲ್ಲೆಡೆಯೂ ನುಗ್ಗಿದೆ. ನಿಮ್ಮ ಪ್ರಕಾರ ಸರ್ಕಾರಿ ಅಧಿಕಾರಿಗಳು ಮಾತ್ರವೇ ಭ್ರಷ್ಟರು. "ಅದೇ ಸರ್ಕಾರಿ ಅಧಿಕಾರಿಗಳ ಮೇಲೆ ವಾಮಮಾರ್ಗದಿಂದ ರಾಜಕೀಯ ಒತ್ತಡ ಹಾಕಿಸುವ ಜನರು ಒತ್ತಡ ಹಾಕುವ ಜನಪ್ರತಿನಿಧಿಗಳು, ಹಣದ ಆಸೆಯನ್ನು ತೋರಿಸುವ ಧನಿಕರು ಕೂಡ ಭ್ರಷ್ಟಾಚಾರಿಗಳೆ!" ಯಾವುದೇ ವಿಚಾರವನ್ನು ಒಂದೇ ಕೋನದಿಂದ ನೋಡಬಾರದು ಬುದ್ಧಿವಂತಿಕೆಯಿಂದ ಪರಾಮರ್ಶಿಸಬೇಕು. ಸಮಾಜ ಹಾಳಾಗಲು ಸಮಾಜದಲ್ಲಿರುವ ಎಲ್ಲಾ ರಂಗಗಳ ಕಾರಣವಾಗಿರುತ್ತವೆ. ಚುನಾವಣೆಯಲ್ಲಿ ವೋಟ್ ಹಾಕುವಾಗ ರಾಜಕಾರಣಿಗಳಿಂದ ಹಣ ಬೇಡುವ ಜನರು ಕೂಡ ಕಡುಭ್ರಷ್ಟರು. ತಮ್ಮ ವೋಟನ್ನು ನೋಟಿಗೆ ಮಾರಿಕೊಂಡವರು ಯಾವ ಮುಖ ಹೊತ್ತು ಆಯ್ಕೆಯಾದ ಜನಪ್ರತಿನಿಧಿಗಳ ಬಳಿ ನ್ಯಾಯ ಕೇಳುತ್ತಾರೆ? ಹಣ ನೀಡಿ ಚುನಾವಣೆಯಲ್ಲಿ ಗೆದ್ದವನು ನ್ಯಾಯ ನಿಷ್ಠುರತೆಯಿಂದ ದೇಶಕ್ಕಾಗಿ ದುಡಿಯುತ್ತಾನೆಯೆ? ಆತನು ತಾನು ಖರ್ಚುಮಾಡಿದ ಹಣ ಗಳಿಕೆಗಾಗಿ ಭ್ರಷ್ಟಾಚಾರದ ಮಾರ್ಗವನ್ನೇ ಅನುಸರಿಸುತ್ತಾನೆ. ಸರ್ಕಾರದ ಖಜಾನೆಯಿಂದ ಹೇಗೆಲ್ಲಾ ಲೂಟಿಗೈಯ್ಯಬಹುದೆಂದದು ಹಪಹಪಿಸುತ್ತಾನೆ. ಅದಕ್ಕಾಗಿ ಅಧಿಕಾರಿಗಳ ಮೇಲೆ ವಾಮಮಾರ್ಗದ ಪ್ರಯೋಗವನ್ನು ಮಾಡುತ್ತಾನೆ ಅಲ್ಲವೇ? ಇದು ಆತನಿಗೆ ಅನಿವಾರ್ಯವೂ ಹೌದು. ಮೊದಲು ಸಮಾಜದಲ್ಲಿನ ಎಲ್ಲ ಜನರು ಪರಿಶುದ್ಧರಾಗಬೇಕು. ಅದಕ್ಕೆ ಸಮಾಜದಲ್ಲಿ ನಿಮ್ಮಂತಹ ಬುದ್ಧಿವಂತರು ಮುಂದೆ ಬಂದು ಮಾರ್ಗದರ್ಶನ ಮಾಡಬೇಕು. ಆದರೆ ನೀವೇ ದಾರಿತಪ್ಪಿ ಕೈಯಲ್ಲಿ ಗನ್ ಹಿಡಿದಿದ್ದೀರಿ. ಮುಗ್ಧರ ಬಾಳಲ್ಲಿ ಬಿರುಗಾಲಿಯಾಗಿದ್ದೀರಿ. ನೋಡಿ ಈಗ ನಿಮಗೆ ನಿಜವಾಗಲೂ ಸಮಾಜದ ಮೇಲೆ ಕಾಳಜಿ ಇದ್ದರೆ ನಿಮ್ಮ ಸಹಚರರ ಬಗ್ಗೆ ಮಾಹಿತಿ ಕೊಡಿ. ಎಲ್ಲರನ್ನೂ ಶರಣಾಗುವಂತೆ ಮಾಡಿ. ಸಮಾಜದ ಮುಖ್ಯವಾಹಿನಿಗೆ ಬನ್ನಿ. ಎಲ್ಲರೂ ಶರಣಾದರೆ ಶಿಕ್ಷೆಯು ಕಡಿಮೆಯಾಗುತ್ತದೆ. ನಂತರ ಸಮಾಜದಲ್ಲಿ ಶಾಂತಿಯುತವಾಗಿ ಹೋರಾಟವನ್ನು ಮಾಡಿ ಇಷ್ಟು ದಿನ ನೀವು ಮಾಡಿದ ತಪ್ಪುಗಳನ್ನು ಈ ಮೂಲಕ ತಿದ್ದಿಕೊಳ್ಳಿ. ಇನ್ನಷ್ಟು ಮುಗ್ಧರ ಮೇಲೆ ಅಟ್ಟಹಾಸ ಮೆರೆಯಬೇಡಿ.
ಎಲ್ಲೋ ಒಮ್ಮೊಮ್ಮೆ ತಪ್ಪಾಗಿರಬಹುದೇನೋ ಸರ್. ಆದರೆ ನಾವು ಯಾವುದೇ ಕಾರಣಕ್ಕೂ ನನ್ನ ಸಹಚರರ ಮಾಹಿತಿಯನ್ನು ನೀಡುವುದಿಲ್ಲ. ಅವರಿಗೆ ಶರಣಾಗಿ ಎಂದು ಪ್ರೇರಣೆ ನೀಡುವುದಿಲ್ಲ. ಭ್ರಷ್ಟರನ್ನು ಶಿಕ್ಷಿಸಲು ನಾವಂತೂ ಇದ್ದೇವೆ ಎನ್ನುವ ಧೈರ್ಯದಲ್ಲಿ ಅನೇಕ ಜನ ನೆಮ್ಮದಿಯಿಂದ ನಾಡಿನಲ್ಲಿ ಬಾಳುತ್ತಿದ್ದಾರೆ. ಎಷ್ಟೋ ಜನ ಭ್ರಷ್ಟರು ನಮ್ಮ ಬೆದರಿಕೆಗೆ ಹೆದರಿ ಸರಿಯಾಗಿದ್ದಾರೆ. ಹೀಗಿರುವಾಗ ನಮ್ಮ ಸಂಘಟನೆಯನ್ನು ನಿರ್ನಾಮ ಮಾಡುವ ಪ್ರಶ್ನೆಯೇಯಿಲ್ಲ. ಅದು ಇನ್ನಷ್ಟು ಗಟ್ಟಿಯಾಗಿ ಬೆಳೆಯುತ್ತದೆ. ಜನರಿಗೆ ಸದಾ ಒಳಿತನ್ನು ಮಾಡುತ್ತದೆ ಸರ್.
ಅಂದರೆ ನೀವು ನಿಮ್ಮ ಮಾತಿಗೆ ಬದ್ಧವೇ?
ಹೌದು ನಾನು ನನ್ನ ಮಾತಿಗೆ ಬದ್ಧ. ನಾನು ಯಾವುದೇ ಕಾರಣಕ್ಕೂ ನನ್ನ ಸಂಘಟನೆಯನ್ನು ಹಾಳು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಸರ್.
ನಾನು ಹೇಳಿದ್ದನ್ನೆಲ್ಲಾ ನಿಮಗೆ ಹೇಳಿದ್ದೇನೆ. ನಿಮ್ಮ ಸಂಘಟನೆಯಲ್ಲಿ ಇನ್ನೂ ಬಾಳಿ ಬದುಕಬೇಕಾದ ನೂರಾರು ಜನ ಯುವಕರಿದ್ದಾರೆ. ಅವರ ಜೀವನವನ್ನು ಹಾಳು ಮಾಡಬೇಡಿ.
ಭ್ರಷ್ಟರ ವಿರುದ್ಧದ ಹೋರಾಟದ ಸೇನೆ ನಮ್ಮದು. ಇದರಲ್ಲಿ ಇರುವ ಯುವಕರು ದೇಶವನ್ನು ಕಾಯುವ ಸೈನಿಕರು ಇದ್ದಂತೆ. ಅವರಿಗೆ ತಾವು ದೇಶಕ್ಕಾಗಿ ದುಡಿಯುತ್ತಿದ್ದೇವೆ ಎನ್ನುವ ಹೆಮ್ಮೆ ಇದೆ ಸರ್.
ಅವರ ತಲೆಯಲ್ಲಿ ಇಲ್ಲಸಲ್ಲದ ಹಿಂಸೆಯ ವಿಷ ಬೀಜವನ್ನು ನೀವು ಬಿತ್ತಿದ್ದೀರಿ. ನಿಮ್ಮ ಹಿಂಸಾ ಪ್ರವೃತ್ತಿಯಿಂದ ಎಷ್ಟು ಜನ ಪೋಲಿಸರು ಆಹುತಿಯಾಗಿದ್ದಾರೆ. ಅವರ ಕುಟುಂಬ ನೋವಿನಲ್ಲಿ ನರಳಿದೆ. ಅವರೂ ಸಹಾ ಬಡ ಕುಟುಂಬದಿಂದಲೇ ಬಂದವರು. ರೈತರು, ಕಾರ್ಮಿಕರ ಮಕ್ಕಳು. ಎಲ್ಲಕ್ಕಿಂತ ಮುಖ್ಯವಾಗಿ ಅವರೂ ನಿಮ್ಮಂತೆಯೇ ಮನುಷ್ಯರು. ನಿಮ್ಮ ನಡೆ ಶಾಂತಿಯ ತತ್ವಕ್ಕೆ ಹಾನಿಕಾರಕ ಎಚ್ಚರವಿರಲಿ.
ನನ್ನ ಪ್ರಕಾರ ನಾನು ಸರಿದಾರಿಯಲ್ಲಿ ಸಾಗಿದ್ದೇನೆ, ಮುಂದೆಯೂ ಸಾಗುತ್ತೇನೆ. ಯಾವುದೇ ತಪ್ಪನ್ನು ಮಾಡಿಲ್ಲ ಸರ್.
ಇನ್ನು ನಿಮ್ಮೊಂದಿಗೆ ಚರ್ಚಿಸಿ ಉಪಯೋಗವಿಲ್ಲ. ನಿಮ್ಮ ಮೇಲಿರುವ ಆರೋಪಗಳಿಗೆ ಕಾನೂನಿನಲ್ಲಿ ಖಂಡಿತ ಶಿಕ್ಷೆಯನ್ನು ನಾನು ಕೊಡಿಸಿಯೇ ತೀರುತ್ತೇನೆ ನೆನಪಿರಲಿ.
ನೀವು ಅಂದುಕೊಂಡಂತೆಯೇ ಆಗಲಿ ಸರ್. ನಾವು, ನಮ್ಮ ಸಂಘಟನೆ ಒಳ್ಳೆಯದನ್ನೇ ಮಾಡಿದೆ. ಸಾಧ್ಯವಾದರೆ ಇನ್ನು ಮುಂದೆಯೂ ಮಾಡುತ್ತದೆ.
ಇತ್ತ ವಿಚಾರಣೆಯಿಂದ ಎಷ್ಟು ಪರಿತಪಿಸಿದರು ಅವರಿಬ್ಬರನ್ನು ಪರಿವರ್ತಿಸಲು ಕಮಾಂಡರ್ಗೆ ಆಗಲಿಲ್ಲ. ತಮ್ಮ ಸಹಚರರ ಮಾಹಿತಿಯನ್ನು ಅವರು ನೀಡಲಿಲ್ಲ. ಎಲ್ಲರನ್ನೂ ಶರಣಾಗತಿಗೆ ಒಪ್ಪಿಸಿ ಶಿಕ್ಷೆ ಕಡಿಮೆ ಮಾಡಿಸುತ್ತೇನೆ ಎನ್ನುವ ಮಾತಿಗೆ ಅವರು ಕಿಂಚಿತ್ತು ಸೊಪ್ಪು ಹಾಕಲಿಲ್ಲ. ಈಗ ಮುಂದೆ ಮಾಡಬೇಕಾದ ಕೆಲಸದ ಬಗ್ಗೆ ಅಧಿಕಾರಿಗಳನ್ನು ಕರೆದು ಚರ್ಚಿಸಲು ತೀರ್ಮಾನಿಸಿದ್ದಾರೆ.
ಅಂದುಕೊಂಡಂತೆ ಮಾರನೆಯ ದಿವಸ ಸಭೆ ಸೇರಿದರು. ಗುಪ್ತಚರ ಮಾಹಿತಿಯನ್ನು ಇನ್ನಷ್ಟು ಬಲಪಡಿಸಲು ತೀರ್ಮಾನಿಸಿದರು. ಮಾಹಿತಿ ನೀಡುವವರನ್ನು ಇನ್ನಷ್ಟು ಸಂಖ್ಯೆಯಲ್ಲಿ ಹೆಚ್ಚಿಸಿಕೊಂಡು ಅವರಿಗೆ ಹೆಚ್ಚುವರಿ ಸಂಭಾವನೆಯನ್ನು ನೀಡಲು ತೀರ್ಮಾನಿಸಿದರು. ಇದಕ್ಕಾಗಿ ತಗಲುವ ಹೆಚ್ಚಿನ ಹಣವನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು.
ಮೂರು ತಿಂಗಳ ನಂತರ ಬಸ್ ನಿಲ್ದಾಣದ ಬಳಿ ರಾತ್ರಿಯ ಸಮಯದಲ್ಲಿ ಒಬ್ಬ ಶಂಕಿತನನ್ನು ಸ್ಥಳೀಯ ಪೊಲೀಸರು ದಸ್ತಗಿರಿ ಮಾಡಿದರು. ಆತನನ್ನು ವಿಚಾರಿಸಲಾಗಿ ನಕ್ಸಲರ ಸಂಪರ್ಕ ಹೊಂದಿದವನು ಎಂದು ತಿಳಿದುಬಂದಿತು. ಹಾಗಾಗಿ ಆತನನ್ನು ವಿಚಾರಣೆಗೆ ಕಮಾಂಡರ್ ತಮ್ಮ ವಶಕ್ಕೆ ತೆಗೆದುಕೊಂಡರು. ಆತನ ವಿಚಾರಣೆಯಲ್ಲಿ ಸಾಕಷ್ಟು ವಿಷಯಗಳು ಬೆಳಕಿಗೆ ಬಂದಿತು. ಶರಧೀಪುರದಲ್ಲಿ ಜೈಲಿನ ಮೇಲೆ ದಾಳಿ ನಡೆಸಿ ರಾಜು ಮತ್ತು ಕುಮಾರನನ್ನು ಕಳೆದುಕೊಂಡು ಹೋಗಿದ್ದು ಇದೇ ನಕ್ಸಲ್ ಸಂಘಟನೆ ಎಂಬುದು ಗೊತ್ತಾಯಿತು. ಅವರಿಬ್ಬರು ಈಗ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎನ್ನುವುದು ತಿಳಿದುಬಂದಿತು. ಊರಿನ ತುಂಬಾ ರಾಜು ಮತ್ತು ಕುಮಾರನಿಗೆ ನಕ್ಸಲ್ ಸಂಪರ್ಕವಿದೆ ಎನ್ನುವ ಮಾತಿಗೆ ಪ್ರತಿಕಾರವಾಗಿ ಮತ್ತು ಅವರಿಗೆ ಅನ್ಯಾಯವಾಗಿದೆ ಎನ್ನುವುದನ್ನು ತಿಳಿದು ಅವರನ್ನು ರಕ್ಷಿಸುವುದಕ್ಕಾಗಿ ಅವರನ್ನು ಜೈಲಿನಿಂದ ಹೊರ ತಂದಿರುವುದಾಗಿ ಆತ ಹೇಳಿದ.
ಆತನು ಹೇಳಿದ ಮಾಹಿತಿಯಂತೆ ನಕ್ಸಲರ ಅಡಗಿ ಕುಳಿತುಕೊಂಡ ಪ್ರದೇಶಗಳನ್ನು ಗುರುತಿಸಲಾಯಿತು. ಹಾಗೂ ಹೊಸದಾಗಿ ಇನ್ನೂ ಹಲವರನ್ನು ಮಾಹಿತಿದಾರರನ್ನಾಗಿ ಬಳಸಿಕೊಂಡಿರುವುದರಿಂದ ಸಾಕಷ್ಟು ಮಾಹಿತಿಗಳು ಲಭಿಸಲಾರಂಭಿಸಿದವು. ಈಗ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಚರಣೆಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಬೇರೆ ರಾಜ್ಯಗಳಿಂದಲೂ ಕರೆಸಿಕೊಳ್ಳಲಾಯಿತು. ಕಾಡಿಗೆ ಹೋಗುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಯಿತು. ಈ ಬಾರಿ ಬಹಳ ಬುದ್ಧಿವಂತಿಕೆಯಿಂದ ಕಾರ್ಯಾಚರಣೆಯನ್ನು ನಡೆಸಿ ಎಲ್ಲಾ ನಕ್ಸಲರನ್ನು ನಿಗ್ರಹಿಸಬೇಕೆಂದು ತೀರ್ಮಾನಿಸಲಾಯಿತು. ಸರ್ಕಾರದ ಅತಿ ಒತ್ತಡ ಹಾಗೂ ಸಾರ್ವಜನಿಕರಲ್ಲಿ ಮೂಡಿದ ಆತಂಕವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆಗೆ ತಂತ್ರವನ್ನು ಹೆಣೆಯಲಾಯಿತು..
ಕಾಡಿಗೆ ಹೋಗಿ ಬರುವ ಎಲ್ಲರ ಮೇಲು ತೀವ್ರ ನಿಗಾ ಇಡಲಾಯಿತು. ಕಾಡಿನ ಅಕ್ಕಪಕ್ಕದ ಹಳ್ಳಿಗಳಲ್ಲಿ ಮಾರುವೇಶದಲ್ಲಿ ಅನೇಕ ಜನ ಪೋಲಿಸರು ಮಾಹಿತಿದಾರರಾಗಿ ಅಡಗಿ ಕುಳಿತರು. ಖಚಿತವಾದ ಮಾಹಿತಿಯೊಂದು ಲಭಿಸಿತು. ಸಾಮಾನ್ಯವಾಗಿ ದೂರ ದೂರದ ಪ್ರದೇಶದಲ್ಲಿ ವಿಂಗಡನೆಯಾಗಿ ಹಂಚಿಹೋಗಿರುವ ನಕ್ಸಲರು ಒಂದು ದಿನ ರಾತ್ರಿ ಒಂದೆಡೆ ಸಭೆ ಸೇರುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿತು. ಈ ನಿಖರ ಮಾಹಿತಿಯ ಆಧಾರದಲ್ಲಿ ನಕ್ಸಲ್ ನಿಗ್ರಹ ಪಡೆಯನ್ನು ಸನ್ನದ್ಧಗೊಳಿಸಿಕೊಂಡು ಕಮಾಂಡರ್ ಕಾಡಿನೊಳಗೆ ಪ್ರವೇಶಿಸಿದರು. ನಿಖರವಾಗಿ ಚತುರತೆಯಿಂದ ದಾಳಿ ನಡೆಸಲು ಸೆಟಲೈಟ್ ಸಹಾಯವನ್ನು ಪಡೆದುಕೊಂಡರು. ನಕ್ಸಲರನ್ನು ಕಾಡಿನೊಳಗೆ ಎಲ್ಲಾ ದಿಕ್ಕಿನಿಂದಲೂ ಸುತ್ತುವರಿದರು. ಈ ಬಾರಿ ಶರಣಾಗುವುದಕ್ಕೆ ಆಸ್ಪದ ನೀಡುವುದು ಬೇಡವೆಂದು ಮೊದಲೇ ತೀರ್ಮಾನಿಸಿದ್ದರು. ಹಂತ ಹಂತವಾಗಿ ನಿಧಾನವಾಗಿ ಆಯಾಕಟ್ಟಿನ ಪ್ರದೇಶಗಳಲ್ಲಿ ಎಲ್ಲಾ ಪೋಲಿಸ್ ಪಡೆಗಳು ಜಮಾವಣೆಯಾದವು. ಈಗ ಕಾರ್ಯಾಚರಣೆಯನ್ನು ಆರಂಭಿಸಿದರು..
ತೀವ್ರವಾದ ಗುಂಡು ಮದ್ದುಗಳ ದಾಳಿಯು ರಾತ್ರಿಯಿಂದ ಮುಂಜಾವಿನವರೆಗೂ ಮುಂದುವರೆಯಿತು. ನೂರಾರು ಜನರು ಹತರಾದರು. ಎಷ್ಟೇ ಮುತುವರ್ಜಿವಹಿಸಿದರೂ ಇತ್ತ ಪೋಲಿಸರು ಸಹಾ ಸಾಕಷ್ಟು ಜನ ಹತರಾದರು. ಹಲವರು ಗಾಯಗೊಂಡರು. ತಂಪಾದ ರಾತ್ರಿ ಮತ್ತು ಮುಂಜಾನೆಯು ಗುಂಡುಗಳ ಸಿಡಿತಕ್ಕೆ ನಡುಗಿಹೋಯಿತು. ಬರೀ ನರಳಾಟದ ಸದ್ದೇ ಆವರಿಸಿತು. ರಕ್ತದ ಕಲೆ ಹಸಿರು ಗುಡ್ಡವನ್ನು ಕೆಂಪಾಗಿಸಿತು. ಈಗ ನಕ್ಸಲರ ಕಡೆಯಿಂದ ಗುಂಡುಗಳ ಆರ್ಭಟ ನಿಂತಿತು. ಇತ್ತ ಪೋಲಿಸ್ ಪಡೆ ನಿಧಾನವಾಗಿ ಮುನ್ನುಗ್ಗುತ್ತಿದೆ. ಮತ್ತೆ ಗುಂಡಿನ ಕಾಳಗ. ಮತ್ತೆ ಮುಂದುವರಿದ ಕಾರ್ಯಾಚರಣೆ. ಪೋಲೀಸರು ಕೊನೆಗೂ ನಕ್ಸಲರಿದ್ದ ಸ್ಥಳವನ್ನು ಸಮೀಪಿಸಿ ತಮ್ಮ ವಶಕ್ಕೆ ತೆಗೆದುಕೊಂಡರು. ಈಗ ಇದೇ ಘಳಿಗೆಗಾಗಿ ಹಲವು ವರ್ಷಗಳಿಂದ ಕಾದು ಕುಳಿತಿದ್ದ ಪೋಲಿಸ್ ಅಧಿಕಾರಿಗಳಿಗೆ ಹೆಮ್ಮೆಯ ಭಾವ. ಎಷ್ಟೋ ಜನ ತಮ್ಮ ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದಕ್ಕೆ ಈಗ ಸೇಡು ತೀರಿಸಿಕೊಂಡ ಅಭಿಮಾನ. ಇದೇ ದಾಟಿಯಲ್ಲಿ ಸತ್ತವರ ಲೆಕ್ಕವನ್ನು ಹಾಕುತ್ತಾ ಯಾರೆಲ್ಲಾ ಎಂದು ನೋಡುತ್ತಿದ್ದಾರೆ. ಇನ್ನೂ ಕೆಲವು ನಕ್ಸಲರು ಗಾಯಗೊಂಡು ಬಿದ್ದಿದ್ದಾರೆ. ಈಗ ಅವರನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಸಾಗಿಸುವಂತೆ ಕಮಾಂಡರ್ ಸೂಚಿಸುತ್ತಾರೆ.
ಆದರೆ ಕೆಲವು ಅಧಿಕಾರಿಗಳು ಬೇಡವೇ ಬೇಡ ಸರ್. ಇವರನ್ನು ಇಲ್ಲಿಯೇ ಮುಗಿಸೋಣ. ನಮ್ಮ ಎಷ್ಟೋ ಜನ ಪೋಲಿಸರನ್ನು ಇವರು ನಿರ್ಧಯವಾಗಿ ಕೊಂದಿದ್ದಾರೆ. ಇವರಿಗೆ ಏಕೆ ಜೀವಧಾನಮಾಡಬೇಕೆಂದು ಹಠ ಹಿಡಿಯುತ್ತಾರೆ. ಆದರೆ ಅದು ನಮ್ಮ ಕರ್ತವ್ಯವಲ್ಲ. ಜೊತೆಗೆ ಮಾನವೀಯ ನೆಲೆಯೂ ಅಲ್ಲ. ಅವರೇನೇ ಮಾಡಿರಲಿ. ಸೇಡು, ಕೋಪÀ ಕರ್ತವ್ಯದಲ್ಲಿ ಇರಬಾರದು. ನಾನು ಹೇಳಿದ್ದನ್ನು ಮಾಡಿಯೆಂದು ಆದೇಶಿಸುತ್ತಾರೆ. ಈಗ ಗಾಯಗೊಂಡ ಎಲ್ಲರನ್ನು ಆಸ್ಪತ್ರೆಗೆ ಸಾಗಿಸಲು ಹುಡುಕಿ ಕರೆತರುತ್ತಿದ್ದಾರೆ.
ಈಗ ಒಮ್ಮೆಗೆ ಕಮಾಂಡರ್ಗೆ ಆಶ್ಚರ್ಯ. ಹೆಣಗಳ ರಾಶಿಯಲ್ಲಿ ರಾಜು ಮತ್ತು ಕುಮಾರರ ದೇಹಗಳು ಬಿದ್ದಿವೆ. ಈಗ ಮತ್ತೆ ಅವರಿಗೆ ಶರಧೀಪುರದ ನೆನಪು ಕಾಡುತ್ತದೆ.
ಇತ್ತ ಕೆಲ ದಿನಗಳ ನಂತರ ಕಾರ್ಯಾಚರಣೆಯಲ್ಲಾ ಮುಗಿದು ಯಶಸ್ಸು ಲಭಿಸಿ ಕೆಲ ಸಮಯ ವಿಶ್ರಾಂತಿಯಲ್ಲಿ ಕಮಾಂಡರ್ ಉಳಿದಿರುತ್ತಾರೆ. ಎಲ್ಲೆಡೆಯಿಂದಲೂ ಇವರ ಕಾರ್ಯವೈಖರಿಗೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಹೀಗಿರುವಾಗ ಒಂದು ದಿನ ಶರಧಿಪುರದಿಂದ ಅದೇ ಪೋಲಿಸ್ ಪೇದೆ ಫೋನ್ ಮಾಡುತ್ತಾರೆ. ಸರ್ ನನ್ನ ಮಗಳ ಮದುವೆಯಿದೆ. ನಿಮಗೆ ಪತ್ರಿಕೆ ಕೊಡಲು ಬರಬೇಕಿತ್ತು ಎಂದು ಅನುಮತಿಗಾಗಿ ಕೋರುತ್ತಾರೆ. ಆಯ್ತು ಬನ್ನಿ ಎಂದು ಕಮಾಂಡರ್ ಖುಷಿಯಿಂದಲೇ ನುಡಿಯುತ್ತಾರೆ.
ಮಾರನೇಯ ದಿವಸ ಕಮಾಂಡರ್ರನ್ನು ಕಾಣಲು ಲಗ್ನ ಪತ್ರಿಕೆ ಹಿಡಿದು ಆ ಪೇದೆ ಬರುತ್ತಾರೆ. ಅವರೊಂದಿಗೆ ಮಾತನಾಡುತ್ತಾ ನಿಮ್ಮೂರಿನ ಆ ಪ್ರಕರಣ ಏನಾಯ್ತು ಎಂದು ಕೇಳುತ್ತಾರೆ. ಈಗ ಪೇದೆ ಬಹಳ ಬೇಸರದಿಂದ ನುಡಿಯುತ್ತಾರೆ. ಸರ್, ಅದೆಲ್ಲಾ ಮುಚ್ಚಿಹೋಯಿತು. ಭ್ರಷ್ಟರಿಗೆ ಈಗ ಯಾರ ಭಯವೂ ಇಲ್ಲ. ಮತ್ತೆ ಮೊದಲಿನಂತೆ ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ. ಮುಗ್ಧರ ಮನೆಗಳನ್ನು ಮತ್ತೆ ಮುರಿಯುತ್ತಿದ್ದಾರೆ. ಕೊಂಚ ದಿನ ಹೆದರಿ ಮೌನಿಯಾಗಿದ್ದವರಿಗೆ ಈಗ ರೆಕ್ಕೆ ಪುಕ್ಕಗಳು ಪುನಃ ಬಂದಿವೆ. ಯಾರನ್ನು ಬಿಡದಂತೆ ಇನ್ನಷ್ಟು ವಿಕೃತವಾಗಿ ಕಾಡುತ್ತಿದ್ದಾರೆ. ರಾಜು ಮತ್ತು ಕುಮಾರರಿಂದ ಜೊತೆಗೆ ನಕ್ಸಲರ ಬೆದರಿಕೆಗೆ ಹೆದರಿ ಬೆಂಡಾಗಿದ್ದವರು ಈಗ ಯಾವುದೇ ಹಂಗಿಲ್ಲದೇ ಆರ್ಭಟಿಸುತ್ತಿದ್ದಾರೆ. ಈಗ ಅವರನ್ನು ಹೆದರಿಸುವವರು ಯಾರಿದ್ದಾರೆ? ಎಂದು ಬೇಸರದಲ್ಲಿ ನುಡಿದರು..
ಈಗ ಕಮಾಂಡರ್ ಒಮ್ಮೆಗೆ ಭಾವುಕರಾಗಿ ನುಡಿಯುತ್ತಾರೆ. ಒಂದೆಡೆ ಕಾಡಿನಲ್ಲಿ ಅವಿತು ರಕ್ತದಿಂದ ಕ್ರಾಂತಿಮಾಡಲು ಹೋದವರು ಕಾರ್ಯಾಚರಣೆಯಲ್ಲಿ ಹತರಾದರು. ಇನ್ನೂ ಕೆಲವರು ಗಾಯಗೊಂಡು ಸೆರೆಯಾದರು. ಆದರೆ ಊರಿನಲ್ಲಿ ಕುಳಿತು ಭ್ರಷ್ಟರನ್ನು ರಕ್ಷಿಸುವವರು ನಾಶವಾಗುವುದು ಇಲ್ಲವೇ ಬದಲಾಗುವುದು ಅಸಾಧ್ಯವೇ! ಇನ್ನು ಮುಂದೊಂದು ದಿನ ಮತ್ತೆ ನೊಂದವರೆಲ್ಲಾ ಒಟ್ಟಾಗಿ ರಕ್ತದ ಕಲೆ ಮೂಡಿಸಿ ಅಟ್ಟಹಾಸಗೈಯುತ್ತಾರೆ. ಭ್ರಷ್ಟರ ಭೇಟೆಯಾಡುತ್ತಾರೆ. ಮತ್ತೆ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಾರೆ. ಒಟ್ಟಾರೆ ಇದೊಂದು ಸುತ್ತುವ ಗಡಿಯಾರದ ಮುಳ್ಳಿನಂತೆ..ಅಂತ್ಯವಿಲ್ಲದ ಮುಳ್ಳುಕಂಟಿಯ ಕವಲು ಹಾದಿಯಂತೆ.
ಆದರೆ ಹಿಂಸಾಮಾರ್ಗದಲ್ಲಿ ನಡೆವ ಚಳುವಳಿಗೆ ಜಯ ಲಭಿಸುವುದಿಲ್ಲ. ಶಾಂತಿಯ ಚಳುವಳಿಗೆ ಮಾತ್ರವೇ ಜಯ ಲಭಿಸುತ್ತದೆ. ನಮ್ಮ ದೇಶದ ಸ್ವಾತಂತ್ರ್ಯಾಕ್ಕಾಗಿ ಮಹಾತ್ಮ ಗಾಂಧಿಯವರ ನೈತೃತ್ವದ ಚಳುವಳಿಯು ಶಾಂತಿಯಿಂದ ಕೂಡಿತ್ತು. ಹಾಗಾಗಿ ಇವರನ್ನು ಮಟ್ಟಹಾಕಲು ಬ್ರಟೀಷರಿಗೆ ಆಗಲಿಲ್ಲ. ಒಂದು ವೇಳೆ ಹಿಂಸಾ ಮಾರ್ಗವಾಗಿದ್ದರೆ ಖಂಡಿತವಾಗಿಯೂ ಮುಲಾಜಿಲ್ಲದೇ ಬ್ರಟೀಷರು ಆ ಚಳುವಳಿಯನ್ನು ಹತ್ತಿಕ್ಕುತ್ತಿದ್ದರು. ಶಾಂತಿಯಿಂದ ನಡೆವ ಚಳುವಳಿಯು ಎಂದಿಗೂ ಗೆಲುವು ಕರುಣಿಸುವ ಆಯುಧ. ಎಪ್ಪತ್ತರ ವಯೋಮಾಣದಲ್ಲೂ ಅಣ್ಣಾ ಹಜಾರೆಯವರು ಎದ್ದು ನಿಂತಾಗ ದೇಶವೇ ಅವರೊಂದಿಗೆ ಕೈಜೋಡಿಸಲಿಲ್ಲವೇ? ಹಾಗೇ ಶಾಂತಿಯುತವಾಗಿ ಸಮಾಜದ ಜನರೆಲ್ಲರೂ ಭ್ರಷ್ಟರಿಗೆ ಲಂಚ ನೀಡದೇ, ಹಣ, ಆಮಿಷಗಳಿಗೆ ಒಳಗಾಗದೇ ಬದುಕಬೇಕು. ವೋಟ್ಗೆ ನೋಟ್ ಕೇಳುವುದನ್ನು ನಿಲ್ಲಿಸಬೇಕು. ಎಲ್ಲರು ಶಾಂತಿಯುತವಾಗಿ ಅನ್ಯಾಯವಾದಾಗ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಿದರೆ ಅದೊಂದು ಆಂದೋಲವಾಗುತ್ತದೆ. ನಿಜವಾದ ರಾಮರಾಜ್ಯ ಅರಳುತ್ತದೆ. ಗಾಂಧೀಜಿಯವರು ಕಂಡ ಕನಸು ನನಸಾಗುತ್ತದೆ. ಆದರೆ ಸದ್ಯದ ದಿನಮಾನಗಳನ್ನು ಗಮನಿಸಿದರೆ ಅದೆಲ್ಲವೂ ಗಗನ ಕುಸುಮವೆ! ಆದರೆ ಒಂದಲ್ಲ ಒಂದು ದಿನ ಇದೇ ಹಾದಿಯಲ್ಲಿ ಚಳುವಳಿ ನಡೆದು ದೇಶವು ಗಟ್ಟಿಯಾಗಲಿ ಎನ್ನುವುದು ನನ್ನ ಆಶಯ.
ಆದೇನೆ ಇರಲಿ. ಸದ್ಯಕ್ಕಂತೂ ಸತ್ಯ ನಿಮ್ಮೂರಲ್ಲಿ ಸತ್ತಿದೆ, ಮಿಥ್ಯ ಗೆದ್ದಿದೆ. ಮುಂದೆ ಏನಾಗುವುದೋ ಏನೋ! ಭವಿಷ್ಯವಂತೂ ನನಗೆ ಗೊತ್ತಿಲ್ಲ. ನನ್ನಂತವರು ವಿಧಿಯಿಲ್ಲದೇ ಒಪ್ಪಿಸಿದ ಕೆಲಸವನ್ನು ಮಾಡುತ್ತೇವೆ. ಸರಿ ಯಾವುದು? ತಪ್ಪು ಯಾವುದು? ಎಂದು ಪ್ರಶ್ನಿಸಿದರೆ ನನಗೂ ಉತ್ತರ ಕಂಡುಕೊಳ್ಳುವುದು ಕಷ್ಟವೇ!..
ಆದರೆ ನನ್ನ ಮನದ ಅಭಿಲಾಷೆ ಮುಂದೆಯಾದರೂ ಸತ್ಯ ಗೆಲ್ಲಲಿ, ಮಿಥ್ಯ ಸಾಯಲಿ..
ಇಲ್ಲಿಗೆ ಈ ಕಥೆ ಮುಗಿಯಿತು..
ಓದಿದ ಎಲ್ಲರಿಗೂ ಧನ್ಯವಾದಗಳು..
ರಾಮಚಂದ್ರ ಸಾಗರ್