Sunday, 15 August 2021

"ಭಾರತೀಯನೆಂದು ಹೆಮ್ಮೆಯಿಂದ ಬೀಗು"

 


ಎಲ್ಲ ದೇಶಾಭಿಮಾನಿಗಳಿಗೂ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭಾಶಯಗಳು.
ದೇಶ ಸಾಕಷ್ಟು ಅಭಿವೃದ್ಧಿಯತ್ತ ದಾಪುಗಾಲಿಡುತ್ತಾ ಇತ್ತೀಚಿನ ವರ್ಷಗಳಲ್ಲಿ ಭಾರತವೆಂದರೆ ವಿಶ್ವದ ಹೃದಯ ಎನ್ನುವಂತಹ ಮಾತುಗಳು ವಿಶ್ವದೆಲ್ಲೆಡೆ ರಾರಾಜಿಸುತ್ತಿದೆ, ಜಗತ್ತಿನಲ್ಲಿ ಎಲ್ಲೇ ಹೋದರು ಭಾರತೀಯನಿಗೆ ಸಿಗುವ ಗೌರವ ಅಪಾರ. ಸುಂದರ ಸಂಸ್ಕಾರವಂತ ಮನದ ದೇಶ ನಮ್ಮದು ಎನ್ನುವುದು ನಮ್ಮೆಲ್ಲರ ಹೆಮ್ಮೆ.

ಈ ಸಂಭ್ರಮದ ಸಮಯದಲ್ಲಿ ನಾ ಬರೆದ ಕವಿತೆ, "ಭಾರತೀಯನೆಂದು ಹೆಮ್ಮೆಯಿಂದ ಬೀಗು" ಮತ್ತೊಮ್ಮೆ ಪೋಸ್ಟ್ ಮಾಡುತ್ತಿರುವೆ, ಓದಿ ಹಾರೈಸಿ..

ಎಲ್ಲರಿಗೂ ಇನ್ನೊಮ್ಮೆ ಶುಭಾಶಯಗಳು..

ಭಾರತೀಯನೆಂದು ಹೆಮ್ಮೆಯಿಂದ ಬೀಗು

ಕೋಟ್ಯಾಂತರ ಜೀವಿಗಳ ಉಸಿರು

ಸೌಹಾರ್ದ ಸಮ್ಮೇಳನದ ಬೀಡು

ವೈವಿಧ್ಯತೆಮಯ ಸಂಸ್ಕೃತಿಯ ತೇರು

ಭರತ ಭೂತಾಯ ಮಡಿಲು ...

ಜ್ಞಾನಸೆಲೆಯ ಅಮೃತ ಸಿಂಚನವು

ಸಹಿಷ್ಣುತೆ ಸಂದೇಶ ಸಾಗರವು

ಶಾಂತಿಯ ಸತ್ವದ ದೀವಟಿಗೆಯು

ಭರತ ಭೂತಾಯ ನೆಲೆಯು..

ಜಗಕೆ ಶಾಂತಿ ಬೋಧಿಸಿದ ನಾಡು

ಜಗಕೆ ಜ್ಞಾನದ ಕೊಡುಗೆಯ ಬಟ್ಟಲು

ಜಗದ ಸಿರಿವಂತ ಸಂಸ್ಕೃತಿಯ ಕಣಜ

ಜನಿಸಿದ ಎಲ್ಲರ ಪುಣ್ಯಧಾಮ..

ಭರತ ತಾಯ ಮಡಿಲಲಿ ಜನನವೆ

ಪ್ರತಿ ಭಾರತೀಯನ ಹೆಮ್ಮೆ

ಉಸಿರಿನ ಪ್ರತಿ ಘಳಿಗೆ ಮುಡಿಪಾಗಿಡು

ದೇಶ ಗಟ್ಟಿಗೊಳಿಸಲು, ಪ್ರಕಾಶಿಸಲು..

ಭರತ ತಾಯಿ ನೆಲದಲಿ ಜನ್ಮವು

ಸಾವಿರ ಜನ್ಮಕು ತೀರದ ಋಣವು

ದಿವ್ಯ ನಾಡಿನ ದಾರ್ಶನಿಕರ ವಚನದಲಿ

ಪುಣ್ಯ ಪುರುಷರ ಜ್ಞಾನ ಸೆಲೆಯಲಿ

ಜಳಪಿಸುವ ಶಕ್ತಿಯಲಿ ನೀ ಬೆಳಗು..

ಭಾರತೀಯತೆಯ ಉಸಿರು ಜೀವಸೆಲೆಯಾಗಿರಲು

ಭಾರತೀಯನೆಂದು ಹೆಮ್ಮೆಯಿಂದ ಬೀಗು

ನಿನ್ನೆದೆಯ ಪ್ರತಿ ಬಡಿತದಲ್ಲು

ಭಾರತೀಯನೆಂಬ ಸದ್ದಿನ ದನಿ ಕೇಳು

ಪುಣ್ಯನಾಡನು ಆರಾಧಿಸು..ಪ್ರೀತಿಸು..

ರಾಮಚಂದ್ರ ಸಾಗರ್